Wednesday, June 11, 2025

ಗೌರಮ್ಮ ನಿಧನ

ಗೌರಮ್ಮ 
    ಭದ್ರಾವತಿ : ತಾಲೂಕಿನ ಕಡದಕಟ್ಟೆ ನಿವಾಸಿ, ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ನಂಜುಂಡಪ್ಪನವರ ಪತ್ನಿ ಗೌರಮ್ಮ(೮೨) ಬುಧವಾರ ಬೆಳಗಿನ ಜಾವ ನಿಧನ ಹೊಂದಿದರು. 
    ಇವರಿಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು. ಇವರ ನಿಧನಕ್ಕೆ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಮರುಳ ಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಶ್ರೀ ಬಸವೇಶ್ವರ ಧರ್ಮಸಂಸ್ಥೆ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಸಿರಿಯೂರು ಸರ್ಕಾರಿ ಶಾಲೆ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ಭದ್ರಾವತಿ ನಗರದ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಹಾಗು ಬೆಂಗಳೂರಿನ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ವತಿಯಿಂದ ತಾಲೂಕಿನ ಸಿರಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. 
    ಭದ್ರಾವತಿ : ನಗರದ ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಹಾಗು ಬೆಂಗಳೂರಿನ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನ ವತಿಯಿಂದ ತಾಲೂಕಿನ ಸಿರಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. 
    ಶ್ರೀ ಭೈರವಿ ಒಕ್ಕಲಿಗ ಮಹಿಳಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಲತಾ ಚಂದ್ರಶೇಖರ್, ಖಜಾಂಚಿ ಮಾಲಾ ರಾಮು, ನಿರ್ದೇಶಕರಾದ ಭಾಗ್ಯಲಕ್ಷ್ಮಿ ಬಸವರಾಜ್, ವಸಂತ ಪುರುಷೋತ್ತಮ್, ಆಶಾ ಶ್ರೀಕಂಠ, ಶಾಲೆಯ ಮುಖ್ಯ ಶಿಕ್ಷಕಿ ನೇತ್ರಾವತಿ, ಸಹಶಿಕ್ಷಕರಾದ ಬಿ. ಸತ್ಯನಾರಾಯಣ, ಜಿ. ಗೀತಾ ಹಾಗು ನಕ್ಷತ್ರ ಮೇರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರಾದ ಚಂದ್ರಶೇಖರ್ ಹಾಗು ರುದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ನಗರಸಭೆ ನಿವೃತ್ತ ನೌಕರರಿಗೆ ಸನ್ಮಾನ, ಬೀಳ್ಕೋಡುಗೆ

ಪದೋನ್ನತಿ ಹೊಂದಿದ ೧೦ ನೌಕರರಿಗೆ ಅಭಿನಂದನೆ 

ಭದ್ರಾವತಿ ನಗರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿರುವ ಗೋವಿಂದಸ್ವಾಮಿ ಮತ್ತು ಆಂಜನೇಯಸ್ವಾಮಿ ಹಾಗು ಹೊರ ಗುತ್ತಿಗೆ ಆಧಾರದಡಿ ನೀರು ಸರಬರಾಜು ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿರುವ ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಪದೋನ್ನತಿ ಹೊಂದಿರುವ ೧೦ ಮಂದಿ ನೌಕರರನ್ನು ಅಭಿನಂದಿಸಲಾಯಿತು.
    ಭದ್ರಾವತಿ : ನಗರಸಭೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿರುವ ಗೋವಿಂದಸ್ವಾಮಿ ಮತ್ತು ಆಂಜನೇಯಸ್ವಾಮಿ ಹಾಗು ಹೊರ ಗುತ್ತಿಗೆ ಆಧಾರದಡಿ ನೀರು ಸರಬರಾಜು ಸಹಾಯಕರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿರುವ ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಪದೋನ್ನತಿ ಹೊಂದಿರುವ ೧೦ ಮಂದಿ ನೌಕರರನ್ನು ಅಭಿನಂದಿಸಲಾಯಿತು.
    ಗೌರವ ಸ್ವೀಕರಿಸಿ ಮಾತನಾಡಿದ ಗೋವಿಂದಸ್ವಾಮಿ, ನಗರಸಭೆಯಲ್ಲಿ ಸುಮಾರು ೧೦ ವರ್ಷಗಳು ದಿನಗೂಲಿ ನೌಕರನಾಗಿ ಹಾಗು ೩೦ ವರ್ಷ, ೩ ತಿಂಗಳು ಕಾಲ ಕಾಯಂ ನೌಕರನಾಗಿ  ಕರ್ತವ್ಯ ನಿರ್ವಹಿಸಿದ್ದೇನೆ. ಈ ಪೈಕಿ ಭದ್ರಾವತಿ ನಗರಸಭೆಯಲ್ಲಿ ೩೬ ವರ್ಷಗಳ ಸುಧೀರ್ಘ ಕರ್ತವ್ಯ ನಿರ್ವಹಿಸಿರುವುದು ಆತ್ಮತೃಪ್ತಿ ನೀಡಿದೆ. ಕರ್ತವ್ಯ ನಿರ್ವಹಣೆಯಲ್ಲಿ ಸಹಕರಿಸಿದ ಶಾಸಕರು, ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
    ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಸುಧೀರ್ಘವಾಗಿ ಕರ್ತವ್ಯ ನಿರ್ವಹಿಸುವುದು ಸುಲಭವಲ್ಲ. ಹಲವಾರು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ವಯೋ ನಿವೃತ್ತಿ ಹೊಂದಿರುವುದು ಹೆಮ್ಮೆಯ ವಿಚಾರವಾಗಿದೆ. ನಿವೃತ್ತಿಯಾದ ಎಲ್ಲರ ಜೀವನ ಸುಖಕರವಾಗಿರಲಿ. ಹೆಚ್ಚಿನ ಅನುಭವ ಹೊಂದಿರುವ ನಿವೃತ್ತ ನೌಕರರು ತಮ್ಮ ಬಿಡುವಿನ ವೇಳೆ ಕಚೇರಿಗೆ ಬಂದು ಸಲಹೆ ಸೂಚನೆ ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು. 
    ಪೌರಾಯುಕ್ತ ಪ್ರಕಾಶ್ ಎಂ.ಚನ್ನಪ್ಪನವರ ಮಾತನಾಡಿ, ನಿವೃತ್ತಿ ಸಹಜವಾದರೂ ಆರೋಗ್ಯ ಮುಖ್ಯವಾಗಿರಬೇಕು. ಕುಟುಂಬ ಸದಸ್ಯರೊಂದಿಗೆ ಜೀವನ ಸುಖವಾಗಿರಬೇಕು. ನಿವೃತ್ತಿ ನಂತರ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಲಭಿಸಬೇಕು. ಇತ್ತೀಚೆಗೆ ಸರ್ಕಾರ ಸಾಕಷ್ಟು ಸುಧಾರಣೆಗಳನ್ನು ಕೈಗೊಂಡಿದ್ದು, ಇದರಿಂದಾಗಿ ನಿವೃತ್ತರು ನೆಮ್ಮೆದಿಯಿಂದ ಜೀವನ ಸಾಗಿಸುವಂತಾಗಿದೆ. ಪದೋನ್ನತಿ ಪಡೆದವರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ಎಂದರು. 
  ನಿವೃತ್ತ ಅಧಿಕಾರಿ ಈಶ್ವರಪ್ಪ ಮಾತನಾಡಿ, ಸರ್ಕಾರಿ ನೌಕರರಿಗೆ ನೀಡುವ ಸೌಲಭ್ಯಗಳು ಸ್ವಾತಂತ್ರ ಪೂರ್ವದಲ್ಲಿ ರಚನೆಯಾದ ನೈರ್ಮಲ್ಯ ಕಾಪಾಡುವ ಸ್ಥಳೀಯ ಸಂಸ್ಥೆಗಳ ನೌಕರರಿಗೆ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ವಿಷಾಧಿಸಿದರು. 
    ನಗರಸಭೆ ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಸದಸ್ಯರಾದ ಅನುಸುಧಾ ಮೋಹನ್ ಪಳನಿ, ಚನ್ನಪ್ಪ, ಟಿಪ್ಪುಸುಲ್ತಾನ್, ಕಚೇರಿ ವ್ಯಪಸ್ಥಾಪಕಿ ಎಂ. ಸುನಿತಾಕುಮಾರಿ, ಕಾರ್ಯಪಾಲಕ ಅಭಿಯಂತರ ಬಿ.ಬಿ ಶಿವಪ್ರಸಾದ್, ಪರಿಸರ ಅಭಿಯಂತರ ಪ್ರಭಾಕರ್, ಮಹಮ್ಮದ್‌ಗೌಸ್, ಹೇಮಂತ್‌ಕುಮಾರ್, ಚೇತನ್‌ಕುಮಾರ್, ದಲಿತ ಸಂಘಟನೆಗಳ ಪ್ರಮುಖರಾದ ಸತ್ಯ, ಚಿನ್ನಯ್ಯ, ಸಿ.ಜಯಪ್ಪ, ಉಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಜೂ.೧೨ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ : ತಾಲೂಕಿನ ಮೆಸ್ಕಾಂ ಕೂಡ್ಲಿಗೆರೆ ಶಾಖಾ ವ್ಯಾಪ್ತಿಯಲ್ಲಿ ವಾಹಕ ಬದಲಾವಣೆ ಮತ್ತು ತುರ್ತು ಕಾಮಗಾರಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.೧೨ರ ಗುರುವಾರ ಬೆಳಿಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಅತ್ತಿಗುಂದ, ಗುಡ್ಡದನೇರಲೆಕೆರೆ, ಕೋಮಾರನಹಳ್ಳಿ, ಕುಮರಿನಾರಾಯಣಪುರ, ಸೀತಾರಾಂಪುರ, ಸಿದ್ದರಮಟ್ಟಿ, ದೇವರಹಳ್ಳಿ, ಸಂಜೀವನಗರ, ಜಯನಗರ, ತಿಪ್ಲಾಪುರ, ಬಸಲೀಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 

ಜೂ.೧೩ರಂದು ಕಾರೇಹಳ್ಳಿ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ

ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜೂ.೧೩ ರಂದು ವಿಜೃಂಭಣೆಯಿಂದ ಜರುಗಲಿದ್ದು, ವಾರ್ಷಿಕ ಮಹೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 
    ಭದ್ರಾವತಿ : ತಾಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಜೂ.೧೩ ರಂದು ವಿಜೃಂಭಣೆಯಿಂದ ಜರುಗಲಿದ್ದು, ವಾರ್ಷಿಕ ಮಹೋತ್ಸವ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. 
    ಪ್ರತಿ ವರ್ಷ ಗ್ರಾಮದ ಸರ್ವ ಧರ್ಮದವರು ಒಟ್ಟಾಗಿ ಈ ಮಹೋತ್ಸವ ಆಚರಿಸಿಕೊಂಡು ಬರುತ್ತಿದ್ದು,  ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಮಹೋತ್ಸವದ ಮೊದಲು ೩ ದಿನಗಳ ಕಾಲ ಆಧ್ಯಾತ್ಮಿಕ ಭಕ್ತಿ ಕಾರ್ಯಗಳು ಪ್ರಾರಂಭಗೊಂಡಿದ್ದು, ಮಂಗಳವಾರ ಸಂಜೆ ಶಿವಮೊಗ್ಗ ಸೆಕ್ರೆಟ್ ಆರ್ಟ್ ಪ್ರಧಾನಾಲಯದ ಧರ್ಮಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜರವರಿಂದ ದ್ವಜಾರೋಹಣ, ಪೂಜಾ ವಿಧಿವಿಧಾನದೊಂದಿಗೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.  ಬುಧವಾರ ಸಂಜೆ ಸೊರಬ ಧರ್ಮಕೇಂದ್ರದ ಧರ್ಮಗುರುಗಳಾದ ಫಾದರ್ ರಾಬರ್ಟ್ ಡಿಮೆಲ್ಲೊ ರವರಿಂದ ದಿವ್ಯ ಬಲಿ ಪೂಜೆ ಜರುಗಿತು. 
    ಜೂ.೧೨ರ ಗುರುವಾರ ಸಂಜೆ ಶಿವಮೊಗ್ಗ ಧರ್ಮ ಕ್ಷೇತ್ರದ ಯುವಜನ ನಿರ್ದೇಶಕರಾದ ಫಾದರ್ ಫ್ರಾಂಕ್ಲಿನ್ ಡಿಸೋಜಾರವರಿಂದ ಪೂಜಾ ವಿಧಿ ವಿಧಾನಗಳು ನೆರವೇರಲಿದ್ದು, ನಂತರ ಗ್ರಾಮದ ರಸ್ತೆಗಳಲ್ಲಿ ಭವ್ಯ ತೇರಿನ ಮೆರವಣಿಗೆ ನಡೆಯಲಿದೆ. 
    ಜೂ.೧೩ರ ಶುಕ್ರವಾರ ಸಂತ ಅಂತೋಣಿಯವರು ಮೃತಪಟ್ಟ ದಿನವಾಗಿದ್ದು, ಅವರ ಸ್ಮರಣೆಗಾಗಿ ವಾರ್ಷಿಕ ಮಹೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.  ಶಿವಮೊಗ್ಗ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಫ್ರಾನ್ಸಿಸ್ ಸೆರಾವೋರವರಿಂದ ಭಕ್ತಿಭಾವದ ವಿಶೇಷ ಪೂಜಾ ವಿಧಿ-ವಿಧಾನಗಳು, ಪ್ರಾರ್ಥನೆಗಳು, ಪ್ರಭೋದನೆಗಳು, ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ. 
    ಮಹೋತ್ಸವಕ್ಕೆ ತಾಲೂಕಿನ ಹಳೇನಗರ, ನ್ಯೂಟೌನ್, ಮಾವಿನಕೆರೆ, ಕಾಗದನಗರ, ಹಿರಿಯೂರು ಧರ್ಮ ಕೇಂದ್ರಗಳ ಹಾಗು ಜಿಲ್ಲೆಯ ಶಿವಮೊಗ್ಗ, ಸಾಗರ, ಶಿಕಾರಿಪುರ, ಸೊರಬ ಸೇರಿದಂತೆ ತಾಲೂಕು ಹಾಗು ಜಿಲ್ಲಾ ಧರ್ಮಕೇಂದ್ರಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 


ಭದ್ರಾವತಿ ತಾಲೂಕಿನ ಕಾರೇಹಳ್ಳಿ ಗ್ರಾಮದ ಸಂತ ಅಂತೋಣಿಯವರ ಪುಣ್ಯಕ್ಷೇತ್ರದ 
ಧರ್ಮಗುರು ಫಾದರ್ ಸಂತೋಷ ಅಲ್ಮೇಡ 
    ಪ್ರತಿವರ್ಷದ ಜಾತ್ರಾಮಹೋತ್ಸವಕ್ಕೆ ಎಲ್ಲೆಡೆಯಿಂದ ಸಾವಿರಾರು ಭಕ್ತಾದಿಗಳು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವುದರಿಂದ ಅವರಿಗೆ ಬೇಕಾದ ಸಲಹೆ, ಸೂಚನೆ, ಮಾರ್ಗದರ್ಶನ ನೀಡಲು ಅಕ್ಕ-ಪಕ್ಕದ ಧರ್ಮ ಕೇಂದ್ರದ ಗುರುಗಳ, ಧರ್ಮ ಭಗಿನಿಯರ ಸಹಾಯ ಪಡೆಯಲಾಗಿದೆ. ಸ್ಥಳೀಯ ಧರ್ಮ ಕೇಂದ್ರದ ಭಕ್ತಾದಿಗಳನ್ನು ಪ್ರತ್ಯೇಕ ಗುಂಪುಗಳನ್ನಾಗಿ ವಿಂಗಡಿಸಿ, ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸಂತೋಷ ಅಲ್ಮೇಡ ತಿಳಿಸಿದ್ದಾರೆ.
    ಪುಣ್ಯಕ್ಷೇತ್ರ ವಿಶೇಷತೆ : 
    ಈ ಪುಣ್ಯಕ್ಷೇತ್ರದಲ್ಲಿ ಬೇಡಿದ್ದನ್ನು ಪಡೆದಿರುವ ನಂಬಿಕೆ ಭಕ್ತರಲ್ಲಿ ಹಾಳವಾಗಿ ಬೇರೂರಿದೆ. ಅನೇಕ ಪವಾಡಗಳು ನಡೆದಿರುವುದು ಭಕ್ತರಿಂದ ತಿಳಿದು ಬಂದಿದೆ. ಈ ಹಿಂದೆ ಸೇವೆ ಸಲ್ಲಿಸಿ, ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಮೃತರಾದ ದಿವಂಗತ ಫಾದರ್ ಅಂತೋಣಿ ಪೀಟರ್ ರವರ ಸೇವಾ ಅವಧಿಯಲ್ಲಿ `ದೇವರ ಸುವಾರ್ತೆಯನ್ನು ಪ್ರಬೋಧಿಸಿದ ಸಂತ ಅಂತೋಣಿಯವರ ನಾಲಿಗೆಯ ಅವಶೇಷವನ್ನು' ಇಟಲಿಯ ಪಾದುವ ದೇಶದಿಂದ ತಂದು ಪ್ರತಿಷ್ಠಾಪಿಸಲಾಗಿದೆ. ಅಂದಿನಿಂದ ಪ್ರತಿ ತಿಂಗಳ ಮೂರನೇ ಭಾನುವಾರ ಪ್ರತಿಷ್ಠಾಪಿಸಿರುವ ಅವಶೇಷ ಹೊರಗೆ ತೆಗೆದು ಭಕ್ತಾದಿಗಳ ದರ್ಶನಕ್ಕೆ ಇಡಲಾಗುತ್ತದೆ.  ಅಂದು ತಿಂಗಳ ಹಬ್ಬ ಎಂದು ವಿಶೇಷ ಪೂಜಾ ವಿಧಿ-ವಿಧಾನ, ಆರಾಧನೆ, ರೋಗಿಗಳಿಗೆ ತೈಲಾಭಿಷೇಕದ ಪ್ರಾರ್ಥನೆ ಮತ್ತು ಅನ್ನಸಂತರ್ಪಣೆ ಕಾರ್ಯಗಳು ನಡೆಯುತ್ತವೆ. 
    ಅವಶೇಷದ ಬಳಿ ಬಂದು ಪ್ರಾರ್ಥಿಸುವವರ ಪ್ರಾರ್ಥನೆಗಳು ನೆರವೇರುತ್ತಿದ್ದು, ಭಕ್ತಾಧಿಗಳಲ್ಲಿ ಹೆಚ್ಚು ವಿಶ್ವಾಸ, ನಂಬಿಕೆ, ಭಕ್ತಿ ಬೆಳೆಯುವಂತೆ ಮಾಡಿದೆ. ಇದರಿಂದ ಪುಣ್ಯಕ್ಷೇತ್ರವು ಪ್ರಸಿದ್ದಿ ಮತ್ತು ಪ್ರಖ್ಯಾತಿ ಪಡೆದಿದೆ ಎಂದು ಸೈಂಟ್ ಡೊಮಿನಿಕ್ ಸಿಸ್ಟರ್ ಲಾಲಾಮ್ಮ ತಿಳಿಸಿದ್ದಾರೆ. 
    ವಾರ್ಷಿಕ ಮಹೋತ್ಸವಕ್ಕೆ ಆಗಮಿಸಲಿರುವ ಭಕ್ತರಿಗಾಗಿ ಚರ್ಚ್ ವತಿಯಿಂದ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಬಂದಂತಹ ಭಕ್ತರಿಗೆ ಊಟದ ವ್ಯವಸ್ಥೆ, ಶೌಚಾಲಯ, ಪಾರ್ಕಿಂಗ್, ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಡಿಕೊಂಡ ಬೇಡಿಕೆಗಳು ಫಲಿಸಿರುವ ಕಾರಣ ಹರಕೆ ತೀರಿಸಲು ಅಂದು ದೂರದ ಊರುಗಳಿಂದ ಅನೇಕ ಭಕ್ತಾಧಿಗಳು ಕಾಲ್ನಡಿಗೆಯಲ್ಲೇ ಬರುವುದು ವಿಶೇಷ ಎಂದು ಧರ್ಮ ಕೇಂದ್ರದ ಕಾರ್ಯದರ್ಶಿ ಬೆರ್ನಡೆಟ್ ಮೇರಿ ತಿಳಿಸಿದ್ದಾರೆ. 

Tuesday, June 10, 2025

ಜೂ.೧೧ರಿಂದ ವಿದ್ಯುತ್ ವ್ಯತ್ಯಯ

    

ಭದ್ರಾವತಿ : ಮೆಸ್ಕಾಂ ಘಟಕ-೨ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ವಿದ್ಯುತ್ ತಂತಿ ಬದಲಾವಣೆ ಮಾಡುವ ಕಾರ್ಯ ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಜೂ.೧೧ರ ಬುಧವಾರ, ೧೩ರ ಶುಕ್ರವಾರ ಮತ್ತು ೧೫ರ ಭಾನುವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಭೂತನಗುಡಿ, ಮಾಧವನಗರ, ಗಾಂಧಿನಗರ, ಎನ್‌ಎಂಸಿ ರೋಡ್, ಗಾಂಧಿ ವೃತ್ತ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ಹಾಗು ಜೂ.೧೨ರ ಗುರುವಾರ, ೧೪ರ ಶನಿವಾರ ಮತ್ತು ೧೬ರ ಸೋಮವಾರ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆವರೆಗೆ ಸಾದತ್ ಕಾಲೋನಿ, ನೆಹರು ನಗರ, ಪಿಡಬ್ಲ್ಯೂಡಿ ಕಚೇರಿ ಮುಂಭಾಗ ಮತ್ತು ಎಂ.ಎಂ ಕಾಂಪೌಂಡ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ. 

ವಿಐಎಸ್‌ಎಲ್ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ : ಪೇಜಾವರ ಶ್ರೀ

ಶಿವಮೊಗ್ಗಕ್ಕೆ ಆಗಮಿಸಿದ್ದ ಪೇಜಾವರ ಮಠದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿಯವರಿಗೆ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ಕಾರ್ಖಾನೆಯಲ್ಲಿನ ವಿದ್ಯಮಾನಗಳನ್ನು ವಿವರಿಸಿದರು.  
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಸುಮಾರು ೨ ವರ್ಷಗಳ ಹಿಂದೆ ಕಾರ್ಖಾನೆ ಮುಂಭಾಗ ಹೋರಾಟ ಬೆಂಬಲಿಸಿದ ಸಂದರ್ಭದಲ್ಲಿ ಹೇಳಿದ ಮಾತಿಗೆ ಈಗಲೂ ಬದ್ಧವಾಗಿದ್ದೇನೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಎಲ್ಲಾ ಸಮಸ್ಯೆಗಳು ಸಹ ಬಗೆಹರಿಯಲಿವೆ ಎಂದು ಪೇಜಾವರ ಮಠದ ಶ್ರೀ ವಿಶ್ವತೀರ್ಥ ಪ್ರಸನ್ನ ಸ್ವಾಮೀಜಿಯವರು ಹೇಳಿದರು. 
    ಶ್ರೀಗಳು ಮಂಗಳವಾರ ಶಿವಮೊಗ್ಗದಲ್ಲಿ ತಮ್ಮನ್ನು ಭೇಟಿ ಮಾಡಿದ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಪದಾಧಿಕಾರಿಗಳ ನಿಯೋಗಕ್ಕೆ ಆಶೀರ್ವದಿಸಿ, ಪ್ರಸ್ತುತ ಕಾರ್ಖಾನೆಯ ವಿದ್ಯಾಮಾನಗಳ ಕುರಿತು ಮಾಹಿತಿ ಪಡೆದು ಮಾತನಾಡಿದರು. 
    ಕಾರ್ಖಾನೆಗೆ ತನ್ನದೇ ಆದ ಇತಿಹಾಸವಿದೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತ ರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಪರಿಶ್ರಮದಿಂದ ಸ್ಥಾಪನೆಗೊಂಡ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಪ್ರಸ್ತುತ ಆಶಾದಾಯಕ ಬೆಳವಣಿಗೆಗಳು ಕಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯ ಎಲ್ಲಾ ಸಮಸ್ಯೆಗಳು ದೂರವಾಗಲಿದ್ದು, ಗುತ್ತಿಗೆ ಕಾರ್ಮಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಕುರಿತು ಉಕ್ಕು ಸಚಿವರು ಹಾಗು ಸಂಸದರೊಂದಿಗೆ ಚರ್ಚಿಸುವುದಾಗಿ ಶ್ರೀಗಳು ಭರವಸೆ ವ್ಯಕ್ತಪಡಿಸದರು.   
    ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ರಾಕೇಶ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಆನಂದ್, ನಿವೃತ್ತ ಕಾರ್ಮಿಕ ನರಸಿಂಹಾಚಾರ್ ಸೇರಿದಂತೆ ಇನ್ನಿತರರು ನಿಯೋಗದಲ್ಲಿದ್ದರು.