ಭದ್ರಾವತಿ ನ್ಯೂಟೌನ್ ಸೇಂಟ್ ಚಾರ್ಲ್ಸ್ ಕರುಣಾ ಸೇವಾ ಕೇಂದ್ರದಲ್ಲಿ ಏಡ್ಸ್ ದಿನಾಚರಣೆ ಪ್ರಯುಕ್ತ ಮಾಹಿತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ : ಎಚ್ಐವಿ ವೈರಸ್ ದೇಶದಲ್ಲಿ ಕರ್ನಾಟಕ ೯ನೇ ಸ್ಥಾನದಲ್ಲಿದ್ದು, ಇದು ವಿಷಾದನೀಯ ಸಂಗತಿಯಾಗಿದೆ ಎಂದು ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸ್ತ್ರೀ ರೋಗ ಹಾಗು ಪ್ರಸೂತಿ ತಜ್ಞೆ ಡಾ. ವೀಣಾ ಭಟ್ ಹೇಳಿದರು.
ಅವರು ನ್ಯೂಟೌನ್ ಸೇಂಟ್ ಚಾರ್ಲ್ಸ್ ಕರುಣಾ ಸೇವಾ ಕೇಂದ್ರದಲ್ಲಿ ಏಡ್ಸ್ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಚ್ಐವಿ ವೈರಸ್ ೪ ವಿಧದಲ್ಲಿ ನಮ್ಮ ಶರೀರ ಪ್ರವೇಶಿಸುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಭೋಗ, ಸೋಂಕಿತ ಸಿರಿಂಜ್ ಮತ್ತು ಸೂಜಿಗಳನ್ನು ಹಂಚಿಕೊಳ್ಳುವುದು, ಕಲುಷಿತ ರಕ್ತ ಮತ್ತು ರಕ್ತದ ಉತ್ಪನ್ನಗಳೊಂದಿಗೆ ವರ್ಗಾವಣೆ ಹಾಗು ಗರ್ಭಾವಸ್ಥೆಯಲ್ಲಿ ಸೋಂಕಿತ ತಾಯಿಯ ಮೂಲಕ ವೈರಸ್ ಶರೀರ ಪ್ರವೇಶಿಸುತ್ತದೆ ಎಂದರು.
ತಾಯಿಯಿಂದ ಮಗುವಿಗೆ ಹೆಚ್ಚಾಗಿ ಶೇ.೩೦ರಷ್ಟು ಸೋಂಕು ಹರಡುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಮುಂಜಾಗ್ರತೆ ವಹಿಸುವುದರಿಂದ ಸೋಂಕು ಹರಡದಂತೆ ತಡೆಗಟ್ಟಬಹುದು. ಹೆಚ್ಐವಿ ಪೀಡಿತರಿಗೆ ಮತ್ತು ಮಕ್ಕಳಿಗೆ ಅನೇಕ ಉಚಿತ ಯೋಜನೆಗಳು ಜಾರಿಯಲ್ಲಿವೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ವಿಶ್ವ ಆರೋಗ್ಯ ಸಂಸ್ಥೆ ಮುಂಬರುವ ೫ ರಿಂದ ೬ ವರ್ಷಗಳಲ್ಲಿ ಎಚ್ಐವಿ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಧ್ಯೇಯ ಹೊಂದಿದೆ. ಇದರ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಹಾಗೂ ಸಮುದಾಯಗಳು ಜಾಗೃತಿ ವಹಿಸಲು ಕರೆ ನೀಡಿದರು.
ಕರುಣಾ ಸೇವಾ ಕೇಂದ್ರ ನಿರ್ದೇಶಕಿ ಸಿಸ್ಟರ್ ಹೆಲನ್ ಮೋರಸ್, ಸಿಸ್ಟರ್ ಪ್ರಭ, ಒಕ್ಕೂಟದ ಸದಸ್ಯರು, ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment