ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್
ಶಾಸಕ ಬಿ.ಕೆ ಸಂಗಮೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಜ. ೧೩: ನಗರದ ಬುಳ್ಳಾಪುರ ಮಿಲ್ಟ್ರಿಕ್ಯಾಂಪ್ ಬಳಿ ಜ.೧೬ರಿಂದ ಆರಂಭಗೊಳ್ಳುತ್ತಿರುವ ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ವಿಭಾಗವಾಗಿರುವ ಕ್ಷಿಪ್ರ ಕಾರ್ಯ ಪಡೆ (ರ್ಯಾಪಿಡ್ ಆಕ್ಷನ್ ಪೋರ್ಸ್-ಆರ್ಎಎಫ್) ಘಟಕ ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ೨೦೧೪ರಲ್ಲಿಯೇ ಆರ್ಎಎಫ್ ಘಟಕ ಸ್ಥಾಪಿಸುವ ಸಂಬಂಧ ಕರ್ನಾಟಕ, ಗೋವಾ, ಕೇರಳ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಪ್ರಸ್ತಾವನೆ ಹೊರಡಿಸಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗು ಗೃಹ ಸಚಿವರಾಗಿದ್ದ ಡಾ. ಜಿ. ಪರಮೇಶ್ವರ್ರವರು ರಾಜ್ಯದಲ್ಲಿ ಮಂಗಳೂರು ಪ್ರದೇಶವನ್ನು ಗುರುತಿಸಿ ಶಿಫಾರಸ್ಸು ಮಾಡಿದ್ದರು. ಆದರೆ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಮಂಗಳೂರು ಸೂಕ್ತ ಸ್ಥಳವಲ್ಲ ಎಂದು ತಿಳಿಸಿತ್ತು. ಈ ಹಿನ್ನಲೆಯಲ್ಲಿ ಅಂದಿನ ಲೋಕಸಭಾ ಸದಸ್ಯ ಕೆ.ಎಚ್ ಮುನಿಯಪ್ಪನವರ ಮೂಲಕ ನನ್ನ ಕ್ಷೇತ್ರದಲ್ಲಿ ಆರ್ಎಎಫ್ ಘಟಕ ಸ್ಥಾಪಿಸುವಂತೆ ಸಿದ್ದರಾಮಯ್ಯ ಹಾಗು ಪರಮೇಶ್ವರ್ರವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. ಕೇಂದ್ರ ಸರ್ಕಾರ ಈ ಸ್ಥಳ ಸೂಕ್ತವೆಂದು ಪರಿಗಣಿಸಿದ ಹಿನ್ನಲೆಯಲ್ಲಿ ಅಗತ್ಯವಿರುವ ೫೦ ಎಕರೆ ಜಾಗವನ್ನು ಗುರುತಿಸಿ ರಾಜ್ಯ ಸರ್ಕಾರ ಫೆಬ್ರವರಿ ೨೭, ೨೦೧೯ರಂದು ಆಡಳಿತಾತ್ಮಕ ಅನುಮೋದನೆ ಸಹ ನೀಡಿತು. ಈ ಹಿನ್ನಲೆಯಲ್ಲಿ ಘಟಕ ಆರಂಭಕ್ಕೆ ನಾನೇ ಕಾರಣಕರ್ತನಾಗಿದ್ದೇನೆ. ಬಿಜೆಪಿಯವರು ಘಟಕ ಆರಂಭಕ್ಕೆ ನಾವೇ ಕಾರಣಕರ್ತರು ಎಂದು ಎಲ್ಲೆಡೆ ಹೇಳಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಆಡಳಿತಾತ್ಮಕ ಅನುಮೋದನೆ ನಂತರ ಮುಂದಿನ ಪ್ರಕ್ರಿಯೆಯನ್ನು ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೈಗೊಂಡಿದ್ದು, ಇದೀಗ ಅಂತಿಮ ಹಂತಕ್ಕೆ ಬಂದು ಜ.೧೬ರಂದು ಕಾರ್ಯಾರಂಭಗೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಕ್ಷೇತ್ರದ ಸುತ್ತಮುತ್ತ ಸೂಕ್ಷ್ಮ ಪ್ರದೇಶವಾಗಿರುವ ಹಿನ್ನಲೆಯಲ್ಲಿ ಘಟಕ ಆರಂಭವಾಗುತ್ತಿರುವುದರಿಂದ ಗಲಭೆಗಳು ನಿಯಂತ್ರಣಕ್ಕೆ ಬರಲಿವೆ. ಅಲ್ಲದೆ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಿದ್ದು, ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಅವನತಿಯಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಜನರು ನೆಮ್ಮದಿ ಕಾಣುವಂತಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಮುಖಂಡರಾದ ಲೋಕೇಶ್, ಎಸ್.ಎನ್ ಶಿವಪ್ಪ, ಎಂ. ಮುಸ್ವೀರ್ ಬಾಷ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment