Wednesday, September 2, 2020

ಭೂಮಿಕಾ ವೇದಿಕೆಯಿಂದ ವಿಶೇಷ ಸ್ಪರ್ಧೆ : ೩ ಮಂದಿ ವಿಜೇತರು

ಭದ್ರಾವತಿ, ಸೆ. ೨: ನಾಡು, ನುಡಿ ಬಿಂಬಿಸುವ ನಗರದ ಭೂಮಿಕಾ ವೇದಿಕೆ ವತಿಯಿಂದ ವಾಟ್ಸಪ್ ಮೂಲಕ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿ ೩ ಮಂದಿ ವಿಜೇತರಾಗಿದ್ದಾರೆ.
        ಕೊರೋನಾ ಸೋಂಕು ಭೀತಿ ನಡೆವೆಯೂ ಪ್ರಸ್ತುತ ವೇದಿಕೆ ಸದಸ್ಯರನ್ನು ಕ್ರಿಯಾಶೀಲರನ್ನಾಸುವ ಉದ್ದೇಶದೊಂದಿಗೆ ವೇದಿಕೆ ವತಿಯಿಂದ ' ಈ ಕೊರೋನಾ ಸಮಯದಲ್ಲಿ ನಿಮಗೆ ಆದ ತೊಂದರೆ ಮತ್ತು ಅನುಕೂಲ, ನೀವು ಕಲಿತ ಯಾವುದಾದರೂ ಹೊಸ ಹವ್ಯಾಸ ಮತ್ತು ಕೊರೋನಾ ಜಾಗೃತಿ ಬಗ್ಗೆ ನಿಮ್ಮ ಅನುಭವ' ವಿಷಯ ಕುರಿತು ೩ ರಿಂದ ೫ ನಿರ್ಮಿಸದ ಒಳಗೆ ಮಾತನಾಡಿದ ವಿಡಿಯೋ ಕಳುಹಿಸುವ ವಿಶೇಷ ಸ್ಪರ್ಧೆ ಆಯೋಜಿಸಲಾಗಿತ್ತು.
         ಈ ಸ್ಪರ್ಧೆಯಲ್ಲಿ ಡಿ.ವಿ ರಮೇಶ್ ಮೊದಲನೇ, ಜಯಾಮಾಲ ಪೈ ಎರಡನೇ ಹಾಗೂ ಶೇಷಗಿರಿ ರಾವ್ ಕುಲಕರ್ಣಿ ಮೂರನೇ ಬಹುಮಾನ ಪಡೆದುಕೊಂಡಿದ್ದಾರೆಂದು ವೇದಿಕೆ ಅಪರಂಜಿ ಶಿವರಾಜ್ ತಿಳಿಸಿದ್ದಾರೆ.


ಜಲಾವೃತಗೊಳ್ಳುವ ತಗ್ಗು ಪ್ರದೇಶಗಳಿಗೆ ನಗರಸಭೆ ಅಧಿಕಾರಿಗಳ ತಂಡ ಭೇಟಿ

ಮುನ್ನಚ್ಚರಿಕೆ ವಹಿಸಲು ಸ್ಥಳೀಯ ನಿವಾಸಿಗಳಿಗೆ ಸೂಚನೆ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಜಲಾವೃತಗೊಳ್ಳುವ ತಗ್ಗು ಪ್ರದೇಶಗಳಿಗೆ ನಗರಸಭೆ ಅಧಿಕಾರಿಗಳನ್ನೊಳಗೊಂಡ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಭದ್ರಾವತಿ, ಸೆ. ೨: ನಗರಸಭೆ ವ್ಯಾಪ್ತಿಯಲ್ಲಿ ಜಲಾವೃತಗೊಳ್ಳುವ ತಗ್ಗು ಪ್ರದೇಶಗಳಿಗೆ ನಗರಸಭೆ ಅಧಿಕಾರಿಗಳನ್ನೊಳಗೊಂಡ ತಂಡ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.
      ಪೌರಾಯುಕ್ತ ಮನೋಹರ್ ಮಾರ್ಗದರ್ಶನದಲ್ಲಿ ನಗರಸಭೆ ಪರಿಸರ ಅಭಿಯಂತರ ರಕ್ಷಿತ್, ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ, ಸೂಪರ್‌ವೈಸರ್ ಎನ್. ಗೋವಿಂದ ಹಾಗು ವೈ.ಕೆ ಮಂಜುನಾಥ ಅವರನ್ನೊಳಗೊಂಡ ತಂಡ ನಗರಸಭೆ ವ್ಯಾಪ್ತಿಯ ದೊಣಬಘಟ್ಟ ರಸ್ತೆಯ ಕವಲಗುಂದಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಿಂಭಾಗದ ಹೆಬ್ಬಂಡಿ ಗ್ರಾಮದ ಎ.ಕೆ ಕಾಲೋನಿ, ಎಂಪಿಎಂ ರಸ್ತೆಯಲ್ಲಿರುವ ಸುರಗಿತೋಪು, ಜನ್ನಾಪುರ ಕೆ.ಸಿ ಬ್ಲಾಕ್, ಜನ್ನಾಪುರ ಕೆರೆ ಹಾಗು ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.


    ತಗ್ಗು ಪ್ರದೇಶದ ನಿವಾಸಿಗಳಿಗೆ ಮುನ್ನಚ್ಚರಿಕೆ ವಹಿಸುವಂತೆ  ಹಾಗು ತುರ್ತು ಸಂದರ್ಭದಲ್ಲಿ ಸಹಾಯವಾಣಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಸೂಚಿಸಲಾಯಿತು.  
     ಮಂಗಳವಾರ ಸಂಜೆ ನಗರದಲ್ಲಿ ಸುರಿದ ಮಳೆಯಿಂದಾಗಿ ಕೆಲವು ಭಾಗದ ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗ್ಗಿದ್ದು, ಇದರಿಂದಾಗಿ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನಲೆಯಲ್ಲಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Tuesday, September 1, 2020

ಶಿವಾಜಿ ಮಹಾರಾಜರಿಗೆ ಅವಮಾನ : ಸೂಕ್ತ ಕ್ರಮಕ್ಕೆ ಆಗ್ರಹ

ಬೆಳಗಾವಿ ಪೀರನವಾಡಿ ಗ್ರಾಮದ ಪ್ರತಿಮೆ ವಿವಾದದಲ್ಲಿ ವಿನಾಕಾರಣ ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಿರುವುದನ್ನು ಖಂಡಿಸಿ ಭದ್ರಾವತಿಯಲ್ಲಿ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೧: ಬೆಳಗಾವಿ ಪೀರನವಾಡಿ ಗ್ರಾಮದ ಪ್ರತಿಮೆ ವಿವಾದದಲ್ಲಿ ವಿನಾಕಾರಣ ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಿರುವುದನ್ನು ನಗರದ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘ ಖಂಡಿಸಿದೆ.
        ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿದ್ದು, ಕೇವಲ ಮರಾಠ ಸಮಾಜಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶಕ್ಕೆ ಶಿವಾಜಿ ಮಹಾರಾಜರು ಆದರ್ಶಪ್ರಾಯರಾಗಿದ್ದಾರೆ. ಈ ಹಿನ್ನಲೆಯಲ್ಲಿ ಶಿವಾಜಿ ಮಹಾರಾಜರನ್ನು ಅವಮಾನಿಸಿರುವವರ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ  ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
     ಸಂಘದ ಅಧ್ಯಕ್ಷ ಯಶವಂತರಾವ್ ಘೋರ್ಪಡೆ, ಪ್ರಮುಖರಾದ ಪ್ರಕಾಶ್‌ರಾವ್ ದುರೆ, ಸಚಿನ್ ಸಿಂಧ್ಯಾ, ಲೋಕೇಶ್ವರ್ ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಯುವ ಕಾರ್ಯಕರ್ತರು ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ : ಎಂ.ಜೆ ಅಪ್ಪಾಜಿ

ಭದ್ರಾವತಿಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ತೊರೆದು ವಿದ್ಯಾರ್ಥಿ ಜನತಾದಳ ಅಧ್ಯಕ್ಷರ ನೇತೃತ್ವದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ೫೦ಕ್ಕೂ ಹೆಚ್ಚು ಮಂದಿ ಯುವಕರು ಸೇರ್ಪಡೆಗೊಂಡರು.  
ಭದ್ರಾವತಿ, ಸೆ. ೧: ರಾಜಕಾರಣಕ್ಕೆ ಬರಲು ಬಯಸುವ ಯುವ ಸಮುದಾಯ ಮೊದಲು ಕುಟುಂಬಕ್ಕಾಗಿ ಶ್ರಮಿಸಬೇಕು. ನಂತರ ರಾಜಕಾರಣದ ಮೂಲಕ ಜನರ ಸೇವೆ ಮಾಡಬೇಕೆಂದು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೇಳಿದರು.
     ಅವರು ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ತೊರೆದು ವಿದ್ಯಾರ್ಥಿ ಜನತಾದಳ ಅಧ್ಯಕ್ಷರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ೫೦ಕ್ಕೂ ಹೆಚ್ಚು ಮಂದಿ ಯುವಕರನ್ನು ಉದ್ದೇಶಿಸಿ ಮಾತನಾಡಿದರು.
    ಪಕ್ಷಕ್ಕೆ ಸೇರ್ಪಡೆಗೊಂಡವರು ಪ್ರಸ್ತುತ ಸವಾಲಾಗಿರುವ ಕೊರೋನಾ ವೈರಸ್ ನಿರ್ಮೂಲನೆಗಾಗಿ ಶ್ರಮಿಸಬೇಕು. ಮುಂದಿನ ೨-೩ ತಿಂಗಳ ನಂತರ ಪಕ್ಷ ಸಂಘಟನೆಗೆ ಮುಂದಾಗಬೇಕು. ವಾರ್ಡ್ ಮಟ್ಟದಲ್ಲಿನ ಸಮಸ್ಯೆಗಳನ್ನು ಸಾಧ್ಯವಾದಷ್ಟು ತಾವೇ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ಅಸಾಧ್ಯವಾದಲ್ಲಿ ಪಕ್ಷದ ಹಿರಿಯ ಗಮನಕ್ಕೆ ತರವುದು ಸಲಹೆ ನೀಡಿದರು.
     ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಯುವ ಜನಾತದಳ ಅಧ್ಯಕ್ಷ ಕೃಷ್ಣರಾಜ್, ವಿದ್ಯಾರ್ಥಿ ಜನತಾದಳ ಅಧ್ಯಕ್ಷ ಗಗನ್‌ಗೌಡ, ಮುಖಂಡರಾದ ಬಿ.ಆರ್ ಯೋಗೇಶ್, ಉಮೇಶ್, ಅನಂತ್, ಚಿರಾಗ್, ಕುಶಾಲ್ ಗೌಡ, ಗೌತಮ್, ಸೋಮಶೇಖರ್, ಕಿರಣ್, ಸುಶೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಚಿರತೆ ಉಗುರು ಮಾರಾಟಕ್ಕೆ ಯತ್ನ : ಓರ್ವನ ಸೆರೆ

ಚಿರತೆ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಭದ್ರಾವತಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭದ್ರಾವತಿ, ಸೆ. ೧: ಚಿರತೆ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಇಲ್ಲಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
      ಶಿವಮೊಗ್ಗ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿ ಸೂರತ್ ಎಂಬಾತ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಮುಂಭಾಗದ ಪೆಟ್ರೋಲ್ ಬಂಕ್ ಬಳಿ ಚಿರತೆ ಉಗುರು ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ. ಬಂಧಿತನಿಂದ ೪ ಚಿರತೆ ಉಗುರುಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಖಚಿತ ಮಾಹಿತಿ ಆಧಾರದ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ ಗಾಮನಗಟ್ಟಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ ಸುಬ್ರಮಣ್ಯ, ವಲಯ ಅರಣ್ಯಾಧಿಕಾರಿ ಕೆ.ಎಚ್ ಮಂಜುನಾಥ್ ನೇತೃತ್ವದ ತಂಡದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ನವೀನ್, ರಶೀದ್, ಸೋನು, ಭಾಸ್ಕರ್, ಶಿವು, ಶೇಖರ್ ಆಶಚೌಗಲೆ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯಲಕ್ಷ್ಮಿ ನಿಧನ

ವಿಜಯಲಕ್ಷ್ಮಿ
ಭದ್ರಾವತಿ, ಸೆ. ೧:  ನಗರದ ಹೊಸಸೇತುವೆ ರಸ್ತೆ ಸಮೀಪದ ನಿವಾಸಿ ವಿಜಯಲಕ್ಷ್ಮಿ (೮೧) ಮಂಗಳವಾರ ನಿಧನ ಹೊಂದಿದರು.
 ಪತಿ, ಇಬ್ಬರು ಪುತ್ರರು , ಓರ್ವ ಪುತ್ರಿ ಹೊಂದಿದ್ದು, ಹೊಳೆಹೊನ್ನೂರು ರಸ್ತೆಯಲ್ಲಿರುವ  ಹಿಂದೂ ರುದ್ರ ಭೂಮಿಯಲ್ಲಿ  ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿತು. ಮೃತರ ನಿಧನಕ್ಕೆ ಆರ್ಯವೈಶ್ಯ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ಇಂದಿನ ಜನಪ್ರತಿನಿಧಿಗಳಿಗೆ ರಾಮಕೃಷ್ಣ ಹೆಗಡೆ, ಡಿ. ದೇವರಾಜ ಅರಸು ಮಾರ್ಗದರ್ಶಕರು : ಮನೋಹರ್

ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಪಿ. ಸ್ಪರ್ಷರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.  
ಭದ್ರಾವತಿ, ಸೆ. ೧: ಒಳ್ಳೆಯ ಹೃದಯ, ನಾಯಕತ್ವ ಗುಣವಿದ್ದಲ್ಲಿ ಅಧಿಕಾರ ತಾನಾಗಿ ಲಭಿಸುತ್ತದೆ. ಇಂತಹ ಮಹಾನ್ ನಾಯಕರಾದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಮಾರ್ಗದರ್ಶನದಲ್ಲಿ ಇಂದಿನ ಜನಪ್ರತಿನಿಧಿಗಳು ಮುನ್ನಡೆಯಬೇಕೆಂದು ನಗರಸಭೆ ಪೌರಾಯುಕ್ತ  ಮನೋಹರ್ ಹೇಳಿದರು.
      ಅವರು ನಗರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
        ಸಮಾಜಕ್ಕೆ ತಮ್ಮದೇ ಆದ ಸೇವೆ ನೀಡಬೇಕೆಂಬ ಮನೋಭಾವದೊಂದಿಗೆ ರಾಜ್ಯ ರಾಜಕಾರಣಿದಲ್ಲಿ ಉನ್ನತ ಮಟ್ಟಕ್ಕೆ ಏರಿದ ಇಬ್ಬರ ಕೊಡುಗೆ ಅನನ್ಯವಾಗಿದೆ. ಇವರ ಆದರ್ಶಗುಣಗಳೊಂದಿಗೆ ಮುನ್ನಡೆಯುತ್ತಿರುವ ಸಂಘಟನೆ ಸಹ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನೀಡುವ ಮೂಲಕ ಮುಂಚೂಣಿಗೆ ಬರುವಂತಾಗಬೇಕು. ಸಂಘಟನೆ ವತಿಯಿಂದ ನಗರಸಭೆ ವ್ಯಾಪ್ತಿಯಲ್ಲಿರುವ ಸುಮಾರು ೭೦ ಕೆರೆಗಳ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇದಕ್ಕೆ ನಗರಸಭೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ. ೭೦ ಕೆರೆಗಳ ಪೈಕಿ ಕನಿಷ್ಠ ೩೦ ಕೆರೆಗಳನ್ನಾದರೂ ಅಭಿವೃದ್ಧಿ ಪಡಿಸಿದಲ್ಲಿ ಸಂಘಟನೆ ಹೆಸರು ಶಾಶ್ವತವಾಗಿ ಉಳಿಯುವಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮಾತನಾಡಿ, ಕಳೆದ ಸುಮಾರು ೪ ದಶಕಗಳಿಂದ ಸಂಘಟನೆ ವತಿಯಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಡಿ. ದೇವರಾಜ ಅರಸುರವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕರ್ನಾಟಕ ಕೊಳಚೆ ನಿರ್ಮೂಲನೆ ಮಂಡಳಿ ಅಸ್ತಿತ್ವಕ್ಕೆ ತರುವ ಮೂಲಕ ರಾಜ್ಯದಲ್ಲಿ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಮುನ್ನುಡಿ ಬರೆದರು. ಈ ಪೈಕಿ ಅಂದು ನಗರದ ಫಿಲ್ಟರ್‌ಶೆಡ್, ಲೋಯರ್ ಹುತ್ತಾ ಎಡ ಮತ್ತು ಬಲ ಭಾಗದ ಕೊಳಚೆ ಪ್ರದೇಶಗಳು ಅಭಿವೃದ್ಧಿ ಹೊಂದಿದವು. ಆ ನಂತರ ಉಳಿದ ಕೊಳಚೆ ಪ್ರದೇಶಗಳು ಹಂತ ಹಂತವಾಗಿ ಅಭಿವೃದ್ಧಿಗೊಂಡವು. ಇದೆ ರೀತಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹೋರಾಟ ನಡೆಸಿದ ಪರಿಣಾಮ ಕುವೆಂಪು ವಿಶ್ವ ವಿದ್ಯಾನಿಲಯ ಸ್ಥಾಪನೆಗೊಂಡಿತು. ನಗರಸಭೆ ವ್ಯಾಪ್ತಿಯಲ್ಲಿ ನ್ಯೂಟೌನ್ ಭಾಗದಲ್ಲಿ ಕುಡಿಯುವ ನೀರಿನ ಯೋಜನೆ, ಕೆಇಬಿ ಕೌಂಟರ್, ಜನ್ನಾಪುರ ಆಸ್ಪತ್ರೆ ಆರಂಭಗೊಂಡವು. ಅಲ್ಲದೆ ತಾಲೂಕು ಪಂಚಾಯಿತಿ ಹಾಗು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಯೋಜನೆಗಳು ಜಾರಿಗೆ ಬಂದವು. ಸಂಘಟನೆ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೋರಾಟ ನಡೆಸಲಾಗುವುದು ಎಂದರು.
       ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ಪಿ. ಸ್ಪರ್ಷ, ಜನ್ನಾಪುರ ನಗರ ಆರೋಗ್ಯ ಕೇಂದ್ರದ ಲಾಬ್ ಟೆಕ್ನಿಷಿಯನ್ ಸಚಿನ್, ನಿವೃತ್ತ ಗುತ್ತಿಗೆ ಪೌರಕಾರ್ಮಿಕ ಕೃಷ್ಣಪ್ಪ ಹಾಗು ನಗರಸಭೆ ಪೌರಾಯುಕ್ತ ಮನೋಹರ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
     ಟ್ರಸ್ಟ್ ಪ್ರಮುಖರಾದ ಅಂತೋಣಿ ಗ್ಸೇವಿಯರ್, ಭವಾನಿ ಶಂಕರ್, ರೈತ ಮುಖಂಡ ನೀಲಕಂಠಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶೈಲಜಾ ರಾಮಕೃಷ್ಣ ಸ್ವಾಗತಿಸಿದರು. ರಮಾವೆಂಕಟೇಶ್ ನಿರೂಪಿಸಿದರು.