Monday, May 12, 2025

ಯುದ್ಧಕ್ಕೆ ತೆರಳುತ್ತಾರೆಂದು ಮಾಜಿ ಸೈನಿಕರಿಗೆ ಹಣ ನೀಡಲು ಮುಂದಾದ ವ್ಯಕ್ತಿ

ದೇಶ, ಸೈನಿಕರ ಮೇಲಿನ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಮಾಜಿ ಸೈನಿಕ ಫ್ರಾನ್ಸಿಸ್ 

 ವಿಶ್ವನಾಥ್ 
    ಭದ್ರಾವತಿ : ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನಲೆಯಲ್ಲಿ ಅನಿವಾರ್ಯ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಯುದ್ಧಕ್ಕೆ ಆಹ್ವಾನಿಸಬಹುದು ಎಂಬ ಉದ್ದೇಶದೊಂದಿಗೆ ಅವರಿಗೆ ನೆರವಾಗಲು ಮಾಜಿ ಸೈನಿಕರೊಬ್ಬರಿಗೆ ವ್ಯಕ್ತಿಯೋರ್ವ ಸ್ವಯಂ ಪ್ರೇರಣೆಯಿಂದ ತನ್ನ ಬಳಿ ಜೇಬಿನಲ್ಲಿದ್ದ ಹಣ ನೀಡಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ. 
    ತಾಲೂಕಿನ ಮಾವಿನಕೆರೆ ಗ್ರಾಮದ ನಿವಾಸಿ ಎಲೆಕ್ಟ್ರಿಕಲ್ ಮತ್ತು ಫ್ಲಂಬರ್ ಕೆಲಸ ಮಾಡುವ ವಿಶ್ವನಾಥ್ ಎಂಬುವರು ಮಾಜಿ ಸೈನಿಕ, ಪ್ರಸ್ತುತ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫ್ರಾನ್ಸಿಸ್ ಅವರಿಗೆ ಯುದ್ಧಕ್ಕೆ ಆಹ್ವಾನಿಸಿರಬಹುದು ಅವರಿಗೆ ಯುದ್ಧದ ಸಂದರ್ಭದಲ್ಲಿ ನೆರವಾಗಲಿ ಎಂಬ ದೇಶಾಭಿಮಾನದೊಂದಿಗೆ ತಮ್ಮ ಜೇಬಿನಲ್ಲಿದ್ದ ಸುಮಾರು ೫ ಸಾವಿರ ರು. ನಗದು ಹಣ ನೀಡಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಫ್ರಾನ್ಸಿಸ್ ಅವರು ನಮಗೆ ಇನ್ನೂ ಯಾವುದೇ ಆಹ್ವಾನ ಬಂದಿಲ್ಲ. ಹಣ ನಿಮ್ಮ ಬಳಿಯೇ ಇರಲಿ ಎಂದು ಹೇಳಿ ಮರಳಿಸಿದ್ದಾರೆ. 
    ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್ ಅವರು ನಮ್ಮ ದೇಶದ ಸೈನಿಕರು ಪಿಓಕೆ ವಶಪಡಿಸಿಕೊಳ್ಳಬೇಕೆಂಬುದು ನನ್ನ ಆಸೆಯಾಗಿದೆ. ಸೈನಿಕರಿಗೆ ದೇಶದ ಪ್ರತಿಯೊಬ್ಬರು ಎಲ್ಲಾ ರೀತಿಯಿಂದಲೂ ನೆರವಾಗಬೇಕೆಂದರು. 
ಫ್ರಾನ್ಸಿಸ್ ಅವರು ಈ ಸಂಬಂಧ ಪ್ರತಿಕ್ರಿಯಿಸಿ ದೇಶ ಮತ್ತು ಸೈನಿಕರ ಮೇಲೆ ಇಟ್ಟಿರುವ ಅಭಿಮಾನಕ್ಕೆ ಚಿರಋಣಿಯಾಗಿದ್ದು, ವಿಶ್ವನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಒಂದು ವೇಳೆ ನಮ್ಮನ್ನು ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ಸ್ವಯಂ ಪ್ರೇರಣೆಯಿಂದ ತೆರಳುತ್ತೇನೆ ಎಂದರು. 

ಭಾರತಕ್ಕೆ ಪಿಓಕೆ ಸೇರಲಿ, ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ತೆರಳಲು ಸಿದ್ದ : ಮಾಜಿ ಸೈನಿಕ ವೆಂಕಟಗಿರಿ

ಮಾಜಿ ಸೈನಿಕ ವೆಂಕಟಗಿರಿ
    ಭದ್ರಾವತಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಯುದ್ಧ ಕೊನೆಯಾಗಬೇಕು. ನಮ್ಮ ದೇಶಕ್ಕೆ ಪಿಓಕೆ ಸೇರಬೇಕು. ಆಗ ಮಾತ್ರ ದೇಶದ ಗಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಮಾಜಿ ಸೈನಿಕ ವೆಂಕಟಗಿರಿ ತಿಳಿಸಿದ್ದಾರೆ. 
    ಸುಮಾರು ೧೭ ವರ್ಷ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ವೆಂಕಟಗಿರಿಯವರು ದೇಶದ ಗಡಿ ಭಾಗದಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ನಡೆಯುತ್ತಿವೆ. ದೇಶದ ಸಂಸತ್ ಮೇಲಿನ ದಾಳಿ, ಕಾರ್ಗಿಲ್ ಯುದ್ದ, ಪುಲ್ವಾಮ ದಾಳಿ ಮತ್ತು ಅಮಾಯಕ ಪ್ರವಾಸಿಗರ ಮೇಲಿನ ದಾಳಿ ಎಲ್ಲದಕ್ಕೂ ಮುಖ್ಯ ಕಾರಣ ಪಿಓಕೆಯಾಗಿದೆ. ನಮ್ಮ ಭಾರತೀಯ ಸೈನ್ಯ ಪಿಓಕೆ ವಶಪಡಿಸಿಕೊಂಡು ದೇಶದ ಗಡಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಲ್ಲಿ ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳುಹಿಸುವುದಿಲ್ಲ ಎಂದರು. 
    ಸೈನಿಕರಲ್ಲಿ ಯಾವುದೇ ಜಾತಿ, ಧರ್ಮ, ಪಕ್ಷ ಭೇದಭಾವವಿಲ್ಲ. ಸೈನಿಕರ ಗುರಿ ಒಂದೇ ಆಗಿದ್ದು, ಸಂಕಷ್ಟದ ಸಮಯದಲ್ಲಿ ದೇಶವನ್ನು ರಕ್ಷಿಸುವುದಾಗಿದೆ. ನಮ್ಮನ್ನು ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ಸ್ವಯಂ ಪ್ರೇರಣೆಯಿಂದ ತೆರಳುವುದಾಗಿ ತಿಳಿಸಿದ್ದಾರೆ. 
    ತಾಲೂಕು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿಯಾಗಿರುವ ವೆಂಕಟಗಿರಿಯವರು ಈಗಾಗಲೇ ಸಂಘದ ವತಿಯಿಂದ ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ತಾಲೂಕಿನ ಎಲ್ಲಾ ಮಾಜಿ ಸೈನಿಕರು ಸ್ವಯಂ ಪ್ರೇರಣೆಯಿಂದ ಬರುವುದಾಗಿ ರಕ್ಷಣಾ ಇಲಾಖೆಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. 

ವಿಜೃಂಭಣೆಯಿಂದ ಜರುಗಿದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಭದ್ರಾವತಿ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ  ಸೋಮವಾರ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 
    ಭದ್ರಾವತಿ : ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ  ಸೋಮವಾರ ಸ್ವಾಮಿಯ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. 
    ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ದೇವಸ್ಥಾನದ ಆವರಣದಲ್ಲಿ ಮಧ್ಯಾಹ್ನ ಸುಮಾರು ೧ ಗಂಟೆಗೆ ಸ್ವಾಮಿಯ ರಥೋತ್ಸವ ಆರಂಭಗೊಂಡಿತು. ಭಕ್ತರು ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಸ್ವಾಮಿಗೆ ಜೈಕಾರ ಹಾಕುವ ಮೂಲಕ ಸಂಭ್ರಮಿಸಿದರು. 
ಭಕ್ತರು ಉತ್ತುತ್ತೆ, ಬಾಳೆಹಣ್ಣು ಅಲಂಕೃತಗೊಂಡ ರಥದ ಕಳಸಕ್ಕೆ ಎಸೆದು ರಥ ಎಳೆಯುವ ಮೂಲಕ ಭಕ್ತಿ ಮೆರೆದರು. ವಿವಿಧ ಮಹಿಳಾ ಭಜನಾ ತಂಡಗಳಿಂದ ಭಜನೆ, ಮಂಗಳ ವಾದ್ಯ, ವಿಶೇಷವಾಗಿ ಮಹಿಳೆಯರಿಂದ ಚಂಡೇವಾದ್ಯ ನಡೆಯಿತು. ಈ ನಡುವೆ ಪವಾಡ ಎಂಬಂತೆ ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಗರುಡ ಪಕ್ಷಿ ಆಕಾಶದಲ್ಲಿ ಕಾಣಿಸಿಕೊಂಡು ಶುಭ ಘಳಿಗೆಗೆ ಮುನ್ನುಡಿ ಬರೆದಂತೆ ಕಂಡು ಬಂದಿತು. 
    ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥಶರ್ಮ, ಸಹಾಯಕ ಅರ್ಚಕ ಶ್ರೀನಿವಾಸ್,  ಶಾಸಕ ಬಿ.ಕೆ ಸಂಗಮೇಶ್ವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಜಿ. ರಾಮಕಾಂತ್ ಹಾಗೂ ಎಸ್ ನರಸಿಂಹಾಚಾರ್, ರವಿ ಮಾಸ್ಟರ್, ಸುದರ್ಶನ್, ಸುಧೀಂದ್ರ,  ಶ್ರೀಧರ್, ಅಡುಗೆ ರಂಗಣ್ಣ, ಮಾರುತಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 

Sunday, May 11, 2025

ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ : ಕಾರ್ಯವೈಖರಿಗೆ ಜಿಲ್ಲಾ ರಕ್ಷಣಾಧಿಕಾರಿ ಪ್ರಶಂಸೆ


ಇಆರ್‌ಎಸ್‌ಎಸ್-೧೧೨ ವಾಹನದ  ಚಾಲಕ ಸಂತೋಷ್ ಕುಮಾರ್‌
ಭದ್ರಾವತಿ : ತಕ್ಷಣ ಕಾರ್ಯ ಪ್ರವೃತ್ತರಾಗಿ ಕರ್ತವ್ಯ ನಿಷ್ಠೆ ಮೆರೆಯುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೋರ್ವನನ್ನು ರಕ್ಷಿಸುವಲ್ಲಿ ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ಹಾಗು ಸಿಬ್ಬಂದಿ ಯಶಸ್ವಿಯಾಗಿರುವ ಘಟನೆ ನಡೆದಿದೆ. 
ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಗ್ರಾಮದ ಯುವಕನೋರ್ವ ಚಾಲಕ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಮೇ.೭ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ವಿಷಯ ತಿಳಿದ ಯುವಕನ ತಾಯಿ ೧೧೨ ವಾಹನಕ್ಕೆ ತುರ್ತು ಕರೆ ಮಾಡಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಇಆರ್‌ಎಸ್‌ಎಸ್ ಅಧಿಕಾರಿ, ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ವಿನಯ್ ಕುಮಾರ್ ಹಾಗು ಚಾಲಕ ಸಂತೋಷ್ ಕುಮಾರ್‌ರವರು ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಆಗಮಿಸಿ ಆತ್ಮಹತ್ಯೆ ಯತ್ನ ತಡೆದು ಯುವಕನಿಗೆ ಧೈರ್ಯ ತುಂಬಿದ್ದಾರೆ.  


ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ವಿನಯ್ ಕುಮಾರ್ 
    ಇಆರ್‌ಎಸ್‌ಎಸ್-೧೧೨ ವಾಹನದ ಅಧಿಕಾರಿ ಹಾಗು ಸಿಬ್ಬಂದಿ ಕಾರ್ಯವೈಖರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸುವ ಮೂಲಕ ಅಭಿನಂದಿಸಿದ್ದಾರೆ.  

ವಿಜೃಂಭಣೆಯಿಂದ ಜರುಗಿದ ನರಸಿಂಹ ಜಯಂತಿ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನರಸಿಂಹ ಜಯಂತಿ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನರಸಿಂಹ ಜಯಂತಿ ವಿಜೃಂಭಣೆಯಿಂದ ಜರುಗಿತು. 
    ಬೆಳಿಗ್ಗೆ ೬ ಗಂಟೆಗೆ ನಿರ್ಮಾಲ್ಯ ೮ ಗಂಟೆಗೆ ಪಂಚಾಮೃತ ಅಭಿಷೇಕ ಹಾಗೂ ದೇವಸ್ಥಾನದಿಂದ ಉತ್ಸವ ಮೂರ್ತಿ ಮೆರವಣಿಗೆ ಆರಂಭಗೊಂಡು ಬ್ರಾಹ್ಮಣರ ಬೀದಿ, ರಥ ಬೀದಿ ರಸ್ತೆ,  ತರಿಕೆರೆ ರಸ್ತೆ, ಹಾಗು ಎನ್.ಎಸ್.ಟಿ ರಸ್ತೆ ಮೂಲಕ ಪುನಃ ದೇವಸ್ಥಾನಕ್ಕೆ ಹಿಂದಿರುಗಿತು. 
    ವೇದಘೋಷ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ರಾತ್ರಿ ೮ ಗಂಟೆಗೆ ಕಲ್ಯಾಣೋತ್ಸವ ನಡೆಯಿತು. ಮೇ.೧೨ರಂದು ಮಧ್ಯಾಹ್ನ ೧೨ ಗಂಟೆಗೆ ಸ್ವಾಮಿಯ ರಥೋತ್ಸವ ಜರುಗಲಿದೆ. 
    ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥ ಶರ್ಮ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.  ಸಹಾಯಕ ಅರ್ಚಕ ಶ್ರೀನಿವಾಸ್ ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಜಿ. ರಾಮಕಾಂತ್ ಹಾಗೂ ಎಸ್ ನರಸಿಂಹಾಚಾರ್, ರವಿ ಮಾಸ್ಟರ್, ಸುದರ್ಶನ್, ಸುಧೀಂದ್ರ,  ಶ್ರೀಧರ್, ಅಡುಗೆ ರಂಗಣ್ಣ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.

ಭಾರತ ದೇಶ ಯುದ್ಧ ಬಯಸಿಲ್ಲ, ಆರಂಭಿಸಿಲ್ಲ : ಕದನವಿರಾಮ ಪಾಕಿಸ್ತಾನದ ಆಯ್ಕೆ

ಅಮೇರಿಕಾ ದೇಶದ ಮಧ್ಯಸ್ಥಿಕೆ ಭಾರತ ದೇಶಕ್ಕೆ ಅಗತ್ಯವಿಲ್ಲ 

ಜಿ. ಧರ್ಮಪ್ರಸಾದ್, ಅಧ್ಯಕ್ಷರು, ತಾಲೂಕು ಬಿಜೆಪಿ ಮಂಡಲ, ಭದ್ರಾವತಿ 
    ಭದ್ರಾವತಿ : ಭಾರತ ದೇಶ ಪಾಕಿಸ್ತಾನದ ಮೇಲೆ ಯುದ್ಧ ನಡೆಸಿಲ್ಲ. ಈಗಲೂ ಸಹ ಯುದ್ಧ ನಡೆಸಲು ಬಯಸಲ್ಲ. ಭಯೋತ್ಪಾದಕನ್ನು ನಿರ್ಮೂಲನೆ ಮಾಡುವುದು ಭಾರತದ ಗುರಿಯಾಗಿದೆ. ಈ ನಿಟ್ಟಿನಲ್ಲಿ ನಡೆದ ಕಾರ್ಯಾಚರಣೆ ಯುದ್ಧದ ರೂಪಕ್ಕೆ ಬದಲಾಗಿದೆ. ಈ ವಿಚಾರದಲ್ಲಿ ಭಾರತ ಕೈಗೊಂಡಿರುವ ನಿಲುವುಗಳು ಈ ದೇಶದ ಜನರ ನಿಲುವುಗಳಾಗಿವೆ ಹೊರತು ಯಾವುದೇ ವ್ಯಕ್ತಿ, ಪಕ್ಷ, ಸಂಸ್ಥೆ ಕೈಗೊಂಡ ನಿಲುವುಗಳಲ್ಲ ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ತಿಳಿಸಿದ್ದಾರೆ. 
    ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಯುದ್ಧ ಕುರಿತು ಕೆಲವರಲ್ಲಿ ತಪ್ಪು ಕಲ್ಪನೆಗಳಿವೆ. ಯುದ್ಧದ ಸ್ಪಷ್ಟನೆ ಅರಿತುಕೊಳ್ಳಬೇಕಾಗಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಪೋಷಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಬಹಳಷ್ಟು ಸಂದರ್ಭಗಳಲ್ಲಿ ಸಾಬೀತಾಗಿದೆ. ಈ ಹಿನ್ನಲೆಯಲ್ಲಿ ಭಾರತ ದೇಶ ಭಯೋತ್ಪಾದಕರು ಹಾಗು ಅವರ ಉಗ್ರ ಚಟುವಟಿಕೆಗಳ ತಾಣಗಳ ಮೇಲೆ ನಡೆಸಿದ ದಾಳಿಯನ್ನು ಅದು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅಲ್ಲದೆ ಈ ವಿಚಾರ ನೇರವಾಗಿ ಭಾರತ ದೇಶ ಪಾಕಿಸ್ತಾನ ತಿಳಿಸಿದೆ. ಆದರೂ ಸಹ ವಿನಾಃಕಾರಣ ಭಾರತ ದೇಶದ ಮೇಲೆ ಯುದ್ದ ನಡೆಸಿದೆ. ಮೇಲ್ನೋಟಕ್ಕೆ ಕದನ ವಿರಾಮ ಎಂದು ಘೋಷಿಸಲಾಗಿದೆಯಾದರೂ ಈ ಯುದ್ಧ ಈಗಲೂ ನಿಂತಿಲ್ಲ ಮುಂದುವರೆಯುತ್ತಿದೆ ಎಂದರು. 
    ಪಾಕಿಸ್ತಾನದ ಮೇಲೆ ಯುದ್ದ ನಿಲ್ಲಿಸಲು ಭಾರತ ಯುದ್ಧ ಆರಂಭಿಸಿಲ್ಲ. ಪಾಕಿಸ್ತಾನವೇ ಯುದ್ಧ ಆರಂಭಿಸಿ ಇದೀಗ ಕದನ ವಿರಾಮಕ್ಕೆ ಮನವಿ ಮಾಡಿದೆ. ಇದಕ್ಕೆ ಭಾರತ ದೇಶ ಸ್ಪಂದಿಸಿದೆ. ಪಾಕಿಸ್ತಾನ ಯುದ್ದ ನಿಲ್ಲಿಸಿದರೆ ಭಾರತವೂ ಯುದ್ಧ ನಿಲ್ಲಿಸುತ್ತದೆ. ಇದು ಸತ್ಯವಾದ ವಿಚಾರವಾಗಿದೆ. ಆದರೆ ಈ ವಿಚಾರದಲ್ಲಿ ಅಮೇರಿಕಾ ದೇಶದ ಮಧ್ಯಸ್ಥಿಗೆಯಿಂದ ಭಾರತ ದೇಶ ಯುದ್ಧ ನಿಲ್ಲಿಸಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಕಾಶ್ಮೀರದ ವಿಚಾರವಾಗಲಿ ಅಥವಾ ಯುದ್ಧದ ವಿಚಾರವಾಗಲಿ ಸೂಕ್ತ ನಿರ್ಣಯ ಕೈಗೊಳ್ಳುವ ಶಕ್ತಿ ಭಾರತ ದೇಶ ಹೊಂದಿದೆ. ಪ್ರಸ್ತುತ ಭಾರತ ದೇಶ ಕೈಗೊಂಡಿರುವ ಎಲ್ಲಾ ನಿಲುವುಗಳು ಪರಿಪೂರ್ಣವಾಗಿವೆ, ಸ್ಪಷ್ಟತೆಯಿಂದ ಕೂಡಿವೆ ಎಂದರು. 
    ಯುದ್ಧದ ಸಂದರ್ಭದಲ್ಲಿ ದೇಶದ ಜನರು ಸಾರ್ವಭೌಮತೆಯನ್ನು ಬೆಂಬಲಿಸಬೇಕಾಗಿದೆ. ದೇಶದ ಆಡಳಿತ ನಡೆಸುವ ಸರ್ಕಾರ ಹಾಗು ಅದರ ನೇತೃತ್ವ ವಹಿಸಿರುವ ನಾಯಕನನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ. ಇಲ್ಲಿ ಪಕ್ಷ ಬೇಧ ಮರೆತು ಎಲ್ಲರೂ ನಾಯಕನ ಹಿಂಬಾಲಕರಾಗಬೇಕು ಅಷ್ಟೆ. ಇದರ ಯಶಸ್ಸು ಸರ್ಕಾರ ಮತ್ತು ನಾಯಕನಿಗೆ ಸಲ್ಲುತ್ತದೆ. ಅಂದರೆ ಇಡೀ ದೇಶದ ಜನರಿಗೆ ಸಲ್ಲುತ್ತದೆ ಹೊರತು. ಯಾವುದೋ ಪಕ್ಷಕ್ಕೆ ಅಥವಾ ಸಂಸ್ಥೆಗೆ ಸಲ್ಲುವುದಿಲ್ಲ. ಇದನ್ನು ಜನಸಾಮಾನ್ಯರು ಅರಿತುಕೊಳ್ಳಬೇಕೆಂದರು. 

Saturday, May 10, 2025

ಭದ್ರಾ ನದಿ ಕಾಲುವೆಯಲ್ಲಿ ಕಾಡುಕೋಣದ ಮೃತದೇಹ ತುಂಡು ಮಾಡಿ ಎಸೆದು ನಿರ್ಲಕ್ಷ್ಯತನ

ತಪ್ಪಿತಸ್ಥ ಅರಣ್ಯ ಇಲಾಖೆ ಸಿಬ್ಬಂದಿಗಳು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ : ಶಿವಕುಮಾರ್ ಆಗ್ರಹ 

 ಅರಣ್ಯ ಇಲಾಖೆ ಸಿಬ್ಬಂದಿಗಳು ಭದ್ರಾವತಿ ತಾಲೂಕಿನ ಶಿವಪುರ ಗ್ರಾಮದ ಭದ್ರಾ ನಾಲೆಯಲ್ಲಿ ಮೃತಪಟ್ಟ ಕಾಡುಕೋಣದ ದೇಹ ಜೆಸಿಬಿ ಯಂತ್ರ ಬಳಸಿ ತುಂಡು ಮಾಡಿ ಭದ್ರಾ ನದಿ ಕಾಲುವೆಗೆ ಎಸೆದಿರುವುದು. 
    ಭದ್ರಾವತಿ: ಮೃತಪಟ್ಟ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸದೆ ಹಾಗು ಮೃತದೇಹ ತುಂಡು ಮಾಡಿ ಭದ್ರಾ ನದಿ ಕಾಲುವೆಗೆ ಎಸೆದು ಅರಣ್ಯ ಇಲಾಖೆ ಸಿಬ್ಬಂದಿಗಳು ನಿರ್ಲಕ್ಷ್ಯತನದಿಂದ ವರ್ತಿಸಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಆಗ್ರಹಿಸಿದ್ದಾರೆ. 
    ಅರಣ್ಯ ಇಲಾಖೆ ಸಿಬ್ಬಂದಿಗಳು ತಾಲೂಕಿನ ಶಿವಪುರ ಗ್ರಾಮದ ಭದ್ರಾ ನಾಲೆಯಲ್ಲಿ ಮೃತಪಟ್ಟ ಕಾಡುಕೋಣದ ದೇಹ ಜೆಸಿಬಿ ಯಂತ್ರ ಬಳಸಿ ತುಂಡು ಮಾಡಿ ಮೇ.೬ರಂದು ಬೆಳಗ್ಗೆ ೮ ಗಂಟೆ ಸಮಯದಲ್ಲಿ ಕಾಲುವೆಯಿಂದ ಎಸೆದಿದ್ದು, ಇದನ್ನು ಸ್ಥಳೀಯರು ಗಮನಿಸಿ ಚಿತ್ರೀಕರಿಸಿಕೊಂಡಿದ್ದಾರೆ.  ಮೇ.೭ರಂದು ಮಧ್ಯಾಹ್ನ೩ ಗಂಟೆ ಸಮಯದಲ್ಲಿ ಚಿತ್ರೀಕರಿಸಿಕೊಂಡಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದನ್ನು ಗಮನಿಸಿದ ಸಿಬ್ಬಂದಿಗಳು ತಕ್ಷಣ ಸಂಜೆ ೫ ಗಂಟೆ ಸಮಯದಲ್ಲಿ ನೀರಿನಲ್ಲಿ ಸುಮಾರು ೮ ಕಿ.ಮೀ ದೂರ ತೇಲಿಕೊಂಡು ಬಂದು ಕೆಂಚಮ್ಮನಹಳ್ಳಿ ನಾಲೆ ಸೇತುವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ತುಂಡು ಮಾಡಿದ್ದ ದೇಹಗಳನ್ನು ಪುನಃ ಜೆಸಿಬಿ ಯಂತ್ರ ಬಳಸಿ ಹೊರ ತೆಗೆದಿದ್ದಾರೆಂದು ಶಿವಕುಮಾರ್ ಆರೋಪಿಸಿದ್ದಾರೆ. 
    ಅಲ್ಲದೆ ನಾಲೆ ಸೇತುವೆಯಿಂದ ಹೊರ ತೆಗೆದ ತುಂಡು ಮಾಡಿದ್ದ ದೇಹಗಳನ್ನು ಅಂತರಗಂಗೆ ಪಶು ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿ ತರಾತುರಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಪಸ್ಥಿತಿಯಲ್ಲಿ ಉಕ್ಕುಂದ ಗ್ರಾಮದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ. ಇದು ವನ್ಯಜೀವಿ ಕಾಯ್ದೆ ಉಲ್ಲಂಘನೆಯಾಗಿದೆ. ಅಲ್ಲದೆ ಮೃತದೇಹ ತುಂಡು ಮಾಡಿ ಕಾಲುವೆಗೆ ಎಸೆದಿರುವುದರಿಂದ ಕಾಡುಕೋಣದ ಸಾವಿಗೆ ನಿಖರವಾದ ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರುವುದಿಲ್ಲ ಎಂದು ಶಿವಕುಮಾರ್ ದೂರಿದ್ದಾರೆ. 
    ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಆದೇಶಿಸುವ ಮೂಲಕ ತಪ್ಪಿತಸ್ಥ ಸಿಬ್ಬಂದಿಗಳು ಹಾಗು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.