Sunday, February 23, 2025

ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ

ಸಮುದಾಯದವರ ಏಳಿಗೆಗೆ ಬದ್ಧ, ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದ : ಬಿ.ವೈ ರಾಘವೇಂದ್ರ 

ಭದ್ರಾವತಿ ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದ ಸಂಸದ ಬಿ.ವೈ ರಾಘವೇಂದ್ರರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ: ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು. 
     ಸಮಾವೇಶದಲ್ಲಿ ಮೊದಲಿಯಾರ್ ಸಮುದಾಯದವರು ಇನ್ನೂ ಹೆಚ್ಚು ಕ್ರಿಯಾಶೀಲರಾಗುವ ಮೂಲಕ ಸಂಘಟನೆಗೆ ಒತ್ತು ನೀಡಬೇಕು. ಸಮುದಾಯದವರ ಹಿತರಕ್ಷಣೆಗೆ ಬದ್ಧರಾಗಿ ಪರಿಣಾಮಕಾರಿ ಕಾರ್ಯ ಚಟುವಟಿಕೆಗಳನ್ನು ರೂಪಿಸಿಕೊಳ್ಳುವಂತೆ ಕರೆ ನೀಡಲಾಯಿತು. 
    ಸಮಾವೇಶದಲ್ಲಿ ಬಿ.ವೈ ರಾಘವೇಂದ್ರರವರು ತಾಲೂಕು ಸಂಘದ ನೂತನ ಕಛೇರಿ ಉದ್ಘಾಟಿಸುವ ಜೊತೆಗೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ, ಮೊದಲಿಯಾರ್ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಈ ಸಮುದಾಯದವರ ಏಳಿಗೆಗೆ ಬದ್ಧನಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಿದ್ದೇನೆ ಎಂದರು.  
    ಸಮಾವೇಶಕ್ಕೂ ಮೊದಲು ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ಅಧ್ಯಕ್ಷ, ಹಿರಿಯ ಪತ್ರಕರ್ತ ಕಣ್ಣಪ್ಪ ದ್ವಜಾರೋಹಣ ನೆರವೇರಿಸಿದರು. ಸಮಾವೇಶದಲ್ಲಿ ಪಾಂಡಿಚೆರಿ, ತಮಿಳುನಾಡು, ಹೈದರಬಾದ್ ಮತ್ತು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.  ತಾಲೂಕು ಸಂಘದ ಅಧ್ಯಕ್ಷ ಕೆ. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಬಿ.ವೈ ರಾಘವೇಂದ್ರರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಐಎಂಪಿಎ ಸಂಸ್ಥಾಪಕ ಚೆವಲಿಯಾರ್ ಡಾ. ಆರ್. ಅರುಣಾಚಲ, ಎಐಎಟಿವಿಎಸ್ ಕಾರ್ಯದರ್ಶಿ ಗೋಪಾಲಮಣಿ, ಎನ್. ಮಂಜುನಾಥ್, ಪ್ರಮುಖರಾದ ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ತಾಲೂಕು ಸಂಘದ ಉಪಾಧ್ಯಕ್ಷ ಎ. ಸುಬ್ರಮಣಿ,  ಕಾರ್ಯದರ್ಶಿ ವಿ. ಶಿವಕುಮಾರ್(ಪೆಟ್ರೋಲ್ ಬಂಕ್), ಖಜಾಂಚಿ ಜಿ. ಸುರೇಶ್ ಕುಮಾರ್, ಸಹ ಕಾರ್ಯದರ್ಶಿ ಎನ್. ರವಿಚಂದ್ರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

ಭದ್ರಾವತಿ ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶದಲ್ಲಿ ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಗಣ್ಯರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. 

ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಅಪಹರಣ


    ಭದ್ರಾವತಿ : ಪತಿ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಬೈಪಾಸ್ ರಸ್ತೆ ಬಳಿ ನಡೆದಿದೆ. 
    ಕಳೆದ ೨ ದಿನಗಳ ಹಿಂದೆ ಸಿರಿಯೂರು ಗ್ರಾಮದ ನಿವಾಸಿ ಹನುಮಂತೇಗೌಡರವರು ತಮ್ಮ ಪತ್ನಿ ಭಾಗ್ಯಮ್ಮರ ಜೊತೆ ರಾತ್ರಿ ೮ ಗಂಟೆ ಸಮಯದಲ್ಲಿ ನ್ಯೂಕಾಲೋನಿಯಲ್ಲಿರುವ ಸಂಬಂಧಿಕರ ಮಗಳ ಮನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಪುನಃ ಹಿಂದಿರುಗಿ ತಮ್ಮ ಗ್ರಾಮಕ್ಕೆ ತೆರಳುವಾಗ ರಾತ್ರಿ ೯.೪೫ರ ಸಮಯದಲ್ಲಿ ಜಿಂಕ್‌ಲೈನ್, ಶ್ರೀ ಮಾದೇಶ್ವರ ದೇವಸ್ಥಾನ ರಸ್ತೆ ಮೂಲಕ ಬೈಪಾಸ್ ಬಳಿ ಬಂದಾಗ ವಾಹನ ದಟ್ಟಣೆ ಅಧಿಕವಾದ ಹಿನ್ನಲೆಯಲ್ಲಿ ಹನುಮಂತೇಗೌಡರು ತಮ್ಮ ದ್ವಿಚಕ್ರ ವಾಹನ ಚಾಲನೆ ನಿಧಾನಗೊಳಿಸಿದ್ದಾರೆ. ಇದೆ ಸಂದರ್ಭದಲ್ಲಿ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ವಾಹನದಲ್ಲಿ ಬರುತ್ತಿದ್ದ ಇಬ್ಬರು ಅಪರಿಚಿತರು ಭಾಗ್ಯಮ್ಮರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. 
    ಸುಮಾರು ೩೫ ಗ್ರಾಂ ತೂಕದ ೨ ಎಳೆಯ, ೨ ತಾಳಿ ಇರುವ ಸುಮಾರು ೧.೭೫ ಲಕ್ಷ ರು. ಮೌಲ್ಯದ ಮಾಂಗಲ್ಯ ಸರ ಅಪಹರಿಸಲಾಗಿದ್ದು, ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಅಪರಿಚಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ವಿದ್ಯಾರ್ಥಿಗಳಿಗೆ ಸಹನೆ, ಉತ್ತಮ ನಡವಳಿಕೆ ಮುಖ್ಯ : ಪ್ರೊ. ಆರ್. ಹಿರೇಮಣಿ ನಾಯ್ಕ್

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದಿಂದ ಏರ್ಪಡಿಸಲಾಗಿದ್ದ `ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವೇದಿಕೆ' ಉದ್ಘಾಟನೆ ಕಾರ್ಯಕ್ರಮ ಕುವೆಂಪು ವಿಶ್ವವಿದ್ಯಾಲಯದ ಎಂ.ಬಿ.ಎ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗು ವಾಣಿಜ್ಯ ನಿಕಾಯದ ಡೀನ್ ಪ್ರೊ. ಆರ್. ಹಿರೇಮಣಿ ನಾಯ್ಕ್ ನೆರವೇರಿಸಿದರು. 
    ಭದ್ರಾವತಿ : ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಸಹನೆ, ಶಿಕ್ಷಕರೊಂದಿಗೆ ಉತ್ತಮ ನಡವಳಿಕೆ ಹೊಂದಿರಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಎಂ.ಬಿ.ಎ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗು ವಾಣಿಜ್ಯ ನಿಕಾಯದ ಡೀನ್ ಪ್ರೊ. ಆರ್. ಹಿರೇಮಣಿ ನಾಯ್ಕ್ ಹೇಳಿದರು. 
    ಅವರು ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದಿಂದ ಏರ್ಪಡಿಸಲಾಗಿದ್ದ `ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವೇದಿಕೆ' ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. 
    ವಿದ್ಯಾರ್ಥಿಗಳಿಗೆ ಶಿಸ್ತು ಬಹಳ ಮುಖ್ಯ. ಪ್ರಸ್ತುತ ಕಾರ್ಪೋರೇಟ್ ಕಂಪನಿಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳು ರೂಪುಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಲಹೆ, ಸಹಕಾರ ಪಡೆದುಕೊಳ್ಳಬೇಕು. ಕೃತಕ ಬುದ್ದಿಮತ್ತೆ (ಎ.ಐ) ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದ್ದು, ಆಧುನಿಕತೆಯಲ್ಲಿ ಇದರ ಪ್ರಭಾವ ಹೆಚ್ಚಿನದ್ದಾಗಿದೆ ಎಂದರು. 
    ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಎಂ. ಮಹಮದ್ ನಜೀಬ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್. ಮಂಜಪ್ಪ, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಟಿ.ಜಿ ಉಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಎಸ್. ಶಿಲ್ಪ ಮತ್ತು ಪ್ರತೀಕ್ಷಾ ಪ್ರಾರ್ಥಿಸಿ, ಆರ್. ವೆಂಕಟೇಶ್ ಸ್ವಾಗತಿಸಿದರು. ವೇದಿಕೆ ಸಂಯೋಜಕ ವಿ.ಬಿ ಚಿರಂಜೀವಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಎಚ್.ಎನ್ ಸುಷ್ಮ ಅತಿಥಿ ಪರಿಚಯ ನೆರವೇರಿಸಿದರು. ಕೆ. ಶಂಕರ್ ಯಾದವ್ ವಂದಿಸಿದರು. ಡಾ. ಬಿ.ಜಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. 

Saturday, February 22, 2025

ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಕನ್ನಡ ಕಲಿಯಿರಿ : ಪರುಸಪ್ಪ ಕುರುಬರ

ಭದ್ರಾವತಿಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಈ ಬಾರಿ ಸಹ ಹಳೇನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾತೃಭಾಷೆ ದಿನಾಚರಣೆ ತಹಸೀಲ್ದಾರ್ ಪರುಸಪ್ಪ ಕುರುಬರ ಉದ್ಘಾಟಿಸಿದರು.  
    ಭದ್ರಾವತಿ: ಕಡ್ಡಾಯವಾಗಿ ಎಲ್ಲಾ ಕಛೇರಿಗಳಲ್ಲೂ ಕನ್ನಡ ಭಾಷೆ  ಬಳಸಬೇಕು. ಎಲ್ಲರೂ ಕನ್ನಡದಲ್ಲಿ ಮಾತನಾಡುವುದನ್ನು ಕಲಿಯಬೇಕು. ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ತಹಸೀಲ್ದಾರ್ ಪರುಸಪ್ಪ ಕುರುಬರ ಹೇಳಿದರು. 
    ಅವರು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಈ ಬಾರಿ ಸಹ ಹಳೇನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾತೃಭಾಷೆ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.   
    ಉರ್ದು ಶಾಲೆಯಲ್ಲಿ ವಿಶೇಷವಾಗಿ ವಿಶ್ವ ಮಾತೃ ಭಾಷೆ ದಿನಾಚರಣೆ ಆಚರಿಸಿಕೊಂಡು ಬರುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ನಮ್ಮ ಮಾತೃ ಭಾಷೆಯಾದ ಕನ್ನಡ ನಾವೆಲ್ಲರೂ ಸರಿಯಾಗಿ ಅರ್ಥಮಾಡಿಕೊಂಡು ಕಲಿಯುವ ಮೂಲಕ ಇತರರಿಗೂ ಕಲಿಸಬೇಕೆಂದರು. 
  ವಿಶ್ವ ಮಾತೃ ಭಾಷೆ ದಿನಾಚರಣೆ ಕುರಿತು ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಪ್ರೊ. ಎಂ. ಚಂದ್ರಶೇಖರಯ್ಯ ಮಾತನಾಡಿ, ಕನ್ನಡ ಭಾಷೆಯ ಬೆಳವಣಿಗೆ ಕನ್ನಡದ ಅಸ್ತಿತ್ವ ಮತ್ತು ಕನ್ನಡ ಬಳಸುವ ರೀತಿಯ ಸೂಚಕವಾಗಿದೆ. ಪ್ರಸ್ತುತ ಕನ್ನಡ ವಿಶ್ವದ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ಬೇರೆ ಭಾಷೆಯವರು ಕನ್ನಡ ಭಾಷೆಯನ್ನು ಕಲಿತು ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಕಲಾವಿದರು, ಸಾಹಿತಿ, ಕವಿಗಳಾಗಿ ಮುಂಚೂಣಿಯಲ್ಲಿದ್ದಾರೆ. ಇಂತಹವರ ಸಾಲಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದ.ರಾ ಬೇಂದ್ರೆ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಹ ಸೇರಿದ್ದಾರೆ ಎಂದರು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಾಲೆಯ ಮುಖ್ಯ ಶಿಕ್ಷಕಿ ಶಹನ ಫಾತೀಮ ಸೇರಿದಂತೆ ಇನ್ನಿತರರು ಮಾತನಾಡಿದರು. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 
  ವೇದಿಕೆಯ ಖಜಾಂಚಿ ಗಂಗರಾಜ್, ಮಲ್ಲಿಕಾ, ಕೋಕಿಲ, ಸುಚಿತ್ರ ಸೇರಿದಂತೆ ಶಾಲೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಣ ಬೆಳೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು

ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ಭದ್ರಾವತಿ ನಗರದ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಶನಿವಾರ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದರು. 
    ಭದ್ರಾವತಿ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ನಗರದ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಶನಿವಾರ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದರು. 
    ನಗರದ ರೈಲ್ವೆ ನಿಲ್ದಾಣಕ್ಕೆ ಶಿವಮೊಗ್ಗದಿಂದ ಸಂಜೆ ೫.೨೦ಕ್ಕೆ ಆಗಮಿಸಿದ ರೈಲಿನಲ್ಲಿ ಮಂಗೋಟೆ ರುದ್ರೇಶ್, ಕವಿತಾ ರಾವ್, ಬಾರಂದೂರು ಪ್ರಸನ್ನ, ರವಿಕುಮಾರ್, ಸುಲೋಚನಾ, ದೇವರಾಜ್ ಸೇರಿದಂತೆ ಬಿಜೆಪಿ ಪಕ್ಷದ ಹಾಗು ಹಿಂದೂಪರ ಸಂಘಟನೆಗಳ  ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪ್ರಯಾಣ ಬೆಳೆಸಿದರು. ಇದಕ್ಕೂ ಮೊದಲು ರೈಲ್ವೆ ನಿಲ್ದಾಣದಲ್ಲಿ ಮುಖಂಡರು, ಕಾರ್ಯಕರ್ತರು ಸಂಭ್ರಮ ಹಂಚಿಕೊಂಡರು. 
    ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ಹಿಂದುಳಿದ ಮೋರ್ಚಾದ ರಾಜಶೇಖರ್ ಉಪ್ಪಾರ ಸೇರಿದಂತೆ ಇನ್ನಿತರರು ಶುಭಕೋರಿದರು. 

Friday, February 21, 2025

ಕೆ. ಸತ್ಯನಾರಾಯಣ ನಿಧನ : ದೇಹ ದಾನ

ಕೆ. ಸತ್ಯನಾರಾಯಣ 
    ಭದ್ರಾವತಿ: ನಗರದ ಹೊಸಮನೆ ನೃಪತುಂಗ ನಗರದ ೨ನೇ ಕ್ರಾಸ್ ನಿವಾಸಿ ಕೆ.ಸತ್ಯನಾರಾಯಣ(೯೫) ಶುಕ್ರವಾರ ಸಂಜೆ ನಿಧನ ಹೊಂದಿದರು. ಇವರ ಮೃತದೇಹ ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ.
    ಮೃತರಿಗೆ ೫ ಜನ ಮಕ್ಕಳಿದ್ದು, ಇವರ ಕೊನೆಯ ಆಸೆಯಂತೆ ಇವರ ಕಣ್ಣುಗಳನ್ನು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ಹಾಗು ದೇಹವನ್ನು ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿಗೆ ಕುಟುಂಬಸ್ಥರು ದಾನ ಮಾಡಿದ್ದಾರೆ. ಸತ್ಯನಾರಾಯಣರವರು ಬಲಿಜ ಸಮಾಜದ ಮುಖಂಡರಾಗಿದ್ದು, ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ. 

ರೈತರ ಧ್ವನಿಯಾಗಿ ಅರಣ್ಯ ಇಲಾಖೆ ವಿರುದ್ಧ ರಾಜಕೀಯ ಪಕ್ಷಗಳಿಂದ ಪಕ್ಷಾತೀತ ಹೋರಾಟ

ರೈತರಿಗೆ ನೀಡಿರುವ ನೋಟಿಸ್ ತಕ್ಷಣ ಹಿಂಪಡೆಯಿರಿ, ರೈತರ ಹಿತಕಾಪಾಡಿ 


ಭದ್ರಾವತಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಅನೇಕ ಗ್ರಾಮಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ನೋಟೀಸ್ ನೀಡಿ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ರೈತರೊಂದಿಗೆ ವಿವಿಧ ರಾಜಕೀಯ ಪಕ್ಷಗಳು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪಕ್ಷಾತೀತವಾಗಿ ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದವು. ಪ್ರತಿಭಟನೆ ಅಂಗವಾಗಿ  ರಂಗಪ್ಪ ವೃತ್ತದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿವರೆಗೂ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ : ತಾಲೂಕಿನ ರೈತರು ಕಳೆದ ಸುಮಾರು ೫೦-೬೦ ವರ್ಷಗಳಿಂದ ಸರ್ಕಾರದಿಂದ ಸಾಗುವಳಿ ಪತ್ರ ಪಡೆದು ಖಾತೆ, ಪಹಣಿ, ಮ್ಯುಟೇಷನ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಹೊಂದಿದ್ದು, ಬ್ಯಾಂಕ್‌ಗಳಿಂದ ಸಾಲ ಸಹ ಪಡೆದಿದ್ದು, ಸಾಕಷ್ಟು ಹಣ ಖರ್ಚು ಮಾಡಿ ಅಡಕೆ-ತೆಂಗು ಸೇರಿದಂತೆ ಪ್ರಮುಖ ವಾಣಿಜ್ಯ ಬೆಲೆಗಳ ತೋಟ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದು, ಇದೀಗ ಅರಣ್ಯ ಭೂಮಿ ಹೆಸರಿನಲ್ಲಿ  ತಾಲೂಕು ವ್ಯಾಪ್ತಿಯಲ್ಲಿ ಬರುವ ಅನೇಕ ಗ್ರಾಮಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ನೋಟೀಸ್ ನೀಡಿ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ರೈತರೊಂದಿಗೆ ವಿವಿಧ ರಾಜಕೀಯ ಪಕ್ಷಗಳು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪಕ್ಷಾತೀತವಾಗಿ ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದವು. 
            ಜಾತ್ಯತೀತ ಜನತಾದಳ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಗರ್‌ಹುಕುಂ ಸಾಗುವಳಿ ಮತ್ತು ಶರಾವತಿ ಮುಳುಗಡೆ ರೈತರ ಹಿತರಕ್ಷಣಾ ಸಮಿತಿ ಹಾಗು ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ನಾವೆಲ್ಲರೂ ರೈತರ ಧ್ವನಿಯಾಗಿದ್ದು, ಪಕ್ಷಕ್ಕಿಂತ ರೈತರ ಹಿತ ಬಹಳ ಮುಖ್ಯವಾಗಿದೆ. ತಕ್ಷಣ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕು. ರೈತರನ್ನು ಒಕ್ಕಲೆಬ್ಬಿಸುವುದನ್ನು ಬಿಡಬೇಕು. ರೈತರಿಗೆ ನ್ಯಾಯ ಒದಗಿಸಿಕೊಡುವ ಮೂಲಕ ಅವರ ಹಿತಕಾಪಾಡಬೇಕೆಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸರ್ಕಾರವನ್ನು ಆಗ್ರಹಿಸಿದರು.  
ಇದಕ್ಕೂ ನಗರದ ರಂಗಪ್ಪ ವೃತ್ತದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿವರೆಗೂ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು. 
    ಪ್ರತಿಭಟನೆಯಲ್ಲಿ ಶಾಸಕರಾದ ಶಾರದಾ ಪೂರ್‍ಯಾನಾಯ್ಕ,  ಡಾ. ಧನಂಜಯ ಸರ್ಜಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ, ಪಕ್ಷದ ಪ್ರಮುಖರಾದ ಆರ್ ಕರುಣಾಮೂರ್ತಿ, ಟಿ. ಚಂದ್ರೇಗೌಡ, ಗೀತಾ ಸತೀಶ್, ಡಿ. ಆನಂದ್, ಎಂ.ಎ ಅಜಿತ್, ಧರ್ಮೆಗೌಡ, ಮಧುಸೂಧನ್, ಕುಮರಿ ಚಂದ್ರಣ್ಣ, ಗೊಂದಿ ಜಯರಾಮ್, ಗುಣಶೇಖರ್, ಪಾರ್ಥಿಬನ್, ಜಯರಾಮ್, ರಾಮಕೃಷ್ಣ, ಮಾಜಿ ಶಾಸಕರಾದ ಬಿಜೆಪಿ ಪಕ್ಷದ ಎಸ್. ರುದ್ರೇಗೌಡ, ಕೆ.ಬಿ ಅಶೋಕ್‌ನಾಯ್ಕ, ಮಂಗೋಟೆ ರುದ್ರೇಶ್, ತೀರ್ಥಯ್ಯ, ಸುಬ್ರಮಣಿ, ಕನಸಿನಕಟ್ಟೆ ಶ್ರೀನಿವಾಸ್, ಪಾಲಾಕ್ಷಪ್ಪ, ಮಾಜಿ ಶಾಸಕ ಕಾಂಗ್ರೆಸ್ ಪಕ್ಷದ ಆರ್. ಪ್ರಸನ್ನಕುಮಾರ್, ಶ್ರೀನಿವಾಸ್ ಕರಿಯಣ್ಣ, ಹನುಮಂತು, ಮಲ್ಲಯ್ಯ, ಕಟ್ಟಾ ಉಮೇಶ್, ರೈತ ವರಿಷ್ಠ ಎಚ್. ಆರ್ ಬಸವರಾಜಪ್ಪ, ಹೋರಾಟಗಾರ ತೀ.ನಾ. ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಬಿ.ಕೆ. ಶಿವಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮಲ್ಲೇಶ್‌ರಾವ್ ಸೇರಿದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.