Monday, June 1, 2020

ಪೊಲೀಸ್ ಸಿಬ್ಬಂದಿಗಳಿಗೆ ಕೊರೋನಾ ವೈರಸ್ ಸೋಂಕಿನ ಭೀತಿ

ಹಳೇನಗರ ಠಾಣೆಗೆ ಸ್ಯಾನಿಟೈಸರ್, ಜಿಲ್ಲಾ ರಕ್ಷಣಾಧಿಕಾರಿ ಭೇಟಿ 

ಭದ್ರಾವತಿ, ಜೂ. ೧: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಡುವೆ ಇದೀಗ ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳಿಗೂ ಸೋಂಕಿನ ಭೀತಿ ಎದುರಾಗಿದೆ.
ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದಿದ್ದ ಘರ್ಷಣೆ ಹಿನ್ನಲೆಯಲ್ಲಿ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಶಿವಮೊಗ್ಗ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಗಳಿಗೆ ಸೋಮವಾರ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳಲ್ಲಿ ಆತಂಕ ಎದುರಾಗಿದೆ.
ಸೋಂಕಿಗೆ ಒಳಗಾಗಿರುವ ಓರ್ವ ಸಿಬ್ಬಂದಿ ಎರಡು ದಿನ ಹಳೇನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇದರಿಂದಾಗಿ ಇಲ್ಲಿನ ಸಿಬ್ಬಂದಿಗಳಿಗೂ ಸೋಂಕಿನ ಭೀತಿ ಉಂಟಾಗಿದೆ. ಮುಂಜಾಗ್ರತೆ ಕ್ರಮವಾಗಿ ಠಾಣೆಗೆ ಭಾನುವಾರ ರಾತ್ರಿ ಸ್ಯಾನಿಟೈಸರ್ ಮಾಡಿಸಿದ್ದು, ಸ್ವಚ್ಛತೆ ಕೈಗೊಳ್ಳಲಾಗಿದೆ. ಸೋಮವಾರ ಜಿಲ್ಲಾ ರಕ್ಷಣಾಧಿಕಾರಿಗಳು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿಗಳು ಠಾಣೆ ಹೊರ ಭಾಗದಲ್ಲೇ ಇದ್ದು, ಠಾಣೆಯೊಳಗೆ ಪ್ರವೇಶಿಸಿಲ್ಲ.


ಕೊರೋನಾ ವೈರಸ್ ಭೀತಿ : ಗ್ರಾಹಕರನ್ನು ಒಳಬಿಡದ ಎಸ್‌ಬಿಐ

ಮಳೆಯಲ್ಲಿಯೇ ವ್ಯವಹರಿಸಿದ ಗ್ರಾಹಕರು : ಎಎಪಿ ಮುಖಂಡರಿಂದ ತರಾಟೆ 

ಭದ್ರಾವತಿ ಕಾಗದನಗರ ಸ್ಟೇಟ್ ಆಫ್ ಇಂಡಿಯಾ(ಎಸ್‌ಬಿಐ) ಶಾಖೆಯಲ್ಲಿ ಬ್ಯಾಂಕಿನ ಹೊರಭಾಗ ಕಿಟಕಿ ಪಕ್ಕದಲ್ಲಿಯೇ ನಿಂತು ವ್ಯವಹರಿಸುತ್ತಿರುವ ಗ್ರಾಹಕರು. 
ಭದ್ರಾವತಿ, ಜೂ. ೧: ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಿಸಿದ ಪರಿಣಾಮ ಕಳೆದ ೨ ತಿಂಗಳಿನಿಂದ ಸಂಕಷ್ಟಕ್ಕೆ ಒಳಗಾಗಿರುವ ಶ್ರೀಸಾಮಾನ್ಯರು ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದರೂ ಸಹ ಕೆಲವೆಡೆ ವಿನಾಕಾರಣ ತೊಂದರೆ ಅನುಭವಿಸುವಂತಾಗಿದೆ. 
ಇಲ್ಲಿನ ಕಾಗದನಗರದಲ್ಲಿರುವ ಸ್ಟೇಟ್ ಆಫ್ ಇಂಡಿಯಾ(ಎಸ್‌ಬಿಐ) ಶಾಖೆಯಲ್ಲಿ ಅಧಿಕಾರಿಗಳು ಕೊರೋನಾ ವೈರಸ್ ಹರಡುವ ಭೀತಿ ಉಂಟುಮಾಡಿ ಗ್ರಾಹಕರನ್ನು ಬ್ಯಾಂಕಿನ ಒಳಗೆ ಬಿಡದೆ ಹೊರಭಾಗದಿಂದಲೇ ವ್ಯವಹರಿಸುತ್ತಿದ್ದು, ಹೊರಭಾಗದಲ್ಲಿ ಯಾವುದೇ ಸೌಲಭ್ಯಗಳಲ್ಲದೆ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. 
ಮೇಲ್ಛಾವಣಿ ಇಲ್ಲ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲ. ಕಿಟಕಿ ಪಕ್ಕದಲ್ಲಿ ನಿಂತುಕೊಂಡೇ ವ್ಯವಹರಿಸಬೇಕಾಗಿದೆ. ಸೋಮವಾರ ಗ್ರಾಹಕರು ಮಳೆಯಲ್ಲಿಯೇ ನಿಂತುಕೊಂಡು ವ್ಯವಹಿಸಿದರು. 
ಎಎಪಿ ಮುಖಂಡರಿಂದ ತರಾಟೆ: 
ಗ್ರಾಹಕರ ಪರದಾಟ ಮನಕಂಡ ಆಮ್ ಆದ್ಮಿ ಪಾರ್ಟಿ ಮುಖಂಡರು ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ನೇತೃತ್ವದಲ್ಲಿ ಬ್ಯಾಂಕಿನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಎಚ್ಚೆತ್ತುಕೊಂಡ ಬ್ಯಾಂಕಿನ ಅಧಿಕಾರಿಗಳು ಗ್ರಾಹಕರಿಗೆ ಒಳ ಭಾಗದಲ್ಲಿ ವ್ಯವಹರಿಸಲು ಅವಕಾಶ ಕಲ್ಪಿಸಿಕೊಟ್ಟರು. 
ಸರ್ಕಾರ ಸಾರ್ವಜನಿಕರಿಗೆ ಮಾಸ್ಕ್ ಬಳಸುವ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದೆ.  ಇದನ್ನು ಪಾಲಿಸುವ ಗ್ರಾಹಕರಿಗೆ ಬ್ಯಾಂಕಿನ ಒಳಗೆ ಅವಕಾಶ ಕಲ್ಪಿಸಿಕೊಡಬೇಕು. ಆದರೆ ಅಧಿಕಾರಿಗಳು ಕೊರೋನಾ ವೈರಸ್ ನೆಪದಲ್ಲಿ ವಿನಾಕಾರಣ ತೊಂದರೆ ಕೊಡುವುದು ಸರಿಯಲ್ಲ ಎಂದು ಎಎಪಿ ಪಕ್ಷದ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು. 
ಭದ್ರಾವತಿಯಲ್ಲಿ ಸೋಮವಾರ ಮಧ್ಯಾಹ್ನ ಎಡಬಿಡದೆ ಸುರಿದ ಮಳೆಯಿಂದಾಗಿ ರಸ್ತೆಯೊಂದರಲ್ಲಿ ನೀರು ನಿಂತುಕೊಂಡಿರುವುದು. 
ಎಡಬಿಡದೆ ಸುರಿದ ಮಳೆ: 
ಸೋಮವಾರ ಮಧ್ಯಾಹ್ನ ಸುಮಾರು ೨ ಗಂಟೆ ಸಮಯ ಎಡಬಿಡದೆ ಮಳೆಯಾಗಿದ್ದು, ನಗರದ ಬಹುತೇಕ ಕಡೆ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿವೆ. ರಸ್ತೆಗಳ ಗುಂಡಿಗೊಟರುಗಳಲ್ಲಿ ನೀರು ತುಂಬಿಕೊಂಡಿದ್ದು, ಕೆಲವು ಕಡೆ ರಸ್ತೆ ಇಕ್ಕೆಲಗಳ ಚರಂಡಿಗಳು ತುಂಬಿಕೊಂಡು ರಸ್ತೆಯಲ್ಲಿ ಆಳೆತ್ತರಕ್ಕೆ ನೀರು ನಿಂತುಕೊಂಡಿರುವುದು ಕಂಡು ಬಂದಿತು. ನಗರ ಭಾಗದಲ್ಲಿ ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ.

೨೦೦೩ರ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಾಂಕೇತಿಕ ಹೋರಾಟ

ಭದ್ರಾವತಿ, ಜೂ. ೧: ಕೇಂದ್ರ ಸರ್ಕಾರ ೨೦೦೩ರ ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡಿ ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ಎರಡನ್ನು ಖಾಸಗಿಕರಣಗೊಳಿಸಲು ಮುಂದಾಗಿರುವುದನ್ನು ವಿರೋಧಿಸಿ ನಗರದಲ್ಲಿ ಮೆಸ್ಕಾಂ ನೌಕರರು ಸೋಮವಾರ ಸಾಂಕೇತಿಕ ಹೋರಾಟ ನಡೆಸಿದರು.
ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾದ ನೌಕರರು ಕೈಗೆ ಕಪ್ಪು ಪಟ್ಟಿ ಧರಿಸಿ ಹೋರಾಟ ನಡೆಸಿದರು. ರಾಜ್ಯ ಸಂಘದ ಕರೆಯ ಮೇರೆಗೆ ಸ್ಥಳೀಯ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ನೇತೃತ್ವದಲ್ಲಿ ನೌಕರರು ಸಾಂಕೇತಕ್ಕೆ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.


Sunday, May 31, 2020

ಹೆಬ್ಬಾವು ಸೆರೆ ಹಿಡಿದ ಆಂಜನೇಯ ಆಗ್ರಹಾರದ ಯುವಕರು

ಭದ್ರಾವತಿ ತಾಲೂಕಿನ ಅಂತರಗಂಗೆ ಕ್ಯಾಂಪ್ ಮನೆಯೊಂದರಲ್ಲಿ ಸೇರಿಕೊಂಡಿದ್ದ ಸುಮಾರು ೫ ಅಡಿ ಉದ್ದದ, ೨೦ ಕೆ.ಜಿ ತೂಕದ ಹೆಬ್ಬಾವು ಸೆರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ನಗರಸಭೆ ವ್ಯಾಪ್ತಿಯ ಆಂಜನೇಯ ಅಗ್ರಹಾರದ ಯುವಕರು ಯಶಸ್ವಿಯಾಗಿದ್ದಾರೆ.
ಭದ್ರಾವತಿ, ಮೇ. ೩೧: ತಾಲೂಕಿನ ಅಂತರಗಂಗೆ ಕ್ಯಾಂಪ್ ಮನೆಯೊಂದರಲ್ಲಿ ಸೇರಿಕೊಂಡಿದ್ದ ಸುಮಾರು ೫ ಅಡಿ ಉದ್ದದ, ೨೦ ಕೆ.ಜಿ ತೂಕದ ಹೆಬ್ಬಾವು ಸೆರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ನಗರಸಭೆ ವ್ಯಾಪ್ತಿಯ ಆಂಜನೇಯ ಅಗ್ರಹಾರದ ಯುವಕರು ಯಶಸ್ವಿಯಾಗಿದ್ದಾರೆ. 
ಹೆಬ್ಬಾವು ಇರುವ ಮಾಹಿತಿ ತಿಳಿದ ತಕ್ಷಣ ಅಂತರಗಂಗೆ ಕ್ಯಾಂಪ್‌ಗೆ ತೆರಳಿದ ಮಂಜ(ಕುಯ್), ಶರತ್, ಮದನ್ ಸೇರಿದಂತೆ ಇನ್ನಿತರ ಯುವಕರು ಹೆಬ್ಬಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೂ ವಿವಿಧ ಜಾತಿಯ ಸುಮಾರು ೨೫೦ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಅರಣ್ಯಕ್ಕೆ ಬಿಡಲಾಗಿದೆ ಎಂದು ಮಂಜ ಪತ್ರಿಕೆಗೆ ತಿಳಿಸಿದರು. 

೧೦೦ ಹಾಸಿಗೆಯುಳ್ಳ ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ

ಕಾರಣಕರ್ತರಾದ ಸಿಬ್ಬಂದಿಗಳಿಗೆ ಸನ್ಮಾನ 

ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸ್ವಚ್ಛತೆ ಹಾಗೂ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನಲೆಯಲ್ಲಿ ಕಾಯಕಲ್ಪ ಪ್ರಶಸ್ತಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಕಾರಣಕರ್ತರಾದ ಆಸ್ಪತ್ರೆ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. 

ಕನ್ನಡಪ್ರಭ ವಾರ್ತೆ, ಭದ್ರಾವತಿ: ಸ್ವಚ್ಛತೆ ಹಾಗೂ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನಲೆಯಲ್ಲಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಈ ಬಾರಿ ಕಾಯಕಲ್ಪ ಪ್ರಶಸ್ತಿ ಲಭಿಸಿದ್ದು, ಈ ಹಿನ್ನಲೆಯಲ್ಲಿ ಪ್ರಶಸ್ತಿಗೆ ಕಾರಣಕರ್ತರಾದ ಆಸ್ಪತ್ರೆಯ ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ನಗರಸಭೆ ವ್ಯಾಪ್ತಿಯಲ್ಲಿರುವ ೧೦೦ ಹಾಸಿಗೆಯುಳ್ಳ ಏಕೈಕ ಸರ್ಕಾರಿ ಆಸ್ಪತ್ರೆ ಇದಾಗಿದ್ದು, ಪ್ರತಿದಿನ ಸಾವಿರಾರು ಮಂದಿ ಆಸ್ಪತ್ರೆಗೆ ಬಂದು ಹೋಗುತ್ತಾರೆ. ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆ ಎಂದರೆ ಸ್ವಚ್ಛತೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತವೆ. ಈ ನಡುವೆಯೂ ಇಲ್ಲಿನ ಸಿಬ್ಬಂದಿಗಳು ಸ್ವಚ್ಛತೆ ಹಾಗೂ ನಿರ್ವಹಣೆಯಲ್ಲಿ ಉತ್ತಮ ಸಾಧನೆ ಮಾಡಿರುವುದು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.
ಕಾಯಕಲ್ಪ ಪ್ರಶಸ್ತಿ ೨೫ ಸಾವಿರ ರು. ನಗದು ಹಾಗು ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರಶಸ್ತಿಗೆ ಕಾರಣಕರ್ತರಾದ ಆಸ್ಪತ್ರೆಯ ಸುಮಾರು ೨೧  ಡಿ’ ಗ್ರೂಪ್ ಗುತ್ತಿಗೆ ಸಿಬ್ಬಂದಿಗಳು, ೨೧ ಕಾಯಂ ಸಿಬ್ಬಂದಿಗಳು ಹಾಗೂ ೧೫ ಜನ ದಾದಿಯರು, ಆರೋಗ್ಯ ಸಹಾಯಕರು ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ ಅಧ್ಯಕ್ಷತೆ ವಹಿಸಿದ್ದರು.  ಹಿರಿಯ ವೈದ್ಯ ಡಾ. ರವೀಂದ್ರನಾಥ ಕೋಠಿ, ಡಾ. ವೀರಭದ್ರಪ್ಪ, ಡಾ. ಮಯೂರಿ, ಆರೋಗ್ಯ ರಕ್ಷಾ ಸಮಿತಿಯ ಸುಂದರ್ ಬಾಬು, ನಾಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Saturday, May 30, 2020

ಯಾವುದೇ ತಪ್ಪು ನಡೆದಿಲ್ಲ : ಆನ್‌ಲೈನ್ ಟೆಂಡರ್ ಪ್ರಕ್ರಿಯೆಯಿಂದ ಸಮಸ್ಯೆ

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಸ್ಪಷ್ಟನೆ 

ಕೆ.ಜೆ ತಮ್ಮಣ್ಣಗೌಡ 
ಭದ್ರಾವತಿ, ಮೇ. ೩೦: ತಾಲೂಕು ಪಂಚಾಯಿತಿಯಲ್ಲಿ ಅಂಗವಿಕಲರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೌಲಭ್ಯಗಳನ್ನು ಕಲ್ಪಿಸಲುಮೀಸಲಿಡಲಾಗಿದ್ದ ಹಣ ಸರ್ಕಾರಕ್ಕೆ ಹಿಂದಿರುಗಿರುವುದರಲ್ಲಿ ನಮ್ಮಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಸ್ಪಷ್ಟಪಡಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡಿ, ಸೌಲಭ್ಯಗಳನ್ನು ಕಲ್ಪಿಸಲು ಆನ್‌ಲೈನ್‌ನಲ್ಲಿ ಟೆಂಡರ್ ನಡೆದಿದೆ. ಈ ಪ್ರಕ್ರಿಯೆಯಲ್ಲಿ ನಾವು ಏನನ್ನು ಸಹ ಮಾಡಲು ಸಾಧ್ಯವಿಲ್ಲ. ೩ ಬಾರಿ ಟೆಂಡರ್ ಕರೆಯಲಾಗಿದ್ದು, ಯಾರು ಸಹ ಭಾಗವಹಿಸದ ಕಾರಣ ಹಣ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಣ ಬೇರೆ ಬಳಕೆಗೆ ಬರುವುದಿಲ್ಲ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಹಿಂದಿರುಗಿದೆ. ಸದಸ್ಯರು ನಮ್ಮ ವಿರುದ್ಧ ಮಾಡಿರುವ ಆರೋಪಗಳಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ. 

ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಮನವಿ

ಭದ್ರಾವತಿ, ಮೇ. ೩೦: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಹೊಸ ಕಾಯ್ದೆ ಜಾರಿಗೆ ತಂದಿರುವುದು ರೈತ ವಿರೋಧಿಯಾಗಿದೆ. ತಕ್ಷಣ ಈ ಕಾಯ್ದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಶನಿವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಶಿವಮೊಗ್ಗ ಜಿಲ್ಲಾ ಕಬ್ಬು ಬೆಳೆಗಾರರ ಸಂಘ ತಾಲೂಕು ಘಟಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದೆ.
ಕೃಷಿ ಭೂಮಿ ಹೊಂದಿರುವವರೇ ಬೇರೊಂದು ಕೃಷಿ ಭೂಮಿ ಖರೀದಿಸಬಹುದು ಎಂಬ ಈ ಹಿಂದಿನ ನಿಯಮವನ್ನು ಬದಲಿಸಿ ನೂತನ ಕಾಯ್ದೆಯಲ್ಲಿ ಯಾರು ಬೇಕಾದರೂ ಕೈಗಾರಿಕೋದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಕೃಷಿ ಭೂಮಿಯನ್ನು ಎಷ್ಟು ಬೇಕಾದರೂ ಖರೀದಿ ಮಾಡಬಹುದು ಎಂಬ ನಿಯಮ ಜಾರಿಗೆ ತಂದಿರುವುದು ರೈತ ವಿರೋಧಿಯಾಗಿದೆ. ನೂತನ ಕಾಯ್ದೆ ಪ್ರಕಾರ ಫಲವತ್ತಾದ ಕೃಷಿ ಭೂಮಿ ದೊಡ್ಡ ದೊಡ್ಡ ಉದ್ಯಮಿಗಳ ಪಾಲಾಗಿ ರೈತರು ಕೃಷಿಯಿಂದ ವಿಮುಖರಾಗುವ ಸಾಧ್ಯತೆ ಹೆಚ್ಚಾಗಿದ್ದು, ಅಲ್ಲದೆ ಕೃಷಿ ಭೂಮಿ ಖರೀದಿಸುವಾಗ ರೈತರಿಗೆ ನ್ಯಾಯಯುತ ಬೆಲೆ ನೀಡದೆ ವಂಚಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ರಾಜ್ಯ ಸರ್ಕಾರ ಎಪಿಎಂಸಿ  ತಿದ್ದುಪಡಿ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದು, ಈ ಕಾಯ್ದೆ ಸಹ ರೈತರಿಗೆ ಮಾರಕವಾಗಿ ಪರಿಣಮಿಸಿದೆ. ತಿದ್ದುಪಡಿ ಕಾಯ್ದೆಯಲ್ಲಿ ರೈತರು ಬೆಳೆದ ಉತ್ಪನ್ನಗಳನ್ನು ಖರೀದಿದಾರರು ಹಾಗೂ ಮಾರುವ ಮಾಲೀಕರು ನೇರವಾಗಿ  ರೈತರಿಂದ ಖರೀದಿಸುವ ನಿಯಮ ರೂಪಿಸಲಾಗುತ್ತಿದೆ. ಇದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಗುವ ಬದಲು ಹೆಚ್ಚು ಶೋಷಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ತೂಕದಲ್ಲೂ ವಂಚನೆ ನಡೆಯುವ ಸಂಭವವಿದೆ. ಅಲ್ಲದೆ ಇಡೀ ಎಪಿಎಂಸಿ ವ್ಯವಸ್ಥೆ ನಾಶವಾಗಲಿದೆ ಎಂದು ಎಚ್ಚರಿಸಲಾಗಿದೆ.
ಕೇಂದ್ರ ಸರ್ಕಾರ ವಿದ್ಯುತ್ ತಿದ್ದುಪಡಿ ಮಸೂದೆ ೨೦೨೦ ಜಾರಿಗೆ ತರುವುದು ಬೇಡ. ವಿದ್ಯುತ್ ಕ್ಷೇತ್ರವನ್ನು ಖಾಸಗಿಕರಣ ಮಾಡುವ ಹುನ್ನಾರ ಇದಾಗಿದ್ದು, ಇದನ್ನು ಸಂಘ ವಿರೋಧಿಸುತ್ತದೆ. ಸರ್ಕಾರ ಮನವಿಗೆ ಪೂರಕವಾಗಿ ಸ್ಪಂದಿಸದಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಲಾಗಿದೆ.
ಸಂಘದ ತಾಲೂಕು ಶಾಖೆ ಅಧ್ಯಕ್ಷ ಕೆ. ಈರಣ್ಣ, ಪ್ರಧಾನ ಕಾರ್ಯದರ್ಶಿ ಸಣ್ಣಯ್ಯ, ಜಿಲ್ಲಾ ಸಂಚಾಲಕ ಎನ್.ಎಚ್ ದೇವಕುಮಾರ್, ಉಪಾಧ್ಯಕ್ಷ ಎನ್. ನಾಗರಾಜ್, ಬಿ. ಆನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.