Wednesday, November 25, 2020

ಮಕ್ಕಳಿಗೆ ಪುಸ್ತಕ ಓದುವ, ಬರೆಯುವ, ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನ ನಡೆಯುತ್ತಿಲ್ಲ

'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ವಿಷಾದ

ಭದ್ರಾವತಿ ಅಂತರಗಂಗೆ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಕನ್ನಡ ಸಾಹಿತ್ಯಾಭಿಮಾನಿಗಳ ಬಳಗ ಅಂತರಗಂಗೆ ಆಯೋಜಿದ್ದ 'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮವನ್ನು ಡಾ. ಮೋಹನ್ ಚಂದ್ರಗುತ್ತಿ, ಡಿ. ಮಂಜುನಾಥ್, ಕೋಗಲೂರು ತಿಪ್ಪೇಸ್ವಾಮಿ ಸೇರಿದಂತೆ ಇತರರು ಉದ್ಘಾಟಿಸಿದರು.
    ಭದ್ರಾವತಿ, ನ. ೨೫; ಪರಸ್ಪರ ನಡುವೆ ಮಾತುಕತೆಗಳು ಕಡಿಮೆಯಾಗುತ್ತಿವೆ. ಟಿ.ವಿ ಮಾದ್ಯಮಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಾಗು ಮೊಬೈಲ್‌ಗಳ ಮೊರೆ ಹೋಗಿ ಪುಸ್ತಕ ಓದುವ, ಬರೆಯುವ ಹಾಗು ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಮೂಡಿಸುವ ಪ್ರಯತ್ನ ಪೋಷಕರಿಂದಾಗುತ್ತಿಲ್ಲ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ವಿಷಾದ ವ್ಯಕ್ತಪಡಿಸಿದರು.
   ಅವರು ತಾಲೂಕಿನ ಅಂತರಗಂಗೆ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಕನ್ನಡ ಸಾಹಿತ್ಯಾಭಿಮಾನಿಗಳ ಬಳಗ ಅಂತರಗಂಗೆ ಆಯೋಜಿದ್ದ 'ನಾಡ ದೇವಿಗೆ ನಮನ ಕನ್ನಡ ರಾಜ್ಯೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರಿಂದ ಕನ್ನಡ ನಾಡು, ಭಾಷೆ, ಸಂಸ್ಕೃತಿ ಬೆಳೆದು ಬಂದಿದೆ ಹೊರತು. ಬೇರೆ ಯಾರಿಂದಲೂ ಅಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಎಂದರೆ ಕೇವಲ ದ್ವಜಾರೋಹಣ ಮಾಡಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡುವುದಷ್ಟೆ ಅಲ್ಲ. ಮಕ್ಕಳಿಗೆ ಉತ್ತಮ ಗುಣ, ನಡತೆ, ಸಂಸ್ಕೃತಿಯ ಜೊತೆಗೆ ಭಾಷೆಯ ಮಹತ್ವ ಹೇಳಿ ಕೊಡುವುದಾಗಿದೆ ಎಂದರು.  
     ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ರಾಜ್ಯೋತ್ಸವ ಎಂದಾಕ್ಷಣ ಸಂಭ್ರಮಿಸಬೇಕಾದ ದಿನಗಳು ಇದುವರೆಗೂ ಒದಗಿ ಬರದಿರುವುದು ಈ ನಾಡಿನ ದೊಡ್ಡ ದುರಂತವಾಗಿದೆ. ಮಕ್ಕಳಿಗೆ ಯಾವ ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು ಎಂಬುದರ ಬಗ್ಗೆ ಪೋಷಕರಲ್ಲಿಯೇ ಗೊಂದಲವಿದೆ, ಆಂಗ್ಲ ಭಾಷೆಯಲ್ಲಿ ಶಿಕ್ಷಣ ದೊರೆಯದಿದ್ದರೆ ಮುಂದಿನ ದಿನಗಳು ಕಷ್ಟವಾಗುತ್ತದೆ ಎಂಬ ತಪ್ಪು ಕಲ್ಪನೆಗಳು ಪ್ರತಿ ಪೋಷಕರಲ್ಲೂ ಮೂಡುತ್ತಿವೆ. ಎಲ್ಲಾ ಭಾಷೆಯನ್ನು ಕಲಿಯಬೇಕು. ಯಾವುದೇ ಭಾಷೆಯನ್ನು ಕಡೆಗಣಿಸಬಾರದು. ಆದರೆ ಮೊದಲ ಆದ್ಯತೆ ಕನ್ನಡ ಭಾಷೆಗೆ ನೀಡಬೇಕೆಂದರು.  
  ಕನ್ನಡ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ವೇದಿಕೆ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ನಾಗರಾಜ್, ವಿ.ಎಚ್ ಹರೀಶ್‌ಬಾಬು, ಎಸ್.ಕೆ ಗುರುಸ್ವಾಮಿ, ಬಿ. ನಾಗೇಶ್, ಶ್ರೀಧರ್, ಅಶೋಕ್, ಪೀಟರ್, ಗುರು, ಲೋಕೇಶ್ ಶಿವಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

ಭದ್ರಾವತಿ, ನ. ೨೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗಿಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಈ ಹಿನ್ನಲೆಯಲ್ಲಿ ಇದರ ವಿರುದ್ಧ ಹೋರಾಟ ನಡೆಸಲು ಇದೀಗ ಹಿರಿಯ ಕಾರ್ಮಿಕ ಮುಖಂಡ ಎಸ್.ಎನ್ ಬಾಲಕೃಷ್ಣ ನೇತೃತ್ವದಲ್ಲಿ ವಿಐಎಸ್‌ಎಲ್ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
      ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಬಿ.ಕೆ ಸಂಗಮೇಶ್ವರ್, ಕಾರ್ಯಾಧ್ಯಕ್ಷರಾಗಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಉಪಾಧ್ಯಕ್ಷರಾಗಿ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಜೆ.ಎಸ್ ನಾಗಭೂಷಣ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ನಗರಸಭೆ ಸದಸ್ಯ ಎಂ.ಎ ಅಜಿತ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಗುರೇಶ್ ಮತ್ತು ಕಾಂಗ್ರೆಸ್ ಮುಖಂಡ ಬಾಲಕೃಷ್ಣ ನೇಮಕಗೊಂಡಿದ್ದಾರೆ.
     ಕಾರ್ಯದರ್ಶಿಗಳಾಗಿ ಬಸಂತ್‌ಕುಮಾರ್, ಬಿ.ಆರ್ ನಾಗರಾಜ್, ಸಿ.ವಿ ರಾಘವೇಂದ್ರ, ಎಸ್. ಮೋಹನ್, ಎಚ್. ರವಿಕುಮಾರ್, ರಾಕೇಶ್, ಬಿ.ಎನ್ ರಾಜು, ನರಸಿಂಹಚಾರ್, ಗೌರವ ಸಲಹೆಗಾರರಾಗಿ ಡಿ.ಸಿ ಮಾಯಣ್ಣ, ಕರಿಯಪ್ಪ, ಎಸ್. ಮಣಿಶೇಖರ್, ಜೆ.ಪಿ ಯೋಜೇಶ್, ಎಸ್. ಕುಮಾರ್, ಬಸವಂತಪ್ಪ, ಸುರೇಶ್, ಮಹಮ್ಮದ್ ಸನಾವುಲ್ಲಾ, ಸತ್ಯ, ಬಿ.ಜಿ ರಾಮಲಿಂಗಯ್ಯ, ರವಿ, ಸುಧಾಮಣಿ, ಲಕ್ಷ್ಮಿದೇವಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎಸ್ ಭೈರಪ್ಪ, ನರಸಿಂಹಮೂರ್ತಿ, ಎಂ. ನಾರಾಯಣ, ಕಾಂತರಾಜ್, ವೆಂಕೆಟೇಶ್, ಕೆಂಪಯ್ಯ, ಆರ್. ಶಂಕರ್, ನಂಜಪ್ಪ, ಎಂ.ಎಚ್ ತಿಪ್ಪೇಸ್ವಾಮಿ, ಸುರೇಶ್ ವರ್ಮಾ, ಯಲ್ಲೋಜಿರಾವ್, ರಾಮಚಂದ್ರ, ಮಾದೇಗೌಡ, ಎಸ್. ಗುಣಕರ, ಎಂ.ಎಲ್ ಯೋಗೀಶ, ಎಸ್.ಪಿ ರಾಜಣ್ಣ, ಪಿ. ರಾಜು, ಎ.ಎಲ್.ಡಬ್ಲ್ಯೂ ಕುಮಾರ್, ಪ್ರಹಲ್ಲಾದ, ಪ್ರದೀಪ್‌ಕುಮಾರ್ ಮತ್ತು ಕೆ.ಆರ್ ಮನುರವರನ್ನು ಆಯ್ಕೆ ಮಾಡಲಾಗಿದೆ.


ಕಸಾಪ ವತಿಯಿಂದ ನ.೨೬ರಂದು ದತ್ತಿ ಕಾರ್ಯಕ್ರಮ

ಭದ್ರಾವತಿ, ನ. ೨೫: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದತ್ತಿ ದಾನಿಗಳಾದ ವಿಜಾಪುರ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದ ಡಾ. ಎಸ್.ಎಸ್ ವಿಜಯ ಸಹಕಾರೊಂದಿಗೆ ನ.೨೬ರಂದು ಬೆಳಿಗ್ಗೆ ೧೧ ಗಂಟೆಗೆ ಕಾಗದನಗರದ ಆಂಗ್ಲ ಶಾಲೆ(ಪಿಟಿಇಎಸ್)ಯ ದತ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ಎಂಪಿಎಂ ಶಿಕ್ಷಣ ಸಂಸ್ಥೆಗಳ ಕೋಶಾಧ್ಯಕ್ಷ ಎಂ.ಡಿ ರವಿಕುಮಾರ್ ಉದ್ಘಾಟಿಸಲಿದ್ದು, ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ವಚನಗಾರ್ತಿಯರ ವಚನ ಗಾಯನ ಮತ್ತು ವ್ಯಾಖ್ಯಾನ ಕುರಿತು ಬೊಮ್ಮನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎ. ತಿಪ್ಪೇಸ್ವಾಮಿ ಉಪನ್ಯಾಸ ನೀಡಲಿದ್ದು, ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ ಆಶಯ ನುಡಿಗಳನ್ನಾಡಲಿದ್ದಾರೆ. ಪ್ರಾಂಶುಪಾಲರಾದ ಆರ್. ಸತೀಶ್, ಜಿ.ಎನ್ ಲಕ್ಷ್ಮೀಕಾಂತ, ಮುಖ್ಯೋಪಾಧ್ಯಾಯಿನಿ ಭಾರತಿ, ಕಸಾಪ ಕಾರ್ಯದರ್ಶಿಗಳಾದ ಸಿ. ಚನ್ನಪ್ಪ, ವೈ.ಕೆ ಹನುಮಂತಯ್ಯ, ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.


Tuesday, November 24, 2020

ಗುಣವತಿಗೆ ಡಾಕ್ಟರೇಟ್ ಪದವಿ


ಗುಣವತಿ
ಭದ್ರಾವತಿ, ನ. ೨೪: ಬೆಂಗಳೂರಿನ ಕರ್ನಾಟಕ ರಾಜ್ಯ ಸಮಗ್ರ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೂಲತಃ ನಗರದ ಹುತ್ತಾ ಕಾಲೋನಿ ನಿವಾಸಿ ಗುಣವತಿಯವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
    ಗುಣವತಿಯವರು ಕೆ.ಪಿ ಪೂರ್ಣಚಂದ್ರ ತೇಜಸ್ವಿ ಹಾಗು ನಾಗೇಶ್ ಹೆಗಡೆಯವರ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆಯ ಸ್ವರೂಪ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ಲಭಿಸಿದೆ. ಇವರು ವಿಐಎಸ್‌ಎಲ್ ಕಾರ್ಖಾನೆಯ ನಿವೃತ್ತ ಉದ್ಯೋಗಿ, ಕನ್ನಡಪರ ಹೋರಾಟಗಾರ, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಶಿವಮಾಧುರವರ ಪುತ್ರಿಯಾಗಿದ್ದಾರೆ.  

ರೈತ ಮುಖಂಡರೊಬ್ಬರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಅಪಪ್ರಚಾರ

ನ್ಯಾಯ ಒದಗಿಸಿಕೊಡಲು ಡಿ.ಬಿ ಹಳ್ಳಿ ನಿವಾಸಿ ಎಂ.ಎಸ್ ಶಿವಕುಮಾರ್ ಮನವಿ

ಭದ್ರಾವತಿ, ನ. ೨೪: ರೈತ ಮುಖಂಡರೊಬ್ಬರ ಕುಮ್ಮಕ್ಕಿನಿಂದ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಹಾಗು ನನ್ನ ವಿರುದ್ಧ ಇತ್ತೀಚೆಗೆ ತಾಲೂಕು ಪಂಚಾಯಿತಿ ಮುಂಭಾಗ ಪ್ರತಿಭಟನೆ ಮಾಡಿ ಸುಳ್ಳು ಹೇಳಿಕೆ ನೀಡಲಾಗಿದೆ ಎಂದು ಡಿ.ಬಿ ಹಳ್ಳಿ ನಿವಾಸಿ ಎಂ.ಎಸ್ ಶಿವಕುಮಾರ್ ಆರೋಪಿಸಿದ್ದಾರೆ.
   ಈ ಕುರಿತು ದಾಖಲೆಗಳೊಂದಿಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗ್ರಾಮದ ರೈತ ಮುಖಂಡರೊಬ್ಬರು ರೈತ ಸಂಘದ ಪ್ರಭಾವದಿಂದ ನನ್ನ ವಿರುದ್ಧ ಇತರರನ್ನು ಬಳಸಿಕೊಂಡು ಪಿತೂರಿ ನಡೆಸುತ್ತಿದ್ದಾರೆ. ನನ್ನ ಮೇಲೆ ಹಲ್ಲೆ, ದೌರ್ಜನ್ಯ, ಕೊಲೆಯತ್ನ ನಡೆಸಲು ಮುಂದಾಗಿದ್ದು, ಇವರ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಪೊಲೀಸ್ ಇಲಾಖೆ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
    ನಮ್ಮ ಆಸ್ತಿಗಳ ಮೇಲೆ ವಿನಾಕಾರಣ ನಗರದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿಸಿದ್ದು, ಇದರ ವಿಚಾರಣೆ ನಡೆದು ತೀರ್ಪು ನಮ್ಮ ಪರವಾಗಿ ಬಂದಿರುತ್ತದೆ. ಮತ್ತೊಂದು ಪ್ರಕರಣದ ವಿಚಾರಣೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಈ ನಡುವೆ ನನ್ನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಬೆದರಿಕೆ ಹಾಕಿ ಆಸ್ತಿಯನ್ನು ಕಬಳಿಸಲು ಯತ್ನಿಸಲಾಗುತ್ತಿದೆ. ಅಲ್ಲದೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ. ಮಾರಶೆಟ್ಟಿಹಳ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಮಾಡಿರುವ ಆರೋಪಗಳು ಸಂಪೂರ್ಣ ಸತ್ಯಕ್ಕೆ ದೂರವಾಗಿವೆ ಎಂದು ಆರೋಪಿಸಿದ್ದಾರೆ.
   ನನ್ನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ದನಾಗಿದ್ದು, ನನಗೆ ನ್ಯಾಯ ಒದಗಿಸಿಕೊಡುವಂತೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪುನರ್ ರಚನೆ

ಅಧ್ಯಕ್ಷರಾಗಿ ಎಂ. ವಿಜಯರಾಜ್, ಬಿ.ಎಸ್ ಕಲ್ಪನ ಸುದರ್ಶನ್, ಪಿ. ಗಣೇಶ್‌ರಾವ್ ನೇಮಕ

ಯುವ ಮೋರ್ಚಾ ಅಧ್ಯಕ್ಷ ಎಂ. ವಿಜಯರಾಜ್
ಭದ್ರಾವತಿ, ನ. ೨೪: ಭಾರತೀಯ ಜನತಾ ಪಕ್ಷದ ತಾಲೂಕು ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ಪುನರ್ ರಚನೆ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆಯಲ್ಲಿ ನಡೆದಿದ್ದು, ಯುವ ಮೋರ್ಚಾ ಅಧ್ಯಕ್ಷರಾಗಿ ಎಂ. ವಿಜಯರಾಜ್, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಬಿ.ಎಸ್ ಕಲ್ಪನ ಸುದರ್ಶನ್ ಮತ್ತು ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಪಿ. ಗಣೇಶ್ ರಾವ್ ನೇಮಕಗೊಂಡಿದ್ದಾರೆ.
       ಯುವ ಮೋರ್ಚಾ: ಅಧ್ಯಕ್ಷರಾಗಿ ಎಂ. ವಿಜಯರಾಜ್, ಉಪಾಧ್ಯಕ್ಷರಾಗಿ ಎಸ್. ಕಿರಣ್ ಕುಮಾರ್, ಜೆ. ಕೃಷ್ಣ, ಸಚಿನ್ ರೇವಣ್‌ಕರ್ ಮತ್ತು ಹೇಮಂತ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ನಕುಲ್ ಮತ್ತು ಜಿ. ಯೋಗೇಶ್‌ಕುಮಾರ್, ಕಾರ್ಯದರ್ಶಿಗಳಾಗಿ ದೇವರಾಜ್, ಗೋಪಿನಾಥ್, ಧನ್ಯಕುಮಾರ್ ಮತ್ತು ಜಾನು, ಖಜಾಂಚಿಯಾಗಿ ವಿಜಯ್, ಸದಸ್ಯರುಗಳಾಗಿ ಲಕ್ಷ್ಮಣ್, ಪ್ರಕಾಶ್(ಮಾವಿನಕೆರೆ), ಆದರ್ಶ್, ಅನಂತು, ವಿಘ್ನೇಶ್, ಪ್ರದೀಪ್, ರಾಘವೇಂದ್ರ, ಆಕಾಶ್, ಕೆ. ಲಕ್ಷ್ಮಣ್ ಮತ್ತು ಪುನಿತ್ ಗೌಡ ನೇಮಕಗೊಂಡಿದ್ದಾರೆ.
     ಮಹಿಳಾ ಮೋರ್ಚಾ: ಅಧ್ಯಕ್ಷರಾಗಿ ಬಿ.ಎಸ್ ಕಲ್ಪನ ಸುದರ್ಶನ್, ಉಪಾಧ್ಯಕ್ಷರಾಗಿ ಜಯಲಕ್ಷ್ಮಿ, ರೇಖಾ ಪದ್ಮಾವತಿ, ವಿ. ಶಾಮಲ ಮತ್ತು ಮಧುಮಾಲ, ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ಎಂ. ಮಂಜುಳ ಮತ್ತು ಶಕುಂತಲ, ಕಾರ್ಯದರ್ಶಿಗಳಾಗಿ ಕವಿತ, ಆರತಿ, ರಾಜೇಶ್ವರಿ ಮತ್ತು ಸುಶೀಲ, ಖಜಾಂಚಿಯಾಗಿ ಸಿಂಧು, ಸದಸ್ಯರಾಗಿ ರಕ್ಷ್ಮೀಣಿ, ಉಮಾಲಕ್ಷ್ಮಿ, ಉಜಾಲಬಾಯಿ, ಭಾಗ್ಯ, ವಾಣಿ, ಧನಲಕ್ಷ್ಮಿ, ಉಷಾ, ವನಜಾಕ್ಷಿ ಮತ್ತು ವಿದ್ಯಾಲಕ್ಷ್ಮಿ ನೇಮಕಗೊಂಡಿದ್ದಾರೆ.


ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್
    ಎಸ್.ಸಿ ಮೋರ್ಚಾ : ಅಧ್ಯಕ್ಷರಾಗಿ ಪಿ. ಗಣೇಶ್‌ರಾವ್, ಉಪಾಧ್ಯಕ್ಷರಾಗಿ ಡಾ. ಪುಷ್ಪಲತಾ, ಕುಪ್ಪಣ್ಣ, ಮಂಜನಾಯ್ಕ ಮತ್ತು ದುರ್ಗೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಸುಶ್ಮಿತಾ ಮತ್ತು ಮಂಜುನಾಥ್, ಕಾರ್ಯದರ್ಶಿಗಳಾಗಿ ನಾಗೇಶ್, ಗಿರೀಶ್, ಮಾಲತೇಶ್ ಮತ್ತು ಮಂಜುನಾಥ್, ಖಜಾಂಚಿಯಾಗಿ ರವಿಕುಮಾರ್ ನಾಯ್ಕ್, ಸದಸ್ಯರಾಗಿ ಅವಿನಾಶ್, ಚಂದ್ರು, ಜಗನ್ನಾಥ್, ರಾಜೇಶ್ವರಿ, ರವಿಕುಮಾರ್ ನಾಯ್ಕ್, ಹನುಮಂತನಾಯ್ಕ್, ಸಂದೀಪ್, ಮುರಳಿ ಮತ್ತು ಗೋಪಾಲ್ ನಾಯ್ಕ್ ನೇಮಕಗೊಂಡಿದ್ದಾರೆ.  

ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕೇಶವಮೂರ್ತಿ ನಿಧನ

ಕೇಶವಮೂರ್ತಿ
ಭದ್ರಾವತಿ, ನ. ೨೪: ನಗರಸಭೆ ಚಾಲಕ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಕೇಶವಮೂರ್ತಿ(೪೮) ಮಂಗಳವಾರ ನಿಧನ ಹೊಂದಿದರು.
     ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಹಳೇನಗರದ ಕನಕಮಂಟ ಮೈದಾನದ ಪಕ್ಕದಲ್ಲಿರುವ ನಗರಸಭೆ ವಸತಿ ಗೃಹದಲ್ಲಿ ವಾಸವಾಗಿದ್ದ ಇವರು ಕಳೆದ ೪-೫ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  
    ಪ್ರಸ್ತುತ ನಗರಸಭೆ ಕಂದಾಯಾಧಿಕಾರಿಗಳ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರ ನಿಧನಕ್ಕೆ ನಗರಸಭೆ ಪೌರಾಯುಕ್ತ ಮನೋಹರ್, ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಕ ಆರ್.ಬಿ ಸತೀಶ್ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.