Wednesday, November 4, 2020

ನ.೮ರಂದು ಮೊದಲ ವಾರ್ಷಿಕೋತ್ಸವ, ನೂತನ ಮಹಿಳಾ ಸಂಘ ಉದ್ಘಾಟನೆ

ಭದ್ರಾವತಿ, ನ. ೪: ತಾಲೂಕು ಮಾಜಿ ಸೈನಿಕರ ಸಂಘದ ಮೊದಲ ವಾರ್ಷಿಕೋತ್ಸವ ಹಾಗು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಮಾಜಿ ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭ ನ.೮ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ನ್ಯೂಟೌನ್ ಬಂಟರ ಭವನದಲ್ಲಿ ನಡೆಯಲಿದೆ.
     ದೇಶದಲ್ಲಿ ಮೊದಲ ಬಾರಿಗೆ ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಇದು ಮಾಜಿ ಸೈನಿಕರ ಹೆಮ್ಮೆಯ ವಿಚಾರವಾಗಿದೆ. ಸಮಾರಂಭದ ಅಂಗವಾಗಿ ರಕ್ತ ಗುಂಪು ತಪಾಸಣೆ ಹಾಗು ರಕ್ತದಾನ ಶಿಬಿರ ಸಹ ಆಯೋಜಿಸಲಾಗಿದೆ. ಮಾಜಿ ಸೈನಿಕರು, ಕುಟುಂಬ ವರ್ಗದವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಂಘದ ಕಾರ್ಯದರ್ಶಿ ವಿನೋದ್ ಪೂಜಾರಿ ಕೋರಿದ್ದಾರೆ.

Tuesday, November 3, 2020

ರೋಟರಿ ಕ್ಲಬ್‌ನಿಂದ ೬೫ನೇ ಕನ್ನಡ ರಾಜ್ಯೋತ್ಸವ

ಭದ್ರಾವತಿಯಲ್ಲಿ ರೋಟರಿ ಕ್ಲಬ್ ವತಿಯಿಂದ ೬೫ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಭದ್ರಾವತಿ, ನ. ೩: ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ರೋಟರಿ ಕ್ಲಬ್ ವತಿಯಿಂದ ೬೫ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ಕೋವಿಡ್-೧೯ ಹಿನ್ನೆಲೆಯಲ್ಲಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಸರಳವಾಗಿ ಆಚರಿಸುವ ಮೂಲಕ ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ, ವೈವಿಧ್ಯತೆಯೊಂದಿಗೆ ನಾಡಿನ ಭವ್ಯ ಪರಂಪರೆ ಸ್ಮರಿಸುವ ಮೂಲಕ ತಾಯಿ ರಾಜರಾಜೇಶ್ವರಿಗೆ ನಮನ ಸಲ್ಲಿಸಲಾಯಿತು.
   ಕ್ಲಬ್ ಅಧ್ಯಕ್ಷ ಬಿ.ಎಂ ಶಾಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು.  ಜೋನಲ್ ಲೆಫ್ಟಿನೆಂಟ್ ಕೆ. ನಾಗರಾಜ್ ಮಾತನಾಡಿದರು. ಕಾರ್ಯದರ್ಶಿ ಗಿರೀಶ್, ಹಿರಿಯ ಸದಸ್ಯರಾದ ಅಡವೀಶಯ್ಯ, ವಾದಿರಾಜ ಅಡಿಗ, ಸುಂದರ್‌ಬಾಬು, ಪಿ.ಸಿ ಜೈನ್, ಸುರೇಶ್, ಡಾ. ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಡಾನ್ ಬೋಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಲಾರ್ ಲ್ಯಾಬ್ ಆರಂಭ


ಭದ್ರಾವತಿ ಉಜ್ಜನೀಪುರದಲ್ಲಿರುವ ಡಾನ್ ಬೋಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸ್ಮಾರ್ಟ್ ಸೋಲಾರ್ ಲ್ಯಾಬ್ ಆರಂಭಿಸಲಾಗಿದ್ದು, ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಗುರು ಫ್ರಾನ್ಸಿಸ್ ಸೆರಾವೋ ತರಬೇತಿಗೆ ಚಾಲನೆ ನೀಡಿದರು.
ಭದ್ರಾವತಿ, ನ. ೩: ನಗರದ ಉಜ್ಜನೀಪುರದಲ್ಲಿರುವ  ಡಾನ್ ಬೋಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಸ್ಮಾರ್ಟ್ ಸೋಲಾರ್ ಲ್ಯಾಬ್ ಆರಂಭಿಸಲಾಗಿದೆ.
ಸೆಲ್ಕೋ ಕಂಪನಿ ಸಹಯೋಗದೊಂದಿಗೆ ಲ್ಯಾಬ್ ಆರಂಭಗೊಂಡಿದ್ದು, ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಸೋಲಾರ್ ತರಬೇತಿ ನೀಡಲಾಗುತ್ತಿದೆ. ಶಿವಮೊಗ್ಗ ಧರ್ಮಕ್ಷೇತ್ರದ  ಧರ್ಮಗುರು ಫ್ರಾನ್ಸಿಸ್ ಸೆರಾವೊ ತರಬೇತಿಗೆ ಚಾಲನೆ ನೀಡಿದರು. ಕುಲಪತಿ ಸ್ಟ್ಯಾನಿ ಡಿಸೋಜ, ಸಲಹೆಗಾರ ಲಾರೆನ್ಸ್, ಎಂಪಿಎಂ ಕಾರ್ಖಾನೆ ಮುಖ್ಯ ಆಡಳಿತಾಧಿಕಾರಿ ಶ್ರೀನಿವಾಸ್, ಸೆಲ್ಕೋ ಕಂಪನಿ ಶಿವಮೊಗ್ಗ ವಿಭಾಗದ ವ್ಯವಸ್ಥಾಪಕ ನವೀನ್ ಶೆಟ್ಟಿ, ಬೆಂಗಳೂರಿನ ಸ್ಕಿಪ್ ಕಾರ್ಯದರ್ಶಿ ಜೋಸೆಫ್ ಸ್ಟಾನ್ಲಿ, ಶ್ರೀ ಆದಿ ಚುಂಚನಗಿರಿ ವಿದ್ಯಾಸಂಸ್ಥೆ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ಮತ್ತು ತರಬೇತಿ ಸಂಸ್ಥೆ ಪ್ರಾಂಶುಪಾಲ ಆರೋಗ್ಯರಾಜ್ ಇತರರು ಉಪಸ್ಥಿತರಿದ್ದರು. 
ಈಗಾಗಲೇ ತರಬೇತಿ ಸಂಸ್ಥೆಯಲ್ಲಿ ಯಮಹಾ ಕಂಪನಿ ಸಹಯೋಗದೊಂದಿಗೆ ತರಬೇತಿ ನೀಡಲಾಗುತ್ತಿದ್ದು, ೬ನೇ ವರ್ಷ ಯಶಸ್ವಿಯಾಗಿ ಪೂರೈಸಿದೆ. ಇದೀಗ ಸೆಲ್ಕೋ ಕಂಪನಿ ಸೋಲಾರ್ ಲ್ಯಾಬ್ ಆರಂಭಿಸಿದ್ದು, ಭವಿಷ್ಯದಲ್ಲಿ ಸೋಲಾರ್ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಬೇಡಿಕೆಗಳು ಕಂಡು ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ತರಬೇತಿ ಆರಂಭಗೊಂಡಿರುವುದು ಈ ಭಾಗದ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಸಹಕಾರಿಯಾಗಿದೆ. ಉಳಿದಂತೆ ಸಂಸ್ಥೆಯಲ್ಲಿ ಫಿಟ್ಟರ್, ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕಾನಿಕ್ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. 

ಟೌನ್ ಭಾವಸಾರ ಕ್ಷತ್ರೀಯ ಕೋ ಆಪರೇಟಿವ್ ಸೊಸೈಟಿ ೮೮ನೇ ಮಹಾ ವಾರ್ಷಿಕ ಸಭೆ

ಭದ್ರಾವತಿ ಟೌನ್ ಭಾವಸಾರ ಕ್ಷತ್ರೀಯ ಕೋ ಆಪರೇಟಿವ್ ಸೊಸೈಟಿ ೮೮ನೇ ಮಹಾ ವಾರ್ಷಿಕ ಸಭೆ ಮಂಗಳವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ಪಾಂಡುರಂಗ ಕಲ್ಯಾಣ ಮಂದಿರದಲ್ಲಿ ನಡೆಯಿತು.    
ಭದ್ರಾವತಿ, ನ. ೩: ಟೌನ್ ಭಾವಸಾರ ಕ್ಷತ್ರೀಯ ಕೋ ಆಪರೇಟಿವ್ ಸೊಸೈಟಿ ೮೮ನೇ ಮಹಾ ವಾರ್ಷಿಕ ಸಭೆ ಮಂಗಳವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಶ್ರೀ ಪಾಂಡುರಂಗ ಕಲ್ಯಾಣ ಮಂದಿರದಲ್ಲಿ ನಡೆಯಿತು.
ಅಧ್ಯಕ್ಷ ಟಿ.ಎಸ್  ದುಗ್ಗೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಚ್.ಎನ್ ಯೋಗೇಶ್ ಕುಮಾರ್, ನಿರ್ದೇಶಕರಾದ ನಾಗಭೂಷಣ, ಪಿ. ಹರೀಶ್, ಯು.ಎನ್ ಮುರಳೀಧರ್, ಜಿ.ಎಂ ಅಮಿತ್ ಕುಮಾರ್, ಉಮೇಶ್‌ರಾವ್, ಎಂ.ಆರ್ ಸತೀಶ್, ಪೂರ್ಣಿಮಾ, ಎಂ. ಮಂಜುಳಾ, ಎ.ಎಸ್ ಧನಲಕ್ಷ್ಮಿ, ಕಾರ್ಯದರ್ಶಿಗಳಾದ ಎ.ಎಸ್ ಜಗದೀಶ್ ಕುಮಾರ್, ಜಿ.ಪಿ ರಾಘವೇಂದ್ರ, ಪುಂಡಲಿಕ ರಾವ್ ಮತ್ತು ಕೆ.ಎನ್ ರವೀಂದ್ರನಾಥ್(ಬ್ರದರ‍್ಸ್) ಸೇರಿದಂತೆ ಇತರರು ಪಾಲ್ಗೊಂಡಿದ್ದರು.    

ಅಂಡಾಳಮ್ಮ ನಿಧನ

ಅಂಡಾಳಮ್ಮ
ಭದ್ರಾವತಿ, ನ. ೩: ಕರ್ನಾಟಕ ಜನ ಸೈನ್ಯ(ರಿ) ಸಂಘಟನೆ ಕಾರ್ಯಕರ್ತ ಮುರಳಿರವರ ತಾಯಿ, ವೇಲೂರ್ ಶೆಡ್ ನಿವಾಸಿ ಅಂಡಾಳಮ್ಮ(೭೫) ಇಂದು ನಿಧನರಾದರು.
ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದರು. ಬುಧವಾರ ಬೆಳಗ್ಗೆ ೧೧ ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ. ಮೃತರ ನಿಧನಕ್ಕೆ  ಕರ್ನಾಟಕ ಜನ ಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾರದಮ್ಮ ಸೇರಿದಂತೆ ಇನ್ನಿತರರು  ಸಂತಾಪ ಸೂಚಿಸಿದ್ದಾರೆ.

Monday, November 2, 2020

೭ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಜನಸ್ಪಂದನ ಯುವ ವೇದಿಕೆ

ಭದ್ರಾವತಿ ನಗರಸಭೆ ಉಜ್ಜನಿಪುರ ವ್ಯಾಪ್ತಿಯಲ್ಲಿ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುಂಚೂಣಿಯಲ್ಲಿರುವ ಜನಸ್ಪಂದನ ಯುವ ವೇದಿಕೆ ಬಿಜೆಪಿ ೭ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನಲೆಯಲ್ಲಿ ಸ್ಥಳೀಯೊಂದಿಗೆ ಸವಿನೆನಪಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ, ನ. ೨: ನಗರಸಭೆ ಉಜ್ಜನಿಪುರ ವ್ಯಾಪ್ತಿಯಲ್ಲಿ ಹಲವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುಂಚೂಣಿಯಲ್ಲಿರುವ ಜನಸ್ಪಂದನ ಯುವ ವೇದಿಕೆ ಬಿಜೆಪಿ ೭ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನಲೆಯಲ್ಲಿ ಸ್ಥಳೀಯೊಂದಿಗೆ ಸವಿನೆನಪಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
   ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಗರಸಭೆ ಪೌರಾಯುಕ್ತ ಮನೋಹರ್, ವಿಕಲಚೇತನ, ವೃದ್ದಾಪ್ಯ, ವಿಧವಾ ವೇತನ ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳು ಅರ್ಹರಿಗೆ ತಲುಪಿಸುವ ಕಾರ್ಯದಲ್ಲಿ ವೇದಿಕೆ ನಿಸ್ವಾರ್ಥವಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
     ಯುವ ಮುಖಂಡ ಬಿ.ಎಸ್ ಗಣೇಶ್, ಕರ್ನಾಟಕ ಜನಶಕ್ತಿಯ ಜಿ. ರಾಜು, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆ ಅಧ್ಯಕ್ಷ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು.

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ೬೫ನೇ ಕನ್ನಡ ರಾಜ್ಯೋತ್ಸವ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸೋಮವಾರ ೬೫ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಭದ್ರಾವತಿ, ನ. ೨: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಸೋಮವಾರ ೬೫ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
    ಕಾರ್ಖಾನೆ ಒಳಭಾಗದಲ್ಲಿರುವ ಮಹಾತ್ಮ ಗಾಂಧಿ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್, ಮುಖ್ಯ ಮಹಾಪ್ರಬಂಧಕ (ಸ್ಥಾವರ) ಸುರಜೀತ್ ಮಿಶ್ರಾ, ಮಹಾಪ್ರಬಂಧಕ ಪ್ರಭಾರಿ (ಸಿಬ್ಬಂದಿ ಮತ್ತು ಆಡಳಿತ) ಪಾರ್ಥ ಚರ್ಕಬರ್ತಿ, ಕಾರ್ಮಿಕ ಸಂಘದ ಅಧ್ಯಕ್ಷ   ಜೆ. ಜಗದೀಶ್, ಅಧಿಕಾರಿಗಳ ಸಂಘದ ಅಧ್ಯಕ್ಷ  ಎ.ಆರ್ ವೀರಣ್ಣ ಸೇರಿದಂತೆ ಇತರರು ಜ್ಯೋತಿ ಬೆಳಗಿಸಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
   ಮಂಜುಶ್ರೀ, ತ್ರಿವೇಣಿ, ಉನ್ನೀಕೃಷ್ಣನ್, ವಸಂತ್, ಶಿವಮಾದು ಹಾಗೂ ಫ್ರಾನ್ಸಿಸ್ ಸೇರಿದಂತೆ ಇನ್ನಿತರನ್ನೊಳಗೊಂಡ ತಂಡದಿಂದ ಕನ್ನಡ ನಾಡಿನ ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
    ಕೃಷ್ಣ ಮತ್ತು ನಾಗೇಶ್‌ರವರಿಂದ ಕನ್ನಡ ನಾಡು-ನುಡಿ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಮಂಜುಶ್ರೀ ಮತ್ತು ವಸಂತ್ ನಿರೂಪಿಸಿದರು.  ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
   ಅಧಿಕಾರಿಗಳು ಹಾಗು ಕಾರ್ಮಿಕ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.