Monday, November 7, 2022

ನ.೮ರಂದು ಪಾರ್ಶ್ವ ಚಂದ್ರಗ್ರಹಣ : ಬರೀಗಣ್ಣಿನಿಂದ ವೀಕ್ಷಿಸಿ, ಆನಂದಿಸಿ

ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ

ಪಾರ್ಶ್ವ ಚಂದ್ರಗ್ರಹಣ ಸಂಭವಿಸುವ ಪ್ರಕ್ರಿಯೆ
    ಭದ್ರಾವತಿ, ನ. ೭ :  ಪಾರ್ಶ್ವ ಚಂದ್ರಗ್ರಹಣ ನ.೮ರ ಮಂಗಳವಾರ ಗೋಚರಿಸಲಿದ್ದು, ನಿಸರ್ಗ ಚಲನೆಯ ಈ ನೆರಳು ಬೆಳಕಿನ ಆಟದ ವಿಸ್ಮಯ ಬರೀಗಣ್ಣಿನಿಂದ ವೀಕ್ಷಿಸಿ ಆನಂದಿಸಬಹುದಾಗಿದೆ ಎಂದು ಹವ್ಯಾಸಿ ಖಗೋಳ ಶಾಸ್ತ್ರಜ್ಞ  ಹರೋನಹಳ್ಳಿ ಸ್ವಾಮಿ ತಿಳಿಸಿದ್ದಾರೆ.
    ಇತ್ತೀಚೆಗೆ ಪಾರ್ಶ್ವ ಸೂರ್ಯಗ್ರಹಣ ಗೋಚರಿಸಿದ್ದು, ಇದೀಗ ಪಾರ್ಶ್ವ ಚಂದ್ರಗ್ರಹಣ ಎದುರಾಗುತ್ತಿದೆ. ಸಂಜೆ ೫.೫೭ ರಿಂದ ೬.೧೮ರ ವರೆಗೆ ಗೋಚರಿಸಲಿದ್ದು, ನಿಸರ್ಗದ ಈ ನೆರಳು ಬೆಳಕಿನ ಆಟವನ್ನು ಕಣ್ತುಂಬಿಕೊಂಡು ಆನಂದಿಸಬಹುದಾಗಿದೆ. ಬರೀಗಣ್ಣಿನಿಂದ ವೀಕ್ಷಿಸಬಹುದಾಗಿದ್ದು, ಕಣ್ಣಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದು ಸಂಪೂರ್ಣ ಖಗ್ರಾಸ ಚಂದ್ರಗ್ರಹಣವಾಗಿದ್ದು, ದಕ್ಷಿಣ ಭಾರತೀಯರಿಗೆ ಗೋಚರಿಸಲಿದೆ.
    ಚಂದ್ರಗ್ರಹಣ ಹೇಗೆ ಸಂಭವಿಸುತ್ತದೆ ?
    ಸೂರ್ಯನ ಸುತ್ತಾ ಭೂಮಿ, ಭೂಮಿಯ ಸುತ್ತಾ ಚಂದ್ರ ಗುರುತ್ವ ಬಲದ ಕಾರಣ ಸುತ್ತುತ್ತಿವೆ. ಸೂರ್ಯ ಮತ್ತು ಚಂದ್ರರ ನಡುವೆ ಭೂಮಿಯು ಒಂದೇ ಸಮತಲದೊಂದಿಗೆ ಸರಳ ರೇಖೆಯಲ್ಲಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿ ಚಂದ್ರನನ್ನು ಮರೆ ಮಾಡುವ ಘಟನೆಯೇ ಚಂದ್ರಗ್ರಹಣ.
    ಚಂದ್ರನನ್ನು ಭೂಮಿಯ ನೆರಳು ಪೂರ್ಣ ಮುಚ್ಚಿದಾಗ ಪೂರ್ಣ ಚಂದ್ರಗ್ರಹಣ, ಭಾಗಶಃ ಮರೆಮಾಡಿದರೆ ಪಾರ್ಶ್ವ ಚಂದ್ರಗ್ರಹಣ ಎನ್ನುತ್ತೇವೆ.
    ಕೆಂಪು ಬಣ್ಣದ ಚಂದ್ರ ಗೋಚರ :
    ಹುಣ್ಣಿಮೆ ಪೂರ್ವದಲ್ಲಿ ಚಂದ್ರ ಉದಯವಾಗುತ್ತಿದ್ದರೆ, ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿರುವಾಗ ಸೂರ್ಯನ ಬೆಳಕು ಭೂಮಿಯ ವಾತಾವರಣದ ಕೆಂಪುಧೂಳಿನ ಮೂಲಕ ಹಾದು ಬರುವಾಗ ಬೆಳಕಿನ ವಕ್ರೀಭವನದ ಕಾರಣ ಕೆಂಪು ಬಣ್ಣ ನಮ್ಮ ಕಣ್ಣು ತಲುಪುವುದರಿಂದ ಚಂದ್ರ ಕೆಂಪು ಬಣ್ಣದಿಂದ ಗೋಚರಿಸುವನು. ಕೆಂಪು ಬಣ್ಣ ಹೆಚ್ಚಾಗಿದ್ದರೆ, ಧೂಳಿನ ಮಾಲಿನ್ಯ ಹೆಚ್ಚಾಗಿದೆ ಎಂದರ್ಥ,
    ಹಿರಿಯೂರು ಗ್ರಾಮದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ :
    ಟೆಲಿಸ್ಕೋಪ್ ಮೂಲಕ ಸಂಜೆ ಹಿರಿಯೂರು ರಂಗಮಂದಿರದಲ್ಲಿ ಗ್ರಹಣ, ಗುರು, ಶನಿ ಗ್ರಹಗಳ ವೀಕ್ಷಣೆ, ಚಂದ್ರನ ಕುಳಿಗಳ ದರ್ಶನ, ಆಶಾಕ ವೀಕ್ಷಣೆ ಮಾಡಿಸಲಾಗುವುದು. ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ಹರೋನಹಳ್ಳಿ ಸ್ವಾಮಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೭೮೯೨೧೫೪೬೯೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Sunday, November 6, 2022

ವಿಐಎಸ್‌ಎಲ್ ನಿವೃತ್ತ ನೌಕರ ಜೀವದಾಸ್ ನಿಧನ

ಜೀವದಾಸ್
    ಭದ್ರಾವತಿ, ನ. ೬ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ ಜೀವದಾಸ್ ನಿಧನ ಹೊಂದಿದರು.
    ಪುತ್ರ ಹಾಗು ಪುತ್ರಿ ಇದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಸಂಜೆ ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಮೀಪದಲ್ಲಿರುವ ಕ್ರೈಸ್ತರ ಸಮಾಧಿಯಲ್ಲಿ ನಡೆಯಲಿದೆ. ಇವರ ನಿಧನಕ್ಕೆ ನಿವೃತ್ತ ಕಾರ್ಮಿಕರು ಹಾಗು ಸ್ಥಳೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವಕನ ಬದುಕಿಗೆ ಬೆಳಕಾದ ಸರ್ಕಾರಿ ವೈದ್ಯರು

ಸರ್ಕಾರಿ ಆಸ್ಪತ್ರೆ, ಸರ್ಕಾರಿ ವೈದ್ಯರು ಎಂದರೆ ಮೂಗು ಮುರಿಯುವ ಮಂದಿಗೆ ತಕ್ಕ ಉತ್ತರ ನೀಡುವ ಪ್ರಕರಣ

ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಭದ್ರಾವತಿ ತಾಲೂಕಿನ ಗೌರಾಪುರ ನಿವಾಸಿ ವಾಸುದೇವ(ಗುರು) ಎಂಬ ಯುವಕನ ಬದುಕಿಗೆ ಸರ್ಕಾರಿ ಆಸ್ಪತ್ರೆ ವೈದ್ಯರು ಬೆಳಕಾದ ಹಿನ್ನಲೆಯಲ್ಲಿ ಕುಟುಂಬಸ್ಥರು ವೈದ್ಯರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು.
    ಭದ್ರಾವತಿ, ಅ. ೬ : ಸರ್ಕಾರಿ ಆಸ್ಪತ್ರೆ, ಸರ್ಕಾರಿ ವೈದ್ಯರು ಎಂದರೆ ಮೂಗು ಮುರಿಯುವ ಬಹಳಷ್ಟು ಮಂದಿಗೆ ಇಲ್ಲೊಂದು ಘಟನೆ ಉತ್ತರ ನೀಡುವಂತಿದೆ. ಸರ್ಕಾರಿ ಆಸ್ಪತ್ರೆ ವೈದ್ಯರ ರೋಗಿಗಳ ಮೇಲಿನ ಕಾಳಜಿ ಹಾಗು ವೈದ್ಯರ ಸಾಮರ್ಥ್ಯ ಬೆರಗುಗೊಳಿಸುತ್ತದೆ.
    ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಹಲವು ತಿಂಗಳು ಚಿಕಿತ್ಸೆ ಪಡೆದು ತಮ್ಮ ಬಳಿ ಇದ್ದ ಹಣ ಸಂಪೂರ್ಣವಾಗಿ ಖಾಲಿಯಾದರೂ ಸಹ ಗುಣಮುಖರಾಗದೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವಕನೊಬ್ಬನ ಹೊಸ ಬದುಕಿಗೆ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆ ವೈದ್ಯರು ಬೆಳಕಾಗಿದ್ದಾರೆ.
    ಮೂಲತಃ ತಾಲೂಕಿನ ಗೌರಾಪುರ ಶಿವನಿಕ್ರಾಸ್ ನಿವಾಸಿ ಸುಮಾರು ೨೩ ವರ್ಷ ವಯಸ್ಸಿನ ವಾಸುದೇವ(ಗುರು) ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಸುಮಾರು ೮ ತಿಂಗಳ ಹಿಂದೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾನೆ. ಈತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವಾರು ತಿಂಗಳು ಚಿಕಿತ್ಸೆ ಪಡೆದರೂ ಗುಣಮುಖರಾಗಲಿಲ್ಲ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲೂ ಸಹ ಯಾವುದೇ ರೀತಿ ಗುಣಮುಖ ಕಾಣದೆ ಕೋಮಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿತ್ತು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಬದುಕುವುದು ಕಷ್ಟ ಎಂದು ಕೈ ಚೆಲ್ಲಿದ್ದರು. ಇದರಿಂದಾಗಿ ದಿಕ್ಕುತೋಚದೆ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು.
    ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಮತ್ತು ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪಿ. ಗಣೇಶ್‌ರಾವ್ ಕುಟುಂಬಸ್ಥರ ನೆರವಿಗೆ ಧಾವಿಸಿದ್ದು, ವೈದ್ಯರಿಗೆ ಕುಟುಂಬಸ್ಥರ ಪರಿಸ್ಥಿತಿ ಮನವರಿಕೆ ಮಾಡಿಕೊಡುವ ಮೂಲಕ ಕೋಮಾಸ್ಥಿತಿಯಲ್ಲಿದ್ದ ವಾಸುದೇವನಿಗೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸುವಲ್ಲಿ ಯಶಸ್ವಿಯಾದರು.
    ಆಸ್ಪತ್ರೆಯ ಹಿರಿಯ ಶಸ್ತ್ರ ಚಿಕಿತ್ಸಾ ತಜ್ಞ ಹಾಗು ಉದರ ತಜ್ಞ ಡಾ. ಡಿ.ಎಸ್ ಶಿವಪ್ರಕಾಶ್, ಡಾ. ಮಂಜುನಾಥ್ ಮತ್ತು ಡಾ. ಕವಿತಾ ಅವರನ್ನೊಳಗೊಂಡ ವೈದ್ಯರ ತಂಡ ಸುಮಾರು ೧ ತಿಂಗಳು ೧೦ ದಿನಗಳವರೆಗೆ ನಿರಂತರವಾಗಿ ಚಿಕಿತ್ಸೆ ನೀಡುವ ಮೂಲಕ ಕೋಮಸ್ಥಿತಿಯಿಂದ ಮರಳಿ ಸಂಪೂರ್ಣವಾಗಿ ಚೇತರಿಕೆ ಹಂತಕ್ಕೆ ಬಂದು ತಲುಪಿದ್ದು, ಇದರಿಂದಾಗಿ ಕುಟುಂಬಸ್ಥರು ಮಾತ್ರವಲ್ಲ ಇತರರು ಸಹ ವೈದ್ಯರ ಆರೈಕೆ, ಕಾಳಜಿ ಹಾಗು ಸಾಮರ್ಥ್ಯಕ್ಕೆ ಬೆರಗಾಗಿದ್ದಾರೆ.
    ಕುಟುಂಬಸ್ಥರು ಪತ್ರಿಕೆಯೊಂದಿಗೆ ಮಾತನಾಡಿ, ನಮ್ಮ ಬಳಿ ಇದ್ದ ಜಮೀನು ಸೇರಿದಂತೆ ಎಲ್ಲವನ್ನು ಮಾರಾಟ ಮಾಡಿ ಸುಮಾರು ೧೦ ಲಕ್ಷ ರು. ಗಳಿಗೂ ಹೆಚ್ಚು ಹಣ ಚಿಕಿತ್ಸೆಗಾಗಿ ಖರ್ಚು ಮಾಡಲಾಗಿತ್ತು. ಆದರೂ ಸಹ ವಾಸುದೇವ ಬದುಕುವುದಿಲ್ಲ ಎಂಬ ಆತಂಕ ಎದುರಾಗಿತ್ತು. ಕೊನೆ ಘಳಿಗೆಯಲ್ಲಿ ಇಲ್ಲಿನ ತಾಲೂಕು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯರು ಹೆಚ್ಚಿನ ಆರೈಕೆ, ಕಾಳಜಿಯೊಂದಿಗೆ ಚಿಕಿತ್ಸೆ ನೀಡಲು ಆರಂಭಿಸಿದ ನಂತರ ಹಂತ ಹಂತವಾಗಿ ಚೇತರಿಕೆ ಕಂಡಿದ್ದು, ನಿಜಕ್ಕೂ ಸರ್ಕಾರಿ ಆಸ್ಪತ್ರೆ  ವೈದ್ಯರ ಸಾಮಾರ್ಥ್ಯ ಬೆರಗುಗೊಳಿಸಿದೆ. ಈ ಹಿನ್ನಲೆಯಲ್ಲಿ ವೈದ್ಯರ ತಂಡಕ್ಕೆ ಹಾಗು ಸಾಮಾಜಿಕ ಹೋರಾಟಗಾರ ಶಿವಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪಿ. ಗಣೇಶ್‌ರಾವ್ ಸೇರಿದಂತೆ ನೆರವಾದವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ನ್ಯಾಯವಾದಿ ಸೈಯದ್ ನಿಯಾಜ್ ಜೆಫ್ರಿ ನಿಧನ

ಸೈಯದ್ ನಿಯಾಜ್ ಜೆಫ್ರಿ
    ಭದ್ರಾವತಿ, ನ. ೬ : ನಗರದ ನ್ಯಾಯವಾದಿ, ಹಳೇನಗರದ ಖಾಜಿ ಮೊಹಲ್ಲಾ ನಿವಾಸಿ ಸೈಯದ್ ನಿಯಾಜ್ ಜೆಫ್ರಿ(೫೦) ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರ ಹೊಂದಿದ್ದರು. ಹಲವಾರು ವರ್ಷಗಳಿಂದ ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಅಂತ್ಯಕ್ರಿಯೆ ಸಂಜೆ ತರೀಕೆರೆ ರಸ್ತೆಯಲ್ಲಿರುವ ಖಬರ್‌ಸ್ತಾನದಲ್ಲಿ ನೆರವೇರಿತು.
    ತಾಲೂಕು ವಕೀಲರ ಸಂಘ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Saturday, November 5, 2022

ಎನ್. ಗೋವಿಂದಪ್ಪ ನಿಧನ

ಎನ್. ಗೋವಿಂದಪ್ಪ
    ಭದ್ರಾವತಿ, ನ. ೫: ಯಾದವ ಸಮಾಜದ ಪ್ರಮುಖರು, ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅವರ ತಂದೆ ಎನ್. ಗೋವಿಂದಪ್ಪ(೮೨) ನಿಧನ ಹೊಂದಿದರು.
    ಓರ್ವ ಪುತ್ರಿ, ಇಬ್ಬರು ಪುತ್ರರು ಹಾಗು ಮೊಮ್ಮಕ್ಕಳನ್ನು ಹೊಂದಿದ್ದರು. ಗೋವಿಂದಪ್ಪರವರು ಯಾದವ ಸಮಾಜದ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ರಾಮಗಿರಿ ಹೋಬಳಿ ಗೌಡಿಹಳ್ಳಿಯಲ್ಲಿ ಭಾನುವಾರ ನಡೆಯಲಿದೆ. 
    ಗೋವಿಂದಪ್ಪನವರ ನಿಧನಕ್ಕೆ ಬಿಜೆಪಿ ಪ್ರಮುಖರು, ಯಾದವ ಸಮಾಜ ಸೇರಿದಂತೆ ವಿವಿಧ ಸಮಾಜಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ರಸ್ತೆ ಅಪಘಾತ : ಗೃಹಿಣಿ ಸ್ಥಳದಲ್ಲಿಯೇ ಸಾವು

ಭದ್ರಾವತಿ ಬೈಪಾಸ್ ರಸ್ತೆ ಹಳೇಕಡದಕಟ್ಟೆ ಬಳಿ ಶನಿವಾರ ಮಧ್ಯಾಹ್ನ ನಡೆದ ಅಪಘಾತದಲ್ಲಿ ಲಾರಿಯ ಕೆಳಗೆ ದ್ವಿಚಕ್ರವಾಹನ ಸಿಕ್ಕಿ ಹಾಕಿಕೊಂಡಿರುವುದು.
    ಭದ್ರಾವತಿ, ನ. ೫ : ರಸ್ತೆ ಅಪಘಾತದಲ್ಲಿ ಗೃಹಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ನಗರದ ಬೈಪಾಸ್ ರಸ್ತೆ ಹಳೇಕಡದಕಟ್ಟೆ ಬಳಿ ನಡೆದಿದೆ. ಮೃತಪಟ್ಟ ಗೃಹಿಣಿಯನ್ನು ತಾಲೂಕಿನ ತಾರೀಕಟ್ಟೆ ನಿವಾಸಿ ಪ್ರೀತಿ ಅಲಿಯಾಸ್ ಜ್ಞಾನೇಶ್ವರಿ(೨೬) ಎಂದು ಗುರುತಿಸಲಾಗಿದೆ.  ಅನಾರೋಗ್ಯದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತಿಯನ್ನು ನೋಡಿಕೊಂಡು ಬರಲು ಮೈದುನ ಪ್ರೇಮ್‌ಸಾಗರ್ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
    ಅಪಘಾತದಲ್ಲಿ ಲಾರಿಯ ಕೆಳಗೆ ದ್ವಿಚಕ್ರ ವಾಹನ ಸಿಕ್ಕಿ ಹಾಕಿಕೊಂಡಿದ್ದು, ಲಾರಿ ಮೈಮೇಲೆ ಹರಿದ ಪರಿಣಾಮ ಪ್ರೀತಿ ತೀವ್ರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪ್ರೇಮ್‌ಸಾಗರ್ ತೀವ್ರ ಗಾಯಗೊಂಡಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಹಾರ ನಿಗಮಕ್ಕೆ ಸೇರಿದ ಗೋಧಿ ಅಕ್ರಮ ದಾಸ್ತಾನಿಗೆ ಯತ್ನ

೪.೯೫ ಲಕ್ಷ ರು. ಮೌಲ್ಯದ ಒಟ್ಟು ೨೩೪ ಚೀಲ ಗೋಧಿ ವಶ

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ(ಕೆಎಫ್‌ಸಿಎಸ್‌ಸಿ)ಕ್ಕೆ ಸೇರಿದ ಕಡೂರು-೧ ಗೋದಾಮಿಗೆ ಸರಬರಾಜು ಮಾಡಬೇಕಿದ್ದ ಗೋಧಿಯನ್ನು ಅಕ್ರಮವಾಗಿ ಬೇರೆಡೆ ದಾಸ್ತಾನು ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಕಳೆದ ೩ ದಿನಗಳ ಹಿಂದೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿ, ನ. ೫ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ(ಕೆಎಫ್‌ಸಿಎಸ್‌ಸಿ)ಕ್ಕೆ ಸೇರಿದ ಕಡೂರು-೧ ಗೋದಾಮಿಗೆ ಸರಬರಾಜು ಮಾಡಬೇಕಿದ್ದ ಗೋಧಿಯನ್ನು ಅಕ್ರಮವಾಗಿ ಬೇರೆಡೆ ದಾಸ್ತಾನು ಮಾಡಲು ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ಕಳೆದ ೩ ದಿನಗಳ ಹಿಂದೆ ನಡೆದಿದೆ.
ಒಟ್ಟು ಸುಮಾರು ೪,೯೫,೦೦೦ ರು. ಮೌಲ್ಯದ ಒಟ್ಟು ೫೦ ಕೆ.ಜಿ ತೂಕದ ಒಟ್ಟು ೨೩೪ ಚೀಲ ಗೋಧಿಯನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿರುವ ಲಾರಿ ಚಿಕ್ಕಮಗಳೂರು ಜಿಲ್ಲೆಯ ಸಗಟು ಸಾಗಾಣಿಕೆ ಗುತ್ತಿಗೆದಾರರೊಬ್ಬರಿಗೆ ಸೇರಿದೆ ಎನ್ನಲಾಗಿದೆ.
ಈ ಲಾರಿಯಲ್ಲಿ ನಗರದ ಬಿ.ಎಚ್ ರಸ್ತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿ ಸಮೀಪದಲ್ಲಿರುವ ಭಾರತೀಯ ಆಹಾರ ನಿಗಮ ಗೋದಾಮಿನಿಂದ ಪಡೆದ ಗೋಧಿಯನ್ನು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲೋರ್ ಮಿಲ್ ಒಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲು ಯತ್ನಿಸಲಾಗಿತ್ತು. ಖಚಿತ ಮಾಹಿತಿ ಆಧಾರದ ಮೇರೆಗೆ ಆಹಾರ ಇಲಾಖೆ ಅಧಿಕಾರಿ ಸುನೀತ ಹಾಗು ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ವಶಪಡಿಸಿಕೊಳ್ಳಲಾಗಿರುವ ಗೋಧಿ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವುದಾಗಿದ್ದು, ಹೆಚ್ಚಿನ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡಲು ಯತ್ನಿಸಲಾಗುತ್ತಿತ್ತು ಎನ್ನಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ) ಮುಖಂಡರಾದ ಎನ್. ಸಂತೋಷ್ ಮತ್ತು ಎ. ಶರತ್‌ಕುಮಾರ್‌ರವರು ಕಾರ್ಯಾಚರಣೆಯಲ್ಲಿ ವಶಪಡಿಸಲಾಗಿರುವ ಗೋಧಿ ತುಂಬಿದ ಲಾರಿ ಚಿಕ್ಕಮಗಳೂರು ಜಿಲ್ಲೆಯ ಸಗಟು ಸಾಗಾಣಿಕೆ ಗುತ್ತಿಗೆದಾರರಾದ ಬೇಲೂರು ಎಂ.ಕೆ ರೋಡ್ ಲೈನ್ಸ್ ಮಾಲೀಕ ಡಿ.ಪಿ ನಾಗೇಶ್ ಎಂಬುವರಿಗೆ ಸೇರಿದ್ದಾಗಿದೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿ ಒತ್ತಾಯಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರ ಮಾಹಿತಿ ಮೇರೆಗೆ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ನೆರವಾಗಿದ್ದು, ಯಶಸ್ವಿ ಕಾರ್ಯಚರಣೆ ನಡೆಸಿರುವ ತಂಡಕ್ಕೆ  ಕೃತಜ್ಞತೆ ಸಲ್ಲಿಸಿದ್ದಾರೆ.