ಗುರುವಾರ, ಆಗಸ್ಟ್ 26, 2021

ವಾರ್ಡ್ ನಂ.೨೯ ಚುನಾವಣೆ : ಅಂತಿಮ ಕಣದಲ್ಲಿ ೩ ಅಭ್ಯರ್ಥಿಗಳು

  

ಬಿ.ಜಿ ಲೋಯಿತಾ ನಂಜಪ್ಪ-ಕಾಂಗ್ರೆಸ್ ಅಭ್ಯರ್ಥಿ

    ಭದ್ರಾವತಿ, ಆ. ೨೬: ನಗರಸಭೆ ವಾರ್ಡ್ ನಂ.೨೯ರ ಚುನಾವಣೆ ರಂಗೇರಿದ್ದು, ಅಂತಿಮ ಕಣದಲ್ಲಿ ೩ ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
    ಚುನಾವಣೆ ಸ್ಪರ್ಧಿಸಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಅಧಿಕೃತ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರ ಯಾರು ಸಹ ನಾಮಪತ್ರ ಹಿಂಪಡೆಯದ ಕಾರಣ ಅಂತಿಮ ಕಣದಲ್ಲಿ ೩ ಮಂದಿ ಉಳಿದುಕೊಂಡಿದ್ದಾರೆ.
    


ಆರ್. ನಾಗರತ್ನ ಅನಿಲ್‌ಕುಮಾರ್-ಜೆಡಿಎಸ್ ಅಭ್ಯರ್ಥಿ
    ಕಾಂಗ್ರೆಸ್ ಪಕ್ಷದಿಂದ ನ್ಯಾಯವಾದಿ ಬಿ.ಜಿ ಲೋಯಿತಾ ನಂಜಪ್ಪ, ಜೆಡಿಎಸ್ ಪಕ್ಷದಿಂದ ಹಾಲಿ ಸದಸ್ಯ ಅನಿಲ್‌ಕುಮಾರ್ ಅವರ ಪತ್ನಿ ಆರ್. ನಾಗರತ್ನ ಹಾಗು ಬಿಜೆಪಿ ಪಕ್ಷದಿಂದ ಹಲವು ಸಮಾಜಮುಖಿ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ರಮಾವೆಂಕಟೇಶ್ ಸ್ಪರ್ಧಿಸಿದ್ದಾರೆ.
       ವಾರ್ಡ್ ನಂ.೨೯ರ ಪರಿಚಯ:
    ಹೆಚ್ಚಿನ ಪ್ರಮಾಣದಲ್ಲಿ ಶ್ರೀಮಂತ ವರ್ಗದವರು ವಾಸಿಸುತ್ತಿರುವ ಈ ವಾರ್ಡ್ ಜನ್ನಾಪುರ ಭಾಗದಲ್ಲಿದ್ದು, ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್), ರಾಜಪ್ಪ ಬಡಾವಣೆ ಹಾಗು ಸಿದ್ದಾಪುರ ಎನ್‌ಟಿಬಿ ಬಡಾವಣೆಯನ್ನು ಈ ವಾರ್ಡ್ ಒಳಗೊಂಡಿದೆ. ಮೂಲ ನಿವಾಸಿಗಳು ಕಡಿಮೆ ಸಂಖ್ಯೆಯಲ್ಲಿದ್ದು, ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ೧೬೮೬ ಪುರುಷ ಹಾಗು ೧೬೮೮ ಮಹಿಳಾ ಮತದಾರರು ಸೇರಿ ಒಟ್ಟು ೩೩೭೪ ಮತದಾರನ್ನು ಒಳಗೊಂಡಿದೆ.



ರಮಾ ವೆಂಕಟೇಶ್-ಬಿಜೆಪಿ ಅಭ್ಯರ್ಥಿ    
    ಸೆ.೩ರಂದು ಮತದಾನ ನಡೆಯಲಿದ್ದು, ಸೆ.೬ರಂದು ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ. ಈಗಾಗಲೇ ಒಟ್ಟು ೩೫ ವಾರ್ಡ್‌ಗಳ ಪೈಕಿ ೧ ಪಕ್ಷೇತರ, ೧೮ ಕಾಂಗ್ರೆಸ್, ೧೧ ಜೆಡಿಎಸ್ ಮತ್ತು ೪ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಮೂಲಸೌಕರ್ಯಕ್ಕೆ ಆಗ್ರಹಿಸಿ ಪಂಚಾಯಿತಿ ಮುಂಭಾಗ ಪ್ರತಿಭಟನೆ

ಭದ್ರಾವತಿ ತಾಲೂಕಿನ ಕಂಬದಾಳ್-ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಕೆ ಸಂಗಮೇಶ್ವರ್ ಬಡಾವಣೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಗುರುವಾರ ಬಡಾವಣೆ ನಿವಾಸಿಗಳುಪ್ರತಿಭಟನೆ ನಡೆಸಿದರು.
    ಭದ್ರಾವತಿ, ಆ. ೨೬:  ತಾಲೂಕಿನ ಕಂಬದಾಳ್-ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿ.ಕೆ ಸಂಗಮೇಶ್ವರ್ ಬಡಾವಣೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಗುರುವಾರ ಬಡಾವಣೆ ನಿವಾಸಿಗಳುಪ್ರತಿಭಟನೆ ನಡೆಸಿದರು.
      ಸ್ಥಳೀಯ ಮುಖಂಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷಪ್ಪ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಬಡಾವಣೆ ಅಸ್ತಿತ್ವಕ್ಕೆ ಬಂದು ಸುಮಾರು ೩ ವರ್ಷಗಳು ಕಳೆದಿದ್ದು, ಇದುರವೆಗೂ ರಸ್ತೆ, ಚರಂಡಿ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಿರುವುದಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಲಾಯಿತು.  
    ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲತಾ ಅವರಿಗೆ ಮನವಿ ಸಲ್ಲಿಸಲಾಯಿತು.

ಅಕ್ರಮ ಗಾಂಜಾ ಸಾಗಾಟ : ೩ ಯುವಕರ ಸೆರೆ

ಅಕ್ರಮವಾಗಿ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ೩ ಯುವಕರನ್ನು ಬಂಧಿಸುವಲ್ಲಿ ಭದ್ರಾವತಿನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ಗುರುವಾರನಡೆದಿದೆ.
    ಭದ್ರಾವತಿ, ಆ. ೨೬: ಅಕ್ರಮವಾಗಿ ಗಾಂಜಾ ಸಾಗಾಟದಲ್ಲಿ ತೊಡಗಿದ್ದ ೩ ಯುವಕರನ್ನು  ಬಂಧಿಸುವಲ್ಲಿ ನ್ಯೂಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ಗುರುವಾರನಡೆದಿದೆ.
    ಕೂಲಿಬ್ಲಾಕ್ ಶೆಡ್ ನಿವಾಸಿಗಳಾದ ಡ್ಯಾನಿಯಲ್ ಅಲಿಯಾಸ್ ಡ್ಯಾನಿ(೨೨), ಆದಿಲ್ ಬಾಷಾ(೨೬) ಮತ್ತು ನ್ಯೂಕಾಲೋನಿ ನಿವಾಸಿ ಚರಣ ಅಲಿಯಾಸ್ ಕುರಚರಣರಾಜ್ ಯಾದವ್ ಅವರನ್ನು ಬಂಧಿಸಲಾಗಿದೆ.
    ಬಂಧಿತ ಯುವಕರಿಂದ ಒಟ್ಟು ೧.೩೦ ಲಕ್ಷ ರು. ಮೌಲ್ಯ ೧೧ ಕೆ.ಜಿ ೪೪೦ ಗ್ರಾಂ ತೂಕದ ಗಾಂಜಾ ಹಾಗು ಕೃತ್ಯಕ್ಕೆ ಬಳಸಿದ ಸುಮಾರು ೧.೫೦ ಲಕ್ಷ ರು. ಮೌಲ್ಯದ ಕಾರನ್ನು ವಶಕ್ಕೆ ಪಡೆಯಲಾಗಿದ್ದು, ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಕಾಗದನಗರದಿಂದ ನ್ಯೂಟೌನ್ ವ್ಯಾಪ್ತಿಯ ಕಡೆಗೆ ೪ ಜನ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸ್ ಉಪಾಧೀಕ್ಷಕ ಸಾಹಿಲ್ ಬಾಗ್ಲಾ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
    ಸಿಬ್ಬಂದಿಗಳಾದ ವೆಂಕಟೇಶ್, ಮಂಜುನಾಥ್, ಅಶೋಕ್, ಸುನಿಲ್‌ಕುಮಾರ್, ಎಚ್. ಪಾಲಕ್ಷನಾಯ್ಕ, ಮಲ್ಲಿಕಾರ್ಜುನ ಮತ್ತು ಕುಮಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
    ಜಿಲ್ಲಾ ರಕ್ಷಣಾಧಿಕಾರಿಗಳು ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳು ಕಾರ್ಯಾಚರಣೆ ನಡೆಸಿರುವ ತಂಡವನ್ನು ಅಭಿನಂದಿಸಿದ್ದಾರೆ.

ಎನ್‌ಎಂಪಿ ಯೋಜನೆಯಡಿ ದೇಶದ ಆಸ್ತಿ ಮಾರಾಟ : ಕೇಂದ್ರ ಸರ್ಕಾರದ ವಿರುದ್ಧ ರೈಲ್ವೆ ತಡೆ ಚಳುವಳಿ

ತಕ್ಷಣ ಕೇಂದ್ರ ಸರ್ಕಾರ ವಜಾ ಮಾಡಿ, ನಗರ, ಗ್ರಾಮಾಂತರ ಯುವ ಕಾಂಗ್ರೆಸ್ ಆಗ್ರಹ


ರಾಷ್ಟ್ರೀಯ ಹಣಗಳಿಕೆ ನೀತಿ(ಎನ್‌ಎಂಪಿ) ಯೋಜನೆಯಡಿ ದೇಶದ ೬ ಲಕ್ಷ ಕೋಟಿ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಗುರುವಾರ ನಗರದ ರೈಲ್ವೆ ನಿಲ್ದಾಣ ಮುಂಭಾಗ  ತಾಲೂಕು ನಗರ ಮತ್ತು ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ  ರೈಲ್ವೆ ತಡೆ ಚಳುವಳಿ ನಡೆಸಲಾಯಿತು.  
    ಭದ್ರಾವತಿ, ಆ. ೨೬: ರಾಷ್ಟ್ರೀಯ ಹಣಗಳಿಕೆ ನೀತಿ(ಎನ್‌ಎಂಪಿ) ಯೋಜನೆಯಡಿ ದೇಶದ ೬ ಲಕ್ಷ ಕೋಟಿ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಒಡೆತನಕ್ಕೆ ಮಾರಾಟ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಗುರುವಾರ ನಗರದ ರೈಲ್ವೆ ನಿಲ್ದಾಣ ಮುಂಭಾಗ  ತಾಲೂಕು ನಗರ ಮತ್ತು ಗ್ರಾಮಾಂತರ ಯುವ ಕಾಂಗ್ರೆಸ್ ವತಿಯಿಂದ  ರೈಲ್ವೆ ತಡೆ ಚಳುವಳಿ ನಡೆಸಲಾಯಿತು.  
    ದೇಶಕ್ಕೆ ಉಜ್ವಲ ಭವಿಷ್ಯ ಕಲ್ಪಿಸಿಕೊಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ ದೇಶದ ಸಾರ್ವಜನಿಕ ವಲಯದ ಆಸ್ತಿಗಳನ್ನು ರಾಷ್ಟ್ರೀಯ ಹಣಗಳಿಕೆಯ ನೀತಿಯಡಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ  ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಲಾಯಿತು.
    ಈಗಾಗಲೇ ಎನ್‌ಎಂಪಿ ಯೋಜನೆಯಡಿಯಲ್ಲಿ ಸುಮಾರು ೨೬,೭೦೦ ರಾಷ್ಟ್ರೀಯ ಹೆದ್ದಾರಿಗಳನ್ನು, ೧೫೦ ರೈಲುಗಳನ್ನು, ೪೦೦ ರೈಲ್ವೆ  ನಿಲ್ದಾಣಗಳನ್ನು, ೨೫ ವಿಮಾನ ನಿಲ್ದಾಣಗಳನ್ನು, ೯ ಬಂದರುಗಳನ್ನು, ೨ ರಾಷ್ಟ್ರೀಯ ಕ್ರೀಡಾಂಗಣಗಳು, ವಿದ್ಯುತ್ ಘಟಕಗಳು, ಟೆಲಿಕಾಂ ನೆಟ್‌ವರ್ಕ್‌ಗಳನ್ನು ಹೀಗೆ ೧೩ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಜನರನ್ನು ಖಾಸಗಿ ಕಂಪನಿಗಳ ಗುಲಾಮರನ್ನಾಗಿ ಮಾಡಲು ಹೊರಟಿರುವುದು ಕೇಂದ್ರದ ಬಿಜೆಪಿ ಸರ್ಕಾರದ ಸರ್ವಾಧಿಕಾರಿ, ಜನವಿರೋಧಿ ನೀತಿ ಎದ್ದು ಕಾಣುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ರಾಷ್ಟ್ರಪತಿಗಳು ತಕ್ಷಣ ದೇಶದ ಸಾರ್ವಜನಿಕ ಆಸ್ತಿಗಳನ್ನು ಮಾಡುವಂತಹ ದೇಶವಿರೋಧಿ ಯೋಜನೆಗಳಿಗೆ ಕಡಿವಾಣ ಹಾಕಿ ಖಾಸಗಿ ಕಂಪನಿಗಳ ಪರವಾಗಿರುವ ಹಾಗು ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದರು.
    ಯುವ ಕಾಂಗ್ರೆಸ್ ನಗರ ಅಧ್ಯಕ್ಷ  ಜಿ.ವಿನೋದ್ ಕುಮಾರ್ ಮತ್ತು ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಮಹಮದ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ನಗರ ಉಪಾಧ್ಯಕ್ಷ ತೇಜಸ್ ಗೌಡ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಗಂಗಾಧರ್, ಐಸಾಕ್, ಶಂಕರ್, ವಾಸಿಂ, ಲಿಯಾಂದರ್, ಜಾವಿದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಆ.೨೮ರಂದು ಶ್ರಾವಣ ಸಂಭ್ರಮ ಕವಿಗೋಷ್ಠಿ

ಭದ್ರಾವತಿ, ಆ. ೨೬: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಶಿವಮೊಗ್ಗ ತಾಲೂಕು ಶಾಖೆ ವತಿಯಿಂದ ಆ.೨೮ರಂದು ಮಧ್ಯಾಹ್ನ ೩.೩೦ಕ್ಕೆ ಕಾಗದನಗರದ ವನಿತಾ ಸಮಾಜದಲ್ಲಿ ಶ್ರಾವಣ ಸಂಭ್ರಮ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
    ಕರ್ನಾಟಕ ಸಾಹಿತ್ಯ ಆಕಾಡೆಮಿ  ಸದಸ್ಯೆ ದೀಪ್ತಿಶ್ರೀಹರ್ಷ ಉದ್ಘಾಟಿಸಲಿದ್ದು, ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್, ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಎಚ್. ತಿಮ್ಮಪ್ಪ, ಬಿ. ಮಂಜಪ್ಪ, ಎಂ.ಆರ್ ಮಂಜುನಾಥ್, ಬಿ. ಗುರು, ಕೋಡ್ಲುಯಜ್ಞಯ್ಯ ಮತ್ತು ಕಮಲಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ವೇದಿಕೆ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
    ಕವಿಗಳಾದ ಪಿ.ಕೆ ಸತೀಶ್, ಉಮ್ಮರ್ ಕೋಯಾ, ಪೀಟರ್, ಮಾಯಮ್ಮ, ಎಚ್.ಆರ್ ಸುಧಾ, ನಿಹಾರಿಕ, ಎನ್.ಎಸ್ ಸುಬ್ರಮಣ್ಯ, ಸಿ. ಚೈತ್ರ, ಗುಣ, ಸಿದ್ದೋಜಿರಾವ್, ನರೇಂದ್ರ ಘೋರ್ಪಡೆ, ಪುಟ್ಟರಾಜು, ಎಂ. ಹನುಮಂತಪ್ಪ, ಸೂಫಿಯ ತಬಸ್ಸುಂ, ಬಿ.ಕೆ ನಿತಿನ್, ಜ್ಞಾನೇಶ್, ಶ್ರೀಧರೇಶ್ ಭಾರದ್ವಾಜ್ ಮತ್ತು ಲಕ್ಷ್ಮಿ ಭಾಗವಹಿಸಲಿದ್ದಾರೆ.

ಶಾಸಕ ಬಿ.ಕೆ ಸಂಗಮೇಶ್ವರ್ ಮೊಮ್ಮಗನ ಮೊದಲನೇ ವರ್ಷದ ಹುಟ್ಟುಹಬ್ಬ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ೨ನೇ ಪುತ್ರ ಬಸವೇಶ್ ಅವರ ಪುತ್ರನ ಮೊದಲನೇ ವರ್ಷದ ಹುಟ್ಟುಹಬ್ಬ ತಾಲೂಕಿನ ತಮ್ಮಡಿಹಳ್ಳಿ ಶ್ರೀಗಂಧ ಫಾರಂ ಹೌಸ್‌ನಲ್ಲಿ ಬುಧವಾರ ಅದ್ದೂರಿಯಾಗಿ ಜರುಗಿತು.
    ಭದ್ರಾವತಿ, ಆ. ೨೬: ಶಾಸಕ ಬಿ.ಕೆ ಸಂಗಮೇಶ್ವರ್ ಅವರ ೨ನೇ ಪುತ್ರ ಬಸವೇಶ್ ಅವರ ಪುತ್ರನ ಮೊದಲನೇ ವರ್ಷದ ಹುಟ್ಟುಹಬ್ಬ ತಾಲೂಕಿನ ತಮ್ಮಡಿಹಳ್ಳಿ ಶ್ರೀಗಂಧ ಫಾರಂ ಹೌಸ್‌ನಲ್ಲಿ ಬುಧವಾರ ಅದ್ದೂರಿಯಾಗಿ ಜರುಗಿತು.
    ಕೋವಿಡ್-೧೯ರ ಹಿನ್ನಲೆಯಲ್ಲಿ ನಗರ ಪ್ರದೇಶದಿಂದ ಹೊರವಲಯದಲ್ಲಿ ಮೊಮ್ಮಗನ ಹುಟ್ಟುಹಬ್ಬ ಆಚರಣೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಕೈಗೊಂಡಿದ್ದರು. ಹುಟ್ಟುಹಬ್ಬಕ್ಕೆ ನಿರೀಕ್ಷೆಗೂ ಹೆಚ್ಚಿನ ಜನರು ಆಗಮಿಸಿ ಮೊಮ್ಮಗನಿಗೆ ಶುಭ ಕೋರಿದರು.
    ಕಾರ್ಯಕರ್ತರು, ಅಭಿಮಾನಿಗಳು, ಕುಟುಂಬ ವರ್ಗದವರು ಮಾತ್ರವಲ್ಲದೆ. ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಸಹ ಪಾಲ್ಗೊಂಡಿದ್ದರು.

ಅಶೋಕ್‌ರಾವ್ ವಾಗ್ಮೋಡೆ ನಿಧನ

ಅಶೋಕ್‌ರಾವ್ ವಾಗ್ಮೋಡೆ
    ಭದ್ರಾವತಿ, ಆ. ೨೬: ಎಂಪಿಎಂ ಕಾರ್ಖಾನೆಯ ಗುತ್ತಿಗೆದಾರ, ಮರಾಠ ಸಮಾಜದ ಮುಖಂಡರಾದ ಅಶೋಕ್‌ರಾವ್ ವಾಗ್ಮೋಡೆ(೬೦) ನಿಧನ ಹೊಂದಿದರು.
    ಮೃತರು ವಿಐಎಸ್‌ಎಲ್ ಆಸ್ಪತ್ರೆ ಮುಂಭಾಗದಲ್ಲಿರುವ ಸುನಿಲ್ ಮೆಡಿಕಲ್ ಸ್ಟೋರ್ ಮಾಲೀಕ ಸುನಿಲ್ ಅವರ ತಂದೆಯಾಗಿದ್ದು, ಪತ್ನಿ ಮತ್ತು ಪುತ್ರ ಸುನಿಲ್ ಹಾಗು ಸೊಸೆ, ಮೊಮಕ್ಕಳನ್ನು ಹೊಂದಿದ್ದರು. ಮೃತರ ನಿಧನಕ್ಕೆ ಮರಾಠ ಸಮಾಜದ ಪ್ರಮುಖರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.