Sunday, January 22, 2023

ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಮತ್ತು ಸಂಸದ ರಾಘವೇಂದ್ರ ವಿರುದ್ಧ ಕಾರ್ಮಿಕರ ಆಕ್ರೋಶ

ಕ್ಷೇತ್ರಕ್ಕೆ ಕಾಲಿಡುವ ನೈತಿಕತೆ ಇಲ್ಲ, ಕಾರ್ಮಿಕರ ಪರ ಸೂಕ್ತ ತೀರ್ಮಾನ ಕೈಗೊಳ್ಳಿ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಭೀತಿಯಲ್ಲಿ ಹೋರಾಟ ನಡೆಸುತ್ತಿರುವ ಕಾರ್ಮಿಕರು ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಭಾನುವಾರ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದರು ಪಾಲ್ಗೊಳ್ಳದಂತೆ ಹೋರಾಟ ನಡೆಸುವ ಮೂಲಕ ಕಾರ್ಮಿಕರು ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.
    ಭದ್ರಾವತಿ, ಜ. ೨೩ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಭೀತಿಯಲ್ಲಿ ಹೋರಾಟ ನಡೆಸುತ್ತಿರುವ ಕಾರ್ಮಿಕರು ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ಬಿ.ವೈ ರಾಘವೇಂದ್ರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಭಾನುವಾರ ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದರು ಪಾಲ್ಗೊಳ್ಳದಂತೆ ಹೋರಾಟ ನಡೆಸುವ ಮೂಲಕ ಕಾರ್ಮಿಕರು ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.
    ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ಸರ್.ಎಂ ವಿಶ್ವೇಶ್ವರಾಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಛೇರಿ ಹಾಗು ಭಾರತರತ್ನ ಸರ್.ಎಂ ವಿಶ್ವೇಶ್ವರಾಯನವರ ಪ್ರತಿಮೆ ಅನಾವರಣ ಕಾರ್ಯಕ್ರಮ ಉದ್ಘಾಟನೆಯನ್ನು ಸಂಸದ ಬಿ.ವೈ ರಾಘವೇಂದ್ರ ನೆರವೇರಿಸಬೇಕಿತ್ತು. ಕಾರ್ಯಕ್ರಮದ ಮಾಹಿತಿ ಅರಿತ ಕಾರ್ಮಿಕರು ಸ್ಥಳಕ್ಕೆ ಆಗಮಿಸಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
    ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೇವಲ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಕಾರ್ಮಿಕರು ಹಾಗು ಕ್ಷೇತ್ರದ ಮತದಾರರನ್ನು ವಂಚಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ರಾಘವೇಂದ್ರರವರಿಗೆ ಕ್ಷೇತ್ರಕ್ಕೆ ಬರುವ ಯಾವುದೇ ನೈತಿಕತೆ ಇಲ್ಲವಾಗಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಅವರು ಬರುವುದನ್ನು ವಿರೋಧಿಸುತ್ತೇವೆ. ಕಾರ್ಖಾನೆ ಸಂಬಂಧ ಸೂಕ್ತ ನಿಲುವು ಕೈಗೊಂಡು ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸುವುದಾದರೇ ಕ್ಷೇತ್ರಕ್ಕೆ ಬರಲಿ ಎಂದು ಆಗ್ರಹಿಸಿದರು.
    ಕಾರ್ಮಿಕರ ಹೋರಾಟಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಮಾಜಿ ಸದಸ್ಯ, ಜೆಡಿಎಸ್ ಯುವ ಘಟಕದ ತಾಲೂಕು ಅಧ್ಯಕ್ಷ ಎಂ.ಎ ಅಜಿತ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ನಗರಸಭೆ ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ಪ್ರಮುಖರು ಬೆಂಬಲ ಸೂಚಿಸಿದರು.
ಕಾರ್ಮಿಕರ ಹೋರಾಟ ತೀವ್ರಗೊಂಡ ಹಿನ್ನಲೆಯಲ್ಲಿ ಈ ಭಾಗದಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕೊನೆಗೆ ಕಾರ್ಯಕ್ರಮವನ್ನು ಹಿರಿಯ ಕಟ್ಟಡ ಕಾರ್ಮಿಕರೊಬ್ಬರಿಂದ ಉದ್ಘಾಟಿಸಲಾಯಿತು.  

ಭದ್ರಾವತಿ ಕ್ಷೇತ್ರದ ಸಮಸ್ಯೆಗಳ ನಿವಾರಣೆಗಾಗಿ ಓಂ ಶಕ್ತಿ ದೇವಿಗೆ ಹರಕೆ ಹೊತ್ತ ಶಾರದ ಅಪ್ಪಾಜಿ

ಇರುಮುಡಿ ಹೊತ್ತು ತಮಿಳುನಾಡಿನ ಮೇಲ್‌ಮರವತ್ತೂರು ದೇವಾಲಯಕ್ಕೆ ಪ್ರಯಾಣ

ಭದ್ರಾವತಿ ಕ್ಷೇತ್ರದಲ್ಲಿನ ಸಮಸ್ಯೆಗಳು ನಿವಾರಣೆಯಾಗುವ ಮೂಲಕ ಜನರು ಸಂಕಷ್ಟಗಳಿಂದ ಹೊರ ಬರಲಿ ಎಂಬ ಸಂಕಲ್ಪದೊಂದಿಗೆ ವಿಧಾನಸಭಾ ಚುನಾವಣೆ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಓಂ ಶಕ್ತಿ ದೇವಿಯ ಇರುಮುಡಿ ಹೊತ್ತು ತಮಿಳುನಾಡಿನ ಮೇಲ್‌ಮರವತ್ತೂರು ದೇವಾಲಯಕ್ಕೆ ತೆರಳಿದ್ದಾರೆ.
    ಭದ್ರಾವತಿ, ಜ. ೨೩  :  ಕ್ಷೇತ್ರದಲ್ಲಿನ ಸಮಸ್ಯೆಗಳು ನಿವಾರಣೆಯಾಗುವ ಮೂಲಕ ಜನರು ಸಂಕಷ್ಟಗಳಿಂದ ಹೊರ ಬರಲಿ ಎಂಬ ಸಂಕಲ್ಪದೊಂದಿಗೆ ವಿಧಾನಸಭಾ ಚುನಾವಣೆ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಓಂ ಶಕ್ತಿ ದೇವಿಯ ಇರುಮುಡಿ ಹೊತ್ತು ತಮಿಳುನಾಡಿನ ಮೇಲ್‌ಮರವತ್ತೂರು ದೇವಾಲಯಕ್ಕೆ ತೆರಳಿದ್ದಾರೆ.
    ಕಳೆದ ಕೆಲವು ದಿನಗಳಿಂದ ಮಡಿಬಟ್ಟೆಯೊಂದಿಗೆ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿರುವ ಶಾರದ ಅಪ್ಪಾಜಿಯವರು ಶನಿವಾರ ಇರುಮುಡಿ ಹೊತ್ತು ಭಕ್ತರೊಂದಿಗೆ ಪ್ರಯಾಣ ಬೆಳೆಸಿದ್ದು, ಜ.೨೫ರಂದು ದೇವಿಗೆ ಇರುಮುಡಿ ಸಮರ್ಪಿಸಲಿದ್ದಾರೆ.
    ಶಾರದಾ ಅಪ್ಪಾಜಿ ಅವರೊಂದಿಗೆ ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧು ಕುಮಾರ್ ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಸಹ ದೇವಿಯ ದರ್ಶನಕ್ಕೆ ತೆರಳಿದ್ದಾರೆ. ನಗರದಲ್ಲಿ ಓಂ ಶಕ್ತಿ ದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರತಿವರ್ಷ ಸಾವಿರಾರು ಭಕ್ತರು ಇರುಮುಡಿ ಹೊತ್ತು ದೇವಿಗೆ ಸಮರ್ಪಿಸುವ ಮೂಲಕ ಭಕ್ತಿ ಮೆರೆದಿದ್ದಾರೆ.


    ನೆಲಸಮಗೊಂಡ ಓಂಶಕ್ತಿ ದೇವಾಲಯ:
    ನಗರದ ಹುಡ್ಕೋ ಕಾಲೋನಿ ಬೈಪಾಸ್ ರಸ್ತೆಯಲ್ಲಿರುವ ಮೇಲ್‌ಮರವತ್ತೂರು ದೇವಾಲಯವನ್ನು ರಸ್ತೆ ಅಗಲೀಕರಣಕ್ಕಾಗಿ ಕಳೆದ ಕೆಲವು ಹಿಂದೆ ನೆಲಸಮಗೊಳಿಸಲಾಗಿದೆ. ದೇವಸ್ಥಾನ ಉಳಿಸಿಕೊಡುವಂತೆ ದೇವಸ್ಥಾನ ಸಮಿತಿಯವರು ಹಾಗು ಭಕ್ತರು ಸಂಸದ ಬಿ.ವೈ ರಾಘವೇಂದ್ರರಿಗೆ ಮನವಿ ಮಾಡಿದ್ದರು. ಆದರೆ ದೇವಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಹಿರಿಯ ಕ್ರೀಡಾಪಟು ನಂಜೇಗೌಡರಿಗೆ ಚಿನ್ನ, ಬೆಳ್ಳಿ ಪದಕ

ಭದ್ರಾವತಿ ಹೊಸಮನೆ ನಿವಾಸಿ, ಹಿರಿಯ ಕ್ರೀಡಾಪಟು ಬಿ. ನಂಜೇಗೌಡರು ೪ನೇ ಕರ್ನಾಟಕ ರಾಜ್ಯ ಮಾಸ್ಟರ್ ಗೇಮ್ಸ್ ಪಂದ್ಯಾವಳಿ ಭಾಗವಹಿಸಿ ೨ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಜ. ೨೨: ನಗರದ ಹೊಸಮನೆ ನಿವಾಸಿ, ಹಿರಿಯ ಕ್ರೀಡಾಪಟು ಬಿ. ನಂಜೇಗೌಡರು ೪ನೇ ಕರ್ನಾಟಕ ರಾಜ್ಯ ಮಾಸ್ಟರ್ ಗೇಮ್ಸ್ ಪಂದ್ಯಾವಳಿ ಭಾಗವಹಿಸಿ ೨ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಕರ್ನಾಟಕ ಮಾಸ್ಟರ‍್ಸ್ ಗೇಮ್ಸ್ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೭೫ ವರ್ಷ ಮೇಲ್ಪಟ್ಟವರ ವಯೋಮಾನದ ವಿಭಾಗದ ೧೦೦ಮೀ. ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಹಾಗು ಉದ್ದ ಜಿಗಿತದಲ್ಲಿ ೨.೫೯ ಮೀಟರ್ ಗುರಿ ಸಾಧಿಸುವ ಮೂಲಕ ದ್ವಿತೀಯ ಬಹುಮಾನ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.
    ನಂಜೇಗೌಡರು ರಾಷ್ಟ್ರ, ರಾಜ್ಯ ಹಾಗು ಜಿಲ್ಲಾಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಇದುವರೆಗೂ ಸುಮಾರು ೪೦ಕ್ಕೂ ಹೆಚ್ಚು ಪದಕಗಳನ್ನು ಪಡೆದುಕೊಂಡಿದ್ದಾರೆ. ಯುವ ಸಮುದಾಯಕ್ಕೆ ಸ್ಪೂರ್ತಿದಾಯಕರಾಗಿದ್ದಾರೆ. ಇವರ ಕ್ರೀಡಾ ಸಾಧನೆಗೆ ಕ್ರೀಡಾಭಿಮಾನಿಗಳು ಸೇರಿದಂತೆ ನಗರದ ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪತ್ರಕರ್ತ ಅನಂತಕುಮಾರ್‌ಗೆ ‘ಕನ್ನಡ ತಿಲಕ’ ರಾಜ್ಯ ಪ್ರಶಸ್ತಿ

ಸಮೃದ್ಧಿ ಫೌಂಡೇಷನ್, ಕೆಂಗೇರಿ, ಕೊಮ್ಮಘಟ್ಟ, ಬೆಂಗಳೂರು ಇದರ ೯ನೇ ವಾರ್ಷಿಕೋತ್ಸವದ ಸಂಭ್ರಮ, ಕಥಾಬಿಂದು ಪ್ರಕಾಶನ ಮಂಗಳೂರು ಮತ್ತು ಕನ್ನಲ್ಲಿ ವೀರಶೈವ ನಿತ್ಯಾನ್ನ ದಾಸೋಹ ಸೇವಾ ಸಮಿತಿ ವತಿಯಿಂದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ  ಬೆಂಗಳೂರಿನ  ಶ್ರೀ ವೀರಭದ್ರೇಶ್ವರ ಸುಕ್ಷೇತ್ರ ಕನ್ನಲ್ಲಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭದ್ರಾವತಿ ನಗರದ ಪತ್ರಕರ್ತ ಅನಂತಕುಮಾರ್‌ರವರಿಗೆ 'ಕನ್ನಡ ತಿಲಕ' ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
    ಭದ್ರಾವತಿ, ಜ. ೨೨: ಸಮೃದ್ಧಿ ಫೌಂಡೇಷನ್, ಕೆಂಗೇರಿ, ಕೊಮ್ಮಘಟ್ಟ, ಬೆಂಗಳೂರು ಇದರ ೯ನೇ ವಾರ್ಷಿಕೋತ್ಸವದ ಸಂಭ್ರಮ,  ಕಥಾಬಿಂದು ಪ್ರಕಾಶನ ಮಂಗಳೂರು ಮತ್ತು ಕನ್ನಲ್ಲಿ ವೀರಶೈವ ನಿತ್ಯಾನ್ನ ದಾಸೋಹ ಸೇವಾ ಸಮಿತಿ ವತಿಯಿಂದ ಪಿ.ವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ  ಬೆಂಗಳೂರಿನ  ಶ್ರೀ ವೀರಭದ್ರೇಶ್ವರ ಸುಕ್ಷೇತ್ರ ಕನ್ನಲ್ಲಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಥಾಬಿಂದು ಕನ್ನಡ ಸಾಹಿತ್ಯ ಸಮ್ಮೇಳನ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಗರದ ಪತ್ರಕರ್ತ ಅನಂತಕುಮಾರ್‌ರವರಿಗೆ  'ಕನ್ನಡ ತಿಲಕ' ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
   ತಾವರೆಕೆರೆ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
       ಕನ್ನಲ್ಲಿ ವೀರಶೈವ ನಿತ್ಯನ್ನ ದಾಸೋಹ ಸೇವಾ ಸಮಿತಿ ಅಧ್ಯಕ್ಷ ಡಾ. ಶಾಂತರಾಜು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮರಳು ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ  ಸಿದ್ದಲಿಂಗಯ್ಯ, ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಪಿ. ವಿ. ಪ್ರದೀಪ್ ಕುಮಾರ್, ಸಮೃದ್ಧಿ ಫೌಂಡೇಷನ್ ಅಧ್ಯಕ್ಷ ರುದ್ರಾರಾಧ್ಯ, ಲಕ್ಷ್ಮಿಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸುಮಾರು ೩೦ಕ್ಕೂ ಮಂದಿಗೆ 'ಕನ್ನಡ ತಿಲಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಮಾರು ೩೫ಕ್ಕೂ ಮಂದಿ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವಿತೆಗಳನ್ನು ವಾಚಿಸಿದರು. ಬಿ.ಎಂ ಮಾಣಿಯಾಟ್‌ರವರ ಅಧಿಕಾರ ಕಾದಂಬರಿ, ದಿವ್ಯಮಯ್ಯರವರ ಪರಶುರಾಮ ಕ್ಷೇತ್ರ ಮತ್ತು ಮೈಸೂರು ಟಿ. ತ್ಯಾಗರಾಜುರವರ ಜೀವ ಭಾವ ಕವನ ಸಂಕಲನ ಪುಸ್ತಕಗಳು ಬಿಡುಗಡೆಗೊಂಡವು.
    ಸಮ್ಮೇಳನ ಸಂಚಾಲಕರಾಗಿ ರೇಖಾ ಸುದೇಶ್ ರಾವ್, ಕವಿಗೋಷ್ಠಿ ಸಂಚಾಲಕರಾಗಿ ಆಶಾ ಶಿವು, ಸುನೀತಾ ಪ್ರದೀಪ್‌ಕುಮಾರ್ ಮತ್ತು ದರ್ಶಿನಿ ಆರ್ ಪ್ರಸಾದ್, ಕೆ.ಎ ಬಿಂದು, ರೇಷ್ಮಶೆಟ್ಟಿ ಗೊರೂರು ಹಾಗು ಪೂರ್ಣಿಮಾ ನಿರೂಪಿಸಿದರು.  

Saturday, January 21, 2023

ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ತೊಡಗಿಸದಿರುವುದು ಮುಚ್ಚುವ ಸ್ಥಿತಿಗೆ ಕಾರಣ

ಬಂಡವಾಳ ತೊಡಗಿಸಿ ಉದ್ಯೋಗ ನೀಡಿ, ಇಲ್ಲವಾದಲ್ಲಿ ದಯಾಮರಣಕ್ಕೆ ಅರ್ಜಿ

ಭದ್ರಾವತಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶನಿವಾರ ೩ನೇ ದಿನಕ್ಕೆ ಕಾಲಿಟ್ಟಿದೆ.
    ಭದ್ರಾವತಿ, ಜ.೨೧: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸದಿರುವುದೇ ಪ್ರಸ್ತುತ ಕಾರ್ಖಾನೆ ಮುಚ್ಚುವ ಸ್ಥಿತಿಗೆ ಕಾರಣ ಎಂದು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ ಸುರೇಶ್ ಆರೋಪಿಸಿದರು.
     ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಆಧುನೀಕರಣಗೊಳಿಸಿದಲ್ಲಿ ಕಾರ್ಖಾನೆಯನ್ನು ಲಾಭದಾಯಕವಾಗಿ ಮುನ್ನಡೆಸಿಕೊಂಡು ಹೋಗಲು ಸಾಧ್ಯ. ಕೇಂದ್ರ ಸರ್ಕಾರ ಬಂಡವಾಳ ಹೂಡುವುದಾಗಿ ಕೇವಲ ಭರವಸೆಗಳನ್ನು ನೀಡಿತು ಹೊರತು ಅದನ್ನು ಕಾರ್ಯಗತಗೊಳಿಸಲಿಲ್ಲ. ಇದರಿಂದಾಗಿ ಪ್ರಸ್ತುತ ಕಾರ್ಖಾನೆ ಮುಚ್ಚುವ ಸ್ಥಿತಿಗೆ ತಲುಪಿದೆ ಎಂದರು.
     ಬಿಎಸ್‌ವೈ  ಇಚ್ಛಾಶಕ್ತಿ  ಪ್ರದರ್ಶಿಸುತ್ತಿಲ್ಲ:
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕಾರ್ಖಾನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರಿಸುತ್ತಿಲ್ಲ. ಕಾರ್ಖಾನೆ ಸ್ಥಿತಿಗತಿ ಕುರಿತ ಮಾಹಿತಿ ಕೊರತೆಯು ಕಾರಣವಿರಬಹುದು. ಈಗಲೂ ಸಹ ಮನಸ್ಸು ಮಾಡಿದರೆ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
     ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಆತಂಕ: ಓರ್ವ ಕಾರ್ಮಿಕ ಹೃದಯಾಘಾತದಿಂದ ಸಾವು
  ಪ್ರಸ್ತುತ ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಕಾರ್ಮಿಕ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.  ಗುತ್ತಿಗೆ ಕಾರ್ಮಿಕರಿಗೆ ದಿಕ್ಕು ಕಾಣದಂತಾಗಿದೆ. ಕಾರ್ಖಾನೆಯ ಕ್ರೇನ್ಸ್ ವಿಭಾಗದಲ್ಲಿ ಕೆಲಸ ಮಾಡುವ ಸುಮಾರು ೪೦ ವರ್ಷದ ಹೇಮಗಿರಿ ಎಂಬ ಗುತ್ತಿಗೆ ಕಾರ್ಮಿಕ ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಹೃದಯಘಾತಗೊಂಡು ಮೃತಪಟ್ಟಿದ್ದಾನೆ.  ಇದೀಗ ಈತನ ಕುಟುಂಬ ಬೀದಿಗೆ ಬಿದ್ದಿದೆ ಎಂದು ಅಳಲು ತೋರ್ಪಡಿಸಿಕೊಂಡರು.
   ದಯಾಮರಣಕ್ಕೆ ಅರ್ಜಿ:
  ಪ್ರಸ್ತುತ ಕಾರ್ಖಾನೆಯಲ್ಲಿ ಸುಮಾರು ೧೫೦೦ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಒಂದು ವೇಳೆ ಕಾರ್ಖಾನೆ, ಮುಚ್ಚಲ್ಪಟ್ಟಲ್ಲಿ ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿ ಪಾಲಾಗುವುದು ಖಚಿತವಾಗಿದೆ. ಭವಿಷ್ಯದಲ್ಲಿ ನಮಗೆ ಉದ್ಯೋಗ ಸಿಗುವ ಯಾವುದೇ ಭರವಸೆಗಳು ಸಹ ಇಲ್ಲವಾಗಿದೆ ಈ ಹಿನ್ನಲೆಯಲ್ಲಿ ನಾವೆಲ್ಲರೂ ಸರ್ವೋಚ್ಚ ನ್ಯಾಯಾಲಯಕ್ಕೆ ದಯಾಮರಣ ಕೋರಿ ಅರ್ಜಿ ಸಲ್ಲಿಸಲಿದ್ದೇವೆ. ಈಗಲಾದರೂ ಸರ್ಕಾರ ಕಾರ್ಖಾನೆಗೆ ಬಂಡವಾಳ ತೊಡಗಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಆರ್. ಮಂಜುನಾಥ್, ಪಿ. ರಾಕೇಶ್, ವಿ. ಗುಣಶೇಖರ್, ಎನ್.ಆರ್ ವಿನಯ್‌ಕುಮಾರ್, ಅಂತೋಣಿದಾಸ್, ಜಿ. ಆನಂದ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಜೆ ವಾಸುದೇವ, ಶಂಕರಲಿಂಗೇಗೌಡ, ಎನ್.ಕೆ ಮಂಜುನಾಥ್, ಪ್ರಸನ್ನಬಾಬು, ನಂಜೇಗೌಡ, ಜೆ. ಕಿರಣ, ಶಿವಣ್ಣಗೌಡ, ಬಿ. ದೇವರಾಜ, ಆರ್. ಅರುಣ, ಪಿ. ಅವಿನಾಶ್, ಶೇಷಪ್ಪಗೌಡ, ಸುಬ್ರಮಣಿ, ಹಿರಿಯ ಕಾರ್ಮಿಕ ಮುಖಂಡ ಎಂ. ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅನಿರ್ಧಿಷ್ಟಾವಧಿ ಹೋರಾಟ ೩ನೇ ದಿನಕ್ಕೆ :
    ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಶನಿವಾರ ೩ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ವಿವಿಧ ಸಂಘ-ಸಂಸ್ಥೆಗಳು ಕಾರ್ಮಿಕರ ಹೋರಾಟ ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಿವೆ. ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುವುದಾಗಿ ಗುತ್ತಿಗೆ ಕಾರ್ಮಿಕರ ಸಂಘ ಸ್ಪಷ್ಟಪಡಿಸಿದೆ.


ಕಾರ್ಖಾನೆಯ ಕ್ರೇನ್ಸ್ ವಿಭಾಗದಲ್ಲಿ ಕೆಲಸ ಮಾಡುವ ಸುಮಾರು ೪೦ ವರ್ಷದ ಹೇಮಗಿರಿ ಎಂಬ ಗುತ್ತಿಗೆ ಕಾರ್ಮಿಕ ಕಾರ್ಖಾನೆ ಮುಚ್ಚುವ ಸುದ್ದಿಯಿಂದ ಹೃದಯಘಾತಗೊಂಡು ಮೃತಪಟ್ಟಿದ್ದಾನೆ.  

903ನೇ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ

ಭದ್ರಾವತಿ,ಜ.21:  ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗು ಗಂಗಾಮತಸ್ಥರ ಸಂಘದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ  ಶನಿವಾರ 903ನೇ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು.
     ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಕಾರ್ಯಕ್ರಮ ಉದ್ಘಾಟಿಸಿದರು. ಗಂಗಾಮತಸ್ಥರ ಸಂಘದ ಅಧ್ಯಕ್ಷ ಎಚ್.ಎ ಪರಮೇಶ್ವರಪ್ಪ ಆದ್ಯಕ್ಷತೆವಹಿಸಿದ್ದರು. 
    ತಹಸೀಲ್ದಾರ್  ಆರ್. ಪ್ರದೀಪ್, ಉಪ ತಹಸೀಲ್ದಾರ್  ಮಂಜನಾಯ್ಕ, ಅರಸು, ಶಿರಸ್ತೇದಾರ್ ರಾಧಾಕೃಷ್ಣಭಟ್, ಗಂಗಾಮತಸ್ಥರ ಸಂಘದ ಉಪಾಧ್ಯಕ್ಷರಾದ ಕೆ.ಎಂ ಅಣ್ಣಯ್ಯ, ಎಸ್. ಶಿವಕುಮಾರ್,  ಪ್ರಧಾನ ಕಾರ್ಯದರ್ಶಿ ಬಿ.ಆರ್ ಯಲ್ಲಪ್ಪ, ಕಾರ್ಯದರ್ಶಿ ಎಚ್.ಸಿ ಬೇಲೂರಪ್ಪ,   ಖಜಾಂಚಿ ವೈ.ಆರ್ ಮಂಜುನಾಥ್ ಯರೇಹಳ್ಳಿ, ಸಂಘಟನಾ ಕಾರ್ಯದರ್ಶಿಗಳಾದ ನಾಗರತ್ನ ಮತ್ತು ಮಂಜುಳಾ ಸೇರಿದಂತೆ ನಿರ್ದೇಶಕರು ಹಾಗು ತಾಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜ.22ರಂದು ನಗರಕ್ಕೆ ಎಐಸಿಸಿ ಕಾರ್ಯದರ್ಶಿ ಆಗಮನ


ಭದ್ರಾವತಿ, ಜ. 21: ಎಐಸಿಸಿ ಕಾರ್ಯದರ್ಶಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವೀಕ್ಷಕ ಡಾ. ಸಿರಿ ವೆಳ್ಳಾಪ್ರಸಾದ್ ಜ.22ರಂದು ನವ ದೆಹಲಿಯಿಂದ ನಗರಕ್ಕೆ ಆಗಮಿಸಲಿದ್ದಾರೆ.
     ಈ ಸಂಬಂಧ ಬೆಳಗ್ಗೆ 10.30 ಕ್ಕೆ ಶಾಸಕರ ಗೃಹ ಕಚೇರಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಪಕ್ಷದ ಎಲ್ಲಾ ಹಾಲಿ ಮತ್ತು ಮಾಜಿ ಚುನಾಯಿತ ಜನ ಪ್ರತಿನಿಧಿಗಳು, ಪಕ್ಷದ ನಗರ ಹಾಗೂ ಗ್ರಾಮಾಂತರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್   ಮತ್ತು ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಎಲ್ಲಾ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.