ಭದ್ರಾವತಿಯಲ್ಲಿ ಭಾರತೀಯ ಜನಸಂಘದ ಹಿರಿಯ ಕಾರ್ಯಕರ್ತರ ಸಭೆ ನಡೆಯಿತು.
ಭದ್ರಾವತಿ: ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು ಭಾರತೀಯ ಜನಸಂಘದಿಂದ ಇಲ್ಲಿಯವರೆಗೂ ಬಂದಿರುವ ಹಿರಿಯ ಕಾರ್ಯಕರ್ತರಿಗೆ ತುಂಬಾ ನೋವುಂಟು ಮಾಡಿದೆ ಎಂದು ಹಿರಿಯ ಕಾರ್ಯಕರ್ತ ಎಸ್.ಎನ್ ಬಾಲಕೃಷ್ಣ ವಿಷಾದ ವ್ಯಕ್ತಪಡಿಸಿದರು.
ನಗರದ ಹಿರಿಯ ಕಾರ್ಯಕತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭಿನ್ನಾಭಿಪ್ರಾಯಗಳ ಮೂಲಕ ಒಬ್ಬರಿಗೊಬ್ಬರು ಕೆಸರು ಎರಚುವ ಕಾರ್ಯದಲ್ಲಿ ತೊಡಗಿರುವುದು ಭಾರತೀಯ ಜನಸಂಘದಿಂದ ಇಲ್ಲಿಯವರೆಗೂ ಬಂದಿರುವ ಹಿರಿಯ ಕಾರ್ಯಕರ್ತರಿಗೆ ಮಾತ್ರವಲ್ಲ ಹೊಸದಾಗಿ ಬಂದಿರುವ ಕಾರ್ಯಕರ್ತರ ಮೇಲೆ ಋಣಾತ್ಮಕ ಪರಿಣಾಮವನ್ನುಂಟು ಮಾಡುತ್ತಿದೆ.
ಭಾರತೀಯ ಜನತಾ ಪಕ್ಷ ಶಿಸ್ತಿನ ಪಕ್ಷವಾಗಿದ್ದು, ಇತ್ತೀಚಿನ ಬೆಳವಣಿಗೆಗಳು ಹಿರಿಯರೆಲ್ಲರಿಗೂ ಭ್ರಮನಿರಸನವನ್ನುಂಟುಮಾಡಿದೆ. ಹಿರಿಯ ಕಾರ್ಯಕರ್ತರಾದ ನಾವುಗಳು ಯಾವುದೇ ಬಣಗಳಲ್ಲಿ ಗುರುತಿಸಿಕೊಳ್ಳದೇ ಕೇವಲ ಸಂಘಟನೆಯ ದೃಷ್ಟಿಯಿಂದ ತಕ್ಷಣವೇ ಭಿನ್ನ ಬಣದವರನ್ನು ಒಟ್ಟಿಗೆ ಸೇರಿಸಿ ಸಂಘಟನೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಕೋರುತ್ತಿದ್ದೇವೆ.
ಅಲ್ಲದೆ ಪಕ್ಷದಿಂದ ಯಾರನ್ನೂ ಹೊರಗೆ ಹಾಕದೆ ಎಲ್ಲರನ್ನು ಒಟ್ಟಿಗೆ ಸೇರಿಸಿ, ಚರ್ಚಿಸಿ ಸಂಘಟನಾತ್ಮಕವಾಗಿ ಕ್ರಮ ಕೈಗೊಂಡು ಮುಂದೆ ರಾಜ್ಯಾದ್ಯಂತ ಇರುವ ಜ್ವಲಂತ ಸಮಸ್ಯೆಗಳ ಬಗ್ಗೆ ಹಾಗೂ ಜನವಿರೋಧಿ ಸರ್ಕಾರದ ವಿರುದ್ಧ ಸಂಘಟನಾತ್ಮಕ ಹೋರಾಟ ರೂಪಿಸಿ ಪಕ್ಷದ ವರ್ಚಸ್ಸು ಹೆಚ್ಚಿಸಬೇಕೆಂದು ಆಗ್ರಹಿಸುತ್ತೇವೆ ಎಂದರು.
ಹಿರಿಯ ಕಾರ್ಯಕರ್ತರಾದ ವಿಶ್ವನಾಥ ಕೋಠಿ, ಕೆ.ಎಸ್. ಚನ್ನಪ್ಪ, ತೋಪೇಗೌಡ, ಗಾಯಿತ್ರಿ, ರತ್ನಮ್ಮ, ಉಕ್ಕುಂದ ಶಾಂತಣ್ಣ, ತಳ್ಳಿಕಟ್ಟೆ ಗಂಗಪ್ಪ, ಸಿದ್ದರಾಮಣ್ಣ, ರಂಗೋಜಿರಾವ್, ಸುಬ್ರಹ್ಮಣ್ಯ, ಕುಮಾರಸ್ವಾಮಿ, ಜಯರಾಮ್ಸಿಂಗ್ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ವೆಂಕಟೇಶ್ ಸ್ವಾಗತಿಸಿ, ನರಸಿಂಹಚಾರ್ ನಿರೂಪಿಸಿದರು.
No comments:
Post a Comment