Saturday, December 19, 2020

೪ನೇ ವರ್ಷದ ದೀಪೋತ್ಸವ : ಹೋಮ, ಸತ್ಯನಾರಾಯಣ ಪೂಜೆ

ಭದ್ರಾವತಿ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಛೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ೪ನೇ ವರ್ಷದ ದೀಪೋತ್ಸವ ಅಂಗವಾಗಿ ಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
ಭದ್ರಾವತಿ, ಡಿ. ೧೯: ನಗರದ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ  ೪ನೇ ವರ್ಷದ ದೀಪೋತ್ಸವ ಅದ್ದೂರಿಯಾಗಿ ಜರುಗಿತು.
    ಈ ಸಂಬಂಧ ದೇವಸ್ಥಾನದ ಮೂಲ ವಿಗ್ರಹಕ್ಕೆ ಅಭಿಷೇಕ, ಹೋಮ, ಸತ್ಯನಾರಾಯಣ ಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
    ದೇವಸ್ಥಾನದ ಪ್ರಧಾನ ಅರ್ಚಕ ಸಂಜೀವ್‌ಕುಮಾರ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು. ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಆರ್. ಮುನಿರಾಜು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ನೂರಾರು ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.

೨ ದಿನಗಳ ಉಚಿತ ಜನಪದ ಗೀತೆಗಳ ಶಿಬಿರ

ಭದ್ರಾವತಿ, ಡಿ. ೧೯: ನಗರದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜ.೨ ಮತ್ತು ೩ ರಂದು ೨ ದಿನಗಳ ಉಚಿತ ಜನಪದ ಗೀತೆಗಳ ಶಿಬಿರ ಆಯೋಜಿಸಲಾಗಿದೆ.
ಕೇವಲ ೧೫ ಮಂದಿಗೆ ಮಾತ್ರ ಅವಕಾಶವಿದ್ದು, ಹೆಸರು ನೋಂದಾಯಿಸಿಕೊಳ್ಳಲು ಡಿ.೩೦ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ತಮಟೆ ಜಗದೀಶ್, ಮೊ: ೯೯೪೫೩೧೮೦೨೯, ಕವಿತ ಸುರೇಶ್, ಮೊ: ೯೮೪೫೯೨೭೨೮೪ ಕರೆ ಮಾಡಬಹುದಾಗಿದೆ.




೨ ವರ್ಷಗಳ ನಿರಂತರ ಪ್ರಯತ್ನದಿಂದ ೪೦೦೦ ೩ಜಿ ಗುಂಪು ಮನೆ ಯೋಜನೆ ಯಶಸ್ವಿ

ಫಲಾನುಭವಿಗಳಿಗೆ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಸ

ಭದ್ರಾವತಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ-೨೦೨೨ ಹಾಗು ರಾಜೀವ್ ಗಾಂಧಿ ವಸತಿ ಯೋಜನೆಯಡಿ ೪೦೦೦ ೩ಜಿ ಗುಂಪು ಮನೆಗಳ ಫಲಾನುಭವಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ಭದ್ರಾವತಿ, ಡಿ. ೧೯: ಸುಮಾರು ೨ ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ ನಗರ ಪ್ರದೇಶದ ಬಡಕುಟುಂಬದ ವಸತಿ ರಹಿತರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆ-೨೦೨೨ ಹಾಗು ರಾಜೀವ್ ಗಾಂಧಿ ವಸತಿ ಯೋಜನೆಯಡಿ ೪೦೦೦ ೩ಜಿ ಗುಂಪು ಮನೆಗಳನ್ನು ನಿರ್ಮಿಸಲಾಗಿದ್ದು, ಯೋಜನೆ ಕಾರ್ಯ ರೂಪಕ್ಕೆ ಬಂದಿರುವುದು ಸಂತಸವನ್ನುಂಟು ಮಾಡಿದೆ. ಫಲಾನುಭವಿಗಳು ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
   ಅವರು ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ಬಡವರಿಗೆ ಸೂರು ಕಲ್ಪಿಸಿಕೊಡಬೇಕೆಂಬ ಆಶಯ ಇದೀಗ ಈಡೇರಿದೆ. ೪೦೦೦ ಅರ್ಹ ಬಡಕುಟುಂಬಗಳನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಕಾರ್ಯ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
   ಫಲಾನುಭವಿಗಳು ಹಂಚಿಕೆ ಮಾಡಲಾಗಿರುವ ಮನೆಗಳನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ಅನುಸರಿಸಬೇಕಾದ ಕ್ರಮಗಳು, ಸಂಪರ್ಕಿಸಬೇಕಾದ ಅಧಿಕಾರಿಗಳು, ಪಾವತಿಸಬೇಕಾದ ಹಣ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಿಳಿಸಲಿದ್ದಾರೆ. ಈ ಮಾಹಿತಿಗಳನ್ನು ಶೀಘ್ರದಲ್ಲಿಯೇ ಕರಪತ್ರದಲ್ಲಿ ಮುದ್ರಿಸಿ ವಿತರಿಸಲಾಗುವುದು. ಆ ಮಾಹಿತಿಯಂತೆ ಫಲಾನುಭವಿಗಳು ನಡೆದುಕೊಳ್ಳಬೇಕು. ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬೇಡಿ, ವಿಳಂಬಮಾಡಿಕೊಂಡು ನನ್ನನ್ನು ದೂರಬೇಡಿ ಎಂದರು.
   ಸಭೆಯಲ್ಲಿ ಯೂನಿಯನ್ ಬ್ಯಾಂಕ್ ವಲಯ ವ್ಯವಸ್ಥಾಪಕ ಪ್ರಭು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಮುಖಂಡರಾದ ಚನ್ನಪ್ಪ, ಕೆ. ಸುದೀಪ್‌ಕುಮಾರ್, ಮಣಿ ಎಎನ್‌ಎಸ್, ರಾಮಕೃಷ್ಣ ಗೌಡ, ಲೋಕೇಶ್, ಬಿ.ಕೆ ಶಿವಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, December 18, 2020

ಮತದಾರರ ದಿನಾಚರಣೆ ಅಂಗವಾಗಿ ಡಿ.೧೯ರಂದು ಪ್ರೌಢ ಶಾಲಾ ಮಕ್ಕಳಿಗೆ ಸ್ಪರ್ಧಾತ್ಮಕ ಚಟುವಟಿಕೆ

ಭದ್ರಾವತಿ, ಡಿ. ೧೮: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ತಾಲೂಕಿನ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನ ರಹಿತ ಪ್ರೌಢ ಶಾಲಾ ಮಕ್ಕಳಿಗೆ ತಾಲೂಕು ಹಂತದ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
ಡಿ.೧೯ರಂದು ಬೆಳಿಗ್ಗೆ ೯.೧೫ ಹಳೇನಗರದ ಬಿಆರ್‌ಸಿ ಕಚೇರಿಯಲ್ಲಿ ಪ್ರಬಂಧ ಸ್ಪರ್ಧೆ(ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ), ಪೋಸ್ಟರ್ ಮತ್ತು ಕೋಲಾಜ್ ಮೇಕಿಂಗ್ ಹಾಗು ರಸಪ್ರಶ್ನೆ ಒಟ್ಟು ೪ ಸ್ಪರ್ಧೆಗಳು ನಡೆಯಲಿವೆ.
ಶಾಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಮತದಾರರ ಸಾಕ್ಷರತಾ ಸಂಘಗಳ ತಾಲೂಕು ಅಧಿಕಾರಿಯಾದ ನವೀದ್ ಅಹ್ಮದ್ ಪರ್ವೀಜ್, ಮೊ: ೯೮೮೬೨೧೪೧೬೦ ರವರಿಗೆ ಸಂಪರ್ಕಿಸುವಂತೆ ಕೋರಲಾಗಿದೆ.


ಡಿ.೧೯ರಂದು ೪ನೇ ವರ್ಷದ ದೀಪೋತ್ಸವ

ಭದ್ರಾವತಿ, ಡಿ. ೧೮: ನಗರದ ತರೀಕೆರೆ ರಸ್ತೆಯ ವಲಯ ಅರಣ್ಯಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಡಿ.೧೯ರಂದು ೪ನೇ ವರ್ಷದ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ.
    ಈ ಸಂಬಂಧ ಬೆಳಿಗ್ಗೆ ೫.೩೦ಕ್ಕೆ ಅಭಿಷೇಕ, ೯.೩೦ಕ್ಕೆ ಹೋಮ, ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಅನ್ನಸಂತರ್ಪಣೆ, ಸಂಜೆ ಪಲ್ಲಕ್ಕಿ ಉತ್ಸವ ದೀಪಾರಾಧನೆ,ರಾತ್ರಿ ೮.೩೦ಕ್ಕೆ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.  

‘ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್’ : ವಿಐಎಸ್‌ಎಲ್ ಕಾರ್ಖಾನೆ ಸಂತಸ


 'ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್' ಪ್ರಶಸ್ತಿ ಪತ್ರ ಮತ್ತು ಆವಾರ್ಡ್
ಭದ್ರಾವತಿ, ಡಿ. ೧೮: ಹಿರಿಯ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಒಂದು ವ್ಯಾಪಾರಿ ಕಂಪನಿಯಾಗಿರುವ ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ ವತಿಯಿಂದ ನೀಡಲಾಗುವ ಪ್ರತಿಷ್ಠಿತ 'ಗೋಲ್ಡನ್ ಪಿಕಾಕ್ ಎನ್ವಿರೋನ್‌ಮೆಂಟ್ ಮ್ಯಾನೇಜ್‌ಮೆಂಟ್ ಆವಾರ್ಡ್' ಈ ಬಾರಿ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ಲಭಿಸಿದ್ದು, ಈ ಹಿನ್ನಲೆಯಲ್ಲಿ ಉಕ್ಕು ಪ್ರಾಧಿಕಾರದ ಅಧೀನದಲ್ಲಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಂತಸ ವ್ಯಕ್ತಪಡಿಸಿದೆ.
    ಈ ನಡುವೆ ಪ್ರಶಸ್ತಿ ಲಭಿಸಿರುವ ಸಂಭ್ರಮ ಪತ್ರಿಕೆಗಳೊಂದಿಗೆ ಹಂಚಿಕೊಂಡಿರುವ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅನಿಲ್‌ಕುಮಾರ್ ಚೌಧರಿ, ಪ್ರಾಧಿಕಾರ ನಿರಂತರವಾಗಿ ಪರಿಸರ ರಕ್ಷಣೆಗೆ ಹೆಚ್ಚಿನ ಕಾಳಜಿವಹಿಸಿರುವ ಪರಿಣಾಮ ಈ ಪ್ರಶಸ್ತಿ ಲಭಿಸಿದೆ. ಪ್ರಾಧಿಕಾರದ ಅಧೀನದಲ್ಲಿರುವ ಕಾರ್ಖಾನೆಗಳಲ್ಲಿ ಸಾಧ್ಯವಾದಷ್ಟು ಎಲ್ಲಾ ರೀತಿಯಲ್ಲೂ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಉನ್ನತಮಟ್ಟದ ವ್ಯವಸ್ಥೆಗಳೊಂದಿಗೆ ವ್ಯರ್ಥವಾಗುವ ನೀರಿನ ಸಮರ್ಪಕ ನಿರ್ವಹಣೆ ಹಾಗು ಮರುಬಳಕೆ, ಇನ್ನಿತರ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ. ಕಾರ್ಖಾನೆಯಲ್ಲಿ ಮಾತ್ರವಲ್ಲದೆ ನಗರಾಡಳಿತದಲ್ಲೂ ಈ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈ ಎಲ್ಲಾ ಕ್ರಮಗಳಿಂದಾಗಿ ಪ್ರಾಧಿಕಾರ ಈ ನಿಟ್ಟಿನಲ್ಲಿ ಮುನ್ನಡೆಯಲ್ಲಿ ಸಾಗಿದೆ ಎಂದು ತಿಳಿಸಿದ್ದಾರೆ.
   ಪ್ರಶಸ್ತಿಯನ್ನು ಇನ್‌ಸ್ಟಿಟ್ಯೂಟ್ ಆಫ್ ಡೈರೆಕ್ಟರ್ ಕಂಪನಿ ಅಧ್ಯಕ್ಷರು ಹಾಗು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ನ್ಯಾ. ಎಂ.ಎನ್ ವೆಂಕಟಚಲಯ್ಯ ನೀಡಿ ಗೌರವಿಸಿದರು.  

ಬಿಡಾಡಿ ದನಗಳ ರಸ್ತೆ ಅಪಘಾತ ತಪ್ಪಿಸಲು ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್

ಭದ್ರಾವತಿಯಲ್ಲಿ ಜೀವಾಮೃತ ಚಾರಿಟೇಬಲ್ ಸೇವಾ ಟ್ರೆಸ್ಟ್ ವತಿಯಿಂದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ಕಾರ್ಯ ಕಳೆದ ೨ ದಿನಗಳಿಂದ ರಾತ್ರಿ ವೇಳೆ ನಡೆಯುತ್ತಿದೆ.
ಭದ್ರಾವತಿ, ಡಿ. ೧೮ : ಇತ್ತೀಚೆಗೆ ಬಿಡಾಡಿ ದನಗಳು ರಸ್ತೆ ಅಪಘಾತಕ್ಕೆ ಒಳಗಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಜೀವಾಮೃತ ಚಾರಿಟೇಬಲ್ ಸೇವಾ ಟ್ರೆಸ್ಟ್ ವತಿಯಿಂದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ಕಾರ್ಯ ಕಳೆದ ೨ ದಿನಗಳಿಂದ ರಾತ್ರಿ ವೇಳೆ ನಡೆಯುತ್ತಿದೆ.
ರಾತ್ರಿ ವೇಳೆ ವಾಹನಗಳ ಚಾಲಕರಿಗೆ ರಸ್ತೆಯಲ್ಲಿರುವ ಬಿಡಾಡಿ ದನಗಳು ತಕ್ಷಣ ಗೋಚರಿಸುವಂತಾಗಬೇಕು. ಇದರಿಂದ ಅಪಘಾತಗಳ ಪ್ರಮಾಣ ಕಡಿಮೆಯಾಗುವ ಮೂಲಕ ಬಿಡಾಡಿ ದನಗಳ ರಕ್ಷಣೆ ಮಾಡಿದಂತಾಗುತ್ತದೆ ಎಂಬ ಕಾಳಜಿಯೊಂದಿಗೆ ಟ್ರಸ್ಟ್ ವತಿಯಿಂದ ಈ ಕಾರ್ಯ ಕೈಗೊಳ್ಳಲಾಗಿದೆ.  ಹಳೇನಗರದ ಶ್ರೀ ಬಸವೆಶ್ವರ ವೃತ್ತ, ಚನ್ನಗಿರಿ ರಸ್ತೆ, ಬಿ.ಎಚ್ ರಸ್ತೆ ಮತ್ತು ಬೈಪಾಸ್ ರಸ್ತೆಯಲ್ಲಿದ್ದ ಬಿಡಾಡಿ ದನಗಳ ಕೊಂಬುಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಈ ಕಾರ್ಯದಲ್ಲಿ ಟ್ರಸ್ಟ್ ಪ್ರಮುಖರು ಪಾಲ್ಗೊಂಡಿದ್ದರು.