ಶನಿವಾರ, ಸೆಪ್ಟೆಂಬರ್ 13, 2025

ಸೆ.೧೫ರಂದು ಮಾವಿನಕರೆ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ತನ್ನ ಸಾಮಾಜಿಕ ಹೊಣೆಗಾರಿಕೆಯಡಿ(ಸಿಎಸ್‌ಆರ್) ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ಸೆ.೧೫ರ ಸೋಮವಾರ ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದೆ. 
    ಗ್ರಾಮ ಪಂಚಾಯಿತಿ ಸಮೀಪದ ಸಮುದಾಯ ಭವನದಲ್ಲಿ ಆಯೋಜಿಸಲಾಗಿರುವ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಹೃದಯ, ನೇತ್ರ, ಮೂಳೆ ಮತ್ತು ದಂತ ತಪಾಸಣೆ, ರಕ್ತದೊತ್ತಡ(ಬಿ.ಪಿ), ಸಕ್ಕರೆ(ಮಧುಮೇಹ), ನರರೋಗ ಮತ್ತು ಸ್ತ್ರೀರೋಗ ತಜ್ಞರಿಂದ ತಪಾಸಣೆ ನಡೆಯಲಿದೆ. ಉಚಿತ ಔಷಧ ವಿತರಣೆ ನಡೆಯಲಿದ್ದು, ಅಲ್ಲದೆ ಇದೆ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಪಪ್ಪಾಯಿ ಮತ್ತು ನುಗ್ಗೆ ಬೀಜಗಳ ಉಚಿತ ವಿತರಣೆ ಸಹ ನಡೆಯಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರ ಸದುಪಯೋಗಪಡೆದುಕೊಳ್ಳುವಂತೆ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆ ಮಹಾಪ್ರಬಂಧಕ ಎಲ್. ಪ್ರವೀಣ್‌ಕುಮಾರ್ ಕೋರಿದ್ದಾರೆ. 

ಸೆ.೧೫ರಂದು ಕರಾವೇ ನೂತನ ಅಧ್ಯಕ್ಷರ ಆಯ್ಕೆ, ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮ


    ಭದ್ರಾವತಿ: ಟಿ.ಎ ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಿನ ನೂತನ ಮಹಿಳಾ ಅಧ್ಯಕ್ಷರ ಆಯ್ಕೆ ಮತ್ತು ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮ ಸೆ.೧೫ರ ಸೋಮವಾರ ಸಂಜೆ ೪ ಗಂಟೆಗೆ ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಮುಂಭಾಗದ ನಂದಿನಿ ಹೋಟೆಲ್ ಸಭಾಂಗಣದಲ್ಲಿ ನಡೆಯಲಿದೆ. 
    ವೇದಿಕೆ ಪ್ರಮುಖರಾದ ಮಂಜು(ಕೇಬಲ್ ಮಂಜು), ಎಸ್. ವೆಂಕಟೇಶ್ ಮತ್ತು ರೂಪ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ವೇದಿಕೆ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಕೋರಿದ್ದಾರೆ. 

ಸೆ.೧೫ರಂದು ಅಂಬೇಡ್ಕರ್ ಭವನ, ತಾಲೂಕು ಕಛೇರಿ ಮುಂಭಾಗ ಹೋರಾಟ


    ಭದ್ರಾವತಿ: ನಗರದ ಹೃದಯ ಭಾಗದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪ ನೂತನವಾಗಿ ನಿರ್ಮಾಣಗೊಂಡಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಭವನ ರಾಜ್ಯದ ಮುಖ್ಯಮಂತ್ರಿ  ಲೋಕಾರ್ಪಣೆಗೊಳಿಸುವಂತೆ ಹಾಗು ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಈ-ಸ್ವತ್ತು, ಜಾತಿ ಮತ್ತು ಆದಾಯ ಪ್ರಮಾಣಪತ್ರ ವಿತರಣೆ ಸೇರಿದಂತೆ ಇನ್ನಿತರ ಸೇವೆಗಳಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಖಂಡಿಸಿ ಸೆ.೧೫ರಂದು ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ. 
    ಹಲವು ದಶಕಗಳ ನಿರಂತರ ಹೋರಾಟದ ಫಲವಾಗಿ ನಗರದಲ್ಲಿ ೨೦೧೮ರಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಂಡಿದ್ದು, ಸುಮಾರು ೭ ವರ್ಷಗಳ ನಂತರ ಪೂರ್ಣಗೊಂಡಿದೆ. ದಲಿತ ಚಳುವಳಿ ಹುಟ್ಟಿದ ನೆಲದಲ್ಲಿ ವಿಶ್ವಜ್ಞಾನ ಡಾ. ಬಿ.ಆರ್ ಅಂಬೇಡ್ಕರ್‌ರವರನ್ನು ಗೌರವಿಸಲು ನೂತನವಾಗಿ ನಿರ್ಮಾಣಗೊಂಡಿರುವ ಭವನ ನಾಡಿನ ಹಿಂದುಳಿದ ವರ್ಗಗಳ, ದೀನದಲಿತರ ನಾಯಕ, ಹಿರಿಯ ರಾಜಕೀಯ ಮುತ್ಸದ್ದಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಲೋಕಾರ್ಪಣೆಗೊಳಿಸಬೇಕೆಂದು ಸಮಿತಿ ಒತ್ತಾಯಿಸುತ್ತದೆ. 
    ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ಸೇವೆಗಳನ್ನು ಪಡೆದುಕೊಳ್ಳಲು ಗ್ರಾಮೀಣ ಜನರು ಸಾಕಷ್ಟು ತೊಂದರೆ ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಕಾಲ ಕಾಲಕ್ಕೆ ಗ್ರಾಮ ಸಭೆ, ವಾರ್ಡ್ ಸಭೆ ನಡೆಸುವಂತೆ ಹಾಗು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳು, ಈ-ಸ್ವತ್ತು, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಮತ್ತು ಬಗರ್ ಹುಕುಂ ರೈತರಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಸಮಿತಿ ಆಗ್ರಹಿಸುತ್ತದೆ. 
    ಈ ಹಿನ್ನಲೆಯಲ್ಲಿ ಸಮಿತಿ ವತಿಯಿಂದ ಸೆ.೧೫ರಂದು ಬೆಳಿಗ್ಗೆ ೧೦ ಗಂಟೆಗೆ ಅಂಬೇಡ್ಕರ್ ಭವನ ಮುಂಭಾಗ ಧರಣಿ ನಡೆಸಿ ನಂತರ ತಾಲೂಕು ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ವಿವಿಧ ಸಂಘ-ಸಂಸ್ಥೆಗಳು, ಕಾರ್ಮಿಕರು, ರೈತರು, ಮಹಿಳೆಯರು, ಗ್ರಾಮಸ್ಥರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಫೆ.೧೪ರಂದು ಪ್ರತಿಭಾ ಪುರಸ್ಕಾರ, ನಿವೃತ್ತ ಶಿಕ್ಷಕರಿಗೆ ಗೌರವ ಸನ್ಮಾನ


    ಭದ್ರಾವತಿ: ತಾಲೂಕು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ವತಿಯಿಂದ ಸೆ.೧೪ರ ಭಾನುವಾರ ಬೆಳಗ್ಗೆ ೧೦ ಗಂಟೆಗೆ ನಗರದ ಹೊಸಸೇತುವೆ ರಸ್ತೆಯ ಸಿದ್ಧಾರೂಢನಗರದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಈ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಸದಸ್ಯ ಶಿಕ್ಷಕರಿಗೆ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಸಂಘದ ಸದಸ್ಯರ ಹಿತ ಕಾಯ್ದುಕೊಳ್ಳುವ ಜೊತೆಗೆ ವಿಶೇಷವಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ. ಸಂಘದ ೨೯ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಗೌರವ ಸನ್ಮಾನ ನಡೆಯಲಿದ್ದು, ಸಂಘದ ಅಧ್ಯಕ್ಷ ರಾಜಾನಾಯ್ಕ ನಲ್ಲಿಸರ ಅಧ್ಯಕ್ಷತೆವಹಿಸಲಿದ್ದಾರೆ. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕಾರ್ಯದರ್ಶಿ ಆರ್. ನಿಖಿಲ್ ಕೋರಿದ್ದಾರೆ. 

ಶುಕ್ರವಾರ, ಸೆಪ್ಟೆಂಬರ್ 12, 2025

ಜನವಸತಿ ಪ್ರದೇಶಗಳಲ್ಲಿಯೇ ಗೋವುಗಳ ಕಳ್ಳತನ : ಗೋವುಗಳನ್ನು ರಕ್ಷಿಸಲು ಆಗ್ರಹ

ಭದ್ರಾವತಿ ಜನವಸತಿ ಪ್ರದೇಶಗಳಲ್ಲಿಯೇ ಗೋವುಗಳ ಕಳ್ಳತನ ನಡೆಯುತ್ತಿದೆ. ಕಳೆದ ಕೇವಲ ೨೦ ದಿನಗಳಲ್ಲಿ ೯ ಗೋವುಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಹಲವಾರು ವರ್ಷಗಳಿಂದ ಗೋ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಿಂದೂ ಜಾಗೃತಿ ವೇದಿಕೆ ಶಿವಮೊಗ್ಗ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 
     ಭದ್ರಾವತಿ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಕಾನೂನು ಜಾರಿಯಲ್ಲಿದ್ದರೂ ಸಹ ಒಂದೆಡೆ ನಗರದಲ್ಲಿ ಗೋವುಗಳ ಹತ್ಯೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮತ್ತೊಂದೆಡೆ ಜನವಸತಿ ಪ್ರದೇಶಗಳಲ್ಲಿಯೇ ಗೋವುಗಳ ಕಳ್ಳತನ ನಡೆಯುತ್ತಿದೆ. ಕಳೆದ ಕೇವಲ ೨೦ ದಿನಗಳಲ್ಲಿ ೯ ಗೋವುಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಹಲವಾರು ವರ್ಷಗಳಿಂದ ಗೋ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಿಂದೂ ಜಾಗೃತಿ ವೇದಿಕೆ ಶಿವಮೊಗ್ಗ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 
     ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೩೧ರ ಜಿಂಕ್‌ಲೈನ್‌ನಲ್ಲಿ ಕಳೆದ ೨೦ ದಿನಗಳಲ್ಲಿ ೩ ರೈತ ಕುಟುಂಬಗಳ ೯ ಗೋವುಗಳನ್ನು ಕಳ್ಳತನ ಮಾಡಲಾಗಿದ್ದು, ಇದರಿಂದ ರೈತ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ವಿಶೇಷ ಎಂದರೆ ಗೋವುಗಳು ಮೇಯಲು ಹೋದಾಗ ಕಳ್ಳತನವಾಗುತ್ತವೆ. ಆದರೆ ಇಲ್ಲಿ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಕಳ್ಳರ ಬಗ್ಗೆ ಸುಳಿವಿಲ್ಲ. 
     ಗೋವುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿರುವ ರೈತ ಕುಟುಂಬಗಳ ಪರ ಹೋರಾಟಕ್ಕೆ ಮುಂದಾಗಿರುವ ದೇವರಾಜ್‌ರವರು ಪೊಲೀಸರಿಗೆ ದೂರು ನೀಡಿದ್ದರೂ ಸಹ ಇದುವರೆಗೂ ಕಳ್ಳರನ್ನು ಪತ್ತೆ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇಲ್ಲಿನ ನಿವಾಸಿಗಳು ಹಗಲಿರುಳು ಗೋವುಗಳನ್ನು ಕಾಯುವ ಪರಿಸ್ಥಿತಿ ಉಂಟಾಗಿದೆ. ಗೋವುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.  
     ದೇವರಾಜ್ ಅರಳಿಹಳ್ಳಿಯವರ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ಸುಧೀಂದ್ರ ಸಾಗರ. ಫೋಕಸ್ ಮಂಜುನಾಥ್,  ರಕ್ಷಿತ್ ಸೇರಿದಂತೆ ಇನ್ನಿತರರು ಗೋವುಗಳನ್ನು ಕಳೆದುಕೊಂಡ ರೈತ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.  
 

ಕಣ್ಮನ ಸೆಳೆಯುತ್ತಿದೆ ಶ್ರೀ ವೀರಾಂಜನೇಯ ಸ್ವಾಮಿ ಗಣಪತಿ

ಭದ್ರಾವತಿ ನಗರದ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಬಳಿ ಒಂದೇ ಮಾತರಂ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೨೧ನೇ ವರ್ಷದ ಶ್ರೀ ವೀರಾಂಜನೇಯ ಸ್ವಾಮಿ ಗಣಪತಿ ಭಕ್ತರ ಕಣ್ಮನ ಸೆಳೆಯುತ್ತಿದೆ. 
    ಭದ್ರಾವತಿ : ನಗರದ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಬಳಿ ಒಂದೇ ಮಾತರಂ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೨೧ನೇ ವರ್ಷದ ಶ್ರೀ ವೀರಾಂಜನೇಯ ಸ್ವಾಮಿ ಗಣಪತಿ ಭಕ್ತರ ಕಣ್ಮನ ಸೆಳೆಯುತ್ತಿದೆ. 
    ವೈಭವಯುತ ಅಲಂಕಾರದೊಂದಿಗೆ ೨೧ ದಿನಗಳ ಕಾಲ ಗಣಪತಿ ಪ್ರತಿಷ್ಠಾಪಿಸಲಾಗಿದ್ದು,  ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ. ಶನಿವಾರ ಹೋಮ, ವಿಶೇಷ ಪೂಜೆ ಏರ್ಪಡಿಸಲಾಗಿದೆ. ಮಂಗಳವಾರ ವಿವಿಧ ಕಲಾತಂಡಗಳ ಮೆರವಣಿಯೊಂದಿಗೆ ವಿಸರ್ಜನೆ ನಡೆಯಲಿದೆ.
 

ಅನಧಿಕೃತ ಅಂಗಡಿಗಳ ತೆರವುಗೊಳಿಸಲು ದೂರು ಸಲ್ಲಿಸಲು ಮುಂದಾದ ಅಂಗಡಿ ಮುಂಗಟ್ಟುಗಳ ಮಾಲೀಕರು

ನಗರಸಭೆ ಆಡಳಿತ ನಿರ್ಲಕ್ಷ್ಯತದ ವಿರುದ್ಧ ಉಪ ಲೋಕಾಯುಕ್ತರಿಗೆ ದೂರು

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಮುಂಭಾಗ ಮಾರಿಯಮ್ಮ ದೇವಸ್ಥಾನದ ಬಳಿ ಬಿ.ಎಚ್ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳು. 
    ಭದ್ರಾವತಿ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಮುಂಭಾಗ ಮಾರಿಯಮ್ಮ ದೇವಸ್ಥಾನದ ಬಳಿ ಬಿ.ಎಚ್ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ನಗರಸಭೆ ಆಡಳಿತ ನಿರ್ಲಕ್ಷ್ಯತನ ವಹಿಸುತ್ತಿದೆ ಎಂದು ಆರೋಪಿಸಿ ಇಲ್ಲಿನ ಅಂಗಡಿ ಮುಂಗಟ್ಟುಗಳ ಮಾಲೀಕರು ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. 
    ೨೦೦೮-೨೦೦೯ರಲ್ಲಿ ಬಿ.ಎಚ್ ರಸ್ತೆ ಅಗಲೀಕರಣ ಸಮಯದಲ್ಲಿ ಅಂಗಡಿಮುಂಗಟ್ಟುಗಳ ಮಾಲೀಕರು ಬಿಟ್ಟುಕೊಟ್ಟಿದ್ದ ಜಾಗದಲ್ಲಿಯೇ ಇದೀಗ ಅನಧಿಕೃತ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳು ತಲೆ ಎತ್ತಿವೆ. ವಾಹನ ನಿಲುಗಡೆ ನಿಷೇಧಿತ ಸ್ಥಳದಲ್ಲಿಯೇ ನಿರ್ಮಿಸಿಕೊಂಡಿದ್ದರೂ ಸಹ ಪೊಲೀಸರಾಗಲಿ ಅಥವಾ ನಗರಸಭೆ ಆಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
    ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಲ್ಲದೆ ಇಲ್ಲಿ ಸದಾ ಜನಸಂದಣಿಯಿಂದ ಕೂಡಿರುತ್ತದೆ. ಇದರಿಂದಾಗಿ ಪಾದಚಾರಿಗಳ ಸಂಚಾರಕ್ಕೂ ತೊಂದರೆಯಾಗಿದೆ. ಈ ಸಂಬಂಧ ಕಳೆದ ಸುಮಾರು ೧೫ ತಿಂಗಳ ಹಿಂದೆ ನ್ಯೂಟೌನ್ ಪೊಲೀಸ್ ಠಾಣೆಗೂ ಸಹ ದೂರು ನೀಡಲಾಗಿದೆ. ಅಲ್ಲದೆ ಸುಮಾರು ೧ ವರ್ಷದ ಹಿಂದೆ ೨ ಬಾರಿ ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೂ ದೂರು ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 
ಈ ನಡುವೆ ಇತ್ತೀಚೆಗೆ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ನೂತನ ಪೌರಾಯುಕ್ತರನ್ನು ಅಂಗಡಿ ಮುಂಗಟ್ಟುಗಳ ಮಾಲೀಕರು ಭೇಟಿಯಾಗಿ ಚರ್ಚಿಸಿದ್ದು, ಆದರೆ ಪೌರಾಯುಕ್ತರು ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತ್ತಿದ್ದಾರೆ. ಈ ನಡುವೆ ತಾಲೂಕು ಆಡಳಿತ ಹಾಗು ಜಿಲ್ಲಾಡಳಿತಕ್ಕೂ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. 
ಅಂಗಡಿ ಮುಂಗಟ್ಟುಗಳ ಮಾಲೀಕರಾದ ಶ್ರೀ ಮಾರುತಿ ಸ್ವೀಟ್ ಸ್ಟಾಲ್ & ಬೇಕರಿ ಪುಟ್ಟಸ್ವಾಮಿ, ಜೈ ಹಿಂದೂ ಟ್ರಾನ್ಸ್ ಪೋರ್ಟ್ ಅಬ್ದುಲ್ ನವೀದ್, ಶ್ರೀ ಮಂಜುನಾಥ ಕಾಂಡಿಮೆಂಟ್ಸ್  ಎಚ್.ಆರ್ ಶಿವಕುಮಾರ್, ಜೆ.ಪಿ ರೋಡ್ ಲೈನ್ಸ್ ಮೋಹನ್ ಸಿಂಗ್, ನಿರಾಲ ರೋಡ್‌ವೇಸ್ ಅಂಜನಾಮೂರ್ತಿ, ಹೋಟೆಲ್ ಮಿಲನ್, ವಿಜಯಶ್ರೀ ಕ್ಯಾಂಟೀನ್ ಸೇರಿದಂತೆ ಇನ್ನಿತರ ಅಂಗಡಿ ಮುಂಗಟ್ಟುಗಳ ಮಾಲೀಕರು ದೂರು ಸಲ್ಲಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.