Monday, May 17, 2021

೬೨ಕ್ಕೆ ಇಳಿಕೆಯಾದ ಸೋಂಕಿತರ ಸಂಖ್ಯೆ


    
ಭದ್ರಾವತಿ, ಮೇ. ೧೭: ತಾಲೂಕಿನಲ್ಲಿ ಕೆಲವು ದಿನಗಳಿಂದ ೧೦೦ ರಿಂದ ೩೦೦ರ ಗಡಿವರೆಗೆ ತಲುಪಿದ್ದ ಕೊರೋನಾ ಸೋಂಕಿತರ ಸಂಖ್ಯೆ ಸೋಮವಾರ ೬೨ಕ್ಕೆ ಬಂದು ತಲುಪಿದೆ.
   ಒಟ್ಟು ೫೬೮ ಮಂದಿ ಮಾದರಿ ಸಂಗ್ರಹಿಸಲಾಗಿದ್ದು, ಪೈಕಿ ೬೨ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ೧೨೦ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ೩ ಮಂದಿ ಬಲಿಯಾಗಿದ್ದಾರೆ. ಇದುವರೆಗೂ ಮೃತಪಟ್ಟವರ ಸಂಖ್ಯೆ ೭೧ಕ್ಕೆ ಏರಿಕೆಯಾಗಿದ್ದು, ಒಟ್ಟು ೩೫೪ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಕಾರ್ಯದಲ್ಲಿ ಬಜರಂಗದಳ ಕಾರ್ಯಕರ್ತರು

ಬಡ ಕುಟುಂಬಗಳಿಗೆ ಆತ್ಮಸ್ಥೈರ್ಯ, ಹಿಂದೂ ರುದ್ರಭೂಮಿಗೆ ಉಚಿತ ಸೌದೆ


ಭದ್ರಾವತಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕಾರ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪಾಲ್ಗೊಂಡಿರುವುದು.
      ಭದ್ರಾವತಿ, ಮೇ. ೧೭: ಹಿಂದೂ ಧರ್ಮ, ಸಂಸ್ಕೃತಿ ರಕ್ಷಣೆ ಜೊತೆಗೆ ವಿಭಿನ್ನ ಸೇವಾ ಕಾರ್ಯಗಳನ್ನು ಮೈಗೂಡಿಸಿಕೊಂಡಿರುವ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಇದೀಗ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
     ಕೊರೋನಾ ಸೋಂಕಿನ ೨ನೇ ಅಲೆ ಪರಿಣಾಮದಿಂದಾಗಿ ಜನರ ಬದುಕು ತೀರ ಸಂಕಷ್ಟಕ್ಕೆ ಒಳಗಾಗಿದೆ. ಪ್ರತಿದಿನ ಸಾವು ಬದುಕಿನ ನಡುವೆ ಹೋರಾಟ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ನಡುವೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ. ವಿಶ್ವ ಹಿಂದೂ ಪರಿಷತ್ ಬಜರಂಗ ಇದೀಗ ವಿಶಿಷ್ಟ ರೀತಿಯ ಸೇವಾ ಕಾರ್ಯಕ್ಕೆ ಮುಂದಾಗಿದೆ.
    ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ಸಹ ಬಜರಂಗದಳ ಕಾರ್ಯಕರ್ತರು ಯಾವುದನ್ನು ಲೆಕ್ಕಿಸದೆ ಹಲವು ದಿನಗಳಿಂದ ಸೋಂಕಿತರ ಪರವಾದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಂಕಿತರ ಬಡ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬುವ ಜೊತೆಗೆ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಕಾರ್ಯಗಳಲ್ಲೂ ಪಾಲ್ಗೊಳ್ಳುತ್ತಿದ್ದಾರೆ.
    ಬಜರಂಗದಳ ಪ್ರಮುಖರಾದ ವಡಿವೇಲು, ಸುನಿಲ್‌ಕುಮಾರ್, ಕೃಷ್ಣ, ಶಿವಶಂಕರ್, ಅರಳಿಹಳ್ಳಿ ದೇವರಾಜ್, ಕಿರಣ್, ರಂಗನಾಥ್, ಅಜಿತ್, ಶ್ರೀಕಾಂತ್, ಸವಾಯಿ ಸಿಂಗ್, ಮಣಿಕಂಠ ಮತ್ತು ರಮೇಶ್ ಸೇರಿದಂತೆ ಸುಮಾರು ೧೦ ಮಂದಿ ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದುವರೆಗೂ ಸುಮಾರು ೮ ಬಡ ಕುಟುಂಬಗಳ ಅಂತ್ಯಸಂಸ್ಕಾರ ಕಾರ್ಯಕ್ಕೆ ನೆರವಾಗಿದ್ದಾರೆ.
       ಹಿಂದೂ ರುದ್ರಭೂಮಿಗೆ ಸೌದೆ ವಿತರಣೆ:
    ಬಜರಂಗದಳ ಕಾರ್ಯಕರ್ತರು ಬಡ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಸೌದೆಯನ್ನು ಸಹ ಒದಗಿಸಿಕೊಡುತ್ತಿದ್ದಾರೆ.
    ಇದುವರೆಗೂ ಸುಮಾರು ೧೦ ಟನ್ ಸೌದೆಯನ್ನು ದಾನಿಗಳಿಂದ ಸಂಗ್ರಹಿಸಿ ಹಿಂದೂ ಭೂಮಿಗೆ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌದೆ ಸಂಗ್ರಹಿಸಿ ಕೊಡುವ ಗುರಿ ಹೊಂದಿದ್ದಾರೆ. ಒಟ್ಟಾರೆ ವಿಶಿಷ್ಟ ಕಾರ್ಯದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.



ಭದ್ರಾವತಿ ಬಜರಂಗದಳ ಕಾರ್ಯಕರ್ತರು ಬಡ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಅಂತ್ಯಸಂಸ್ಕಾರಕ್ಕೆ ಅಗತ್ಯವಿರುವ ಸೌದೆಯನ್ನು ಒದಗಿಸಿಕೊಡುತ್ತಿದ್ದಾರೆ.


ನಿರುದ್ಯೋಗಿಗಳಿಗೆ ಮಾದರಿಯಾದ ನೂತನ ನಗರಸಭಾ ಸದಸ್ಯ ಬಸವರಾಜ್

ಬದುಕಿನ ಕೈ ಹಿಡಿದ ಕುರಿ ಸಾಕಾಣಿಕೆ, ನರ್ಸರಿ ಫಾರಂ


ಭದ್ರಾವತಿ ನಗರಸಭೆ ೧೯ನೇ ವಾರ್ಡಿನ ನಗರಸಭಾ ಸದಸ್ಯ ಬಸವರಾಜ್ ಬಿ ಆನೇಕೊಪ್ಪ ತೋಟದಲ್ಲಿ ತೆಂಗಿನ ಕಾಯಿ ಕೀಳುತ್ತಿರುವುದು.

       * ಅನಂತಕುಮಾರ್
      ಭದ್ರಾವತಿ, ಮೇ. ೧೩: ನಗರದ ಎರಡು ಕಣ್ಣುಗಳಾದ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ರೋಗಗ್ರಸ್ತ ಕಾರ್ಖಾನೆಗಳಾಗಿ ಉದ್ಯೋಗವಿಲ್ಲದೆ ಕಾರ್ಮಿಕರು ಬೀದಿ ಪಾಲಾಗಿರುವ ಸಂದರ್ಭದಲ್ಲಿ ಇಲ್ಲಿನ ಯುವ ಸಮುದಾಯಕ್ಕೆ ನೂತನ ನಗರಸಭಾ ಸದಸ್ಯ ಬಸವರಾಜ್ ಬಿ ಆನೇಕೊಪ್ಪ ಮಾದರಿಯಾಗಿದ್ದಾರೆ.
       ಒಂದು ಕಾಲದಲ್ಲಿ ಎಂಪಿಎಂ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕರ್ತವ್ಯ  ನಿರ್ವಹಿಸುತ್ತಿದ್ದ ಬಸವರಾಜ್ ಕಾರ್ಖಾನೆ ಸ್ಥಗಿತಗೊಂಡ ನಂತರ ಊರು ಬಿಡದೆ ಛಲಗಾರರಾಗಿ ಹೈನುಗಾರಿಕೆಯೊಂದಿಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.  ಮೂಲತಃ ವಾಲ್ಮೀಕಿನಾಯಕ ಸಮುದಾಯಕ್ಕೆ ಸೇರಿರುವ ಬಸವರಾಜ್ ಕುಟುಂಬದೊಂದಿಗೆ ಆನೇಕೊಪ್ಪದಲ್ಲಿಯೇ ನೆಲೆಸಿದ್ದು, ಇವರ ಶ್ರಮದ ಬದುಕು ಜೀವನದ ದಿಕ್ಕನ್ನು ಬದಲಿಸಿದೆ.
     ಇವರು ಎಂಪಿಎಂ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದ ಸಂದರ್ಭದಲ್ಲಿ ತಿಂಗಳ ಸಂಬಳಕ್ಕಾಗಿ ಎದುರು ನೋಡುತ್ತಿದ್ದರು. ಕಾರ್ಖಾನೆ ಸ್ಥಗಿತಗೊಂಡ ನಂತರ ಕುರಿ ಸಾಕಾಣಿಕೆ ತರಬೇತಿ ಪಡೆದು ಸರ್ಕಾರದ ಆರ್ಥಿಕ ನೆರವಿನೊಂದಿಗೆ ತಮ್ಮ ತೋಟದಲ್ಲಿಯೇ ಕುರಿ ಶೆಡ್ ನಿರ್ಮಾಣ ಮಾಡಿ ಕುರಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಇವರ ಹೆಚ್ಚಿನ ಪರಿಶ್ರಮದ ಫಲವಾಗಿ ಪ್ರಸ್ತುತ ಈ ಹೈನುಗಾರಿಕೆಯೇ ಇವರ ಬದುಕಿನ ಕೈ ಹಿಡಿದಿದೆ. ಇವರ ಬಳಿ ವಿವಿಧ ಜಾತಿಯ ತಳಿಗಳಿದ್ದು, ಹೆಚ್ಚಿನ ಆದಾಯ ತಂದು ಕೊಡುತ್ತಿವೆ.
     ಕೇವಲ ಕುರಿ ಸಾಗಾಣಿಕೆ ಮಾತ್ರವಲ್ಲದೆ ನರ್ಸರಿ ಫಾರಂ ಸಹ ನಿರ್ಮಿಸಿರುವ ಇವರು ಅಡಕೆ, ತೆಂಗು, ನಿಂಬೆ ಸೇರಿದಂತೆ ವಿವಿಧ ಸಸಿಗಳನ್ನು ಬೆಳೆಸಿ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ತೋಟದಲ್ಲಿರುವ ಅಡಕೆ, ತೆಂಗು ಬೆಳೆ ಸಹ ಇವರಿಗೆ ಆದಾಯ ತಂದು ಕೊಡುತ್ತಿದೆ.
      ಕೇವಲ ತಾನು ಮಾತ್ರ ಬದುಕು ಕಟ್ಟಿಕೊಳ್ಳದೆ ಇತರರಿಗೂ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಇವರು ಭರವಸೆ ಮೂಡಿಸುತ್ತಿದ್ದಾರೆ. ಇವರ ಹೈನುಗಾರಿಕೆಯಿಂದ ಬೆರಗಾಗಿರುವ ಬಹಳಷ್ಟು ಮಂದಿ ಇವರ ಬಳಿ ಬರುತ್ತಿದ್ದು, ಕುರಿ ಸಾಗಾಣಿಕೆ ಹಾಗು ನರ್ಸರಿ ಫಾರಂ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಬಹಳಷ್ಟು ಮಂದಿ ಇವರ ದಾರಿಯಲ್ಲಿಯೇ ಸಾಗುವ  ಮೂಲಕ ಬದುಕು ರೂಪಿಸಿಕೊಂಡಿದ್ದಾರೆ.


ಭದ್ರಾವತಿ ನಗರಸಭೆ ೧೯ನೇ ವಾರ್ಡಿನ ನಗರಸಭಾ ಸದಸ್ಯ ಬಸವರಾಜ್ ಬಿ. ಆನೇಕೊಪ್ಪ ಅವರು ಕುರಿ ಶೆಡ್ ನಿರ್ಮಿಸಿರುವುದು.
         ವಾರ್ಡ್ ನಂ.೧೯ರಿಂದ ನಗರಸಭೆಗೆ ಆಯ್ಕೆ:
   ಬಸವರಾಜ್ ಇತ್ತೀಚೆಗೆ ನಗರಸಭೆಗೆ ನಡೆದ ಚುನಾವಣೆಯಲ್ಲಿ ಬಹುತೇಕ ಎಂಪಿಎಂ ವಸತಿ ಗೃಹಗಳನ್ನು ಹಾಗು ಆನೇಕೊಪ್ಪ ಕೊಳಚೆಪ್ರದೇಶ ವ್ಯಾಪ್ತಿಯನ್ನು ಹೊಂದಿರುವ ವಾರ್ಡ್ ನಂ.೧೯ರಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ  ಆಯ್ಕೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
     ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡ ನಂತರ ಬಹಳಷ್ಟು ಕುಟುಂಬಗಳು ಊರು ತೊರೆದಿದ್ದು, ಶಿವಮೊಗ್ಗ, ತರೀಕೆರೆ ಸೇರಿದಂತೆ ಇತರೆಡೆ ನೆಲೆ ನಿಂತಿದ್ದಾರೆ. ಅತಿ ಕಡಿಮೆ ಮತದಾರರನ್ನು ಹೊಂದಿರುವ ವಾರ್ಡ್ ಇದಾಗಿದ್ದು,  ಪ್ರಸ್ತುತ ನೆಲೆ ನಿಂತಿರುವ ಕುಟುಂಬಗಳಿಗೆ ಮೂಲ ಸೌಲಭ್ಯಗಳನ್ನು ಸಮಪರ್ಕವಾಗಿ ಕಲ್ಪಿಸಿಕೊಡುವ ಜೊತೆಗೆ ವಾರ್ಡ್ ಸರ್ವತೋಮುಖ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇವರು ಗಮನ ಹರಿಸಬೇಕಾಗಿದೆ.
     ಬಸವರಾಜ್ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರು ಹಾಗು ಕರ್ನಾಟಕ ರಾಜ್ಯ ಉಣ್ಣೆ ನಿಗಮದ ನಿರ್ದೇಶಕರೂ ಸಹ ಆಗಿದ್ದು, ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಒಟ್ಟಾರೆ ಇಂದಿನ ಯುವ ಸಮುದಾಯಕ್ಕೆ ಈ ನೂತನ ನಗರಸಭಾ ಸದಸ್ಯ ಮಾದರಿ ಎಂದರೆ ತಪ್ಪಾಗಲಾರದು.

Sunday, May 16, 2021

೨೦೨ ಮಂದಿಗೆ ಸೋಂಕು, ೮ ಬಲಿ

ಭದ್ರಾವತಿ, ಮೇ. ೧೬:  ಕೊರೋನಾ ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಮಧ್ಯೆ ತಾಲೂಕಿನಲ್ಲಿ ತಪಾಸಣೆ ಕಡಿಮೆಗೊಳಿಸಿರುವ ಸಾಧ್ಯತೆಗಳು ಕಂಡು ಬರುತ್ತಿದ್ದು, ಭಾನುವಾರ ಕೇವಲ ೯೪ ಮಂದಿಯ ಮಾದರಿ ಸಂಗ್ರಹಿಸಲಾಗಿದೆ. ಈ ನಡುವೆಯೂ ೨೦೨ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
      ಒಟ್ಟು ೯೮ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ೮ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೂ ೬೮ ಮಂದಿ ಮೃತಪಟ್ಟಿದ್ದು, ೨೦೮ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ೨೫ ಕಂಟೈನ್‌ಮೆಂಟ್ ಜೋನ್‌ಗಳಿದ್ದು, ಈ ಪೈಕಿ ೨ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.
      ಕೋವಿಶೀಲ್ಡ್ ಲಸಿಕೆ ಅಂತರ ಹೆಚ್ಚಳ :
    ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ, ೧೮ ರಿಂದ ೪೪ ಹಾಗು ೪೫ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾಕರಣ ನಡೆಯುತ್ತಿದ್ದು, ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದ ನಂತರ ೬ ರಿಂದ ೮ ವಾರಗಳ ಅಂತರದಲ್ಲಿ ೨ನೇ ಡೋಸ್ ಪಡೆಯಲು ಈ ಹಿಂದೆ ಶಿಫಾರಸ್ಸು ಮಾಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಲಸಿಕಾಕರಣದ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು(ಎನ್‌ಟಿಎಜಿಐ) ಮತ್ತು ಲಸಿಕಾಕರಣದ ಕುರಿತು ರಾಷ್ಟ್ರೀಯ ಪರಿಣಿತಿ ಗುಂಪು(ಎನ್‌ಇಜಿವಿಎಸಿ)ಗಳ ಶಿಫಾರಸ್ಸಿನ ಆಧಾರದ ಮೇಲೆ  ಲಸಿಕೆ ಪಡೆಯುವ ಅಂತರವನ್ನು ೧೨ ರಿಂದ ೧೬ವಾರಗಳಿಗೆ ಪರಿಷ್ಕರಣೆ ನಡೆಸಿದೆ. ಈ ಹಿನ್ನಲೆಯಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಪಡೆದ ನಂತರ ೧೨ ವಾರಗಳು ಪೂರ್ಣಗೊಂಡ ನಂತರವೇ ೨ನೇ ಡೋಸ್ ನೀಡಲಾಗುವುದು. ಈ ಪರಿಷ್ಕರಣೆ ಕೋವ್ಯಾಕ್ಸಿನ್ ಲಸಿಕೆಗೆ ಅನ್ವಯವಾಗುವುದಿಲ್ಲ. ಸಾರ್ವಜನಿಕರು ಈ ಬಗ್ಗೆ ಮಾಹಿತಿ ಅರಿತು ಕೊಂಡು ಲಸಿಕೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಕೋರಿದ್ದಾರೆ.  

Saturday, May 15, 2021

ವಿವಿಧ ಬೇಡಿಕೆ ಈಡೇರಿಕೆಗಾಗಿ ಕಟ್ಟಡ ಕಾರ್ಮಿಕರಿಂದ ವಿನೂತನ ಪ್ರತಿಭಟನೆ

ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಆತಂಕದ ನಡೆವೆಯೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಭದ್ರಾವತಿಯಲ್ಲಿ ಶನಿವಾರ ವಿನೂತನ ರೀತಿಯ ಪ್ರತಿಭಟನೆ ಕೈಗೊಳ್ಳುವ ಮೂಲಕ ಗಮನ ಸೆಳೆದರು.
     ಭದ್ರಾವತಿ, ಮೇ. ೧೫: ಕೊರೋನಾ ಸೋಂಕು ೨ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಆತಂಕದ ನಡೆವೆಯೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಶನಿವಾರ ವಿನೂತನ ರೀತಿಯ ಪ್ರತಿಭಟನೆ ಕೈಗೊಳ್ಳುವ ಮೂಲಕ ಗಮನ ಸೆಳೆದರು.
     ಲಾಕ್‌ಡೌನ್ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಕನಿಷ್ಠ ೩ ತಿಂಗಳು ಮಾಸಿಕ ೧೦ ಸಾವಿರ ರು. ಪರಿಹಾರ ನೀಡುವುದು, ಕೊರೋನಾ ಪೀಡಿತ ಕಟ್ಟಡ ಕಾರ್ಮಿಕರಿಗೆ ಹಾಗು ಕುಟುಂಬ ವರ್ಗದವರಿಗೆ ಉಚಿತ ಚಿಕಿತ್ಸೆ ನೀಡುವುದು ಹಾಗು ಕೊರೋನಾ ಸೋಂಕಿನಿಂದ ಮೃತಪಟ್ಟ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ರು. ೧೦ ಲಕ್ಷ ಹಾಗು ನೋಂದಾಯಿತರಲ್ಲದ ಕಾರ್ಮಿಕರಿಗೆ ರು. ೫ ಲಕ್ಷ ಪರಿಹಾರ ನೀಡುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ 'ಮನೆ ಮನೆಗಳಲ್ಲಿ ಪ್ರತಿಭಟನೆ' ಎಂಬ ವಿನೂತನ ಶೈಲಿಯ ಹೋರಾಟದ ಮೂಲಕ ಆಗ್ರಹಿಸಲಾಯಿತು. ರಾಜ್ಯಾದ್ಯಂತ ಈ ವಿನೂತನ ಪ್ರತಿಭಟನೆ ನಡೆದಿದ್ದು, ತಾಲೂಕಿನ ಹಲವೆಡೆ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.
    ನಗರದ ಕೂಲಿಬ್ಲಾಕ್ ಶೆಡ್ ಆಂಜನೇಯ ಅಗ್ರಹಾರದ ಶ್ರೀ ಮಾರಿಯಮ್ಮ ದೇವಸ್ಥಾನದ ಮುಂಭಾಗದಲ್ಲಿರುವ ಕರ್ನಾಟಕ ರಾಜ್ಯ ಕನ್ಸ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಮುಂಭಾಗ ಅಧ್ಯಕ್ಷ ನಾಗರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎಂ.ಪಿ ನಾರಾಯಣಸ್ವಾಮಿ, ತಾಂತ್ರಿಕ ಸಲಹೆಗಾರ ಕೆ.ಪಿ ಮೋಹನ್, ಗೌರವಾಧ್ಯಕ್ಷ ಅಂತೋಣಿ ಕ್ರೂಸ್, ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುಂದರ್ ಬಾಬು, ಜಿಲ್ಲಾ ಉಪಾಧ್ಯಕ್ಷ ಕೆ. ಚಂದ್ರಶೇಖರ್, ತಾಲೂಕು ಪದಾಧಿಕಾರಿಗಳಾದ ಸುಬ್ರಮಣ್ಯ, ಅಭಿಲಾಷ್, ನಾಗೇಂದ್ರರೆಡ್ಡಿ, ಶಿವಕುಮಾರ್, ಮಂಜಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇಂದಿರಾ ಕ್ಯಾಂಟಿನ್ ಉಪಹಾರ, ಊಟ ದುರ್ಬಳಕೆ ಆರೋಪ

ನೂತನ ನಗರಸಭಾ ಸದಸ್ಯರು, ಬಿಜೆಪಿ ಮುಖಂಡರಿಂದ ಕ್ಯಾಂಟಿನ್‌ಗೆ ಮುತ್ತಿಗೆ


ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಉಪಹಾರ, ಊಟ ಯೋಜನೆ ದುರ್ಬಳಕೆಯಾಗುತ್ತಿದೆ ಎಂದು ಆರೋಪಿಸಿ ಭದ್ರಾವತಿಯಲ್ಲಿ ಬಿಜೆಪಿ ಮುಖಂಡರು ಹಾಗು ನೂತನ ನಗರಸಭಾ ಸದಸ್ಯರು ಕ್ಯಾಂಟಿನ್‌ಗೆ ಮುತ್ತಿಗೆ ಹಾಕಿದ ಘಟನೆ ಶನಿವಾರ ನಡೆದಿದೆ.
    ಭದ್ರಾವತಿ, ಮೇ. ೧೫: ರಾಜ್ಯ ಸರ್ಕಾರ ಸೆಮಿ ಲಾಕ್‌ಡೌನ್ ಹಿನ್ನಲೆಯಲ್ಲಿ ನಿರ್ಗತಿಕರು, ಅಸಹಾಯಕರು ಸೇರಿದಂತೆ ಬಡ ವರ್ಗದವರ ಸಂಕಷ್ಟಕ್ಕೆ ಸ್ಪಂದಿಸುವ ಉದ್ದೇಶದಿಂದ ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಉಪಹಾರ ಹಾಗು ಊಟದ ವ್ಯವಸ್ಥೆ ಕೈಗೊಂಡಿದೆ. ಆದರೆ ಈ ಯೋಜನೆ ನಗರದಲ್ಲಿ ದುರ್ಬಳಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
   ನಗರದಲ್ಲಿ ವಾರ್ಡ್ ನಂ.೧೨ರ ಸಂತೆ ಮೈದಾನದಲ್ಲಿ ಹಾಗು ವಾರ್ಡ್ ನಂ.೩ರ ಖಾಸಗಿ ಬಸ್ ನಿಲ್ದಾಣದ ಬಳಿ ಒಟ್ಟು ೨ ಇಂದಿರಾ ಕ್ಯಾಂಟಿನ್‌ಗಳಿದ್ದು, ಸರ್ಕಾರ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟಿನ್‌ಗಳಲ್ಲಿ ಉಚಿತವಾಗಿ ಉಪಹಾರ ಹಾಗು ಊಟ ನೀಡುವಂತೆ ಆದೇಶ ಹೊರಡಿಸಿದ ನಂತರ  ಇಲ್ಲಿ ಸುಮಾರು ಒಂದು ಸಾವಿರ ಜನರಿಗೆ ಅಗತ್ಯವಿರುವಷ್ಟು ಉಪಹಾರ ಹಾಗು ಊಟ ತಯಾರಿಸಲಾಗುತ್ತಿದೆ. ಆದರೆ ನಗರದಲ್ಲಿ ಇಂದಿರಾ ಕ್ಯಾಂಟಿನ್‌ಗೆ ಬರುವವರ ಸಂಖ್ಯೆ ತೀರ ಕಡಿಮೆ ಇದೆ. ಇದರಿಂದಾಗಿ ಸಾಕಷ್ಟು ಉಳಿದುಕೊಳ್ಳಲಿದ್ದು, ಈ ಉಳಿಕೆ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ. ಇದರಿಂದಾಗಿ ದುರ್ಬಳಕೆಯಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
         ಇಂದಿರಾ ಕ್ಯಾಂಟಿನ್‌ಗೆ ಮುತ್ತಿಗೆ :
    ಯೋಜನೆ ದುರ್ಬಳಕೆಯಾಗುತ್ತಿರುವ ಅನುಮಾನಗಳು ವ್ಯಕ್ತವಾಗುತ್ತಿದ್ದಂತೆ ಸ್ಥಳೀಯ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟಿನ್‌ಗೆ ಮುತ್ತಿಗೆ ಹಾಕಲಾಯಿತು. ಈ ಸಂದರ್ಭದಲ್ಲಿ ಉಚಿತವಾಗಿ ವಿತರಿಸಲು ಸಿದ್ದಗೊಳಿಸಲಾಗಿದ್ದ ಉಪಹಾರ ಹಾಗು ಊಟದ ಲೆಕ್ಕಚಾರದಲ್ಲಿ ವ್ಯತ್ಯಾಸಗಳು ಕಂಡು ಬಂದಿದ್ದು, ದುರ್ಬಳಕೆ ನಡೆದಿರುವುದು ತಿಳಿದು ಬಂದಿದೆ.
     ದುರ್ಬಳಕೆ ಹಿಂದೆ ನಗರಸಭೆ ಅಧಿಕಾರಿಗಳು ಶಾಮೀಲಾಗಿದ್ದು, ತಕ್ಷಣ ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಅಲ್ಲದೆ ಗುತ್ತಿಗೆದಾರರು ದುರ್ಬಳಕೆ ತಡೆಯುವಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದು ಎಚ್ಚರಿಸಲಾಯಿತು.
     ಬಿಜೆಪಿ ಪಕ್ಷದ ಪ್ರಮುಖರಾದ ಬಿ.ಕೆ ಶ್ರೀನಾಥ್, ಮಣಿ, ರಾಮನಾಥ ಬರ್ಗೆ, ಅವಿನಾಶ್, ಚನ್ನೇಶ್, ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರಾದ ಪಲ್ಲವಿ ದಿಲೀಪ್, ಸವಿತಾ ಉಮೆಶ್ ಹಾಗು ಪಕ್ಷೇತರ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಮಕೃಷ್ಣೇಗೌಡ ನಿಧನ

ರಾಮಕೃಷ್ಣೇಗೌಡ(ಕ್ಯಾಂಟಿನ್ ಗೌಡ)
      ಭದ್ರಾವತಿ, ಮೇ. ೧೫: ನಗರಸಭೆ ಮಾಜಿ ಸದಸ್ಯ, ಕಂಚಿನಬಾಗಿಲು ಸಮೀಪದ ಹನುಮಂತನಗರದ ನಿವಾಸಿ ರಾಮಕೃಷ್ಣೇಗೌಡ(೬೯) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.
   ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಹೊಂದಿದ್ದರು. ರಾಮಕೃಷ್ಣೇಗೌಡರವರು ಕ್ಯಾಂಟಿನ್ ಗೌಡ ಎಂದು ಚಿರಪರಿಚಿತರಾಗಿದ್ದರು. ಈ ಹಿಂದೆ ಸಮಾಜವಾದಿ ಜನತಾ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಂತರ ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು.
       ಸಮಾಜ ಸೇವೆ:
  ರಾಮಕೃಷ್ಣಗೌಡರವರು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿರದೆ ಹಲವು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ದೀನದಲಿತರು, ನಿರ್ಗತಿಕರು, ಅಸಹಾಯಕರು, ವಿಕಲಚೇತನರು ಸೇರಿದಂತೆ ಬಡ ವರ್ಗದವರಿಗೆ  ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಉಚಿತವಾಗಿ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
     ಸಂತಾಪ:
   ಕಾಂಗ್ರೆಸ್ ಪಕ್ಷದ  ಹಿರಿಯ ಮುಖಂಡ ರಾಮಕೃಷ್ಣೇಗೌಡರವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ ಹಾಗು ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.