Thursday, March 20, 2025

ಫಲಾನುಭವಿ ದಂಪತಿಗೆ ಮಂಜೂರಾದ ಜಮೀನು ದೌರ್ಜನ್ಯ, ದಬ್ಬಾಳಿಕೆ, ಕುತಂತ್ರದ ಮೂಲಕ ವಶಕ್ಕೆ ಪಡೆಯಲು ಯತ್ನ

ನ್ಯಾಯಾಲಯದ ಆದೇಶ ಫಲಕ ಧ್ವಂಸ, ಕಂಗಲಾದ ದಂಪತಿ 

ಭದ್ರಾವತಿ ತಾಲೂಕಿನ ಹುಳಿಯಾರ್ ರಾಮನಕೊಪ್ಪ ಗ್ರಾಮದ ಸರ್ವೆ ನಂ. ೧೫ರಲ್ಲಿ ೪ ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಅಳವಡಿಸಲಾಗಿರುವ ನ್ಯಾಯಾಲಯದ ಆದೇಶದ ಫಲಕ ಧ್ವಂಸಗೊಳಿಸುತ್ತಿರುವುದು. 
    ಭದ್ರಾವತಿ: ಸರ್ಕಾರದಿಂದ ಮಂಜೂರಾಗಿರುವ ಸಾಗುವಳಿ ಜಮೀನನ್ನು ಮೂಲ ಫಲಾನುಭವಿ ದಂಪತಿಗೆ ವಂಚಿಸಿ ದೌರ್ಜನ್ಯ, ದಬ್ಬಾಳಿಕೆ ಹಾಗು ಕುತಂತ್ರದ ಮೂಲಕ ವಶಕ್ಕೆ ಪಡೆಯಲು ಯತ್ನಿಸುತ್ತಿರುವ ಘಟನೆ ನಡೆದಿದ್ದು, ಇದರಿಂದಾಗಿ ಬಡ ಕುಟುಂಬದವರು ಅತಂತ್ರರಾಗಿದ್ದಾರೆ. 
    ತಾಲೂಕಿನ ಹುಳಿಯಾರ್ ರಾಮನಕೊಪ್ಪ ಗ್ರಾಮದ ಸರ್ವೆ ನಂ. ೧೫ರಲ್ಲಿ ೪ ಎಕರೆ ವಿಸ್ತೀರ್ಣದ ಜಮೀನನ್ನು ೨೨ ಮಾರ್ಚ್, ೨೦೧೮ರಲ್ಲಿ ಗ್ರಾಮದ ನಿವಾಸಿ ಕೃಷ್ಣಪ್ಪ ಮತ್ತು ಇವರ ಪತ್ನಿ ಸಣ್ಣಮ್ಮ ಅವರಿಗೆ ಸಾಗುವಳಿಗಾಗಿ ಕೆಲ ಷರತ್ತಿನೊಂದಿಗೆ ಜಂಟಿ ಖಾತೆಯಲ್ಲಿ ಮಂಜೂರು ಮಾಡಿದ್ದು, ಅದರಂತೆ ೨೦೨೪-೨೫ನೇ ಸಾಲಿನ ಪಹಣಿ ಪ್ರತಿಯಲ್ಲೂ ಸಹ ಸ್ಪಷ್ಟವಾಗಿ ನಮೂದಾಗಿದೆ. ಅಲ್ಲದೆ ಪ್ರಸ್ತುತ ಜಮೀನು ಸಾಗುವಳಿ ಮಾಡಲಾಗುತ್ತಿರುತ್ತದೆ. 
    ಈ ನಡುವೆ ಇದೆ ಸರ್ವೆ ನಂ. ಜಮೀನು ವಿಭಾಗಿಸಿ ೧೯೯೬-೯೭ನೇ ಸಾಲಿನಲ್ಲಿ ದರಖಾಸ್ತು ಮೂಲಕ ವೆಂಕಟೇಶ ಅವರಿಗೆ ೩ ಎಕರೆ ಜಮೀನು ಹಾಗು ಇವರ ಪತ್ನಿ ನಂಜಮ್ಮ ಅವರಿಗೆ ೩ ಎಕರೆ ಜಮೀನು ಮಂಜೂರಾತಿ ಮಾಡಲಾಗಿದೆ. ಅಲ್ಲದೆ ೧೯೯೬-೯೭ನೇ ಸಾಲಿನಲ್ಲಿ ಸಾಗುವಳಿ ನೀಡಿ ಪ್ರಸ್ತುತ ಪಹಣಿ ಸಹ ಚಾಲ್ತಿಯಲ್ಲಿದೆ. ಆದರೆ ಮಂಜೂರಾದ ಜಮೀನು ವೆಂಕಟೇಶ್ ಮತ್ತು ಇವರ ಪತ್ನಿ ನಂಜಮ್ಮ ಅವರ ಅನುಭವದಲ್ಲಿ ಇರುವುದಿಲ್ಲ. 
    ಇದೊಂದು ವಿಚಿತ್ರ ಪ್ರಕರಣವಾಗಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರು ಪ್ರಕರಣದ ದಾಖಲಾತಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಕಾನೂನು ಅಭಿಪ್ರಾಯ ಸೂಚಿಸಿದ್ದು, ಕೃಷ್ಣಪ್ಪ ಮತ್ತು ಇವರ ಪತ್ನಿ ಸಣ್ಣಮ್ಮ ದಂಪತಿ ಜಮೀನಿನ ಜಂಟಿ ಮಾಲೀಕರಾಗಿದ್ದಾರೆಂದು ತಿಳಿಸಿದೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಶಾಶ್ವತ ನಿರ್ಬಂಧಕ ತಡೆಯಾಜ್ಞೆ ನೀಡಿದೆ. 
    ಇದೀಗ ಜಮೀನನ್ನು ದೌರ್ಜನ್ಯ, ದಬ್ಬಾಳಿಕೆ ಹಾಗು ಕುತಂತ್ರದ ಮೂಲಕ ವಶಕ್ಕೆ ಪಡೆಯಲು ಮುಂದಾಗಿದ್ದು, ಇದರಿಂದಾಗಿ ಕೃಷ್ಣಪ್ಪ ಮತ್ತು ಇವರ ಪತ್ನಿ ಸಣ್ಣಮ್ಮ ರಕ್ಷಣೆ ಕೋರಿದ್ದರು. ತಾಲೂಕು ಆಡಳಿತ ದಂಪತಿಗೆ ರಕ್ಷಣೆ ನೀಡಲು ಮುಂದಾಗಿದೆ. ಈ ನಡುವೆ ತಾಲೂಕು ಆಡಳಿತ ಜಮೀನಿನ ಸರ್ವೇ ನಡೆಸಿ ೪ ಎಕರೆ ಜಮೀನು ಗುರುತಿಸಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಕಳೆದ ೩-೪ ದಿನಗಳ ಹಿಂದೆ ಜಮೀನಿನಲ್ಲಿ ಅಳವಡಿಸಲಾಗಿರುವ ನ್ಯಾಯಾಲಯದ ಆದೇಶದ ಫಲಕ ಧ್ವಂಸಗೊಳಿಸಿ ಜೆಸಿಬಿ ಹಾಗು ಟ್ರ್ಯಾಕ್ಟರ್ ಇನ್ನಿತರ ವಾಹನಗಳನ್ನು ಬಳಸಿ ಅಕ್ರಮವಾಗಿ ಜಮೀನು ಪ್ರವೇಶಿಸಿ ದೌರ್ಜನ್ಯ, ದಬ್ಬಾಳಿಕೆ ನಡೆಸಲಾಗಿದೆ. ಇದರಿಂದಾಗಿ ಬಡ ಕುಟುಂಬಕ್ಕೆ ದಾರಿ ದೋಚದಂತಾಗಿದೆ. ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಮಧ್ಯ ಪ್ರವೇಶಿಸಿ ನ್ಯಾಯ ದೊರಕಿಸಿ ಕೊಡಬೇಕಾಗಿದೆ.   

ಮಹಿಳೆಯರಿಗೆ ಎಂದಿಗೂ ಸುರಕ್ಷತೆ ಇಲ್ಲ : ಆರ್.ಎಸ್ ಶೋಭಾ ಕಳವಳ


ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಏರ್ಪಡಿಸಲಾಗಿತ್ತು. 
    ಭದ್ರಾವತಿ : ಇಂದಿಗೂ ಸಮಾಜದಲ್ಲಿ ಮಹಿಳೆಯರನ್ನು ನೋಡುವ ಭಾವನೆ ಬದಲಾಗಿಲ್ಲ. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯಗಳನ್ನು ಗಮನಿಸಿದಾಗ ಮಹಿಳೆಯರಿಗೆ ಎಂದಿಗೂ ಸುರಕ್ಷತೆ ಇಲ್ಲ ಎಂಬ ಭಾವನೆ ಮೂಡುತ್ತಿದೆ ಎಂದು ನಗರದ ಜೆಎಂಎಫ್‌ಸಿ ನ್ಯಾಯಾಲಯದ ನೋಟರಿ ಆರ್.ಎಸ್ ಶೋಭಾ ಕಳವಳ ವ್ಯಕ್ತಪಡಿಸಿದರು. 
    ಅವರು ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
    ಮಹಿಳೆಯರು ಸಮಾಜದಲ್ಲಿ ಯಾವುದೇ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತರಾಗದೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿ ತಮ್ಮ ಇರುವಿಕೆಯನ್ನು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇಂತಹ ಮಹಿಳೆಯರನ್ನು ಗುರುತಿಸಿ ಗೌರವಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.
    ಮಹಿಳಾ ಸಮಾಜದ ಯಶೋಧ ವೀರಭದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರು ಅಬಲೆಯರಲ್ಲ ಸಬಲೆಯರಾಗಿದ್ದಾರೆ. ಸ್ವಾಭಿಮಾನದಿಂದ ಬದುಕು ನಡೆಸಬೇಕು. ಸಮಾಜದ ಅನಿಷ್ಟ ಪದ್ಧತಿಗಳು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಕಾನೂನು ಬಾಹೀರ ಚಟುವಟಿಕೆಗಳ ವಿರುಧ್ಧ ಹೋರಾಡಬೇಕೆಂದು ಕರೆ ನೀಡಿದರು.
    ಸಮಾಜದಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದನ್ನು ಸುಳ್ಳು ಮಾಡಿ ನಾಗರೀಕ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳಿಂದ ಬಾಳಬೇಕು. ಸರ್ಕಾರ ಮಹಿಳೆಯರಿಗೆ ನೀಡಬೇಕಾದ ಸೌಲಭ್ಯಗಳನ್ನು ಸರಿಯಾಗಿ ಸರಿಯಾದ ಕಾಲಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
    ಇತ್ತೀಚೆಗೆ ರಾಜ್ಯಮಟ್ಟದ ಪ್ರಶಸ್ತಿಗೆ ಪುರಸ್ಕೃತರಾದ ಸಮಾಜದ ಹಿರಿಯ ಸದಸ್ಯೆ ಕಮಲಾ ಕುಮಾರಿ ಹಾಗು ವಿಜಯ ಪ್ರಭು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ವೇದಿಯಲ್ಲಿ ಗೌರಮ್ಮ ಶಂಕರಯ್ಯ, ಶೋಭಾ ಗಂಗರಾಜ್, ಜಯಂತಿ ಶೇಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ಇಂದಿರಾ ರಮೇಶ್ ಸ್ವಾಗತಿಸಿದರು. ಕಲ್ಪನಾ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ, ಗೀತಾ ರಘುನಂದನ್ ವಂದಿಸಿದರು.
ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಬಾರಿ ಅದೃಷ್ಟದ ಮಹಿಳೆಯಾಗಿ ಮಲ್ಲಿಕಾಂಬ ಮಲ್ಲಿಕಾರ್ಜುನ ಆಯ್ಕೆಯಾದರು.

Wednesday, March 19, 2025

ಮದ್ಯದಂಗಡಿ ಗೋಡೆ ಕನ್ನ ಕೊರೆದು ಲಕ್ಷಾಂತರ ರು. ನಗದು, ಮದ್ಯ ದರೋಡೆ

    

ಭದ್ರಾವತಿ: ಮದ್ಯದಂಗಡಿ ಗೋಡೆ ಕನ್ನ ಕೊರೆದು ಲಕ್ಷಾಂತರ ರು. ನಗದು ಹಾಗು ಬೆಲೆ ಬಾಳುವ ಮದ್ಯ ದರೋಡೆ ಮಾಡಿರುವ ಘಟನೆ ತಾಲೂಕಿನ ಬಾರಂದೂರು ಗ್ರಾಮದಲ್ಲಿ ನಡೆದಿದೆ. 
    ಶಿವಮೊಗ್ಗ ವಿನೋಬನಗರ ನಿವಾಸಿ ಎಚ್.ಆರ್ ಪಂದೇಶ್ ಬಾರಂದೂರು ಗ್ರಾಮದಲ್ಲಿರುವ ಶ್ರೀ ವೆಂಕಟೇಶ್ವರ ವೈನ್ ಶಾಪ್ ಮಾಲೀಕರಾಗಿದ್ದು, ವೈನ್ ಶಾಪ್ ಕ್ಯಾಷಿಯರ್ ಸಚಿನ್ ಮಾ.೧೬ರಂದು ದಿನದ ವ್ಯಾಪಾರ ಮುಗಿಸಿಕೊಂಡು ರಾತ್ರಿ ೧೦.೨೦ರ ಸಮಯದಲ್ಲಿ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದಾರೆ. ಬೆಳಿಗ್ಗೆ ಬಂದು ನೋಡಿದಾಗ ವೈನ್‌ಶಾಪ್‌ಗೆ ಹೊಂದಿಕೊಂಡಂತೆ ಇರುವ ರೆಸ್ಟ್ ರೂಂ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗ ಮುರಿದು ಒಳಗೆ ಪ್ರವೇಶಿಸಿ ರೆಸ್ಟ್ ರೂಂ ಒಳಗಿನ ಗೋಡೆ ಒಬ್ಬ ವ್ಯಕ್ತಿ ಒಳಗೆ ನುಸುಳ ಬಹುದಾದಷ್ಟು ದೊಡ್ಡದಾದ ಕನ್ನ ಕೊರೆದು ದರೋಡೆ ಮಾಡಿರುವುದು ಕಂಡು ಬಂದಿರುತ್ತದೆ. 
    ಬ್ಯಾಂಕ್ ಖಾತೆಗೆ ಜಮಾ ಮಾಡಲು ಇಡಲಾಗಿದ್ದ ೧,೦೦,೦೦೦ ರು. ನಗದು ಹಣ ಮತ್ತು ಮಾ. ೧೫ ಹಾಗು ೧೬ ಶನಿವಾರ ಮತ್ತು ಭಾನುವಾರ ಎರಡು ದಿನದ ವ್ಯಾಪಾರದ ಹಣ ೨,೫೬,೫೦೦ ರು. ಮತ್ತು ವೈನ್ ಶಾಪ್ ಕ್ಯಾಶ್ ಡ್ರಾನಲ್ಲಿದ್ದ ಚಿಲ್ಲರೆ ಹಣ ಒಟ್ಟು ೪,೦೦೦g ರು. ಹಾಗೂ ವೈನ್ ಶಾಪ್ ಶೋಕೇಸ್‌ನಲ್ಲಿದ್ದ ಬ್ಲಾಕ್ & ವ್ಹೈಟ್ ೧೮೦ ಎಂ.ಎಲ್ ಒಟ್ಟು ಸುಮಾರು ೪೬೮೦ ರು. ಮೌಲ್ಯದ ೮ ಬಾಟಲ್‌ಗಳು ಮತ್ತು ವೋಡ್ಕಾ ೧೮೦ ಎಂ.ಎಲ್ ಒಟ್ಟು ಸುಮಾರು ೮೯೦ ರು. ಮೌಲ್ಯದ ೨ ಕ್ವಾಟರ್‌ಗಳನ್ನು ಕಳವು ಮಾಡಲಾಗಿದೆ. ಒಟ್ಟು ನಗದು ಹಣ ೩,೬೦,೫೦೦ ರು. ಮತ್ತು ೫೫೭೦ ರು. ಬೆಲೆಬಾಳುವ ಮಧ್ಯದ ಬಾಟಲ್‌ಗಳನ್ನು ದರೋಡೆ ಮಾಡಲಾಗಿದೆ ಎಂದು ಪೇಪರ್‌ಟೌನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಡಾ. ಪುನೀತ್ ರಾಜ್‌ಕುಮಾರ್ ಒಬ್ಬ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಹೊಂದಿದ ಧೀಮಂತ ನಾಯಕ : ಆರ್.ಎಸ್ ಮಾಧುರಿ

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಡಾ. ಪುನೀತ್ ರಾಜಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ : ಪುನೀತ್‌ರಾಜ್‌ಕುಮಾರ್‌ರವರು ಬಡ ವಿದ್ಯಾರ್ಥಿಗಳು, ವಿಕಲಚೇತನರು ಹಾಗು ಅನಾಥರಿಗಾಗಿ ಶಿಕ್ಷಣ ಸಂಸ್ಥೆ ಮತ್ತು ವಸತಿ ನಿಲಯಗಳನ್ನು ತೆರೆದು ಅವರ ಏಳಿಗೆಗಾಗಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಒಬ್ಬ ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಹೊಂದಿದ ಧೀಮಂತ ನಾಯಕ ಎಂದು ತಾಲೂಕಿನ ಬಾರಂದೂರು ಜನತಾ ಸಹಕಾರ ಸಂಘದ ಗ್ರಾಹಕರ ಸಂಪರ್ಕ ಅಧಿಕಾರಿ ಆರ್.ಎಸ್ ಮಾಧುರಿ ಬಣ್ಣಿಸಿದರು. 
    ಅವರು ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಪುನೀತ್ ರಾಜಕುಮಾರ್‌ರವರ ೫೦ನೇ ವರ್ಷದ ಹುಟ್ಟುಹಬ್ಬ ಉದ್ಘಾಟಿಸಿ ಮಾತನಾಡಿದರು.   
  ಪುನೀತ್ ರಾಜಕುಮಾರ್ ಒಬ್ಬ ಶ್ರೇಷ್ಠ ಚಿತ್ರನಟ ಮಾತ್ರವಲ್ಲದೆ ಮಾನವೀಯ ಮೌಲ್ಯ ಹೊಂದಿದ್ದ ಒಬ್ಬ ಸಮಾಜ ಸೇವಕರಾಗಿದ್ದರು. ಅವರ ಆದರ್ಶತನ ನಮಗೆ ಮಾದರಿಯಾಗಿವೆ ಎಂದರು. 
ಜನತಾ ಸಹಕಾರ ಸಂಘದ ಅಧಿಕಾರಿಗಳಾದ ಶಮಂತ, ಚೈತ್ರ ಹಾಗೂ ವಿದ್ಯಾ ಉಪಸ್ಥಿತರಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಅಂಧರ ಕೇಂದ್ರದ ವಿಕಲಚೇತನರು ಪುನೀತ್ ರಾಜಕುಮಾರ್ ಅಭಿನಯದ ಚಲನ ಚಿತ್ರಗೀತೆಗಳನ್ನು ಹಾಡುವ ಮೂಲಕ ಸಂಭ್ರಮಿಸಿದರು. 

ಜಿಲ್ಲಾಧ್ಯಕ್ಷರಾಗಿ ಎಂ.ಆರ್ ಸುರೇಶ್ ನಾಯಕ್ ನೇಮಕ

ಎಂ.ಆರ್ ಸುರೇಶ್ ನಾಯಕ್ 
    ಭದ್ರಾವತಿ : ಅಖಿಲ ಭಾರತ ಕ್ರೈಸ್ತ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಶಿವಮೊಗ್ಗ ಅಂಜನಾಪುರ ಗ್ರಾಮದ ಎಂ.ಆರ್ ಸುರೇಶ್ ನಾಯಕ್ ಅವರನ್ನು ನೇಮಕಗೊಳಿಸಿ ಆದೇಶಿಸಲಾಗಿದೆ. 
    ಮಹಾಸಭಾ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಪ್ರಜ್ವಲ್ ಸ್ವಾಮಿರವರ ಆದೇಶದ ಮೇರೆಗೆ ಎಂ.ಆರ್ ಸುರೇಶ್ ನಾಯಕ್ ಅವರನ್ನು ಒಂದು ವರ್ಷದ ಅವಧಿಗೆ ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮಹಾಸಭಾ ಮತ್ತಷ್ಟು ಸಂಘಟಿಸುವ ಮೂಲಕ ಸಮುದಾಯ ಏಳಿಗೆಗೆ ಶ್ರಮಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ. 

ಮಾ.೨೦ರಂದು ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮ




    ಭದ್ರಾವತಿ : ಆಯುಷ್ಮಾನ್ ಭಾರತ್ ಯೋಜನೆಯಡಿ ೭೦ ವರ್ಷ ಮೇಲ್ಪಟ್ಟವರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮ ಮಾ.೨೦ರ ಗುರುವಾರ ಸಂಜೆ ೬ ಗಂಟೆಗೆ   ತಾಲೂಕು ಕಚೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯದ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 
    ಪಕ್ಷದ ಯುವ ಮುಖಂಡರಾದ ಜಿ. ಆನಂದ ಕುಮಾರ್ ಮತ್ತು ಮಂಗೋಟೆ ರುದ್ರೇಶ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
    ಕ್ಯಾಲೆಂಡರ್ ಬಿಡುಗಡೆ : 
    ಪ್ರತಿವರ್ಷದಂತೆ ಈ ಬಾರಿ ಸಹ ಆನಂದ ಸಾಮಾಜಿ ಸೇವಾ ಸಂಸ್ಥೆ ವತಿಯಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಗುತ್ತಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

Tuesday, March 18, 2025

ಸಾಗುವಳಿದಾರರ ಜಮೀನಿನ ಖಾತೆ ಪತ್ರ ರದ್ದುಗೊಳಿಸಿರುವ ಕ್ರಮ ಖಂಡಿಸಿ ಧರಣಿ ಸತ್ಯಾಗ್ರಹ

ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ 

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ, ಯಡೇಹಳ್ಳಿ ಸರ್ವೆ ನಂ.೬೬ರ ೧೯೬೦-೬೧ನೇ ಸಾಲಿನಲ್ಲಿ ಮಂಜೂರು ಮಾಡಿದ ಜಮೀನಿನ ಖಾತೆ ಪತ್ರಗಳನ್ನು ರದ್ದುಪಡಿಸಿರುವ ಕ್ರಮ ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಹೋಬಳಿ, ಯಡೇಹಳ್ಳಿ ಸರ್ವೆ ನಂ.೬೬ರ ೧೯೬೦-೬೧ನೇ ಸಾಲಿನಲ್ಲಿ ಮಂಜೂರು ಮಾಡಿದ ಜಮೀನಿನ ಖಾತೆ ಪತ್ರಗಳನ್ನು ರದ್ದುಪಡಿಸಿರುವ ಕ್ರಮ ಖಂಡಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿ ಮನವಿ ಸಲ್ಲಿಸಲಾಯಿತು. 
    ಯಡೇಹಳ್ಳಿ ಗ್ರಾಮದ ಸರ್ವೆ ನಂ. ೬೬ರಲ್ಲಿ ೧೯೬೦-೬೧ನೇ ಸಾಲಿನಲ್ಲಿ ಸರ್ಕಾರ ೩೦ ಜನರಿಗೆ ತಲಾ ೨ ಎಕರೆ ಜಮೀನಿನಂತೆ ಒಟ್ಟು ೬೬ ಎಕರೆ ಜಮೀನನ್ನು ಮಂಜೂರು ಮಾಡಿ ಆದೇಶಿಸಿತ್ತು. ಈ ನಡುವೆ ೧೯೮೦ ರಿಂದ ಅರಣ್ಯ ಜಮೀನು ಎಂದು ರೈತರ ಮೇಲೆ ಅನೇಕ ಮೊಕದ್ದಮೆಗಳನ್ನು ದಾಖಲಿಸುವ ಜೊತೆಗೆ ೨೦೨೪ರಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಜಮೀನನ್ನು ಕಿತ್ತುಕೊಂಡು ಅವರುಗಳ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು ಎಂದು ಧರಣಿನಿರತರು ಆರೋಪಿಸಿದರು. 
    ೨೦೨೦ರಲ್ಲಿ ಬೆಂಗಳೂರು ಪ್ರಾದೇಶಿಕ ಕಛೇರಿಯ ಆಯುಕ್ತರು ಸರ್ವೆ ನಂ : ೬೬ರ ಜಮೀನು ಅರಣ್ಯ ಎಂದು ರದ್ದುಗೊಳಿಸಿ ಬದಲಿ ಜಮೀನು ನೀಡಲು ಆದೇಶಿಸಿದ್ದರು. ಆದರೆ ೨೦೧೦ ರಿಂದ ೨೦ ರವರೆಗೂ ಬೆಂಗಳೂರು ಆರ್.ಸಿ ಕಛೇರಿಯಲ್ಲಿ ಪ್ರಕರಣ ನಡೆಯುತ್ತಿರುವಾಗಲೇ ಆಕ್ರಮವಾಗಿ ಸರ್ವೆ ನಂ. ೬೬ರ ಜಮೀನಿನ ಪೈಕಿ ೧೮ ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಬದಲಾವಣೆ ಮಾಡಿ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಧರಣಿನಿರತರು ದೂರಿದರು. ಈ ಅಕ್ರಮಕ್ಕೆ ಕಾರಣಕರ್ತರಾಗಿರುವ ತಾಲೂಕು ಕಛೇರಿಯ ಕಂದಾಯ ಅಧಿಕಾರಿಗಳು ಮತ್ತು ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ವೆ ನಂ.೬೬ರ ಸಾಗುವಳಿದಾರರಿಗೆ ಅದೇ ಜಮೀನಿನ ಸಾಗುವಳಿದಾರರನ್ನಾಗಿ ಮುಂದುವರೆಸಬೇಕೆಂದು ಆಗ್ರಹಿಸಿದರು. 
    ಧರಣಿ ಸತ್ಯಾಗ್ರಹ ಸ್ಥಳಕ್ಕೆ ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಆಗಮಿಸಿ ಮನವಿ ಸ್ವೀಕರಿಸಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.  ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಬಿ.ಎನ್ ರಾಜು ಧರಣಿ ಸತ್ಯಾಗ್ರಹ ನೇತೃತ್ವವಹಿಸಿದ್‌ದರು.