Friday, April 7, 2023

ವಿಐಎಸ್‌ಎಲ್ ನಿವೃತ್ತ ಕಾರ್ಮಿಕ, ಕ್ರೀಡಾಪಟು ರಾಮಣ್ಣ ಶೆಟ್ಟಿ ನಿಧನ

ರಾಮಣ್ಣ ಶೆಟ್ಟಿ 
    ಭದ್ರಾವತಿ, ಏ. ೭ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಕಾರ್ಮಿಕ, ಬಿಜೆಪಿ ಪಕ್ಷದ ಹಿರಿಯ ಕಾರ್ಯಕರ್ತ ರಾಮಣ್ಣ ಶೆಟ್ಟಿ(೭೨) ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದರು. ರಾಮಣ್ಣ ಶೆಟ್ಟಿ ಈ ಹಿಂದೆ ಬಿಜೆಪಿ ಪಕ್ಷದಲ್ಲಿ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಇವರು ಕ್ರೀಡಾಪಟುಗಳಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದರು. ಇವರ ಅಂತ್ಯಕ್ರಿಯೆ ಶುಕ್ರವಾರ ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಇವರ ನಿಧನಕ್ಕೆ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರು, ಕ್ರೀಡಾಪಟುಗಳು, ತಾಲೂಕು ಬಿಜೆಪಿ ಮಂಡಲ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಗಾಂಜಾ ಮಾರಾಟ : ೩ ಜನರ ಬಂಧನ

೭ ಸಾವಿರ ರು. ಮೌಲ್ಯದ ೧೯೫ ಗ್ರಾಂ. ಗಾಂಜಾ ವಶ

ಭದ್ರಾವತಿ ಹೊಳೆಹೊನ್ನೂರು ರಸ್ತೆಯ ಲಕ್ಷ್ಮೀ ಸಾಮಿಲ್ ಹಿಂಭಾಗದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ಹಳೇನಗರ ಠಾಣೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
    ಭದ್ರಾವತಿ, ಏ. ೭ : ನಗರದ ಹೊಳೆಹೊನ್ನೂರು ರಸ್ತೆಯ ಲಕ್ಷ್ಮೀ ಸಾಮಿಲ್ ಹಿಂಭಾಗದ ಖಾಲಿ ಜಾಗದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಅಡ್ಡೆಯೊಂದರ ಮೇಲೆ ಹಳೇನಗರ ಠಾಣೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.
    ೩ ಜನ ಅಪರಿಚಿತರು ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಗುರುವಾರ ಮಧ್ಯಾಹ್ನ ಠಾಣಾಧಿಕಾರಿ ಶರಣಪ್ಪ ನೇತೃತ್ವದ ತಂಡ ದಾಳಿ ನಡೆಸಿದ್ದು, ೩ ಜನರನ್ನು ಬಂಧಿಸಿ ಸುಮಾರು ೭ ಸಾವಿರ ರು. ಮೌಲ್ಯದ ೧೯೫ ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ರು.೬೯೦ ನಗದು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆ.೧೯ರಿಂದ ೨ ದಿನ ತೇರಾಕೋಟಿ ಶ್ರೀರಾಮನಾಮಜಪದ ಯಜ್ಞ

 ಭಕ್ತರಿಗೆ ಉಚಿತವಾಗಿ ಟಿಪ್ಪಣಿ ಪುಸ್ತಕ ವಿತರಣೆ

    ಭದ್ರಾವತಿ, ಏ. ೭ : ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಹಾಗೂ ಸದ್ಗುರು ಶ್ರೀ ಬ್ರಹ್ಮಾನಂದ ಮಹಾರಾಜರ ಅನುಗ್ರಹದಿಂದ ಶ್ರೀದತ್ತಾವಧೂತ ಗುರುಗಳ ಮಾರ್ಗದರ್ಶನದಲ್ಲಿ ನಗರದಲ್ಲಿ ಆ.೧೯ ಮತ್ತು ೨೦ರಂದು ತೇರಾಕೋಟಿ ಶ್ರೀರಾಮನಾಮಜಪದ ಯಜ್ಞ ಆಯೋಜಿಸಲಾಗಿದೆ.
    ಇದರ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ಭಕ್ತರು ಪ್ರತಿನಿತ್ಯ ಶ್ರೀರಾಮನಾಮ ಜಪ ಕೈಗೊಳ್ಳುವಂತೆ ಹಾಗು ತೇರಾಕೋಟಿ ಶ್ರೀರಾಮನಾಮಜಪದ ಯಜ್ಞದಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
    ಪ್ರತಿನಿತ್ಯ ಜಪಸಂಖ್ಯೆ ಬರೆದುಕೂಳ್ಳಲು ಟಿಪ್ಪಣಿ ಪುಸ್ತಕವನ್ನು ಮುದ್ರಿಸಲಾಗಿದ್ದು, ಇದನ್ನು ಭಕ್ತರಿಗೆ ಉಚಿತವಾಗಿ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ: ೮೬೬೦೬೦೦೮೨೭, ೯೬೩೨೬೨೩೩೦೩ ಅಥವಾ ೯೯೮೦೩೨೩೭೩೪ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ನಾಮ ಸಾಧಕ ಸಮಿತಿ ತಿಳಿಸಿದೆ.

Thursday, April 6, 2023

ಸುಣ್ಣದಹಳ್ಳಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪವಮಾನ ಹೋಮ, ರಥೋತ್ಸವ

ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಚಿತ್ರ ಪೂರ್ಣಿಮೆ ಪ್ರಯುಕ್ತ ಪವಮಾನ ಹೋಮ ಮತ್ತು ರಥೋತ್ಸವ ವಿಜೃಂಭಣೆಯಿಂದ ಜರಗಿತು.
    ಭದ್ರಾವತಿ, ಏ. ೬ : ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಚಿತ್ರ ಪೂರ್ಣಿಮೆ ಪ್ರಯುಕ್ತ ಪವಮಾನ ಹೋಮ ಮತ್ತು ರಥೋತ್ಸವ ವಿಜೃಂಭಣೆಯಿಂದ ಜರಗಿತು
.  ಬೆಳಗ್ಗೆ ೬ ಗಂಟೆಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ,  ೧೨ ಗಂಟೆಗೆ ರಥೋತ್ಸವ ಹಾಗೂ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಧಾರ್ಮಿಕ ಆಚರಣೆಗಳು ಸಂಕರ್ಷಣ ಧರ್ಮಸಂಸ್ಥೆ ನೇತೃತ್ವದಲ್ಲಿ ಜರುಗಿದವು  
    ವೇದಬ್ರಹ್ಮ ಶ್ರೀ ಗೋಪಾಲ ಆಚಾರ್, ಸಂಕರ್ಷಣ ಧರ್ಮಸಂಸ್ಥೆ ಅಧ್ಯಕ್ಷ ಯು.ಜಿ ಸುಬ್ರಹ್ಮಣ್ಯ, ರಾಘವೇಂದ್ರ, ವಾಸುದೇವಮೂರ್ತಿ, ಮಧುಸೂಧನ್, ಅನಂತರಾಮನ್, ರಮಾಕಾಂತ್, ವೆಂಕಟೇಶ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕೂಡ್ಲಿಗೆರೆ ಶ್ರೀ ಸುಬ್ರಮಣ್ಯ ಸ್ವಾಮಿ, ಭದ್ರಗಿರಿಯಲ್ಲಿ ವಿಜೃಂಭಣೆಯಿಂದ ಜರುಗಿದ ಕಾವಡಿ ಉತ್ಸವ

ಮೈನವಿರೇಳಿಸಿದ ಕಾವಡಿ ಹರಕೆ ಭಕ್ತಿ


ಪ್ರತಿವರ್ಷದಂತೆ ಈ ಬಾರಿ ಸಹ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಹಾಗು ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾವಡಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಭಕ್ತರ ಕಾವಡಿ ಹರಕೆ ಸಮರ್ಪಿಸುವ ಪರಿ ನೋಡುಗರ ಮೈನವಿರೇಳಿಸಿತು.
    ಭದ್ರಾವತಿ, ಏ. ೬ : ಪ್ರತಿವರ್ಷದಂತೆ ಈ ಬಾರಿ ಸಹ ತಾಲೂಕಿನ ಕೂಡ್ಲಿಗೆರೆ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಹಾಗು ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕಾವಡಿ ಉತ್ಸವ ವಿಜೃಂಭಣೆಯಿಂದ ಜರುಗಿತು.


    ಚನ್ನಗಿರಿ ರಸ್ತೆಯ ಕೂಡ್ಲಿಗೆರೆ ಗ್ರಾಮದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷ ಕಾವಡಿ ಉತ್ಸವ ವಿಜೃಂಭಣೆಯಿಂದ ಜರುಗುತ್ತಿದ್ದು, ಸಾವಿರಾರು ಭಕ್ತಾಧಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳುವುದು ವಿಶೇಷವಾಗಿದೆ. ಅದರಲ್ಲೂ ಕಾವಡಿ ಹರಕೆ ಹೊತ್ತ ಭಕ್ತರನ್ನು ನೋಡುವುದೇ ಮತ್ತೊಂದು ವಿಶೇಷವಾಗಿದೆ. ಕಾವಡಿ ಹರಕೆ ಹೊತ್ತ ಭಕ್ತರು ತಾಲೂಕಿನ ವಿವಿಧ ಮೂಲೆಗಳಿಂದ ಮಾತ್ರವಲ್ಲದೆ ಶಿವಮೊಗ್ಗ, ಚನ್ನಗಿರಿ ತಾಲೂಕುಗಳಿಂದಲೂ ಕಾಲ್ನಡಿಗೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದರು. ಕೆಲ ಭಕ್ತರು ಬಾಯಿ, ನಾಲಿಗೆಗೆ ಲೋಹದ ತ್ರಿಶೂಲ ಚುಚ್ಚಿಕೊಂಡು, ಮತ್ತೆ ಕೆಲವು ಭಕ್ತರು ಲೋಹದ ಕೊಕ್ಕೆಗಳನ್ನು ಬೆನ್ನಿಗೆ ಸಿಕ್ಕಿಸಿಕೊಂಡು ಬೃಹತ್ ಗಾತ್ರದ ಅಲಂಕೃತಗೊಂಡ ಕಲ್ಲು ಬಂಡಿಯ ತೇರುಗಳನ್ನು ಹಾಗು ಇನ್ನೂ ಕೆಲ ಭಕ್ತರು ಲೋಹದ ಕೊಕ್ಕೆಗಳನ್ನು ಬೆನ್ನು ಹಾಗು ಕಾಲುಗಳಿಗೆ ಚುಚ್ಚಿಕೊಂಡು ಕ್ರೇನ್‌ಗಳ ನೆರವಿನಿಂದ ಪಕ್ಷಿಗಳಂತೆ ಜೋತು ಬಿದ್ದು ಕಾವಡಿ ಹರಕೆ ಸಮರ್ಪಿಸುವ ಪರಿ ನೋಡುಗರ ಮೈನವಿರೇಳಿಸಿತು.


    ಇದಕ್ಕೂ ಮೊದಲು ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿರುವ ಭದ್ರಾ ಕಾಲುವೆ ಬಳಿ ಶ್ರೀ ಸುಬ್ರಮಣ್ಯ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಅಲಂಕೃತಗೊಳಿಸಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಭಕ್ತರಿಗೆ ಮಜ್ಜಿಗೆ, ಪಾನಕ ಹಾಗು ಪ್ರಸಾದ ವಿತರಣೆ ನಡೆಯಿತು.


    ಭದ್ರಗಿರಿಯಲ್ಲೂ ಹರಿದು ಬಂದ ಭಕ್ತ ಸಮೂಹ :
    ಶ್ರೀ ಕ್ಷೇತ್ರ ಭದ್ರಗಿರಿಯಲ್ಲೂ ಶಿವಮೊಗ್ಗ ಹಾಗು ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ತಾಲೂಕುಗಳಿಂದ ಭಕ್ತರು ಆಗಮಿಸಿದ್ದರು. ದೂರದ ಪ್ರದೇಶಗಳಿಂದ ಕಾಲ್ನಡಿಗೆಯಲ್ಲಿ ಆಗಮಿಸಿದ್ದ ಕಾವಡಿ ಹರಕೆ ಹೊತ್ತ ಭಕ್ತರು ಗಮನ ಸೆಳೆದರು. ಶ್ರೀ ಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು ಜರುಗಿದವು. ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಹಾಗು ಅನ್ನಸಂತರ್ಪಣೆ ನೆರವೇರಿತು.  





Wednesday, April 5, 2023

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪಥ ಸಂಚಲನ


ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಭದ್ರಾವತಿ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಉಪ ವಿಭಾಗ ಹಾಗು ಸಿಆರ್‌ಪಿಎಫ್ ವತಿಯಿಂದ ಪಥ ಸಂಚಲನ (ರೂಟ್ ಮಾರ್ಚ್) ನಡೆಸಲಾಯಿತು. 
    ಭದ್ರಾವತಿ, ಏ. ೫ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಉಪ ವಿಭಾಗ ಹಾಗು ಸಿಆರ್‌ಪಿಎಫ್ ವತಿಯಿಂದ ಪಥ ಸಂಚಲನ (ರೂಟ್ ಮಾರ್ಚ್) ನಡೆಸಲಾಯಿತು.
    ಉಪ ವಿಭಾಗದ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಮತ್ತು ಸಿಆರ್‌ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಶಿವಾರೆಡ್ಡಿ ನೇತೃತ್ವದಲ್ಲಿ ನಗರದ ರಂಗಪ್ಪ ವೃತ್ತದಿಂದ ಆರಂಭಗೊಂಡ ಪಥ ಸಂಚಲನ ಮಾಧವಾಚಾರ್ ವೃತ್ತ, ತರೀಕೆರೆ ರಸ್ತೆಯ ಗಾಂಧಿ ವೃತ್ತ, ಓಎಸ್‌ಎಂ ರಸ್ತೆ ಮುಖಾಂತರ ಹೊಸಮನೆ ಶಿವಾಜಿ ವೃತ್ತದವರೆಗೂ ನಡೆಯಿತು


    ನಗರ ಪೊಲೀಸ್ ವೃತ್ತ ನಿರೀಕ್ಷಕ ಶಾಂತಿನಾಥ್, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು,  ಸಿಆರ್‌ಪಿಎಫ್(ಕೇಂದ್ರ ಮೀಸಲು ಪೊಲೀಸ್ ಪಡೆ)ಅಧಿಕಾರಿ ಮತ್ತು ಸಿಬ್ಬಂಧಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ

 ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬುಧವಾರ ಭದ್ರಾವತಿಯಲ್ಲಿ ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ ನಗರದ ರಂಗಪ್ಪ ವೃತ್ತದಿಂದ ತಾಲೂಕು ಪಂಚಾಯಿತಿವರೆಗೂ ನಡೆಸಲಾಯಿತು.  
    ಭದ್ರಾವತಿ, ಏ. ೫ : ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬುಧವಾರ ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ ನಗರದ ರಂಗಪ್ಪ ವೃತ್ತದಿಂದ ತಾಲೂಕು ಪಂಚಾಯಿತಿವರೆಗೂ ನಡೆಸಲಾಯಿತು.
    ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗು ವಿಆರ್‌ಡಬ್ಲ್ಯೂ ಮತ್ತು ಎಂಆರ್‌ಡಬ್ಲ್ಯೂ, ಜಿಲ್ಲೆಯ ಎಲ್ಲಾ ಸ್ವಯಂ ಸೇವಾ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
    ತಹಸೀಲ್ದಾರ್ ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಸೇರಿದಂತೆ ಇನ್ನಿತರರು ಜಾಥಾದಲ್ಲಿ ಪಾಲ್ಗೊಂಡಿದ್ದರು.