ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಂಸ್ಥಾಪಕರ ದಿನ ಆಚರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಚಾಲನೆ ನೀಡಿದರು.
ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಂಸ್ಥಾಪಕರ ದಿನ ಆಚರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಚಾಲನೆ ನೀಡಿದರು.
ಶ್ರೇಷ್ಠ ತಂತ್ರಜ್ಞ (ಇಂಜಿನಿಯರ್), ರಾಜನೀತಿಜ್ಞ, ನಗರದ ಅನ್ನದಾತ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಮಾರ್ಗದರ್ಶನದಲ್ಲಿ ಅಂದಿನ ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ರವರ ನೇತೃತ್ವದಲ್ಲಿ ಜ.೧೮, ೧೯೧೮ ರಲ್ಲಿ ಮೈಸೂರು ವುಡ್ ಡಿಸ್ಟಿಲೇಷನ್ ಮತ್ತು ಐರನ್ ವರ್ಕ್ಸ್ ಹೆಸರಿನಲ್ಲಿ ಶಂಕುಸ್ಥಾಪನೆಗೊಂಡಿದ್ದು, ಕಾರ್ಖಾನೆ ವತಿಯಿಂದ ಈ ದಿನವನ್ನು ಪ್ರತಿವರ್ಷ ಸಂಸ್ಥಾಪಕರ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಬೆಳಿಗ್ಗೆ ಕಾರ್ಖಾನೆ ಆಡಳಿತ ಕಛೇರಿ ಆವರಣದಲ್ಲಿರುವ ಸರ್.ವಿ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸೂಚಿಸಲಾಯಿತು. ನಂತರ ನುಗ್ಗೆ, ಅಡಕೆ, ಪಪ್ಪಾಯಿ, ಹೊಂಗೆ, ಹಲಸು ಮತ್ತು ಮಾವು ಸೇರಿದಂತೆ ಸುಮಾರು ೨೫೦ ಸಸಿಗಳನ್ನು ಕಾರ್ಖಾನೆಯ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.
ಸಂಜೆ ನ್ಯೂಟೌನ್ ವಿಐಎಸ್ಎಲ್ ರಜತ ಮಹೋತ್ಸವ ಕ್ರೀಡಾಂಗಣದ ಅಮೃತ ಮಹೋತ್ಸವ ವೇದಿಕೆಯಲ್ಲಿ ಸಂಸ್ಥಾಪಕ ದಿನಾಚರಣೆ ಅಂಗವಾಗಿ ಸುಮಾರು ೪೦ ದಿನಗಳ ಕಾಲ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಖಾನೆಯ ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕರು (ಹೆಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ, ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರ, ಮಹಾಪ್ರಬಂಧಕರು (ನಗರಾಡಳಿತ) ಮೋಹನ್ ರಾಜ್ ಶೆಟ್ಟಿ, ಮಹಾಪ್ರಬಂಧಕರು (ಹಣಕಾಸು ಮತ್ತು ಲೆಕ್ಕ) ಶೋಭ ಶಿವಶಂಕರನ್, ಉಪ ಮಹಾಪ್ಬಂಧಕರು (ಗಣಿಗಳು) ಅನಿಲ್ ಕುಮಾರ್ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೋಲಾಟ ಮತ್ತು ಸಮೂಹ ಗಾಯನ ಕಾರ್ಖಾನೆಯ ಮಹಿಳಾ ಮತ್ತು ಪುರುಷ ಕಾರ್ಮಿಕರು ನಡೆಸಿಕೊಟ್ಟರು, ಕಾರ್ಖಾನೆಯ ಇಳಯರಾಜ ಮತ್ತು ಕೃಷ್ಣರವರ ಪುತ್ರಿಯರಾದ ಮೋನಿಕಾ ಮತ್ತು ಲೇಖನ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಂಸ್ಥಾಪಕರ ದಿನ ಆಚರಣೆ ಹಿನ್ನಲೆಯಲ್ಲಿ ನುಗ್ಗೆ, ಅಡಕೆ, ಪಪ್ಪಾಯಿ, ಹೊಂಗೆ, ಹಲಸು ಮತ್ತು ಮಾವು ಸೇರಿದಂತೆ ಸುಮಾರು ೨೫೦ ಸಸಿಗಳನ್ನು ಕಾರ್ಖಾನೆಯ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.
No comments:
Post a Comment