Thursday, January 11, 2024

ಕಾಂಗ್ರೆಸ್ ಪಕ್ಷದಿಂದ ಚಂದ್ರೇಗೌಡ, ಬಾಲಕೃಷ್ಣ ಉಚ್ಛಾಟನೆ : ಎಸ್. ಕುಮಾರ್

ಟಿ. ಚಂದ್ರೇಗೌಡ
ಭದ್ರಾವತಿ: ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಮಾಜಿ ಅಧ್ಯಕ್ಷ ಟಿ. ಚಂದ್ರೇಗೌಡ ಹಾಗೂ ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ ಅವರನ್ನು ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಪಕ್ಷದಿಂದ ೬ ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.


ಬಾಲಕೃಷ್ಣ
    ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ನಗರ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಟಿ. ಚಂದ್ರೇಗೌಡ ಮತ್ತು ಬಾಲಕೃಷ್ಣ ಅವರು ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರ ಜೊತೆ ಸೇರಿ ಕಾಂಗ್ರೆಸ್ ಪಕ್ಷದ ವಿರುದ್ಧ, ಪಕ್ಷದ ನಾಯಕರ ವಿರುದ್ಧ, ಶಾಸಕರ ಮಕ್ಕಳ ಹಾಗೂ ಪಕ್ಷದ ಅಧ್ಯಕ್ಷರ ವಿರುದ್ಧ ಸಾರ್ವಜನಿಕ ಸಭೆಗಳಲ್ಲಿ ಮತ್ತು ಸ್ಥಳಗಳಲ್ಲಿ ಇಲ್ಲ ಸಲ್ಲದ ರೀತಿಯಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿರುವ ಹಿನ್ನಲೆಯಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡಿರುವುದಾಗಿ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಡಾ.ಎನ್.ಕೆ ಹೇಮಕೇಶವರವರಿಗೆ ಡಾಕ್ಟರೇಟ್ ಪದವಿ

ಡಾ. ಎನ್.ಕೆ ಹೇಮಕೇಶವ
    ಭದ್ರಾವತಿ: ಶಿವಮೊಗ್ಗ ಶೆಟ್ಟಿಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಡಾ. ಎನ್.ಕೆ ಹೇಮಕೇಶವ ಅವರು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
    ಹೇಮಕೇಶವರವರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರೊ. ಡಾ. ಆರ್.ಆರ್ ಬಿರಾದಾರ ಅವರ ಮಾರ್ಗದರ್ಶನದಲ್ಲಿ `ಪಬ್ಲಿಕ್ ಎಕ್ಸ್‌ಪೆಂಡಿಚರ್ ಆನ್ ಹೆಲ್ತ್‌ಕೇರ್ ಸರ್ವಿಸಸ್ ಇನ್ ಕರ್ನಾಟಕ ಎ ಸ್ಟಡಿ ಆಫ್ ಎನ್‌ಆರ್‌ಎಚ್‌ಎಂ' ವಿಷಯ ಕುರಿತು ಮಹಾಪ್ರಬಂಧ ಮಂಡಿಸಿದ್ದರು.
    ಹೇಮಕೇಶವರವರು ನಗರಸಭೆ ವಾರ್ಡ್ ನಂ.೯ರ ಭದ್ರಾಕಾಲೋನಿ ನಿವಾಸಿಗಳಾದ ದಿವಂಗತ ಕರಿಯಪ್ಪ ಮತ್ತು ಕಮಲಮ್ಮ ದಂಪತಿ ಸುಪುತ್ರರಾಗಿದ್ದಾರೆ.

ಅರಣ್ಯ ಇಲಾಖೆ ರಾಜ್ಯಮಟ್ಟದ ಕ್ರೀಡಾಕೂಟ : ಭದ್ರಾವತಿ ವಿಭಾಗದ ಕ್ರೀಡಾಪಟುಗಳಿಗೆ ಪದಕ

ಗುಲ್ಬರ್ಗದಲ್ಲಿ ನಡೆದ ಅರಣ್ಯ ಇಲಾಖೆಯ ೨೬ನೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭದ್ರಾವತಿ ಅರಣ್ಯ ವಿಭಾಗದ ಕ್ರೀಡಾಪಟುಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ: ಗುಲ್ಬರ್ಗದಲ್ಲಿ ನಡೆದ ಅರಣ್ಯ ಇಲಾಖೆಯ ೨೬ನೇ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭದ್ರಾವತಿ ಅರಣ್ಯ ವಿಭಾಗದ ಕ್ರೀಡಾಪಟುಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಎಸ್. ಭಾಸ್ಕರ್,  ಮಾಲತೇಶ್ ಸೂರ್ಯವಂಶಿ, ಕೆ.ವಿ ಪ್ರತಾಪ್ ಮತ್ತು ಆರ್. ರಂಗಸ್ವಾಮಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಈಜು ಸ್ಪರ್ಧೆಯಲ್ಲಿ ಮಡಿವಾಳಪ್ಪ ಪ್ರಥಮ, ಜಗದೀಶ್ ದ್ವಿತೀಯ ಮತ್ತು ಸಿ. ನಾಗೇಂದ್ರ ತೃತೀಯ ಸ್ಥಾನ ಹಾಗು ಓಟದ ಸ್ಪರ್ಧೆಯಲ್ಲಿ ಸರೋಜಮ್ಮ ಪ್ರಥಮ ಸ್ಥಾನ ಹಾಗು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಸದಾಶಿವ ದ್ವಿತೀಯ ಸ್ಥಾನದೊಂದಿಗೆ ಒಟ್ಟು ೬ ಚಿನ್ನ, ೨ ಬೆಳ್ಳಿ ಹಾಗು ೧ ಕಂಚಿನ ಪದಕ ಪಡೆದುಕೊಂಡಿದ್ದಾರೆ.  
    ಈ ಕ್ರೀಡಾಪಟುಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಹಾಗು ವಲಯ ಅರಣ್ಯಾಧಿಕಾರಿ ದಿನೇಶ್ ಕುಮಾರ್ ಅಭಿನಂದಿಸಿ ಪ್ರಶಂಸಿಸಿದ್ದಾರೆ.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂತರಾಜ್

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗುರುವಾರ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ಅವರ ಸಮ್ಮುಖದಲ್ಲಿ ನೂತನ ಅಧ್ಯಕ್ಷ ಕಾಂತರಾಜ್ ಅವರನ್ನು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಸೇರಿದಂತೆ ಸದಸ್ಯರು ಅಭಿನಂದಿಸಿದರು.
    ಭದ್ರಾವತಿ: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಾರ್ಡ್ ನಂ. ೨೮ರ ಸದಸ್ಯ ಕಾಂತರಾಜ್ ಗುರುವಾರ ಅಧಿಕಾರ ಸ್ವೀಕರಿಸಿದರು.
    ನಗರಸಭೆ ಸಭಾಂಗಣದಲ್ಲಿ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ ಅವರ ಸಮ್ಮುಖದಲ್ಲಿ ನೂತನ ಅಧ್ಯಕ್ಷ ಕಾಂತರಾಜ್ ಅವರನ್ನು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಅಭಿನಂದಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಕಾಂತರಾಜ್, ಉತ್ತಮವಾಗಿ ಕಾರ್ಯನಿರ್ವಹಿಸಲು ಎಲ್ಲಾ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಹಾಗು ಪೌರಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರು ಸಹಕಾರ ನೀಡುವಂತೆ ಮನವಿ ಮಾಡಿದರು.
    ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಹಿರಿಯ ಸದಸ್ಯ ಬಿ.ಟಿ.ನಾಗರಾಜ್ ಮಾತನಾಡಿ, ನಗರಸಭೆ ಕೆಲಸಗಳು ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವುದರಿಂದ ಕಳಪೆ ಕಾಮಗಾರಿ ತಡೆಯುವುದು ನಮ್ಮ ಜವಾಬ್ದಾರಿ. ಗುಣಮಟ್ಟದ ಕೆಲಸಗಳು ನಡೆದಾಗ ಜನಪ್ರತಿನಿಧಿಗಳಿಗೆ ಜನರು ತಾವಾಗಿಯೇ ಗೌರವನೀಡುತ್ತಾರೆ. ಈ ನಿಟ್ಟಿನಲ್ಲಿ ನಾವು ಪ್ರಯತ್ನಿಸೋಣ ಎಂದರು.
    ಮಾಜಿ ಉಪಾಧ್ಯಕ್ಷ ಚನ್ನಪ್ಪ ಮಾತನಾಡಿ, ಅಭಿವೃದ್ಧಿ ಕಾರ್ಯಗಳಿಗೆ ಪಕ್ಷತೀತವಾಗಿ ಎಲ್ಲಾ ಸದಸ್ಯರ ಬೆಂಬಲವಿದೆ. ಈ ಹಿನ್ನಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ, ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.
    ಸದಸ್ಯರಾದ ಮಣಿ, ಜಾರ್ಜ್, ಅನಿತಾ ಮಲ್ಲೇಶ್, ಗೀತ ರಾಜ್‌ಕುಮಾರ್, ಆರ್. ಶ್ರೇಯಸ್(ಚಿಟ್ಟೆ), ಬಿ.ಎಂ ಮಂಜುನಾಥ್, ಪ್ರೇಮ ಬದರಿ ನಾರಾಯಣ್, ಲತಾ ಚಂದ್ರಶೇಖರ್  ಸೇರಿದಂತೆ ಹಲವರು ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೂತನ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.
    ಕಾಂಗ್ರೆಸ್ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಹೆಚ್ಚಿನ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಶಾಸಕ ಬಿ.ಕೆ ಸಂಗಮೇಶ್ವರ್ ಸಲಹೆಯಂತೆ ಸದಸ್ಯರು ಅಧಿಕಾರ ಹಂಚಿಕೆ ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ. ಮೀಸಲಾತಿ ಮೊದಲ ೩೦ ತಿಂಗಳ ಅವಧಿಯಲ್ಲಿ ಇದುವರೆಗೂ ಕೆ. ಸುದೀಪ್‌ಕುಮಾರ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಇದೀಗ ಕಾಂತರಾಜ್ ಅವರಿಗೆ ಬಿಟ್ಟು ಕೊಡಲಾಗಿದೆ.
    ಇದೆ ರೀತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೂ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ೩ ಮಂದಿ ಸದಸ್ಯರು ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದು, ಜ.೨೨ರಂದು ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಉಪಾಧ್ಯಕ್ಷರಾಗಿ ಈಗಾಗಲೇ ಒಬ್ಬ ಸದಸ್ಯರು ಅಧಿಕಾರ ಅನುಭವಿಸಿದ್ದು, ಪ್ರಸ್ತುತ ಉಪಾಧ್ಯಕ್ಷರ ಅವಧಿ ಇನ್ನೂ ೩ ತಿಂಗಳವರೆಗೆ ಮುಂದುವರೆಯಲಿದೆ ಎನ್ನಲಾಗಿದೆ.

Wednesday, January 10, 2024

ಪ್ರೊ.ಎಸ್.ಎಸ್ ವಿಜಯರಿಗೆ `ಶಕುಂತಲ ಜಯದೇವ ಶರಣ ಪ್ರಶಸ್ತಿ' ಪ್ರದಾನ

ವಚನ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಭದ್ರಾವತಿ ನಗರದ ನಿವಾಸಿ, ನಿವೃತ್ತ ಪ್ರಾಧ್ಯಾಪಕಿ, ಸಾಹಿತಿ ಪ್ರೊ. ಎಸ್.ಎಸ್ ವಿಜಯ (ಡಾ. ವಿಜಯದೇವಿ) ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ವತಿಯಿಂದ ಜ.೭ರ ಭಾನುವಾರ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆ ಆವರಣ, ಶ್ರೀ ರಾಜೇಂದ್ರ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ `ಶಕುಂತಲ ಜಯದೇವ ಶರಣ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಲಾಯಿತು.
    ಭದ್ರಾವತಿ: ವಚನ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನಗರದ ನಿವಾಸಿ, ನಿವೃತ್ತ ಪ್ರಾಧ್ಯಾಪಕಿ, ಸಾಹಿತಿ ಪ್ರೊ. ಎಸ್.ಎಸ್ ವಿಜಯ (ಡಾ. ವಿಜಯದೇವಿ) ಅವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ವತಿಯಿಂದ ಜ.೭ರ ಭಾನುವಾರ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆ ಆವರಣ, ಶ್ರೀ ರಾಜೇಂದ್ರ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ `ಶಕುಂತಲ ಜಯದೇವ ಶರಣ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಲಾಯಿತು.
    ಶ್ರೀ ಸುತ್ತೂರು ಕ್ಷೇತ್ರ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು.  ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ ಲೋಕನಾಥ್ ಉದ್ಘಾಟಿಸಿದರು.  ಅಖಿಲ ಭಾರತ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾಸೋಹಿ ಶಕುಂತಲ ಜಯದೇವ, ಪರಿಷತ್ ಜಿಲ್ಲಾ ಅಧ್ಯಕ್ಷ ಸದಾನಂದಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಸ್ತೆ ಸುರಕ್ಷಾ ಸಪ್ತಾಹ : ಬೈಕ್ ಜಾಥಾ ಮೂಲಕ ಜಾಗೃತಿ

ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಭದ್ರಾವತಿ ಪೊಲೀಸ್ ಉಪವಿಭಾಗ, ಸಂಚಾರಿ ಪೊಲೀಸ್ ಠಾಣೆ ಹಾಗು ಸರ್.ಎಂ ವಿಶ್ವೇಶ್ವರಯ್ಯ ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದ ಸಹಯೋಗದೊಂದಿಗೆ ಬುಧವಾರ `ಹೆಲ್ಮೆಟ್ ಧರಿಸಿ, ಜೀವ ಉಳಿಸಿ', `ನಮ್ಮ ನಡೆ ಸುರಕ್ಷಾ ಚಾಲನೆ ಕಡೆ' ಎಂಬ ಧ್ಯೇಯ ವಾಕ್ಯದೊಂದಿಗೆ ಬೈಕ್ ಜಾಥಾ ನಡೆಸಲಾಯಿತು.  
    ಭದ್ರಾವತಿ: ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಪೊಲೀಸ್ ಉಪವಿಭಾಗ, ಸಂಚಾರಿ ಪೊಲೀಸ್ ಠಾಣೆ ಹಾಗು ಸರ್.ಎಂ ವಿಶ್ವೇಶ್ವರಯ್ಯ ದ್ವಿಚಕ್ರ ವಾಹನ ದುರಸ್ತಿಗಾರರ ಸಂಘದ ಸಹಯೋಗದೊಂದಿಗೆ ಬುಧವಾರ `ಹೆಲ್ಮೆಟ್ ಧರಿಸಿ, ಜೀವ ಉಳಿಸಿ', `ನಮ್ಮ ನಡೆ ಸುರಕ್ಷಾ ಚಾಲನೆ ಕಡೆ' ಎಂಬ ಧ್ಯೇಯ ವಾಕ್ಯದೊಂದಿಗೆ ಬೈಕ್ ಜಾಥಾ ನಡೆಸಲಾಯಿತು.  
    ನಗರದ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತದಲ್ಲಿ ಪೊಲೀಸ್ ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಜಾಥಾ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ಎನ್‌ಎಂಸಿ ರಸ್ತೆ, ಸೀಗೆಬಾಗಿವರೆಗೂ ಸಾಗಿ ಸಿ.ಎನ್ ರಸ್ತೆ ಮೂಲಕ ರಂಗಪ್ಪ ವೃತ್ತ ತಲುಪಿ ಅಂತ್ಯಗೊಂಡಿತು.


ಭದ್ರಾವತಿಯಲ್ಲಿ ಬುಧವಾರ ಹೆಲ್ಮೆಟ್ ಧರಿಸುವ ಬಗ್ಗೆ ಹಾಗು ಸುರಕ್ಷಾ ಚಾಲನೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಸರ್.ಎಂ ವಿಶ್ವೇಶ್ವರಯ್ಯ ದಿಚಕ್ರ ವಾಹನ ದುರಸ್ತಿಗಾರರ ಸಂಘಕ್ಕೆ ಇಲಾಖೆ ವತಿಯಿಂದ ಅಭಿನಂದಿಸಿ ಸಂಘದ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.
  ಹೆಲ್ಮೆಟ್ ಧರಿಸುವ ಬಗ್ಗೆ ಹಾಗು ಸುರಕ್ಷಾ ಚಾಲನೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಸರ್.ಎಂ ವಿಶ್ವೇಶ್ವರಯ್ಯ ದಿಚಕ್ರ ವಾಹನ ದುರಸ್ತಿಗಾರರ ಸಂಘಕ್ಕೆ ಇಲಾಖೆ ವತಿಯಿಂದ ಅಭಿನಂದಿಸಿ ಸಂಘದ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲ ಸೇರಿದಂತೆ ವಿವಿಧ ಠಾಣೆಗಳ ಠಾಣಾಧಿಕಾರಿಗಳು, ಸಂಚಾರಿ ಪೊಲೀಸರು, ದ್ವಿಚಕ್ರ ವಾಹನ ದುರಸ್ತಿಗಾರರು ಜಾಥಾದಲ್ಲಿ ಪಾಲ್ಗೊಂಡಿದ್ದರು.
    ರಸ್ತೆ ಸುರಕ್ಷಾ ಸಪ್ತಾಹ ಅಂಗವಾಗಿ ಈಗಾಗಲೇ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಜಾಥಾ, ಜಾನಪದ ಕಲಾವಿದರಿಂದ ಬೀದಿ ನಾಟಕ ಸೇರಿದಂತೆ ಇಲಾಖೆ ವತಿಯಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ೧ ವರ್ಷ : ಜ.೧೬ ಕರಾಳ ದಿನ, ೧೮ರಂದು ಬೈಕ್ ರ್‍ಯಾಲಿ

ಶಾಶ್ವತವಾಗಿ ಕಾರ್ಖಾನೆ ಮುಚ್ಚುವ ಆದೇಶ ಕೇಂದ್ರ ಸರ್ಕಾರ ಹಿಂಪಡೆಯಲಿ : ಪತ್ರಿಕಾಗೋಷ್ಠಿಯಲ್ಲಿ ಆಗ್ರಹ

ಭದ್ರಾವತಿಯಲ್ಲಿ ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ವತಿಯಿಂದ ಬುಧವಾರ ಪತ್ರಿಕಾಗೋಷ್ಠಿ ನಡೆಸಲಾಯಿತು.
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ೧೬ ಜನವರಿ ೨೦೨೩ರಂದು ಉಕ್ಕು ಪ್ರಾಧಿಕಾರ ತೀರ್ಮಾನ ತೆಗೆದುಕೊಂಡಿದ್ದು, ಇದನ್ನು ವಿರೋಧಿಸಿ ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ವತಿಯಿಂದ ಅಂದಿನಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಹೋರಾಟ ೧ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಜ.೧೬ರಂದು `ಭದ್ರಾವತಿಯ ಕರಾಳ ದಿನ' ಆಚರಿಸಲಾಗುತ್ತಿದೆ ಎಂದು ಯೂನಿಯನ್ ಅಧ್ಯಕ್ಸ ಎಚ್.ಜಿ ಸುರೇಶ್ ತಿಳಿಸಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆ ಮುಂಭಾಗ ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯೊಬ್ಬರು ಸಹಕಾರ ನೀಡಿದ್ದಾರೆ. ಮುಂದೆ ಸಹ ಇದೆ ರೀತಿ ಸಹಕಾರ ನಿರೀಕ್ಷಿಸಲಾಗುತ್ತಿದೆ. ಹೋರಾಟವನ್ನು ಪಕ್ಷಾತೀತವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದು, ಕೇಂದ್ರ ಸರ್ಕಾರ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.
    ಜ.೧೬ರಂದು `ಭದ್ರಾವತಿಯ ಕರಾಳ ದಿನ' ಆಚರಿಸಲಾಗುತ್ತಿದ್ದು, ಅಂದು ಸಂಜೆ ೫ ಗಂಟೆಗೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಪ್ರಮುಖ ರಸ್ತೆಗಳು ಸೇರಿದಂತೆ ನಗರಾದ್ಯಂತ ಪಂಜಿನ ಮೆರವಣಿಗೆ ನೆಡೆಸಲಾಗುವುದು. ಜ.೧೮ರಂದು ಮಧ್ಯಾಹ್ನ ೧ ಗಂಟೆಗೆ ಕಾರ್ಖಾನೆ ಮುಂಭಾಗದಿಂದ ಶಿವಮೊಗ್ಗದಲ್ಲಿರುವ ಸಂಸದ ಬಿ.ವೈ ರಾಘವೇಂದ್ರ ಅವರ ನಿವಾಸದವರೆಗೂ ಬೈಕ್ ರ್‍ಯಾಲಿ ನಡೆಸಲಾಗುವುದು. ನಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ವಿವಿಧ ಸಂಘ-ಸಂಸ್ಥೆಗಳು, ಮಹಿಳೆಯರು, ರೈತರು, ಕಾರ್ಮಿಕರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
    ಯೂನಿಯನ್ ಪ್ರಧಾನ ಕಾರ್ಯದರ್ಶಿ ಪಿ. ರಾಕೇಶ್, ಉಪಾಧ್ಯಕ್ಷ ವಿನೋದ್‌ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಗುಣಶೇಖರ್, ವಿನಯ್ ಕುಮಾರ್, ಖಜಾಂಚಿ ಜಿ. ಆನಂದ್, ಎಐಟಿಯುಸಿ ಸಂಘಟನೆ ಅಧ್ಯಕ್ಷ ಕುಮಾರಸ್ವಾಮಿ, ಐಸಾಕ್ ಲಿಂಕನ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
    ಮುಖ್ಯಮಂತ್ರಿಗೆ ಬಹಿರಂಗ ಮನವಿ ಪತ್ರ:
    ವಿಧಾನಸಭಾ ಕ್ಷೇತ್ರದ ೨೦೧೮ ಮತ್ತು ೨೩ರ ಪರಾಜಿತ ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಬಹಿರಂಗ ಮನವಿ ಪತ್ರ ಬರೆದಿದ್ದಾರೆ.
    ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯರವರು ಜ. ೧೨ರ ಶುಕ್ರವಾರ ಶಿವಮೊಗ್ಗ ನಗರಕ್ಕೆ ಸಚಿವ ಸಂಪುಟದ ಸಹೋದ್ಯೋಗಿಳೊಂದಿಗೆ ಆಗಮಿಸಿ ೫ನೇ ಗ್ಯಾರಂಟಿ ಯೋಜನೆಯಾದ `ಯುವನಿಧಿ'ಗೆ ಚಾಲನೆ ನೀಡುವ ಮೂಲಕ ವಿದ್ಯಾವಂತ ನಿರುದ್ಯೋಗಿಗಳಿಗೆ ನೆರವಾಗುತ್ತಿರುವುದು ಸ್ವಾಗತಾರ್ಹವಾಗಿದೆ.
    ದೇಶದ ಕೈಗಾರಿಕಾ ಭೂ ಪುಟದಲ್ಲಿ ಮಹತ್ವದ ಸ್ಥಾನ ಪಡೆದು ಗಮನ ಸೆಳೆದಿದ್ದ ಹಾಗೂ ಜಿಲ್ಲೆಯ ಜನರ ಜೀವನಾಡಿಯಾಗಿದ್ದ ಪ್ರತಿಷ್ಠಿತ ವಿಐಎಸ್‌ಎಲ್ ಮತ್ತು ಎಂಪಿಎಂ ಅವಳಿ ಕಾರ್ಖಾನೆಗಳ ಅಳಿವಿನಿಂದಾಗಿ ಕ್ಷೇತ್ರದಲ್ಲಿ ಆರ್ಥಿಕ ಚಟುವಟಿಕೆ ಸಂಪೂರ್ಣ ಕುಂಠಿತ ಗೊಂಡಿದ್ದು, ವಿದ್ಯಾವಂತ ಯುವಕರು ಹೊಟ್ಟೆ ಪಾಡಿಗಾಗಿ ಬೇರೆಡೆ ಗುಳೆಹೋಗುವ, ಎಷ್ಟೋ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡುವಂಥಹ ಸ್ಥಿತಿ ನಿರ್ಮಾಣವಾಗಿದೆ.


ವಿಧಾನಸಭಾ ಕ್ಷೇತ್ರದ ೨೦೧೮ ಮತ್ತು ೨೩ರ ಪರಾಜಿತ ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ
    ಸಿದ್ದರಾಮಯ್ಯರವರು ಮೂಲತಃ ಮೈಸೂರು ಪ್ರಾಂತ್ಯದವರೇ ಆಗಿದ್ದು, ಯದುವಂಶಜರಿಂದ ಸ್ಥಾಪನೆಯಾದ ಅವಳಿ ಕಾರ್ಖಾನೆಗಳ ದು:ಸ್ಥಿತಿ ನಿಜಕ್ಕೂ ನೋವಿನ ಸಂಗತಿಯಾಗಿದೆ. ಪ್ರತಿ ಬಾರಿ ವಿಧಾನಸಭೆ ಹಾಗು ಲೋಕಸಭೆ ಚುನಾವಣೆಗಳ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸುಳ್ಳು ಭರವಸೆ ನೀಡಿ ಮತದಾರರನ್ನು ವಂಚಿಸಿ ಅಧಿಕಾರದ ಗದ್ದುಗೆ ಹಿಡಿಯುವುದನ್ನು ಕರಗತಮಾಡಿಕೊಂಡಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ.
    ಎಂಪಿಎಂ ಕಾರ್ಖಾನೆ ಸಂಪೂರ್ಣವಾಗಿ ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿದ್ದು, ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಸ್ವಯಂ ನಿವೃತ್ತಿ ಘೋಷಣೆಯಾಗಿ ಕಾರ್ಖಾನೆ ಬಾಗಿಲು ಮುಚ್ಚುವ ಪರಿಸ್ಥಿತಿ ನಿರ್ಮಾಣವಾದದ್ದು ನೋವಿನ ಸಂಗತಿಯಾಗಿರುತ್ತದೆ. ಇದೀಗ ತಾವು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಗೆ ಆಗಮಿಸುತ್ತಿದ್ದು, ಎಂಪಿಎಂ ಕಾರ್ಖಾನೆ ಕಾಯಕಲ್ಪಕ್ಕೆ ಮುಂದಾಗುವಂತೆ ಜನತೆಯ ಪರವಾಗಿ ಒತ್ತಾಯಿಸುತ್ತೇನೆ.
    ಶತಮಾನ ಪೂರೈಸಿರುವ ವಿಐಎಸ್‌ಎಲ್ ಪರಿಸ್ಥಿತಿ ಸಹ ಶೋಚನೀಯವಾಗಿದ್ದು, ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಕಾರ್ಖಾನೆಯನ್ನು ರಾಜ್ಯ ಸರ್ಕಾರ ಕೇವಲ ಒಂದು ರೂಪಾಯಿ ಮುಖಬೆಲೆಗೆ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ್ದು, ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿಯೇ ಬಂಡವಾಳ
    ತೊಡಗಿಸಿ ಪುನರುಜೀವನ ಗೊಳಿಸುವ ಬಗ್ಗೆ ಕೇಂದ್ರದ ಮೇಲೆ ಒತ್ತಡ ತರುವಂತೆ ಅಥವಾ ವಾಪಾಸ್ಸು ಪಡೆದು ರಾಜ್ಯ ಸರ್ಕಾರದ ಸ್ವಾಮ್ಯದಲ್ಲಿಯೇ ಕಾರ್ಖಾನೆಯನ್ನು ಪೂರ್ಣ ಪ್ರಮಾಣದಲ್ಲಿ ಮುಂದುವರೆಸುವ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಜಾನ್‌ಬೆನ್ನಿ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.