ಬುಧವಾರ, ಮಾರ್ಚ್ 10, 2021

ಸದಾಶಿವ ಆಯೋಗದ ವರದಿ ಹೇಳಿಕೆ ಹಿಂಪಡೆಯಲಿ

ಸಚಿವ ಶ್ರೀರಾಮಲು ಕ್ಷಮೆಯಾಚನೆಗೆ ಬಂಜಾರ ಯುವಕರ ಸಂಘ ಆಗ್ರಹ

ಸಮಾಜ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲುರವರು ಸದಾಶಿವ ಆಯೋಗದ ವರದಿ ಕುರಿತು ನೀಡಿರುವ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
   ಭದ್ರಾವತಿ, ಮಾ. ೧೦: ಸಮಾಜ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲುರವರು ಸದಾಶಿವ ಆಯೋಗದ ವರದಿ ಕುರಿತು ನೀಡಿರುವ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಬುಧವಾರ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
   ಕಳೆದ ಎರಡು ದಿನಗಳ ಹಿಂದೆ ಹಲವಾರು ಜಾತಿ ಜನಾಂಗದವರು ಸೇರಿದ್ದ ಸಭೆಯೊಂದರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಸಚಿವ ಬಿ. ಶ್ರೀರಾಮುಲುರವರು ಸದಾಶಿವ ಆಯೋಗದ ವರದಿ ಜಾರಿಗೊಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಪರಿಶಿಷ್ಟ ಜಾತಿಯ ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಸೇರಿದಂತೆ ಸುಮಾರು ೧೦೧ ಜನಾಂಗದವರಿಗೆ ಅವಹೇಳನಕಾರಿಯಾಗುವ ರೀತಿಯಲ್ಲಿ ಸದಾಶಿವ ಆಯೋಗದ ವರದಿ ಕುರಿತು ಪ್ರಚಾರ ನಡೆಸಿದ್ದಾರೆ.
   ಇಂದಿಗೂ ಪರಿಶಿಷ್ಟ ಜಾತಿಯ ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಸೇರಿದಂತೆ ಇನ್ನಿತರ ಜನಾಂಗದವರು ಶೋಷಣೆಯಲ್ಲಿ ಬದುಕುತ್ತಿದ್ದು, ಸಚಿವರು ವಾಸ್ತವ್ಯಗಳನ್ನು ಅರಿತು ಕೊಳ್ಳಬೇಕು. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಎಲ್ಲಾ ಧರ್ಮ, ಜಾತಿ ಜನಾಂಗದವರನ್ನು ಸಮಾನತೆಯಿಂದ ಕಾಣುವ ನಿಟ್ಟಿನಲ್ಲಿ ಸಂವಿಧಾನ ರಚಿಸಿದ್ದಾರೆ. ಎಲ್ಲರೂ ಸಂವಿಧಾನದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳಬೇಕು. ಈ ಹಿನ್ನಲೆಯಲ್ಲಿ ಸಚಿವರು ತಕ್ಷಣ ಮುಖ್ಯಮಂತ್ರಿ ಸಮ್ಮುಖದಲ್ಲಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
   ಸಂಘದ ಅಧ್ಯಕ್ಷ ಕೃಷ್ಣನಾಯ್ಕ ನೇತೃತ್ವ ವಹಿಸಿದ್ದರು. ಬಿ. ಪ್ರವೀಣ್‌ಕುಮಾರ್, ಬಿ. ನಾಗನಾಯ್ಕ, ರಾಮನಾಯ್ಕ, ಹಾಲೇಶ್ ನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ