ತಾಲೂಕು ಕಛೇರಿ, ಶಾಸಕರ ಗೃಹ ಕಛೇರಿಗೂ ಸ್ಯಾನಿಟೈಸರ್
ಭದ್ರಾವತಿ ನಗರಸಭೆ ವ್ಯಾಪ್ತಿಯ ಘೋಷಿತ ಕೊಳಚೆ ಪ್ರದೇಶ ಸುರಗಿತೋಪಿನಲ್ಲಿ ಗುರುವಾರ ಯುವಕನೊಬ್ಬ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ೪ ರಸ್ತೆಗಳನ್ನು ಸೀಲ್ಡೌನ್ ಮಾಡಲಾಗಿದೆ.
ಭದ್ರಾವತಿ, ಜು. ೩: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗುವಂತಾಗಿದೆ. ಇದುವರೆಗೂ ಒಟ್ಟು ೨೩ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಶುಕ್ರವಾರ ಒಂದೇ ದಿನ ೪ ಪ್ರಕರಣಗಳು ಪತ್ತೆಯಾಗಿವೆ.
ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳು ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡ ಆರಂಭದಿಂದಲೂ ನಿರಂತರವಾಗಿ ಕಾರ್ಯಾಚರಣೆ ಕೈಗೊಂಡಿದ್ದರೂ ಸಹ ಇದೀಗ ಸೋಂಕಿನ ಪ್ರಕರಣ ೨೩ಕ್ಕೆ ತಲುಪಿದೆ. ೩-೪ ದಿನಗಳ ಹಿಂದೆ ಒಂದೇ ದಿನ ೮ ಸೋಂಕಿನ ಪ್ರಕರಣ ದಾಖಲಾಗಿದ್ದವು.
ಶುಕ್ರವಾರ ಪುನಃ ೪ ಪ್ರಕರಣ ದಾಖಲಾಗಿವೆ. ಹೊಳೆಹೊನ್ನೂರಿನಲ್ಲಿ ೧೯ ವರ್ಷದ ಯುವಕನಿಗೆ, ವಿಶ್ವೇಶ್ವರಯ್ಯ ನಗರದಲ್ಲಿ ಬೆಂಗಳೂರಿನಿಂದ ಬಂದಿರುವ ೨೨ ಹಾಗೂ ೨೦ ವರ್ಷದ ಇಬ್ಬರು ಸಹೋದರಿಯರಿಗೆ ಮತ್ತು ಕಡದಕಟ್ಟೆಯಲ್ಲಿ ಬೆಂಗಳೂರಿನಿಂದ ಬಂದಿರುವ ೨೮ ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ನಗರಸಭೆ ಆಡಳಿತ ಸೋಂಕು ಪತ್ತೆಯಾಗಿರುವ ಸ್ಥಳದ ೧೦೦ ಹಾಗೂ ೨೦೦ ಮೀಟರ್ ವಿಸ್ತೀರ್ಣದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಮಾಡಿಸಿ ಕಂಟೈನ್ಮೆಂಟ್ ವಲಯವನ್ನಾಗಿಸಿ ಸೀಲ್ ಡೌನ್ಗೆ ಮುಂದಾಗಿದೆ.
ಸುರಗಿತೋಪು ಸೀಲ್ಡೌನ್:
ನಗರಸಭೆ ವ್ಯಾಪ್ತಿಯ ಘೋಷಿತ ಕೊಳಚೆ ಪ್ರದೇಶ ಸುರಗಿತೋಪಿನಲ್ಲಿ ಗುರುವಾರ ಯುವಕನೊಬ್ಬ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ೪ ರಸ್ತೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಕೊಳಚೆ ಪ್ರದೇಶವಾಗಿರುವ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ.
ತಾಲೂಕು ಕಛೇರಿ, ಶಾಸಕರ ಗೃಹ ಕಛೇರಿಗೂ ಸ್ಯಾನಿಟೈಸರ್:
ತಾಲೂಕಿನ ಕೂಡ್ಲಿಗೆರೆ ನಾಡಕಛೇರಿ ಅಧಿಕಾರಿಯೊಬ್ಬರ ಪತ್ನಿಗೆ ಸೋಂಕು ತಗುಲಿದೆ ಎನ್ನುವ ಮಾಹಿತಿ ಗುರುವಾರ ಎಲ್ಲೆಡೆ ಹರದಾಡುತ್ತಿತ್ತು. ಈ ನಡುವೆ ನಾಡಕಛೇರಿ ಅಧಿಕಾರಿ ನಗರದ ತಾಲೂಕು ಕಛೇರಿಗೂ ಭೇಟಿ ನೀಡಿರುವ ಮಾಹಿತಿ ಹಿನ್ನಲೆಯಲ್ಲಿ ನಗರಸಭೆವತಿಯಿಂದ ತಾಲೂಕು ಕಛೇರಿಗೆ ಸ್ಯಾನಿಟೈಸರ್ ಮಾಡಿಸಲಾಗಿದೆ.
ಕಳೆದ ೪-೫ ದಿನಗಳ ಹಿಂದೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಲು ಆಶಾ ಕಾರ್ಯಕರ್ತೆಯರು ಹೊಸಮನೆ ಎನ್ಎಂಸಿ ರಸ್ತೆಯಲ್ಲಿರುವ ಶಾಸಕ ಬಿ.ಕೆ ಸಂಗಮೇಶ್ವರ್ರವರ ಗೃಹ ಕಛೇರಿಗೆ ಭೇಟಿ ನೀಡಿದ್ದರು. ಈ ಪೈಕಿ ಆಶಾ ಕಾರ್ಯಕರ್ತೆಯೊಬ್ಬರಿಗೆ ಸೋಂಕು ಹರಡಿರುವುದು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಶಾಸಕರ ಗೃಹ ಕಛೇರಿಗೂ ನಗರಸಭೆ ವತಿಯಿಂದ ಸ್ಯಾನಿಟೈಸರ್ ಮಾಡಿಸಲಾಗಿದೆ.