ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜದ ಸಭಾಂಗಣದಲ್ಲಿ ಅಪರಂಜಿ ಅಭಿನಯ ಶಾಲೆ ಹಾಗು ಮಹಿಳಾ ಸೇವಾ ಸಮಾಜದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹಿಳಾ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಪೇಪರ್ಟೌನ್ ಠಾಣಾ ನಿರೀಕ್ಷಕಿ ಕೆ. ನಾಗಮ್ಮ ಉದ್ಘಾಟಿಸಿದರು.
ಭದ್ರಾವತಿ: ತೊಟ್ಟಿಲು ತೂಗುವ ಕೈಗಳು ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತವೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದೇ ಸಾಕ್ಷಿ. ಮಹಿಳೆಯರಿಲ್ಲದ ಕ್ಷೇತ್ರವೇ ಇಲ್ಲವಾಗಿರುವುದು ಮಹಿಳೆಯರ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ ಎಂದು ಪೇಪರ್ಟೌನ್ ಠಾಣಾ ನಿರೀಕ್ಷಕಿ ಕೆ. ನಾಗಮ್ಮ ತಿಳಿಸಿದರು.
ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜದ ಸಭಾಂಗಣದಲ್ಲಿ ಅಪರಂಜಿ ಅಭಿನಯ ಶಾಲೆ ಹಾಗು ಮಹಿಳಾ ಸೇವಾ ಸಮಾಜದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹಿಳಾ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪುರುಷರು ಮತ್ತು ಮಹಿಳೆಯರು ಪರಸ್ಪರ ಗೌರವದಿಂದ ನಡೆದಾಗ ಮಾತ್ರ ಸಾಮರಸ್ಯ ನೆಲೆಸುತ್ತದೆ. ಮಹಿಳಾ ಸೌಲಭ್ಯಗಳು ಏಳಿಗೆಗೆ ಕಾರಣವಾಗಬೇಕೆ ಹೊರತು ಸ್ವೇಚ್ಛಾಚಾರಕ್ಕೆ ಕಾರಣವಾಗಬಾರದು. ಮಹಿಳೆಯರನ್ನು ಒಗ್ಗೂಡಿಸುವುದು ಕಷ್ಟದ ಕೆಲಸ ಎಂದರು.
ಮಹಿಳೆಯರಿಗೆ ಕಾನೂನು ತಿಳುವಳಿಕೆ ಮತ್ತು ಸ್ವರಕ್ಷಣೆಯ ವಿದ್ಯೆಗಳ ಕಲಿಕೆ ಮುಖ್ಯ. ಮಹಿಳೆಯರು ಸಂಘಟಿತರಾದರೆ ನಿಯಮಗಳ ಅರಿವು ಮೂಡಿಸಲು ಆರಕ್ಷಕ ಇಲಾಖೆ ನೆರವು ನೀಡುವುದಾಗಿ ತಿಳಿಸಿದರು.
ಆಶಯ ನುಡಿಗಳನ್ನಾಡಿದ ಅಪರಂಜಿ ಅಭಿನಯ ಶಾಲೆಯ ಅಧ್ಯಕ್ಷ ಅಪರಂಜಿ ಶಿವರಾಜ್, ಹೆಣ್ಣು ಮಕ್ಕಳು ಸುಖ ಸಂತೋಷದಿಂದ ಇದ್ದರೆ ಅಂತಹ ಕುಟುಂಬವೂ ನೆಮ್ಮದಿಯಿಂದ ಇರುತ್ತದೆ. ಹೆಣ್ಣು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೊಂದು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಹಿಳಾ ಸಾಂಸ್ಕೃತಿಕ ವೈಭವ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ ರಾವ್, ಪ್ರಧಾನ ಕಾರ್ಯದರ್ಶಿ ಶೋಭಾ ಗಂಗರಾಜ್, ಖಜಾಂಚಿ ಜಯಂತಿ ನಾಗರಾಜ ಶೇಟ್, ಅಪರಂಜಿ ಅಭಿನಯ ಶಾಲೆಯ ಉಪಾಧ್ಯಕ್ಷೆ ಅನುಸೂಯ ಎಂ., ಪ್ರಧಾನ ಕಾರ್ಯದರ್ಶಿ ಪುಷ್ಪಲತಾ ಸಿ.ಎಚ್. ಸೇರಿದಂತೆ ಹಲವರು ಹಾಜರಿದ್ದರು.
ಕಮಲಕುಮಾರಿ, ಶೋಭಾ ಹಾಗು ಸಂಗಡಿಗರು ಪ್ರಾರ್ಥಿಸಿದರು. ನಂತರ ಹಲವು ಮಹಿಳಾ ತಂಡಗಳಿಂದ ಗಾಯನ ಹಾಗು ನೃತ್ಯ ಪ್ರದರ್ಶನ ನಡೆಯಿತು.
No comments:
Post a Comment