Tuesday, December 13, 2022

ಮಕ್ಕಳು ಸರ್ವತೋಮುಖ ಬೆಳವಣಿಗೆ ಹೊಂದುವಂತೆ ರೂಪಿಸುವುದೇ ಶಿಕ್ಷಣ : ಎಸ್.ಎಲ್ ಭೋಜೇಗೌಡ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಿವಮೊಗ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಡಿ. ೧೩: ಮಕ್ಕಳು ಸರ್ವತೋಮುಖ ಬೆಳವಣಿಗೆ ಹೊಂದುವಂತೆ ರೂಪಿಸುವುದೇ ಶಿಕ್ಷಣ. ಇದನ್ನು ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಹೇಳಿದರು.
    ಅವರು ಮಂಗಳವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಿವಮೊಗ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
    ಶಿಕ್ಷಣದ ಜೊತೆಗೆ ಮಕ್ಕಳ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರ ಹೆಚ್ಚಿನದ್ದಾಗಿದೆ ಎಂದರು.
     ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಮಕ್ಕಳ ಬೆಳವಣಿಗೆಗೆ ಪೂರಕವಾಗಿದೆ ಎಂದರು.
    ವೇದಿಕೆಯಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸದಸ್ಯೆ ಸರ್ವಮಂಗಳ ಭೈರಪ್ಪ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್,  ತಹಸೀಲ್ದಾರ್ ಆರ್. ಪ್ರದೀಪ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಧ್ಯಕ್ಷ ಬಿ. ಸಿದ್ದಬಸಪ್ಪ,  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆನಂದಕುಮಾರ್, ಶಂಕರಪ್ಪ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಜೆ. ಸುಮತಿ, ಅಧ್ಯಕ್ಷ ಪೃಥ್ವಿರಾಜ್, ನಿರ್ದೇಶಕರಾದ ಯು. ಮಹಾದೇವಪ್ಪ, ಬಸವರಾವ್‌ದಾಳೆ, ಶ್ರೀಧರ್ ಗೌಡ, ಮಾಯಮ್ಮ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ. ಬಸವರಾಜಪ್ಪ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷಪ್ಪ, ಅಪೇಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  
    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಸಿ.ಆರ್ ಪರಮೇಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಕರು, ಸಿಬ್ಬಂದಿ ವರ್ಗದವರು, ಜಿಲ್ಲೆಯ ೭ ತಾಲೂಕುಗಳ ವಿವಿಧ ಶಾಲೆಗಳ ಶಿಕ್ಷಕರು, ಪೋಷಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ : ಅನಾವರಣಗೊಂಡ ಮಕ್ಕಳ ಪ್ರತಿಭೆ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಕರಾವಳಿ ಬದುಕು ಅನಾವರಣ.
    ಭದ್ರಾವತಿ, ಡಿ. ೧೩: ಒಂದೆಡೆ ತಮ್ಮ ಪ್ರತಿಭೆ ಅನಾವರಣಗೊಳಿಸಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಬೇಕೆಂಬ ತವಕ. ಮತ್ತೊಂದೆಡೆ ಮಕ್ಕಳ ಪ್ರತಿಭೆಯನ್ನು ನೋಡಲು ಕಾತುರದಿಂದ ಕಾಯುವ ಕ್ಷಣ ಮಂಗಳವಾರ ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಕಂಡು ಬಂದಿತು.


ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕನ್ನಡ ನಾಡಿನ ಜೀವನದಿ ಕಾವೇರಿ ಮಾತೆ ವೇಷಭೂಷಣದಲ್ಲಿ ಕಂಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಳು
    ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಜಿಲ್ಲೆಯ ೭ ತಾಲೂಕುಗಳಿಂದ ಸುಮಾರು ೪೦೦ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದರು. ಒಟ್ಟು ೧೮ ವಿಭಾಗದಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಸಂಸ್ಕೃತ ಮತ್ತು ಉರ್ದು ಕಂಠಪಾಠ ಹಾಗು ಭಾಷಣ, ಗಝಲ್, ಕವಾಲಿ, ಜಾನಪದ ನೃತ್ಯ, ಮಿಮಿಕ್ರಿ, ಜಾನಪದ ಗೀತೆ ಮತ್ತು ಭಾವಗೀತೆ, ರಸಪ್ರಶ್ನೆ, ಸಂಸ್ಕೃತ ಧಾರ್ಮಿಕ ಪಠಣ, ಆಶುಭಾಷಣ ಸ್ಪರ್ಧೆ, ಅಭಿನಯಗೀತೆ & ಕಥೆ ಹೇಳುವುದು, ಅರೇಬಿಕ್ ಧಾರ್ಮಿಕ ಪಠಣ, ಭರತ್ಯನಾಟ್ಯ, ಹಾಸ್ಯ, ಲಘು ಸಂಗೀತ ಮತ್ತು ಭಕ್ತಿಗೀತೆ, ಚರ್ಚಾ ಸ್ಪರ್ಧೆ, ಚಿತ್ರಕಲೆ ಮತ್ತು ಬಣ್ಣ ಹಚ್ಚುವುದು ಹಾಗು ರಂಗೋಲಿ ಸೇರಿದಂತೆ ವೈಯಕ್ತಿಕ ಹಾಗು ಸಾಮೂಹಿಕ ಸ್ಪರ್ಧೆಗಳು ನಡೆದವು.
    ಕರಾವಳಿ ಜನರ ಬದುಕು ಅನಾವರಣ :
    ವಿಶೇಷ ಎಂದರೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಮಕ್ಕಳು ಕರಾವಳಿ ಬದುಕನ್ನು ಅನಾವರಣಗೊಳಿಸುವ ಮೂಲಕ ಗಮನ ಸೆಳೆದರು. ದೋಣಿ, ಜೇಡ, ಜ್ಞಾನ ಧೈಯ್ಯ ಫಲಕ ರಾರಾಜಿಸುತ್ತಿತ್ತು. ಇದರ ಜೊತೆಗೆ ಯಕ್ಷಗಾನ ಕಲೆ ಅನಾವರಣ ಸಹ ಕಂಡು ಬಂದಿತು.

    ಮಣ್ಣಿನಲ್ಲಿ ಅರಳಿದ ಪ್ರಾಣಿ, ಪಕ್ಷಿಗಳು:
ಈ ನಿಟ್ಟಿನಲ್ಲಿ  ಜಿಂಕೆ, ಮೊಸಳೆ, ಗೂಬೆ ಸೇರಿದಂತೆ ಇನ್ನಿತರ ಪ್ರಾಣಿ, ಪಕ್ಷಿಗಳು ಹಾಗು ಗೋಕುಲ ಕೃಷ್ಣ, ಗರುಡ ಲಾಂಛನ ಮಕ್ಕಳ ಕೈಚಳಕದಲ್ಲಿ ಮಣ್ಣಿನಲ್ಲಿ ಅರಳುವ ಮೂಲಕ ಗಮನ ಸೆಳೆದವು. ಮಕ್ಕಳಲ್ಲಿ ವಿಭಿನ್ನ ರೀತಿಯ ಕಲೆಗಳಿದ್ದು, ಅವುಗಳ ಅನಾವರಣಕ್ಕೆ ಸೂಕ್ತ ವೇದಿಕೆ ಅಗತ್ಯವಿರುತ್ತದೆ ಎಂಬುದು ಕಂಡು ಬಂದಿತು.


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಜಿಂಕೆ, ಮೊಸಳೆ, ಗೂಬೆ ಸೇರಿದಂತೆ ಇನ್ನಿತರ ಪ್ರಾಣಿ, ಪಕ್ಷಿಗಳು ಹಾಗು ಗೋಕುಲ ಕೃಷ್ಣ, ಗರುಡ ಲಾಂಛನ ಮಕ್ಕಳ ಕೈಚಳಕದಲ್ಲಿ ಮಣ್ಣಿನಲ್ಲಿ ಅರಳುವ ಮೂಲಕ ಗಮನ ಸೆಳೆದವು.
    ರಾರಾಜಿಸಿದ ಕಾವೇರಿ ಮಾತೆ :
    ತಾಲೂಕಿನ ಎಮ್ಮೆಹಟ್ಟಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಕನ್ನಡ ನಾಡಿನ ಜೀವನದಿ ಕಾವೇರಿ ಮಾತೆ ವೇಷಭೂಷಣದಲ್ಲಿ ಕಂಗೊಳಿಸುವ ಮೂಲಕ ಎಲ್ಲರ ಗಮನ ಸೆಳೆದಳು. ಕನ್ನಡ ನೆಲ, ಜಲ, ಭಾಷೆ ಸಹ ಇದರೊಂದಿಗೆ ಅನಾವರಣಗೊಂಡಿತ್ತು. ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ನಿರ್ದೇಶಕರಾದ ಬಸವಂತರಾವ್ ದಾಳೆ, ಯು. ಮಹಾದೇವಪ್ಪ, ಶಿಕ್ಷಕರಾದ ಎಂ.ಆರ್ ರೇವಣಪ್ಪ, ಧನಂಜಯ ಸೇರಿದಂತೆ ಇನ್ನಿತರರು ವಿದ್ಯಾರ್ಥಿನಿಯನ್ನು ಅಭಿನಂದಿಸಿದರು.
    ಉಳಿದಂತೆ ಬಾಲಕಿಯರ ವೀರಭದ್ರೇಶ್ವರ ನೃತ್ಯ, ಡೊಳ್ಳು ಕುಣಿತ, ಜಾನಪದ ನೃತ್ಯ, ಲಂಬಾಣಿ ನೃತ್ಯ ಸೇರಿದಂತೆ ಇನ್ನಿತರ ಕಲಾತಂಡಗಳ ನೃತ್ಯಗಳು ವೇದಿಕೆ ಮತ್ತಷ್ಟು ಮೆರಗು ತಂದುಕೊಟ್ಟವು.
    ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಂಪೂರ್ಣ ಯಶಸ್ವಿಗೆ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಹಾಗು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೆಚ್ಚಿನ ಶ್ರಮ ವಹಿಸಿತ್ತು.


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ವೀರಭದ್ರೇಶ್ವರ ನೃತ್ಯ

ಆಹಾರ ಇಲಾಖೆ ಸಹಾಯಕ ಉಪನಿರೀಕ್ಷಕರ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿ ಪ್ರತಿಭಟನೆ

ಭ್ರಷ್ಟಾಚಾರ ಆರೋಪದ ಮೇಲೆ ಭದ್ರಾವತಿ ನಗರ ಆಹಾರ ಇಲಾಖೆ ಸಹಾಯಕ ಉಪನಿರೀಕ್ಷಕರ ವಿರುದ್ಧ ತಹಸೀಲ್ದಾರ್‌ರವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಕೆಆರ್‌ಎಸ್ ಪಕ್ಷದ ಯುವ ಘಟಕದ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಿದರು. 
    ಭದ್ರಾವತಿ, ಡಿ. ೧೩: ಭ್ರಷ್ಟಾಚಾರ ಆರೋಪದ ಮೇಲೆ ನಗರ ಆಹಾರ ಇಲಾಖೆ ಸಹಾಯಕ ಉಪನಿರೀಕ್ಷಕರ ವಿರುದ್ಧ ತಹಸೀಲ್ದಾರ್‌ರವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಕಛೇರಿ ಮುಂಭಾಗ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್ ಗೌಡ ಕೆಆರ್‌ಎಸ್ ಪಕ್ಷದ ಯುವ ಘಟಕದ ಸಹಯೋಗದೊಂದಿಗೆ ಪ್ರತಿಭಟನೆ ನಡೆಸಿದರು.
    ನಗರ ಆಹಾರ ಇಲಾಖೆ ಸಹಾಯಕ ಉಪನಿರೀಕ್ಷಕರಾದ ಗಾಯಿತ್ರಿಯವರು ತಮ್ಮ ಬೆರಳಚ್ಚು ಪಾಸ್ವರ್ಡ್ ಲಾಗಿನನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ನೀಡಬೇಕಾದ ಲಕ್ಷಾಂತರ ರೂ. ಮೌಲ್ಯದ ಪಡಿತರ ಕೆಲವು ನ್ಯಾಯಬಲೆ ಅಂಗಡಿ ಮಾಲೀಕರ ಜೊತೆ ಶಾಮೀಲಾಗಿ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡಿರುತ್ತಾರೆ. ಯಾವುದೇ ಸರ್ಕಾರಿ ಇಲಾಖೆಯ ಅಧಿಕಾರಿಗಳ ಪಾಸ್ವರ್ಡ್ ಲಾಗಿನನ್ನು ಬೇರೆಯವರು ದುರ್ಬಳಕೆ ಮಾಡಿಕೊಳ್ಳಲು ಆಗುವುದಿಲ್ಲ. ಆದರೆ ಗಾಯತ್ರಿಯವರು ಉದ್ದೇಶಪೂರ್ವಕವಾಗಿ ಸರ್ಕಾರದ ಹಣ ಲೂಟಿ ಮಾಡಿರುತ್ತಾರೆ. ಇವರು ತಮ್ಮ ಮೇಲಿನ ಆರೋಪ ಮುಚ್ಚಿಕೊಳ್ಳಲು ನೆಪಮಾತ್ರಕ್ಕೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ೭ ನ್ಯಾಯಬೇಲೆ ಅಂಗಡಿಗಳ ಮೇಲೆ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುತ್ತಾರೆ ಎಂದು ಆರೋಪಿಸಿದರು.
    ಯಾವುದೇ ಸರ್ಕಾರಿ ನ್ಯಾಯಬೆಲೆ ಅಂಗಡಿ ಭ್ರಷ್ಟಾಚಾರ ನಡೆಸಿ ರದ್ದಾದರೆ ಈ ವಿಚಾರವನ್ನು ಪತ್ರಿಕೆಯಲ್ಲಿ ಪ್ರಕಟಣೆ ನೀಡಿ ನಂತರ ಸಹಕಾರ ಸಂಘಗಳಿಗೆ ನೀಡಬೇಕೆಂದು ಸರ್ಕಾರದ ನಿಯಮವಿದೆ. ಆದರೆ ಭ್ರಷ್ಟ ನ್ಯಾಯಬೆಲೆ ಅಂಗಡಿಗಳ ಮಾಲೀಕರ ಜೊತೆ ಗಾಯತ್ರಿಯವರು ಸೇರಿಕೊಂಡು ಯಾವುದೇ ಪ್ರಕಟಣೆ ಹೊರಡಿಸದೆ ತಮಗೆ ಬೇಕಾದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಬೇಕಾಬಿಟ್ಟಿ ಅಂಗಡಿ ನಡೆಸಲು ಅನುಮತಿ ನೀಡುತ್ತಿದ್ದು, ಅಲ್ಲದೆ ಭ್ರಷ್ಟಾಚಾರ ನಡೆಸಿ ರದ್ದಾಗಿರುವ ನ್ಯಾಯಬೆಲೆ ಅಂಗಡಿಗಳನ್ನು ಮತ್ತೆ ಮೂಲ ಮಾಲೀಕರೇ ನಡೆಸಲು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಒಟ್ಟಾರೆ ಎಲ್ಲಾ ಭ್ರಷ್ಟಾಚಾರಗಳಿಗೂ ಗಾಯತ್ರಿಯವರು ಮೂಲ ಕಾರಣಕರ್ತರಾಗಿದ್ದು, ಇವರ ವಿರುದ್ಧ ತಹಸೀಲ್ದಾರ್‌ರವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಲಾಯಿತು.
    ಪ್ರತಿಭಟನೆಯಲ್ಲಿ ಕೆಆರ್‌ಎಸ್ ಪಕ್ಷದ ಯುವ ಘಟಕದ ಅಧ್ಯಕ್ಷ ತ್ಯಾಗರಾಜ, ವೆಂಕಟೇಶ್, ಆನಂದ್, ವಿನೋದ್, ರಾಜೇಂದ್ರ, ಚಂಪಯ್ಯ, ವಾಣಿ, ರೇಖಾ, ಮಧುಕುಮಾರ್, ಆಯಾಜ್, ಯೋಗೇಶ್, ಸಂದೀಪ್, ಬಿ.ಎಸ್ ಮಲ್ಲಿಕಾರ್ಜುನ, ಶರತ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

Monday, December 12, 2022

ವಿಐಎಸ್‌ಎಲ್‌ಗೆ ಬಂಡವಾಳ ತೊಡಗಿಸಲು ಒತ್ತಾಯಿಸಿ ಡಿ.೧೩ರಂದು ಪ್ರತಿಭಟನೆ

    ಭದ್ರಾವತಿ, ಡಿ. ೧೨ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಬಂಡವಾಳ ತೊಡಗಿಸಿ ಸಾರ್ವಜನಿಕ ರಂಗದಲ್ಲಿ ಉಳಿಸಲು ಒತ್ತಾಯಿಸಿ ಡಿ.೧೩ರಂದು ಸಿಐಟಿಯು ಜಿಲ್ಲಾ ಸಂಘಟನಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಸರ್.ಎಂ ವಿಶ್ವೇಶ್ವರಾಯರವರು ದೇಶದಲ್ಲಿ ಸ್ಥಾಪಿಸಿದ ಮೊಟ್ಟ ಮೊದಲ ಉಕ್ಕು ಉದ್ಯಮ ಇದ್ದಾಗಿದ್ದು, ತಕ್ಷಣ ಕಾರ್ಖಾನೆಗೆ ಅಗತ್ಯವಿರುವ ಸುಮಾರು ೬೦೦೦ ಕೋ. ರು. ಬಂಡವಾಳ ತೊಡಗಿಸಿ ಸಾರ್ವಜನಿಕ ರಂಗದಲ್ಲಿ ಉಳಿಸಲು ಒತ್ತಾಯಿಸಿ ಬೆಳಿಗ್ಗೆ ೧೧.೧೫ಕ್ಕೆ ಬೃಹತ್ ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಲಾಗುವುದು. ಕಾರ್ಮಿಕರು, ಹೋರಾಟಗಾರರು, ವಿವಿಧ ಸಂಘಟನೆಗಳು ಸೇರಿದಂತೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸಿಐಟಿಯು ಜಿಲ್ಲಾ ಸಂಚಾಲಕ ಎಂ. ನಾರಾಯಣ ಕೋರಿದ್ದಾರೆ.

ಹುಟ್ಟುಹಬ್ಬ ಅಂಗವಾಗಿ ಉಚಿತ ಕನ್ನಡಕ ವಿತರಣೆ

    ಭದ್ರಾವತಿ, ಡಿ. ೧೨ :  ಪೊಲೀಸ್ ಉಮೇಶ್‌ರವರ ಹುಟ್ಟುಹಬ್ಬದ ಅಂಗವಾಗಿ ದೃಷ್ಟಿದೋಷ ಹೊಂದಿರುವ ಹಿರಿಯ ನಾಗರೀಕರಿಗೆ ಸ್ನೇಹಜೀವಿ ಬಳಗ ಉಚಿತ ಕನ್ನಡಕ ವಿತರಿಸಲಿದೆ.
    ದೃಷ್ಟಿದೋಷ ಹೊಂದಿರುವ ಹಿರಿಯ ನಾಗರೀಕರು ತಜ್ಞ ವೈದ್ಯರು ತಪಾಸಣೆ ನಡೆಸಿ ಕನ್ನಡಕ ಧರಿಸಲು ಶಿಫಾರಸ್ಸು ಮಾಡಿರುವ ಚೀಟಿಯನ್ನು ಡಿ.೧೭ರೊಳಗೆ ನೀಡತಕ್ಕದ್ದು, ಹೆಚ್ಚಿನ ಮಾಹಿತಿಗೆ ಮೊ: ೯೬೨೦೫೨೪೫೦೩ ಅಥವಾ ೮೩೧೦೮೭೭೨೯೬ ಸಂಖ್ಯೆಗೆ ಕರೆ ಮಾಡಬಹುದಾಗಿದೆ.



ವಿಜೃಂಭಣೆಯಿಂದ ಜರುಗಿದ ಅಮಲೋದ್ಭವಿ ಮಾತೆ ದೇವಾಲಯದ ೮೪ನೇ ವರ್ಷದ ವಾರ್ಷಿಕೋತ್ಸವ

ಭದ್ರಾವತಿ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ೮೪ನೇ ವರ್ಷದ ವಾರ್ಷಿಕೋತ್ಸವದಲ್ಲಿ ದೇವಾಲಯದ ಆವರಣದಲ್ಲಿ ಪ್ರಾರ್ಥನೆಗೆ ಅನುಕೂಲವಾಗುವಂತೆ ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಅಮಲೋದ್ಭವಿ ಮಾತೆಯ 'ಗ್ರೋಟ್ಟೋ' ನಿರ್ಮಾಣ ಮಾಡಿಸಿಕೊಟ್ಟಿರುವ ದಾನಿಗಳಾದ ಗಾಂಧಿನಗರದ ಸೇಂಟ್ ಜೋಸೆಫ್ ಮತ್ತು ಲಿಟರ್ ಫ್ಲವರ್ ಶಾಲೆಗಳ ಸಂಸ್ಥಾಪಕರಾದ ರಾಬರ್ಟ್ ಡಿಸೋಜಾ-ಲತಾ ರಾಬರ್ಟ್ ದಂಪತಿ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು
    ಭದ್ರಾವತಿ, ಡಿ. ೧೨ : ನಗರದ ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ೮೪ನೇ ವರ್ಷದ ವಾರ್ಷಿಕೋತ್ಸವ ೧೧ ದಿನಗಳ ಕಾಲ 'ಅಮಲೋದ್ಭವಿ ಮಾತೆಯೊಂದಿಗೆ ಸಾಗು, ಕುಟುಂಬದಲ್ಲಿ ವಿಶ್ವಾಸವ ಸಾರು' ಧ್ಯೇಯವಾಕ್ಯದೊಂದಿಗೆ ವಿಜೃಂಭಣೆಯಿಂದ ಜರುಗಿತು.
    ಪ್ರತಿದಿನ ಸಂಜೆ ಜಪಸರ ಪ್ರಾರ್ಥನೆ, ಬಲಿಪೂಜೆ ಮತ್ತು ಪ್ರಬೋಧನೆಗಳು ಜರುಗಿದವು. ೧೦ನೇ ದಿನ ಅಮಲೋದ್ಭವಿ ಮಾತೆಯ ಅಲೃಂಕೃತಗೊಂಡ ಭವ್ಯ ತೇರಿನ ಮೆರವಣಿಗೆ ನಡೆಯಿತು. ಧರ್ಮಗುರುಗಳಿಂದ ಆಶೀರ್ವಾದ ಹಾಗು ಅನ್ನಸಂತರ್ಪಣೆ ನೆರವೇರಿತು.
    ೧೧ನೇ ದಿನ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ. ಫ್ರಾನ್ಸಿಸ್ ಸೆರಾವೋರವರು ಸುಮಾರು ೫೦ಕ್ಕೂ ಹೆಚ್ಚು ಧರ್ಮಗುರುಗಳೊಂದಿಗೆ ದಿವ್ಯ ಬಲಿಪೂಜೆ ನೆರವೇರಿಸಿದರು.
    ದೇವಾಲಯದ ಆವರಣದಲ್ಲಿ ಪ್ರಾರ್ಥನೆಗೆ ಅನುಕೂಲವಾಗುವಂತೆ ಸುಮಾರು ೧೫ ಲಕ್ಷ ರು. ವೆಚ್ಚದಲ್ಲಿ ಅಮಲೋದ್ಭವಿ ಮಾತೆಯ 'ಗ್ರೋಟ್ಟೋ' ನಿರ್ಮಾಣ ಮಾಡಿಸಿಕೊಟ್ಟಿರುವ ದಾನಿಗಳಾದ ಗಾಂಧಿನಗರದ ಸೇಂಟ್ ಜೋಸೆಫ್ ಮತ್ತು ಲಿಟರ್ ಫ್ಲವರ್ ಶಾಲೆಗಳ ಸಂಸ್ಥಾಪಕರಾದ ರಾಬರ್ಟ್ ಡಿಸೋಜಾ-ಲತಾ ರಾಬರ್ಟ್ ದಂಪತಿಯನ್ನು, ಚಿಕ್ಕಮಗಳೂರು ಧರ್ಮಕ್ಷೇತ್ರದ ಗುರು ಶ್ರೇಷ್ಠ ವಂದನೀಯ ಸ್ವಾಮಿ ಎಲಿಯಾಸ್ ಸಿಕ್ವೇರಾರವರನ್ನು, ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್(ಎಐಸಿಯು) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ದೇವಾಲಯದ ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಮತ್ತು ನಗರಸಭಾ ಸದಸ್ಯ ಜಾಜ್‌ರವರನ್ನು ಸನ್ಮಾನಿಸಿ ಗೌರಿವಿಸಲಾಯಿತು.  
  ದೇವಾಲಯದ ಧರ್ಮಗುರು ವಂದನೀಯ ಸ್ವಾಮಿ ಲಾನ್ಸಿ ಡಿಸೋಜ ವಾರ್ಷಿಕೋತ್ಸವದ ನೇತೃತ್ವ ವಹಿಸಿದ್ದರು. ಸುತ್ತಮುತ್ತಲ ಕ್ಯಾಥೋಲಿಕ್ ಕ್ರೈಸ್ತ ಸಮುದಾಯದ ಭಕ್ತರು ಪಾಲ್ಗೊಂಡಿದ್ದರು.

ಡಿ.೧೩ರಂದು ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ

ಡಿ.೧೩ರಂದು ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ

    ಭದ್ರಾವತಿ, ಡಿ. ೧೩ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಛೇರಿ, ಶಿವಮೊಗ್ಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ನ್ಯೂಟೌನ್ ಪ್ರಶಾಂತಿ ಸೇವಾ ಟ್ರಸ್ಟ್, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಡಿ.೧೩ರ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
    ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ ನಾಗೇಶ್, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಕೆ.ಎಸ್ ಈಶ್ವರಪ್ಪ, ಹರತಾಳು ಹಾಲಪ್ಪ, ಎಸ್. ಕುಮಾರ್ ಬಂಗಾರಪ್ಪ, ಕೆ.ಬಿ ಅಶೋಕ್ ನಾಯ್ಕ್, ಆಯನೂರು ಮಂಜುನಾಥ್, ಎಸ್.ಎಲ್ ಭೋಜೇಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಜಿ ನಾಗರಾಜ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರಾದ ಸಿ.ಆರ್ ಪರಮೇಶ್ವರಪ್ಪ, ಬಿ.ಆರ್ ಬಸವರಾಜಪ್ಪ, ತಹಸೀಲ್ದಾರ್ ಆರ್. ಪ್ರದೀಪ್ ಸೇರಿದಂತೆ ಇನ್ನಿತರರು ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಯಶಸ್ವಿಗೊಳಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮತ್ತು ಪ್ರಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಡಿ. ಪ್ರಭಾಕರ ಬೀರಯ್ಯ ಕೋರಿದ್ದಾರೆ.