Saturday, August 6, 2022

ಪುನಃ ಹೊಸ ಸೇತುವೆ ಮುಳುಗಡೆ : ಪ್ರವಾಹ ಭೀತಿ

ಭದ್ರಾವತಿ ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ನೀರಿನ ಏಕಾಏಕಿ ಹೆಚ್ಚಾಗಿದ್ದು, ಹೊಸ ಸೇತುವೆ ಶನಿವಾರ ಸಂಜೆ ಮುಳುಗಡೆಗೊಂಡಿದೆ.
    ಭದ್ರಾವತಿ, ಆ. ೬: ನಗರದ ಹೃದಯ ಭಾಗದಲ್ಲಿ ಭದ್ರಾ ನದಿ ನೀರಿನ ಏಕಾಏಕಿ ಹೆಚ್ಚಾಗಿದ್ದು, ಹೊಸ ಸೇತುವೆ ಶನಿವಾರ ಸಂಜೆ ಮುಳುಗಡೆಗೊಂಡಿದೆ.
    ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲಿನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸೇತುವೆ ಎರಡು ಬದಿಯಲ್ಲೂ ಸಂಚಾರಿ ಪೊಲೀಸರು ಬ್ಯಾರಿಗೇಡ್‌ಗಳನ್ನು ಅಳವಡಿಸಿದ್ದು, ಸೇತುವೆ ಸಮೀಪ ಯಾರು ಸುಳಿಯದಂತೆ ಎಚ್ಚರ ವಹಿಸಿದ್ದಾರೆ.
    ಈ ನಡುವೆ ಪುನಃ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ತಗ್ಗು ಪ್ರದೇಶದ ನಿವಾಸಿಗಳನ್ನು ಸುರಕ್ಷಿತ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳಿಸುವುದು ಅನಿವಾರ್ಯವಾಗಿದೆ. ರಾತ್ರಿ ವೇಳೆ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಕಂಡು ಬರುತ್ತಿದೆ.

ಶಾಲೆ ಬಳಿ ಇಸ್ಪೀಟ್ ಜೂಜಾಟ : ಪ್ರಕರರಣ ದಾಖಲು


    ಭದ್ರಾವತಿ, ಆ. ೬: ಹಳೇನಗರದ ಜಟ್‌ಪಟ್ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
    ಹಳೇನಗರ ಠಾಣೆ ಪೊಲೀಸರು ಶುಕ್ರವಾರ ಸಂಜೆ ಈ ಭಾಗದ ಬೀಟ್ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸುಮಾರು ೮ ರಿಂದ ೧೦ ಜನರ ಗುಂಪೊಂದು ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವುದು ಕಂಡು ಬಂದಿದ್ದು, ತಕ್ಷಣ ದಾಳಿ ನಡೆಸಿ ಇವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪರಿಷತ್ ಸದಸ್ಯರ ಅನುದಾನದಲ್ಲಿ ವಿಕಲಚೇತನ ವೆಂಕಟೇಶ್‌ಗೆ ದ್ವಿಚಕ್ರ ವಾಹನ ವಿತರಣೆ

ಭದ್ರಾವತಿ ಹಳೇನಗರದ ರಥಬೀದಿ ನಿವಾಸಿ, ವಿಕಲಚೇತನ ಟಿ.ವಿ ವೆಂಕಟೇಶ್ ಅವರಿಗೆ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ದ್ವಿಚಕ್ರ ವಾಹನ ವಿತರಿಸಲಾಯಿತು.
    ಭದ್ರಾವತಿ, ಆ. ೬: ಹಳೇನಗರದ ರಥಬೀದಿ ನಿವಾಸಿ, ವಿಕಲಚೇತನ ಟಿ.ವಿ ವೆಂಕಟೇಶ್ ಅವರಿಗೆ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ದ್ವಿಚಕ್ರ ವಾಹನ ವಿತರಿಸಲಾಯಿತು.
    ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ತಮ್ಮ ಅನುದಾನದಲ್ಲಿ ಮಂಜೂರಾದ ದ್ವಿಚಕ್ರ ವಾಹನವನ್ನು ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸುವ ಮೂಲಕ ಟಿ.ವಿ ವೆಂಕಟೇಶ್ ಅವರ ಸಂಕಷ್ಟಕ್ಕೆ ಸ್ಪಂದಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ವಿಕಲಚೇತನ ವೆಂಕಟೇಶ್ ಮಾತನಾಡಿ, ಸಂಕಷ್ಟಕ್ಕೆ ಸ್ಪಂದಿಸಿರುವುದು ತುಂಬಾ ಸಂತಸವನ್ನುಂಟು ಮಾಡಿದೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪಕ್ಷದ ಮುಖಂಡರಾದ ನಗರಸಭಾ ಸದಸ್ಯರಾದ ಅನುಪಮಾ, ಕರೀಗೌಡ, ಚನ್ನೇಶ್, ಮಂಗೋಟೆ ರುದ್ರೇಶ್. ಜಿ. ಆನಂದ್‌ಕುಮಾರ್, ವಿಶ್ವನಾಥ ಕೋಠಿ, ಚಂದ್ರು, ರವಿಕುಮಾರ್, ಸುಬ್ರಮಣಿ, ಮಂಜುನಾಥ್, ಪ್ರಭುರಾವ್, ಬಿ.ಆರ್ ಸಚ್ಚಿದಾನಂದ, ವಿಜಯ್, ಮಂಜುಳ,  ಶಕುಂತಲ, ಹೇಮಾ ನಿತ್ಯಾನಂದ, ಸಿಂಧೂ ಸುರೇಶ್, ಕವಿತಾ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಆ.೭ರಂದು ಭದ್ರೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಬಾಗಿನ ಸಮರ್ಪಣೆ

    ಭದ್ರಾವತಿ, ಆ. ೬: ಮಲೆನಾಡು, ಅರೆ ಮಲೆನಾಡು ಹಾಗು ಬಯಲು ಸೀಮೆಯ ಭಾಗದ ಜೀವನದಿ ತಾಲೂಕಿನ ಭದ್ರಾ ನದಿ ಈ ಬಾರಿ ಸಹ ತುಂಬಿ ಹರಿಯುತ್ತಿದ್ದು, ಅದರಲ್ಲೂ ಎರಡು ಬಾರಿ ಜಲಾಶಯಪೂರ್ಣಗೊಂಡಿರುವುದು ಸಂತಸದ ಸಂಗತಿಯಾಗಿದೆ. ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ಆ.೭ರಂದು ಸರ್ವಧರ್ಮಗಳ ಗುರುಗಳ ಸಮ್ಮುಖದಲ್ಲಿ ಬಾಗಿನ ಸಮರ್ಪಿಸಲಿದ್ದಾರೆ.
    ಬಿಆರ್‌ಪಿ ಭದ್ರಾ ಜಲಾಶಯದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಗಂಗಾ ಪೂಜೆಯೊಂದಿಗೆ ಸರ್ವಧರ್ಮಗಳ ಗುರುಗಳ ಸಮ್ಮುಖದಲ್ಲಿ ಬಾಗಿನ ಸಮರ್ಪಿಸಲಿದ್ದಾರೆ.
    ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಗಣ್ಯರು, ಅಭಿಮಾನಿಗಳು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಕೋರಿದ್ದಾರೆ.

ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವೈಜ್ಞಾನಿಕ ಜಾಗೃತಿ ಕಾರ್ಯಕ್ರಮ

ಭದ್ರಾವತಿ ಜನ್ನಾಪುರದ ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಹಳೇನಗರದ ಸರ್ಕಾರಿ ಬಾಲಕಿಯರ ಫ್ರೌಡಶಾಲೆಯ ಹೆಣ್ಣು ಮಕ್ಕಳಿಗೆ ವೈಜ್ಞಾನಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಆ. ೬: ಜನ್ನಾಪುರದ ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಹಳೇನಗರದ ಸರ್ಕಾರಿ ಬಾಲಕಿಯರ ಫ್ರೌಡಶಾಲೆಯ ಹೆಣ್ಣು ಮಕ್ಕಳಿಗೆ ವೈಜ್ಞಾನಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಟ್ರಸ್ಟ್ ಕಾರ್ಯದರ್ಶಿ ಬಿ. ಅನ್ನಪೂರ್ಣ ಇತ್ತಿಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕುರಿತು ಮಾತನಾಡಿ, ವಿದ್ಯಾರ್ಥಿನಿಯರು ಸ್ವಯಂ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದರು. ಟ್ರಸ್ಟ್ ಖಜಾಂಚಿ ಎನ್. ನಾಗವೇಣಿ  ವರ್ಣದಿಂದ ಆಗುತ್ತಿರುವ ತಾರತಮ್ಯ, ಕೀಳರಮೆ ಕುರಿತು ಮಾತಾನಾಡಿದರು.
    ಶಾಲೆಯ ಮುಖ್ಯೋಪಾಧ್ಯಾಯಿನಿ ಕೆಂಚಮ್ಮ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕಿ ಆರ್. ಮಂಜುಳಾ ನಿರೂಪಿಸಿ, ಜಂಟಿ ಕಾರ್ಯದರ್ಶಿ ಅಂತೋಣಿರಾಜ್ ಸ್ವಾಗತಿಸಿ, ವಂದಿಸಿದರು.

ಹೋಟೆಲ್ ಮಾಲೀಕ ಎ.ಟಿ ವೆಂಕಟೇಶ್ ನಿಧನ

ಎ.ಟಿ ವೆಂಕಟೇಶ್
    ಭದ್ರಾವತಿ, ಆ. ೬: ತಾಲೂಕಿನ ಹುಣಸೇಕಟ್ಟೆ ಜಂಕ್ಷನ್ ವೃತ್ತದ ಹೋಟೆಲ್ ಮಾಲೀಕ ಎ.ಟಿ ವೆಂಕಟೇಶ್(೫೬) ನಿಧನ ಹೊಂದಿದರು.
    ಪತ್ನಿ, ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಹೋಟೆಲ್ ಆರಂಭಿಸಿ ಬದುಕು ರೂಪಿಸಿಕೊಂಡಿದ್ದ ವೆಂಟಕೇಶ್ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಇವರ ಅಂತ್ಯಕ್ರಿಯೆ ಶನಿವಾರ ಹುಣಸೇಕಟ್ಟೆ ಗ್ರಾಮ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್. ಕೃಷ್ಣಪ್ಪ ಹಾಗು ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.

ಹೊಸ ಸೇತುವೆ ಮುಳುಗಡೆಗೆ ಅರ್ಧ ಅಡಿ ಬಾಕಿ : ಸೇತುವೆ ಯುವಕರ ಹುಚ್ಚಾಟ

ಭದ್ರಾವತಿ ನಗರದ ಹೃದಯ ಭಾಗದಲ್ಲಿರುವ ಹರಿಯುತ್ತಿರುವ ಭದ್ರಾ ನದಿಯಲ್ಲಿ ಶನಿವಾರ ಮಧ್ಯಾಹ್ನ ನೀರಿನ ಮಟ್ಟ ಏರಿಕೆಯಾಗಿರುವುದು.
    ಭದ್ರಾವತಿ, ಆ. ೬: ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಲಾಶಯ ಪುನಃ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನಗರದ ಹೃದಯ ಭಾಗದಲ್ಲಿ ಹೊಸ ಸೇತುವೆ ಶನಿವಾರ ಮಧ್ಯಾಹ್ನ ಮುಳುಗಡೆ ಹಂತಕ್ಕೆ ತಲುಪಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುಲಿದೆ.
    ಹವಮಾನ ಇಲಾಖೆ ಮುನ್ಸೂಚನೆಯಂತೆ ತಹಸೀಲ್ದಾರ್ ಆರ್. ಪ್ರದೀಪ್ ಶುಕ್ರವಾರ ತಾಲೂಕಿನಾದಾದ್ಯಂತ ರೆಡ್ ಅಲರ್ಟ್ ಘೋಷಿಸಿದ್ದಾರೆ. ಈ ನಡುವೆ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡುವ ಸಾಧ್ಯತೆ ಇದ್ದು, ಒಂದು ನೀರಿನ ಪ್ರಮಾಣ ಹೆಚ್ಚಾದ್ದಲ್ಲಿ ಪ್ರವಾಹ ಭೀತಿ ಎದುರಾಗಲಿದೆ. ನಗರದ ತಗ್ಗು ಪ್ರದೇಶಗಳಾದ ಗುಂಡುರಾವ್ ಶೆಡ್, ಎಕಿನ್ಷಾ ಕಾಲೋನಿ, ಕವಲಗುಂದಿ ವ್ಯಾಪ್ತಿಯಲ್ಲಿ ಮನೆಗಳು ಪುನಃ ಜಲಾವೃತಗೊಳ್ಳಲಿವೆ.  
    ನಗರಸಭೆ ಮತ್ತು ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತಗಳು ಪ್ರವಾಹವನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಕಾರ್ಯಾಚರಣೆಗೆ ಮುಂದಾಗಿವೆ. ತಗ್ಗು ಪ್ರದೇಶದ ನಿವಾಸಿಗಳನ್ನು ತಕ್ಷಣ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕಾಗಿದೆ.
    ಮುಳುಗಿದ ಶ್ರೀ ಸಂಗಮೇಶ್ವರ ದೇವಾಲಯ:
    ಹೊಸಸೇತುವೆ ಸಮೀಪ ಭದ್ರಾ ನದಿಯಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಪ್ರತಿ ಬಾರಿ ಮಳೆಗಾಲದಲ್ಲಿ ಈ ದೇವಸ್ಥಾನ ಮುಳುಗಡೆಯಾಗುತ್ತಿದೆ. ವಿಶೇಷ ಎಂದರೆ ಪ್ರತಿ ಬಾರಿ ಮುಳುಗಡೆಯಾದರೂ ಸಹ ದೇವಸ್ಥಾನಕ್ಕೆ ಯಾವುದೇ ರೀತಿ ಹಾನಿಯಾಗುತ್ತಿಲ್ಲ.  
    ಹೊಸ ಸೇತುವೆ ಮೇಲೆ ಯುವಕರ ಹುಚ್ಚಾಟ :
    ಹೊಸೆ ಸೇತುವೆ ಮುಳುಗಡೆಗೆ ಇನ್ನೇನು ಅರ್ಧ ಅಡಿ ಮಾತ್ರ ಬಾಕಿ ಉಳಿದಿದ್ದು, ನದಿಯಲ್ಲಿ ನೀರು ರಭಸದಿಂದ ಉಕ್ಕಿ ಹರಿದಿದೆ. ಈ ನಡುವೆ ಕೆಲವು ಯುವಕರು  ಸೇತುವೆಯ ತಡೆಗೋಡೆ ಇಲ್ಲದ ಸ್ಥಳದಲ್ಲಿ ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು, ವಿಡಿಯೋ ರೆಕಾರ್ಡ್ ಮಾಡುವುದು ಕಂಡು ಬಂದಿತು. ಸೇತುವೆ ಮುಳುಗಡೆಗೆ ಅರ್ಧ ಅಡಿ ಬಾಕಿ ಇದ್ದರೂ ಸಹ ಸೇತುವೆ ಮೇಲೆ ವಾಹನ ಸಂಚಾರ ಇನ್ನೂ ಬಂದ್ ಮಾಡಿಲ್ಲ. ಎಲ್ಲಾ ವಾಹನಗಳು ಸೇತುವೆ ಮೇಲೆಯೇ ಸಂಚರಿಸುತ್ತಿವೆ. ತಕ್ಷಣ ಸಂಚಾರ ಬಂದ್ ಮಾಡುವ ಮೂಲಕ ಯಾವುದೇ ಅವಘಡಗಳು ನಡೆಯದಂತೆ ಎಚ್ಚರವಹಿಸಬೇಕಾಗಿದೆ.  



ಭದ್ರಾವತಿ ನಗರದ ಹೃದಯ ಭಾಗದಲ್ಲಿರುವ ಹರಿಯುತ್ತಿರುವ ಭದ್ರಾ ನದಿಯಲ್ಲಿ ಶನಿವಾರ ಮಧ್ಯಾಹ್ನ ನೀರಿನ ಮಟ್ಟ ಏರಿಕೆಯಾಗಿದ್ದು, ಈ ನಡುವೆ ಕೆಲವು ಯುವಕರು ಸೇತುವೆಯ ತಡೆಗೋಡೆ ಇಲ್ಲದ ಸ್ಥಳದಲ್ಲಿ ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು, ವಿಡಿಯೋ ರೆಕಾರ್ಡ್ ಮಾಡುವುದು ಕಂಡು ಬಂದಿತು.