![](https://blogger.googleusercontent.com/img/b/R29vZ2xl/AVvXsEitmy7eC4BjbgzDDiaFtSAZgSGmxjlTr7VUL_1huFs0EykhErD21tDkoZii0tdAviYi0mbJgLMZQKicC2La97SaPU5mdeOx8e5TifyDUAmYSIUJ0CZ10PqR7jkjhjwXBJt7BTRD5t2b4j6x/w400-h178-rw/D3-BDVT2-700362.jpg)
ಭದ್ರಾವತಿಯಲ್ಲಿ ಕೊರೋನಾ ಸೋಂಕಿತ ಮೃತದೇಹಗಳ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಜರಂಗದಳ ಕಾರ್ಯಕರ್ತರನ್ನು ಗುರುವಾರ ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಆರ್ಥಿಕ ನೆರವಿನ ಜೊತೆಗೆ ಸನ್ಮಾನಿಸಿ ಅಭಿನಂದಿಸಲಾಯಿತು.
* ಅನಂತಕುಮಾರ್
ಭದ್ರಾವತಿ, ಜೂ. ೩: ಪ್ರಸ್ತುತ ಸಮಾಜದಲ್ಲಿ ಕೊರೋನಾ ಎಂಬ ಭಯದ ವಾತಾವರಣದಲ್ಲಿ ಹೆತ್ತವರ ಮೃತ ದೇಹಗಳನ್ನು ನೋಡಲು ಸ್ವಂತ ಮಕ್ಕಳೇ ಬಾರದಿರುವ ಘಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಕುಟುಂಬಗಳಿಂದ ಅಂತರ ಕಾಯ್ದುಕೊಂಡು ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುತ್ತಿರುವ ನಗರದ ಬಜರಂಗದಳ ಕಾರ್ಯಕರ್ತರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ.
ಕೊರೋನಾ ಸೋಂಕು ೨ನೇ ಅಲೆ ಕಾಣಿಸಿಕೊಂಡು ದಿನ ದಿಂದ ದಿನಕ್ಕೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಒಂದೆಡೆ ಭಯದ ವಾತಾವರಣ, ಮತ್ತೊಂದೆಡೆ ಮೃತ ದೇಹಗಳ ಅಂತ್ಯ ಸಂಸ್ಕಾರ ನೆರವೇರಿಸುವ ಸವಾಲು. ಇಂತಹ ಸಂದರ್ಭದಲ್ಲಿ ನಗರದ ನಿವಾಸಿಗಳಾದ ಬಜರಂಗದಳದ ಜಿಲ್ಲಾ ಸಂಚಾಲಕ ಸುನಿಲ್, ಜಿಲ್ಲಾ ಸಹ ಸಂಚಾಲಕ ರಾಘವನ್ ವಡಿವೇಲು, ಕೃಷ್ಣ, ರಮೇಶ್, ಶಿವಶಂಕರ್, ದೇವರಾಜ, ಭರತ್ ಸೇರಿದಂತೆ ಇನ್ನಿತರರು ಕುಟುಂಬಗಳಿಂದ ಅಂತರ ಕಾಯ್ದುಕೊಂಡು ಉಚಿತವಾಗಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಸಾರ್ಥಕ ಸೇವೆಯ ೫೧ನೇ ಕಾರ್ಯವನ್ನು ಗುರುವಾರ ಯಶಸ್ವಿಯಾಗಿ ನೆರವೇರಿಸಿದ್ದಾರೆ.
ಮಾನವ ಜನ್ಮ ಅತಿ ಅಮೂಲ್ಯವಾದ ಜನ್ಮವಾಗಿದೆ. ಇದರಲ್ಲಿ ಜನ್ಮ ತಾಳಬೇಕಾದರೆ ಕೋಟಿ ಪುಣ್ಯ ಮಾಡಿರಬೇಕು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಇಂತಹ ಮಾನವ ಜನ್ಮ ಸಾರ್ಥಕವಾಗುವುದು ಈ ರೀತಿಯ ಕಾರ್ಯಗಳಿಂದ ಮಾತ್ರ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ.
-ಸಂಪತ್ರಾಜ್ ಬಾಂಟಿಯಾ, ಜೈನ್ ಸಮಾಜ, ಭದ್ರಾವತಿ.
ಈ ಯುವಕರು ತಮ್ಮ ಸೇವಾ ಕಾರ್ಯಕ್ಕೆ ಬಾಡಿಗೆ ವಾಹನ ಪಡೆದು ಶವಗಾರಗಳಿಂದ ಸ್ಮಶಾನದವರೆಗೂ ಸೋಂಕಿತ ಮೃತದೇಹಗಳನ್ನು ಸಾಗಿಸುವ ಕಾರ್ಯದ ಜೊತೆಗೆ ಜಾತಿ ಭೇದಭಾವವಿಲ್ಲದೆ ಎಲ್ಲಾ ಮೃತದೇಹಗಳನ್ನು ಸಂಸ್ಥಾರ ಬದ್ಧವಾಗಿ ಅಂತ್ಯಕ್ರಿಯೆ ನೆರವೇರಿಸುವ ಕಾರ್ಯವನ್ನು ಬಹಳ ಅಚ್ಚಕಟ್ಟಾಗಿ ಮಾಡುತ್ತಿದ್ದಾರೆ. ಜೊತೆಗೆ ಕಡು ಬಡಕುಟುಂಬಗಳ ಮೃತ ದೇಹಗಳ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಸೌದೆ ಸಹ ದಾನಿಗಳಿಂದ ಸಂಗ್ರಹಿಸಿ ಉಚಿತವಾಗಿ ನೀಡುತ್ತಿದ್ದಾರೆ.
ಕುಟುಂಬಗಳಿಂದ ಅಂತರ :
ಈ ಯುವಕರು ಒಂದು ತಿಂಗಳಿಗೂ ಅಧಿಕ ದಿನಗಳಿಂದ ತಮ್ಮ ಮನೆಗಳಿಂದ ದೂರ ಉಳಿದು ಅಂತರ ಕಾಯ್ದುಕೊಂಡಿದ್ದಾರೆ. ದಾನಿಯೊಬ್ಬರು ಇವರಿಗೆ ಖಾಸಗಿ ಹೋಟೆಲ್ವೊಂದರಲ್ಲಿ ಕೊಠಡಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಭಾವಸಾರ ಕ್ಷತ್ರಿಯ ಸಮಾಜ ದಿನದ ಊಟದ ವ್ಯವಸ್ಥೆ ಕಲ್ಪಿಸಿದೆ. ಇದರ ಜೊತೆಗೆ ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್ ಮುನ್ನಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಕೊರೋನಾ ಲಸಿಕೆಯನ್ನು ಕೊಡಿಸಿದ್ದಾರೆ.
ಭದ್ರಾವತಿಯಲ್ಲಿ ಕೊರೋನಾ ಸೋಂಕಿತ ಮೃತದೇಹಗಳ ಅಂತ್ಯ ಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಜರಂಗದಳ ಕಾರ್ಯಕರ್ತರನ್ನು ಬಾರಂದೂರು ವಂದೇ ಮಾತರಂ ಟ್ರಸ್ಟ್ ವತಿಯಿಂದ ಆರ್ಥಿಕ ನೆರವಿನ ಜೊತೆಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ವಿವಿಧ ಸಂಘ-ಸಂಸ್ಥೆಗಳಿಂದ ಪ್ರಶಂಸೆ :
ಬೆಲೆ ಕಟ್ಟಲು ಸಾಧ್ಯವಾಗದ ಯುವಕರ ಸೇವಾ ಕಾರ್ಯಕ್ಕೆ ನಗರದ ಭಾವಸಾರ ಕ್ಷತ್ರಿಯ ಸಮಾಜ, ಜೈನ್ ಸಮಾಜ, ಹಿಂದೂ ಮಹಾಸಭಾ ಹಿಂದೂ ರಾಷ್ಟ್ರಸೇನಾ ಶ್ರೀ ವಿನಾಯಕ ಸೇವಾ ಸಮಿತಿ, ಬಾರಂದೂರು ವಂದೇ ಮಾತರಂ ಟ್ರಸ್ಟ್ ಹಾಗು ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರಶಂಸೆ ವ್ಯಕ್ತಪಡಿಸಿ ಯುವಕರಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳ ಜೊತೆಗೆ ಕೈಲಾದಷ್ಟು ಆರ್ಥಿಕ ನೆರವು ನೀಡುವ ಮೂಲಕ ಸನ್ಮಾನಿಸಿವೆ.
ಯುವಕರ ಕಾರ್ಯ ಇತರರಿಗೆ ಸ್ಪೂರ್ತಿ:
ಯುವಕರು ಕೈಗೊಳ್ಳುತ್ತಿರುವ ಈ ಕಾರ್ಯ ಇತರರಿಗೆ ಸ್ಪೂರ್ತಿದಾಯಕವಾಗಬೇಕು. ಸಂಕಷ್ಟದಲ್ಲಿರುವವರಿಗೆ ಮಾನವೀಯತೆ ನೆಲೆಗಟ್ಟಿನಲ್ಲಿ ನೆರವಿಗೆ ಮುಂದಾಗುವಂತಹ ವಾತಾವರಣ ಸಮಾಜದಲ್ಲಿ ರೂಪುಗೊಳ್ಳಬೇಕು. ಈ ಯುವಕರ ಕಾರ್ಯಕ್ಕೆ ಮತ್ತಷ್ಟು ಜನ ಕೈಜೋಡಿಸುವಂತಾಗಬೇಕು. ಕೊರೋನಾ ಎಂಬ ಭಯ ದೂರವಾಗಿ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು. ನಿಜಕ್ಕೂ ಈ ಯುವಕರ ಕಾರ್ಯ ಶ್ಲಾಘನೀಯ ಎಂದರೆ ತಪ್ಪಾಗಲಾರದು.
ಕೊರೋನಾ ಪರಿಣಾಮ ಸಂಬಂಧಗಳೇ ಮುರಿದುಹೋಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸ್ವಯಂ ಪ್ರೇರಣೆಯಿಂದ ಯುವಕರು ಈ ಕಾರ್ಯದಲ್ಲಿ ಪಾಲ್ಗೊಂಡಿರುವುದು ವಿಶ್ವವೇ ಮೆಚ್ಚುವಂತಹ ಕೆಲಸವಾಗಿದೆ. ಈ ಯುವಕರ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
- ಸುಂದರ್ ಬಾಬು, ಜಿಲ್ಲಾ ಕಾರ್ಯಾಧ್ಯಕ್ಷರು,
ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್