Friday, December 23, 2022

ಹೋಬಳಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಟಿ. ಮಂಜಪ್ಪರಿಗೆ ಸನ್ಮಾನ, ಅಭಿನಂದನೆ

ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತ ಮುಖ್ಯಶಿಕ್ಷಕ, ಸಾಹಿತಿ ಟಿ. ಮಂಜಪ್ಪ ದಂಪತಿಯನ್ನು ವಿಶ್ರಾಂತ ಗೆಳೆಯರ ಬಳಗದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಡಿ. ೨೩: ತಾಲೂಕಿನ ಹೊಳೆಹೊನ್ನೂರು ಹೋಬಳಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಿವೃತ್ತ ಮುಖ್ಯಶಿಕ್ಷಕ, ಸಾಹಿತಿ ಟಿ. ಮಂಜಪ್ಪ ದಂಪತಿಯನ್ನು ವಿಶ್ರಾಂತ ಗೆಳೆಯರ ಬಳಗದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಸಭೆಯಲ್ಲಿ ಭಾಗವಹಿಸಿದ್ದ ವಿಶ್ರಾಂತ ಗೆಳೆಯರು ಮಂಜಪ್ಪರವರೊಂದಿಗಿನ ಒಡನಾಟದ ಅನುಭವಗಳನ್ನು ಹಂಚಿಕೊಂಡರು. ಅಲ್ಲದೆ ಅವರ ಸಾಹಿತ್ಯ ಕೃಷಿ ಮತ್ತು ಶಿಕ್ಷಕ ವೃತ್ತಿಯಲ್ಲಿನ ಸಾಧನೆಗೆ ಮುಚ್ಚುಗೆ ವ್ಯಕ್ತಪಡಿಸಿದರು.
    ಮಂಜಪ್ಪರವರ ಆಯ್ಕೆಗೆ ಕಾರಣೀಭೂತರಾದ ಎಲ್ಲರನ್ನೂ ಸ್ಮರಿಸಿಕೊಂಡು ಡಿ.೨೫ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲೆಂದು ಶುಭಕೋರಿದರು.
    ಪ್ರಾಚಾರ್ಯರಾದ ಗುಡ್ಡಪ್ಪ ಕುಟ್ರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯರಾದ ಎ.ಕೆ.ಚಂದ್ರಪ್ಪ, ಸೋಮಶೇಖರ್, ನಿವೃತ್ತ ಉಪನ್ಯಾಸಕರಾದ ಬಸವರಾಜಪ್ಪ, ಆಯನೂರು ಬಸವರಾಜಪ್ಪ, ನಿವೃತ್ತ ಶಿಕ್ಷಕ ನಾಗೇಂದ್ರಪ್ಪ, ಪ್ರಾಚಾರ್ಯ ಉದಯಕುಮಾರ್, ಸಾಹಿತಿ ಬಸವರಾಜಪ್ಪ, ಡಾ.ಎಂ. ವಿವೇಕಾನಂದ, ಶಿಕ್ಷಕಿಯರಾದ ನಿರ್ಮಲ, .ನೀಲಮ್ಮ ಮತ್ತು ವೇದ ಉಪಸ್ಥಿತರಿದ್ದರು.

Thursday, December 22, 2022

ಎಲ್ಲಾ ಧರ್ಮಗಳು ಒಂದೇ ಒಗ್ಗಟ್ಟಾಗಿ ಬದುಕಿದಾಗ ಮಾತ್ರ ಜೀವನ ಸಾರ್ಥಕ : ಮೌಲಾನ ಶಾಹುಲ್ ಹಬೀಬ್

ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸೌಹಾರ್ದ ಕ್ರಿಸ್‌ಮಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆ ಸಮಾರಂಭದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಕೇಕ್ ಕತ್ತರಿಸಿ ಸಿಹಿ ವಿತರಿಸಿದರು.
    ಭದ್ರಾವತಿ, ಡಿ. ೨೨: ಎಲ್ಲಾ ಧರ್ಮಗಳ ಸಂದೇಶ ಒಂದೇ ಆಗಿದ್ದು, ಎಲ್ಲರೂ ಒಗ್ಗಟ್ಟಾಗಿ ಬದುಕಿದಾಗ ಮಾತ್ರ ನಮ್ಮ ಜೀವನ ಸಾರ್ಥಕಗೊಳ್ಳುತ್ತದೆ ಎಂದು ಶಿವಮೊಗ್ಗ ಧರ್ಮಗುರು ಮೌಲಾನ ಶಾಹುಲ್ ಹಬೀಬ್ ಹೇಳಿದರು.
    ಅವರು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸೌಹಾರ್ದ ಕ್ರಿಸ್‌ಮಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮನುಷ್ಯರೆಲ್ಲರೂ ಒಂದೇ ಆಗಿದ್ದು, ನಮ್ಮಲ್ಲಿ ಯಾವುದೇ ತಾರತಮ್ಯವಿರಬಾರದು. ಪ್ರತಿಯೊಬ್ಬರೂ ಸಹ ನಮ್ಮವರು ಎಂಬ ಭಾವನೆ ಬೆಳೆಸಿಕೊಳ್ಳಬೇಕು. ಎಲ್ಲಾ ಧರ್ಮಗಳು ಸಹ ಮನುಷ್ಯನ ಬದುಕಿಗೆ ದಾರಿದೀಪವಾಗಿವೆ. ಎಲ್ಲಾ ಧರ್ಮಗಳ ಸಂದೇಶ ಒಂದೇ ಆಗಿದ್ದು, ಇದನ್ನು ಅರಿತುಕೊಂಡು ಸೌಹಾರ್ದತೆಯಿಂದ ಬದುಕಬೇಕೆಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಸಮಾಜದಲ್ಲಿ ಸೌಹಾರ್ದತೆ ಬಹಳ ಮುಖ್ಯವಾಗಿದೆ. ನಾವೆಲ್ಲರೂ ಇದನ್ನು ಅರಿತುಕೊಂಡು ಬದುಕು ಸಾಗಿಸುವಂತಾಗಬೇಕೆಂದರು.
ಉಜ್ಜನಿಪುರ ಡಾನ್ ಬೋಸ್ಕೋ ಕೈಗಾರಿಕಾ ತರಬೇತಿ ಸಂಸ್ಥೆ ನಿರ್ದೇಶಕ ಪಾದರ್ ಆರೋಗ್ಯ ರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭಾ ಸದಸ್ಯ ಜಾರ್ಜ್ ಅಧ್ಯಕ್ಷತೆ ವಹಿಸಿದ್ದರು. ರೆವರೆಂಡ್ ಪಿ.ಎಫ್ ಗಿಡಿಯೋನ್ ಕ್ರಿಸ್‌ಮಸ್ ಸಂದೇಶ ನೀಡಿದರು.
    ಹಳೇನಗರ ಕಂಚಿಬಾಗಿಲು ವೃತ್ತ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಅರ್ಚಕ ಪವನ್‌ಕುಮಾರ್ ಉಡುಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಕಾಂಗ್ರೆಸ್ ವಕ್ತಾರ ಅಮೋಸ್ ಸೇರಿದಂತೆ ವಿವಿಧ ಚರ್ಚ್‌ಗಳ ಧರ್ಮಗುರುಗಳು, ವಿವಿಧ ಧರ್ಮಗಳ ಮುಖಂಡರು ಉಪಸ್ಥಿತರಿದ್ದರು.


ಭದ್ರಾವತಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸೌಹಾರ್ದ ಕ್ರಿಸ್‌ಮಸ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆ ಸಮಾರಂಭದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

‘ಮ್ಯೂಚ್ಯುಯಲ್ ಫಂಡ್‌ನಿಂದ ಸಂಪತ್ತಿನ ವೃದ್ಧಿ’ ಕಾರ್ಯಾಗಾರ

ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಗಳಿಗೆ ಇನ್ನರ್‌ವೀಲ್ ಕ್ಲಬ್ ಶಿವಮೊಗ್ಗ ಉತ್ತರ ಹಾಗು ಐಸಿಐಸಿಐ ಪ್ರುಡೆನ್ಸಿಯಲ್ ಮ್ಯೂಚ್ಯುಯಲ್ ಫಂಡ್ ಕಂಪನಿ ಸಹಯೋಗದೊಂದಿಗೆ 'ಮ್ಯೂಚ್ಯುಯಲ್ ಫಂಡ್‌ನಿಂದ ಸಂಪತ್ತಿನ ವೃದ್ಧಿ' ಘೋಷಣೆಯೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು.
    ಭದ್ರಾವತಿ, ಡಿ. ೨೨: ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿಗಳಿಗೆ ಇನ್ನರ್‌ವೀಲ್ ಕ್ಲಬ್ ಶಿವಮೊಗ್ಗ ಉತ್ತರ ಹಾಗು ಐಸಿಐಸಿಐ ಪ್ರುಡೆನ್ಸಿಯಲ್ ಮ್ಯೂಚ್ಯುಯಲ್ ಫಂಡ್ ಕಂಪನಿ ಸಹಯೋಗದೊಂದಿಗೆ 'ಮ್ಯೂಚ್ಯುಯಲ್ ಫಂಡ್‌ನಿಂದ ಸಂಪತ್ತಿನ ವೃದ್ಧಿ' ಘೋಷಣೆಯೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು.  
'    ವಿದ್ಯಾರ್ಥಿಗಳಲ್ಲಿ ಉಳಿತಾಯದ ಬಗ್ಗೆ ಅರಿವು ಮೂಡಿಸುವಲ್ಲಿ ಮ್ಯೂಚ್ಯುಯಲ್ ಫಂಡ್‌ನ ಪಾತ್ರ' ವಿಷಯ ಕುರಿತು  ಐಸಿಐಸಿಐ ಪ್ರುಡೆನ್ಸಿಯಲ್ ಮ್ಯೂಚ್ಯುಯಲ್ ಫಂಡ್ ಕಂಪನಿ ಕ್ಲಸ್ಟರ್ ಮ್ಯಾನೇಜರ್ ರೋಹಿತ್‌ಶೆಟ್ಟಿ ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡಿ, ಮ್ಯೂಚ್ಯುಯಲ್ ಫಂಡ್ ಹಾಗು ಅದರ ಬೆಳವಣಿಗೆ ಕುರಿತು ವಿವರಿಸಿದರು. ಮ್ಯೂಚ್ಯುಯಲ್ ಫಂಡ್ ಹೂಡಿಕೆಯಿಂದ ಹೂಡಿಕೆದಾರನು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಂತೆ. ಅಲ್ಲದೆ ಹೂಡಿಕೆಯು ಪ್ರತಿಯೊಬ್ಬರ ಸಂಪತ್ತಿನ ವೃದ್ಧಿಗೆ ದಾರಿಯಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಹೂಡಿಕೆ ಮಾಡಬೇಕೆಂದರು.
ಇಂಜಿನಿಯರ್ ಎಂ.ಎಸ್ ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಳಿತಾಯ ಹಾಗು ಮ್ಯೂಚ್ಯುಯಲ್ ಫಂಡ್‌ನಲ್ಲಿ ತೊಡಗಿಸುವುದರಿಂದ ಆಗುವ ಲಾಭದ ಬಗ್ಗೆ ಯುವ ಜನತೆ ಚಿಂತಿಸಬೇಕು ಹಾಗು ಯೋಜಿತ ಜೀವನವಿದ್ದಲ್ಲಿ ಮಾತ್ರ ನೆಮ್ಮದಿಯ ಜೀವನ ಸಾಗಿಸಬಹುದು ಎಂದರು.
    ಇನ್ನರ್‌ವೀಲ್ ಕ್ಲಬ್ ಶಿವಮೊಗ್ಗ ಉತ್ತರ ಅಧ್ಯಕ್ಷೆ ಜಿ.ಪಿ ಚಂದ್ರಮ್ಮ ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಉಳಿತಾಯ ಮಾಡುವುದರಿಂದ ಆಗುವ ಲಾಭ ಹಾಗು ಭವಿಷ್ಯದಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎನ್ನುವುದನ್ನು ವಿವರಿಸಿದರು.
    ಕಾಲೇಜಿನ ಪ್ರಾಂಶುಪಾಲ ಪ್ರೊ. ಯು.ಎಸ್ ರಾಜಕುಮಾರ್ ಕಾರ್ಯಾಗಾರ ಉದ್ಘಾಟಿಸಿದರು. ಸುಧಾ, ನಳಿನಿ ಐತಾಳ್, ಪ್ರೊ. ಬಿ.ಎಚ್ ವಾಸಪ್ಪ, ನವೀನ್, ಪ್ರವೀಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಉಷಾ ವೆಂಕಟೇಶ್ ಪ್ರಾರ್ಥಿಸಿ, ಸುನೀತ ಸ್ವಾಗತಿಸಿದರು. ವಾರಿಜಾ ಜಗದೀಶ್ ವಂದಿಸಿದರು.

ಎ.ಸಿ ನ್ಯಾಯಾಲಯದ ಆದೇಶಕ್ಕೆ ನಿರ್ಲಕ್ಷ್ಯತನ, ಸೂಕ್ತ ರಕ್ಷಣೆ ನೀಡದ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರನ್ನು ಅಮಾನುತುಗೊಳಿಸಿ

ತಾಲೂಕು ಕಛೇರಿ ಮುಂಭಾರ ದಲಿತ ಸಂಘರ್ಷ ಸಮಿತಿ ವತಿಯಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ

ಭದ್ರಾವತಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು ಎ.ಸಿ ನ್ಯಾಯಾಲಯದ ಆದೇಶ ಕುರಿತು ನಿರ್ಲಕ್ಷ್ಯತನದಿಂದ ವರ್ತಿಸುವ ಜೊತೆಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ದೂರುದಾರರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ತಾಲೂಕು ಕಛೇರಿ ಮುಂಭಾಗ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಭದ್ರಾವತಿ, ಡಿ. ೨೨:  ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು ಎ.ಸಿ ನ್ಯಾಯಾಲಯದ ಆದೇಶ ಕುರಿತು ನಿರ್ಲಕ್ಷ್ಯತನದಿಂದ ವರ್ತಿಸುವ ಜೊತೆಗೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ದೂರುದಾರರಿಗೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಗುರುವಾರ ತಾಲೂಕು ಕಛೇರಿ ಮುಂಭಾಗ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ತಾಲೂಕಿನ ಕಸಬಾ ೨ನೇ ಹೋಬಳಿ, ಬಾಳೇಮಾರನಹಳ್ಳಿ, ಗ್ರಾಮದ ಸರ್ವೆ ನಂ.೩೯ರಲ್ಲಿ ೨ ಎಕರೆ ಮತ್ತು ೩೦ ಗುಂಟೆ ಕರಾಬು ಜಮೀನು ಇದ್ದು, ಈ ಜಮೀನು ತಿಮ್ಮಾ ಭೋವಿ ಬಿನ್ ಬಸವಾ ಭೋವಿ ಇವರ ಹೆಸರಿಗೆ ೧೯೫೮-೬೦ರಲ್ಲಿ ಸಾಗುವಳಿ ಚೀಟಿ ಮಂಜೂರು ಆಗಿದ್ದು, ತಿಮ್ಮಾ ಭೋವಿಯವರು ಮರಣ ಹೊಂದಿದ ನಂತರ ೨೦೧೧ರಲ್ಲಿ ಪಿಟಿಸಿಎಲ್ ಕಾಯ್ದೆಯಂತೆ ಇವರ ಪತ್ನಿ ಗಿಡ್ಡಮ್ಮ ಅವರ ಹೆಸರಿಗೆ ಪೌತಿ ಖಾತೆ ದಾಖಲಾಗಿದೆ. ಗಿಡ್ಡಮ್ಮ ಅವರ ಮರಣದ ನಂತರ ಈ ಸ್ವತ್ತು ಉಚ್ಛ ನ್ಯಾಯಾಲಯ, ಉಪವಿಭಾಗಾಧಿಕಾರಿಗಳ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ಮಲ್ಲಮ್ಮ, ಗಣೇಶಪ್ಪ, ಪಾರ್ವತಮ್ಮ, ಬಾಬು ಭೋವಿ, ಮಂಜಮ್ಮರವರ ಹೆಸರಿಗೆ ಪೌತಿ ಖಾತೆಯ ಆಧಾರದ ಮೇರೆಗೆ ಖಾತೆ ದಾಖಲು ಮಾಡಲು ಅರ್ಹರಾಗಿರುತ್ತಾರೆ. ಈ ನಡುವೆ ಸುಲ್ತಾನ್‌ಮಟ್ಟಿ ದೊಡ್ಡಗೊಪ್ಪೇನಹಳ್ಳಿ ನಿವಾಸಿಗಳಾದ ಗಂಗಮ್ಮ, ಲಕ್ಷ್ಮಮ್ಮ, ಗೋಪಾಲಕೃಷ್ಣ, ಗೌರಮ್ಮ ಮತ್ತು ಸೋಮಶೇಖರ್ ಎಂಬುವರು ಎ.ಸಿ ನ್ಯಾಯಾಲಯಕ್ಕೆ ತಕರಾರು ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪಿಟಿಸಿಎಲ್ ಕಾಯ್ದೆ ಆದೇಶವನ್ನು ಎತ್ತಿ ಹಿಡಿದು ಮೇಲ್ಮನವಿ ವಜಾಗೊಳಿಸಿ ಡಿ.೧೬ರಂದು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.
    ಪ್ರಕರಣ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಗಣೇಶಪ್ಪ ಬಿನ್ ತಿಮ್ಮಾ ಭೋವಿಯವರು ನ್ಯಾಯಾಲಯದ ಆದೇಶ ಪ್ರತಿಯೊಂದಿಗೆ ಪೊಲೀಸ್ ಉಪಾಧೀಕ್ಷಕರು ಮತ್ತು ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿ ಕುಟುಂಬಸ್ಥರಿಗೆ ಅಡಕೆ ತೋಟದಲ್ಲಿ ಕೆಲಸ ಮುಂದುವರೆಸಲು ಸೂಕ್ತ ರಕ್ಷಣೆ ನೀಡುವಂತೆ ಕೋರಿದ್ದರು. ಈ ಹಿನ್ನಲೆಯಲ್ಲಿ ಡಿ.೧೯ರಂದು ಪೊಲೀಸ್ ಅಧಿಕಾರಿಗಳು ಹಾಗು ಕಂದಾಯ ಇಲಾಖೆ ಸರ್ವೆ ಅಧಿಕಾರಿಗಳು ತೋಟಕ್ಕೆ ಆಗಮಿಸಿ ಸರ್ವೆ ಮಾಡಿ ಎದುರುದಾರರಿಗೆ ನ್ಯಾಯಾಲಯದ ಆದೇಶ ತಿಳಿಸಿ ಗಣೇಶಪ್ಪ ಕುಟುಂಬಕ್ಕೆ ಯಾವುದೇ ರೀತಿ ತೊಂದರೆ ನೀಡುವುದಾಗಲಿ, ಅಡಕೆ ತೋಟಕ್ಕೆ ಅನುಮತಿ ಇಲ್ಲದೆ ಪ್ರವೇಶ ಮಾಡುವಂತಿಲ್ಲ ಎಂದು ಸೂಚಿಸಿದ್ದರು.
    ಈ ನಡುವೆ ಪುನಃ ಎದುರುದಾರರು ಅಡಕೆ ತೋಟಕ್ಕೆ ನುಗ್ಗಿ ಅಡಕೆ ಕೀಳುತ್ತಿದ್ದು, ಈ ವಿಚಾರ ತಿಳಿದು ಗಣೇಶಪ್ಪ ಗ್ರಾಮಾಂತರ ಪೊಲೀಸ್ ನಿರೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಆದರೆ ವೃತ್ತ ನಿರೀಕ್ಷಕರು ಎ.ಸಿ ಆದೇಶವನ್ನು ಗೌರವಿಸದೆ ನಿರ್ಲಕ್ಷ್ಯತನ ವರ್ತಿಸಿದ್ದಾರೆ ಎನ್ನಲಾಗಿದೆ.  ಈ ನಡುವೆ ೧೧೨ ಪೊಲೀಸ್ ಅಧಿಕಾರಿಗಳು ಗಣೇಶಪ್ಪನವರ ದೂರಿಗೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಅಡಕೆ ಕೀಳುತ್ತಿದ್ದ ಎದುರುದಾರರು ಪರಾರಿಯಾಗಿದ್ದಾರೆ. ಈ ಬೆಳವಣಿಗೆಗಳ ನಡುವೆ ಎದುರುದಾರರು ಗಣೇಶಪ್ಪ ಹಾಗು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗಣೇಶಪ್ಪ ದೂರು ದಾಖಲಿಸಲು ಮುಂದಾದರೇ ದೂರು ಸ್ವೀಕರಿಸದೆ ನಿರಾಕರಿಸಲಾಗಿದೆ. ಈ ಹಿನ್ನಲೆಯಲ್ಲಿ ದೂರನ್ನು ಪೊಲೀಸ್ ಉಪಾಧೀಕ್ಷಕರಿಗೆ ನೀಡಲಾಯಿತು. ಆದರೆ ಇದುವರೆಗೂ ಪ್ರಕರಣ ದಾಖಲಾಗಿರುವುದಿಲ್ಲ ಎಂದು ಆರೋಪಿಸಲಾಯಿತು.
    ಎ.ಸಿ ನ್ಯಾಯಾಲಯದ ಆದೇಶ ನಿರ್ಲಕ್ಷಿಸಿ, ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಗ್ರಾಮಾಂತರ ಪೊಲೀಸ್ ನಿರೀಕ್ಷಕರನ್ನು ತಕ್ಷಣ ಅಮಾನತುಗೊಳಿಸಬೇಕು. ಅಲ್ಲದೆ ಇವರು ಅಕ್ರಮವಾಗಿ ಮರಳಿನ ದಂಧೆಯಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿಗಳು ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಇವರ ವಿರುದ್ಧ ಜಿಲ್ಲಾ ರಕ್ಷಣಾಧಿಕಾರಿಗಳು ಹಾಗು ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ಗಣೇಶಪ್ಪನವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕೆಂದು ಆಗ್ರಹಿಸಲಾಯಿತು.
    ಡಿಎಸ್‌ಎಸ್ ಜಿಲ್ಲಾ ಸಂಯೋಜಕ ಆರ್. ಸುರೇಶ್, ಕರ್ನಾಟಕ ರಾಜ್ಯ ಮಾದಿಗ ಸಮಾಜ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ವಿ. ವಿನೋದ್, ಡಿಎಸ್‌ಎಸ್ ಭೀಮಾವಾದ ಜಿಲ್ಲಾಧ್ಯಕ್ಷ ಕುಬೇಂದ್ರಪ್ಪ, ಡಿಎಸ್‌ಎಸ್ ಅಂಬೇಡ್ಕರ್‌ವಾದ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಜಯ ಕರ್ನಾಟಕ ಜಿಲ್ಲಾ ಕಾರ್ಯಾಧ್ಯಕ್ಷ ಎಂ. ಮುಕುಂದನ್, ಕರ್ನಾಟಕ ಭೂ ಸ್ವಾಧೀನ ರೈತ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಪುಟ್ಟಪ್ಪ, ಭಾರತೀಯ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಪ್ಪ, ವೆಂಕಟೇಶ್ ಹಾಗು ಗಣೇಶಪ್ಪ ಕುಟುಂಬಸ್ಥರು ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

Wednesday, December 21, 2022

ಪರಿಸರ ಕಾಳಜಿ ಹೊಂದಿ, ಬದುಕಲು ಯೋಗ್ಯವನ್ನಾಗಿಸಿ : ಬಿ.ಎಲ್ ಚಂದ್ವಾನಿ

ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಆಚರಿಸಲಾಗಿದ್ದ ಪರಿಸರ ಮಾಸಾಚರಣೆ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಮಾತಮಾಡಿದರು.
    ಭದ್ರಾವತಿ, ಡಿ. ೨೧ : ನಾವು ಪರಿಸರ ರಕ್ಷಣೆಯಲ್ಲಿ ಸಾಮೂಹಿಕವಾಗಿ ಮತ್ತು ವೈಯುಕ್ತಿಕವಾಗಿ ಕೊಡುಗೆ ನೀಡಬೇಕೆಂದು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹೇಳಿದರು.
    ಅವರು ಕಾರ್ಖಾನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಕೆಲಸದಲ್ಲೂ ಪರಿಸರದ ಕಾಳಜಿ ವಹಿಸುವ ಜೊತೆಗೆ ಬದುಕಲು ಯೋಗ್ಯವನ್ನಾಗಿಸಬೇಕೆಂದರು.
    ಕಾರ್ಖಾನೆಯ ಹಿರಿಯ ಅಧಿಕಾರಿಗಳು ಪರಿಸರ ನೀತಿ ಹಾಗೂ ಪರಿಸರ ಪ್ರತಿಜ್ಞೆಗಳನ್ನು ಭೋದಿಸಿದರು.  ಮಾಸಾಚರಣೆ ಅಂಗವಾಗಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ, ಪರಿಸರ ರಸಪ್ರಶ್ನೆ ಮತ್ತು  ಚಿತ್ರಬರೆಯುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ಕಾರ್ಖಾನೆಯ ಅಧಿಕಾರಿಗಳು, ಕಾಯಂ ಮತ್ತು ಗುತ್ತಿಗೆ ಕಾರ್ಮಿಕರು ಹಾಗು ಶಾಲಾ ಮಕ್ಕಳು ಭಾಗವಹಿಸಿದ್ದರು.
    ಕಾರ್ಖಾನೆಯ ಭದ್ರಾ ಅತಿಥಿಗೃಹದಲ್ಲಿ ಮಾಸಾಚರಣೆಯ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಖಾನೆಯ ಮಹಾಪ್ರಬಂಧಕಿ (ಹಣಕಾಸು ಮತ್ತು ವಿತ್ತ) ಶೋಭ ಶಿವಶಂಕರನ್, ಇಸ್ಪಾತ್ ಮಹಿಳಾ ಸಮಾಜದ ಅಧ್ಯಕ್ಷೆ ದುಲಾರಿ ಚಂದ್ವಾನಿ, ಶಿವಮೊಗ್ಗ ಪ್ರಾದೇಶಿಕ ಕಛೇರಿ ಪರಿಸರ ಅಧಿಕಾರಿ(ಪ್ರಭಾರಿ) ಕೆ. ಶಿಲ್ಪಾ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
    ಹಿರಿಯ ಪ್ರಬಂಧಕ(ಹಣಕಾಸು) ಉನ್ನಿಕೃಷ್ಣನ್ ಪ್ರಾರ್ಥಿಸಿದರು. ಮಹಾಪ್ರಬಂಧಕರು (ಈ.ಎಂ.ಡಿ) ಡಿ. ಲೋಕೇಶ್ವರ ಸ್ವಾಗತಿಸಿ, ಆರ್. ಸತೀಶ್ ವಂದಿಸಿದರು.

ಜಮೀನಿನ ಹುಲ್ಲಿನ ಬಣವೆಯಲ್ಲಿ ಬೆಂಕಿ : ಲಕ್ಷಾಂತರ ರು. ನಷ್ಟ

ಹುಲ್ಲಿನ ಬಣವೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಡೆದಿದೆ
    ಭದ್ರಾವತಿ, ಡಿ. ೨೧ : ಹುಲ್ಲಿನ ಬಣವೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರು. ನಷ್ಟ ಉಂಟಾಗಿರುವ ಘಟನೆ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ನಡೆದಿದೆ.
    ಗ್ರಾಮದ ನಾಸೀರ್ ಎಂಬುವರ ಜಮೀನಿನ ಕಣದಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನ ನಷ್ಟ ತಪ್ಪಿದಂತಾಗಿದೆ. ಸುಮಾರು ೬ ಲಕ್ಷ ರು. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ದೀಪ ನಮಸ್ಕಾರ

ಭದ್ರಾವತಿ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಭಜನಾ ಮಂಡಳಿವತಿಯಿಂದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ದೀಪ ನಮಸ್ಕಾರ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಡಿ. ೨೧: ನಗರದ ಹುತ್ತಾಕಾಲೋನಿ ಶ್ರೀ ವೀರಾಂಜನೇಯ ಭಜನಾ ಮಂಡಳಿವತಿಯಿಂದ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ದೀಪ ನಮಸ್ಕಾರ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಸಂಗೀತ ಶಿಕ್ಷಕಿ ಡಿ.ಎಸ್.ಗಾಯಿತ್ರಿ ರವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಯುವ ಮುಖಂಡ ಬಿ.ಎಸ್ ಗಣೇಶ್ ಅಥಿತಿಗಳಾಗಿ ಆಗಮಿಸಿದ್ದರು.