Friday, July 4, 2025

ಮೆಸ್ಕಾಂ ಕಛೇರಿಗೆ ವ್ಯವಸ್ಥಾಪಕ ನಿರ್ದೇಶಕ ರಾಜಿ ಜಯಕುಮಾರ್ ಭೇಟಿ

ಸಲಹಾ ಸಮಿತಿಯಿಂದ ಹಳೇನಗರ ಭಾಗದಲ್ಲಿ ವಿದ್ಯುತ್ ಕೌಂಟರ್ ತೆರೆಯಲು ಮನವಿ 

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಮೆಸ್ಕಾಂ) ಭದ್ರಾವತಿ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ವ್ಯವಸ್ಥಾಪಕ ನಿರ್ದೇಶಕ ರಾಜಿ ಜಯಕುಮಾರ್‌ರವರನ್ನು ಸಲಹಾ ಸಮಿತಿ ಅಧ್ಯಕ್ಷ ಬಸವಂತಪ್ಪನವರ ನೇತೃತ್ವದಲ್ಲಿ ಭೇಟಿ ಮಾಡಿದ ಸದಸ್ಯರು ಅವರನ್ನು ಸನ್ಮಾನಿಸಿ ಗೌರವಿಸಿದರು. 
    ಭದ್ರಾವತಿ: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಮೆಸ್ಕಾಂ) ನಗರದ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ವ್ಯವಸ್ಥಾಪಕ ನಿರ್ದೇಶಕ ರಾಜಿ ಜಯಕುಮಾರ್‌ರವರಿಗೆ ಸಲಹಾ ಸಮಿತಿ ವತಿಯಿಂದ ಹಳೇನಗರ ವಿಭಾಗಕ್ಕೆ ಪ್ರತ್ಯೇಕವಾಗಿ ವಿದ್ಯುತ್ ಬಿಲ್‌ಗಳನ್ನು ಪಾವತಿಸಲು ಕೌಂಟರ್ ತೆರೆಯುವಂತೆ ಮನವಿ ಸಲ್ಲಿಸಲಾಯಿತು. 
    ರಾಜಿ ಜಯಕುಮಾರ್‌ರವರನ್ನು ಸಲಹಾ ಸಮಿತಿ ಅಧ್ಯಕ್ಷ ಬಸವಂತಪ್ಪನವರ ನೇತೃತ್ವದಲ್ಲಿ ಭೇಟಿ ಮಾಡಿದ ಸದಸ್ಯರು ಅವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ತಾಲೂಕಿನಲ್ಲಿ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಿದರು. 
    ಸಾರ್ವಜನಿಕರ ಕುಂದು ಕೊರತೆಗಳ ಕುರಿತಂತೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ವ್ಯವಸ್ಥಾಪಕ ನಿರ್ದೇಶಕರು ಪೂರಕವಾಗಿ ಸ್ಪಂದಿಸಿದ್ದಾರೆ. ಸದಸ್ಯರಾದ ಸುರೇಶ್ ವರ್ಮ, ವಿಜಯಲಕ್ಷ್ಮಿ, ಸೆಲ್ವರಾಜ್ ಹಾಗು ಮೆಸ್ಕಾಂ ಸ್ಥಳೀಯ ಅಧಿಕಾರಿಗಳು ಉಪಸ್ಥಿತರಿದ್ದರು.  

ಭದ್ರಾ ಜಲಾಶಯ ಭರ್ತಿಗೆ ೧೯ ಅಡಿ ಬಾಕಿ : ಶೀಘ್ರದಲ್ಲಿಯೇ ಭರ್ತಿಯಾಗುವ ನಿರೀಕ್ಷೆ

ರೈತರ ಮುಖದಲ್ಲಿ ಒಂದೆಡೆ ಸಂತಸ, ಮತ್ತೊಂದೆಡೆ ಆತಂಕ 

ಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆಯಿಂದ ಸುಮಾರು ೩೩೯೪ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನಗರದ ಹೃದಯ ಭಾಗದಲ್ಲಿರುವ ಹೊಸ ಸೇತುವೆಯಲ್ಲಿ ನೀರಿನ ಏರಿಕೆ ಕಂಡು ಬರುತ್ತಿದೆ. 
    ಭದ್ರಾವತಿ: ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತಾಲೂಕಿನ ಭದ್ರಾ ಜಲಾಶಯ ಈ ಬಾರಿ ನಿರೀಕ್ಷೆಗೂ ಮೀರಿ ಶೀಘ್ರದಲ್ಲಿಯೇ ಭರ್ತಿಯಾಗುವ ಲಕ್ಷಣಗಳು ಕಂಡು ಬರುತ್ತಿದ್ದು, ಆದರೆ ರೈತರ ಮುಖದಲ್ಲಿ ಒಂದೆಡೆ ಸಂತಸ, ಮತ್ತೊಂದೆಡೆ ಆತಂಕದ ಕಾರ್ಮೋಡ ಆವರಿಸಿಕೊಂಡಿದೆ. 
    ಜಲಾಶಯದ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇದರಿಂದಾಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಗುರುವಾರ ಸುಮಾರು ೨೦ ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಹೊಂದಿದ್ದು, ಶುಕ್ರವಾರ ಬೆಳಿಗ್ಗೆ ಸುಮಾರು ೨೧,೯೮೨ ಕ್ಯೂಸೆಕ್ ತಲುಪಿದೆ. ಕೇವಲ ೧೨ ಗಂಟೆಗಳಲ್ಲಿ ಸುಮಾರು ೧,೯೮೨ ಕ್ಯೂಸೆಕ್ ನೀರು ಏರಿಕೆಯಾಗಿದೆ. 
    ಜಲಾಶಯದ ನೀರಿನ ಮಟ್ಟ ೧೬೭.೧ ಅಡಿಗೆ ತಲುಪಿದ್ದು, ಪೂರ್ಣ ಭರ್ತಿಯಾಗಲು ಕೇವಲ ೧೯ ಅಡಿ ನೀರು ಬಾಕಿ ಉಳಿದಿದೆ. ಈ ನಡುವೆ ಹೊರ ಹರಿವು ೩೩೯೪ ಕ್ಯೂಸೆಕ್ ಇದ್ದು,  ಕಳೆದ ವರ್ಷ ಇದೇ ದಿನ ಸುಮಾರು ೧೨೭ ಅಡಿ ನೀರು ಸಂಗ್ರಹವಾಗಿತ್ತು. ಈ ವರ್ಷ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಭದ್ರಾ ಜಲಾಶಯ ಬೇಗನೇ ತುಂಬುವ ಆಶಾಭಾವನೆಯನ್ನು ರೈತರು ಹೊಂದಿದ್ದಾರೆ.
    ಈ ಬಾರಿ ಜಲಾಶಯ ಶೀಘ್ರದಲ್ಲಿಯೇ ಭರ್ತಿಯಾದರೂ ಸಹ ರೈತರ ಬೆಳೆಗಳಿಗೆ ನೀರು ಲಭ್ಯವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಜಲಾಶಯದಲ್ಲಿ ಕಾಮಗಾರಿಗಳು ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ನಿಗದಿತ ಸಮಯದಲ್ಲಿ ಬಲ ಮತ್ತು ಎಡ ನಾಲೆಗಳಲ್ಲಿ ನೀರು ಹರಿಸುವ ಸಾಧ್ಯತೆ ಕಡಿಮೆ ಇದ್ದು, ಈ ಹಿನ್ನಲೆಯಲ್ಲಿ ಒಂದೆಡೆ ರೈತರಲ್ಲಿ ಆತಂಕ ಆವರಿಸಿಕೊಂಡಿದೆ. 
ಈ ನಡುವೆ ರೈತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಹೋರಾಟಕ್ಕೆ ಇದುವರೆಗೂ ಯಾವುದೇ ಪ್ರತಿಫಲ ಲಭಿಸಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಇನ್ನೂ ತೀವ್ರಗೊಳ್ಳುವ ನಿರೀಕ್ಷೆ ಕಂಡು ಬರುತ್ತಿದೆ. 
    ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ : 
    ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಹವಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಶುಕ್ರವಾರ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. 
    ಕಳೆದ ಎರಡು-ಮೂರು ದಿನಗಳಿಂದ ನಿರಂತವಾಗಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಎಲ್ಲೆಡೆ ಶೀತ ಗಾಳಿ ಆವರಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಮಳೆ ಇನ್ನೂ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದ್ದು, ನಗರಸಭೆ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತ ಅಗತ್ಯ ತುರ್ತು ಕ್ರಮಗಳಿಗೆ ಮುಂದಾಗಿದೆ. 
 

Thursday, July 3, 2025

ಭಾವಲೋಕದ ರಾಯಬಾರಿ ಕವಿ ಜಯಂತ್ ಕಾಯ್ಕಿಣಿಗೆ ಸನ್ಮಾನ


ಕನ್ನಡ ಭಾಷೆಯ ಧೀಮಂತಿಕೆಯ ಪ್ರತೀಕ, ಭಾವಲೋಕದ ರಾಯಬಾರಿ ಕವಿ ಜಯಂತ್ ಕಾಯ್ಕಿಣಿ ಅವರನ್ನು ಭದ್ರಾವತಿ ತಾಲೂಕಿನ ಶಂಕರಘಟ್ಟ ಕನ್ನಡಾಭಿಮಾನಿಗಳು ಹಾಗು ಜಯಕರ್ನಾಟಕ ಸಂಘಟನೆ ಮುಖಂಡರು ಸನ್ಮಾನಿಸಿ ಗೌರವಿಸಿದರು. 
    ಭದ್ರಾವತಿ : ಕನ್ನಡ ಭಾಷೆಯ ಧೀಮಂತಿಕೆಯ ಪ್ರತೀಕ, ಭಾವಲೋಕದ ರಾಯಬಾರಿ ಕವಿ ಜಯಂತ್ ಕಾಯ್ಕಿಣಿ ಅವರನ್ನು ತಾಲೂಕಿನ ಶಂಕರಘಟ್ಟ ಕನ್ನಡಾಭಿಮಾನಿಗಳು ಹಾಗು ಜಯಕರ್ನಾಟಕ ಸಂಘಟನೆ ಮುಖಂಡರು ಸನ್ಮಾನಿಸಿ ಗೌರವಿಸಿದರು. 
    ಜಯಂತ್ ಕಾಯ್ಕಿಣಿಯವರು ತಮ್ಮ ಶುದ್ಧ ಕವಿತೆಗಳ ಮೂಲಕ ಕನ್ನಡ ಜನತೆಯ ಹೃದಯ ಗೆದ್ದವರು. ೧೯ನೇ ವಯಸ್ಸಿನಲ್ಲಿಯೇ ಇವರು ಬರೆದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಇವರು ನಾಟಕ ಮತ್ತು ಗೀತಾ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಇವರ ಸಾಹಿತ್ಯದಲ್ಲಿ ಸೂಕ್ಷ್ಮ ಭಾವಲೋಕ ಬದುಕಿನ ವಾಸ್ತವಿಕ ದೃಷ್ಟಿಕೋನ ಹೇರಳವಾಗಿದೆ. ಇವರ ಕಾವ್ಯ ಯಾವುದೇ ಪ್ರಚಲಿತ ವಿಚಾರಧಾರೆಗಳ ಆಚೆ ನೈಜ ಬದುಕಿನ ಹಂದರವನ್ನು ಸೃಷ್ಟಿಸುತ್ತದೆ. ದಿನನಿತ್ಯದ ಹಾಡು ಭಾಷೆಯಲ್ಲಿಯೇ ಹಾಸ್ಯ ಮತ್ತು ಮೃದುರ ಶೈಲಿಯಲ್ಲಿರುವ ಇವರ ಕಾವ್ಯಗಳು ಹೃದಯಕ್ಕೆ ಹತ್ತಿರವಾಗುತ್ತದೆ ಎಂದು ಬಣ್ಣಿಸಿ ನಾಡಿಗೆ ಇವರ ಕೊಡುಗೆ ಇನ್ನೂ ಹೆಚ್ಚಿನದ್ದಾಗಿರಲಿ ಎಂದು ಆಶಿಸುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. 
    ಕನ್ನಡಾಭಿಮಾನಿ ನಾಗೇಶ್,  ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಡಿ.ಟಿ ಶಶಿಕುಮಾರ್,  ಶಂಕರಘಟ್ಟ ಜಯ ಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷ ಶ್ರೀಕಾಂತ್ ಉಪಸ್ಥಿತರಿದ್ದರು. 

ಜು.೪ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ : ಮೆಸ್ಕಾಂ ನಗರ ಉಪವಿಭಾಗ ಘಟಕ-೫ರ ಶಾಖಾ ವ್ಯಾಪ್ತಿಯ ಶಿವರಾಮನಗರ ಮತ್ತು ವಿಶ್ವೇಶ್ವರಯ್ಯ ನಗರ ಭಾಗದಲ್ಲಿನ ಪರಿವರ್ತಕಗಳ ಶಿಥಿಲಗೊಂಡ ವಾಹಕಗಳ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.೪ರ ಶುಕ್ರವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಶಿವರಾಮನಗರ, ವಿಶ್ವೇಶ್ವರಯ್ಯ ನಗರ, ಜೇಡಿಕಟ್ಟೆ, ಹೊಸೂರು, ಸಿರಿಯೂರು, ವೀರಾಪುರ, ಕಲ್ಲಹಳ್ಳಿ, ಸಂಕ್ಲಿಪುರ, ಹಾಗಲಮನೆ, ಹುಲಿರಾಮನಕೊಪ್ಪ, ಸಿರಿಯೂರು ತಾಂಡ ಮತ್ತು ಸಿರಿಯೂರು ಕ್ಯಾಂಪ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಸ್ಕೌಟ್ಸ್-ಗೈಡ್ಸ್ ಸಹಕಾರಿ

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಸಂತ ಡೋಮಿನಿಕ್ ಶಾಲೆ ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ  ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು. 
    ಭದ್ರಾವತಿ: ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ನಾಯಕತ್ವ ಗುಣ ಬೆಳೆಯುವ ಜೊತೆಯಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
    ಅವರು ತಾಲೂಕಿನ ಬಾರಂದೂರು ಗ್ರಾಮದ ಸಂತ ಡೋಮಿನಿಕ್ ಶಾಲೆ ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ವ ಅರಿತುಕೊಂಡು ಇವುಗಳ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ. ಉನ್ನತ ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ ಎಂದರು. 
    ರೋವರ್ ಜಿಲ್ಲಾ ಆಯುಕ್ತ ಕೆ. ರವಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ಬೆಳೆದುಬಂದ ಕುರಿತು ವಿವರಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ ಚಂದ್ರಶೇಖರಯ್ಯ ಸ್ಕೌಟ್ ಮತ್ತು ಗೈಡ್ಸ್ ವಿವಿಧ ವಿಭಾಗಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯಕುಮಾರ್ ಮಾತನಾಡಿ, ಮಕ್ಕಳಲ್ಲಿ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಶಾಲೆಯು ಉತ್ತಮ ಕೆಲಸ ಮಾಡುತ್ತಿದೆ ಎಂದರು. 
    ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಎಲ್ಲಾ ವಿಭಾಗಗಳನ್ನು ವಿದ್ಯುಕ್ತವಾಗಿ ಪ್ರಾರಂಭಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಜಿನ್ಫಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ೧೦೦೦ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 

ಎ. ಕೃಷ್ಣೇಗೌಡ ನಿಧನ

                ಎ. ಕೃಷ್ಣೇಗೌಡ 
    ಭದ್ರಾವತಿ : ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕ, ದೊಡ್ಡಗೊಪ್ಪೇನಹಳ್ಳಿ ನಿವಾಸಿ ಎ. ಕೃಷ್ಣೇಗೌಡ(೫೪) ಗುರುವಾರ ಬೆಳಗಿನ ಜಾವ ನಿಧನ ಹೊಂದಿದರು. 
    ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆ ಮಧ್ಯಾಹ್ನ ಬೈಪಾಸ್ ರಸ್ತೆ, ಬುಳ್ಳಾಪುರ, ಬಾಳೆಮಾರನಹಳ್ಳಿ ರಸ್ತೆಯ ಶ್ರೀ ಸತ್ಯ ಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. 
    ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತಂದಾಗ ಕೃಷ್ಣೇಗೌಡರವರು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಇವರ ನಿಧನಕ್ಕೆ  ಎಂಪಿಎಂ ನಿವೃತ್ತ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ. 

Wednesday, July 2, 2025

ಆಧ್ಯಾತ್ಮಿಕದೊಂದಿಗೆ ಧ್ಯಾನ-ಯೋಗ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ : ಡಾ. ಅನುರಾಧ ಪಟೇಲ್

ಭದ್ರಾವತಿಯಲ್ಲಿ ಬುಧವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಹಾಗು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಸಾಧಕ ಮಹಿಳೆಯನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಳ್ಳಲಾಯಿತು. 
    ಭದ್ರಾವತಿ: ಮಹಿಳೆಯರು ಆಧ್ಯಾತ್ಮಿಕವಾಗಿ ಸಹ ಉನ್ನತಿ ಹೊಂದಬೇಕು. ಆಧ್ಯಾತ್ಮಿಕದೊಂದಿಗೆ ಧ್ಯಾನ-ಯೋಗ ನಮ್ಮ ಎಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ನೀಡುವ ಶಕ್ತಿ ಹೊಂದಿವೆ. ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು ಚುಂಚಾದ್ರಿ ಮಹಿಲಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು. 
    ಅವರು ಬುಧವಾರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ದಿನಾಚರಣೆ ಹಾಗು ಚಿಂತನ ಮಂಥನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. 
    ಮಹಿಳೆಯರು ಪ್ರಸ್ತುತ ಕೃಷಿ, ಕೈಗಾರಿಕೆ, ಶಿಕ್ಷಣ, ಸಾಮಾಜಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆಂಬುದು ಹೆಮ್ಮೆಯ ವಿಚಾರವಾಗಿದೆ. ಸ್ವಂತ ಆರ್ಥಿಕ ಬಲದ ಮೇಲೆ ಮುನ್ನಡೆಯುತ್ತಿರುವ ಮಹಿಳೆಯರು ಸಾಮಾಜಿಕ ಸೇವಾ ಕಾರ್ಯಗಳು, ಹೋರಾಟಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸೀಮಿತಗೊಳ್ಳಬಾರದು ಆಧ್ಯಾತ್ಮಿಕವಾಗಿ ಸಹ ಬಲಗೊಳ್ಳಬೇಕು. ಆಧ್ಯಾತ್ಮಿಕತೆ ಎಂದರೆ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲೂ ದೇವರನ್ನು ಕಾಣುವುದಾಗಿದೆ. ಆದರೆ ಧಾರ್ಮಿಕತೆ ಮೂಲಕ ನಾವೆಲ್ಲರೂ ಆಚರಣೆಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈ ನಿಟ್ಟಿನಲ್ಲಿ ಧಾರ್ಮಿಕತೆಯ ಮೂಲ ಅರಿವು ತಿಳಿದುಕೊಳ್ಳಬೇಕು. ಮೌಡ್ಯದಿಂದ ಹೊರಬರಬೇಕು ಎಂದರು. 
    ಅಷಾಡ ಮಾಸ ಪವಿತ್ರವಾದ ಮಾಸವಾಗಿದ್ದು, ಬಹುತೇಕ ಜನರು ಈ ಮಾಸ ಕುರಿತು ತಪ್ಪು ಅರಿವು ಹೊಂದಿದ್ದಾರೆ. ಈ ಮಾಸ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಇದರ ಕುರಿತು ಮಹಿಳೆಯರು ತಿಳಿದುಕೊಳ್ಳುವ ಮೂಲಕ ಇತರರಿಗೆ ತಿಳಿಸಬೇಕೆಂದರು. 
    ಹುಬ್ಬಳ್ಳಿಯ ಸ್ವಯಂ ಸೇವಾ ಸಂಸ್ಥೆಯ ಮಾಣಿಕ್ಯ ಚಿಲ್ಲೂರು, ಹಾಸನದ ಜವಳಿ ಉದ್ಯಮಿ ಸುಧಾರಾಣಿ, ಬಯೋಟೆಕ್ ಸಂಸ್ಥೆಯ ತಾರಾಮಣಿ ಮತ್ತು ಶಿವಮೊಗ್ಗ ಅಂಭ್ರಣಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಗಾಯಿತ್ರಿ ಮತ್ತು ಚಿಕ್ಕಮಗಳೂರಿನ ಕೃಷ್ಣವೇಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತ ಅನಂತಕುಮಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು. ಪ್ರತಿಭಾ ಸ್ವಾಗತಿಸಿ, ಶೀಲಾ ರವಿ ವಂದಿಸಿದರು.