Wednesday, May 13, 2020

ವಿವಿಧ ರಾಜ್ಯಗಳಿಂದ ಆಗಮಿಸಿರುವ ೩೪ ಮಂದಿಗೆ ಕ್ವಾರಂಟೈನ್

ಭದ್ರಾವತಿ ದೇವರನರಸೀಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ. 
ಭದ್ರಾವತಿ, ಮೇ. ೧೩: ಕೊನೆಗೂ ಜಿಲ್ಲಾಡಳಿತ ತಾಲೂಕಿನಲ್ಲಿ ೨ ಕ್ವಾರಂಟೈನ್‌ಗಳನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದು, ಹೊರ ರಾಜ್ಯಗಳಿಂದ ಬಂದ ಸುಮಾರು ೩೪ ಮಂದಿಯನ್ನು ಪ್ರತ್ಯೇಕವಾಗಿರಿಸಲಾಗಿದೆ.
ಕಳೆದ ೩-೪ ದಿನಗಳ ಹಿಂದೆ ಜಿಲ್ಲಾಡಳಿತ ನಗರಸಭೆ ವ್ಯಾಪ್ತಿಯ ಉಂಬ್ಳೆಬೈಲು ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಕ್ವಾರಂಟೈನ್ ತೆರೆಯಲು ನಿರ್ಧರಿಸಿತ್ತು. ಆದರೆ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬೇರೆಡೆ ತೆರೆಯುವುದಾಗಿ ಭರವಸೆ ನೀಡಿತ್ತು.
ಮಂಗಳವಾರ ಗ್ರಾಮೀಣ ಭಾಗದ ದೇವರ ನರಸೀಪುರ ಮತ್ತು ಹಂಚಿನ ಸಿದ್ದಾಪುರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ತೆರೆಯಲಾಗಿದೆ. ಕ್ವಾರಂಟೈನ್‌ನಲ್ಲಿರುವವರಿಗೆ ಊಟದ ವ್ಯವಸ್ಥೆ ಸೇರಿದಂತೆ ಅವಶ್ಯಕ ಸೌಲಭ್ಯ ಕಲ್ಪಿಸುವುದು ವಸತಿ ಶಾಲೆ ಸಿಬ್ಬಂದಿಗಳ ಜವಾಬ್ದಾರಿಯಾಗಿದೆ. ಒಟ್ಟಾರೆ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಗೆ ವಹಿಸಲಾಗಿದೆ. ಪೊಲೀಸ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಸಹ ತಮಗೆ ವಹಿಸಿರುವ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್ ತಿಳಿಸಿದ್ದಾರೆ.
ಪ್ರಸ್ತುತ ದೇವರ ನರಸೀಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಮಿಳು, ಚನ್ನೈ ನಗರಗಳಿಂದ ಆಗಮಿಸಿರುವ ೧೫ ಮಂದಿಯನ್ನು ಹಾಗು ಹಂಚಿನ ಸಿದ್ದಾಪುರದ ವಸತಿ ಶಾಲೆಯಲ್ಲಿ ಗೋವಾ, ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ರಾಜ್ಯಗಳಿಂದ ನಗರಕ್ಕೆ ಬಂದಿರುವ ೨೭ ಮಂದಿಯನ್ನು ಒಟ್ಟು ೩೪ ಮಂದಿಯನ್ನು ನಿಗಾದಲ್ಲಿರಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ನಿಲೇಶ್‌ರಾಜ್ ತಿಳಿಸಿದ್ದಾರೆ.
ಸಮುದಾಯಕ್ಕೆ ಹರಡದಂತೆ ಎಚ್ಚರ ವಹಿಸಲು ಕ್ವಾರಂಟೈನ್:
ಮೂಲತಃ ತಾಲೂಕಿನ ನಿವಾಸಿಗಳಾಗಿದ್ದು, ವಿವಿಧ ಕಾರಣಗಳಿಂದ ಲಾಕ್‌ಡೌನ್ ಘೋಷಣೆಯಾಗುವ ಮೊದಲು ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದವರು ಪುನಃ ತಮ್ಮ ತಮ್ಮ ಸ್ವಂತ ಊರುಗಳಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರನ್ನು ಪ್ರತ್ಯೇಕವಾಗಿರಿಸಿ ಆರೋಗ್ಯ ತಪಾಸಣೆ ನಡೆಸುವ ಮೂಲಕ ಮಹಾಮಾರಿ ಕೊರೋನಾ ವೈರಸ್ ಸಮುದಾಯಕ್ಕೆ ಹರಡದಂತೆ ಎಚ್ಚರವಹಿಸಲು ಕ್ವಾರಂಟೈನ್‌ಗಳನ್ನು ತೆರೆಯಲಾಗಿದೆ.
ಬೇರೆ ಬೇರೆ ರಾಜ್ಯಗಳಿಂದ ಬಂದವರು ನೇರವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳುವುದರಿಂದ ಒಂದು ವೇಳೆ ಕೊರೋನಾ ವೈರಸ್ ಬಾಧಿತರಿಂದ ಕುಟುಂಬಕ್ಕೆ, ಸಮುದಾಯಕ್ಕೆ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಸ್ಥಳೀಯರು ಇದನ್ನು ತಪ್ಪಗಿ ಭಾವಿಸುವ ಮೂಲಕ ಕ್ವಾರಂಟೈನ್‌ಗಳನ್ನು ತೆರೆಯಲು ಆಕ್ಷೇಪಿಸುತ್ತಿರುವುದು ಆತಂಕದ ಬೆಳೆವಣಿಗೆಯಾಗಿದೆ ಎಂದು ಕೊರೋನಾ ವೈರಸ್ ನಿರ್ಮೂಲನೆಗಾಗಿ  ಹಗಲಿರುಳು ಹೋರಾಟ ನಡೆಸುತ್ತಿರುವವರು ವಿಷಾದ ವ್ಯಕ್ತಪಡಿಸಿದ್ದಾರೆ. 

ಹೊರ ರಾಜ್ಯ, ಜಿಲ್ಲೆಗಳಿಂದ ಕಣ್ತಪ್ಪಿ ಬಂದವರ ಬಗ್ಗೆ ಮಾಹಿತಿ ನೀಡಿ

ಭದ್ರಾವತಿ, ಮೇ. ೧೩: ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಘೋಷಿಸಲಾಗಿದ್ದ ಲಾಕ್‌ಡೌನ್ ಇದೀಗ ಸಡಿಲಗೊಳ್ಳುತ್ತಿದ್ದು, ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಗೆ ತೆರಳಿದ್ದ ಕ್ಷೇತ್ರದ ನಿವಾಸಿಗಳು ಪುನಃ ಕ್ಷೇತ್ರಕ್ಕೆ ಹಿಂದಿರುಗುತ್ತಿದ್ದಾರೆ. ಕೆಲವರು ಕಾಲ್ನಡಿಗೆ ಮೂಲಕ, ಮತ್ತೆ ಕೆಲವರು ಸ್ವಂತ ವಾಹನಗಳ ಮೂಲಕ ಬರುತ್ತಿದ್ದಾರೆ. ಇವರೆಲ್ಲರ ಆರೋಗ್ಯ ತಪಾಸಣೆ ನಡೆಸುವ ಅಗತ್ಯವಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಕೆಲವರು ಕಾಲ್ನಡಿಗೆ ಮೂಲಕ, ಮತ್ತೆ ಕೆಲವರು ಸ್ವಂತ ವಾಹನಗಳ ಮೂಲಕ ಆರೋಗ್ಯ ತಪಾಸಣೆ ಪ್ರಕ್ರಿಯೆಯಿಂದ ತಪ್ಪಿಸಿಕೊಂಡು ಬರುತ್ತಿರುವ ಬಗ್ಗೆ ಮಾಹಿತಿ ಇದ್ದು, ಇವರನ್ನು ಗುರುತಿಸಿ ಆರೋಗ್ಯ ತಪಾಸಣೆ ನಡೆಸಿ ಪ್ರತ್ಯೇಕಿಸುವುದು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ, ಅಕ್ಕ-ಪಕ್ಕದ ಮನೆಗಳಿಗೆ ಯಾರಾದರೂ ಬಂದಿರುವ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ತಕ್ಷಣ ದೂರವಾಣಿ ಸಂಖ್ಯೆ ೦೮೨೮೨-೨೬೬೩೫೬ ಸಂಖ್ಯೆಗೆ ಕರೆ ಮಾಡುವಂತೆ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.


ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಮೇ.೨೦ರವರೆಗೆ ಪೋನ್ ಇನ್ ಕಾರ್ಯಕ್ರಮ

ಭದ್ರಾವತಿ, ಮೇ. ೧೩: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪೂರ್ವ ಸಿದ್ದತೆಗಾಗಿ ವಿಷಯವಾರು ಕ್ಲಸ್ಟಾಂಶಗಳ ಬಗ್ಗೆ ಇರುವ ಸಂದೇಹಗಳು ಮತ್ತು ಗೊಂದಲಗಳನ್ನು ಪರಿಹರಿಸಲು ಮೇ.೧೪ ರಿಂದ ೨೦ರ ವರೆಗೆ ಪೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.
ತಾಲೂಕಿನ ಎಲ್ಲಾ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಈ ಸಂಬಂಧ ಮಾಹಿತಿ ನೀಡುವುದು. ಪ್ರತಿ ಶಾಲೆಯಿಂದ ಕನಿಷ್ಠ ೪ ವಿದ್ಯಾರ್ಥಿಗಳು ಪ್ರತಿನಿತ್ಯ ಬೆಳಿಗ್ಗೆ ೧೦.೩೦ ರಿಂದ ೧೨.೩೦ರವರೆಗೆ ಕರೆ ಮಾಡಬಹುದಾಗಿದೆ. ಮೇ.೧೪ರಂದು ಕನ್ನಡ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಡಾ. ಬಿ.ಎ ತಂಬೂಳಿ-ಮೊ:೯೪೪೯೧೦೦೧೫೬, ಕೆ. ಬಸವರಾಜ-ಮೊ:೯೬೮೬೧೯೦೫೬೩, ಅಣ್ಣಪ್ಪ-ಮೊ:೮೩೧೦೬೩೬೬೪೪. ೧೫ರಂದು ಆಂಗ್ಲ ವಿಷಯ ಕುರಿತು ಶಿಕ್ಷಕರಾದ ದಿವಾಕರ್-ಮೊ:೯೬೧೧೦೨೨೪೧೮, ಶಾಲಿನ ಜಾದವ್-ಮೊ:೯೮೪೫೨೫೧೩೬೮, ಜೈ ಕುಮಾರ್-ಮೊ:೯೪೮೩೬೬೪೮೫೩, ಇಂತಿಯಾಜ್ ಅಹ್ಮದ್-ಮೊ:೯೪೮೦೧೪೨೬೬, ೧೬ರಂದು ಹಿಂದಿ ವಿಷಯ ಕುರಿತು ಶಿಕ್ಷಕರಾದ ಆರ್. ರೇಖಾ-ಮೊ:೮೦೫೦೧೫೬೩೬೬, ವಿಶ್ವನಾಥ್-ಮೊ:೯೦೬೦೩೦೭೫೮೯, ಭಾರತಿ-ಮೊ: ೯೪೮೦೪೮೬೮೯೩, ನಾಗರಾಜು-ಮೊ: ೯೪೮೦೧೪೨೦೬೬, ೧೮ರಂದು ಗಣಿತ ವಿಷಯ ಕುರಿತು ಶಿಕ್ಷಕರಾದ ಪರಮೇಶ್ವರಪ್ಪ-ಮೊ:೯೩೪೧೯೯೬೧೦೧, ಎಂ.ವಿ.ಎಸ್ ಸ್ವಾಮಿ-ಮೊ:೯೮೮೦೪೯೮೩೦೦, ಮುಕ್ತೇಶ್-ಮೊ:೯೪೮೧೨೫೭೪೯೫, ೧೯ರಂದು ವಿಜ್ಞಾನ ವಿಷಯ ಕುರಿತು ಶಿಕ್ಷಕರಾದ ಎಚ್. ಉಮೇಶ್-ಮೊ:೯೭೩೧೮೦೫೯೯೭, ಜಿ.ಕೆ ಶ್ರೀನಿವಾಸ್-ಮೊ:೬೩೬೧೬೭೬೮೭೦, ಜಿ. ಕೀರ್ತಿ-ಮೊ: ೯೯೦೨೧೯೫೫೫೪ ಹಾಗೂ ೨೦ರಂದು ಸಮಾಜ ವಿಜ್ಞಾನ ಕುರಿತು ಶಿಕ್ಷಕರಾದ ಸಿ.ಡಿ ಮಂಜುನಾಥ್:ಮೊ:೮೧೦೫೭೦೪೫೪೩, ಸತ್ಯನಾರಾಯಣ-ಮೊ:೮೧೯೭೭೧೮೮೯೭ ಮತ್ತು ಸಿ. ರಾಜು-ಮೊ:೯೯೪೫೯೯೪೦೩೬ ಪಾಲ್ಗೊಳ್ಳುತ್ತಿದ್ದಾರೆ.
ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕ್ಷೇತ್ರ         ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್, ಶಿಕ್ಷಣ ಸಂಯೋಜಕ   ರವಿಕುಮಾರ್ ಕೋರಿದ್ದಾರೆ.

Tuesday, May 12, 2020

ಎಚ್.ಎಂ ಬಸವರಾಜಯ್ಯ ನಿಧನ

ಎಚ್.ಎಂ ಬಸವರಾಜಯ್ಯ 
ಭದ್ರಾವತಿ, ಮೇ. ೧೨: ನಗರದ ಹೊಸಮನೆ ನಿವಾಸಿ, ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ನೌಕರ ಎಚ್.ಎಂ ಬಸವರಾಜಯ್ಯ(೭೪) ಸೋಮವಾರ ರಾತ್ರಿ ನಿಧನ ಹೊಂದಿದರು.
ಪತ್ನಿ, ೧ ಹೆಣ್ಣು, ೩ ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಭಾನುವಾರ ನೆರವೇರಿತು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಶಾಖೆ ಅಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ. 

ಶತಾಯುಷಿ ಬಾಬುನಾಯ್ಕ್ ನಿಧನ

ಶತಾಯುಷಿ ಬಾಬುನಾಯ್ಕ್ 
ಭದ್ರಾವತಿ, ಮೇ. ೧೨: ತಾಲೂಕಿನ ಕಲ್ಪನಹಳ್ಳಿ ತಾಂಡ ನಿವಾಸಿ ಶಿಕ್ಷಕ ಜುಂಜ್ಯಾನಾಯ್ಕರವರ, ಶತಾಯುಷಿ ಬಾಬುನಾಯ್ಕ್(೧೦೬) ಮಂಗಳವಾರ ವಯೋ ಸಹಜ ನಿಧನ ಹೊಂದಿದರು.
ತಾಂಡದಲ್ಲಿ ಹಿರಿಯರಾಗಿದ್ದ ಬಾಬುನಾಯ್ಕ್‌ರವರು ಜಮೀನ್ದಾರ್‌ರಾಗಿ ಗುರುತಿಸಿಕೊಂಡಿದ್ದರು. ೪ ಗಂಡು, ೩ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಇವರ ನಿಧನಕ್ಕೆ ಬಂಜಾರ ಸಮಾಜದ ಮುಖಂಡರು, ದಲಿತ ಮುಖಂಡರು, ಶಿಕ್ಷಕ ವೃಂದದವರು ಹಾಗೂ ತಾಂಡ ನಿವಾಸಿಗಳು ಸಂತಾಪ ಸೂಚಿಸಿದ್ದಾರೆ. 

ನಗರಸಭೆ ೧೪ನೇ ವಾರ್ಡ್‌ನಲ್ಲಿ ಕಡು ಬಡವರಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ನಗರಸಭೆ ೧೪ನೇ ವಾರ್ಡ್‌ನ ಕಡು ಬಡವರಿಗೆ ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್ ಮಂಗಳವಾರ ದಿನಸಿ ಸಾಮಗ್ರಿ ವಿತರಿಸಿದರು. ಕಾರ್ಯಕ್ರಮಕ್ಕೆ ತಹಸೀಲ್ದಾರ್ ಶಿವಕುಮಾರ್ ಚಾಲನೆ ನೀಡಿದರು. 
ಭದ್ರಾವತಿ, ಮೇ. ೧೨: ಕೊರೋನಾ ವೈರಸ್ ಪರಿಣಾಮ ಲಾಕ್‌ಡೌನ್ ಜಾರಿಗೊಳಿಸಿದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ನಗರಸಭೆ ೧೪ನೇ ವಾರ್ಡ್‌ನ ಕಡು ಬಡವರಿಗೆ ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್ ಮಂಗಳವಾರ ದಿನಸಿ ಸಾಮಗ್ರಿ ವಿತರಿಸಿದರು.
ತಹಸೀಲ್ದಾರ್ ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷರು ನಗರಸಭಾ ಸದಸ್ಯರಾಗಿರುವ ವಿ. ಕದಿರೇಶ್‌ರವರು ಈಗಾಗಲೇ ವಿನಾಯಕ ಸೇವಾ ಸಮಿತಿ ವತಿಯಿಂದ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ಪ್ರತಿದಿನ ಕಡು ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು, ಬೀದಿ ವಾಸಿಗಳು, ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ ಅಡುಗೆ ತಯಾರಿಸಿ ಪೂರೈಕೆ ಮಾಡಿದ್ದರು.
ಇದೀಗ ಸ್ವಂತ ಖರ್ಚಿನಲ್ಲಿ ೧೪ನೇ ವಾರ್ಡಿನಲ್ಲಿರುವ ಕಡು ಬಡವರು, ಕೂಲಿಕಾರ್ಮಿಕರನ್ನು ಗುರುತಿಸಿ ದಿನಸಿ ಸಾಮಗ್ರಿ ವಿತರಿಸಿದರು. ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ತಾಲೂಕು ಪಂಚಾಯಿತಿ ಸದಸ್ಯ ಕೆ. ಮಂಜುನಾಥ್, ಮುಖಂಡರಾದ ಮಂಗೋಟೆ ರುದ್ರೇಶ್, ಪ್ರಕಾಶ್, ವಸಂತರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Monday, May 11, 2020

ಬಡವರ ಸಂಕಷ್ಟಕ್ಕೆ ಸ್ಪಂದಿಸಿದ ಹಾಲಿ-ಮಾಜಿ ಶಾಸಕರಿಗೆ ಅಭಿನಂದನೆ, ಕೃತಜ್ಞತೆ

ಭದ್ರಾವತಿಯಲ್ಲಿ ಬಡ ಶ್ರಮಿಕ ವರ್ಗದವರ ನೆರವಿಗೆ ಮುಂದಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
ಭದ್ರಾವತಿ: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಪರಿಣಾಮ ತಾಲೂಕಿನಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಸವಿತ ಸಮಾಜ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಶ್ರಮಿಕ ವರ್ಗದ ಸ್ಥಿತಿಗತಿಗಳನ್ನು ಅರಿತು ಆಹಾರ ಸಾಮಗ್ರಿ ವಿತರಿಸುವ ಮೂಲಕ ನೆರವಿಗೆ ಮುಂದಾದ ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರನ್ನು ವಿವಿಧ ಸಂಘಟನೆಗಳ ವತಿಯಿಂದ ಅಭಿನಂದಿಸಲಾಯಿತು.
ಭದ್ರಾವತಿಯಲ್ಲಿ ಬಡ ಶ್ರಮಿಕ ವರ್ಗದವರ ನೆರವಿಗೆ ಮುಂದಾದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರನ್ನು ವಿವಿಧ ಸಂಘಟನೆಗಳ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. 
ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೇಶ್, ಉಪಾಧ್ಯಕ್ಷ ಎಂ.ಎಸ್  ಶ್ರೀನಿವಾಸ್, ಕಾರ್ಯದರ್ಶಿ ಅಶೋಕ್‌ರಾವ್  ಘೋರ್ಪಡೆ, ಗೌರವಾಧ್ಯಕ್ಷ ವೀರಲಾಲ್, ತಾಲೂಕು ಛಾಯ ಗ್ರಾಹಕರ ಸಂಘದ ಅಧ್ಯಕ್ಷ ರಾಮಕೃಷ್ಣ,  ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ರೆಡ್‌ಸನ್ ರಾಜು,ಸದಸ್ಯರಾದ ಜೆ. ಕುಮಾರ್, ಶಿವಪ್ರಸಾದ್ ಮತ್ತು ಪಿ. ಮಲ್ಲೇಶ್ ಇನ್ನಿತರರು ಅಭಿನಂದಿಸಿ ಕೃತಜ್ಞತೆ ಸಲ್ಲಿಸುವ ಮೂಲಕ ಮುಂದಿನ ದಿನಗಳಲ್ಲೂ ಇದೆ ರೀತಿ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದರು.