Thursday, April 1, 2021

ಭದ್ರಾವತಿ ತಾಲೂಕು ಪಂಚಾಯಿತಿ ಒಟ್ಟು ೧೪ ಕ್ಷೇತ್ರಗಳು ನಿಗದಿ



   ಭದ್ರಾವತಿ, ಏ. ೧: ಈ ಬಾರಿ ತಾಲೂಕಿನಲ್ಲಿ ಒಟ್ಟು ೧೪ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗ ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ.
ಈ ಹಿಂದೆ ಒಟ್ಟು ೧೯ ತಾಲೂಕು ಪಂಚಾಯಿತಿ ಕ್ಷೇತ್ರಗಳಿದ್ದು, ಈ ಪೈಕಿ ೫ ಕ್ಷೇತ್ರಗಳನ್ನು ಹೊರತುಪಡಿಸಿ ೧೪ ಕ್ಷೇತ್ರಗಳನ್ನು ನಿಗದಿಪಡಿಸಿದೆ. ಈ ಪ್ರಕಾರ ಆನವೇರಿ, ಸಿದ್ದರಹಳ್ಳಿ ಇಟ್ಟಿಗೆಹಳ್ಳಿ, ನಿಂಬೆಗೊಂದಿ, ವಡೇರಪುರ, ಅರಿಶಿನಘಟ್ಟ, ಇಂದಿರಾನಗರ(ಅರಿಶಿನಘಟ್ಟ ತಾಂಡ), ಸೈದರಕಲ್ಲಹಳ್ಳಿ, ಕುರುಬರ ವಿಠಲಾಪುರ, ಆದ್ರಿಹಳ್ಳಿ ಮತ್ತು ದಿಗ್ಗೇನಹಳ್ಳಿ ಒಳಗೊಂಡಂತೆ ಆನವೇರಿ ಕ್ಷೇತ್ರ ಹಾಗು ಮೈದೊಳಲು, ಅಗರದಹಳ್ಳಿ, ಹಂಚಿನಸಿದ್ದಾಪುರ, ಬಸವಾಪುರ, ಭದ್ರಾಪುರ, ಹಾರೋಗುಂಡಿ, ಮಲ್ಲಿಗೇನಹಳ್ಳಿ, ಗುಡುಮಘಟ್ಟ, ತಡಸ, ಜಂಮರಹಳ್ಳಿ ಮತ್ತು ಕಲ್ಲಜ್ಜನಹಾಳ್ ಒಳಗೊಂಡಂತೆ ಅಗರದಹಳ್ಳಿ ಕ್ಷೇತ್ರವನ್ನು ರಚಿಸಲಾಗಿದೆ.
   ಮಂಗೋಟೆ, ನಾಗಸಮುದ್ರ, ಸಿದ್ಲಿಪುರ, ಸನ್ಯಾಸಿಕೋಡಮಗ್ಗೆ, ಕನಸಿನಕಟ್ಟೆ ಮತ್ತು ಮಲ್ಲಾಪುರ ಒಳಗೊಂಡಂತೆ ಸನ್ಯಾಸಿಕೋಡಮಗ್ಗೆ ಕ್ಷೇತ್ರವನ್ನು, ಯಡೇಹಳ್ಳಿ, ಹನುಮಂತಾಪುರ, ಚಂದನಕೆರೆ, ಕಂಗನಾಳು ಮತ್ತು ಅರಹತೊಳಲು ಸೇರಿದಂತೆ ಯಡೇಹಳ್ಳಿ ಕ್ಷೇತ್ರವನ್ನು, ಕಲ್ಲಿಹಾಳ್, ದೊಂಬರಭೈರನಹಳ್ಳಿ, ದಾಸರಕಲ್ಲಹಳ್ಳಿ, ಅಗಸನಹಳ್ಳಿ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ, ಅರದೊಟ್ಲು, ತಿಮ್ಲಾಪುರ ಒಳಗೊಂಡಂತೆ ತಟ್ಟೆಹಳ್ಳಿ ಕ್ಷೇತ್ರವನ್ನು, ಅರಬಿಳಚಿ, ದಾನವಾಡಿ, ಅರಕೆರೆ, ಕಲ್ಲಾಪುರ, ರಂಗಾಪುರ, ನಾಗೋಲಿ, ಹೊಸೂರು ಮತ್ತು ಬೊಮ್ಮನಕಟ್ಟೆ ಒಳಗೊಂಡಂತೆ ಅರಬಿಳಚಿ ಕ್ಷೇತ್ರವನ್ನು ಹಾಗು ಕೂಡ್ಲಿಗೆರೆ, ಕೋಡಿಹಳ್ಳಿ, ಕೊಟ್ಟದಾಳು, ನವಿಲೆಬಸವಾಪುರ, ಹಾಳುಮಲ್ಲಾಪುರ, ಕಲ್ಪನಹಳ್ಳಿ, ಅತ್ತಿಗುಂದ, ಸೀತಾರಾಮಪುರ, ಬಸಲೀಕಟ್ಟೆ, ನಾಗತಿಬೆಳಗಲು, ಹೊಸಹಳ್ಳಿ, ಮತ್ತಿಘಟ್ಟ, ಹಾತಿಕಟ್ಟೆ  ಮತ್ತು ತಡಸ ಒಳಗೊಂಡಂತೆ ತಡಸ ಕ್ಷೇತ್ರವನ್ನು ರಚಿಸಲಾಗಿದೆ.
    ಅರಳಿಹಳ್ಳಿ, ಕೋಮಾರನಹಳ್ಳಿ, ಗುಡ್ಡದನೇರಲೆಕೆರೆ, ದೇವರಹಳ್ಳಿ, ವೀರಾಪುರ, ಮಜ್ಜಿಗೇನಹಳ್ಳಿ, ಗೌಡರಹಳ್ಳಿ, ಕಾಗೇಕೋಡಮಗ್ಗೆ, ಬಾಬಳ್ಳಿ, ತಿಪ್ಲಾಪುರ ಮತ್ತು ತಳ್ಳಿಕಟ್ಟೆ ಒಳಗೊಂಡಂತೆ ಅರಳಿಹಳ್ಳಿ ಕ್ಷೇತ್ರವನ್ನು, ಅಂತರಗಂಗೆ, ಕಾಚಗೊಂಡನಹಳ್ಳಿ, ದೇವರನರಸೀಪುರ, ಉಕ್ಕುಂದ, ಕೆಂಚಮ್ಮನಹಳ್ಳಿ, ಬಂಡಿಗುಡ್ಡ, ಬೆಳ್ಳಿಗೆರೆ, ಬದನೆಹಾಳ್, ನೆಟ್ಟಕಲ್ಲಹಟ್ಟಿ, ದೊಡ್ಡೇರಿ, ಎಮ್ಮೆದೊಡ್ಡಿ, ಗಂಗೂರು, ಬಿಸಿಲಮನೆ, ಬಾಳೆಕಟ್ಟೆ, ಸಿದ್ದರಹಳ್ಳಿ, ಮಳಲಹರವು, ವರವಿನಕೆರೆ, ಕೊರಲಕೊಪ್ಪ ಮತ್ತು ಗುಣಿನರಸೀಪುರ ಒಳಗೊಂಡಂತೆ ಅಂತರಗಂಗೆ ಕ್ಷೇತ್ರವನ್ನು, ಮಾವಿನಕೆರೆ, ಮೊಸರಹಳ್ಳಿ, ಕೆಂಚೇನಹಳ್ಳಿ, ಹಡ್ಲಘಟ್ಟ, ಕಾಳಿಂಗನಹಳ್ಳಿ, ಬಾರಂದೂರು, ಹಳ್ಳಿಕೆರೆ ಮತ್ತು ಯರೇಹಳ್ಳಿ ಒಳಗೊಂಡಂತೆ ಯರೇಹಳ್ಳಿ ಕ್ಷೇತ್ರವನ್ನು ಹಾಗು ಹಿರಿಯೂರು, ನಂಜಾಪುರ, ಅರಳಿಕೊಪ್ಪ, ಗಂಗೂರು, ಬಾಳೆಮಾರನಹಳ್ಳಿ, ತಾರೀಕಟ್ಟೆ, ಚಿಕ್ಕಗೊಪ್ಪೇನಹಳ್ಳಿ, ಕಾರೇಹಳ್ಳಿ ಮತ್ತು ಬೊಮ್ಮೇನಹಳ್ಳಿ ಒಳಗೊಂಡಂತೆ ಹಿರಿಯೂರು ಕ್ಷೇತ್ರವನ್ನು ರಚಿಸಲಾಗಿದೆ.
  ಕಲ್ಲಹಳ್ಳಿ, ಮಜ್ಜಿಗೇನಹಳ್ಳಿ, ಬಿಳಿಕಿ, ಸಿರಿಯೂರು, ಹಾಗಲಮನೆ, ಸೋಮೇನಕೊಪ್ಪ, ಹಳಿಯಾರು ರಾಮೇನಕೊಪ್ಪ, ಸಂಕ್ಲೀಪುರ, ವೀರಾಪುರ, ಕಂಬದಾಳು ಹೊಸೂರು, ಹೊನ್ನೆಹಟ್ಟಿ, ಹುಣಸೇಕಟ್ಟೆ, ತಮ್ಮಡೀಹಳ್ಳಿ ಮತ್ತು ಕಾಳನಕಟ್ಟೆ ಒಳಗೊಂಡಂತೆ ಹುಣಸೇಕಟ್ಟೆ ಕ್ಷೇತ್ರವನ್ನು, ಸಿಂಗನಮನೆ, ವದಿಯೂರು, ತಾವರಘಟ್ಟ, ಗೋಣಿಬೀಡು, ಮಲ್ಲಿಗೇನಹಳ್ಳಿ, ನೆಲ್ಲಿಸರ ಮತ್ತು ಮಾಳೇನಹಳ್ಳಿ ಒಳಗೊಂಡಂತೆ ಸಿಂಗನಮನೆ ಕ್ಷೇತ್ರವನ್ನು ಹಾಗು ದೊಣಬಘಟ್ಟ, ಪದ್ಮೇನಹಳ್ಳಿ, ಕೊಪ್ಪದಾಳು, ನವಿಲೇಬಸವಾಪುರ ಮತ್ತು ಹೊಳೆನೇರಲೆಕೆರೆ ಒಳಗೊಂಡಂತೆ ದೊಣಬಘಟ್ಟ ಕ್ಷೇತ್ರವನ್ನು ರಚಿಸಲಾಗಿದೆ.

೪ನೇ ಪೊಸ್ಟಲ್ ಕ್ರಿಕೆಟ್ ಲೀಗ್

   ಭದ್ರಾವತಿ, ಏ. ೧: ನಗರದ ಪ್ರಧಾನ ಅಂಚೆ ಕಛೇರಿ ಮನೋರಂಜನಾ ಕೂಟ ವತಿಯಿಂದ ಏ.೨ರಂದು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶಿವಮೊಗ್ಗ ವಿಭಾಗೀಯ ಮಟ್ಟದ ೪ನೇ ಪೊಸ್ಟಲ್ ಕ್ರಿಕೆಟ್ ಲೀಗ್ ೨೦೨೧ ಹಮ್ಮಿಕೊಳ್ಳಲಾಗಿದೆ.
   ಬೆಳಿಗ್ಗೆ ೭.೩೦ಕ್ಕೆ ಶಿವಮೊಗ್ಗ ಅಂಚೆ ಅಧೀಕ್ಷಕ ಜಿ. ಹರೀಶ್ ಪಂದ್ಯಾವಳಿ ಉದ್ಘಾಟಿಸಲಿದ್ದು, ಅಂಚೆ ಪಾಲಕ ವಿ. ಶಶಿಧರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಹಾಯಕ ಅಂಚೆ ಅಧೀಕ್ಷಕಿ ಕೆ.ಆರ್ ಉಷಾ, ಅಂಚೆ ನಿರೀಕ್ಷಕ ಪಹ್ಲಾದ್ ನಾಯಕ ಉಪಸ್ಥಿತರಿರುವರು.
    ಸಂಜೆ ೬ ಗಂಟೆಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಸಹಾಯಕ ಅಂಚೆ ಅಧೀಕ್ಷಕ ಶ್ರೀನಿವಾಸ್, ಎಸ್.ಎಸ್ ಮಂಜುನಾಥ್, ಪ್ರಕಾಶ್‌ರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ವೀರಶೈವ ಸಮುದಾಯಗಳೆಲ್ಲ ಒಗ್ಗೂಡುವ ಮೂಲಕ ಬಲಿಷ್ಠತೆ ಕಾಯ್ದುಕೊಳ್ಳಲಿ : ಬಿ.ಕೆ ಸಂಗಮೇಶ್ವರ್

ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಭದ್ರಾವತಿ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ನಡೆದಾಡುವ ದೇವರು ತ್ರಿವಿದ ದಾಸೋಹಿ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಯವರ ೧೧೪ನೇ ಜನ್ಮದಿನ ಹಾಗು ಧಾರ್ಮಿಕ ಸಮಾರಂಭವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
  ಭದ್ರವತಿ, ಏ. ೧: ವೀರಶೈವ ಸಮುದಾಯಗಳೆಲ್ಲ ಒಗ್ಗೂಡುವ ಮೂಲಕ ಬಲಿಷ್ಠತೆ ಕಾಯ್ದುಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
   ಅವರು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ನಡೆದಾಡುವ ದೇವರು ತ್ರಿವಿದ ದಾಸೋಹಿ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಯವರ ೧೧೪ನೇ ಜನ್ಮದಿನ ಹಾಗು ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
   ಸಮುದಾಯಗಳು ಒಗ್ಗೂಡದೆ ಸಮಾಜಕ್ಕೆ ಯಾವುದೇ ರೀತಿ ಸಂದೇಶ ಸಾರಲು ಸಾಧ್ಯವಿಲ್ಲ. ನಮ್ಮ ಸಮುದಾಯಗಳೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡಬೇಕು. ಈ ನಿಟ್ಟಿನಲ್ಲಿ ಗುರುಗಳ ಸಮ್ಮುಖದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದರು.
    ಶ್ರೀ ಡಾ. ಶಿವಕುಮಾರ್ ಮಹಾಸ್ವಾಮೀಜಿಯವರು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಅವರ ಆದರ್ಶಗುಣಗಳನ್ನು ಮೈಗೂಡಿಸಿಕೊಳ್ಳುವ ಜೊತೆಗೆ ಅವರು ತೋರಿಸಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕೆಂದರು.
     ಅರಸೀಕೆರೆ ಯಳನಾಡು ಸಂಸ್ಥಾನ ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ರಾಜದೇಶಿಕೇಂದ್ರಸ್ವಾಮೀಜಿ ಸಮ್ಮುಖದಲ್ಲಿ, ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠ, ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದ ಸಮಾರಂಭದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರು ಮಠ, ಯಡಿಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
    ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಬಿ.ವೈ ಅರುಣಾದೇವಿ, ಮಾಜಿ ಶಾಸಕ ಎಚ್.ಎಂ ಚಂದ್ರಶೇಖರಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್ ಷಡಾಕ್ಷರಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  
     ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉಪನ್ಯಾಸ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಬಿ.ಎಸ್ ಮಹೇಶ್‌ಕುಮಾರ್ ಸ್ವಾಗತಿಸಿದರು.
   ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕ ಮತ್ತು ಯುವ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Wednesday, March 31, 2021

ಸರ್ಕಾರಿ ಅಧಿಕಾರಿಗಳು, ನೌಕರರು ತಮ್ಮದಲ್ಲದ ತಪ್ಪುಗಳಿಗೆ ಸಿಕ್ಕಿಹಾಕಿಕೊಳ್ಳದಿರಿ : ದೂದ್‌ಪೀರ್

ಭದ್ರಾವತಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್‌ರವರು ಪದೋನ್ನತ್ತಿಹೊಂದಿ ಉಡುಪಿಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಬುಧವಾರ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.
   ಭದ್ರಾವತಿ, ಮಾ. ೩೧: ಸರ್ಕಾರಿ ಅಧಿಕಾರಿಗಳು, ನೌಕರರು ಬಹಳ ಎಚ್ಚರಿಕೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ತಮ್ಮದಲ್ಲದ ತಪ್ಪುಗಳಿಗೆ ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿಗೆ ಎಡೆ ಮಾಡಿಕೊಡಬಾರದು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೂದ್‌ಪೀರ್ ಹೇಳಿದರು.
   ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಬಹಳಷ್ಟು ಸಮಯದಲ್ಲಿ ಅಧಿಕಾರಿಗಳು ಮತ್ತು ನೌಕರರು ಬಲಿಪಶುಗಳಾಗುತ್ತಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಇಂತಹ ಸಂದರ್ಭದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕೆಂದರು.
    ಕನ್ನಡದಲ್ಲಿ ಸ್ನಾತಕೋತ್ತರ ಪರೀಕ್ಷೆ ಬರೆದು ಉತ್ತೀರ್ಣಗೊಂಡ ನಂತರ ಹಲವಾರು ಬಾರಿ ಕೆಪಿಎಸ್‌ಸಿ ಪರೀಕ್ಷೆ ಎದುರಿಸಿ ಕೊನೆಯ ಹಂತದಲ್ಲಿ ಆಯ್ಕೆಯಾದಾಗ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹುದ್ದೆ ಲಭಿಸಿತು. ಆ ನಂತರ ಈ ಇಲಾಖೆಯ ಕಾರ್ಯ ಚಟುವಟಿಕೆಗಳು ತಿಳಿಯಿತು. ಅಲ್ಲಿಯವರೆಗೂ ಇಲಾಖೆ ಕುರಿತು ಯಾವುದೇ ರೀತಿ ಮಾಹಿತಿ ಇರಲ್ಲಿಲ್ಲ ಎಂದು ಕರ್ತವ್ಯಕ್ಕೆ ಸೇರ್ಪಡೆಗೊಳ್ಳುವ ಮೊದಲಿನ ಘಟನೆಗಳನ್ನು ನೆನಪು ಮಾಡಿಕೊಂಡರು.  
    ಸಮಾಜ ಕಲ್ಯಾಣ ಇಲಾಖೆ ಇತರೆ ಇಲಾಖೆಗಳಿಗಿಂತ ವಿಭಿನ್ನವಾಗಿದೆ. ಈ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಅನಾಹುತಗಳು ತಪ್ಪಿದ್ದಲ್ಲ. ಇಲ್ಲಿ ಕರ್ತವ್ಯ ನಿರ್ವಹಿಸುವ ಮೊದಲು ಭದ್ರಾವತಿ ಕುರಿತು ತಪ್ಪು ಅಭಿಪ್ರಾಯಗಳು ಕೇಳಿ ಬರುತ್ತಿದ್ದವು. ಆದರೆ ವಾಸ್ತವ್ಯವಾಗಿ ಇಲ್ಲಿನ ಜನರು ಬಹಳಷ್ಟು ಮಾನವೀಯತೆ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಕಳೆದ ೫ ವರ್ಷಗಳಿಂದ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು ಎಂದರು.
   ವ್ಯವಸ್ಥಾಪಕ ಎನ್. ಕೃಷ್ಣಪ್ಪ ಮಾತನಾಡಿ, ದೂದ್‌ಪೀರ್‌ರವರು ಓರ್ವ ಪ್ರಾಮಾಣಿಕತೆ, ಮಾನವೀಯತೆಯುಳ್ಳ ಅಧಿಕಾರಿಯಾಗಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಎಲ್ಲರೂ ಪ್ರೀತಿಯಿಂದ, ಗೌರವದಿಂದ ಕಾಣುವಂತಾಗಿದೆ. ಅವರು ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ನಂತರ ನಿರೀಕ್ಷಿಸಲಾರದಷ್ಟು ಮಟ್ಟಿಕ್ಕೆ ಇಲಾಖೆಯ ಚಿತ್ರಣವೇ ಬದಲಾಗಿದೆ. ಸ್ವಂತ ಕಟ್ಟಡದೊಂದಿಗೆ ಕಛೇರಿ, ಅಂಬೇಡ್ಕರ್ ಭವನ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಕಾರ್ಯಗಳು ನಡೆದಿವೆ. ಈ ಹಿನ್ನಲೆಯಲ್ಲಿ ಅವರು ಶಾಶ್ವತವಾಗಿ ಉಳಿದುಕೊಂಡಿದ್ದಾರೆ. ಅವರು ಪದೋನ್ನತ್ತಿ ಹೊಂದಿರುವುದು ಸಂತೋಷದ ವಿಷಯವಾಗಿದೆ. ಇನ್ನೂ ಉನ್ನತ ಸ್ಥಾನಕ್ಕೇರುವ ಮೂಲಕ ಉತ್ತಮ ಭವಿಷ್ಯ ಹೊಂದಲಿ ಎಂದು ಹಾರೈಸಿದರು.  
   ಪ್ರಮುಖರಾದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಡಿಎಸ್‌ಎಸ್ ತಾಲೂಕು ಸಂಚಾಲಕ ರಂಗನಾಥ್, ಶಿಕ್ಷಕರಾದ ಜುಂಜ್ಯಾನಾಯ್ಕ, ಸಿ. ಜಯಪ್ಪ ಹಾಗು ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕೋಮಾರನಹಳ್ಳಿ, ವೀರಾಪುರ ಗ್ರಾಮ ಪಂಚಾಯಿತಿ ಫಲಿತಾಂಶ ಪ್ರಕಟ

ಭದ್ರಾವತಿ, ಮಾ. ೩೧: ತಾಲೂಕಿನ ಕೋಮಾರನಹಳ್ಳಿ ಮತ್ತು ವೀರಾಪುರ ಎರಡು ಗ್ರಾಮ ಪಂಚಾಯಿತಿಗಳ ಚುನಾವಣೆಯ ಮತ ಎಣಿಕೆ ಬುಧವಾರ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಹೊರ ಬಿದ್ದಿದೆ.
ಕೋಮಾರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೩ ಸ್ವಾನಗಳಿದ್ದು, ಮಂಜುನಾಥನಾಯ್ಕ, ಕೆ. ರವಿಕುಮಾರ್, ದೇವಮ್ಮ, ಸಿ.ಎಲ್ ನೇತ್ರಾವತಿ, ಎ. ಷಣ್ಮುಗ, ಸರಸ್ವತಿ ವಿಜಯಕುಮಾರ್, ರುದ್ರಮ್ಮ ಕೃಷ್ಣಮೂರ್ತಿ, ಸುನೀತ ಸತೀಶ್, ಆರ್. ಮಾಧುರಾವ್, ನಂದಿನಿಬಾಯಿ, ಮಂಜುಳ ಮತ್ತು ಆರ್. ಮಂಜುನಾಥ್ ಆಯ್ಕೆಯಾಗಿದ್ದಾರೆ.
ವೀರಾಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು ೧೧ ಸ್ಥಾನಗಳಿದ್ದು, ರಾಧ ಮಂಗಳಮ್ಮ, ಮಂಜಮ್ಮ ಜಡಿಯಪ್ಪ, ಜಬೀವುಲ್ಲಾ, ರೇಣುಕಮ್ಮ ರಾಜು, ಲೋಲಾಕ್ಷಿ, ಪಿ. ರಂಗಸ್ವಾಮಿ, ಎಂ. ವೆಂಕಟೇಶ್, ಎಂ.ಎಲ್ ಯಶೋಧರಯ್ಯ, ಜ್ಯೋತಿ, ಅಸಿಯಾಬಾನು ಮತ್ತು ಸೈಯದ್ ಜಬೀವುಲ್ಲಾ ಆಯ್ಕೆಯಾಗಿದ್ದಾರೆಂದು ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ತಿಳಿಸಿದ್ದಾರೆ.  

ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಲಿ : ಪದ್ಮಾವತಿ ಸಂಜೀವ್‌ಕುಮಾರ್

ಇಲ್ಲಿಗೆ ಸಮೀಪದ ಶ್ರೀಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಭದ್ರಾವತಿ ತಾಲೂಕು ಶಾಖೆಯ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ, ಪೈಂಟ್‌ರ್ ಸಂಘದ ಉದ್ಘಾಟನೆ, ಕೋವಿಡ್-೧೯ ಕುರಿತು ಆರೋಗ್ಯ ಜಾಗೃತಿ ಮತ್ತು ಮಹಿಳಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ತರೀಕೆರೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್ ಉದ್ಘಾಟಿಸಿದರು.
    ಭದ್ರವತಿ, ಮಾ. ೩೧: ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ಸಮರ್ಪಕವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಸಂಘಟನೆ ಹೆಚ್ಚು ಕ್ರಿಯಾಶೀಲವಾಗಬೇಕೆಂದು ತರೀಕೆರೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್ ಹೇಳಿದರು.
   ಅವರು ಬುಧವಾರ ಇಲ್ಲಿಗೆ ಸಮೀಪದ ಶ್ರೀಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಭದ್ರಾವತಿ ತಾಲೂಕು ಶಾಖೆಯ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ, ಪೈಂಟ್‌ರ್ ಸಂಘದ ಉದ್ಘಾಟನೆ, ಕೋವಿಡ್-೧೯ ಕುರಿತು ಆರೋಗ್ಯ ಜಾಗೃತಿ ಮತ್ತು ಮಹಿಳಾ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಕಟ್ಟಡ ಕಾರ್ಮಿಕರು ಇಂದಿಗೂ ಬಡತನ ರೇಖೆಯಿಂದ ಹೊರಬಂದಿಲ್ಲ. ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರ ಕಟ್ಟಡ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ರೂಪಿಸಿದೆ. ಆದರೂ ಸಹ ಯೋಜನೆಗಳು ಸಮರ್ಪಕವಾಗಿ ತಲುಪುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
    ವಿಶೇಷವಾಗಿ ಮಹಿಳಾ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಮಹಿಳೆಯರು ಸಹ ಸಂಘಟನೆಯಲ್ಲಿ ತೊಡಗಿಸಿಕೊಂಡು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
    ಶ್ರೀ ಕ್ಷೇತ್ರದ ಮುರುಗೇಶ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳನ್ನು ವಿವರಿಸಿದರು.
    ಜಿಲ್ಲಾಧ್ಯಕ್ಷ ಸುಬ್ರಮಣಿ, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸಂಜಯ್‌ಕುಮಾರ್, ತಾಲೂಕು ಗೌರವಾಧ್ಯಕ್ಷ ಅಂತೋಣಿ ಕ್ರೂಸ್, ತಾಲೂಕು ಅಧ್ಯಕ್ಷ ನಾಗರಾಜ್, ಪೈಂಟರ್ ಸಂಘದ ಅಧ್ಯಕ್ಷ ಶಿವಣ್ಣ, ಮಹಿಳಾ ಘಟಕದ ಪದಾಧಿಕಾರಿಗಳಾದ ವಿಜಿಯಮ್ಮ, ಇಂಚರ, ಪ್ರಮುಖರಾದ ನಾರಾಯಣಸ್ವಾಮಿ, ಚಂದ್ರಶೇಖರ್, ಶಿವಣ್ಣ, ಶ್ರೀನಿವಾಸ್, ಷಣ್ಮುಖಂ, ಸಂಪತ್, ಅಭಿಲಾಶ್, ಮನೋಹರ್, ಸುಬ್ಬು, ಮಂಜುನಾಥ್, ರಘು, ಮಾರಸ್ವಾಮಿ, ಆರ್‍ಮುಗಂ, ಮಣಿಕಂಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, March 30, 2021

ಸಾಧನಾ ಮಹಿಳಾ ವೇದಿಕೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಭದ್ರಾವತಿ ತಾಲೂಕಿನ ಶಂಕರಘಟ್ಟ ಸಾಧನಾ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಿರಿಯ ಮಹಿಳೆ ಶಾಂತಮ್ಮ ಉದ್ಘಾಟಿಸಿದರು.
   ಭದ್ರಾವತಿ, ಮಾ. ೩೦: ತಾಲೂಕಿನ ಶಂಕರಘಟ್ಟ ಸಾಧನಾ ಮಹಿಳಾ ವೇದಿಕೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಕ್ರೀಡಾಕೂಟ ನಡೆಸಲಾಯಿತು.
ವೇದಿಕೆ ಅಧ್ಯಕ್ಷೆ ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮಹಿಳೆ ಶಾಂತಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಜಯಕರ್ನಾಟಕ ಜಿಲ್ಲಾ ಉಪಾಧ್ಯಕ್ಷ ತ್ಯಾಗರಾಜ್, ಶಂಕರಘಟ್ಟ ಘಟಕದ ಅಧ್ಯಕ್ಷ ಡಿ.ಟಿ ಶಶಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಗ್ರಾಮ ಪಂಚಾಯಿತಿಗಳಿಗೆ ನೂತನವಾಗಿ ಆಯ್ಕೆಯಾದ ಮಹಿಳಾ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮೀನಾ ಪ್ರಾರ್ಥಿಸಿದರು. ಹಾಲಮ್ಮ ಸ್ವಾಗತಿಸಿ ಎಸ್. ಗುಣ ವಾರ್ಷಿಕ ವರದಿ ಮಂಡಿಸಿದರು. ಅಶ್ವಿನಿ ನಿರೂಪಿಸಿ, ಆಶಾ ವಂದಿಸಿದರು.