Tuesday, February 7, 2023

ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ : ವಿಐಎಸ್ ಎಲ್ ಎಂಪಿಎಂ ಉಳಿಸುವ ಪ್ರಯತ್ನ

   ಭದ್ರಾವತಿ, ಫೆ. 8:  ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸವಿದ್ದು, ನಗರದ ವಿಐಎಸ್ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
    ಅವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ವ್ಯಾಪಕ ಜನ ಬೆಂಬಲ ವ್ಯಕ್ತವಾಗುತ್ತಿದೆ ಸುಮಾರು 150 ಸ್ಥಾನಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿಐಎಸ್ಎಲ್ ಕಾರ್ಖಾನೆ ಪುನಶ್ಚೇತನಗೊಳಿಸುವುದಾಗಿ   ಬಿ.ಎಸ್ ಯಡಿಯೂರಪ್ಪನವರು ಶಿವಮೊಗ್ಗ  ಜಿಲ್ಲೆಯ ಜನರಿಗೆ ಭರವಸೆ ನೀಡಿದ್ದರು. ಆದರೆ ಅವರು ತಮ್ಮ ಮಾತನ್ನು ಉಳಿಸಿಕೊಂಡಿಲ್ಲ.  ಹಿನ್ನೆಲೆಯಲ್ಲಿ ಅವರಿಗೆ  ಈ ಬಾರಿ ಜಿಲ್ಲೆಯಲ್ಲಿ ಮತ ಕೇಳುವ ನೈತಿಕತೆ ಇಲ್ಲ ಎಂದರು. 
       ಶಾಸಕರಾದ ಬಿ.ಕೆ ಸಂಗಮೇಶ್ವರ,  ಎನ್.ಎ ಹ್ಯಾರಿಸ್, ಸಲೀಂ ಅಹಮದ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಗೋಪಾಲ ಕೃಷ್ಣ ಬೇಲೂರು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

೨೦ ದಿನ ಪೂರೈಸಿದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ : ಪ್ರಗತಿಪರ ಸಂಘಟನೆಗಳಿಂದ ತುರ್ತು ಸಭೆ

ಭದ್ರಾವತಿಯಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೨೦ನೇ ದಿನ ಪೂರೈಸಿದ್ದು, ಈ ನಡುವೆ ಹೋರಾಟದ ದಿಕ್ಕು ತಪ್ಪಿಸಲಾಗುತ್ತಿದೆ ಎಂಬ ಆತಂಕ ಇದೀಗ ಪ್ರಗತಿಪರ ಸಂಘಟನೆಗಳಲ್ಲಿ ಎದುರಾಗಿದೆ. ಈ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ತುರ್ತು ಸಭೆ ನಡೆಸಲಾಯಿತು.
    ಭದ್ರಾವತಿ, ಫೆ. ೭ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೨೦ನೇ ದಿನ ಪೂರೈಸಿದ್ದು, ಈ ನಡುವೆ ಹೋರಾಟದ ದಿಕ್ಕು ತಪ್ಪಿಸಲಾಗುತ್ತಿದೆ ಎಂಬ ಆತಂಕ ಇದೀಗ ಪ್ರಗತಿಪರ ಸಂಘಟನೆಗಳಲ್ಲಿ ಎದುರಾಗಿದೆ. ಈ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ತುರ್ತು ಸಭೆ ನಡೆಸಲಾಯಿತು.
    ಪ್ರಗತಿಪರ ಸಂಘಟನೆಯ ಪ್ರಮುಖರಾದ ಸುರೇಶ್ ಸಭೆಯಲ್ಲಿ ಮಾತನಾಡಿ, ಗುತ್ತಿಗೆ ಕಾರ್ಮಿಕರು ಕಳೆದ ೨೦ ದಿನಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ಪೂರಕವಾದ ಪ್ರತಿಕ್ರಿಯೆ ಯಾರಿಂದಲೂ ವ್ಯಕ್ತವಾಗುತ್ತಿಲ್ಲ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಸೇರಿದಂತೆ ರಾಜಕೀಯ ಪಕ್ಷಗಳು ಹೋರಾಟವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಹೋರಾಟ ದಿಕ್ಕು ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನಾವುಗಳು ಜಾಗೃತರಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು.
    ರೈತ ಮುಖಂಡ ಯಶವಂತರಾವ್ ಘೋರ್ಪಡೆ ಮಾತನಾಡಿ, ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ಆಯಾ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ.  ರಾಜಕಾರಣವೇ ಕಾರ್ಖಾನೆಗಳ ಇಂದಿನ ಸ್ಥಿತಿಗೆ ಮೂಲ ಕಾರಣವಾಗಿದ್ದು, ಆಯಾ ಪಕ್ಷಗಳು ತಮ್ಮದೇ ಆದ ಧೋರಣೆಗಳನ್ನು ಹೊಂದಿವೆ. ರಾಜ್ಯ ಮತ್ತು ಕೇಂದ್ರ  ಎರಡು ಸರ್ಕಾರಗಳು ಸಹ ಕಾರ್ಖಾನೆಗಳ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ. ಈ ಹಿನ್ನಲೆಯಲ್ಲಿ ಎರಡು ಸರ್ಕಾರಗಳ ವಿರುದ್ಧ ಹೋರಾಟ ನಡೆಸಬೇಕೆಂದರು.
    ಬಂಜಾರ ರೈತರ ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯ್ಕ ಮಾತನಾಡಿ, ಹೋರಾಟ ನಿರಂತರವಾಗಿ ನಡೆಯಬೇಕು. ಅದರಲ್ಲೂ ಇದೀಗ ಬೃಹತ್ ಮಟ್ಟದ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಎರಡು ಕಾರ್ಖಾನೆಗಳನ್ನು ಉಳಿಸಿಕೊಳ್ಳುವುದು ಅಸಾಧ್ಯ ಎಂದರು.
    ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಕೋಮು ಸೌಹಾರ್ದ ವೇದಿಕೆಯ ಜಿ. ರಾಜು, ಕರ್ನಾಟಕ ರಕ್ಷಣಾ ವೇದಿಕೆಯ ಮುರಳಿ, ಬಂಜಾರ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಛಲವಾದಿ ಸಮಾಜದ ಜಯರಾಜ್, ಗೋಪಾಲ್, ಜಗದೀಶ್, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಹನುಮಮ್ಮ,, ರೇಷ್ಮಬಾನು, ಜಾವಿದ್, ಎಚ್.ಎಂ ಖಾದ್ರಿ, ರಮೇಶ್, ಜೆಬಿಟಿ ಬಾಬು, ಅಸಾದುಲ್ಲಾ ಖಾನ್, ಖದೀರ್, ಗಂಗಾನಾಯ್ಕಗೊಂದಿ, ಯಲ್ಲೋಜಿರಾವ್, ಸಣ್ಣಯ್ಯ, ಎಂ. ನಾರಾಯಣ, ಐಸಾಕ್, ನಿತ್ಯಾನಂದ, ಧರ್ಮರಾಜ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
    ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ಬೆಂಬಲ :
  ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ನೇತೃತ್ವದಲ್ಲಿ ಮಂಗಳವಾರ ಬೆಂಬಲ ಸೂಚಿಸಿ ಕಾರ್ಖಾನೆ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರೊಂದಿಗೆ ಚರ್ಚಿಸಲಾಯಿತು.
      ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್. ರಮೇಶ್, ರಾಜ್ಯ ಸಂಚಾಲಕ ಎಸ್.ಪಿ ದಿನೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ರಮೇಶ್, ಮುಖಂಡರುಗಳಾದ ಜಾನಿ ಮಾರ್ಟೀನ್, ಪಲ್ಲವಿ,  ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ಚಂದ್ರೇಗೌಡ, ತಾಲೂಕು ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ. ಗಂಗಾಧರ್, ಅಲ್ಪ ಸಂಖ್ಯಾತರ ವಿಭಾಗದ ಅಮೀರ್ ಜಾನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ ಗಿರೀಶ್, ನಗರ ಘಟಕದ ಅಧ್ಯಕ್ಷ ವಿನೋದ್, ಗ್ರಾಮಾಂತರ ಅಧ್ಯಕ್ಷ ಅಫ್ತಾಬ್, ಎನ್ ಎಸ್‌ಯುಐ ಅಧ್ಯಕ್ಷ ಮುಸ್ವೀರ್ ಬಾಷ, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್ ಮತ್ತು ಪದಾಧಿಕಾರಿಗಳು ಹಾಗೂ ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.


ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ನೇತೃತ್ವದಲ್ಲಿ ಮಂಗಳವಾರ ಬೆಂಬಲ ಸೂಚಿಸಿ ಕಾರ್ಖಾನೆ ಉಳಿವಿಗಾಗಿ ಗುತ್ತಿಗೆ ಕಾರ್ಮಿಕರೊಂದಿಗೆ ಚರ್ಚಿಸಲಾಯಿತು.

ಜಾಗ ದಾನ ನೀಡಿ ಉದಾರತೆ ಮೆರೆದಿರುವ ಶಾಸಕರು : ಡಾ. ಎಸ್. ದೇವನೇಸನ್ ಸಾಮ್ಯುಯಲ್

ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ

ಭದ್ರಾವತಿಯಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಜಾರಿಟಬಲ್ ಟ್ರಸ್ಟ್ ವತಿಯಿಂದ ನಗರದ ಮೂಲೆಕಟ್ಟೆ ಇನ್ಫ್ಯಂಟ್ ಜೀಸಸ್ ಚರ್ಚ್ ಹತ್ತಿರ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಶಂಕುಸ್ಥಾಪನೆ ನೆರವೇರಿಸಿದರು.  
    ಭದ್ರಾವತಿ, ಫೆ. ೭ : ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯಕ್ಕೆ ಹೆಚ್ಚಿನ ಮಾನ್ಯತೆ ನೀಡುವ ಮೂಲಕ ಆ ಸಮುದಾಯದ ಜನಕ್ಕೂ ಒಂದು ನೆಲೆ ನೀಡಿ ಉದಾರತೆ ಮೆರೆದಿರುವ ಕ್ಷೇತ್ರದ ಶಾಸಕರಿಗೆ ಕ್ರೈಸ್ತ ಸಮುದಾಯ ಎಂದಿಗೂ ಚಿರಋಣಿಯಾಗಿರುತ್ತದೆ ಎಂದು ಫಾಸ್ಟರ್ ರೆವರೆಂಡ್ ಡಾ. ಎಸ್. ದೇವನೇಸನ್ ಸಾಮ್ಯುಯಲ್ ಹೇಳಿದರು.
    ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಜಾರಿmಬಲ್ ಟ್ರಸ್ಟ್ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ನಗರದ ಮೂಲೆಕಟ್ಟೆ ಇನ್ಫ್ಯಂಟ್ ಜೀಸಸ್ ಚರ್ಚ್ ಹತ್ತಿರ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ರೈಸ್ತ ಸಮುದಾಯಕ್ಕೆ ದಾನವಾಗಿ ನೀಡಿರುವ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಶಾಸಕರು ಕ್ರೈಸ್ತ ಸಮುದಾಯದ ಮೇಲೆ ಹೊಂದಿರುವ ಅಭಿಮಾನ ಹೆಚ್ಚಿನದ್ದಾಗಿದ್ದು, ಅವರು ನೀಡಿರುವ ಜಾಗಕ್ಕೆ ಸಂಬಂಧಿದಂತೆ ಯಾವುದೇ ಗೊಂದಲಗಳು ಇಲ್ಲ. ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡುವ ಜೊತೆಗೆ ಶಾಸಕರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಧಿಕಾರ, ಸ್ಥಾನಮಾನಗಳು ಲಭಿಸುವಂತಾಗಲಿ ಎಂದರು.
    ಪಾದರ್ ಆರೋಗ್ಯ ರಾಜ್ ಮಾತನಾಡಿ, ಸರಳತೆ ವ್ಯಕ್ತಿತ್ವ ಹೊಂದಿರುವ ಶಾಸಕರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಮುದಾಯ ಭವನ ಶೀಘ್ರದಲ್ಲಿಯೇ ನಿರ್ಮಾಣಗೊಂಡು ಕ್ರೈಸ್ತರು ಸೇರಿದಂತೆ ಎಲ್ಲಾ ಸಮುದಾಯಕ್ಕೂ ಅನುಕೂಲವಾಗಬೇಕು. ಶಾಸಕರಿಂದಲೇ ಈ ಸಮುದಾಯ ಭವನ ಉದ್ಘಾಟನೆಗೊಳ್ಳುವಂತಾಗಲಿ ಎಂದರು.
  ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ರೈಸ್ತ ಸಮುದಾಯವರು ನನ್ನ ಮೇಲೆ ಹೊಂದಿರುವ ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಟ್ರಸ್ಟ್ ಅಧ್ಯಕ್ಷ ಸೆಲ್ವರಾಜ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ರೆವರೆಂಡ್ ಫಾಸ್ಟರ್ ಗಿಡಿಯೋನ್, ವೆಸ್ಲಿ ಕೆನಡಿ, ರೆವರೆಂಡ್ ಬಾಬಿರಾಜ್, ಫಾಸ್ಟರ್ ನೈಕಲ್ ಜೋಸೆಫ್, ಜೋಸ್ ಜಾರ್ಜ್, ಕೃಪದಾನಿ, ಸರೋಜಮ್ಮ, ಅಂತೋಣಿ ವಿಲ್ಸನ್, ಎಸ್. ಬಾಬು, ರಾಜನ್, ಜೆ.ಡಿ ಅನೋಕ್, ಜೇಮ್ಸ್, ಸಂಪತ್‌ಕುಮಾರ್, ದೇವಿಡ್, ಸುರೇಶ್‌ನಾಯ್ಕ್, ನಗರಸಭೆ ಸದಸ್ಯ ಜಾರ್ಜ್, ಮಾಜಿ ಸದಸ್ಯ ಪ್ರಾನ್ಸಿಸ್, ಪಿ.ವಿ ಪೌಲ್, ದೇವಿಡ್, ಫಾಸ್ಟರ್ ಪಾಂಡು, ಪ್ರಕಾಶ್, ವಿಲ್ಸನ್‌ಬಾಬು, ಆರ್. ಮೋಸಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚಲನಚಿತ್ರವಾಗುತ್ತಿದೆ ಡಾ. ದೊಡ್ಡರಂಗೇಗೌಡರ “ಪ್ರೀತಿ ಪ್ರಗಾಥ” ಕಾವ್ಯ

ಭದ್ರಾವತಿ ರಾಮಚಾರಿ ಚಿತ್ರ ಕಥೆ, ಸಂಭಾಷಣೆ : ಮೇ ತಿಂಗಳಿನಲ್ಲಿ ಚಿತ್ರೀಕರಣ

ಕನ್ನಡ ಸಾರಸ್ವತ ಲೋಕದ ಕವಿ ಡಾ. ದೊಡ್ಡರಂಗೇಗೌಡರ "ಪ್ರೀತಿ ಪ್ರಗಾಥ" ಕಾವ್ಯ ಚಲನಚಿತ್ರವಾಗುತ್ತಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್  ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
    ಭದ್ರಾವತಿ, ಫೆ. ೭: ಕನ್ನಡ ಸಾರಸ್ವತ ಲೋಕದ ಕವಿ ಡಾ. ದೊಡ್ಡರಂಗೇಗೌಡರ "ಪ್ರೀತಿ ಪ್ರಗಾಥ" ಕಾವ್ಯ ಚಲನಚಿತ್ರವಾಗುತ್ತಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ
       ಸಹ ನಿರ್ದೇಶಕ ನವಿಲು ಗರಿ ನವೀನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾಹಿತಿ ಡಾ. ಭದ್ರಾವತಿ ರಾಮಾಚಾರಿ ಚಿತ್ರ ಕಥೆ, ಸಂಭಾಷಣೆ ನಿರ್ವಹಿಸಲಿದ್ದಾರೆ. ಈ ಚಿತ್ರಕ್ಕೆ ಇಂದೂ ವಿಶ್ವನಾಥ್ ಅವರ ಸಂಗೀತ ಸಂಯೋಜನೆ ಡಾ .ದೊಡ್ಡರಂಗೇಗೌಡರೇ ಗೀತೆಗಳನ್ನು ರಚಿಸಿದ್ದಾರೆ.
      ವಿಭಿನ್ನ ಪ್ರೇಮ ಕಥಾ ಹಂದರವುಳ್ಳ ಈ ಚಿತ್ರದ ನಾಯಕನ ಪಾತ್ರದಲ್ಲಿ ಅನಿಕ್ ಎಂಬ ಹೊಸ ಪ್ರತಿಭೆಯನ್ನು ಪರಿಚಯಿಸಲಾಗುತ್ತಿದ್ದು, ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್  ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
       ಪ್ರದೀಪ್, ಹರ್ಷ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವ ಸಿದ್ದತೆಯಲ್ಲಿದ್ದು, ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

Monday, February 6, 2023

ಸಿಂಗನಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಿರಿಯ ಸದಸ್ಯೆ ಪುಟ್ಟಮ್ಮ ಆಯ್ಕೆ

ಭದ್ರಾವತಿ ತಾಲೂಕಿನ ಸಿಂಗನಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಿರಿಯ ಸದಸ್ಯೆ ಪುಟ್ಟಮ್ಮ ಆಯ್ಕೆಯಾಗಿದ್ದಾರೆ.
   ಭದ್ರಾವತಿ, ಫೆ. ೬ : ತಾಲೂಕಿನ ಸಿಂಗನಮನೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹಿರಿಯ ಸದಸ್ಯೆ ಪುಟ್ಟಮ್ಮ ಆಯ್ಕೆಯಾಗಿದ್ದಾರೆ.
   ಸಂಘದ ಅಧ್ಯಕ್ಷರ ಚುನಾವಣೆಯಲ್ಲಿ ಪುಟ್ಟಮ್ಮ ೬ ಮತಗಳನ್ನು ಹಾಗು ಇವರ ಪ್ರತಿಸ್ಪರ್ಧಿ ಷಣ್ಮುಗಪ್ಪ ೫ ಮತಗಳನ್ನು ಪಡೆದುಕೊಂಡಿದ್ದು, ೧ ಮತದ ಅಂತರದಿಂದ ಪುಟ್ಟಮ್ಮ ಆಯ್ಕೆಯಾಗಿದ್ದಾರೆ. ಪುಟ್ಟಮ್ಮ ಸಹಕಾರ ಸಂಘಕ್ಕೆ ಸತತವಾಗಿ ೩ ಬಾರಿ ಆಯ್ಕೆಯಾಗಿದ್ದಾರೆ. ಇವರನ್ನು ಪ್ರಮುಖರಾದ ಟಿ.ಡಿ ಶಶಿಕುಮಾರ್, ತ್ಯಾಗರಾಜ್, ಸಿಂಗಮನೆ ಗ್ರಾಮ ಪಂಚಾಯಿತಿ ಹಾಗು ಗ್ರಾಮಸ್ಥರು ಅಭಿನಂದಿಸಿದ್ದಾರೆ.

೧೯ದಿನ ಪೂರೈಸಿದ ವಿಐಎಸ್‌ಎಲ್ ಕಾರ್ಮಿಕರ ಹೋರಾಟ : ಸೂತಕದ ಛಾಯೆ

ಓರ್ವ ಗುತ್ತಿಗೆ ಕಾರ್ಮಿಕ ನೇಣುಬಿಗಿದುಕೊಂಡು ಆತ್ಮಹತ್ಯೆ, ಬೃಹತ್ ಸಹಿ ಸಂಗ್ರಹದೊಂದಿಗೆ ಪ್ರಧಾನಿಗೆ ಮನವಿ ಪತ್ರ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಚೇತನ್‌ಕುಮಾರ್

    ಭದ್ರಾವತಿ, ಫೆ. ೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಸೋಮವಾರ ೧೯ನೇ ದಿನ ಪೂರೈಸಿದ್ದು, ಈ ನಡುವೆ ಕಾರ್ಮಿಕ ವಲಯದಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ.
    ಇದುವರೆಗೂ ೩ ಜನ ಗುತ್ತಿಗೆ ಕಾರ್ಮಿಕರು ಅಕಾಲಿಕವಾಗಿ ನಿಧನ ಹೊಂದಿದ್ದು, ಈ ಪೈಕಿ ಈ ಹಿಂದೆ ಇಬ್ಬರು ಕಾರ್ಮಿಕರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಒಬ್ಬರು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
    ತಂಗಿಯ ಮದುವೆ ದಿನ ಗುತ್ತಿಗೆ ಕಾರ್ಮಿಕ ಆತ್ಮಹತ್ಯೆ :
    ವಿಐಎಸ್‌ಎಲ್ ಕಾರ್ಖಾನೆಯ ಆರ್‌ಟಿಎಸ್ ವಿಭಾಗದಲ್ಲಿ ಕಳೆದ ಸುಮಾರು ೧೦ ವರ್ಷಗಳಿಂದ ಗುತ್ತಿಗೆ ಕಾರ್ಮಿಕನಾಗಿ ದುಡಿಯುತ್ತಿರುವ ತಾಲೂಕಿನ ಕೊಮಾರನಹಳ್ಳಿ ನಿವಾಸಿ ಚೇತನ್‌ಕುಮಾರ್(೩೨) ಆತ್ಯಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು, ಇದರಿಂದಾಗಿ ಕಾರ್ಮಿಕ ವಲಯದಲ್ಲಿ ಸೂತಕದ ಛಾಯೆ ಕಂಡು ಬಂದಿತು.
    ನಗರದ ಕೋಡಿಹಳ್ಳಿ ರಸ್ತೆಯಲ್ಲಿರುವ ದೈವಜ್ಞ ಕಲ್ಯಾಣ ಮಂಟಪದಲ್ಲಿ ತಂಗಿ ಮದುವೆ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕಲ್ಯಾಣ ಮಂಟಪದ ಹಿಂಭಾಗ ಚೇತನ್‌ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಈ ನಡುವೆ ಆತ್ಮಹತ್ಯೆ ಕುರಿತು ಎಲ್ಲೆಡೆ ಗಾಳಿಸುದ್ದಿ ವ್ಯಾಪಕವಾಗಿ ಹರಡುತ್ತಿದ್ದು, ಕಾರ್ಮಿಕ ವಲಯದಲ್ಲಿ ಮತ್ತುಷ್ಟು ಆತಂಕ ಹೆಚ್ಚಾಗಿದೆ.
    ಬೃಹತ್ ಸಹಿ ಅಭಿಯಾನ ಯಶಸ್ವಿ : ೮೦೦ ಮಂದಿ ಸಹಿ
    ನಗರದ ಪತ್ರಕರ್ತ ಅನಂತಕುಮಾರ್‌ರವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಹಿ ಅಭಿಯಾನ ಯಶಸ್ವಿಯಾಗಿದ್ದು, ಸುಮಾರು ೮೦೦ ಮಂದಿ ಸಹಿ ಒಳಗೊಂಡ ಪತ್ರದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.
    ಸೋಮವಾರ ಹೋರಾಟಕ್ಕೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್. ಪ್ರದೀಪ್ ಮನವಿ ಪತ್ರ ಸ್ವೀಕರಿಸಿ ವಿಶಿಷ್ಟವಾದ ಬೃಹತ್ ಸಹಿ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
    ಈ ಸಂದರ್ಭದಲ್ಲಿ ಪ್ರಮುಖರಾದ ಛಲವಾದಿ ಸಮಾಜದ ಜಿಲ್ಲಾಧ್ಯಕ್ಷ ಸುರೇಶ್, ಎಎಪಿ ಪಕ್ಷದ ಎಚ್. ರವಿಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಡಿಎಸ್‌ಎಸ್ ಮುಖಂಡ ವಿ. ವಿನೋದ್ ಹಾಗು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಹಾಗು ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು.


ಭದ್ರಾವತಿಯಲ್ಲಿ ಪತ್ರಕರ್ತ ಅನಂತಕುಮಾರ್‌ರವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸಹಿ ಅಭಿಯಾನ ಯಶಸ್ವಿಯಾಗಿದ್ದು, ಸುಮಾರು ೮೦೦ ಮಂದಿ ಸಹಿ ಒಳಗೊಂಡ ಪತ್ರದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಯಿತು.

    ಫೆ.೮ರಂದು ಹೋರಾಟಕ್ಕೆ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಬೆಂಬಲ:
    ವಿಐಎಸ್‌ಎಲ್ ಹಾಗು ಎಂಪಿಎಂ ಕಾರ್ಖಾನೆಗಳ ಉಳಿವಿಗಾಗಿ ಮತ್ತು ಕಾರ್ಮಿಕರಿಗೆ ಬೆಂಬಲ ಸೂಚಿಸಿ ಫೆ.೮ರಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಲಿದ್ದಾರೆ.
    ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಕಾರ್ಖಾನೆ ಉಳಿಸಿಕೊಡುವ ಭರವಸೆ ನೀಡಿದ್ದಾರೆ. ಇದೀಗ ಡಿ.ಕೆ ಶಿವಕುಮಾರ್ ಆಗಮಿಸುತ್ತಿದ್ದು, ಹೋರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ಫೆ.೮ರಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಕಾರ್ಖಾನೆ ಸಮಸ್ಯೆ ಬಗೆಹರಿಸುವ ಸಂಬಂಧ ಸಭೆ ಏರ್ಪಡಿಸಲಾಗಿದೆ.


ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್

Sunday, February 5, 2023

ಗೌರಮ್ಮ ನಿಧನ

ಗೌರಮ್ಮ 
    ಭದ್ರಾವತಿ, ಫೆ. ೫: ನಗರದ ಜಿಂಕ್‌ಲೈನ್ ೨ನೇ ರಸ್ತೆ ನಿವಾಸಿ, ಪತ್ರಿಕಾವಿತರಕ ಶಿವಮೂರ್ತಿಯವರ ತಾಯಿ ಗೌರಮ್ಮ(೬೮) ಭಾನುವಾರ ನಿಧನ ಹೊಂದಿದರು.
    ಗೌರಮ್ಮ ಪುತ್ರ ಶಿವಮೂರ್ತಿ ಹಾಗು ಪುತ್ರಿ ಮತ್ತು ಸೊಸೆ, ಮೊಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ನಗರದ ಗಣ್ಯರು, ಪತ್ರಿಕಾವಿತರಕರು ಹಾಗು ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.