Wednesday, February 2, 2022

ಗಮಕ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೊಸಳ್ಳಿ ಕೇಶವಮೂರ್ತಿರಿಗೆ ಸನ್ಮಾನ, ಗೌರವ

ಶ್ರೇಷ್ಠ ಗಮಕ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೊಸಳ್ಳಿ ಕೇಶವಮೂರ್ತಿಯವರನ್ನು ಭದ್ರಾವತಿ ತರುಣ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಫೆ. ೨: ಶ್ರೇಷ್ಠ ಗಮಕ ಕಲಾವಿದ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೊಸಳ್ಳಿ ಕೇಶವಮೂರ್ತಿಯವರನ್ನು ನಗರದ ತರುಣ ಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
    ತರುಣ ಭಾರತಿ ವಿಶ್ವಸ್ಥ ಮಂಡಳಿ ಪ್ರಮುಖರಾದ ಡಾ. ಮಹಾಬಲೇಶ್ವರ, ಮಧುಕರ್ ಕಾನಿಟ್ಕರ್, ಎಸ್.ಎನ್ ಸುಭಾಷ್ ನೇತೃತ್ವದಲ್ಲಿ ಹೊಸಳ್ಳಿ ಕೇಶವಮೂರ್ತಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ತರುಣ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಚ್ ಶಿವಕುಮಾರ್, ಮುಖ್ಯ ಶಿಕ್ಷಕಿ ಶಕುಂತಲಾ, ಶಿಕ್ಷಕಿಯರಾದ ಸವಿತಾ, ಸುಜಾತ, ಅಖಿಲ ಭಾರತ ವೀರಶೈವ ತಾಲೂಕು ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, February 1, 2022

ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಮಾಹಿತಿ, ಸಲಹೆ ನೀಡಿ : ಬಿ.ಕೆ ಸಂಗಮೇಶ್ವರ್

 ಅಸಂಘಟಿತ ಕಾರ್ಮಿಕರ ಸಂಘದ ತಾಲೂಕು ಶಾಖೆವತಿಯಿಂದ ಭದ್ರಾವತಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಇ-ಶ್ರಮ್ ಕಾರ್ಡ್ ನೋಂದಾಣಿ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.  
    ಭದ್ರಾವತಿ, ಫೆ. ೧: ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಮಾಹಿತಿ, ಸಲಹೆ ನೀಡುವ ಮೂಲಕ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಮಂಗಳವಾರ ಅಸಂಘಟಿತ ಕಾರ್ಮಿಕರ ಸಂಘದ ತಾಲೂಕು ಶಾಖೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇ-ಶ್ರಮ್ ಕಾರ್ಡ್ ನೋಂದಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸರ್ಕಾರದ ಯೋಜನೆಗಳ ಬಗ್ಗೆ ಅಸಂಘಟಿತ ಕಾರ್ಮಿಕರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಅವರು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಸಂಘಟನೆಯ ನೇತೃತ್ವವಹಿಸಿರುವ ಮುಖಂಡರು, ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲರ್ಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಮನವಿ ಮಾಡಿದರು.
    ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಕಾಡಾ) ಅಧ್ಯಕ್ಷೆ ಪವಿತ್ರ ರಾಮಯ್ಯ ಮಾತನಾಡಿ, ಈ ದೇಶದಲ್ಲಿ ರೈತ ಮತ್ತು ಕಾರ್ಮಿಕ ಇಬ್ಬರು ಒಂದೇ ನಾಣ್ಯದ ಮುಖಗಳಿದ್ದಂತೆ. ಇವರ ಸಮಸ್ಯೆಗಳಿಗೆ ಎಲ್ಲರೂ ಪೂರಕವಾಗಿ ಸ್ಪಂದಿಸಬೇಕು. ಯಾವುದೇ ಅಧಿಕಾರವಿರಲಿ ಪ್ರಾಮಾಣಿಕತೆ ಬಹಳ ಮುಖ್ಯ. ನಾವು ಸರಿ ಇದ್ದರೇ ಎಲ್ಲರೂ ಸರಿ ಇರುತ್ತಾರೆ. ಇದನ್ನು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುವವರು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಸಂಘಟನೆ ಮತ್ತಷ್ಟು ಸದೃಢವಾಗಿ ಬೆಳೆಯಲು ಸಾಧ್ಯ ಎಂದರು.
    ಸಂಘದ ರಾಜ್ಯಾಧ್ಯಕ್ಷ ಕುಬೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆ ಪ್ರಸ್ತುತ ರಾಜ್ಯದ ೧೫ ಜಿಲ್ಲೆಗಳಲ್ಲಿ ವಿಸ್ತರಿಸಿಕೊಂಡಿದೆ. ಸಮಾಜದಲ್ಲಿ ಅತ್ಯಂತ ಶೋಷಣೆಗೆ ಒಳಗಾಗಿರುವ ಅಸಂಘಟಿತ ಕಾರ್ಮಿಕರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಈ ಕಾರ್ಮಿಕರಿಗೂ ಸಮಾಜದಲ್ಲಿ ಗೌರವ ತಂದು ಕೊಡುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಸರ್ಕಾರದ ಸೌಲಭ್ಯಗಳ ಬಗ್ಗೆ ಸೂಕ್ತ ಮಾಹಿತಿ, ಸಲಹೆಗಳನ್ನು ನೀಡಲಾಗುತ್ತಿದೆ. ಕಾರ್ಮಿಕ ಹೋರಾಟಗಾರರು, ರಾಜಕೀಯ ಧುರೀಣರಾಗಿರುವ ಆಯನೂರು ಮಂಜುನಾಥ್‌ರವರ ಮಾರ್ಗದರ್ಶನದಲ್ಲಿ ಸಂಘಟನೆ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟಿತರಾಗುವ ಮೂಲಕ ಅಂಘಟಿತ ಕಾರ್ಮಿಕರ ಧ್ವನಿಯಾಗಲಿದೆ ಎಂದರು.
    ಸಂಘದ ಅಧ್ಯಕ್ಷ ಬಾರಂದೂರು ಎಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯರಾದ ಆರ್. ಶ್ರೇಯಸ್(ಚಿಟ್ಟೆ), ಬಿ.ಎಂ ಮಂಜುನಾಥ್, ಸಂಘದ ಜಿಲ್ಲಾ ಪ್ರಮುಖರಾದ ಸುರೇಖ ಪಾಲಾಕ್ಷಪ್ಪ, ರತ್ನ ರಾಜು ಮತ್ತು ನಿರ್ಮಲ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಲೋಲಾಕ್ಷಿ ಪ್ರಾರ್ಥಿಸಿ, ಧನಲಕ್ಷ್ಮಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರೂಪನಾಗರಾಜ್ ನಿರೂಪಿಸಿದರು.  ಪದಾಧಿಕಾರಿಗಳಿಗೆ ಹಾಗು ಅಸಂಘಟಿತ ಕಾರ್ಮಿಕರಿಗೆ ಸಂಘದ ಗುರುತಿನ ಚೀಟಿ ಹಾಗು ಸಾಂಕೇತಿಕವಾಗಿ ಇ-ಶ್ರಮ್ ಕಾರ್ಡ್ ವಿತರಿಸಲಾಯಿತು.
    ಸಂಘದ ಉಪಾಧ್ಯಕ್ಷರಾದ ಪ್ರಸನ್ನ, ಮಂಜುನಾಥ್, ಕಲಾವತಿ ರುದ್ರೇಶ್, ಪೂರ್ಣಿಮಾದೇವಿ, ಶಿವು, ಕಾರ್ಯದರ್ಶಿಗಳಾದ ಎಂ.ಎಸ್ ರವಿ, ಪ್ರದೀಪ್, ಧನಲಕ್ಷ್ಮೀ, ರೂಪ ಮಲ್ಲಿಕಾರ್ಜುನ್ ಮತ್ತು ಸಂಘಟನಾ ಕಾರ್ಯದರ್ಶಿ ಸುನೀತ ಮೋಹನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಉಕ್ಕಿನ ನಗರದಲ್ಲೂ ಹಿಜಾಬ್ ವಿರುದ್ಧ ಹಿಂದೂ ವಿದ್ಯಾರ್ಥಿಗಳ ಹೋರಾಟ

ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬಿಗುವಿನ ವಾತಾವರಣ


ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ವಸ್ತ್ರದೊಂದಿಗೆ ಕಾಲೇಜಿಗೆ ಆಗಮಿಸಿ ಹಿಜಾಬ್ ವಿರುದ್ಧ ಹೋರಾಟ ನಡೆಸುತ್ತಿರುವುದು.
    ಭದ್ರಾವತಿ, ಫೆ. ೧: ಮಂಗಳೂರಿನಲ್ಲಿ ನಡೆಯುತ್ತಿದ್ದ ಹಿಜಾಬ್(ಬುರ್ಖಾ) ವಿರುದ್ಧದ ಹೋರಾಟ ನಗರದಲ್ಲೂ ಆರಂಭಗೊಂಡಿದ್ದು, ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ ಈ ಸಂಬಂಧ ಹೋರಾಟ ಆರಂಭಗೊಂಡಿದೆ. 
ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬರುತ್ತಿರುವ ವಿದ್ಯಾರ್ಥಿನಿಯರನ್ನು ಹೊರ ಹಾಕುವಂತೆ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದಿರುವ ಹಿಂದೂ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾಲೇಜಿನಲ್ಲಿ ಅಹಿತಕರ ವಾತಾವರಣ ನಿರ್ಮಾಣಗೊಂಡಿದೆ. 
ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಬರುವುದಾದರೇ ನಾವು ಸಹ ಕೇಸರಿ ವಸ್ತ್ರದೊಂದಿಗೆ ಕಾಲೇಜಿಗೆ ಬರುವುದಾಗಿ ಹಠಕ್ಕೆ ಬಿದ್ದಿರುವ ಹಿಂದೂ ವಿದ್ಯಾರ್ಥಿಗಳು ಮಂಗಳವಾರ ಕೇಸರಿ ವಸ್ತ್ರದೊಂದಿಗೆ ಕಾಲೇಜಿಗೆ ಆಗಮಿಸಿದ್ದು, ಇದರಿಂದಾಗಿ ಮತ್ತಷ್ಟು ಬಿಗುವಿನ ವಾತಾವರಣ ಉಂಟಾಗಿದೆ. ಈ ನಡುವೆ ಕಾಲೇಜಿನ ಪ್ರಾಂಶುಪಾಲರು ಕಾಲೇಜಿನಲ್ಲಿ ಯಾವುದೇ ರೀತಿ ವಸ್ತ್ರ ಸಂಹಿತೆ ನಿಗದಿಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಪೊಲೀಸರು ವಾತಾವರಣ ತಿಳಿಗೊಳಿಸಲು ಹರಸಾಹಸ ಪಡುತ್ತಿದ್ದು, ವಿವಾದ ಮುಂದುವರೆಯುವ ಲಕ್ಷಣಗಳು ಎದ್ದು ಕಾಣುತ್ತಿದೆ. 
ಇವೆಲ್ಲದರ ನಡುವೆ ರಾಷ್ಟ್ರೀಯ ಬಜರಂಗದಳ ಜಿಲ್ಲಾಧ್ಯಕ್ಷ  ಚಂದನ್‌ರಾವ್, ಗ್ರಾಮಾಂತರ ಅಧ್ಯಕ್ಷ ನವೀನ್, ರಾಮ್ ಸೇನೆ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಉಮೇಶ್ ಮತ್ತು ಓಂ ಹಿಂದೂ ಕೋಟೆ ಸಂಘಟನೆ ತಾಲೂಕು ಅಧ್ಯಕ್ಷ ಮಂಜುನಾಥ್, ಕೇಸರಿಪಡೆ ಅಧ್ಯಕ್ಷ ಗಿರೀಶ್ ಸೇರಿದಂತೆ ಇನ್ನಿತರರು ಕಾಲೇಜು ಆಡಳಿತ ಮಂಡಳಿಯೊಂದಿಗೆ ಈ ಸಂಬಂಧ ಚರ್ಚಿಸಿದ್ದು, ಈ ಸಂಘಟನೆಗಳು ಇದೀಗ ಹಿಂದೂ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿವೆ. 
ಹಿಜಾಬ್ ಹೋರಾಟ ರೂಪುಗೊಳ್ಳಲು ಕಾರಣ?
ಕಳೆದ ಕೆಲವು ದಿನಗಳ ಹಿಂದೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯೋರ್ವಳೊಂದಿಗೆ ಹಿಂದೂ ವಿದ್ಯಾರ್ಥಿಯೋರ್ವ ಮಾತನಾಡುತ್ತಿದ್ದಾನೆಂಬ ಕಾರಣಕ್ಕೆ ಆ ವಿದ್ಯಾರ್ಥಿ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಉಂಟಾದ ವಿವಾದ ಇದೀಗ ಹಿಜಾಬ್ ವಿರುದ್ಧದ ಹೋರಾಟಕ್ಕೆ ಕಾರಣ ಎನ್ನಲಾಗಿದೆ. 
ಪ್ರಾಂಶುಪಾಲರ ಸ್ಪಷ್ಟನೆ: 
ಕಾಲೇಜಿನ ಪ್ರಾಂಶುಪಾಲ ಡಾ. ಉಮಾಶಂಕರ್ ಪತ್ರಿಕೆಗೆ ಮಾಹಿತಿ ನೀಡಿ, ಕೆಲವರು ಕಾಲೇಜಿನ ಬಗ್ಗೆ ತಪ್ಪು ಸಂದೇಶ ನೀಡಲು ಯತ್ನಿಸುತ್ತಿದ್ದಾರೆ. ಕಾಲೇಜಿನಲ್ಲಿ ೨೦೧೦ರಿಂದ ವಸ್ತ್ರ ಸಂಹಿತೆ ಜಾರಿಯಲ್ಲಿದ್ದು, ಕಾಲೇಜಿನ ತರಗತಿಗಳಿಗೆ ಕಡ್ಡಾಯವಾಗಿ ಸಮವಸ್ತ್ರದಲ್ಲಿಯೇ ಆಗಮಿಸಬೇಕು. ಬುಧವಾರ ಮತ್ತು ಶನಿವಾರ ಸಮವಸ್ತ್ರ ಕಡ್ಡಾಯಗೊಳಿಸಿಲ್ಲ. ಈ ನಡುವೆ ಇದೀಗ ಹಿಜಾಬ್ ಧರಿಸುವ ಸಂಬಂಧ ವಿನಾಕಾರಣ ಕಾಲೇಜಿನಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಇದಕ್ಕೂ ಸಹ ಇದೀಗ ಪರಿಹಾರ ಕಂಡುಕೊಳ್ಳಲಾಗಿದೆ. ಹಿಜಾಬ್ ಸಮವಸ್ತ್ರವಲ್ಲ ಎಂಬುದು ನಮಗೂ ತಿಳಿದಿದೆ. ಕಾಲೇಜಿಗೆ ಬರುತ್ತಿರುವ ವಿದ್ಯಾರ್ಥಿನಿಯರು ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಿಕೊಂಡು ಬರುತ್ತಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಹಿಜಾಬ್ ಬದಲಿಸಿ ಸಮವಸ್ತ್ರದಲ್ಲಿ ತರಗತಿಗೆ ಹೋಗಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ ಎಂದು ಸ್ಪಷ್ಟಪಡಿಸಿದರು. 

Monday, January 31, 2022

ಫೆ.೪ರಂದು ಬಜೆಟ್ ಪೂರ್ವಭಾವಿ ಸಭೆ

    ಭದ್ರಾವತಿ, ಜ. ೩೧: ನಗರಸಭೆ ಬಜೆಟ್ ಪೂರ್ವಭಾವಿ ಸಭೆ ಫೆ.೪ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆ ಸಭಾಂಗಣದಲ್ಲಿ ನಡೆಯಲಿದ್ದು, ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಈ ಬಾರಿ ಬಜೆಟ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ  ನೀಡಲು ಸಭೆಯಲ್ಲಿ ನಗರದ ಹಿರಿಯ ನಾಗರೀಕರು, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ-ಸೂಚನ-ಸಹಕಾರ ನೀಡುವಂತೆ ನಗರಸಭೆ ಪೌರಾಯುಕ್ತ ಕೆ. ಪರಮೇಶ್ ಕೋರಿದ್ದಾರೆ.

ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟಕ್ಕೆ ಯತ್ನ : ತಹಸೀಲ್ದಾರ್ ನೇತೃತ್ವ ತಂಡ ದಾಳಿ

ಬುಲೆರೋ ವಾಹನ, ೩೦ ಚೀಲ ಅಕ್ಕಿ ವಶ : ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


ಭದ್ರಾವತಿ ಸಿದ್ದಾಪುರ ತಾಂಡದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ತಹಸೀಲ್ದಾರ್ ಪ್ರದೀಪ್ ಆರ್. ನಿಕ್ಕಮ್ ಮತ್ತು ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ ನೇತೃತ್ವದ ತಂಡ ದಾಳಿ ನಡೆಸಿರುವುದು.
    ಭದ್ರಾವತಿ, ಜ. ೩೧: ನಗರಸಭೆ ವ್ಯಾಪ್ತಿಯ ಸಿದ್ದಾಪುರ ತಾಂಡದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತುನು ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಗ್ರಾಮಸ್ಥರು ತಡೆದು ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.
    ನ್ಯಾಯಬೆಲೆ ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ನಂತರ ಬೇರೆ ಚೀಲಗಳಿಗೆ ತುಂಬಿ ಮಾರಾಟ ಮಾಡಲು ಯತ್ನಿಸುತ್ತಿದ್ದಾನೆಂಬ ದೂರು ಗ್ರಾಮಸ್ಥರಿಂದ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಮತ್ತು ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ ನೇತೃತ್ವದ ತಂಡ ದಾಳಿ ನಡೆಸಿದೆ.


    ದಾಳಿ ನಡೆಸಿದ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಒಟ್ಟು ೨೪೮ ಚೀಲ ಅಕ್ಕಿ ಹಾಗು ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಮನೆಯಲ್ಲಿ ದಾಸ್ತಾನು ಮಾಡಲಾಗಿದ್ದ ೧೩೬ ಚೀಲ ಅಕ್ಕಿ ಮತ್ತು ಅಕ್ರಮವಾಗಿ ಮಾರಾಟ ಮಾಡಲು ಬುಲೆರೋ ವಾಹನದಲ್ಲಿ ತುಂಬಲಾಗಿದ್ದ ಸುಮಾರು ೩೦ ಚೀಲ ಅಕ್ಕಿ ಪತ್ತೆಯಾಗಿದೆ. ಈ ತಿಂಗಳು ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ೧೫೮ ಕ್ವಿಂಟಲ್ ೮೭ ಕೆ.ಜಿ ಅಕ್ಕಿ ( ೫೦ ಕೆ.ಜಿ ತೂಕದ ಒಟ್ಟು ೩೧೮ ಚೀಲ) ಕೆಎಫ್‌ಸಿಎಸ್‌ಸಿ ಗೋದಾಮಿನಿಂದ ಸರಬರಾಜು ಮಾಡಲಾಗಿದೆ. ಜನವರಿ ತಿಂಗಳಿನಲ್ಲಿ ವಿತರಣೆಯಾಗಿ ಉಳಿದಿರುವ ಅಕ್ಕಿ ಮತ್ತು ಸರಬರಾಜು ಮಾಡಲಾಗಿರುವ ಅಕ್ಕಿ ಎರಡನ್ನು ಒಟ್ಟು ಗೂಡಿಸಿ ಲೆಕ್ಕ ಹಾಕಿದಾಗ ವ್ಯತ್ಯಸ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
    ದೂರಿನ ಆಧಾರದ ಮೇರೆಗೆ ಪೊಲೀಸರು ಅಕ್ಕಿ ಸಾಗಾಣಿಕೆಗೆ ಬಳಸಿದ್ದ ಬುಲೇರೋ ವಾಹನ ಮತ್ತು ವಾಹನದಲ್ಲಿ ಅಕ್ರಮ ತುಂಬಲಾಗಿದ್ದ ೩೦ ಚೀಲ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಮತ್ತು ಬುಲೇರೋ ವಾಹನ ಚಾಲಕ ತಲೆ ಮರೆಸಿಕೊಂಡಿದ್ದು, ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಸಹೋದರನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಎಂಪಿಎಂ ಬಡಾವಣೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಳ : ಮಹಿಳೆ ಮೇಲೆ ಹಲ್ಲೆ


ಭದ್ರಾವತಿ ಆನೇಕೊಪ್ಪ ಎಂಪಿಎಂ ಬಡಾವಣೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.
    ಭದ್ರಾವತಿ, ಜ. ೩೧: ನಗರದ ಆನೇಕೊಪ್ಪ ಎಂಪಿಎಂ ಬಡಾವಣೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.
    ಎಂಪಿಎಂ ಬಡಾವಣೆಯಲ್ಲಿ ಕೆಲಸ ಮಾಡಲು ಬಂದಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ನಡೆಸಿರುವ ನಾಯಿಗಳು ಮಹಿಳೆಯ ಮುಖ ವಿರೂಪಗೊಳಿಸಿವೆ. ಈ ಭಾಗದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ಜನರು ಒಬ್ಬಂಟಿಯಾಗಿ ತಿರುಗಾಡದಂತಹ ವಾತಾವರಣ ನಿರ್ಮಾಣವಾಗಿದೆ.
    ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ಕಾರ್ಮಿಕರ ಸಾವಿರಾರು ವಸತಿ ಗೃಹಗಳು ಪಾಳುಬಿದ್ದಿದ್ದು, ಇದರ ಜೊತೆಗೆ ಈ ಭಾಗದಲ್ಲಿ ಹೊರಭಾಗದಿಂದ ಕೋಳಿ, ಕುರಿ ಮಾಂಸದಂಗಡಿಗಳ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದ್ದು, ಇದರಿಂದಾಗಿ ನಾಯಿಗಳು ಈ ಭಾಗದಲ್ಲಿಯೇ ವಾಸದ ನೆಲೆಗಳನ್ನು ರೂಪಿಸಿಕೊಂಡಿವೆ. ನಾಯಿಗಳ ಸಂತತಿ ಏರಿಕೆಯಾಗುತ್ತಿದ್ದು, ಈ ಬಗ್ಗೆ ಯಾರು ಸಹ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಗರಸಭೆ ಆಡಳಿತ ತಕ್ಷಣ ಕಾರ್ಯಾಚರಣೆ ನಡೆಸಿ ನಾಯಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿ : ಆರ್. ಕರುಣಾಮೂರ್ತಿ

    ಭದ್ರಾವತಿ, ಜ. ೩೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಸಿ ಕೊಡುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಗ್ರಾಹಕ ಸೇವಾ ಕೇಂದ್ರ ಸಹ ಆರಂಭಗೊಂಡಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಹೇಳಿದರು.
    ಅವರು ಸೋಮವಾರ ಹಳೇನಗರದ ಭೂತನಗುಡಿ ಶ್ರೀ ಕೃಷ್ಣರುಕ್ಮಿಣಿ ದೇವಸ್ಥಾನದ ಸಮೀಪ ಯೋಜನೆ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ಗ್ರಾಹಕ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಸರ್ಕಾರ ಕೈಗೊಳ್ಳಬೇಕಾಗಿರುವ ಯೋಜನೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೈಗೊಳ್ಳಲಾಗುತ್ತಿದೆ. ಆ ಮೂಲಕ ಪ್ರತಿಯೊಬ್ಬರು ಸ್ವಾವಲಂಬಿಗಳಾಗಿ ಬದುಕುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಯೋಜನೆ ವತಿಯಿಂದ ಉದ್ಯೋಗ ಸೃಷ್ಟಿಸಿಕೊಡಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆಯವರ ಭವಿಷ್ಯದ ಅಲೋಚನೆಗಳು ಅದ್ಭುತವಾಗಿವೆ. ಯಾವುದೇ ಧರ್ಮ, ಜಾತಿಗೆ ಮೀಸಲಾಗಿರದೆ ಎಲ್ಲರ ಅಭಿವೃದ್ಧಿಗೆ ಯೋಜನೆ ಮೂಲಕ ಒತ್ತು ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಈ ಗ್ರಾಹಕ ಸೇವಾ ಕೇಂದ್ರದ ಸದುಪಯೋಗಪಡೆದುಕೊಳ್ಳಬೇಕೆಂದರು.
    ಸೇವಾ ಕೇಂದ್ರವನ್ನು ಈ ಭಾಗದ ನಗರಸಭಾ ಸದಸ್ಯೆ ಅನುಸುಧಾ ಮೋಹನ್ ಉದ್ಘಾಟಿಸಿ, ಶುಭ ಹಾರೈಸಿದರು. ಯೋಜನೆಯ ಪ್ರಮುಖರಾದ ವಿ.ಎನ್ ಪ್ರಶಾಂತ್ ಹಾಗು ಸೇವಾ ಪ್ರತಿನಿಧಿಗಳು, ಒಕ್ಕೂಟದ ಮಹಿಳಾ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಭದ್ರಾವತಿ ಹಳೇನಗರದ ಭೂತನಗುಡಿ ಶ್ರೀ ಕೃಷ್ಣರುಕ್ಮಿಣಿ ದೇವಸ್ಥಾನದ ಸಮೀಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ಗ್ರಾಹಕ ಸೇವಾ ಕೇಂದ್ರ ಸೋಮವಾರ ನಗರಸಭಾ ಸದಸ್ಯೆ ಅನುಸುಧಾ ಮೋಹನ್ ಉದ್ಘಾಟಿಸಿದರು.