Saturday, March 4, 2023

ಎಂಪಿಎಂ ಬೊಂಬು ಸಂಗ್ರಹದಲ್ಲಿ ಬೆಂಕಿ ಅವಘಡ : ಲಕ್ಷಾಂತರ ರು. ಹಾನಿ

ರಾಜ್ಯ ಸರ್ಕಾರಿ ಸ್ವಾಮ್ಯದ ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯ ಸಕ್ಕರೆ ಘಟಕದ ಸಮೀಪದಲ್ಲಿರುವ ಬೊಂಬು ಸಂಗ್ರಹದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. 

    ಭದ್ರಾವತಿ, ಮಾ. ೪ : ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ಸಕ್ಕರೆ ಘಟಕದ ಸಮೀಪದಲ್ಲಿರುವ ಬೊಂಬು ಸಂಗ್ರಹದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರು. ಹಾನಿ ಸಂಭವಿಸಿದೆ.
    ಸುಮಾರು ೮ ವರ್ಷಗಳಿಂದ ಸ್ಥಗಿತಗೊಂಡಿರುವ ಎಂಪಿಎಂ ಕಾರ್ಖಾನೆಯಲ್ಲಿ ಈಗಾಗಲೇ ಯಂತ್ರೋಪಕರಣಗಳು ತುಕ್ಕು ಹಿಡಿದಿದ್ದು, ಖಾಲಿ ಜಾಗಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಈ ನಡುವೆ ಇದೀಗ ಬೆಂಕಿ ಅವಘಡ ಸಂಭವಿಸಿದ್ದು, ಸಕ್ಕರೆ ಘಟಕದ ಸಮೀಪದಲ್ಲಿರುವ ಬೊಂಬು ಸಂಗ್ರಹದಲ್ಲಿ ಬೆಂಕಿ ಅವಘಡದಿಂದ ಲಕ್ಷಾಂತರ ರು. ಮೌಲ್ಯದ ಮರಮುಟ್ಟುಗಳು ಸುಟ್ಟುಕರಕಲಾಗಿವೆ.
ಶುಕ್ರವಾರ ಮಧ್ಯಾಹ್ನ ೧೨.೩೦ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಸುಮಾರು ೧೦ ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ಅಗ್ನಿ ನಂದಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ಇದರಿಂದಾಗಿ ಹೆಚ್ಚಿನ ಹಾನಿ ತಪ್ಪಿದೆ.
    ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ೩, ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಯ ೧ ಅಗ್ನಿಶಾಮಕ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು. ಅಗ್ನಿಶಾಮಕ ಇಲಾಖೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅಶೋಕ್‌ಕುಮಾರ್, ಇಲಾಖೆಯ ಸ್ಥಳೀಯ ಸಿಬ್ಬಂದಿಗಳಾದ ಹುಲಿಯಪ್ಪ, ಬಾಬುಗೌಡ, ಅಶೋಕ್, ವಿನೂತನ್, ಮಹೇಂದ್ರ, ರಾಜಾನಾಯ್ಕ, ಹರೀಶ್, ಪ್ರಜ್ವಲ್, ವೀರೇಶ್, ಚಾಲಕರಾದ ಮಂಜುನಾಥ್, ರಾಘವೇಂದ್ರ, ರಮೇಶ್, ಎಂಪಿಎಂ ಅಗ್ನಿಶಾಮಕ ವಿಭಾಗದ ಮುರುಳಿ ಮೋಹನ್, ಉಮೇಶ್ ಸೇರಿದಂತೆ ಸುಮಾರು ೨೦ ಮಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

No comments:

Post a Comment