Monday, May 19, 2025

ವಿಜೃಂಭಣೆಯಿಂದ ಜರುಗಿದ ೧೦ನೇ ವರ್ಷದ ಕೋಟೆ ಶ್ರೀ ಆಂಜನೇಯಸ್ವಾಮಿ ಮಹಾರಥೋತ್ಸವ

ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸ್ವಾಮಿಯ ೧೦ನೇ ವರ್ಷದ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ: ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸ್ವಾಮಿಯ ೧೦ನೇ ವರ್ಷದ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಿತು.
    ಮಹಾರಥೋತ್ಸವ ಅಂಗವಾಗಿ ಬೆಳಿಗ್ಗೆ ನವಗ್ರಹ ಹೋಮ, ಆದಿವಾಸ ಹೋಮ, ರಥ ಶುದ್ಧಿ ಹೋಮ, ರಥಾಧಿವಾಸ ಹೋಮ, ಶ್ರೀ ಸ್ವಾಮಿಯ ರಥಾರೋಹಣ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಮಧ್ಯಾಹ್ನ ಸುಮಾರು ೧.೩೦ರ ಸಮಯದಲ್ಲಿ ದೇವಸ್ಥಾನ ಮುಂಭಾಗದಿಂದ ಮಹಾರಥೋತ್ಸವ ಆರಂಭಗೊಂಡು ರಂಗಪ್ಪ ವೃತ್ತ ಹಾಗು ಅಂಬೇಡ್ಕರ್ ವೃತ್ತದವರೆಗೂ ಸಾಗಿತು. ನಂತರ ಅನ್ನಸಂರ್ಪಣೆ ನಡೆಯಿತು.
    ಇದಕ್ಕೂ ಮೊದಲು ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀ ಸ್ವಾಮಿಯ ಉತ್ಸವ ಮೆರವಣಿಗೆ ಆರಂಭಗೊಂಡು ಪುರಾಣ ಪ್ರಸಿದ್ದ ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳಿ ಪುನಃ ಹಿಂದಿರುಗಿ ದೇವಸ್ಥಾನದ ಮುಂಭಾಗದಲ್ಲಿ ಸ್ವಾಮಿಯನ್ನು ಅಲಂಕೃತಗೊಂಡ ಭವ್ಯ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. 



    ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರಿಂದ ಸ್ವಾಮಿಗೆ ಜೈಕಾರ ಹಾಕಲಾಯಿತು. ಅಲ್ಲದೆ ವಿವಿಧ ಮಹಿಳಾ ಭಜನಾ ತಂಡಗಳಿಂದ ಭಜನೆ ನಡೆಯಿತು. ರಥೋತ್ಸವದಲ್ಲಿ ಚಂಡೆ ವಾದ್ಯ ತಂಡ ಗಮನ ಸೆಳೆಯಿತು.   
    ದೇವಸ್ಥಾನ ಪ್ರಧಾನ ಅರ್ಚಕ ಪವನ್‌ಕುಮಾರ್ ಉಡುಪ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಪರುಸಪ್ಪ ಕುರುಬರ, ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕೆ. ನರಸಿಂಹಮೂರ್ತಿ, ಉಪಾಧ್ಯಕ್ಷ ಬಿ. ಅಪ್ಪಾಜಿ ಗೌಡರು, ಪ್ರಧಾನ ಕಾರ್ಯದರ್ಶಿ ಎಸ್.ಎನ್ ರಾಜಶೇಖರ್, ಕಾರ್ಯದರ್ಶಿ ಎ.ಎಸ್ ಆಶಾ ಪುಟ್ಟಸ್ವಾಮಿ, ಖಜಾಂಚಿ ಎಸ್.ಬಿ ದುಗ್ಗೇಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಟಿ ನಾಗರಾಜ್, ಬಿ.ಎನ್ ಜಯರಾಂ, ರತ್ನಮ್ಮ ಸುಭಾಷ್, ಎನ್. ಜವರೇಗೌಡ, ವೀಣಾ ಶ್ರೀನಿವಾಸ್ ಮತ್ತು ಎಸ್.ಎಸ್ ಪ್ರಸನ್ನ ಕುಮಾರ್ ಹಾಗು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಹಳೇನಗರ, ಹನುಮಂತ ನಗರ, ಅಂಬೇಡ್ಕರ್ ನಗರ, ಹೊಸಮನೆ ಸೇರಿದಂತೆ ನಗರದ ವಿವಿದೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು. 

Sunday, May 18, 2025

`ಚಿಣ್ಣರ ಚೆಲುವು ಬೇಸಿಗೆ ಸಡಗರ' : ಮಕ್ಕಳಿಗೆ ವಿವಿಧ ಸ್ಪರ್ಧೆಗಳು

 ಭದ್ರಾವತಿಯಲ್ಲಿ `ಚಿಣ್ಣರ ಚೆಲುವು ಬೇಸಿಗೆ ಸಡಗರ' ಬೇಸಿಗೆ ಶಿಬಿರದ ಅಂಗವಾಗಿ ಶಾಲಾ ಮಕ್ಕಳಿಗೆ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.  ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ  ಎಂ. ಗಂಗಣ್ಣ ಚೆಸ್ ಆಡುವ ಮೂಲಕ ನೆರವೇರಿಸಿದರು.
    ಭದ್ರಾವತಿ: ತಾಲೂಕಿನ ಗ್ರಾಮ ಪಂಚಾಯಿತಿಗಳ ಗ್ರಂಥಾಲಯ ಸಹಯೋಗದೊಂದಿಗೆ ಈ ಬಾರಿ ಶಾಲಾ ಮಕ್ಕಳಿಗಾಗಿ ವಿಶೇಷವಾಗಿ ಬೇಸಿಗೆ ಶಿಬಿರ ಆಯೋಜಿಸುವ ಮೂಲಕ ಗಮನ ಸೆಳೆಯಲಾಯಿತು. 
    `ಚಿಣ್ಣರ ಚೆಲುವು ಬೇಸಿಗೆ ಸಡಗರ' ಬೇಸಿಗೆ ಶಿಬಿರದ ಅಂಗವಾಗಿ ಶಾಲಾ ಮಕ್ಕಳಿಗೆ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.  ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ  ಎಂ. ಗಂಗಣ್ಣ ಚೆಸ್ ಆಡುವ ಮೂಲಕ ನೆರವೇರಿಸಿದರು.


    ಚೆಸ್,  ಕೇರಂ, ಪೇಂಟಿಂಗ್, ಚರ್ಚಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭು, ಸಹಾಯಕ ನಿರ್ದೇಶಕ ಎಸ್. ಉಪೇಂದ್ರ, ವ್ಯವಸ್ಥಾಪಕ ಬಾಲರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ `ವಿಮಾನ ಪ್ರಯಾಣ'

ದುಡಿಸಿಕೊಳ್ಳುವವರಿಗೆ ಮಾದರಿಯಾದ ಕೂಡ್ಲಿಗೆರೆ ಹಾಲೇಶ್ 

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದ ನಿವಾಸಿ, ಪ್ರಗತಿಪರ ರೈತ, ಜಮಿನ್ದಾರ್ ಕೂಡ್ಲಿಗೆರೆ ಹಾಲೇಶ್‌ರವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ೧೦ ಜನ ಕೂಲಿ ಕಾರ್ಮಿಕರನ್ನು ಶನಿವಾರ ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವ ಮೂಲಕ ಗಮನ ಸೆಳೆದರು. 
    ಭದ್ರಾವತಿ : ಈ ಭೂಮಿ ಮೇಲೆ ದುಡಿಯುವವರಿಂದ ದುಡಿಸಿಕೊಳ್ಳುವ ಬಹಳಷ್ಟು ಮಂದಿಗೆ ದುಡಿಯುವವರ ನೋವು, ನಲಿವುಗಳು ಅರ್ಥವಾಗುವುದೇ ಇಲ್ಲ. ಅವರು ಸಾಯುವವರಿಗೂ ದುಡಿಯುತ್ತಿರಬೇಕು. ನಾವು ದುಡಿಸಿಕೊಳ್ಳುತ್ತಿರಬೇಕು ಎಂಬ ಮನೋಭಾವನೆಯೇ ಹೆಚ್ಚು. ಇಂತಹ ದುಡಿಸಿಕೊಳ್ಳುವ ಜನರ ನಡುವೆ ದುಡಿಯುವವರು ನಮ್ಮ ಕುಟುಂಬದವರಂತೆ, ಅವರ ನೋವು, ನಲಿವುಗಳು ನಮ್ಮ ನೋವು, ನಲಿವುಗಳು, ಅವರನ್ನು ಪ್ರೀತಿಸಬೇಕು, ಗೌರವಿಸಬೇಕು ಎಂಬ ಭಾವನೆ ಹೊಂದಿರುವವರು ವಿರಳ. ಇಂತಹ ವಿರಳ ವ್ಯಕ್ತಿಗಳಲ್ಲಿ ತಾಲೂಕಿನ ಕೂಡ್ಲಿಗೆರೆ ಗ್ರಾಮದ ನಿವಾಸಿ, ಪ್ರಗತಿಪರ ರೈತ, ಜಮಿನ್ದಾರ್ ಕೂಡ್ಲಿಗೆರೆ ಹಾಲೇಶ್‌ರವರು ಸಹ ಒಬ್ಬರಾಗಿದ್ದಾರೆ. 
    ಕೂಡ್ಲಿಗೆರೆ ಹಾಲೇಶ್‌ರವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವ ೧೦ ಜನ ಕೂಲಿ ಕಾರ್ಮಿಕರನ್ನು ತಮ್ಮ ಕುಟುಂಬದವರಂತೆ ನೋಡುವ ಜೊತೆಗೆ ಅವರ ನೋವು, ನಲಿವುಗಳಲ್ಲಿ ಸದಾ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಅವರು ತಮ್ಮ ಸ್ವಂತ ಖರ್ಚಿನಲ್ಲಿ ೧೦ ಜನ ಕೂಲಿ ಕಾರ್ಮಿಕರನ್ನು ಮೇ.೧೭ರ ಶನಿವಾರ ತಮ್ಮ ಜೊತೆಗೆ ಗೋವಾ ಪ್ರವಾಸಕ್ಕೆ ಕರೆದು ಕೊಂಡು ಹೋಗಿದ್ದಾರೆ. ಒಟ್ಟು ೩ ರಾತ್ರಿ, ೪ ಹಗಲು ಪ್ರವಾಸ ಇದಾಗಿದ್ದು, ವಿಶೇಷ ಎಂದರೆ ಕೂಲಿ ಕಾರ್ಮಿಕರನ್ನು ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದು. ವಿಮಾನ ಪ್ರಯಾಣ ಎಂದರೆ ಗಗನ ಕುಸುಮವಾಗಿದ್ದು, ಅದರಲ್ಲೂ ವಿಮಾನ ಪ್ರಯಾಣದ ಕಲ್ಪನೆಯನ್ನೂ ಮಾಡಿಕೊಳ್ಳದ ಕೂಲಿ ಕಾರ್ಮಿಕರಿಗೆ ವಿಮಾನ ಪ್ರಯಾಣ ಮಾಡಿಸುವ ಮೂಲಕ ದುಡಿಸಿಕೊಳ್ಳುವವರಿಗೆ ಮಾದರಿಯಾಗಿದ್ದಾರೆ. 
    ಪ್ರವಾಸೋದ್ಯಮಿ ಮ್ಯಾಂಗೋಲೀಪ್ ಹಾಲಿಡೇಸ್ ಮಂಜುನಾಥ್‌ರವರ ನೇತೃತ್ವದಲ್ಲಿ ಈ ಪ್ರವಾಸ ಹಮ್ಮಿಕೊಳ್ಳಲಾಗಿದ್ದು, ಶಿವಮೊಗ್ಗ ವಿಮಾನದಿಂದ ಪ್ರಯಾಣ ಬೆಳೆಸಿರುವ ಕೂಡ್ಲಿಗೆರೆ ಹಾಲೇಶ್ ಮತ್ತು ಅವರ ಜಮೀನಿನ ೧೦ಜನ ಕೂಲಿ ಕಾರ್ಮಿಕರು ಗೋವಾದಲ್ಲಿ ಬೀಚುಗಳು, ಪ್ರವಾಸಿ ಕ್ಷೇತ್ರಗಳು, ದೇವಸ್ಥಾನ, ಚರ್ಚ್‌ಗಳನ್ನು ವೀಕ್ಷಿಸಲಿದ್ದಾರೆ. ಇವರು ಉಳಿದುಕೊಳ್ಳಲು ಉತ್ತಮ ವ್ಯವಸ್ಥೆಯನ್ನು ಮಾಡಲಾಗಿದೆ. 
    ಈ ಕುರಿತು ಪತ್ರಿಕಗೆ ಮಾಹಿತಿ ನೀಡಿರುವ ಕೂಡ್ಲಿಗೆರೆ ಹಾಲೇಶ್‌ರವರು ವರ್ಷವಿಡಿ ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೂ ಆಸೆ, ಆಕಾಂಕ್ಷೆಗಳಿರುತ್ತವೆ. ಅವರ ದುಡಿಮೆ ಒತ್ತಡ ಕಡಿಮೆ ಮಾಡಿ, ಕೆಲವು ದಿನ ಮಾನಸಿಕ ನೆಮ್ಮದಿ ಕಂಡು ಕೊಳ್ಳುವ ಮೂಲಕ ಅವರ ಕಾರ್ಯ ಕ್ಷಮತೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಅಲ್ಲದೆ ಅವರಿಗೆ ಹೊರಗಿನ ಪರಿಸರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. 
    ಕೂಡ್ಲಿಗೆರೆ ಹಾಲೇಶ್‌ರವರು ಕೂಡ್ಲಿಗೆರೆ ಭಾಗದಲ್ಲಿ ಮಾತ್ರವಲ್ಲದೆ ತಾಲೂಕಿನಾದ್ಯಂತ ಗುರುತಿಸಿಕೊಂಡಿರುವ ವ್ಯಕ್ತಿಯಾಗಿದ್ದು, ರಾಜಕೀಯವಾಗಿ, ಧಾರ್ಮಿಕವಾಗಿ ಮಾತ್ರವಲ್ಲದೆ ವಿವಿಧ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ.   

Saturday, May 17, 2025

ಹಾಲಿನ ದರ ಹೆಚ್ಚಳ ಮಾಡುವ ಮೂಲಕ ರೈತರಿಗೆ ಆರ್ಥಿಕ ಬಲ ಹೆಚ್ಚಳ : ಕೆ. ವೆಂಕಟೇಶ್

ಭದ್ರಾವತಿ ರಂಗಪ್ಪ ವೃತ್ತ ಸಮೀಪದ ಪಶು ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ನಗರಸಭೆ ವತಿಯಿಂದ ಆರ್‌ಐಡಿಎಫ್ ಟ್ರಾಂಚ್ ೩೦ ಯೋಜನೆಯಡಿ ನೂತನ ಪಶು ಆಸ್ಪತ್ರೆ ಕಟ್ಟಡಕ್ಕೆ ಶನಿವಾರ ಪಶುಪಾಲನಾ ಮತ್ತು ಪಶುವೈದ್ಯ  ಸೇವಾ ಇಲಾಖೆ ಹಾಗು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್ ಶಂಕಸ್ಥಾಪನೆ ನೆರವೇರಿಸಿದರು. 
    ಭದ್ರಾವತಿ : ಹಾಲಿನ ದರ ಹೆಚ್ಚಳ ಮಾಡುವ ಮೂಲಕ ರೈತರನ್ನು ಆರ್ಥಿಕವಾಗಿ ಬಲಪಡಿಸಲಾಗಿದ್ದು, ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ  ಸೇವಾ ಇಲಾಖೆ ಹಾಗು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್ ಹೇಳಿದರು. 
    ಅವರು ಶನಿವಾರ ನಗರದ ರಂಗಪ್ಪ ವೃತ್ತ ಸಮೀಪದ ಪಶು ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ನಗರಸಭೆ ವತಿಯಿಂದ ಆರ್‌ಐಡಿಎಫ್ ಟ್ರಾಂಚ್ ೩೦ ಯೋಜನೆಯಡಿ ನೂತನ ಪಶು ಆಸ್ಪತ್ರೆ ಕಟ್ಟಡಕ್ಕೆ ಶಂಕಸ್ಥಾಪನೆ ನೆರವೇರಿಸಿ ಮಾತನಾಡಿದರು. 
    ಹಾಲಿನ ದರ ೫ ರು. ಹೆಚ್ಚಿಸುವ ಉದ್ದೇಶ ಹೊಂದಲಾಗಿತ್ತು.  ಆದರೆ ವಿರೋಧ ಪಕ್ಷಗಳಿಂದ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುವ ಉದ್ದೇಶದಿಂದ ೪ ರು. ಮಾತ್ರ ಹೆಚ್ಚಿಸಲಾಗಿದೆ. ಈ ಹಣ ರೈತರಿಗೆ ನೀಡಲಾಗುತ್ತಿದೆ. ಸರ್ಕಾರ ಪಾಪರ್ ಆಗಿದೆ ಎಂದು ವಿರೋಧ ಪಕ್ಷಗಳು ಬಾಯಿ ಬಡಿದುಕೊಳ್ಳುತ್ತಿವೆ. ಹಾಗಾದರೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದರು. ಸರ್ಕಾರ ರೈತರ ಪರವಾಗಿದ್ದು, ರೈತರಿಗೆ ಇನ್ನೂ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡಲಿದೆ ಎಂದರು. 
    ಪ್ರಸ್ತುತ ಶಂಕುಸ್ಥಾಪನೆ ನೆರವೇರಿಸಿರುವ ಆಸ್ಪತ್ರೆ ಕಟ್ಟಡ ಕಾಮಗಾರಿ ತಕ್ಷಣ ಆರಂಭಗೊಳ್ಳಲಿದ್ದು, ಕೇವಲ ಕಟ್ಟಡ ನಿರ್ಮಾಣಗೊಂಡರೆ ಸಾಲದು ಅದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಈಗಾಗಲೇ ಹೊಸ ಕಟ್ಟಡಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಶಾಸಕರು ತಾಲೂಕಿನ ಕಲ್ಲಹಳ್ಳಿ ಮತ್ತು ದೊಡ್ಡೇರಿ ಗ್ರಾಮಗಳಲ್ಲಿ ೨ ಆಸ್ಪತ್ರೆಗಳಿಗೆ ಬೇಡಿಕೆ ಸಲ್ಲಿಸಿದ್ದಾರೆ. ಸರ್ಕಾರದ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.  
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆವಹಿಸಿ ಮಾತನಾಡಿ, ಸಚಿವರು ನನ್ನ ಮನವಿಗೆ ಸ್ಪಂದಿಸಿ ಆಸ್ಪತ್ರೆ ಮಂಜೂರಾತಿ ಮಾಡುವ ಜೊತೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅವರಿಗೆ ಕ್ಷೇತ್ರದ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಸಿದ್ದರಾಮಯ್ಯರವರು ಆರ್ಥಿಕ ತಜ್ಞರಾಗಿದ್ದು, ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಏಕೈಕ ಜನಪ್ರತಿನಿಧಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷದವರು ವಿನಾಕಾರಣ ಆರೋಪಗಳನ್ನು ಮಾಡುವ ಜೊತೆಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜನರು ಕಿವಿ ಕೊಡಬಾರದು ಎಂದರು. 
    ಶಿಮುಲ್ ನಿರ್ದೇಶಕ ಎಸ್. ಕುಮಾರ್ ಮಾತನಾಡಿ, ಪಶುಪಾಲನಾ ಕ್ಷೇತ್ರ ವಿಸ್ತಾರವಾಗಿದೆ. ಈ ಭಾಗದಲ್ಲಿ ಪಶುಪಾಲನಾ ಆಸ್ಪತ್ರೆ ಅಗತ್ಯವಿದ್ದು, ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು. 
    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಮಾತನಾಡಿ, ರೈತರು ಚಿಕಿತ್ಸೆ ಸೇರಿದಂತೆ ಹೆಚ್ಚಿನ ಸೌಲಭ್ಯಗಳನ್ನುಪಡೆಯಲು ಬೇರೆ ಸ್ಥಳಗಳಿಗೆ ಹೋಗುವುದು ತಪ್ಪುತ್ತದೆ. ಇದರ ಸದುಪಯೋಗ ಪಡೆದುಕೊಂಡು ಪಶುಪಾಲನಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಂತೆ ಮನವಿ ಮಾಡಿದರು. 
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಯ್ಯದ್ ರಿಯಾಜ್, ಸದಸ್ಯರಾದ ಅನುಸುಧಾ ಮೋಹನ್ ಪಳನಿ, ಚನ್ನಪ್ಪ, ಎಸ್. ಮಣಿಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಶಿಮುಲ್ ನಿರ್ದೇಶಕ ಎಸ್. ಕುಮಾರ್, ಜಿ.ಪಂ. ಮಾಜಿ ಸದಸ್ಯ ಎಚ್.ಎಲ್ ಷಡಾಕ್ಷರಿ, ದಶರಥಗಿರಿ ಹಾಗು ಇಲಾಖೆ ಉಪ ನಿರ್ದೇಶಕ ಡಾ. ಎ. ಬಾಬುರತ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಜಾಗದ ಮೂಲ ದಾನಿಗಳಾದ ದಿವಂಗತ ಭೂಪಾಳಂ ರುಕ್ಮಯ್ಯ ಕುಟುಂಬಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯ ಪಶು ವೈದ್ಯಾಧಿಕಾರಿ ಡಾ. ಡಿ.ಬಿ ಶಿವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಡಾ. ರಾಜ್‌ಶೇಖರ್ ಸ್ವಾಗತಿಸಿದರು. 

Friday, May 16, 2025

ನೂತನ ಪಶು ಆಸ್ಪತ್ರೆಗೆ ಮೇ.೧೭ರಂದು ಶಂಕುಸ್ಥಾಪನೆ


    ಭದ್ರಾವತಿ : ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ನಗರಸಭೆ ವತಿಯಿಂದ ಆರ್‌ಐಡಿಎಫ್ ಟ್ರಾಂಚ್ ೩೦ ಯೋಜನೆಯಡಿ ನಗರದಲ್ಲಿ ನೂತನ ಪಶು ಆಸ್ಪತ್ರೆ ನಿರ್ಮಾಣಗೊಳ್ಳುತ್ತಿದ್ದು, ಮೇ.೧೭ರಂದು ಬೆಳಿಗ್ಗೆ ೧೧ ಗಂಟೆಗೆ ರಂಗಪ್ಪ ವೃತ್ತ ಸಮೀಪದ ಪಶು ಆಸ್ಪತ್ರೆ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ  ಸೇವಾ ಇಲಾಖೆ ಹಾಗು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 
    ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉಪಸ್ಥಿತರಿರುವರು. ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಶಾರದ ಪೂರ್‍ಯಾನಾಯ್ಕ,  ಎಸ್.ಎಲ್ ಭೋಜೆಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಬಲ್ಕೀಶ್ ಬಾನು, ಡಾ. ಧನಂಜಯ ಸರ್ಜಿ, ನಿಗಮ ಮಂಡಳಿಗಳ ಅಧ್ಯಕ್ಷರಾದ ಜಿ. ಪಲ್ಲವಿ, ರವಿಕುಮಾರ್, ಎಚ್.ಎಸ್ ಸುಂದರೇಶ್, ಆರ್.ಎಂ ಮಂಜುನಾಥಗೌಡ, ಡಾ. ಅಂಶುಮಂತ್, ಎಸ್. ಚಂದ್ರಭೂಪಾಲ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ಸದಸ್ಯೆ ಅನುಸುಧಾ ಮೋಹನ್ ಪಳನಿ, ಎಸ್. ಮಣಿಶೇಖರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. 

ಮೇ.೧೭ರಂದು ವಿದ್ಯುತ್ ವ್ಯತ್ಯಯ



    ಭದ್ರಾವತಿ : ನಗರದ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಹಿನ್ನಲೆಯಲ್ಲಿ  ಮೆಸ್ಕಾಂ ಘಟಕ-೩ರ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ತೆರವು ಕಾರ್ಯ ಹಮ್ಮಿಕೊಂಡಿರುವುದರಿಂದ ಮೇ.೧೭ರ ಶನಿವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಹೊಸ ಸಿದ್ದಾಪುರ, ಬೈಪಾಸ್ ರಸ್ತೆ, ನೀರು ಸರಬರಾಜು ಘಟಕ(ಪಂಪ್ ಹೌಸ್), ಎನ್‌ಟಿಬಿ ಬಡಾವಣೆ, ಸರ್.ಎಂ.ವಿ ಬಡಾವಣೆ, ಹಳೇ ಸಿದ್ದಾಪುರ, ತಾಂಡ್ಯ, ಹೊಸೂರು, ಸಂಕ್ಲಿಪುರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.  

ಉಚಿತ ನಾಟಕ ತರಬೇತಿ

    ಭದ್ರಾವತಿ: ನಗರದ ಮಿತ್ರ ಕಲಾ ಮಂಡಳಿ ಆಶ್ರಯದಲ್ಲಿ ಮೊದಲ ಬಾರಿಗೆ ನಾಟಕ ಕಲಿಯಲು ಬಯಸುವ ಯುವ ಸಮುದಾಯದವರಿಗೆ ರಂಗಭೂಮಿ ಕಲಾವಿದ, ನಿರ್ದೇಶಕ  ಅಪರಂಜಿ ಶಿವರಾಜ್ ನಿರ್ದೇಶನದಲ್ಲಿ ಉಚಿತ ತರಬೇತಿ ನೀಡಲಾಗುವುದು. 
    ಈಗಾಗಲೇ ಯುವ ಸಮುದಾಯದ ಸಾಕಷ್ಟು ಮಂದಿಗೆ ತರಭೇತಿ ನೀಡಲಾಗಿದ್ದು, ಅಲ್ಲದೆ ತರಬೇತಿ ಪಡೆದವರಿಂದ ಹಲವು ವೇದಿಕೆಗಳಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆಸಕ್ತ ಯುವಕ/ಯುವತಿಯರು ರಂಗ ತರಬೇತಿ ಪಡೆಯಲು ಹಾಗು ಹೆಚ್ಚಿನ ಮಾಹಿತಿಗೆ ಮೊ: ೭೯೭೫೦೪೨೧೩೦ ಅಥವಾ ೯೯೮೦೫೩೪೪೦೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.