ಶುಕ್ರವಾರ, ಸೆಪ್ಟೆಂಬರ್ 12, 2025

ಜನವಸತಿ ಪ್ರದೇಶಗಳಲ್ಲಿಯೇ ಗೋವುಗಳ ಕಳ್ಳತನ : ಗೋವುಗಳನ್ನು ರಕ್ಷಿಸಲು ಆಗ್ರಹ

ಭದ್ರಾವತಿ ಜನವಸತಿ ಪ್ರದೇಶಗಳಲ್ಲಿಯೇ ಗೋವುಗಳ ಕಳ್ಳತನ ನಡೆಯುತ್ತಿದೆ. ಕಳೆದ ಕೇವಲ ೨೦ ದಿನಗಳಲ್ಲಿ ೯ ಗೋವುಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಹಲವಾರು ವರ್ಷಗಳಿಂದ ಗೋ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಿಂದೂ ಜಾಗೃತಿ ವೇದಿಕೆ ಶಿವಮೊಗ್ಗ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 
     ಭದ್ರಾವತಿ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಕಾನೂನು ಜಾರಿಯಲ್ಲಿದ್ದರೂ ಸಹ ಒಂದೆಡೆ ನಗರದಲ್ಲಿ ಗೋವುಗಳ ಹತ್ಯೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮತ್ತೊಂದೆಡೆ ಜನವಸತಿ ಪ್ರದೇಶಗಳಲ್ಲಿಯೇ ಗೋವುಗಳ ಕಳ್ಳತನ ನಡೆಯುತ್ತಿದೆ. ಕಳೆದ ಕೇವಲ ೨೦ ದಿನಗಳಲ್ಲಿ ೯ ಗೋವುಗಳು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಹಲವಾರು ವರ್ಷಗಳಿಂದ ಗೋ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹಿಂದೂ ಜಾಗೃತಿ ವೇದಿಕೆ ಶಿವಮೊಗ್ಗ ಜಿಲ್ಲಾ ಸಂಯೋಜಕ ದೇವರಾಜ್ ಅರಳಿಹಳ್ಳಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 
     ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೩೧ರ ಜಿಂಕ್‌ಲೈನ್‌ನಲ್ಲಿ ಕಳೆದ ೨೦ ದಿನಗಳಲ್ಲಿ ೩ ರೈತ ಕುಟುಂಬಗಳ ೯ ಗೋವುಗಳನ್ನು ಕಳ್ಳತನ ಮಾಡಲಾಗಿದ್ದು, ಇದರಿಂದ ರೈತ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿವೆ. ವಿಶೇಷ ಎಂದರೆ ಗೋವುಗಳು ಮೇಯಲು ಹೋದಾಗ ಕಳ್ಳತನವಾಗುತ್ತವೆ. ಆದರೆ ಇಲ್ಲಿ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದುವರೆಗೂ ಕಳ್ಳರ ಬಗ್ಗೆ ಸುಳಿವಿಲ್ಲ. 
     ಗೋವುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿರುವ ರೈತ ಕುಟುಂಬಗಳ ಪರ ಹೋರಾಟಕ್ಕೆ ಮುಂದಾಗಿರುವ ದೇವರಾಜ್‌ರವರು ಪೊಲೀಸರಿಗೆ ದೂರು ನೀಡಿದ್ದರೂ ಸಹ ಇದುವರೆಗೂ ಕಳ್ಳರನ್ನು ಪತ್ತೆ ಮಾಡದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇಲ್ಲಿನ ನಿವಾಸಿಗಳು ಹಗಲಿರುಳು ಗೋವುಗಳನ್ನು ಕಾಯುವ ಪರಿಸ್ಥಿತಿ ಉಂಟಾಗಿದೆ. ಗೋವುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಪೊಲೀಸರು ಹೆಚ್ಚಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.  
     ದೇವರಾಜ್ ಅರಳಿಹಳ್ಳಿಯವರ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಾದ ಸುಧೀಂದ್ರ ಸಾಗರ. ಫೋಕಸ್ ಮಂಜುನಾಥ್,  ರಕ್ಷಿತ್ ಸೇರಿದಂತೆ ಇನ್ನಿತರರು ಗೋವುಗಳನ್ನು ಕಳೆದುಕೊಂಡ ರೈತ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.  
 

ಕಣ್ಮನ ಸೆಳೆಯುತ್ತಿದೆ ಶ್ರೀ ವೀರಾಂಜನೇಯ ಸ್ವಾಮಿ ಗಣಪತಿ

ಭದ್ರಾವತಿ ನಗರದ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಬಳಿ ಒಂದೇ ಮಾತರಂ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೨೧ನೇ ವರ್ಷದ ಶ್ರೀ ವೀರಾಂಜನೇಯ ಸ್ವಾಮಿ ಗಣಪತಿ ಭಕ್ತರ ಕಣ್ಮನ ಸೆಳೆಯುತ್ತಿದೆ. 
    ಭದ್ರಾವತಿ : ನಗರದ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಬಳಿ ಒಂದೇ ಮಾತರಂ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೨೧ನೇ ವರ್ಷದ ಶ್ರೀ ವೀರಾಂಜನೇಯ ಸ್ವಾಮಿ ಗಣಪತಿ ಭಕ್ತರ ಕಣ್ಮನ ಸೆಳೆಯುತ್ತಿದೆ. 
    ವೈಭವಯುತ ಅಲಂಕಾರದೊಂದಿಗೆ ೨೧ ದಿನಗಳ ಕಾಲ ಗಣಪತಿ ಪ್ರತಿಷ್ಠಾಪಿಸಲಾಗಿದ್ದು,  ಪ್ರತಿನಿತ್ಯ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ. ಶನಿವಾರ ಹೋಮ, ವಿಶೇಷ ಪೂಜೆ ಏರ್ಪಡಿಸಲಾಗಿದೆ. ಮಂಗಳವಾರ ವಿವಿಧ ಕಲಾತಂಡಗಳ ಮೆರವಣಿಯೊಂದಿಗೆ ವಿಸರ್ಜನೆ ನಡೆಯಲಿದೆ.
 

ಅನಧಿಕೃತ ಅಂಗಡಿಗಳ ತೆರವುಗೊಳಿಸಲು ದೂರು ಸಲ್ಲಿಸಲು ಮುಂದಾದ ಅಂಗಡಿ ಮುಂಗಟ್ಟುಗಳ ಮಾಲೀಕರು

ನಗರಸಭೆ ಆಡಳಿತ ನಿರ್ಲಕ್ಷ್ಯತದ ವಿರುದ್ಧ ಉಪ ಲೋಕಾಯುಕ್ತರಿಗೆ ದೂರು

ಭದ್ರಾವತಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಮುಂಭಾಗ ಮಾರಿಯಮ್ಮ ದೇವಸ್ಥಾನದ ಬಳಿ ಬಿ.ಎಚ್ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳು. 
    ಭದ್ರಾವತಿ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣದ ಮುಂಭಾಗ ಮಾರಿಯಮ್ಮ ದೇವಸ್ಥಾನದ ಬಳಿ ಬಿ.ಎಚ್ ರಸ್ತೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ನಗರಸಭೆ ಆಡಳಿತ ನಿರ್ಲಕ್ಷ್ಯತನ ವಹಿಸುತ್ತಿದೆ ಎಂದು ಆರೋಪಿಸಿ ಇಲ್ಲಿನ ಅಂಗಡಿ ಮುಂಗಟ್ಟುಗಳ ಮಾಲೀಕರು ಉಪ ಲೋಕಾಯುಕ್ತರಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. 
    ೨೦೦೮-೨೦೦೯ರಲ್ಲಿ ಬಿ.ಎಚ್ ರಸ್ತೆ ಅಗಲೀಕರಣ ಸಮಯದಲ್ಲಿ ಅಂಗಡಿಮುಂಗಟ್ಟುಗಳ ಮಾಲೀಕರು ಬಿಟ್ಟುಕೊಟ್ಟಿದ್ದ ಜಾಗದಲ್ಲಿಯೇ ಇದೀಗ ಅನಧಿಕೃತ ಹೂ, ಹಣ್ಣು ಹಾಗು ಪಾನಿಪುರಿ ಅಂಗಡಿಗಳು ತಲೆ ಎತ್ತಿವೆ. ವಾಹನ ನಿಲುಗಡೆ ನಿಷೇಧಿತ ಸ್ಥಳದಲ್ಲಿಯೇ ನಿರ್ಮಿಸಿಕೊಂಡಿದ್ದರೂ ಸಹ ಪೊಲೀಸರಾಗಲಿ ಅಥವಾ ನಗರಸಭೆ ಆಡಳಿತವಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
    ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಅಂಗಡಿಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅಲ್ಲದೆ ಇಲ್ಲಿ ಸದಾ ಜನಸಂದಣಿಯಿಂದ ಕೂಡಿರುತ್ತದೆ. ಇದರಿಂದಾಗಿ ಪಾದಚಾರಿಗಳ ಸಂಚಾರಕ್ಕೂ ತೊಂದರೆಯಾಗಿದೆ. ಈ ಸಂಬಂಧ ಕಳೆದ ಸುಮಾರು ೧೫ ತಿಂಗಳ ಹಿಂದೆ ನ್ಯೂಟೌನ್ ಪೊಲೀಸ್ ಠಾಣೆಗೂ ಸಹ ದೂರು ನೀಡಲಾಗಿದೆ. ಅಲ್ಲದೆ ಸುಮಾರು ೧ ವರ್ಷದ ಹಿಂದೆ ೨ ಬಾರಿ ಶಿವಮೊಗ್ಗ ಲೋಕಾಯುಕ್ತ ಪೊಲೀಸರಿಗೂ ದೂರು ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. 
ಈ ನಡುವೆ ಇತ್ತೀಚೆಗೆ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿರುವ ನೂತನ ಪೌರಾಯುಕ್ತರನ್ನು ಅಂಗಡಿ ಮುಂಗಟ್ಟುಗಳ ಮಾಲೀಕರು ಭೇಟಿಯಾಗಿ ಚರ್ಚಿಸಿದ್ದು, ಆದರೆ ಪೌರಾಯುಕ್ತರು ಅನಧಿಕೃತ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತ್ತಿದ್ದಾರೆ. ಈ ನಡುವೆ ತಾಲೂಕು ಆಡಳಿತ ಹಾಗು ಜಿಲ್ಲಾಡಳಿತಕ್ಕೂ ಈ ಸಂಬಂಧ ಮನವಿ ಸಲ್ಲಿಸಲಾಗಿದೆ. ಆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. 
ಅಂಗಡಿ ಮುಂಗಟ್ಟುಗಳ ಮಾಲೀಕರಾದ ಶ್ರೀ ಮಾರುತಿ ಸ್ವೀಟ್ ಸ್ಟಾಲ್ & ಬೇಕರಿ ಪುಟ್ಟಸ್ವಾಮಿ, ಜೈ ಹಿಂದೂ ಟ್ರಾನ್ಸ್ ಪೋರ್ಟ್ ಅಬ್ದುಲ್ ನವೀದ್, ಶ್ರೀ ಮಂಜುನಾಥ ಕಾಂಡಿಮೆಂಟ್ಸ್  ಎಚ್.ಆರ್ ಶಿವಕುಮಾರ್, ಜೆ.ಪಿ ರೋಡ್ ಲೈನ್ಸ್ ಮೋಹನ್ ಸಿಂಗ್, ನಿರಾಲ ರೋಡ್‌ವೇಸ್ ಅಂಜನಾಮೂರ್ತಿ, ಹೋಟೆಲ್ ಮಿಲನ್, ವಿಜಯಶ್ರೀ ಕ್ಯಾಂಟೀನ್ ಸೇರಿದಂತೆ ಇನ್ನಿತರ ಅಂಗಡಿ ಮುಂಗಟ್ಟುಗಳ ಮಾಲೀಕರು ದೂರು ಸಲ್ಲಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. 
 

ಗುರುವಾರ, ಸೆಪ್ಟೆಂಬರ್ 11, 2025

ಲಿಂಕ್‌ಲೈನ್ ಕಾಮಕಾರಿ : ಸೆ.೧೨ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ: ಮೆಸ್ಕಾಂ ನಗರ ಉಪವಿಭಾಗದ ವ್ಯಾಪ್ತಿಯಲ್ಲಿ ಅಂಕ್‌ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರ ಹಿನ್ನಲೆಯಲ್ಲಿ ಮಾರ್ಗ ಮುಕ್ತತೆ ಪಡೆಯಲು ಜೆ.ಪಿ.ಎಸ್ ಕಾಲೋನಿಯಲ್ಲಿರುವ ೧೧೦/೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಸೆ.೧೨ರ ಶುಕ್ರವಾರ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೭ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ನ್ಯೂಟೌನ್, ನ್ಯೂ ಕಾಲೋನಿ, ವಿದ್ಯಾಮಂದಿರ, ಆಂಜನೇಯ ಅಗ್ರಹಾರ ಆಕಾಶವಾಣಿ, ಕಾಗದನಗರ, ಸುರಗಿತೋಪು, ಆನೆಕೊಪ್ಪ, ಉಜ್ಜನಿಪುರ, ಬುಳ್ಳಾಪುರ, ಹೊಡ್ಕೋ ಕಾಲೋನಿ, ಬೊಮ್ಮನಕಟ್ಟೆ, ಹೊಸಸಿದ್ದಾಪುರ, ಸಂಪಿಗೆಶೆಟ್ಟಿ ಬಡಾವಣೆ, ಎನ್‌ಟಿಬಿ ಬಡಾವಣೆ, ಸರ್.ಎಂ.ವಿ ಬಡಾವಣೆ, ಹಳೇಸಿದ್ದಾಪುರ, ಹೊಸೂರು, ಹೊಸೂರು ತಾಂಡ್ಯ, ಸಂಕ್ಲೀಪುರ, ಹುತ್ತಾ ಕಾಲೋನಿ, ಐ.ಟಿ.ಐ, ಜನ್ನಾಪುರ, ಬಿ.ಎಚ್.ರಸ್ತೆ, ಅಪ್ಪರ್ ಹುತ್ತಾ, ಲೋಯರ್ ಹುತ್ತಾ, ಜಿಂಕ್‌ಲೈನ್, ತರೀಕೆರೆ ರಸ್ತೆ, ಸಾದತ್ ಕಾಲೋನಿ, ನೆಹರುನಗರ, ಸುಣ್ಣದಹಳ್ಳಿ, ಬಸವನಗುಡಿ, ಶಿವನಿ ವೃತ್ತ. ಹಿರಿಯೂರು, ಹೊಸನಂಜಾಪುರ, ಸಿದ್ದರಹಳ್ಳಿ, ಗೊಂದಿ, ತಾರೀಕಟ್ಟೆ, ಬಿಳಿಕಿ, ಬಿಳಕಿ ತಾಂಡ, ಹೊಳೆಗಂಗೂರು, ಲಕ್ಷ್ಮೀಸಾಗರ(ರಬ್ಬರ್ ಕಾಡು). ಸುಲ್ತಾನಮಟ್ಟಿ ಕಾರೇಹಳ್ಳಿ, ಬಾಳೆಮಾರನಹಳ್ಳಿ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟೆ. ಕಾಳನಕಟ್ಟೆ, ಹೊಳೆನೇರಳೇಕೆರೆ, ಅಂತರಗಂಗೆ, ದೊಣಬಘಟ್ಟ, ತಡಸ, ಚಿಕ್ಕಗೊಪ್ಪೇನಹಳ್ಳಿ, ಬಾರಂದೂರು, ಕಲ್ಲಹಳ್ಳಿ, ಹಾಗಲಮನೆ, ಯರೇಹಳ್ಳಿ, ಮಾವಿನಕೆರೆ, ದೊಡ್ಡೇರಿ, ಮಜ್ಜಿಗೇನಹಳ್ಳಿ, ಪದ್ಮೇನಹಳ್ಳಿ, ಲಕ್ಷ್ಮೀಪುರ, ಕೆಂಪೇಗೌಡನಗರ, ಬೊಮ್ಮನಹಳ್ಳಿ, ಕುಂಬಾರ ಗುಂಡಿ, ಹಳೇ ಬಾರಂದೂರು, ಹಳ್ಳಿಕೆರೆ, ಅಪ್ಪಾಜಿ ಬಡಾವಣಿ, ಉಕ್ಕುಂದ, ರತ್ನಾಪುರ, ಕೆಂಚೇನಹಳ್ಳಿ, ಗಂಗೂರು, ಬಿಸಿಲುಮನೆ, ದೇವರನರಸೀಪುರ, ಶಿವಪುರ, ಅಡ್ಲಘಟ್ಟ, ಅಂಬುದಹಳ್ಳಿ, ಅರಳಿಕೊಪ್ಪ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಹೊಸ ಮಾರ್ಗ ರಚಿಸುವ ಕಾಮಗಾರಿ : ಸೆ.೧೨ರಂದು ವಿದ್ಯುತ್ ವ್ಯತ್ಯಯ


    ಭದ್ರಾವತಿ : ಮೆಸ್ಕಾಂ ನಗರ ಉಪವಿಭಾಗದ ವತಿಯಿಂದ ನಗರದ ಬಿ.ಎಚ್ ರಸ್ತೆಯಲ್ಲಿ ಹೊಸದಾಗಿ ೧೧ ಕೆ.ವಿ ಮಾರ್ಗ ರಚಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಘಟಕ-೫ರ ಶಾಖಾ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಸೆ.೧೨ರ ಶುಕ್ರವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
ಶಿವರಾಮನಗರ, ವಿಶ್ವೇಶ್ವರಾಯ ನಗರ, ಜೇಡಿಕಟ್ಟೆ, ಜೇಡಿಕಟ್ಟೆ ಹೊಸೂರು, ಸಿರಿಯೂರು, ವೀರಾಪುರ, ಕಲ್ಲಹಳ್ಳಿ, ಸಂಕ್ಲೀಪುರ, ಹಾಗಲಮನೆ, ಹುಲಿರಾಮನಕೊಪ್ಪ, ಸಿರಿಯೂರು ತಾಂಡ ಮತ್ತು ಸಿರಿಯೂರು ಕ್ಯಾಂಪ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ. 

ಶಾಲಾ ನಿವೇಶನ ಭೂ ಪರಿವರ್ತನೆ, ಕಟ್ಟಡ ತೆರಿಗೆ ವಿನಾಯಿತಿ ಕೋರಿ ಶಾಸಕರಿಗೆ ಮನವಿ

ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳ ನಿವೇಶನ ಭೂ ಪರಿವರ್ತನೆಗೆ ಅವಕಾಶ ಮತ್ತು ಶಾಲಾ ನಿವೇಶನ ಹಾಗೂ ಕಟ್ಟಡಗಳ ತೆರಿಗೆ ವಿನಾಯಿತಿ ಮತ್ತಿತರೆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಭದ್ರಾವತಿ ತಾಲೂಕು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪದಾಧಿಕಾರಿಗಳು  ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಿದರು. 
    ಭದ್ರಾವತಿ : ಖಾಸಗಿ ಅನುದಾನಿತ/ಅನುದಾನ ರಹಿತ ಶಾಲಾ ಕಾಲೇಜುಗಳ ನಿವೇಶನ ಭೂ ಪರಿವರ್ತನೆಗೆ ಅವಕಾಶ ಮತ್ತು ಶಾಲಾ ನಿವೇಶನ ಹಾಗೂ ಕಟ್ಟಡಗಳ ತೆರಿಗೆ ವಿನಾಯಿತಿ ಮತ್ತಿತರೆ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ತಾಲೂಕು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪದಾಧಿಕಾರಿಗಳು  ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಿದರು. 
    ಒಕ್ಕೂಟದ ಅಧ್ಯಕ್ಷ ಡಿ. ಪ್ರಭಾಕರ ಬೀರಯ್ಯ ನೇತೃತ್ವದಲ್ಲಿ ಶಾಸಕರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ಸು ಸಾಧಿಸಿ, ಅತ್ಯುತ್ತಮ ಫಲಿತಾಂಶ ನೀಡುವಲ್ಲಿ ಮುಂದಾಗಿರುವ ಖಾಸಗಿ ಶಾಲಾ-ಕಾಲೇಜುಗಳ ಸೇವೆ ಅನನ್ಯವಾಗಿದೆ.  ಸರ್ಕಾರ ಶಾಲಾ ಅಭಿವೃದ್ದಿಗೆ ಸಹಕರಿಸುವ ಬದಲು ಶಿಕ್ಷಣ ಇಲಾಖೆ ಮೂಲಕ ಹೊಸ ಹೊಸ ಕಾನೂನುಗಳ ಸುತ್ತೋಲೆಗಳನ್ನು ಹೊರಡಿಸುವ ಮೂಲಕ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಗಳ ಕಿರಿಕಿರಿಗೆ ಕಾರಣವಾಗಿದೆ. ಇದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮಾನಸಿಕವಾಗಿ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದರು. 
  ನಗರ ಮತ್ತು ಗ್ರಾಮಾಂತರ ಸೇರಿದಂತೆ ಎಲ್ಲಾ ವಿದ್ಯಾಸಂಸ್ಥೆಗಳಿಗೂ ಒಂದೇ ಮಾದರಿಯಲ್ಲಿ ತೆರಿಗೆ ವಿನಾಯಿತಿ ನೀಡಬೇಕು. ಸಕ್ಷಮ ಪ್ರಾಧಿಕಾರದಿಂದ ಖಾತೆ ಅಥವಾ ಕಟ್ಟಡ ನಕ್ಷೆ ಅನುಮೋದನೆ, ಪರಿಗಣನೆ, ಶಾಲಾ ನಿವೇಶನಗಳ ಭೂ ಪರಿವರ್ತನೆಗೆ ಅವಕಾಶ ನೀಡಬೇಕು. ಅಗ್ನಿ ಸುರಕ್ಷತೆ ಮತ್ತು ಕಟ್ಟಡ ದಕ್ಷತೆ ಹೆಸರಲ್ಲಿ ಸರಳೀಕರಣ, ಪ್ರತಿ ೧೦ ವರ್ಷಕ್ಕೆ ಶಾಲಾ ಪರವಾನಗಿ ನವೀಕರಣಕ್ಕೆ ಅವಕಾಶ ಮಾಡಿಕೊಡಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಯಿತು. 
ಮನವಿಗೆ ಸ್ಪಂದಿಸಿದ ಶಾಸಕರು ಸಂಗಮೇಶ್ವರ್  ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.
  ಒಕ್ಕೂಟದ ಉಪಾಧ್ಯಕ್ಷರಾದ ಡಾ. ವಿನೀತ್ ಆನಂದ್, ಲತಾ ರಾಬರ್ಟ್, ಕಾರ್ಯದರ್ಶಿ ಶಿವಲಿಂಗೇಗೌಡ, ಸಹ ಕಾರ್ಯದರ್ಶಿಗಳಾದ ಬಿ.ಎಂ ಸಂತೋಷ್, ಬಿ. ದೇವರಾಜ್, ಖಜಾಂಚಿ ಡಾ. ನಾಗರಾಜ್, ನಿರ್ದೇಶಕರುಗಳಾದ ಬಿ. ಜಗದೀಶ್, ಬಿ.ಸಿ ಪ್ರಸಾದ್, ಪ್ರಭಾಕರ್, ಜರೇನಾಬೇಗಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಗರಸಭೆಯಿಂದ ನಾಡಹಬ್ಬ ದಸರಾ ಆಚರಣೆ : ವಿವಿಧ ಸಂಘ-ಸಂಸ್ಥೆಗಳ, ದೇವಸ್ಥಾನ ಸಮಿತಿಗಳೊಂದಿಗೆ ಸಭೆ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರಸಭೆ ವತಿಯಿಂದ ಅದ್ದೂರಿಯಾಗಿ ನಾಡಹಬ್ಬ ಆಚರಿಸಲು ನಿರ್ಧರಿಸಲಾಗಿದ್ದು, ನಗರದ ವಿವಿಧ ಸಂಘ-ಸಂಸ್ಥೆಗಳು, ದೇವಸ್ಥಾನ ಸಮಿತಿಗಳು ಸೇರಿದಂತೆ ಪ್ರತಿಯೊಬ್ಬರು ಯಶಸ್ವಿಗೊಳಿಸಲು ಕೈಜೋಡಿಸಬೇಕೆಂದು ಗುರುವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋರಲಾಯಿತು. 
    ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ವತಿಯಿಂದ ಅದ್ದೂರಿಯಾಗಿ ನಾಡಹಬ್ಬ ಆಚರಿಸಲು ನಿರ್ಧರಿಸಲಾಗಿದ್ದು, ನಗರದ ವಿವಿಧ ಸಂಘ-ಸಂಸ್ಥೆಗಳು, ದೇವಸ್ಥಾನ ಸಮಿತಿಗಳು ಸೇರಿದಂತೆ ಪ್ರತಿಯೊಬ್ಬರು ಯಶಸ್ವಿಗೊಳಿಸಲು ಕೈಜೋಡಿಸಬೇಕೆಂದು ಗುರುವಾರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೋರಲಾಯಿತು. 
    ಸಭೆ ಆರಂಭದಲ್ಲಿ ಪೌರಾಯುಕ್ತ ಕೆ.ಎನ್ ಹೇಮಂತ್ ಮಾತನಾಡಿ, ನಾಡಹಬ್ಬ ದಸರಾ ಆಚರಣೆ ರೂಪುರೇಷೆಗಳನ್ನು ತಿಳಿಸಿದರು. ವಿವಿಧ ದೇವಸ್ಥಾನಗಳ ಸಮಿತಿ ಪ್ರಮುಖರು ಮಾತನಾಡಿ, ದಸರಾ ಮೆರವಣಿಗೆ ವ್ಯವಸ್ಥಿತವಾಗಿ ನಡೆಯಬೇಕು. ನಿಗದಿತ ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಬೇಕು. ನಗರದ ಎಲ್ಲಾ ದೇವಸ್ಥಾನಗಳ ಅಲಂಕೃತಗೊಂಡ ದೇವಾನುದೇವತೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೇವಸ್ಥಾನ ಸಮಿತಿಯವರು ಎಲ್ಲಾ ರೀತಿಯ ಸಿದ್ದತೆಗಳನ್ನು ಮುಂಚಿತವಾಗಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಲಾಯಿತು. 
    ಈ ನಡುವೆ ಕೆಲವು ದೇವಸ್ಥಾನಗಳ ಸಮಿತಿಯವರು ಮಾತನಾಡಿ, ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೇವಸ್ಥಾನಗಳಿಗೆ ನೀಡುತ್ತಿರುವ ಗೌರವಧನ ಹೆಚ್ಚಿಸಬೇಕು. ಈ ಹಿಂದೆ ಗೌರವಧನದ ಚೆಕ್ ಬೌನ್ಸ್ ಆಗಿದ್ದು, ಇದನ್ನು ವಿಚಾರಿಸಲು ನಗರಸಭೆಗೆ ಬಂದರೆ ಅಧಿಕಾರಿಗಳು ಅಗೌರವದಿಂದ ವರ್ತಿಸುತ್ತಾರೆಂದು ದೂರುವ ಮೂಲಕ ದೇವಸ್ಥಾನ ಸಮಿತಿಗಳಿಗೆ ಅವಮಾನ ಮಾಡುವ ಕೆಲಸ ಮಾಡಿಬೇಡಿ ಎಂದರು. 
    ಮೆರವಣಿಗೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ, ಸ್ವಸಹಾಯ ಸಂಘಗಳ ಮಹಿಳೆಯರು, ಅಂಗನವಾಡಿ ಹಾಗು ಆಶಾಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಬೇಕು. ಜೊತೆಗೆ ಮೆರವಣಿಗೆಯಲ್ಲಿ ಶಾಲಾ-ಕಾಲೇಜು, ಪೊಲೀಸ್ ಹಾಗು ಗೃಹರಕ್ಷಕ ದಳದಿಂದ ಪಥಸಂಚಲನ ನಡೆಸಬೇಕು. ಇದರಿಂದ ಮೆರವಣಿಗೆಗೆ ಮತ್ತಷ್ಟು ಮೆರಗು ಬರಲಿದೆ ಎಂದು ಸಲಹೆ ವ್ಯಕ್ತಪಡಿಸಲಾಯಿತು. 
    ನಗರಸಭೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ನಾಡಹಬ್ಬ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇಲ್ಲಿನ ನಾಡಹಬ್ಬ ದಸರಾ ಆಚರಣೆಗೆ ವಿಶಿಷ್ಟವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ನಡುವೆ ಜಿಲ್ಲಾ ಧಾರ್ಮಿಕ ಪರಿಷತ್ ನಿರ್ದೇಶಕ ಕೆ. ರಮಾಕಾಂತ ಮಾತನಾಡಿ, ನಾಡಹಬ್ಬಕ್ಕೆ ತಹಸೀಲ್ದಾರ್ ಅವರನ್ನು ಸಂಪ್ರದಾಯ ಬದ್ಧವಾಗಿ ಆಹ್ವಾನಿಸುವುದನ್ನು ಇಂದಿಗೂ ರೂಢಿಸಿಕೊಂಡು ಬರಲಾಗಿದೆ. ಇಂತಹ ಪದ್ದತಿ ಜಿಲ್ಲೆಯಲ್ಲಿ ಎಲ್ಲೂ ಸಹ ಆಚರಣೆಯಲ್ಲಿಲ್ಲ ಎಂಬುದು ವಿಶೇಷವಾಗಿದೆ. ನಗರಸಭೆ ಸದಸ್ಯರು, ಅಧಿಕಾರಿಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕರಿಸಿದ್ದಲ್ಲಿ ಇನ್ನೂ ಹೆಚ್ಚಿನ ವೈಭವಯುತವಾಗಿ ಆಚರಿಸಬಹುದು ಎಂದರು.
    ಸಭೆಯಲ್ಲಿ ಈ ಬಾರಿ ದಸರಾ ಆಚರಣೆಗೆ ಆನೆ ಅಂಬಾರಿ ಕುರಿತು ಸಹ ಚರ್ಚಿಸಲಾಯಿತು. ಈ ಸಂಬಂಧ ಕೆಲವು ಸದಸ್ಯರು ಮಾತನಾಡಿ, ಆನೆ ಅಂಬಾರಿ ದುಬಾರಿಯಾಗಲಿದ್ದು, ನಗರಸಭೆ ಬಜೆಟ್‌ನಲ್ಲಿ ಸಾಧ್ಯವಾಗುದಿಲ್ಲ. ಅಲ್ಲದೆ ಆನೆ ಅಂಬಾರಿಗಾಗಿ ಸಾಕಷ್ಟು ಕಾನೂನು ತೊಡಕುಗಳು ಎದುರಾಗಲಿವೆ. ಹಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇದರಿಂದ ಹೆಚ್ಚಿನ ಸಮಸ್ಯೆ ಎದುರಾಗಲಿದೆ ಎಂದರು. 
    ನಾಡಹಬ್ಬ ದಸರಾ ಆಚರಣೆ ಸಂಬಂಧ ಬುಧವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಇಲಾಖೆಗಳು ಕೈಗೊಳ್ಳಬೇಕಾಗಿರುವ ಕಾರ್ಯಗಳ ಕುರಿತು ಚರ್ಚಿಸಲಾಯಿತು. ಪೊಲೀಸ್, ಶಿಕ್ಷಣ, ಲೋಕೋಪಯೋಗಿ, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. 
    ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ನಾಡಹಬ್ಬ ದಸರಾ ವಿವಿಧ ಸಮಿತಿಗಳ ಅಧ್ಯಕ್ಷರಾದ ಬಿ.ಎಂ ಮಂಜುನಾಥ, ಕೆ. ಸುದೀಪ್ ಕುಮಾರ್, ವಿ. ಕದಿರೇಶ್, ಚನ್ನಪ್ಪ, ಸರ್ವಮಂಗಳ ಭೈರಪ್ಪ, ಉದಯ್ ಕುಮಾರ್, ಬಷೀರ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.