Saturday, July 29, 2023

ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚುವ ಆದೇಶ ಪುನರ್‌ ಪರಿಶೀಲಿಸಿ

ಮುಖ್ಯಮಂತ್ರಿಯಿಂದ ಕೇಂದ್ರ ಉಕ್ಕು ಸಚಿವರಿಗೆ ಪತ್ರ

ಭದ್ರಾವತಿ ವಿಐಎಸ್‌ಎಲ್‌ ಕಾರ್ಖಾನೆ
    ಭದ್ರಾವತಿ, ಜು. ೨೯: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶ ಪುನಃ ಪರಿಶೀಲನೆ ನಡೆಸುವಂತೆ ಕೇಂದ್ರ ಉಕ್ಕು ಸಚಿವರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.
    ಈ ಕುರಿತು ಕೇಂದ್ರ ಸಚಿವ  ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜು.೨೭ರಂದು ಪತ್ರ ಬರೆದಿದ್ದು, ಭದ್ರಾವತಿ ಕ್ಷೇತ್ರದ ಜನರು ವಿಐಎಸ್‌ಎಲ್‌ ಕಾರ್ಖಾನೆಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೆ ಈ  ಕಾರ್ಖಾನೆ ಕರ್ನಾಟಕ ರಾಜ್ಯದ ಇತಿಹಾಸದ ಭವ್ಯ ಪರಂಪರೆಯಾಗಿದೆ. ಭಾರತರತ್ನ, ಶ್ರೇಷ್ಠ ತಂತ್ರಜ್ಞ ಸರ್‌.ಎಂ ವಿಶ್ವೇಶ್ವರಾಯ ಅವರಿಗೆ ಗೌರವ ಸಲ್ಲಿಸಬೇಕಾದರೆ ಈ ಕಾರ್ಖಾನೆ ಉಳಿಯಬೇಕಾಗಿದೆ.  ಈ ಹಿಂದೆ ೨೦೧೮ರಲ್ಲಿ ರಾಜ್ಯ ಸರ್ಕಾರ ೧೫೦ ಎಕರೆ ಕಬ್ಬಿಣ ಅದಿರು ಗಣಿ ಕಾರ್ಖಾನೆಗೆ  ಮಂಜೂರಾತಿ ಮಾಡಿದ್ದು, ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯಗೊಂಡಿದೆ. ೨೦೨೪ರಿಂದ ಗಣಿಯಲ್ಲಿ ಅದಿರು ಉತ್ಪಾದನೆ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದೆ ಮುನ್ನಡೆಸಿಕೊಂಡು ಹೋಗುವ ಸಂಬಂಧ  ಪುನರ್‌ ಪರಿಶೀಲನೆ ಮಾಡುವಂತೆ ಮನವರಿಕೆ ಮಾಡಿದ್ದಾರೆ.
    ಮುಖ್ಯಮಂತ್ರಿಗಳು ಕೇಂದ್ರ ಸಚಿವರಿಗೆ ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕಾರ್ಮಿಕರು ಮುಂದಿನ ಬೆಳವಣಿಗೆಯನ್ನುಎದುರು ನೋಡುತ್ತಿದ್ದಾರೆ. ಕಾರ್ಖಾನೆ ಮುಂಭಾಗ ಕಳೆದ ಸುಮಾರು ೬ ತಿಂಗಳಿನಿಂದ ಗುತ್ತಿಗೆ ಕಾರ್ಮಿಕರು ಹೋರಾಟ ನಡೆಸುತ್ತಿದ್ದು, ಹೋರಾಟಕ್ಕೆ ಇದುವರೆಗೂ ಯಾವುದೇ ಪ್ರತಿಫಲ ಲಭಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.

No comments:

Post a Comment