Wednesday, December 14, 2022

ಗುಡ್ಡದ ನೇರಲಕೆರೆ ಗ್ರಾಮದ ಜಮೀನುಗಳಿಗೆ ಕಾಡಾ ಅಧ್ಯಕ್ಷೆ ಭೇಟಿ : ಪರಿಶೀಲನೆ

ಭದ್ರಾವತಿ ತಾಲೂಕಿನ ಕೊಮಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದ ನೇರಲಕೆರೆ ಗ್ರಾಮದ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಡಿ. ೧೪ : ತಾಲೂಕಿನ ಕೊಮಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದ ನೇರಲಕೆರೆ ಗ್ರಾಮದ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ಬಿ ಪವಿತ್ರರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ರೈತರ ಮನವಿ ಮೇರೆಗೆ ಗ್ರಾಮಕ್ಕೆ ಭೇಟಿ ನೀಡಿದ ಅಧ್ಯಕ್ಷರು, ಜಮೀನುಗಳ ರಸ್ತೆ, ಕಾಲುವೆ ವೀಕ್ಷಿಸಿದರು. ಗ್ರಾಮದ ಚಾನಲ್ ಟ್ಯೂಬ್ ಸಂಪೂರ್ಣವಾಗಿ ಹಾಳಾಗಿರುವುದು ಕಂಡು ಬಂದಿದ್ದು, ತಕ್ಷಣ ಸ್ಥಳದಲ್ಲಿಯೇ ನೀರಾವರಿ ಇಲಾಖೆ ಅಧಿಕಾರಿಗಳಿಗೆ ದುರಸ್ತಿಗೊಳಿಸುವಂತೆ ಸೂಚಿಸಿದರು. ಗ್ರಾಮದ ಮುಖಂಡರು, ರೈತರು ಉಪಸ್ಥಿತರಿದ್ದರು.

Tuesday, December 13, 2022

ಹಿರಿಯ ಲೆಕ್ಕ ಪರಿಶೋಧಕ ಶ್ರೀಪಾದ್ ವಿಧಿವಶ


ಹಿರಿಯ ಲೆಕ್ಕಪರಿಶೋಧಕ ಶ್ರೀಪಾದ್
    ಭದ್ರಾವತಿ, ಡಿ. ೧೪: ನಗರದ ಹಿರಿಯ ಲೆಕ್ಕ ಪರಿಶೋಧಕ, ಹೊಸಮನೆ ಹಳೇಸಂತೆ ಮೈದಾನದ ರಸ್ತೆ ನಿವಾಸಿ ಶ್ರೀಪಾದ್(೫೯) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.  
ಪತ್ನಿ, ಇಬ್ಬರು ಸಹೋದರರನ್ನು ಹೊಂದಿದ್ದರು. ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು    ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆದಿದ್ದಾರೆ.
    ಇವರ ಅಂತ್ಯ ಸಂಸ್ಕಾರ ಸಂಜೆ ನಡೆಯಲಿದೆ. ೩-೪ ದಶಕಗಳಿಂದ ಆಡಿಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಇವರು, ಭದ್ರಾವತಿ, ಶಿವಮೊಗ್ಗ ಮಾತ್ರವಲ್ಲದೇ ಬೆಂಗಳೂರಿನಲ್ಲಿಯೂ ಈ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದರು. ತಮ್ಮ ಜೀವಮಾನದುದ್ದಕ್ಕೂ ಕಷ್ಟದಲ್ಲಿರುವರಿಗೆ ಸಹಾಯಹಸ್ತ ನೀಡುತ್ತಾ, ಮಠ ಮಂದಿರಗಳಿಗೆ ದಾನ, ಧರ್ಮ ಮಾಡುತ್ತಿದ್ದ ಶ್ರೀಪಾದ್ ಅವರು ಎಂದಿಗೂ ತಮ್ಮ ಈ ಸೇವೆಯ ಕುರಿತಾಗಿ ಸಾರ್ವಜನಿಕವಾಗಿ ಹೇಳಿಕೊಂಡವರಲ್ಲ.
    ಪ್ರಮುಖವಾಗಿ, ಕೊರೋನಾದಿಂದಾಗಿ ಮೃತಪಟ್ಟ ಬಹಳಷ್ಟು ಮಂದಿಯ ಶವಸಂಸ್ಕಾರಕ್ಕೆ ಇವರು ನೀಡಿದ ನೆರವು ಬಹುತೇಕ ಮಂದಿಗೆ ತಿಳಿದಿಲ್ಲ. ತಮ್ಮ ವೃತ್ತಿ ಕ್ಷೇತ್ರದ ಹೊರತಾಗಿ ಧರ್ಮ, ಅಧ್ಯಾತ್ಮ, ವೇದಾಧ್ಯಯ, ಮಾಧ್ವ ಸಂಪ್ರದಾಯದ ಹಲವು ಪಾಠಗಳನ್ನು ಇಂದಿಗೂ ಇವರು ಅಭ್ಯಾಸ ಮಾಡುತ್ತಾ, ಎಲೆ ಮರೆಯ ಕಾಯಿಯಂತೆ ಸಾಧನೆ ಮಾಡಿದ್ದರು. ಇವರ ನಿಧನಕ್ಕೆ ನಗರದ ಗಣ್ಯರು, ತಾಲೂಕು ಬ್ರಾಹ್ಮಣ ಮಹಾಸಭಾ ಸಂತಾಪ ಸೂಚಿಸಿದೆ.

ಹಾಡುಹಗಲಿನಲ್ಲಿಯೇ ದರೋಡೆಗೆ ಯತ್ನ : ಮೂವರ ಸೆರೆ


    ಭದ್ರಾವತಿ, ಡಿ. ೧೩ : ಹಾಡುಹಗಲಿನಲ್ಲಿಯೇ ದರೋಡೆಗೆ ಯತ್ನಿಸುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಹಳೇನಗರ ಠಾಣೆ ಪೊಲೀಸರು ಯಶಸ್ವಿಯಾಗಿರುವ ಘಟನೆ ನಡೆದಿದೆ.
    ಮೊಮಿನ್ ಮೊಹಲ್ಲಾ ನಿವಾಸಿಗಳಾದ ಸಮೀರ್ ಖಾನ್, ಸಯ್ಯದ್ ಆಲ್ವಿ, ಮಹಮದ್ ಗೌಸ್ ಯಾನೆ ಜಂಗ್ಲಿ ಸುಹೇಲ್ ಯಾನೆ ಕುಟ್ಟಿ ಮತ್ತು ಮಹಮದ್ ಸಾಬೀದ್ ಎಂಬುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
    ಸಿ.ಎನ್ ರಸ್ತೆ ಸೀಗೆಬಾಗಿ ಆಲೆಮನೆಯೊಂದರ ಬಳಿ ಐವರು ಸುಮಾರು ಬೆಳಿಗ್ಗೆ ೧೧.೩೦ರ ಸಮಯದಲ್ಲಿ ಪೊದೆಯಲ್ಲಿ ಅಡಗಿಕೊಂಡು ದರೋಡೆಗೆ ಯತ್ನಿಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಹಳೇನಗರದ ಪೊಲೀಸ್ ಠಾಣಾಧಿಕಾರಿ ಕವಿತರವರ ನೇತೃತ್ವದ ತಂಡ ದಾಳಿ ನಡೆಸಿ ಮೂವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.
    ಒಬ್ಬಂಟಿಯಾಗಿ ಸಂಚರಿಸುವವರನ್ನು ಅಡ್ಡಗಟ್ಟಿ ಮಾರಾಕಾಸ್ತ್ರಗಳಿಂದ ಬೆದರಿಸಿ ದರೋಡೆಗೆ ಯತ್ನಿಸುತ್ತಿದ್ದರು ಎನ್ನಲಾಗಿದೆ. ಬಂಧಿತರಿಂದ ಚಾಕು, ಕಬ್ಬಿಣದ ರಾಡು ಮತ್ತು ಖಾರದಪುಡಿ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಸುಮೋಟೋ ಪ್ರಕರಣ ದಾಖಲಾಗಿದೆ. ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಾಗಿದೆ.

ಮಕ್ಕಳು ಸರ್ವತೋಮುಖ ಬೆಳವಣಿಗೆ ಹೊಂದುವಂತೆ ರೂಪಿಸುವುದೇ ಶಿಕ್ಷಣ : ಎಸ್.ಎಲ್ ಭೋಜೇಗೌಡ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಿವಮೊಗ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಡಿ. ೧೩: ಮಕ್ಕಳು ಸರ್ವತೋಮುಖ ಬೆಳವಣಿಗೆ ಹೊಂದುವಂತೆ ರೂಪಿಸುವುದೇ ಶಿಕ್ಷಣ. ಇದನ್ನು ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಹೇಳಿದರು.
    ಅವರು ಮಂಗಳವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಿವಮೊಗ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
    ಶಿಕ್ಷಣದ ಜೊತೆಗೆ ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಹೆಚ್ಚಿನದ್ದಾಗಿದೆ ಎಂದರು.
     ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ ಎಂದರು.
    ವೇದಿಕೆಯಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸದಸ್ಯೆ ಸರ್ವಮಂಗಳ ಭೈರಪ್ಪ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್,  ತಹಸೀಲ್ದಾರ್ ಆರ್. ಪ್ರದೀಪ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಧ್ಯಕ್ಷ ಬಿ. ಸಿದ್ದಬಸಪ್ಪ,  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆನಂದಕುಮಾರ್, ಶಂಕರಪ್ಪ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಜೆ. ಸುಮತಿ, ಅಧ್ಯಕ್ಷ ಪೃಥ್ವಿರಾಜ್, ನಿರ್ದೇಶಕರಾದ ಯು. ಮಹಾದೇವಪ್ಪ, ಬಸವರಾವ್‌ದಾಳೆ, ಶ್ರೀಧರ್ ಗೌಡ, ಮಾಯಮ್ಮ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ. ಬಸವರಾಜಪ್ಪ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷಪ್ಪ, ಅಪೇಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  
    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಸಿ.ಆರ್ ಪರಮೇಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಕರು, ಸಿಬ್ಬಂದಿ ವರ್ಗದವರು, ಜಿಲ್ಲೆಯ ೭ ತಾಲೂಕುಗಳ ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ : ಅನಾವರಣಗೊಂಡ ಮಕ್ಕಳ ಪ್ರತಿಭೆ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಕರಾವಳಿ ಬದುಕು ಅನಾವರಣ.
    ಭದ್ರಾವತಿ, ಡಿ. ೧೩: ಒಂದೆಡೆ ತಮ್ಮ ಪ್ರತಿಭೆ ಅನಾವರಣಗೊಳಿಸಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಬೇಕೆಂಬ ತವಕ. ಮತ್ತೊಂದೆಡೆ ಮಕ್ಕಳ ಪ್ರತಿಭೆಯನ್ನು ನೋಡಲು ಕಾತುರದಿಂದ ಕಾಯುವ ಕ್ಷಣ ಮಂಗಳವಾರ ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಕಂಡು ಬಂದಿತು.


ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕನ್ನಡ ನಾಡಿನ ಜೀವನದಿ ಕಾವೇರಿ ಮಾತೆ ವೇಷಭೂಷಣದಲ್ಲಿ ಕಂಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಳು
    ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ೭ ತಾಲೂಕುಗಳಿಂದ ಸುಮಾರು ೪೦೦ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಒಟ್ಟು ೧೮ ವಿಭಾಗದಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ ಮತ್ತು ಉರ್ದು ಕಂಠಪಾಠ ಹಾಗು ಭಾಷಣ, ಗಝಲ್, ಕವಾಲಿ, ಜಾನಪದ ನೃತ್ಯ, ಮಿಮಿಕ್ರಿ, ಜಾನಪದ ಗೀತೆ ಮತ್ತು ಭಾವಗೀತೆ, ರಸಪ್ರಶ್ನೆ, ಸಂಸ್ಕೃತ ಧಾರ್ಮಿಕ ಪಠಣ, ಆಶುಭಾಷಣ ಸ್ಪರ್ಧೆ, ಅಭಿನಯಗೀತೆ & ಕಥೆ ಹೇಳುವುದು, ಅರೇಬಿಕ್ ಧಾರ್ಮಿಕ ಪಠಣ, ಭರತ್ಯನಾಟ್ಯ, ಹಾಸ್ಯ, ಲಘು ಸಂಗೀತ ಮತ್ತು ಭಕ್ತಿಗೀತೆ, ಚರ್ಚಾ ಸ್ಪರ್ಧೆ, ಚಿತ್ರಕಲೆ ಮತ್ತು ಬಣ್ಣ ಹಚ್ಚುವುದು ಹಾಗು ರಂಗೋಲಿ ಸೇರಿದಂತೆ ವೈಯಕ್ತಿಕ ಹಾಗು ಸಾಮೂಹಿಕ ಸ್ಪರ್ಧೆಗಳು ನಡೆದವು.
    ಕರಾವಳಿ ಜನರ ಬದುಕು ಅನಾವರಣ :
    ವಿಶೇಷ ಎಂದರೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಮಕ್ಕಳು ಕರಾವಳಿ ಬದುಕನ್ನು ಅನಾವರಣಗೊಳಿಸುವ ಮೂಲಕ ಗಮನ ಸೆಳೆದರು. ದೋಣಿ, ಜೇಡ, ಜ್ಞಾನ ಧೈಯ್ಯ ಫಲಕ ರಾರಾಜಿಸುತ್ತಿತ್ತು. ಇದರ ಜೊತೆಗೆ ಯಕ್ಷಗಾನ ಕಲೆ ಅನಾವರಣ ಸಹ ಕಂಡು ಬಂದಿತು.

    ಮಣ್ಣಿನಲ್ಲಿ ಅರಳಿದ ಪ್ರಾಣಿ, ಪಕ್ಷಿಗಳು:
ಈ ನಿಟ್ಟಿನಲ್ಲಿ  ಜಿಂಕೆ, ಮೊಸಳೆ, ಗೂಬೆ ಸೇರಿದಂತೆ ಇನ್ನಿತರ ಪ್ರಾಣಿ, ಪಕ್ಷಿಗಳು ಹಾಗು ಗೋಕುಲ ಕೃಷ್ಣ, ಗರುಡ ಲಾಂಛನ ಮಕ್ಕಳ ಕೈಚಳಕದಲ್ಲಿ ಮಣ್ಣಿನಲ್ಲಿ ಅರಳುವ ಮೂಲಕ ಗಮನ ಸೆಳೆದವು. ಮಕ್ಕಳಲ್ಲಿ ವಿಭಿನ್ನ ರೀತಿಯ ಕಲೆಗಳಿದ್ದು, ಅವುಗಳ ಅನಾವರಣಕ್ಕೆ ಸೂಕ್ತ ವೇದಿಕೆ ಅಗತ್ಯವಿರುತ್ತದೆ ಎಂಬುದು ಕಂಡು ಬಂದಿತು.


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಜಿಂಕೆ, ಮೊಸಳೆ, ಗೂಬೆ ಸೇರಿದಂತೆ ಇನ್ನಿತರ ಪ್ರಾಣಿ, ಪಕ್ಷಿಗಳು ಹಾಗು ಗೋಕುಲ ಕೃಷ್ಣ, ಗರುಡ ಲಾಂಛನ ಮಕ್ಕಳ ಕೈಚಳಕದಲ್ಲಿ ಮಣ್ಣಿನಲ್ಲಿ ಅರಳುವ ಮೂಲಕ ಗಮನ ಸೆಳೆದವು.
    ರಾರಾಜಿಸಿದ ಕಾವೇರಿ ಮಾತೆ :
    ತಾಲೂಕಿನ ಎಮ್ಮೆಹಟ್ಟಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕನ್ನಡ ನಾಡಿನ ಜೀವನದಿ ಕಾವೇರಿ ಮಾತೆ ವೇಷಭೂಷಣದಲ್ಲಿ ಕಂಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಳು. ಕನ್ನಡ ನೆಲ, ಜಲ, ಭಾಷೆ ಸಹ ಇದರೊಂದಿಗೆ ಅನಾವರಣಗೊಂಡಿತ್ತು. ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ಬಸವಂತರಾವ್ ದಾಳೆ, ಯು. ಮಹಾದೇವಪ್ಪ, ಶಿಕ್ಷಕರಾದ ಎಂ.ಆರ್ ರೇವಣಪ್ಪ, ಧನಂಜಯ ಸೇರಿದಂತೆ ಇನ್ನಿತರರು ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.
    ಉಳಿದಂತೆ ಬಾಲಕಿಯರ ವೀರಭದ್ರೇಶ್ವರ ನೃತ್ಯ, ಡೊಳ್ಳು ಕುಣಿತ, ಜಾನಪದ ನೃತ್ಯ, ಲಂಬಾಣಿ ನೃತ್ಯ ಸೇರಿದಂತೆ ಇನ್ನಿತರ ಕಲಾತಂಡಗಳ ನೃತ್ಯಗಳು ವೇದಿಕೆ ಮತ್ತಷ್ಟು ಮೆರಗು ತಂದುಕೊಟ್ಟವು.
    ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಂಪೂರ್ಣ ಯಶಸ್ವಿಗೆ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚಿನ ಶ್ರಮ ವಹಿಸಿತ್ತು.


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ವೀರಭದ್ರೇಶ್ವರ ನೃತ್ಯ

ಆಹಾರ ಇಲಾಖೆ ಸಹಾಯಕ ಉಪನಿರೀಕ್ಷಕರ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿ ಪ್ರತಿಭಟನೆ

ಭ್ರಷ್ಟಾಚಾರ ಆರೋಪದ ಮೇಲೆ ಭದ್ರಾವತಿ ನಗರ ಆಹಾರ ಇಲಾಖೆ ಸಹಾಯಕ ಉಪನಿರೀಕ್ಷಕರ ವಿರುದ್ಧ ತಹಸೀಲ್ದಾರ್‌ರವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಕೆಆರ್‌ಎಸ್ ಪಕ್ಷದ ಯುವ ಘಟಕದ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಿದರು. 
    ಭದ್ರಾವತಿ, ಡಿ. ೧೩: ಭ್ರಷ್ಟಾಚಾರ ಆರೋಪದ ಮೇಲೆ ನಗರ ಆಹಾರ ಇಲಾಖೆ ಸಹಾಯಕ ಉಪನಿರೀಕ್ಷಕರ ವಿರುದ್ಧ ತಹಸೀಲ್ದಾರ್‌ರವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಕೆಆರ್‌ಎಸ್ ಪಕ್ಷದ ಯುವ ಘಟಕದ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಿದರು.
    ನಗರ ಆಹಾರ ಇಲಾಖೆ ಸಹಾಯಕ ಉಪನಿರೀಕ್ಷಕರಾದ ಗಾಯಿತ್ರಿಯವರು ತಮ್ಮ ಬೆರಳಚ್ಚು ಪಾಸ್ವರ್ಡ್ ಲಾಗಿನನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ನೀಡಬೇಕಾದ ಲಕ್ಷಾಂತರ ರೂ. ಮೌಲ್ಯದ ಪಡಿತರ ಕೆಲವು ನ್ಯಾಯಬಲೆ ಅಂಗಡಿ ಮಾಲೀಕರ ಜೊತೆ ಶಾಮೀಲಾಗಿ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡಿರುತ್ತಾರೆ. ಯಾವುದೇ ಸರ್ಕಾರಿ ಇಲಾಖೆಯ ಅಧಿಕಾರಿಗಳ ಪಾಸ್ವರ್ಡ್ ಲಾಗಿನನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಆಗುವುದಿಲ್ಲ. ಆದರೆ ಗಾಯತ್ರಿಯವರು ಉದ್ದೇಶಪೂರ್ವಕವಾಗಿ ಸರ್ಕಾರದ ಹಣ ಲೂಟಿ ಮಾಡಿರುತ್ತಾರೆ. ಇವರು ತಮ್ಮ ಮೇಲಿನ ಆರೋಪ ಮುಚ್ಚಿಕೊಳ್ಳಲು ನೆಪಮಾತ್ರಕ್ಕೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ೭ ನ್ಯಾಯಬೇಲೆ ಅಂಗಡಿಗಳ ಮೇಲೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುತ್ತಾರೆ ಎಂದು ಆರೋಪಿಸಿದರು.
    ಯಾವುದೇ ಸರ್ಕಾರಿ ನ್ಯಾಯಬೆಲೆ ಅಂಗಡಿ ಭ್ರಷ್ಟಾಚಾರ ನಡೆಸಿ ರದ್ದಾದರೆ ಈ ವಿಚಾರವನ್ನು ಪತ್ರಿಕೆಯಲ್ಲಿ ಪ್ರಕಟಣೆ ನೀಡಿ ನಂತರ ಸಹಕಾರ ಸಂಘಗಳಿಗೆ ನೀಡಬೇಕೆಂದು ಸರ್ಕಾರದ ನಿಯಮವಿದೆ. ಆದರೆ ಭ್ರಷ್ಟ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಜೊತೆ ಗಾಯತ್ರಿಯವರು ಸೇರಿಕೊಂಡು ಯಾವುದೇ ಪ್ರಕಟಣೆ ಹೊರಡಿಸದೆ ತಮಗೆ ಬೇಕಾದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬೇಕಾಬಿಟ್ಟಿ ಅಂಗಡಿ ನಡೆಸಲು ಅನುಮತಿ ನೀಡುತ್ತಿದ್ದು, ಅಲ್ಲದೆ ಭ್ರಷ್ಟಾಚಾರ ನಡೆಸಿ ರದ್ದಾಗಿರುವ ನ್ಯಾಯಬೆಲೆ ಅಂಗಡಿಗಳನ್ನು ಮತ್ತೆ ಮೂಲ ಮಾಲೀಕರೇ ನಡೆಸಲು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಒಟ್ಟಾರೆ ಎಲ್ಲಾ ಭ್ರಷ್ಟಾಚಾರಗಳಿಗೂ ಗಾಯತ್ರಿಯವರು ಮೂಲ ಕಾರಣಕರ್ತರಾಗಿದ್ದು, ಇವರ ವಿರುದ್ಧ ತಹಸೀಲ್ದಾರ್‌ರವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಲಾಯಿತು.
    ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ಯುವ ಘಟಕದ ಅಧ್ಯಕ್ಷ ತ್ಯಾಗರಾಜ, ವೆಂಕಟೇಶ್, ಆನಂದ್, ವಿನೋದ್, ರಾಜೇಂದ್ರ, ಚಂಪಯ್ಯ, ವಾಣಿ, ರೇಖಾ, ಮಧುಕುಮಾರ್, ಆಯಾಜ್, ಯೋಗೇಶ್, ಸಂದೀಪ್, ಬಿ.ಎಸ್ ಮಲ್ಲಿಕಾರ್ಜುನ, ಶರತ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

Monday, December 12, 2022

ವಿಐಎಸ್‌ಎಲ್‌ಗೆ ಬಂಡವಾಳ ತೊಡಗಿಸಲು ಒತ್ತಾಯಿಸಿ ಡಿ.೧೩ರಂದು ಪ್ರತಿಭಟನೆ

    ಭದ್ರಾವತಿ, ಡಿ. ೧೨ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಬಂಡವಾಳ ತೊಡಗಿಸಿ ಸಾರ್ವಜನಿಕ ರಂಗದಲ್ಲಿ ಉಳಿಸಲು ಒತ್ತಾಯಿಸಿ ಡಿ.೧೩ರಂದು ಸಿಐಟಿಯು ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಸರ್.ಎಂ ವಿಶ್ವೇಶ್ವರಾಯರವರು ದೇಶದಲ್ಲಿ ಸ್ಥಾಪಿಸಿದ ಮೊಟ್ಟ ಮೊದಲ ಉಕ್ಕು ಉದ್ಯಮ ಇದ್ದಾಗಿದ್ದು, ತಕ್ಷಣ ಕಾರ್ಖಾನೆಗೆ ಅಗತ್ಯವಿರುವ ಸುಮಾರು ೬೦೦೦ ಕೋ. ರು. ಬಂಡವಾಳ ತೊಡಗಿಸಿ ಸಾರ್ವಜನಿಕ ರಂಗದಲ್ಲಿ ಉಳಿಸಲು ಒತ್ತಾಯಿಸಿ ಬೆಳಿಗ್ಗೆ ೧೧.೧೫ಕ್ಕೆ ಬೃಹತ್ ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಗುವುದು. ಕಾರ್ಮಿಕರು, ಹೋರಾಟಗಾರರು, ವಿವಿಧ ಸಂಘಟನೆಗಳು ಸೇರಿದಂತೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಿಐಟಿಯು ಜಿಲ್ಲಾ ಸಂಚಾಲಕ ಎಂ. ನಾರಾಯಣ ಕೋರಿದ್ದಾರೆ.