Saturday, October 30, 2021

ಕೆಂಚಮ್ಮ ಹೋಬಳಿದಾರ್ ಸಗನಪ್ಪ ನಿಧನ

ಕೆಂಚಮ್ಮ ಹೋಬಳಿದಾರ್ ಸಗನಪ್ಪ
    ಭದ್ರಾವತಿ, ಅ. ೩೦: ಹಳೇನಗರದ ಶ್ರೀ ಹಳದಮ್ಮ ದೇವಿ ರಸ್ತೆಯ ನಿವಾಸಿ, ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಗೋಪಿ ಅವರ ತಾಯಿ ಕೆಂಚಮ್ಮ ಹೋಬಳಿದಾರ್ ಸಗನಪ್ಪ(೭೮) ಶನಿವಾರ ನಿಧನ ಹೊಂದಿದರು.
    ೪ ಜನ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ.
ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ, ತಾಲೂಕು ಕುರುಬರ ಸಂಘದ ಸಹಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಕಾರ್ಪೆಂಟರ್ ನವೀನ್ ನಿಧನ

ನವೀನ್
    ಭದ್ರಾವತಿ, ಅ. ೩೦: ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದಲ್ಲಿರುವ ಎಬಿನೇಜರ್ ವುಡ್ ವರ್ಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಪೆಂಟರ್ ನವೀನ್(೩೨) ನಿಧನ ಹೊಂದಿದರು.
    ಜನ್ನಾಪುರ ಹಾಲಪ್ಪ ಶೆಡ್‌ನಲ್ಲಿ ವಾಸವಿದ್ದ ನವೀನ್, ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗು ತಾಯಿಯನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ನೆರವೇರಿತು. ಮೃತರ ನಿಧನಕ್ಕೆ ಎಬಿನೇಜರ್ ವುಡ್ ವರ್ಕ್ಸ್ ಮಾಲೀಕ ದಾಸ್ ಹಾಗು ಸಹದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.

Friday, October 29, 2021

ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಶಾರದ ಅಪ್ಪಾಜಿ ಸೇರಿದಂತೆ ಹಲವು ಗಣ್ಯರ ಸಂತಾಪ

ಭದ್ರಾವತಿ ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ  ಸಂಗ್ರಹಗಾರರಾದ ಗಣೇಶ್‌ರವರು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ನೋಟು ಸಂಗ್ರಹದ ಮೂಲಕ ವಿಶಿಷ್ಟವಾಗಿ ಸಂತಾಪ ಸೂಚಿಸಿದ್ದಾರೆ.
    ಭದ್ರಾವತಿ, ಅ. ೨೯: ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಸಂತಾಪ ಸೂಚಿಸಿದ್ದಾರೆ.
    ವರನಟ ದಿವಂಗತ ರಾಜ್‌ಕುಮಾರ್‌ರವರ ಪುತ್ರರಾದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ ಅಕಾಲಿಕ ನಿಧನ ನಾಡಿನ ಸಮಸ್ತ ಕನ್ನಡಿಗರ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇವರ ನಿಧನ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಕನ್ನಡ ಸಾರಸ್ವತ ಲೋಕಕ್ಕೂ ತುಂಬಲಾರದ ನಷ್ಟವನ್ನುಂಟು ಮಾಡಿದೆ.
    ಭಗವಂತ ಇವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗು ಅಭಿಮಾನಿಗಳಲ್ಲಿ ಮತ್ತು ಕುಟುಂಬ ವರ್ಗದವರಲ್ಲಿ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುವುದಾಗಿ ಸಂತಾಪ ಸೂಚಿಸಿದ್ದಾರೆ.
    ನೋಟಿನ ಮೂಲಕ ಸಂತಾಪ :
    ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ  ಸಂಗ್ರಹಗಾರರಾದ ಗಣೇಶ್‌ರವರು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ನೋಟು ಸಂಗ್ರಹದ ಮೂಲಕ ವಿಶಿಷ್ಟವಾಗಿ ಸಂತಾಪ ಸೂಚಿಸಿದ್ದಾರೆ.
    ರಾಜಕಾರಣಿಗಳು, ಮಠಾಧೀಶರು, ಚಲನಚಿತ್ರ ನಟರು, ಸಾಹಿತಿಗಳು, ಕವಿ, ಕ್ರೀಡಾಪಟು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಸಭೆ ಸಮಾರಂಭಗಳಲ್ಲಿ ಅವರ ಜನ್ಮದಿನಾಂಕ ಹೊಂದಿರುವ ನೋಟು ಉಡುಗೊರೆಯಾಗಿ ನೀಡುವ ಮೂಲಕ ಶುಭ ಹಾರೈಸುವ ಹಾಗು ನಿಧನರಾದ ಸಂದರ್ಭದಲ್ಲಿ ಮರಣ ದಿನಾಂಕ ಹೊಂದಿರುವ ನೋಟಿನ ಮೂಲಕ ಸಂತಾಪ ಸೂಚಿಸುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದಾರೆ.
    ಎಸ್‌ಎವಿ ವಿದ್ಯಾಸಂಸ್ಥೆಯಲ್ಲಿ ಸಂತಾಪ :
    ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
    ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಶಾಲಾ ಆವರಣದಲ್ಲಿ ಮೌನಾಚರಣೆ ನಡೆಸುವ ಮೂಲಕ ಪುನೀತ್‌ರಾಜ್‌ಕುಮಾರ್‌ರವರ ನಿಧನಕ್ಕೆ ಗೌರವ ಸಲ್ಲಿಸಲಾಯಿತು.
      ಸ್ನೇಹ ಮಿಲನ ಮಹಿಳಾ ಸಂಘ ಸಂತಾಪ :
    ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ನಗರದ ಸ್ನೇಹ ಮಿಲನ ಸಂಘ ಸಂತಾಪ ಸೂಚಿಸಿದೆ.     ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ ಅಕಾಲಿಕ ನಿಧನ ನಾಡಿನ ಸಮಸ್ತ ಕನ್ನಡಿಗರ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಭಗವಂತ ಇವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗು ಅಭಿಮಾನಿಗಳಲ್ಲಿ ಮತ್ತು ಕುಟುಂಬ ವರ್ಗದವರಲ್ಲಿ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುವುದಾಗಿ ಸಂಘದ ಅಧ್ಯಕ್ಷೆ ಕವಿತಾ ಸುರೇಶ್ ಸಂತಾಪ ಸೂಚಿಸಿದ್ದಾರೆ.
      ಜಯಕರ್ನಾಟಕ ಸಂಘಟನೆ ಸಂತಾಪ:
    ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ಜಯಕರ್ನಾಟಕ ಸಂಘಟನೆ ಜಿಲ್ಲಾ ಶಾಖೆ ಸಂತಾಪ ಸೂಚಿಸಿದೆ. ಪುನೀತ್ ರಾಜ್‌ಕುಮಾರ್‌ರವರ ಅಕಾಲಿಕ ನಿಧನ ನಾಡಿನ ಸಮಸ್ತ ಕನ್ನಡಿಗರ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ.   ಭಗವಂತ ಇವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗು ಅಭಿಮಾನಿಗಳಲ್ಲಿ ಮತ್ತು ಕುಟುಂಬ ವರ್ಗದವರಲ್ಲಿ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುವುದಾಗಿ ಜಿಲ್ಲಾಧ್ಯಕ್ಷ ತ್ಯಾಗರಾಜ್ ಸಂತಾಪ ಸೂಚಿಸಿದ್ದಾರೆ.
      ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂತಾಪ:
    ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂತಾಪ ಸೂಚಿಸಿದೆ. ಇವರ ನಿಧನ ಚಿತ್ರರಂಗಕ್ಕೆ ಮಾತ್ರವಲ್ಲದೆ ಕನ್ನಡ ಸಾರಸ್ವತ ಲೋಕಕ್ಕೂ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಪರಿಷತ್ ತಾಲೂಕು ಅಧ್ಯಕ್ಷ, ಜ್ಯೂನಿಯರ್ ವಿಷ್ಣುವರ್ಧನ್ ಅಪೇಕ್ಷ ಮಂಜುನಾಥ್ ಸಂತಾಪ ಸೂಚಿಸಿದ್ದಾರೆ.
       ಅಪರಂಜಿ ಅಭಿನಯ ಶಾಲೆ ಸಂತಾಪ:
    ಕನ್ನಡ ಚಲನಚಿತ್ರ ರಂಗದಲ್ಲಿ ಆಕ್ಷನ್ ಚಿತ್ರಗಳಿಗೆ ಮುನ್ನುಡಿ ಬರೆದಿದ್ದ ಏಕೈಕ ನಟ ಪುನೀತ್ ರಾಜ್‌ಕುಮಾರ್ ನಿಧನ ಮನಸ್ಸಿಗೆ ತುಂಬಲಾರದ ನೋವುಂಟು ಮಾಡಿದೆ.
    ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹಲವು ಆಯಾಮಗಳ ಮೂಲಕ ವಿಶಿಷ್ಟವಾಗಿ, ಮಾದರಿ ಕಲಾವಿದನಾಗಿ ಇಂದಿನ ಯುವ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ನಟ ಪುನೀತ್‌ರಾಜ್‌ಕುಮಾರ್ ಅವರನ್ನು ವೈಯಕ್ತಿಕವಾಗಿ ಎರಡು ಮೂರು ಬಾರಿ ಭೇಟಿಯಾಗಿದ್ದು, ಅವರದು ಪಾದರಸದಂತಹ ವ್ಯಕ್ತಿತ್ವ, ಸಮಾಜ ಮುಖಿ ಗುಣ ಇಂತಹ ವ್ಯಕ್ತಿ ಚಲನಚಿತ್ರ ರಂಗದಲ್ಲಿ ಮತ್ತೊಬ್ಬ ಇಲ್ಲ ಎಂದರೆ ತಪ್ಪಾಗಲಾರದು. ಇವರ ಇವರ ನಿಧನ ಚಿತ್ರರಂಗಕ್ಕೆ ಮಾತ್ರವಲ್ಲದೆ ಕನ್ನಡ ಸಾರಸ್ವತ ಲೋಕಕ್ಕೂ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ರಂಗಕರ್ಮಿ, ಕಿರುತೆರೆ ಚಲನಚಿತ್ರ ಅಪರಂಜಿ ಶಿವರಾಜ್ ಸಂತಾಪ ಸೂಚಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ

ಭದ್ರಾವತಿ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾ ರೈಲ್ವೆ ನಿಲ್ದಾಣದ ಬಳಿ ಇರುವ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನೃಪತುಂಗ ಆಟೋ ನಿಲ್ದಾಣದಲ್ಲಿ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
    ಭದ್ರಾವತಿ, ಅ. ೨೯: ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ.
    ಕನ್ನಡ ಚಿತ್ರರಂಗದಲ್ಲಿ ಚಿಕ್ಕ ವಯಸ್ಸಿನಿಂದಲೇ ಸರಳ, ಸಜ್ಜನಿಕೆಯ ನಟನಾಗಿ ಬೆಳೆಯುವ ಮೂಲಕ ಯುವ ಸಮುದಾಯ, ಮಹಿಳೆಯರು ಹಾಗು ವಯೋವೃದ್ಧರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಕಲಾ ಪ್ರತಿಭೆಗೆ ರಾಷ್ಟ್ರ ಹಾಗು ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇವರ ಅಭಿನಯದ ಅನೇಕ ಚಲನಚಿತ್ರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ.
ಇವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಇವರ ಕುಟುಂಬ ವರ್ಗಕ್ಕೆ, ಇವರ ಅಭಿಮಾನಿ ಬಂಧುಗಳಿಗೆ ಭಗವಂತ ಕರುಣಿಸಲೆಂದು ಪ್ರಾರ್ಥಿಸುವುದಾಗಿ ಸಂತಾಪ ಸೂಚಿಸಿದ್ದಾರೆ.
    ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸಂತಾಪ :
    ನಗರದ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾ ರೈಲ್ವೆ ನಿಲ್ದಾಣದ ಬಳಿ ಇರುವ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನೃಪತುಂಗ ಆಟೋ ನಿಲ್ದಾಣದಲ್ಲಿ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ನಗರಸಭಾ ಸದಸ್ಯ ಜಾರ್ಜ್ ನೇತೃತ್ವದಲ್ಲಿ ಸಂಘದ ಪ್ರಮುಖರು ಹಾಗು ಸ್ಥಳೀಯರು ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಿದರು.


ಹೋರಾಟಗಾರರಿಗೆ ಜನರ ಬಗ್ಗೆ ಹೆಚ್ಚಿನ ಕಾಳಜಿ : ಎಸ್. ಉಮಾ

    ಭದ್ರಾವತಿ, ಅ. ೨೯: ಹೋರಾಟದ ಮೂಲಕ ಅಧಿಕಾರಕ್ಕೆ ಬಂದವರಿಗೆ ಜನರ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆ. ಅಲ್ಲದೆ ಜನರ ಸಮಸ್ಯೆಗಳಿಗೆ ಪೂರಕ ಸ್ಪಂದಿಸುತ್ತಾರೆ ಎಂದು ಕರ್ನಾಟಕ ರಾಜ್ಯ ದಲಿತ ನೌಕರರ ಒಕ್ಕೂಟದ ತಾಲೂಕು ಅಧ್ಯಕ್ಷೆ ಎಸ್. ಉಮಾ ಹೇಳಿದರು.
    ಅವರು ನಗರಸಭೆ ನೂತನ ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಹೊಸಮನೆ ಶ್ರೀ ಕೃಷ್ಣ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಮನೋಭಾವನೆ ಹೋರಾಟದಿಂದ ಮಾತ್ರ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಚನ್ನಪ್ಪ ಅವರು ವಿದ್ಯಾರ್ಥಿ ದೆಸೆಯಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆದರ್ಶಗಳನ್ನು ಮೈಗೂಡಿಸಿಕೊಂಡು ಹೋರಾಟದಿಂದ ರಾಜಕೀಯವಾಗಿ ಮೇಲೆ ಬಂದವರು. ಪ್ರಸ್ತುತ ನಗರಸಭೆ ಉಪಾಧ್ಯಕ್ಷರಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಉತ್ತಮ ಸೇವೆ ಸಲ್ಲಿಸುವ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹುದ್ದೆ ಲಭಿಸುವಂತಾಗಲಿ ಎಂದರು.
    ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ವಿದ್ಯಾರ್ಥಿ ದೆಸೆಯಿಂದ ಸಂಘಟನೆಯಲ್ಲಿ ಬೆಳೆದು ಬಂದು ರಾಜಕೀಯವಾಗಿ ಹಲವು ಸೋಲು ಗೆಲುವುಗಳನ್ನು ಕಂಡಿದ್ದೇನೆ.  ಸಮಾಜದ ಎಲ್ಲರ ಸಹಕಾರದಿಂದ ಪ್ರಸ್ತುತ ನಗರಸಭೆ ಉಪಾಧ್ಯಕ್ಷನಾಗಿರುವುದು ಹೆಮ್ಮೆಯ ವಿಚಾರವಾಗಿದ್ದು, ನನ್ನ ಅಧಿಕಾರದ ವ್ಯಾಪ್ತಿಯಲ್ಲಿ ಮೊದಲ ಆದ್ಯತೆಯಾಗಿ ಸಮಾಜದಲ್ಲಿ ಹಿಂದುಳಿದವರು, ಶೋಷಿತರು, ದಲಿತರ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದರು.
    ಮೆಸ್ಕಾಂ ನಿವೃತ್ತ ಇಂಜಿನಿಯರ್ ಸಿದ್ದರಾಜು, ಹಿರಿಯ ಸಮಾಜ ಸೇವಕಿ ಧಮಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಹೊಸಮನೆ ಭಾಗದ ಛಲವಾದಿ ಸಮಾಜದ ನಿವಾಸಿಗಳಾದ ನಿಂಗಸ್ವಾಮಿ, ಸಿದ್ದು, ಕುಮಾರ್, ಪ್ರಶಾಂತ್, ಸತೀಶ್, ಪ್ರದೀಪ್, ಆದಿತ್ಯ ಶ್ಯಾಮ್, ಗಂಗಾಧರ್, ಮಧು, ವಿನಯ್, ಸಿದ್ದರಾಜು ಸೇರಿದಂತೆ ಇನ್ನಿತರರು ಕಾರ್ಯಕ್ರಮವನ್ನು ಆಯೋಜಿಸಿದ್ದರು.
    ವಿನಯ್ ಸ್ವಾಗತಿಸಿ, ಉಪನ್ಯಾಸಕಿ ರಾಜೇಶ್ವರಿ ನಿರೂಪಸಿದರು. ನರಸಿಂಹ ಮೂರ್ತಿ ವಂದಿಸಿದರು.


ಭದ್ರಾವತಿ ನಗರಸಭೆ ನೂತನ ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಹೊಸಮನೆ ಶ್ರೀ ಕೃಷ್ಣ ಕಾಲೇಜಿನಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

Thursday, October 28, 2021

ಅ.೩೧ರಂದು ಅಗಮುಡಿ ಮೊದಲಿಯರ್ ಸಂಘದ ಬೆಳ್ಳಿ ಮಹೋತ್ಸವ, ಸಮುದಾಯ ಭವನ ಲೋಕಾರ್ಪಣೆ

ಭದ್ರಾವತಿ ಗಾಂಧಿನಗರದಲ್ಲಿ ನಿರ್ಮಿಸಲಾಗಿರುವ ಲೋಕರ್ಪಣೆಗೊಳ್ಳಲಿರುವ ಅಗಮುಡಿ ಮೊದಲಿಯರ್ ಸಮುದಾಯ ಭವನ.
    ಭದ್ರಾವತಿ, ಅ. ೨೮: ಗಾಂಧಿನಗರದ ಅಗಮುಡಿ ಮೊದಲಿಯರ್ ಸಂಘದ ಬೆಳ್ಳಿ ಮಹೋತ್ಸವ ಹಾಗು ಅಗಮುಡಿ ಸಮುದಾಯ ಭವನದ ಲೋಕಾರ್ಪಣೆ ಸಮಾರಂಭ ಶ್ರೀ ಭದ್ರಗಿರಿ ದವತ್ತಿರು ಸ್ವಾಮೀಜಿಯವರ ಕೃಪಾಶೀರ್ವಾದಗಳೊಂದಿಗೆ ಅ.೩೧ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ನಡೆಯಲಿದೆ.
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಬೆಂಗಳೂರಿನ ಐಎಂಪಿಎ ಸಂಸ್ಥಾಪಕ ಅಧ್ಯಕ್ಷ ಡಾ. ಆರ್. ಅರುಣಾಚಲಂ ಹಾಗು ತರೀಕೆರೆ ಎಂ.ಸಿ ಹಳ್ಳಿ ಶ್ರೀ ಭದ್ರಗಿರಿ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಚಂದ್ರಘೋಷನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
    ಸಂಘದ ಅಧ್ಯಕ್ಷ ಕಣ್ಣಪ್ಪ ಅಧ್ಯಕ್ಷತೆ ವಹಿಸಲಿದ್ದು, ದಾನಿಗಳಾದ ಪಿ. ನೀಲಮೇಗಂ, ಡಾ. ಆರ್. ಅರುಣಾಚಲಂ, ಕೆ. ವಿಶ್ವನಾಥ್, ಆರ್.ಜಿ ಜ್ಯೋತಿ ಮೊದಲಿಯರ್ ಮತ್ತು ಜಿ. ಸುರೇಶ್‌ಕುಮಾರ್ ಹಾಗು ನೂತನ ನಗರಸಭಾ ಸದಸ್ಯರಾದ ಅಗಮುಡಿ ಸಮಾಜದ ಆರ್. ಕರುಣಾಮೂರ್ತಿ, ವಿ. ಕದಿರೇಶ್, ವಿಜಯ ಮತ್ತು ಸುದೀಪ್‌ಕುಮಾರ್ ಅವರಿಗೆ ಸನ್ಮಾನ ನಡೆಯಲಿದೆ.
    ಸಮಾಜ ಬಂಧುಗಳು, ಗಣ್ಯರು ಸೇರಿದಂತೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭ ಯಶಸ್ವಿಗೊಳಿಸುವಂತೆ ಸಂಘದ ಕಾರ್ಯದರ್ಶಿ ಪಿ. ದೊರೈ ಮತ್ತು ಖಜಾಂಚಿ ಎಂ. ಸುಬ್ರಮಣಿ ಕೋರಿದ್ದಾರೆ.

ಲಂಚ ಪಡೆಯುವುದು, ಕೊಡುವುದು ಎರಡು ಸಹ ಅಪರಾಧ : ಆರ್. ವಾಸುದೇವ್


ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಭ್ರಷ್ಟಾಚಾರ ವಿರುಧ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
    ಭದ್ರಾವತಿ, ಅ. ೨೮: ಲಂಚ ಪಡೆಯುವುದು ಮಾತ್ರ ತಪ್ಪಲ್ಲ. ಕೊಡುವುದು ಸಹ ತಪ್ಪು ಎಂದು ಶಿವಮೊಗ್ಗ, ಚಿತ್ರದುರ್ಗ ವಿಭಾಗದ ಲೋಕಾಯುಕ್ತ ಅಧೀಕ್ಷಕ ಆರ್.ವಾಸುದೇವ್ ರಾವ್ ಹೇಳಿದರು.
    ಅವರು ಗುರುವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭ್ರಷ್ಟಾಚಾರ ವಿರುಧ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಲಂಚ ಕೊಡುವವರು ಇರುವತನಕ ಪಡೆಯುವವರು ಸಹ ಇರುತ್ತಾರೆ. ಭ್ರಷ್ಟಾಚಾರದಲ್ಲಿ ಇಬ್ಬರ ಪಾತ್ರವೂ ಪ್ರಮುಖವಾಗಿರುತ್ತದೆ. ಲಂಚ ನೀಡಿ ಒತ್ತಡ ಹಾಕುವ ಮೂಲಕ ಕೆಲಸ ಮಾಡಿಸಿಕೊಳ್ಳುವುದು ಸಹ ಅಪರಾಧವಾಗಿರುತ್ತದೆ. ಈ ಹಿನ್ನಲೆಯಲ್ಲಿ ಇವರ ಮೇಲೂ ಸಹ ಪ್ರಕರಣ ದಾಖಲಿಸಿಕೊಳ್ಳಬಹುದಾಗಿದೆ ಎಂದರು.
ಸರ್ಕಾರಿ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಭ್ರಷ್ಟಾಚಾರ ಮುಕ್ತರಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರತಿಜ್ಞಾ ವಿಧಿ ಬೋಧನೆ ಹಾಗು ಸ್ವೀಕಾರದಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಬದಲಿಗೆ ಕರ್ತವ್ಯದಲ್ಲಿ ಅವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಈ ನಿಟ್ಟಿನಲ್ಲಿ ಯಶಸ್ವಿ ಕಾಣಲು ಸಾಧ್ಯ ಎಂದರು.  
    ಸಾರ್ವಜನಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಹೆಚ್ಚಿನ ಮಾಹಿತಿ ಇರುವುದಿಲ್ಲ. ಸರ್ಕಾರದ ಸೇವೆಯಲ್ಲಿರುವ ನಾವುಗಳು ಜನರ ಸೇವಕರು ಎಂಬುದನ್ನು ಅರಿತು ಅವರ ಕೆಲಸ ಕಾರ್ಯಗಳನ್ನು ಸುಗಮವಾಗಿ ಮಾಡಿ ಕೊಡಲು ಮುಂದಾಗಬೇಕೆಂದರು.
    ಲೋಕಾಯುಕ್ತ ಉಪಪೊಲೀಸ್ ಅಧೀಕ್ಷಕ ಮೃತ್ಯುಂಜಯ ಭ್ರ್ರಷ್ಟಾಚಾರ ನಿರ್ಮೂಲನಾ ಪ್ರತಿಜ್ಞಾವಿಧಿ ಭೋದಿಸಿದರು.
ತಹಸೀಲ್ದಾರ್ ಆರ್. ಪ್ರದೀಪ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಪೌರಾಯುಕ್ತ ಕೆ. ಪರಮೇಶ್, ಲೋಕಾಯುಕ್ತ ಇಲಾಖೆಯ ರಾಧಕೃಷ್ಣ, ಜಗನ್ನಾಥ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.