Saturday, July 23, 2022

ವಿಜೃಂಭಣೆಯಿಂದ ಜರುಗಿದ ಆಡಿ ಕೃತಿಕ ಕಾವಡಿ ಜಾತ್ರಾ ಮಹೋತ್ಸವ

ಗಮನ ಸೆಳೆದ ಕಾವಡಿ ಹರಕೆ ಹೊತ್ತ ಭಕ್ತರು

ಭದ್ರಾವತಿ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆಡಿ ಕೃತಿಕ ಕಾವಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಕಾವಡಿ ಹರಕೆ ಹೊತ್ತ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿ ಹರಕೆ ಸಮರ್ಪಿಸಿದರು. 
    ಭದ್ರಾವತಿ, ಜು. ೨೫: ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆಡಿ ಕೃತಿಕ ಕಾವಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. 
ಜು.೧೭ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡ ಜಾತ್ರಾ ಮಹೋತ್ಸವ ಶನಿವಾರ ಅಂತ್ಯಗೊಂಡಿತು. ಬೆಳಿಗ್ಗೆ ವಿಶ್ವರೂಪ ದರ್ಶನ, ಅಭಿಷೇಕ, ಉತ್ಸವ ಪೂಜೆ ಹಾಗು ಮಧ್ಯಾಹ್ನ ಕಾವಡಿ ಹರಕೆ ಸಮರ್ಪಣೆ, ಮಹಾಪೂಜೆ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
ಮೂಲ ವಿಗ್ರಹ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ಸೇರಿದಂತೆ ದೇವಸ್ಥಾನದಲ್ಲಿರುವ ಎಲ್ಲಾ ವಿಗ್ರಹಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಾವಡಿ ಹರಕೆ ಹೊತ್ತ ಭಕ್ತರು ಕಾಲ್ನಡಿಗೆಯಲ್ಲಿ ಹರೋ ಹರ ಘೋಷಣೆಗಳೊಂದಿಗೆ ಆಗಮಿಸಿ ಹರಕೆ ತೀರಿಸುವ ಮೂಲಕ ಭಕ್ತಿ ಮೆರದರು. 
ರಾಜ್ಯದ ವಿವಿಧೆಡೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ದೇವಸ್ಥಾನದ ಶ್ರೀ ಮುರುಗೇಶ್ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನ ಸಮಿತಿಯ ಪ್ರಮುಖರು,  ಶ್ರೀ ಶಿವಸುಬ್ರಮಣ್ಯ ಸ್ವಾಮಿ ಆಶ್ರಮದ ಸೇವಾಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
ಶಿವಮೊಗ್ಗ ಗುಡ್ಡೇಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಕಾಲ್ನಡಿಗೆ : 
ನಗರದ ನ್ಯೂಟೌನ್ ಆಂಜನೇಯ ಅಗ್ರಹಾರದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಿಂದ ಶಿವಮೊಗ್ಗ ಗುಡ್ಡೇಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹರಕೆ ಹೊತ್ತ ಭಕ್ತರು ಶುಕ್ರವಾರ ಸಂಜೆ ಕಾಲ್ನಡಿಗೆ ಸಾಗಿದರು. ಶನಿವಾರ ಬೆಳಿಗ್ಗೆ ಹರಕೆ ಸಮರ್ಪಿಸಿದರು. ಪ್ರತಿವರ್ಷ ಕಾಲ್ನಡಿಗೆ ಮೂಲಕ ದೇವಸ್ಥಾನಕ್ಕೆ ಸಾಗುವುದು ವಾಡಿಕೆಯಾಗಿದೆ. 


ಭದ್ರಾವತಿ ನ್ಯೂಟೌನ್ ಆಂಜನೇಯ ಅಗ್ರಹಾರದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಿಂದ ಶಿವಮೊಗ್ಗ ಗುಡ್ಡೇಕಲ್ ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹರಕೆ ಹೊತ್ತ ಭಕ್ತರು ಶುಕ್ರವಾರ ಸಂಜೆ ಕಾಲ್ನಡಿಗೆ ಸಾಗಿದರು

ಶಿಕ್ಷಕ, ಜಾನಪದ ಕಲಾವಿದ ರೇವಣಪ್ಪರಿಗೆ ಗೌರವ ಡಾಕ್ಟರೇಟ್

ಜು.೨೪ರಂದು ಊಟಿಯಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಪದವಿ ಪ್ರದಾನ

ಎಂ.ಆರ್ ರೇವಣಪ್ಪ 
    ಭದ್ರಾವತಿ, ಜು. ೨೩:  ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಾಜ್ಯ ಪ್ರಶಸ್ತಿ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ಅವರಿಗೆ ಇಂಟರ್‌ನ್ಯಾಷನಲ್ ಪೀಸ್ ಯೂನಿವರ್ಸಿಟಿ(ಐಪಿಯು) ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಿದೆ.
    ರೇವಣಪ್ಪ ಅವರು ಶಿಕ್ಷಕ ವೃತ್ತಿಯೊಂದಿಗೆ ಜಾನಪದ ಸಾಹಿತ್ಯ, ರಂಗಭೂಮಿ ಕಲೆಯನ್ನು ಸಹ ಮೈಗೂಡಿಸಿಕೊಂಡಿದ್ದು, ರಾಷ್ಟ್ರ ಹಾಗು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಜೀವಮಾನ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತಿದೆ.


    ಜು.೨೪ರಂದು ಊಟಿಯಲ್ಲಿ ನಡೆಯುತ್ತಿರುವ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ರೇವಣಪ್ಪ ಅವರು ಪದವಿ ಸ್ವೀಕರಿಸಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ತಾಲೂಕು ಶಾಖೆ ಹಾಗು ಶಿವಮೊಗ್ಗ ಜಿಲ್ಲಾ ಜಾನಪದ ಕಲೆ ಹಾಗು ಸಾಹಿತ್ಯ ವೇದಿಕೆ, ಶಿಕ್ಷಕ ವೃಂದ ಮತ್ತು ಅಭಿಮಾನಿಗಳು ರೇವಣಪ್ಪ ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಜು.26ರಂದು ಮುಂಗಾರು ಜಾನಪದ ಸಂಭ್ರಮ


ಭದ್ರಾವತಿ, ಜು. 23:  ಕರ್ನಾಟಕ ಜಾನಪದ ಪರಿಷತ್ ವತಿಯಿಂದ  ಜು.26ರಂದು, ಮಧ್ಯಾಹ್ನ 3-30 ಕ್ಕೆ, ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜದಲ್ಲಿ  ಜಾನಪದ ಗೀತೆಗಳ ವೃಂದಗಾನ ( ಕನಿಷ್ಠ 5ಜನರ ತಂಡ) ಸ್ಪರ್ಧೆಯನ್ನು ಆಯೋಜಿಸಲಾಗಿದೆ. 
     ಆಷಾಢ ಮಾಸ, ಮುಂಗಾರು ಹಾಗೂ ಕೃಷಿ ಚಟವಟಿಕೆಗಳಿಗೆ ಸಂಬಂಧಿತ ಜಾನಪದ ಗೀತೆಗಳನ್ನು ಆಯ್ದು ಕೊಳ್ಳ ಬೇಕಾಗಿರುತ್ತದೆ. 
    ಭಾಗವಹಿಸುವಂತಹ ಆಸಕ್ತರು ಜು.25 ರೊಳಗಾಗಿ ಮೋಹನ್. ಬಿ.ಎಲ್ ಮೊ: 9986241232, ಲತಾ ಎಲ್.ಕೆ, ಮೊ: 9449401402 ಮತ್ತು  ಹೇಮಾವತಿ ವಿಶ್ವನಾಥ್ ಮೊ: 9886859993 ಕರೆ ಮಾಡಿ ಹೆಸರು ನೊಂದಾಯಿಸಬಹುದಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ ತಿಳಿಸಿದ್ದಾರೆ. 

‎ ವಿಐಎಸ್ಎಲ್ ಕಾರ್ಖಾನೆಗೆ ಬಂಡವಾಳ : ಮುಖ್ಯಮಂತ್ರಿ ಭರವಸೆ

ಭದ್ರಾವತಿ, ಜು. 23: ಕೇಂದ್ರ ಉಕ್ಕುಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಪ್ರಾಧಿಕಾರದ ಮೂಲಕ ತೊಡಗಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ.
 ಕಾರ್ಖಾನೆಯ ಕಾರ್ಮಿಕ ಸಂಘದ ನಿಯೋಗ ದೆಹಲಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ರವರ ನೇತೃತ್ವದಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
 ಮುಖ್ಯಮಂತ್ರಿಗಳು ಮನವಿಗೆ ಪೂರಕವಾಗಿ ಸ್ಪಂದಿಸಿ  ಭರವಸೆ ನೀಡಿದರು.  ಸಂಘದ ಅಧ್ಯಕ್ಷ ಜೆ. ಜಗದೀಶ್, ಪ್ರಧಾನ ಕಾರ್ಯದರ್ಶಿ ಬಸಂತ್ ಕುಮಾರ್, ಕಾರ್ಯದರ್ಶಿ ಮನು, ಖಜಾಂಚಿ ಮೋಹನ್ ಉಪಸ್ಥಿತರಿದ್ದರು. 

Friday, July 22, 2022

ಕೆರೆ ಕೋಡಿ ದುರಸ್ತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಡಿ.ಎಸ್ ಅರುಣ್ ಗೆ ಮನವಿ

ಭದ್ರಾವತಿ: ನಗರಸಭೆ ವ್ಯಾಪ್ತಿಯ ತಮ್ಮಣ್ಣ ಕಾಲೋನಿ ಸಮೀಪದಲ್ಲಿರುವ ಸರ್ಕಾರಿ ಹಿರೇಕೆರೆ ಕೋಡಿ ಬಿದ್ದು ರಸ್ತೆ ಹಾಳಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗೆ ಒತ್ತಾಯಿಸಬೇಕೆಂದು ನಗರದ ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಅವರಿಗೆ ಮನವಿ ಸಲ್ಲಿಸಲಾಗಿದೆ.
      ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಮತ್ತು ಎಟಿಎಂ ಕೌಂಟರ್ ಪ್ರಾರಂಭ ಮಾಡಲು ಹಾಗೂ ಅಡುಗೆ ಅನಿಲ ವಿತರಣಾ ಕೇಂದ್ರ ಪ್ರಾರಂಭಿಸಲು ಮತ್ತು ಪ್ರಸ್ತುತ ಗ್ರಾಮದಲ್ಲಿರುವ ಪದವಿ ಪೂರ್ವ  ಕಾಲೇಜನ್ನು ಮೇಲ್ದರ್ಜೆಗೇರಿಸಿ ಪದವಿ ಕಾಲೇಜು ಆರಂಭಿಸಲು ಸಂಬಂಧ ಪಟ್ಟ ಇಲಾಖೆಗಳಿಗೆ ಒತ್ತಾಯಿಸುವುದು ಮತ್ತು ಸಿಂಗನಮನೆ, ಹಿರಿಯೂರು, ದೊಣಬಘಟ್ಟ, ಬಿಳಿಕಿ ಹಾಗು ತಡಸ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶುದ್ಧವಾದ ಮತ್ತು ಸಮರ್ಪಕವಾದ ಕುಡಿಯುವ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
          ಮನವಿಯನ್ನು ಟ್ರಸ್ಟ್ ಚೇರ್ಮನ್  ಆರ್. ವೇಣುಗೋಪಾಲ್ ಡಿ.ಎಸ್ ಅರುಣ್ ಅವರಿಗೆ ಸಲ್ಲಿಸಿದ್ದು, ಈಗಾಗಲೇ ಪ್ರತ್ಯೇಕವಾಗಿ ಸಲ್ಲಿಸಿರುವ 6 ಮನವಿಗಳಿಗೆ ಪೂರಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಜಿಎಸ್‌ಟಿ ವಿರೋಧಿಸಿ ಜಯಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ : ಮನವಿ

ಕೇಂದ್ರ ಸರ್ಕಾರ ಅಗತ್ಯ ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ವಿರೋಧಿಸಿ ಭದ್ರಾವತಿಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜು. ೨೨: ಕೇಂದ್ರ ಸರ್ಕಾರ ಅಗತ್ಯ ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿರುವುದನ್ನು ವಿರೋಧಿಸಿ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
    ವೇದಿಕೆ ಪ್ರಮುಖರು ಮಾತನಾಡಿ, ಕೇಂದ್ರ ಸರ್ಕಾರ ಅಸ್ವಾಭಾವಿಕ ಜಿಎಸ್‌ಟಿ ದರ ಜಾರಿಗೆ ತರಲು ಹೊರಟಿದೆ. ಆಹಾರ ಪದಾರ್ಥಗಳ ಮೇಲೂ ತೆರಿಗೆ ವಿಧಿಸಿದೆ. ಬಡವರು ಉಪಯೋಗಿಸುವ ಪ್ಯಾಕ್ ಮಾಡಿದ ಅಕ್ಕಿ, ಹಾಲು, ಮೊಸರು, ಮಜ್ಜಿಗೆ, ಹಪ್ಪಳ, ಉಪ್ಪಿನಕಾಯಿ, ಒಣಕಾಳು, ತರಕಾರಿ, ಮಾಂಸ, ಮೀನು ಸೇರಿದಂತೆ ಇನ್ನಿತರ ವಸ್ತುಗಳ ಮೇಲೆ ದೇಶದ ಬಡವರ್ಗದ ಪ್ರಜೆಗಳ ಮೆಲೆ ಚಿಂತನೆ ಇಲ್ಲದೆ ಅಸಂಬದ್ಧವಾದ ತೆರಿಗೆ ವಿಧಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಅಕ್ಕಿ ಮೇಲೆ ಜಿಎಸ್‌ಟಿ ಹೇರಿರುವುದು ಬಡವರ ಅನ್ನವನ್ನು ಕಸಿಕೊಂಡಂತಾಗಿದೆ. ಈಗಾಗಲೇ ಕೊರೋನಾದ ಹಿನ್ನಲೆಯಲ್ಲಿ ಯಾವುದೇ ಉದ್ಯೋಗವಿಲ್ಲದೆ ಆರ್ಥಿಕತೆಯಿಂದ ಹಾಗು ನಿರುದ್ಯೋಗದಿಂದ ಹಿಂದುಳಿದಿರುವ ದೇಶದ ಬಡ ವರ್ಗದವರ ಸ್ಥಿತಿ ಹೇಳತೀರದಾಗಿದೆ. ಅತಿವೃಷ್ಟಿ, ಅನಾವೃಷ್ಟಿಗಳಿಂದ ಜನಸಾಮಾನ್ಯರು ತೊಂದರೆಗೆ ಒಳಗಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತೆ ತೆರಿಗೆಯನ್ನು ವಿಧಿಸಲಾಗಿದೆ. ತಕ್ಷಣ ಜಿಎಸ್‌ಟಿ ರದ್ದು ಮಾಡಬೇಕೆಂದು ವೇದಿಕೆ ಆಗ್ರಹಿಸುತ್ತದೆ ಎಂದರು.
    ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಮುಖಂಡರಾದ ಫ್ರಾನ್ಸಿಸ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ




ಎನ್. ವೈಷ್ಣವಿ ಕಾಮತ್(೪೮೫)


ಎಂ. ಪ್ರಜ್ವಲ್ (೪೬೩)


ಪಿ.ವಿ ಲಹರಿ (೪೬೧)


ತೇಜಸ್ವಿನಿ ಗೌಡ(೪೫೫)


ಮೇಘನಾ ಎಂ. ರೆಡ್ಡಿ (೪೫೨)


ಆರ್. ಹೇಮಾಲತಾ(೪೫೨)
    ಭದ್ರಾವತಿ, ಜು. ೨೨: ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಜ್ಞಾನಪೀಠ ಶಾಲೆ ಈ ಬಾರಿ ಸಿಬಿಎಸ್‌ಇ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಪಡೆದುಕೊಂಡಿದೆ.
    ಶಾಲೆಯ ವಿದ್ಯಾರ್ಥಿನಿ ಎನ್. ವೈಷ್ಣವಿ ಕಾಮತ್ ೫೦೦ಕ್ಕೆ ೪೮೫ ಅತಿ ಹೆಚ್ಚು ಶೇ.೯೭ ಅಂಕ ಪಡೆದುಕೊಂಡಿದ್ದು,  ಉಳಿದಂತೆ ಎಂ. ಪ್ರಜ್ವಲ್ ೫೦೦ಕ್ಕೆ ೪೬೩ ಶೇ.೯೨.೬, ಪಿ.ವಿ ಲಹರಿ ೫೦೦ಕ್ಕೆ ೪೬೧ ಶೇ.೯೨.೨, ತೇಜಸ್ವಿನಿ ಗೌಡ ೫೦೦ಕ್ಕೆ ೪೫೫ ಶೇ.೯೧, ಮೇಘನಾ ಎಂ. ರೆಡ್ಡಿ ೫೦೦ಕ್ಕೆ ೪೫೨ ಶೇ.೯೦.೪ ಹಾಗು ಆರ್. ಹೇಮಾಲತಾ ೫೦೦ಕ್ಕೆ ೫೫೨ಕ್ಕೆ ಶೇ.೯೦.೪ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ.
    ಒಟ್ಟು ೨೫ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲರೂ ವಿದ್ಯಾರ್ಥಿಯಾಗಿದ್ದಾರೆ. ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಪ್ರಭಾಕರ ಬೀರಯ್ಯ, ಪರಮೇಶ್ವರಪ್ಪ, ಪ್ರಾಂಶುಪಾಲರಾದ ಮೃತ್ಯುಂಜಯ ಕಾನಿಟ್ಕರ್, ಶಾಮರಾಯ ಆಚಾರ್, ಉಪಪ್ರಾಂಶುಪಾಲ ಪ್ರಸನ್ನ ಹಾಗು ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.