Tuesday, July 7, 2020

ಪೌರಾಯುಕ್ತರಿಂದ ನಗರಸಭೆ ವ್ಯಾಪ್ತಿ ಕೆರೆಗಳ ವೀಕ್ಷಣೆ : ಖುದ್ದು ಮಾಹಿತಿ ಸಂಗ್ರಹ

ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್ ಮಂಗಳವಾರ ಒಂದೇ ದಿನ ಖುದ್ದಾಗಿ ಸುಮಾರು ೫-೬ ಕೆರೆಗಳನ್ನು ವೀಕ್ಷಣೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು. 
ಭದ್ರಾವತಿ, ಜು. ೭: ನಗರಸಭೆ ಪೌರಾಯುಕ್ತ ಮನೋಹರ್ ಮಂಗಳವಾರ ಒಂದೇ ದಿನ ಖುದ್ದಾಗಿ ಸುಮಾರು ೫-೬ ಕೆರೆಗಳನ್ನು ವೀಕ್ಷಣೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು. 
ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲ ಹೆಚ್ಚಿಸುವ ಮೂಲಕ ರೈತರಿಗೆ ಹಾಗೂ ದನಗಾಹಿಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ನೇತೃತ್ವದಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗೂ ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು. 
ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಪೌರಾಯುಕ್ತರು ಜನ್ನಾಪುರ ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ,  ಸಿದ್ದಾಪುರ ವ್ಯಾಪ್ತಿಯ ಸರ್ವೆ ನಂ. ೧೩೩ರ ೮ ಎಕರೆ ೩೬ ಗುಂಟೆ ಗೌಡನ ಕೆರೆ, ಸರ್ವೆ ನಂ. ೩೬ರ ೨ ಎಕರೆ ೮ ಗುಂಟೆ ಬಿದಿರೊಡ್ಡು ಕೆರೆ, ಸರ್ವೆ ನಂ.೧೯ರ ೬ ಎಕರೆ ೨೭ ಗುಂಟೆ ಚಿಕ್ಕಯ್ಯನ ಕೆರೆ, ಸರ್ವೆ ನಂ.೬೩ರ ೪೫ ಎಕರೆ ೩ ಗುಂಟೆ ಬಳಸೋಕೆರೆ, ಸರ್ವೆ ನಂ.೬೯ರ ೧ ಎಕರೆ ೨೬ ಗುಂಟೆ ಬಳಸೋಕೆರೆ, ಸರ್ವೆ ನಂ. ೮೬ರ ೫ ಎಕರೆ, ೧೫ ಗುಂಟೆ ನೆಲಕಟ್ಟೆ ಕೆರೆ ಮತ್ತು ಸರ್ವೆ ೧೧೦ರ ೨೪ ಎಕರೆ, ೧೦ ಗುಂಟೆ ಹೊಸೂರು ಕೆರೆಗಳನ್ನು ವೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 
      ಈಗಾಗಲೇ ತಹಸೀಲ್ದಾರ್ ನೇತೃತ್ವದಲ್ಲಿ ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳ ಬೌಂಡರಿ ಗುರುತಿಸುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಬೌಂಡರಿ ಕಾರ್ಯ ಕೈಗೊಂಡ ನಂತರ ಕೆರೆಗಳ ಸ್ವಚ್ಛತಾ ಕೈಗೊಂಡು ಅಭಿವೃದ್ಧಿಗೆ ಸಂಬಂಧಿಸಿದಂತೆ ಪೌರಾಯುಕ್ತರು ಯೋಜನಾ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. 
ಕೆರೆಗಳ ವೀಕ್ಷಣೆ ಸಂದರ್ಭದಲ್ಲಿ ಪ್ರಮುಖರಾದ ಆರ್. ವೇಣುಗೋಪಾಲ್, ರಮಾವೆಂಕಟೇಶ್, ಶೈಲಜಾ ರಾಮಕೃಷ್ಣ, ದೇವಿಕಾ ನಾಗರಾಜ್, ಆರ್. ಮುಕುಂದಯ್ಯ, ಅಂತೋಣಿ ಗ್ಸೇವಿಯರ್, ಭವಾನಿ ಶಂಕರ್, ರೈತ ಮುಖಂಡ ಎಸ್.ಎಸ್ ನೀಲಕಂಠಪ್ಪ, ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಇದಕ್ಕೂ ಮೊದಲು ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ ಅಭಿವೃದ್ಧಿ ಕಾರ್ಯಗಳು ಶೀಘ್ರವಾಗಿ ಆರಂಭಗೊಳ್ಳುವಂತೆ ಕೆರೆ ದಂಡೆ ಮೇಲಿರುವ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

Monday, July 6, 2020

ಜು.೮ರಂದು ತಾಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಅಧ್ಯಕ್ಷ ಸ್ಥಾನಕ್ಕೆ ನಾಲ್ವರು, ಉಪಾಧ್ಯಕ್ಷ ಸ್ಥಾನ ಒಬ್ಬ ಮಹಿಳೆ ಪೈಪೋಟಿ 

ಭದ್ರಾವತಿ ತಾಲೂಕು ಪಂಚಾಯಿತಿ. 
ಭದ್ರಾವತಿ, ಜು. ೬: ಉಳಿದ ೧೦ ತಿಂಗಳ ಅವಧಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜು.೮ರಂದು ಚುನಾವಣೆ ನಡೆಯಲಿದ್ದು,  ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಒಪ್ಪಂದದ ಪ್ರಕಾರ ಎರಡು ಸ್ಥಾನಗಳಲ್ಲೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. 
ಒಪ್ಪಂದದ ಪ್ರಕಾರ ಕಾಂಗ್ರೆಸ್ ಪಕ್ಷದ  ಆಶಾ ಶ್ರೀಧರ್ ಅಧ್ಯಕ್ಷರಾಗಿ, ಜೆಡಿಎಸ್ ಪಕ್ಷದ ಸರೋಜಮ್ಮ ಹಾಜ್ಯನಾಯ್ಕ ಉಪಾಧ್ಯಕ್ಷೆಯಾಗಿ ಅಧಿಕಾರ ನಡೆಸಿದ್ದು, ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಜೆಡಿಎಸ್ ಪಕ್ಷದ ಸದಸ್ಯರಾದ ಸಿಂಗನಮನೆ ಕ್ಷೇತ್ರದ ಉಷಾಕಿರಣ, ಹಿರಿಯೂರು ಕ್ಷೇತ್ರದ ಸರೋಜಮ್ಮ ಹಾಜ್ಯನಾಯ್ಕ, ಅಂತರಗಂಗೆ ಕ್ಷೇತ್ರದ ಲಕ್ಷ್ಮೀದೇವಿ ಹಾಗೂ ದೊಣಬಘಟ್ಟ ಕ್ಷೇತ್ರದ ಶಮಾ ಬಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷೆ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಈ ಸ್ಥಾನಕ್ಕೆ ಕಲ್ಲಹಳ್ಳಿ ಕ್ಷೇತ್ರದ ನೇತ್ರಾಬಾಯಿ ಮಾತ್ರ ಆಕಾಂಕ್ಷಿಯಾಗಿದ್ದಾರೆ. 
ಈಗಾಗಲೇ ಜೆಡಿಎಸ್ ಪಕ್ಷದ ಗೀತಾ ಜಗದೀಶ್, ಯಶೋದಮ್ಮ ಹಾಗೂ ಕಾಂಗ್ರೆಸ್ ಪಕ್ಷದ ಆಶಾ ಶ್ರೀಧರ್ ಅಧ್ಯಕ್ಷರಾಗಿದ್ದು, ಕಾಂಗ್ರೆಸ್ ಪಕ್ಷದ ತುಂಗಮ್ಮ ಜಯಮ್ಮ, ಜೆಡಿಎಸ್ ಪಕ್ಷದ ಸರೋಜಮ್ಮ ಹಾಜ್ಯನಾಯ್ಕ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. 
ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿರ್ಧಾರದ ಮೇಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.  ಒಟ್ಟು ೧೯ ಸದಸ್ಯ ಬಲ ಹೊಂದಿರುವ ತಾಲೂಕು ಪಂಚಾಯಿತಿಯಲ್ಲಿ ೯ ಜೆಡಿಎಸ್, ೬ ಕಾಂಗ್ರೆಸ್ ಮತ್ತು ೪ ಬಿಜೆಪಿ ಸದಸ್ಯರಿದ್ದು, ಕಾಂಗ್ರೆಸ್-ಜೆಡಿಎಸ್ ಒಪ್ಪಂದದ ಪ್ರಕಾರ ಅಧಿಕಾರದ ಚುಕ್ಕಾಣಿ ಹಿಡಿದಿವೆ.

ಅಂಗಡಿ ಮುಂಗಟ್ಟು ತೆರವುಗೊಳಿಸಲು ನಗರಸಭೆಗೆ ನೋಟಿಸ್

ಎಂಪಿಎಂ ಕಾರ್ಖಾನೆ, ನಗರಾಡಳಿತ ಪ್ರದೇಶ ನಿರ್ವಹಣೆ ಹೊರ ಗುತ್ತಿಗೆ 

ಭದ್ರಾವತಿ ನಗರಸಭೆಗೆ ಎಂಪಿಎಂ ಆಡಳಿತ ಮಂಡಳಿ ಅಂಗಡಿ ಮುಂಗಟ್ಟು ತೆರವುಗೊಳಿಸಲು ನೋಟಿಸ್ ನೀಡಿರುವುದು. 
ಭದ್ರಾವತಿ, ಜು. ೬: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ನಿರ್ವಹಣೆಯನ್ನು ಸರ್ಕಾರ ಹೊರ ಗುತ್ತಿಗೆ ನೀಡುವುದು ಬಹುತೇಕ ಖಚಿತವಾಗಿದೆ.  
ಜು.೧ರಂದು ಕಾರ್ಖಾನೆಗೆ ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಖಾತೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಕಾರ್ಖಾನೆಯನ್ನು ಹೊರಗುತ್ತಿಗೆ ನೀಡುವ ನಿರ್ಧಾರ ಹೊರಬಿದಿದ್ದು, ಕಾರ್ಖಾನೆ ನಿರ್ವಹಣೆ ಜೊತೆಗೆ ನಗರಾಡಳಿತ ಪ್ರದೇಶ ನಿರ್ವಹಣೆ ಸಹ ಹೊರಗುತ್ತಿಗೆ ಪಾಲಾಗಲಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ತಕ್ಷಣ ಕಾರ್ಖಾನೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ ಕಾರ್ಖಾನೆ ಅಧೀನಕ್ಕೆ ನೀಡುವಂತೆ ಸೂಚಿಸಲಾಗಿದೆ. 
ಕಾರ್ಖಾನೆಯ ನಗರಾಡಳಿತ ಇಲಾಖೆಯಿಂದ ಯಾವುದೇ ಆದಾಯ ನಗರಸಭೆಗೆ ಬಾರದಿದ್ದರೂ ಸಹ ಕಳೆದ ಹಲವಾರು ವರ್ಷಗಳಿಂದ ಕಾರ್ಖಾನೆ ವ್ಯಾಪ್ತಿಯಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ನಗರೋತ್ಥಾನ ಯೋಜನೆಯಡಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದೀಗ ಏಕಾಏಕಿ ನಗರಸಭೆ ಆಡಳಿತಕ್ಕೆ ಕಾರ್ಖಾನೆ ಆಡಳಿತ ಮಂಡಳಿ ನೋಟಿಸ್ ಜಾರಿಗೊಳಿಸಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಲು ಸೂಚಿಸಿದೆ. ಇದರಿಂದಾಗಿ ವ್ಯಾಪಾರಸ್ಥರು ಆತಂಕಗೊಂಡಿದ್ದು, ಕಾರ್ಖಾನೆಗೆ ಸೇರಿದ ಕೆಲವು ಜಾಗಗಳನ್ನು ಬ್ಯಾಂಕ್, ಅಂಚೆ ಕಛೇರಿ, ಪೊಲೀಸ್ ಠಾಣೆ ಹಾಗೂ ಶಾಲೆಗಳನ್ನು ತೆರೆಯಲು ಬಿಟ್ಟು ಕೊಡಲಾಗಿದೆ. 

Sunday, July 5, 2020

ವಿಐಎಸ್‌ಎಲ್ ಇದೀಗ ಕೋವಿಡ್-೧೯ ಆಸ್ಪತ್ರೆ

ಬಟ್ಟೆ ಅಂಗಡಿ ಯುವಕನಿಗೆ ಸೋಂಕು

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಕೋವಿಡ್-೧೯ ಆಸ್ಪತ್ರೆಯನ್ನಾಗಿ ಸಿದ್ದಗೊಳಿಸುತ್ತಿರುವ ಹಿನ್ನಲೆಯಲ್ಲಿ ಅಗತ್ಯವಿರುವ ಸಾಮಗ್ರಿಗಳನ್ನು ಎಂಪಿಎಂ ಆಸ್ಪತ್ರೆಯಿಂದ ಕೊಂಡೊಯ್ಯಲಾಯಿತು. 
ಭದ್ರಾವತಿ, ಜು. ೫: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆಯನ್ನು ಇದೀಗ ಹೆಚ್ಚುವರಿಯಾಗಿ ಕೋವಿಡ್-೧೯ ಆಸ್ಪತ್ರೆಯನ್ನಾಗಿ ಸಿದ್ದಗೊಳಿಸಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಒಂದು ಸೋಂಕಿನ ಪ್ರಕರಣ ಪತ್ತೆಯಾಗಿದೆ. 
ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳಿಗೆ ಪ್ರತ್ಯೇಕವಾಗಿ ಸುಮಾರು ೫೦ ಹಾಸಿಗೆ ಕಾಯ್ದಿರಿಸಲಾಗಿದ್ದು, ಕಳೆದ ೩ ದಿನಗಳಿಂದ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಸುಮಾರು ೫ ವರ್ಷಗಳಿಂದ ಮುಚ್ಚಲ್ಪಟ್ಟಿರುವ ಎಂಪಿಎಂ ಆಸ್ಪತ್ರೆಯಿಂದ ೫೦ ಹಾಸಿಗೆಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ವಿಐಎಸ್‌ಎಲ್ ಆಸ್ಪತ್ರೆಗೆ ತರಲಾಗಿದೆ. ಆಸ್ಪತ್ರೆ ಆವರಣದಲ್ಲಿ ಪ್ರತ್ಯೇಕವಾಗಿ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿದ್ದು,  ತುರ್ತು ಸೇವೆಗೆ ಅಂಬ್ಯುಲೆನ್ಸ್‌ಗಳನ್ನು ಮೀಸಲಿಡಲಾಗಿದೆ.  
    ನಿರ್ವಹಣೆ, ವೈದ್ಯರು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸುವುದು ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಜಿಲ್ಲಾಡಳಿತ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. 
ಒಂದು ಸೋಂಕಿನ ಪ್ರಕರಣ: 
ಶುಕ್ರವಾರ ಒಟ್ಟು ೪ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಶನಿವಾರ ರಾತ್ರಿ ಹಳೇನಗರದ ಭೂತನಗುಡಿಯಲ್ಲಿ ಸುಮಾರು ೨೮ ವರ್ಷದ ಯುವಕನೋರ್ವನಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. 
ಈತ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಸೋಂಕು ಇತರರಿಗೆ ಹರಡಿರುವ ಸಾಧ್ಯತೆ ಹೆಚ್ಚಾಗಿದೆ. ನಗರಸಭೆ ಆಡಳಿತ ಯುವಕ ವಾಸಿಸುತ್ತಿರುವ ಸ್ಥಳದ ೧೦೦ ಹಾಗೂ ೨೦೦ ಮೀಟರ್ ವಿಸ್ತೀರ್ಣದಲ್ಲಿ ಸ್ಯಾನಿಟೈಸ್ ಮಾಡಿಸಿ ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಈ ಭಾಗದ ಸುತ್ತಮುತ್ತಲ ರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಭಾನುವಾರ ಯಾವುದೇ ಸೋಂಕಿನ ಪ್ರಕರಣಗಳು ಪತ್ತೆಯಾಗಿಲ್ಲ. 

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್ ವರ್ಗಾವಣೆ

ಭದ್ರಾವತಿ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ(ಸಿಆರ್‌ಪಿ)ಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಎ.ಜಿ ರಾಜಶೇಖರ್‌ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಮತ್ತು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕಛೇರಿ ವತಿಯಿಂದ ಸನ್ಮಾನಿಸಿ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು. 
ಭದ್ರಾವತಿ, ಜು. ೫: ಕೆಇಎಸ್ ಗ್ರೇಡ್-೨ರ ಶ್ರೇಣಿಯ ಎ.ಜಿ ರಾಜಶೇಖರ್ ನಗರದಲ್ಲಿ ಸುಮಾರು ೪ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ(ಸಿಆರ್‌ಪಿ)ಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿದ್ದಾರೆ. 
ಎ.ಜಿ ರಾಜಶೇಖರ್ ಸಂಪನ್ಮೂಲ ಅಧಿಕಾರಿಯಾಗಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದು, ಇದಕ್ಕೂ ಮೊದಲು ಬೆಳ್ತಂಗಡಿಯಲ್ಲಿ ಸುಮಾರು ೩ ವರ್ಷ, ನಂತರ ಚಿಕ್ಕಮಗಳೂರು ಉಪನಿರ್ದೇಶಕರ ಕಛೇರಿಯಲ್ಲಿ ಸೇವೆ ಸಲ್ಲಿಸಿದ್ದರು. ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು, ಕಲಿಕಾ ಸಾಮಗ್ರಿಗಳನ್ನು ಒದಗಿಸುವಲ್ಲಿ ಹಾಗೂ ಶಿಕ್ಷಕರ ಕುಂದು-ಕೊರತೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 
ಇದೀಗ ಕಡೂರು ಜಿಗಣೆಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾಗಿ ವರ್ಗಾವಣೆಗೊಂಡಿದ್ದಾರೆ. ಇವರ ಸೇವೆಯನ್ನು ಸ್ಮರಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಮತ್ತು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕಛೇರಿ ವತಿಯಿಂದ ಸನ್ಮಾನಿಸಿ ಅಭಿನಂದಿಸುವ ಮೂಲಕ ಬೀಳ್ಕೊಡುಗೆ ನೀಡಲಾಯಿತು. 

ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಜಿ ಚನ್ನಬಸಪ್ಪ ನಿಧನ

ಪ್ರೊ. ಬಿ.ಜಿ ಚನ್ನಬಸಪ್ಪ  
ಭದ್ರಾವತಿ, ಜು. ೫: ನಗರದ ನಿವಾಸಿ, ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ಜಿ ಚನ್ನಬಸಪ್ಪ(೮೨) ಭಾನುವಾರ ಬೆಳಿಗ್ಗೆ ನಿಧನ ಹೊಂದಿದರು. 
ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಬಿಟ್ಟಗಲಿದ್ದಾರೆ. ಮೃತರ ಅಂತ್ಯ ಕ್ರಿಯೆ ಸಂಜೆ ಚನ್ನಗಿರಿ ಕಾಲೂಕಿನ ಬೊಮ್ಮೆನಹಳ್ಳಿ ಗ್ರಾಮದಲ್ಲಿ ನಡೆಯಿತು. 
೧೯೬೪ರಲ್ಲಿ ಕುಡ್ಲೂರು ತರಳಬಾಳು ವಿದ್ಯಾಸಂಸ್ಥೆ ಸಿರಿಗೆರೆ ಶ್ರೀ ಮಹೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದ್ದು, ನಂತರ ನಗರದ ಸಿಲ್ವರ್ ಜ್ಯೂಬಿಲಿ ಪ್ರೌಢಶಾಲೆಯಲ್ಲಿ ೧೯೬೫ರಲ್ಲಿ ಸಹ ಶಿಕ್ಷಕರಾಗಿ ಸರ್ಕಾರಿ ವೃತ್ತಿಗೆ ಸೇರ್ಪಡೆಗೊಂಡರು. ೧೯೬೯ರ ವರೆಗೆ ಚಳ್ಳಕೆರೆ ತಾಲೂಕಿನ ಪುರಸಭಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ, ೧೯೭೧ ರಿಂದ ೧೯೭೫ರ ವರೆಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೭೬ರಿಂದ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದ್ದು, ಸುಮಾರು ೨೧ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. 
ಚನ್ನಬಸಪ್ಪ ಕೇವಲ ಪ್ರಾಧ್ಯಾಪಕ ಮಾತ್ರವಲ್ಲದೆ ಕ್ರೀಡಾ ಸಲಹೆಗಾರ, ತರಬೇತಿದಾರರಾಗಿ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು. ಇವರು ತಮ್ಮ ೭೦ನೇ ವಯಸ್ಸಿನಲ್ಲಿ ಜೀವನ ಚರಿತ್ರೆ ಪುಸ್ತಕ ಹೊರತಂದಿದ್ದರು. 
ಇವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸಿದ್ದಲಿಂಗಯ್ಯ, ನಗರಸಭಾ ಸದಸ್ಯ ಕೆ.ಎನ್ ಭೈರಪ್ಪಗೌಡ, ಬಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಚ್.ಎನ್ ಲೋಹಿತೇಶ್ವರಪ್ಪ, ಬನಿ ಮಹಾದೇವಪ್ಪ, ಜಿ. ಸುರೇಶಯ್ಯ, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ಬಸವೇಶ್ವರ ಹಾಗೂ ಭದ್ರಾ ವಿದ್ಯಾ ಸಂಸ್ಥೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Saturday, July 4, 2020

ಕೊರೋನಾ ಸೋಂಕು ಪತ್ತೆ : ಶ್ರೀಸಾಮಾನ್ಯರಿಗೆ ಸಂಕಷ್ಟ

ಭದ್ರಾವತಿ ಹೊಸಮನೆ  ೧೨ನೇ ವಾರ್ಡ್ ಮುತ್ತು ಮಾರಿಯಮ್ಮ ದೇವಸ್ಥಾನ ಸಮೀಪ ಸೀಲ್‌ಡೌನ್ ಮಾಡಲಾಗಿರುವ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಸುಮಾರು ೧೦ ದಿನಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಭದ್ರಾವತಿ, ಜು. ೪: ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಡುವೆ ಸೋಂಕು ಪತ್ತೆಯಾದ ಸ್ಥಳದ ಸುತ್ತಮುತ್ತ ಸೀಲ್‌ಡೌನ್ ಮಾಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗುತ್ತಿದೆ. 
ಈಗಾಗಲೇ ಕಾಗದನಗರ, ಸುರಗಿತೋಪು, ಹಳೇನಗರ, ಹೊಸಮನೆ, ಗಾಂಧಿನಗರ ಸೇರಿದಂತೆ ಹಲವೆಡೆ ಸೀಲ್‌ಡೌನ್ ಮಾಡಲಾಗಿದ್ದು, ಸ್ಥಳೀಯರಿಗೆ ನಗರಸಭೆ ಸಿಬ್ಬಂದಿಗಳು ದಿನನಿತ್ಯದ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದಾರೆ. 
ಈ ನಡುವೆ ಹೊಸಮನೆ ೧೨ನೇ ವಾರ್ಡ್ ಮುತ್ತು ಮಾರಿಯಮ್ಮ ದೇವಸ್ಥಾನ ಸಮೀಪ ಸೀಲ್‌ಡೌನ್ ಮಾಡಲಾಗಿರುವ ವ್ಯಾಪ್ತಿಯಲ್ಲಿನ ನಿವಾಸಿಗಳಿಗೆ ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಸುಮಾರು ೧೦ ದಿನಗಳಿಗೆ ಸಾಕಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. 
ಸಂಸ್ಥೆಯ ಅಧ್ಯಕ್ಷ, ವಾರ್ಡ್ ಸದಸ್ಯ ಜಿ. ಆನಂದಕುಮಾರ್, ಬಿಜೆಪಿ ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಮೋಹನ್ ಮತ್ತು ಬಿ.ಎಸ್ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಭದ್ರಾವತಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಹೊಸಮನೆ ಹಿಂದೂ ಮಹಾಸಭಾ ವಿನಾಯಕ ಸೇವಾ ಸಮಿತಿ ಸಮೀಪ ಸೀಲ್‌ಡೌನ್ ಮಾಡಲಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದು ಕೊರತೆಗಳನ್ನು ವಿಚಾರಿಸಿದರು. 
ಈ ನಡುವೆ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರೊಂದಿಗೆ ಹೊಸಮನೆ ಹಿಂದೂ ಮಹಾಸಭಾ ವಿನಾಯಕ ಸೇವಾ ಸಮಿತಿ ಸಮೀಪ ಸೀಲ್‌ಡೌನ್ ಮಾಡಲಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಕುಂದು ಕೊರತೆಗಳನ್ನು ವಿಚಾರಿಸಿದರು.