Tuesday, March 9, 2021

ವಿವಿಧ ಬೇಡಿಕೆ ಈಡೇರಿಕೆಗಾಗಿ ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್ ನಿವಾಸಿಗಳಿಂದ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿ ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್(ಕೆಎಚ್‌ಬಿ) ಕಾಲೋನಿ ನಿವಾಸಿಗಳು ಮಂಗಳವಾರ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಿದರು.
     ಭದ್ರಾವತಿ, ಮಾ. ೯: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್(ಕೆಎಚ್‌ಬಿ) ಕಾಲೋನಿ ನಿವಾಸಿಗಳು ಮಂಗಳವಾರ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಿದರು.
    ಸುಮಾರು ೩೦ ವರ್ಷಗಳಿಂದ ವಾಸಿಸುತ್ತಿದ್ದು, ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಕಳೆದ ೩-೪ ವರ್ಷಗಳಿಂದ ಉದ್ಯಾನವನದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಮಕ್ಕಳ ಆಟಿಕೆಗಳು ತುಕ್ಕು ಹಿಡಿದು ಹಾಳಾಗಿವೆ. ತಕ್ಷಣ ಸ್ವಚ್ಛತೆ ಕೈಗೊಂಡು ಆಟಿಕೆಗಳನ್ನು ದುರಸ್ತಿಗೊಳಿಸುವುದು. ಕಾಲೋನಿಯಲ್ಲಿರುವ ಚರಂಡಿಗಳು ದುರ್ವಾಸನೆಯಿಂದ ಕೂಡಿದ್ದು, ಇದರಿಂದ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಒಳಚರಂಡಿ ವ್ಯವಸ್ಥೆ ಕೈಗೊಳ್ಳುವುದು.
   ಬಹುತೇಕ ರಸ್ತೆಗಳು ಹಾಳಾಗಿದ್ದು, ಡಾಂಬರೀಕರಣ ಕೈಗೊಳ್ಳುವುದು. ನಿವಾಸಿಗಳ ಕುಂದು-ಕೊರತೆಗಳನ್ನು ಆಲಿಸಲು ನಗರಸಭೆವತಿಯಿಂದ ಒಂದು ಕಛೇರಿ ತೆರೆಯುವುದರ ಜೊತೆಗೆ ನೀರಿನ ಕಂದಾಯ ಮತ್ತು ಆಸ್ತಿ ಕಂದಾಯ ಪಾವತಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವುದು. ಕಾಲೋನಿಯಲ್ಲಿ ವಿದ್ಯಾರ್ಥಿಗಳು, ಹಿರಿಯ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ವಾಚನಾಲಯ ತೆರೆಯುವುದು. ಕಾಲೇಜು ವಿದ್ಯಾರ್ಥಿಗಳು ಸಂಚರಿಸಲು ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಿ ಕೊಡುವುದು ಹಾಗು ನಗರ ಆರೋಗ್ಯ ಕೇಂದ್ರ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
   ನಿವಾಸಿಗಳಾದ ಎ.ಎನ್ ಪುಟ್ಟಸ್ವಾಮಿ, ಜಿ.ಎಸ್ ನಾಗರಾಜ, ಎಂ. ಶಾಂತ, ತಿಪ್ಪೇರುದ್ರಪ್ಪ, ಕೆ.ಬಿ ಪರಸಪ್ಪ, ಎಂ.ಜಿ ಬಸವರಾಜ, ದೇವೇಂದ್ರ, ಚಂದ್ರಶೇಖರ್, ಎಸ್.ಎನ್ ವೆಂಕಟೇಶ್, ಕೆ. ಮಮತ, ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಪರಮೇಶ್ವರಚಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment