Saturday, November 7, 2020

ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ ವರದಿ : ಸೈಲ್ ಶೇ.೨೦ರಷ್ಟು ಪ್ರಗತಿ

ಭದ್ರಾವತಿ, ನ. ೭: ಭಾರತೀಯ ಉಕ್ಕು ಪ್ರಾಧಿಕಾರ(ಸೈಲ್)ದ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ ವರದಿಯಂತೆ ಒಟ್ಟಾರೆ ವ್ಯವಹಾರದ ಶೇ.೨೦ರಷ್ಟು ಪ್ರಗತಿ ಸಾಧಿಸಿದೆ ಎಂದು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.
      ಪ್ರಾಧಿಕಾರದ ಅಧೀನಕ್ಕೆ ಒಳಪಟ್ಟ ಕಂಪನಿಗಳ ಒಟ್ಟಾರೆ ವ್ಯವಹಾರದಲ್ಲಿ ಪಿಬಿಟಿ ಲಾಭ ರು. ೬೧೦.೩೨ ಕೋ. ಮತ್ತು ಪಿಎಟಿ ಲಾಭ ರು. ೩೯೩.೩೨ ಕೋ. ಗಳಾಗಿದ್ದು, ಇದೆ ರೀತಿ ಪಿಬಿಟಿ ನಷ್ಟ ರು.೫೨೩.೦೩ ಕೋ. ಮತ್ತು ಪಿಎಟಿ ನಷ್ಟ ರು. ೩೪೨.೮೪ ಕೋ. ಗಳಾಗಿದೆ. ಕಳೆದ ಹಣಕಾಸಿನ ವರ್ಷಕ್ಕೆ ಹೋಲಿಕೆ ಮಾಡಿದ್ದಲ್ಲಿ ಈ ಬಾರಿ ಗಣನೀಯ ಸುಧಾರಣೆ ಕಂಡು ಬಂದಿದ್ದು, ಉಕ್ಕು ಪ್ರಾಧಿಕಾರ ಲಾಭದ ಕಡೆಗೆ ಮುಖಮಾಡಿದೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
   ಪ್ರಾಧಿಕಾರದ ಅಧ್ಯಕ್ಷ ಅನಿಲ್‌ಕುಮಾರ್ ಚೌಧರಿ ವರದಿಗೆ ಪ್ರತಿಕ್ರಿಯಿಸಿ, 'ಕೋವಿಡ್-೧೯ರ ಸಂದಭದಲ್ಲಿ ಶೇ.೨೦ರಷ್ಟು ಪ್ರಗತಿ ಸಾಧಿಸಿರುವುದು ಹೆಮ್ಮೆಯ ವಿಚಾರವಾಗಿದ್ದು, ಉತ್ಪಾದನೆ ಮತ್ತು ಮಾರಾಟದಲ್ಲಿ ಹೆಚ್ಚಳವಾಗಿರುವುದು ಉತ್ತಮ ಅರ್ಥ ವ್ಯವಸ್ಥೆಗೆ ತಮ್ಮ ಕೊಡುಗೆ ತೋರಿಸುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ಪ್ರವೀಣ್‌ಕುಮಾರ್ ತಿಳಿಸಿದ್ದಾರೆ.

ರು.೨೦ ಲಕ್ಷ ವೆಚ್ಚದಲ್ಲಿ ಶ್ರೀರಾಮ ಭಜನಾ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ಹಲವಾರು ವರ್ಷಗಳಿಂದ ಪಾಳುಬಿದ್ದಿದ್ದ ಶ್ರೀರಾಮ ಭಜನಾ ಮಂದಿರ ಕಟ್ಟಡ ನೆಲಸಮಗೊಳಿಸಿ ಇದೀಗ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರರವರ ಸಂಸದರ ನಿಧಿಯಿಂದ ಬಿಡುಗಡೆಯಾದ ಸುಮಾರು ರು. ೨೦ ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಭದ್ರಾವತಿ, ನ. ೭: ನಗರಸಭೆ ವ್ಯಾಪ್ತಿಯ ಜನ್ನಾಪುರದಲ್ಲಿ ಹಲವಾರು ವರ್ಷಗಳಿಂದ ಪಾಳುಬಿದ್ದಿದ್ದ ಶ್ರೀರಾಮ ಭಜನಾ ಮಂದಿರ ಕಟ್ಟಡ ನೆಲಸಮಗೊಳಿಸಿ ಇದೀಗ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರರವರ ಸಂಸದರ ನಿಧಿಯಿಂದ ಬಿಡುಗಡೆಯಾದ ಸುಮಾರು ರು. ೨೦ ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಲಾಯಿತು.
      ಬಿಜೆಪಿ ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಚಂದ್ರಪ್ಪ, ಪರಮೇಶ್ವರಪ್ಪ, ರವಿಕುಮಾರ್, ಬಬ್ಬೂರು ಕಮ್ಮೆ ಸೇವಾ ಸಂಘದ ಅಧ್ಯಕ್ಷ ನಂಜುಂಡಯ್ಯ, ಶ್ರೀ ಕರುಮಾರಿಯಮ್ಮ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕುಪ್ಪಸ್ವಾಮಿ, ಛಲವಾದಿ ಸಮಾಜದ ಲೋಕೇಶ್ ಸೇರಿದಂತೆ ಭಜನಾ ಮಂದಿರದ ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.

ಜನರ ಬದುಕಿಗೆ ಆಧಾರವಾಗಿರುವ ಗ್ರಾಮೋದ್ಯೋಗ ಉಳಿಯಬೇಕು : ಪ್ರಸನ್ನ

ಭದ್ರಾವತಿಗೆ ಶನಿವಾರ ಆಗಮಿಸಿದ ಸಮುದಾಯ ಬೆಂಗಳೂರು ವತಿಯಿಂದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗ್ರಾಮ ಸೇವಾ ಸಂಘ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ, ಸಮುದಾಯ ಗ್ರಾಮೋದಯ ಜಾಗೃತಿ ಜಾಥಾದಲ್ಲಿ ಸಾಗರ  ಚರಕ ಸಂಸ್ಥೆಯ ಪ್ರಸನ್ನಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ನ. ೭: ಗ್ರಾಮೀಣ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ಗ್ರಾಮೋದ್ಯೋಗ ಬೆಳವಣಿಗೆ ಹೊಂದಲು ಎಲ್ಲರೂ ಕೈಜೋಡಿಸಿದಾಗ ಮಾತ್ರ ಭವಿಷ್ಯದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಸಾಗರ ಚರಕ ಸಂಸ್ಥೆಯ ಪ್ರಸನ್ನ ತಿಳಿಸಿದರು.
       ಅವರು ಶನಿವಾರ ನಗರಕ್ಕೆ ಆಗಮಿಸಿದ ಸಮುದಾಯ ಬೆಂಗಳೂರು ವತಿಯಿಂದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗ್ರಾಮ ಸೇವಾ ಸಂಘ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ, ಸಮುದಾಯ ಗ್ರಾಮೋದಯ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು. ಜನರ ಬದುಕಿಗೆ ಆಧಾರವಾಗಿರುವ ಗ್ರಾಮೋದ್ಯೋಗ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉಳಿಯಬೇಕು. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ದೊಡ್ಡ ಸಂಕಷ್ಟ ಎದುರಾಗಲಿದೆ. ಗ್ರಾಮೀಣ ಜನರು ತಯಾರಿಸುವ ಕೈಮಗ್ಗ, ಖಾದಿ, ಗುಡಿ ಕೈಗಾರಿಕೆ ಹಾಗು ಹೈನುಗಾರಿಕೆ ಉತ್ಪನ್ನಗಳನ್ನು ಹೆಚ್ಚಾಗಿ ಖರೀದಿಸಬೇಕು. ಈ ಹಿನ್ನಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.
     ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧಿಯವರ ಕನಸು ನನಸಾಗಬೇಕು. ಸ್ವಯಂ ಉದ್ಯೋಗಗಳು ಹೆಚ್ಚಾಗಬೇಕು. ಜನರು ತಮಗೆ ಅಗತ್ಯವಿರುವ ವಸ್ತುಗಳನ್ನು ತಾವೇ ತಯಾರಿಸಿಕೊಳ್ಳಬೇಕು. ಆಗ ಮಾತ್ರ ಪ್ರಸ್ತುತ ಎದುರಾಗಿರುವ ಜಾಗತೀಕರಣದ ದುಷ್ಪರಿಣಾಮಗಳಿಂದ ಪಾರಾಗಲು ಸಾಧ್ಯ. ಜಾಥಾ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಮಹಾತ್ಮಗಾಂಧಿಯವರ ಆಶಯಗಳನ್ನು ಜನರಿಗೆ ತಲುಪಿಸುವಂತಾಗಲಿ ಎಂದರು.
.     ಶರಣು ಹಲ್ಲೂರು ಸಾಹಿತ್ಯ, ಶಶಿಧರ ಭಾರಿಘಾಟ್ ರಂಗಪಠ್ಯದ, ಮಾಲತೇಶ್ ನಿರ್ದೇಶನದ ಬೀದಿ ನಾಟಕದ ಮೂಲಕ ಕೊರೋನಾ ಕುರಿತು ಜಾಗೃತಿ ಮೂಡಿಸಲಾಯಿತು. ಕಲಾವಿದರ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
   ಜಾಥಾ ನಿರ್ವಾಹಕ  ಗಣೇಶ್ ಶೆಟ್ಟಿ,  ಸಮುದಾಯ ಬೆಂಗಳೂರು ಕಾರ್ಯದರ್ಶಿ ಜೆ.ಸಿ ಶಶಿಧರ, ಮಾರುತಿ ಮೆಡಿಕಲ್ ಆನಂದ್, ಅಪರಂಜಿ ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

Friday, November 6, 2020

ನ.೭ರಂದು ನಗರಕ್ಕೆ ಸಮುದಾಯ ಗ್ರಾಮೋದಯ ಜಾಗೃತಿ ಜಾಥಾ

ಸಮುದಾಯ ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ ಕಲಾವಿದರು.
ಭದ್ರಾವತಿ, ನ. ೬: ಸಮುದಾಯ ಬೆಂಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾಯಕ ಜೀವಿಗಳಿಗೆ ಶರಣು, ಬೀದಿರಂಗ ನಮನ, ಒಳಿತು ಮಾಡು ಮನುಸಾ.. ಕೊರೋನಾ ಕುರಿತು ಬೀದಿ ನಾಟಕ ಸಮುದಾಯ ಗ್ರಾಮೋದಯ ಜಾಗೃತಿ ಜಾಥಾ ಶನಿವಾರ ನಗರಕ್ಕೆ ಆಗಮಿಸಲಿದೆ.
    ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ನಿಂದ ಆರಂಭಗೊಂಡಿರುವ ಜಾಥಾ ನೆಲಮಂಗಲ, ದಾಬಸ್ ಪೇಟೆ, ಸಂಜೆ ತುಮಕೂರು ತಲುಪಿತು. ನ.೭ರಂದು ಬೆಳಿಗ್ಗೆ ಕಸ್ತೂರಬಾ ಆಶ್ರಮ, ಅರಸೀಕೆರೆ, ಕಡೂರು ಕಾಲೇಜು ಮತ್ತು ತರೀಕೆರೆ ಮೂಲಕ ನಗರದ ಜಯಶ್ರೀ ವೃತ್ತಕ್ಕೆ ಸಂಜೆ ೪.೩೦ಕ್ಕೆ ತಲುಪಲಿದ್ದು, ನಂತರ ಶರಣು ಹಲ್ಲೂರು ಸಾಹಿತ್ಯ, ಶಶಿಧರ ಭಾರಿಘಾಟ್ ರಂಗಪಠ್ಯದ, ಮಾಲತೇಶ್ ನಿರ್ದೇಶನದ ಬೀದಿ ನಾಟಕ ಆರಂಭಗೊಳ್ಳಲಿದೆ. ಗಣೇಶ್ ಶೆಟ್ಟಿ ಜಾಥಾ ನಿರ್ವಾಹಕರಾಗಿದ್ದು, ಸಮುದಾಯ ಬೆಂಗಳೂರು ಕಾರ್ಯದರ್ಶಿ ಜೆ.ಸಿ ಶಶಿಧರ ಉಪಸ್ಥಿತರಿರುವರು.
  ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಚಲನಚಿತ್ರ ನಟ, ರಂಗಕಲಾವಿದ ಅಪರಂಜಿ ಶಿವರಾಜ್ ಕೋರಿದ್ದಾರೆ.

ಕೇರಳ ಸಮಾಜಂ ವತಿಯಿಂದ ೬೫ನೇ ಕನ್ನಡ ರಾಜ್ಯೋತ್ಸವ

ಭದ್ರಾವತಿಯಲ್ಲಿ ಕೇರಳ ಸಮಾಜಂ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೬೫ನೇ ಕನ್ನಡ ರಾಜ್ಯೋತ್ಸವ ಜನ್ನಾಪುರದಲ್ಲಿರುವ ಕಛೇರಿ ಆವರಣದಲ್ಲಿ ಅಚರಿಸಲಾಯಿತು.
ಭದ್ರಾವತಿ, ನ. ೬: ಕೇರಳ ಸಮಾಜಂ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ೬೫ನೇ ಕನ್ನಡ ರಾಜ್ಯೋತ್ಸವ ಜನ್ನಾಪುರದಲ್ಲಿರುವ ಕಛೇರಿ ಆವರಣದಲ್ಲಿ ಅಚರಿಸಲಾಯಿತು.
    ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್ ಧ್ವಜಾರೋಹಣ ನೆರವೇರಿಸಿದರು. ಮಹಿಳಾ ವಿಭಾಗಂ ಸದಸ್ಯರ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಕಾರ್ಯದರ್ಶಿ ಕಲ್ಯಾಣಿ ಶಶಿಧರನ್ ಕರ್ನಾಟಕ ಉದಯ ಹಾಗು ವೈಭವದ ರಾಜ್ಯೋತ್ಸವ ಕುರಿತು ಮಾತನಾಡಿದರು.
    ಕಾರ್ಯದರ್ಶಿ ಪಿ.ಆರ್ ಪ್ರಭಾಕರನ್, ಖಜಾಂಚಿ ಎ. ಚಂದ್ರಶೇಖರ್ ಸೇರಿದಂತೆ ಪದಾಧಿಕಾರಿಗಳು, ಮುಖಂಡರು, ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕಸಾಪ ನಿಕಟಪೂರ್ವ ಅಧ್ಯಕ್ಷರಿಂದ ಪರಿಷತ್ ಹೆಸರು ದುರುಪಯೋಗ

ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು ಅನಿವಾರ್ಯ : ಅಪೇಕ್ಷ ಮಂಜುನಾಥ್

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಮಾತನಾಡಿದರು.
ಭದ್ರಾವತಿ, ನ. ೬: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರಾದ ಡಿ. ಮಂಜುನಾಥ್‌ರವರು ಪರಿಷತ್ ಹೆಸರು  ದುರುಪಯೋಗ ಪಡಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆಂದು ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಆರೋಪಿಸಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಧಿಕಾರದ ಅವಧಿ ಮುಗಿದ ನಂತರ ಪರ್ಯಾಯ ಸಂಘಟನೆ ಮಾಡಿಕೊಳ್ಳುವ ಜೊತೆಗೆ ಪರಿಷತ್ ಹೆಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಪರಿಷತ್ ಹೆಸರಿನಲ್ಲಿ ಈ ಹಿಂದೆ ರೂಪಿಸಲಾಗಿರುವ ಕಾರ್ಯಕ್ರಮಗಳನ್ನು ಪರ್ಯಾಯವಾಗಿ ರೂಪಿಸಿಕೊಂಡಿರುವ ಸಂಘಟನೆಯಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದೆ ರೀತಿ ತಾಲೂಕಿನಲ್ಲೂ ಪರ್ಯಾಯ ಸಂಘಟನೆ ರೂಪಿಸಿಕೊಂಡು ಹೆಸರು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಇದು ಪರಿಷತ್‌ಗೆ ಮಾಡುತ್ತಿರುವ ದ್ರೋಹವಾಗಿದೆ ಎಂದರು.
     ಡಿ. ಮಂಜುನಾಥ್‌ರವರು ಸಾಹಿತ್ಯ ಗ್ರಾಮ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ದು, ಈ ಸಂಬಂಧ ಈಗಾಗಲೇ ಜಿಲ್ಲಾಧ್ಯಕ್ಷರಾದ ಡಿ.ಬಿ ಶಂಕರಪ್ಪ ರಾಜ್ಯ ಪರಿಷತ್ ಅಧ್ಯಕ್ಷರಾದ ಡಾ. ಮನು ಬಳಿಗಾರ್‌ಗೆ ದೂರು ನೀಡಿದ್ದಾರೆ. ತನಿಖೆಯಿಂದ ಅವ್ಯವಹಾರ ನಡೆದಿರುವುದು ದೃಢಪಟ್ಟಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಪರಿಷತ್ ಆದೇಶಿದೆ. ಈ ಭ್ರಷ್ಟಾಚಾರವನ್ನು ಪರಿಷತ್‌ನ ಒಬ್ಬ ಸಾಮಾನ್ಯ ಸದಸ್ಯನಾಗಿ ಖಂಡಿಸುತ್ತೇನೆ. ಇದೆ ರೀತಿ ಮುಂದುವರೆದಲ್ಲಿ ಪರಿಷತ್ ಎಲ್ಲಾ ಸದಸ್ಯರು ಮುಂದಿನ ದಿನಗಳಲ್ಲಿ ಡಿ. ಮಂಜುನಾಥ್ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.
          ನ.೧೦ರಂದು ಅಭಿನಂದನಾ ಕಾರ್ಯಕ್ರಮ:
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ಶ್ರೀ ಬಸವೇಶ್ವರ ಧರ್ಮಸಂಸ್ಥೆ ವತಿಯಿಂದ ನ.೧೦ರಂದು ಬೆಳಿಗ್ಗೆ ೧೦ ಗಂಟೆಗೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ಪರಿಷತ್ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಆಶಯ ನುಡಿಗಳನ್ನಾಡಲಿದ್ದಾರೆ. ನಗರಸಭೆ ಪೌರಾಯುಕ್ತ ಮನೋಹರ್, ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಶ್ರೀ ಬಸವೇಶ್ವರ ಸಂಸ್ಥೆ ಟ್ರಸ್ಟಿ ಎಂ. ಶಶಿಕಲಾ ಶಿವಕುಮಾರ್, ಡಾ. ವೀಣಾ ಎಸ್ ಭಟ್, ಡಾ. ನಾಸಿರ್‌ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
      ಆಕ್ರೋಶ ವ್ಯಕ್ತಪಡಿಸಿದರು. ಎಚ್ ಎನ್ ಮಹಾರುದ್ರ, ಸತ್ಯಮೂರ್ತಿ, ವೈ ಕೆ ಹನುಮಂತಯ್ಯ ಮತ್ತು ಸಿ ಚನ್ನಪ್ಪ ಇದ್ದರು.

ಮದ್ಯದಂಗಡಿಯಿಂದ ಸಾರ್ವಜನಿಕರಿಗೆ ಕಿರಿಕಿರಿ : ಸೂಕ್ತ ಕ್ರಮಕ್ಕೆ ಆಗ್ರಹ

ಕರ್ನಾಟಕ ಜನ್ಯಸೈನ್ಯ ವತಿಯಿಂದ ಪೌರಾಯುಕ್ತರಿಗೆ ಮನವಿ

ಭದ್ರಾವತಿ ಜನ್ನಾಪುರದಲ್ಲಿ ಮದ್ಯದಂಗಡಿಯೊಂದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ಜನ್ಯಸೈನ್ಯ ವತಿಯಿಂದ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೬: ನಗರದ ಜನ್ನಾಪುರದಲ್ಲಿ ಮದ್ಯದಂಗಡಿಯೊಂದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ಜನ್ಯಸೈನ್ಯ ವತಿಯಿಂದ ನಗರಸಭೆ ಪೌರಾಯುಕ್ತ ಮನೋಹರ್‌ಗೆ ಮನವಿ ಸಲ್ಲಿಸಲಾಯಿತು.
    ಜನ್ನಾಪುರದ ಪ್ರಮುಖ ವಾಣಿಜ್ಯ ರಸ್ತೆಯಲ್ಲಿ ಅನ್ನಪೂರ್ಣೇಶ್ವರಿ ವೈನ್ಸ್ ತೆರೆಯಲಾಗಿದ್ದು, ಈ ಮದ್ಯದಂಗಡಿಯಲ್ಲಿ ಕಾನೂನು ಬಾಹಿರವಾಗಿ ವ್ಯವಹಾರ ನಡೆಸಲಾಗುತ್ತಿದೆ. ವ್ಯಾಪಾರಕ್ಕೆ ನಿಗದಿಪಡಿಸಲಾದ ಸ್ಥಳ ಬಿಟ್ಟು ನಗರಸಭೆ ಆಡಳಿತದ ಯಾವುದೇ ಪರವಾನಗಿ ಇಲ್ಲದೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ನೀರಿನ ನಲ್ಲಿ ಸೌಲಭ್ಯ ಕಲ್ಪಿಸಿ ಮದ್ಯ ಸೇವನೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಅಂಗಡಿ ಬಳಿ ರಸ್ತೆಯ ಮಧ್ಯ ಭಾಗದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ವಾಹನಗಳು ಹಾಗು ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೆ ಸಮೀಪದಲ್ಲಿಯೇ ದೇವಸ್ಥಾನವಿದ್ದು, ದೇವಸ್ಥಾನಕ್ಕೆ ಬರುವ ಭಕ್ತಾಧಿಗಳಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ಮಹಿಳೆಯರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.  
   ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಾರದಮ್ಮ, ತಾಲೂಕು ಅಧ್ಯಕ್ಷೆ ಶಾಂತಮ್ಮ, ಮುಖಂಡರಾದ ಸಂತೋಷ್‌ಕುಮಾರ್, ಅನಿಲ್‌ಕುಮಾರ್, ಶ್ರೀನಿವಾಸ್, ಅನುರಾಧ, ಅನಂತರಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.