Friday, October 1, 2021

ಅ.೨ರಿಂದ ಶಾರದ ಅಪ್ಪಾಜಿ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ

ಶಾರದ ಅಪ್ಪಾಜಿ
    ಭದ್ರಾವತಿ, ಅ. ೧: ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಪತ್ನಿ ಶಾರದ ಅಪ್ಪಾಜಿ ಅವರು ಅ.೨ರಿಂದ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈ ಕುರಿತು ಈಗಾಗಲೇ ಬಹಿರಂಗವಾಗಿ ಶಾರದ ಅಪ್ಪಾಜಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
    ಸೆ.೨೧ರಂದು ತಾಲೂಕಿನ ಗೋಣಿಬೀಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಎಂ.ಜೆ ಅಪ್ಪಾಜಿ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮುಂಬರುವ ವಿಧಾನಸಭಾ ಚುನಾವಣೆಗೆ ಶಾರದ ಅಪ್ಪಾಜಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ನಂತರ ಇದೆ ವೇದಿಕೆಯಲ್ಲಿ ಮಾತನಾಡಿದ, ಶಾರದ ಅಪ್ಪಾಜಿ ಅ.೨ರ ಗಾಂಧಿ ಜಯಂತಿಯಂದು ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಂದಿನ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡುವುದಾಗಿ ಘೋಷಿಸಿದ್ದರು.
    ಶಾರದ ಅಪ್ಪಾಜಿ ಅವರಿಗೆ ಸಕ್ರಿಯ ರಾಜಕಾರಣ ಹೊಸದಾಗಿದ್ದು, ಈ ಹಿನ್ನಲೆಯಲ್ಲಿ ಪಕ್ಷದ ವರಿಷ್ಠರು, ಮುಖಂಡರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ. ಈಗಾಗಲೇ ಶಾರದ ಅಪ್ಪಾಜಿ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಹಾಗು ನಗರಸಭೆ ಚುನಾವಣೆಗಳನ್ನು ಎದುರಿಸಲಾಗಿದ್ದು, ಎರಡು ಚುನಾವಣೆಯಲ್ಲೂ ಜೆಡಿಎಸ್ ಸಮಾಧಾನಕರವಾದ ಫಲಿತಾಂಶ ಕಾಯ್ದುಕೊಂಡಿದೆ.
     ತರೀಕೆರೆ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ :
    ಬೆಳಿಗ್ಗೆ ೧೦.೩೦ಕ್ಕೆ ನಗರದ ತರೀಕೆರೆ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಶಾರದ ಅಪ್ಪಾಜಿ ಮಾಲಾರ್ಪಣೆ ಮಾಡಲಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ತಿಳಿಸಿದ್ದಾರೆ.

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ

   
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಯಿತು. ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು.                    
    ಭದ್ರಾವತಿ, ಅ. ೧: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಯಿತು.
    ವಿದ್ಯಾ ಸಂಸ್ಥೆಯ ಸಂಸ್ಥಾಪಕ ಬಿ.ಎಲ್ ರಂಗಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ  ಬಿ. ಸಿದ್ದಬಸಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.  .
    ವಿದ್ಯಾ ಸಂಸ್ಥೆಯ ನಿವೃತ್ತ ಆಡಳಿತಾಧಿಕಾರಿ ಆರ್. ಬಸವರಾಜಪ್ಪ, ನಿವೃತ್ತ ಶಿಕ್ಷಕರಾದ ಸಾರ ಸರೋಜಾ ಹಾಗೂ ರತ್ನವ್ವ ಚಕ್ರಸಾಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಕಾರ್ಯದರ್ಶಿ ಪುಟ್ಟ ಲಿಂಗಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್, ಸಹಾಯಕ ಆಡಳಿತಧಿಕಾರಿ, ಶಿವಲಿಂಗೇಗೌಡ ಸೇರಿದಂತೆ        ಎಲ್ಲಾ ವಿಭಾಗಗಳ ಪ್ರಾಂಶುಪಾಲರು, ಮುಖ್ಯಸ್ಥರು ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಶಿಕ್ಷಕರಾದ ಸಮೀನಾ ಯಾಸ್ಮಿನ್ ನಿರೂಪಿಸಿ, ಕವಿತ ಪ್ರಾರ್ಥಿಸಿದರು. ಸುಹಾಸಿನಿ ಹೆಗಡೆ ಸ್ವಾಗತಿಸಿ, ರೇಣುಕಪ್ಪ ವಂದಿಸಿದರು

ವಿವಿಧ ಬೇಡಿಕೆ ಈಡೇರಿಗಾಗಿ ಹಗಲು ರಾತ್ರಿ ಪ್ರತಿಭಟನಾ ಸತ್ಯಾಗ್ರಹ


ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಶುಕ್ರವಾರದಿಂದ ಹಗಲು ರಾತ್ರಿ ಪ್ರತಿಭಟನಾ ಸತ್ಯಾಗ್ರಹ ನಡೆಸಲಾಗುತ್ತಿದೆ.  
    ಭದ್ರಾವತಿ: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಕಛೇರಿ ಮುಂಭಾಗ ಶುಕ್ರವಾರದಿಂದ ಹಗಲು ರಾತ್ರಿ ಪ್ರತಿಭಟನಾ ಸತ್ಯಾಗ್ರಹ ನಡೆಸಲಾಗುತ್ತಿದೆ.  
    ದೇಶದಲ್ಲಿ ನೂರಾರು ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮೊದಲು ಹೋರಾಟಗಳಿಗೆ ಎಲ್ಲರೂ ಗೌರವಿಸಬೇಕು. ಈ ನಿಟ್ಟಿನಲ್ಲಿ ತಾಲೂಕು ಕಛೇರಿ ಮುಂಭಾಗದ ಎಡ ಮತ್ತು ಬಲ ಭಾಗದಲ್ಲಿ ಕಬ್ಬಿಣದ ಗ್ರಿಲ್ ಅಳವಡಿಸಿರುವ ಸ್ಥಳವನ್ನು ಸಾರ್ವಜನಿಕರು ಸತ್ಯಗ್ರಹ ನಡೆಸಲು ಮೀಸಲಿಡುವಂತೆ ಒತ್ತಾಯಿಸಲಾಯಿತು.
    ತಾಲೂಕಿನಲ್ಲಿ ಸುಮಾರು ೧೨೦೦ಕ್ಕೂ ಹೆಚ್ಚಿನ ಶೇ.೮೦ರಷ್ಟು ಬಡತನ ಹೊಂದಿರುವ ಕುಟುಂಬಗಳಿಗೆ ಆದಾಯ ಮಿತಿ ಹೆಚ್ಚಾಗಿದೆ ಎಂದು ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಇದರಿಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು, ಜೊತೆಗೆ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಸೇರಿದಂತೆ ಇನ್ನಿತರ ಸರ್ಕಾರಿ ಸೌಲಭ್ಯಗಳು ಹಲವಾರು ತಿಂಗಳುಗಳಿಂದ ಮಂಜೂರಾತಿಯಾಗದೆ ಸ್ಥಗಿತಗೊಂಡಿವೆ. ಲೋಪಗಳು ಕಂಡುಬಂದರೂ ಸಹ ಸರಿಪಡಿಸದೆ ನಿರ್ಲಕ್ಷ್ಯತನ ವಹಿಸಿರುವ ಸಂಬಂಧಿಸಿದ ಅಧಿಕಾರಿಗಳನ್ನು ತಕ್ಷಣ ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಲಾಯಿತು.
    ಶ್ರಮ ಜೀವಿಗಳಾದ ಕಟ್ಟಡ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರ ಹಲವಾರು ಸೌಲಭ್ಯಗಳನ್ನು ಜಾರಿಗೊಳಿಸಿದೆ. ಆದರೆ ಮಧ್ಯವರ್ತಿಗಳು, ಕಾರ್ಮಿಕ ಇಲಾಖೆ ಹಾಗು ನಗರಸಭೆ ಕೆಲ ಭ್ರಷ್ಟ ಅಧಿಕಾರಿಗಳಿಂದ ನಿಜವಾದ ಫಲಾನುಭವಿಗಳಿಗೆ ಸೌಲಭ್ಯಗಳು ತಲುಪುತ್ತಿಲ್ಲ. ಈ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಂಡು ನಿಜವಾದ ಫಲಾನುಭವಿಗಳಿಗೆ ಸೌಲಭ್ಯಗಳು ತಲುಪಿಸಬೇಕೆಂದು ಮನವಿ ಮಾಡಲಾಯಿತು.
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರತಿಭಟನಾ ಸತ್ಯಾಗ್ರಹದಲ್ಲಿ ಪ್ರಮುಖರಾದ ಕಾರ್ಯಾಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಅಕ್ರಂಖಾನ್, ಉಪಾಧ್ಯಕ್ಷರಾದ ಎಂ.ವಿ ಚಂದ್ರಶೇಖರ್, ಬ್ರಹ್ಮಲಿಂಗಯ್ಯ, ಹಾಗು ಸಂಚಾಲಕರಾದ ಶೇಖರ್ ಮತ್ತು ಜಯರಾಂ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ನಗರಸಭೆ ವತಿಯಿಂದ ನಾಡಹಬ್ಬ ದಸರಾ ೯ ದಿನ ಸರಳ ಆಚರಣೆ : ಬಿ.ಕೆ ಸಂಗಮೇಶ್ವರ್

ಮೆರವಣಿಗೆಯಲ್ಲಿ ಎಲ್ಲಾ ದೇವಾನು ದೇವತೆಗಳಿಗೂ ಆಹ್ವಾನ


ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಾಡಹಬ್ಬ ದಸರಾ ಪೂರ್ವಭಾವಿ ಸಭೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯತು
    ಭದ್ರಾವತಿ: ಕೋವಿಡ್-೧೯ರ ಹಿನ್ನಲೆಯಲ್ಲಿ ಈ ಬಾರಿ ಸಹ ನಾಡಹಬ್ಬ ದಸರಾ ಸರಳವಾಗಿ ೯ ದಿನಗಳ ಕಾಲ ಆಚರಣೆ ಮಾಡುವ ಜೊತೆಗೆ ಎಲ್ಲಾ ದೇವಾನುದೇವತೆಗಳ ಮೆರವಣಿಗೆ ನಡೆಸಲಾಗುವುದು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
    ಅವರು ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಹಬ್ಬ ದಸರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ನೂತನ ಸದಸ್ಯರು ಹಾಗು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ದಸರಾ ಅದ್ದೂರಿಯಾಗಿ ಆಚರಿಸಲು ಸಲಹೆ ನೀಡಿರುವುದು ಸಂತೋಷದ ವಿಚಾರವಾಗಿದೆ. ಆದರೆ ಸರ್ಕಾರದ ಮಾರ್ಗಸೂಚಿಯನ್ವಯ ಹಾಗು ಆರ್ಥಿಕ ಸಮಸ್ಯೆಯಿಂದಾಗಿ ಅದ್ದೂರಿ ಆಚರಣೆ ನಡೆಸುವುದು ಅಸಾಧ್ಯವಾಗಿದೆ. ದಸರಾ ಆಚರಣೆ ಮೆರವಣಿಗೆಯಲ್ಲಿ ಎಲ್ಲಾ ದೇವಸ್ಥಾನಗಳ ದೇವಾನು ದೇವತೆಗಳನ್ನು ಆಹ್ವಾನಿಸುವುದರಿಂದ ಎಲ್ಲರಿಗೂ ಒಳ್ಳೆಯದಾಗಲಿದೆ. ಅಲ್ಲದೆ ಜನರು ದೇವಾನು ದೇವತೆಗಳ ದರ್ಶನ ಪಡೆಯಲು ಅನುಕೂಲವಾಗುತ್ತದೆ. ಈ ಹಿನ್ನಲೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ದೇವಸ್ಥಾನಗಳ ಸೇವಾ ಸಮಿತಿಗಳಿಗೆ ಸಾಧ್ಯವಾದಷ್ಟು ಹೆಚ್ಚಿನ ಗೌರವಧನ ನೀಡಲಾಗುವುದು ಎಂದರು.
    ಉಳಿದಂತೆ ಪ್ರತಿವರ್ಷದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಈ ಸಂಬಂಧ ಸಮಿತಿಗಳನ್ನು ರಚಿಸಲಾಗುವುದು. ಎಲ್ಲರೂ ಸೇರಿ ನಾಡಹಬ್ಬ ದಸರಾ ಯಶಸ್ವಿ ಆಚರಣೆಗೆ ಮುಂದಾಗುವಂತೆ ಕರೆ ನೀಡಿದರು.
ಕಂದಾಯಾಧಿಕಾರಿ ಎಂ.ಎಸ್ ರಾಜ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ಸಹ ಸರ್ಕಾರದ ಮಾರ್ಗಸೂಚಿಯನ್ವಯ ನಾಡಹಬ್ಬ ದಸರಾ ಸರಳ ಆಚರಣೆ ಮಾಡಲಾಗುತ್ತಿದೆ. ದಸರಾ ಯಶಸ್ವಿಗೆ ಸಲಹೆ-ಸೂಚನೆಗಳನ್ನು ನೀಡಿ ಸಹಕರಿಸುವಂತೆ ಮನವಿ ಮಾಡಿದರು.
    ಪೌರಾಯುಕ್ತ ಕೆ. ಪರಮೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀರಂಗರಾಜಪುರೆ, ಪರಿಸರ ಅಭಿಯಂತರ ಪ್ರಭಾಕರ್ ಉಪಸ್ಥಿತರಿದ್ದರು.
    ನಗರಸಭೆ ನೂತನ ಸದಸ್ಯರಾದ ರೇಖಾ ಪ್ರಕಾಶ್, ಗೀತಾ ರಾಜ್‌ಕುಮಾರ್, ಜಾರ್ಜ್, ಅನುಪಮ ಚನ್ನೇಶ್, ಶಶಿಕಲಾ ನಾರಾಯಣಪ್ಪ, ಬಿ.ಎಂ ಮಂಜುನಾಥ್, ಬಷೀರ್ ಅಹಮದ್, ಚನ್ನಪ್ಪ, ಮಣಿ ಎಎನ್‌ಎಸ್, ಸುದೀಪ್‌ಕುಮಾರ್, ಅನುಸುಧಾ ಮೋಹನ್, ಬಿ.ಟಿ ನಾಗರಾಜ್, ಬಸವರಾಜ ಬಿ ಆನೇಕೊಪ್ಪ, ಜಯಶೀಲ ಸುರೇಶ್, ವಿಜಯ, ಬಿ.ಕೆ ಮೋಹನ್, ಪ್ರೇಮಾ ಬದರಿನಾರಾಯಣ, ಕೋಟೇಶ್ವರರಾವ್, ಉದಯ್‌ಕುಮಾರ್, ಸರ್ವಮಂಗಳ ಭೈರಪ್ಪ, ರೂಪಾವತಿ ಗುಣಶೇಖರ್, ಕಾಂತರಾಜ್, ನಾಗರತ್ನ ಅನಿಲ್‌ಕುಮಾರ್, ಸೈಯದ್ ರಿಯಾಜ್, ಪಲ್ಲವಿ ದಿಲೀಪ್, ಸವಿತಾ ಉಮೇಶ್, ಆರ್. ಮೋಹನ್‌ಕುಮಾರ್, ಲತಾ ಚಂದ್ರಶೇಖರ್ ಹಾಗು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.



Thursday, September 30, 2021

ಅ.೧ರಿಂದ ಹಗಲು ರಾತ್ರಿ ಪ್ರತಿಭಟನಾ ಸತ್ಯಾಗ್ರಹ

    ಭದ್ರಾವತಿ, ಸೆ. ೩೦: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಕಛೇರಿ ಮುಂಭಾಗ ಅ.೧ರಂದು ಬೆಳಿಗ್ಗೆ ೧೧ ಗಂಟೆಯಿಂದ ಹಗಲು ರಾತ್ರಿ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
    ತಾಲೂಕು ಕಛೇರಿ ಮುಂಭಾಗದ ಎಡ ಮತ್ತು ಬಲ ಭಾಗದಲ್ಲಿ ಕಬ್ಬಿಣದ ಗ್ರಿಲ್ ಅಳವಡಿಸಿರುವ ಸ್ಥಳವನ್ನು ಸಾರ್ವಜನಿಕರು ಸತ್ಯಗ್ರಹ ನಡೆಸಲು ಮೀಸಲಿಡುವುದು. ಬಡವರಿಗೆ ಆದಾಯ ಮಿತಿ ಹೆಚ್ಚಿಸಿ ಸಾವಿರಾರು ಪಡಿತರ ಚೀಟಿಗಳನ್ನು ರದ್ದುಗೊಳಿಸಿರುವುದು ಹಾಗು ದೀನದಲಿತರ ಪಿಂಚಣಿಗಳನ್ನು ವಜಾ ಮಾಡಿರುವ ಕ್ರಮವನ್ನು ಖಂಡಿಸಿ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪ್ರತಿಭಟನಾ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನಾ ಸತ್ಯಾಗ್ರಹ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

‘ಭಾರತ ಸ್ವಾತಂತ್ರ್ಯದ ೭೫ ವರ್ಷಗಳು-ನನ್ನ ದೃಷ್ಠಿಯಲ್ಲಿ ಸ್ವಾತಂತ್ರ್ಯವೆಂದರೆ ಏನು?’

'ಆಜಾದಿ ಕ ಅಮೃತ್ ಮಹೋತ್ಸವ' ಆಚರಣೆ ಅಂಗವಾಗಿ ವಿಐಎಸ್‌ಎಲ್ ವತಿಯಿಂದ ಭಾಷಣ ಸ್ಪರ್ಧೆ


'ಆಜಾದಿ ಕ ಅಮೃತ್ ಮಹೋತ್ಸವ' ಆಚರಣೆಯ ಅಂಗವಾಗಿ ಭಾರತೀಯ ಉಕ್ಕು ಪ್ರಾಧಿಕಾರದ ಅಂಗ ಸಂಸ್ಥೆಯಾದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆವತಿಯಿಂದ ಕನ್ನಡ ಭಾಷೆಯಲ್ಲಿ 'ಭಾರತ ಸ್ವಾತಂತ್ರ್ಯದ ೭೫ ವರ್ಷಗಳು - ನನ್ನ ದೃಷ್ಠಿಯಲ್ಲಿ ಸ್ವಾತಂತ್ರ್ಯವೆಂದರೆ ಏನು?' ವಿಷಯವಾಗಿ ಗುರುವಾರ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ(ಎಸ್.ಎ.ವಿ) ಪ್ರೌಢಶಾಲೆಯಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
    ಭದ್ರಾವತಿ, ಸೆ. ೩೦:  'ಆಜಾದಿ ಕ ಅಮೃತ್ ಮಹೋತ್ಸವ' ಆಚರಣೆಯ ಅಂಗವಾಗಿ ಭಾರತೀಯ ಉಕ್ಕು ಪ್ರಾಧಿಕಾರದ ಅಂಗ ಸಂಸ್ಥೆಯಾದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆವತಿಯಿಂದ ಕನ್ನಡ ಭಾಷೆಯಲ್ಲಿ 'ಭಾರತ ಸ್ವಾತಂತ್ರ್ಯದ ೭೫ ವರ್ಷಗಳು - ನನ್ನ ದೃಷ್ಠಿಯಲ್ಲಿ ಸ್ವಾತಂತ್ರ್ಯವೆಂದರೆ ಏನು?' ವಿಷಯವಾಗಿ ಗುರುವಾರ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ(ಎಸ್.ಎ.ವಿ) ಪ್ರೌಢಶಾಲೆಯಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
    ಮಹಾ ಪ್ರಬಂಧಕರ ಪ್ರಭಾರಿ(ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ. ಚಕ್ರವರ್ತಿ ಸ್ಪರ್ಧೆಗೆ ಚಾಲನೆ ನೀಡಿದರು. ಮಹಾ ಪ್ರಬಂಧಕ(ನಗರಾಡಳಿತ) ಮೋಹನ್ ರಾಜ್ ಶೆಟ್ಟಿ, ಪ್ರೌಢಶಾಲೆ ಹಾಗು ಕಾಲೇಜು ವಿಭಾಗದ ಪ್ರಾಂಶುಪಾಲೆ ಡಾ. ಎಸ್. ಹರಿಣಾಕ್ಷಿ, ನಿವೃತ್ತ ವೈದ್ಯೆ ಡಾ. ಎಸ್. ಕವಿತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕನ್ನಡ ಶಿಕ್ಷಕ ನಯನ್ ಕುಮಾರ್ 'ಇಂದಿನ ಜನಾಂಗಕ್ಕೆ ಭಾರತ ಸ್ವಾತಂತ್ರ್ಯ ಸಂಗ್ರಾಮದಿಂದ ಕಲಿಯಬೇಕಾದ ಪಾಠಗಳು' ಎಂಬ ವಿಷಯ ಕುರಿತು ಭಾಷಣ ಮಾಡಿದರು.
    ಅಶ್ವಿನಿ ಮತ್ತು ತಂಡದವರು ಪ್ರಾರ್ಥಿಸಿದರು. ಸಿಬ್ಬಂದಿ, ಮಹಾ ಪ್ರಬಂಧಕ (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಸ್ವಾಗತಿಸಿದರು. ಜೀವಿತಾ ಮತ್ತು ರಶ್ಮಿ ಕಾರ್ಯಕ್ರಮ ನಿರೂಪಿಸಿದರು.
೧೮ ಶಾಲೆಗಳ ೩೪ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನದ ರೂಪದಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಕುರಿತು ಪುಸ್ತಕಗಳನ್ನು ನೀಡಲಾಯಿತು.
    ವಿಜೇತ ವಿದ್ಯಾರ್ಥಿಗಳು:
    ಎಸ್‌ಎವಿ ಪ್ರೌಢಶಾಲೆಯ ಇಂಚರ ಪ್ರಥಮ, ಕಾರೇಹಳ್ಳಿ ಬಿಜಿಎಸ್ ಪ್ರೌಢ ಶಾಲೆಯ ಶ್ರೇಯ ಎನ್ ಗೌಡ ದ್ವಿತೀಯ, ಎಸ್‌ಎವಿ ಪ್ರೌಢಶಾಲೆಯ ಅಫೀಯಾ ತಸ್ಮೀನ್ ತೃತೀಯ ಹಾಗು ಸೇಂಟ್ ಚಾರ್ಲ್ಸ್ ಕನ್ನಡ ಪ್ರೌಢಶಾಲೆಯ ಎಸ್. ಧನ್ಯಶ್ರೀ ಮತ್ತು ಪೂರ್ಣಪ್ರಜ್ಞ ಪ್ರೌಢಶಾಲೆಯ ಎಸ್. ರುಚಿತ ಹಾಗು ಕಾರೇಹಳ್ಳಿ ಬಿಜಿಎಸ್ ಪ್ರೌಢಶಾಲೆಯ ಎಸ್. ಶ್ರೀ ರಕ್ಷ ಸಮಾಧಾನಕರ ಬಹುಮಾನ ಪಡೆದುಕೊಂಡರು.

ಗಾಂಧಿ ಜಯಂತಿ : ಪ್ರಾಣಿವಧೆ, ಮಾಂಸಮಾರಾಟ ನಿಷೇಧ


    ಭದ್ರಾವತಿ, ಸೆ. ೩೦: ರಾಷ್ಟ್ರಪಿತ ಮಹಾತ್ಮಗಾಂಧಿಯವರ ಜನ್ಮದಿನ ಹಿನ್ನಲೆಯಲ್ಲಿ ಅ.೨ರಂದು ನಗಸಭೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ.
    ಬಾರ್ & ರೆಸ್ಟೋರೆಂಟ್ ಹಾಗು ಮಾಂಸಹಾರಿ ಹೋಟೆಲ್‌ಗಳಲ್ಲಿ ಮಾಂಸಹಾರ ತಯಾರಿಸುವುದನ್ನು ಹಾಗು  ಕುರಿ/ಕೋಳಿ ಮತ್ತು ಇತರೆ ಮಾಂಸ ಮಾರಾಟಗಾರರು ಮಾಂಸ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ನಗರಸಭೆ ಪೌರಾಯುಕ್ತರು ಎಚ್ಚರಿಸಿದ್ದಾರೆ.