Saturday, January 21, 2023

903ನೇ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ

ಭದ್ರಾವತಿ,ಜ.21:  ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗು ಗಂಗಾಮತಸ್ಥರ ಸಂಘದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ  ಶನಿವಾರ 903ನೇ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು.
     ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಕಾರ್ಯಕ್ರಮ ಉದ್ಘಾಟಿಸಿದರು. ಗಂಗಾಮತಸ್ಥರ ಸಂಘದ ಅಧ್ಯಕ್ಷ ಎಚ್.ಎ ಪರಮೇಶ್ವರಪ್ಪ ಆದ್ಯಕ್ಷತೆವಹಿಸಿದ್ದರು. 
    ತಹಸೀಲ್ದಾರ್  ಆರ್. ಪ್ರದೀಪ್, ಉಪ ತಹಸೀಲ್ದಾರ್  ಮಂಜನಾಯ್ಕ, ಅರಸು, ಶಿರಸ್ತೇದಾರ್ ರಾಧಾಕೃಷ್ಣಭಟ್, ಗಂಗಾಮತಸ್ಥರ ಸಂಘದ ಉಪಾಧ್ಯಕ್ಷರಾದ ಕೆ.ಎಂ ಅಣ್ಣಯ್ಯ, ಎಸ್. ಶಿವಕುಮಾರ್,  ಪ್ರಧಾನ ಕಾರ್ಯದರ್ಶಿ ಬಿ.ಆರ್ ಯಲ್ಲಪ್ಪ, ಕಾರ್ಯದರ್ಶಿ ಎಚ್.ಸಿ ಬೇಲೂರಪ್ಪ,   ಖಜಾಂಚಿ ವೈ.ಆರ್ ಮಂಜುನಾಥ್ ಯರೇಹಳ್ಳಿ, ಸಂಘಟನಾ ಕಾರ್ಯದರ್ಶಿಗಳಾದ ನಾಗರತ್ನ ಮತ್ತು ಮಂಜುಳಾ ಸೇರಿದಂತೆ ನಿರ್ದೇಶಕರು ಹಾಗು ತಾಲೂಕು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜ.22ರಂದು ನಗರಕ್ಕೆ ಎಐಸಿಸಿ ಕಾರ್ಯದರ್ಶಿ ಆಗಮನ


ಭದ್ರಾವತಿ, ಜ. 21: ಎಐಸಿಸಿ ಕಾರ್ಯದರ್ಶಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ವೀಕ್ಷಕ ಡಾ. ಸಿರಿ ವೆಳ್ಳಾಪ್ರಸಾದ್ ಜ.22ರಂದು ನವ ದೆಹಲಿಯಿಂದ ನಗರಕ್ಕೆ ಆಗಮಿಸಲಿದ್ದಾರೆ.
     ಈ ಸಂಬಂಧ ಬೆಳಗ್ಗೆ 10.30 ಕ್ಕೆ ಶಾಸಕರ ಗೃಹ ಕಚೇರಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ ಪಕ್ಷದ ಎಲ್ಲಾ ಹಾಲಿ ಮತ್ತು ಮಾಜಿ ಚುನಾಯಿತ ಜನ ಪ್ರತಿನಿಧಿಗಳು, ಪಕ್ಷದ ನಗರ ಹಾಗೂ ಗ್ರಾಮಾಂತರ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಕಾಂಗ್ರೆಸ್   ಮತ್ತು ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಎಲ್ಲಾ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.

ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಲ್ಲಿ ಐತಿಹಾಸಿಕ ಸಾಧನೆ : ಆರ್. ವೇಣುಗೋಪಾಲ್

ಆರ್. ವೇಣುಗೋಪಾಲ್ 
    ಭದ್ರಾವತಿ, ಜ. ೨೧:   ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಳೆದ ೬೫ ವರ್ಷಗಳಿಂದ ಹಿಂದುಳಿದ ವರ್ಗ ಹಾಗೂ ದಲಿತ ವರ್ಗದವರ ಸಹಕಾರದಿಂದ ಪ್ರಬಲ ಮೂರು ಕೋಮಿನವರು ಶಾಸಕರಾಗಿ ಆಯ್ಕೆಯಾಗುತ್ತಾ ಬರುತ್ತಿದ್ದು,  ವಿಧಾನಸಭಾ ಕ್ಷೇತ್ರದ ಶೇಕಡ ೭೫ಕ್ಕೂ ಅಧಿಕ ಪ್ರಜ್ಞಾವಂತ ಮತದಾರರು ಈ ಬಾರಿ ನಡೆಯಲಿರುವ  ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ  ಯಾವುದೇ ಅಮಿಷಕ್ಕೆ ಒಳಗಾಗದೆ ಅಬ್ಬರದ ಪ್ರಚಾರ, ಭಾಷಣಕ್ಕೆ ಮನ್ನಣೆ ನೀಡದೇ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಕಾಳಜಿ ಇರುವ ಇತರೆ ಜನಾಂಗದ ಹೊಸ ಪ್ರತಿಭೆಯನ್ನು ಆಯ್ಕೆ ಮಾಡಲು ತೀರ್ಮಾನಿಸಿರುವುದು ತಿಳಿದು ಬಂದಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಯಾಗಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮನವಿ ಮಾಡಿದ್ದಾರೆ.
    ಅವರು  ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ, ಮುಂಬರುವ ೨೦೨೩ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ  ದಲಿತ ವರ್ಗದ ಅಭ್ಯರ್ಥಿ ಗೆಲ್ಲಬೇಕೆಂಬುದು ನನ್ನ ಅಭಿಲಾಷೆಯಾಗಿದ್ದು, ಈ ಹಿನ್ನೆಲೆಯಿಂದ ಹಿಂದುಳಿದ ವಿಶ್ವಕರ್ಮ ಜನಾಂಗಕ್ಕೆ ಸೇರಿದ ನನಗೆ ಅವಕಾಶ ನೀಡಬೇಕೆಂದರು.
  ಸುಮಾರು ೨ ಲಕ್ಷಕ್ಕೂ ಅಧಿಕ ಮತದಾರರಿದ್ದು, ಇದರಲ್ಲಿ ಸುಮಾರು ಒಂದು ಲಕ್ಷದ ಐವತ್ತು ಸಾವಿರಕ್ಕೂ ಅಧಿಕ ಹಿಂದುಳಿದ ವರ್ಗ, ದಲಿತ, ಅಲ್ಪಸಂಖ್ಯಾತ ಮತದಾರರು ಒಳಗೊಂಡಿದ್ದಾರೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕಳೆದ  ಸುಮಾರು ೪೫ ವರ್ಷಗಳಿಂದ ನಾನು ಎಲೆಮರೆಯ ಕಾಯಿಯಂತೆ  ಶ್ರಮಿಸುತ್ತಿದ್ದು,  ನನ್ನನ್ನು ಬೆಂಬಲಿಸುವ ವಿಶ್ವಾಸ ಹೊಂದಿದ್ದೇನೆ ಎಂದರು.
    ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ನನಗೆ  ಲಕ್ಷಾಂತರ ಜನರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟಿರುವ ಹೆಮ್ಮೆ ಇದೆ. ನಗರಸಭೆಯಲ್ಲಿ ೨ ಬಾರಿ ಪಕ್ಷೇತರ  ಸದಸ್ಯನಾಗಿ, ಒಂದು ಬಾರಿ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ, ಒಮ್ಮೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅಲ್ಲದೆ ವಿವಿಧ ಸಂಘಸಂಸ್ಥೆಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಶಿವಮೊಗ್ಗ ಜಿಲ್ಲಾ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಹಾಗೂ ಎರಡು ಬಾರಿ ಉಪಚುನಾವಣೆಯಲ್ಲಿ ಬಿ.ಜೆ.ಪಿ ಪರವಾಗಿ ಶಕ್ತಿ ಮೀರಿ ಶ್ರಮಿಸಿರುತ್ತೇನೆ. ಪದವೀದರ ಹಾಗೂ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ನಡೆದ ವಿಧಾನಪರಿಷತ್ ಶಾಸಕರ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಹಾಗೂ ಡಿ.ಎಸ್ ಅರುಣ್ ರವರ ಪರವಾಗಿ ಕೆಲಸ ಮಾಡಿರುತ್ತೇನೆ. ಈ ಹಿನ್ನಲೆಯಲ್ಲಿ ನನಗೆ ಸ್ಪರ್ಧಿಸಲು ಅವಕಾಶ ನೀಡಿದ್ದಲ್ಲಿ ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡುವ ವಿಶ್ವಾಸವಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಯೂನಸ್ ಬೇಗ, ಮಜರ್ ಉಲ್ಲಾ, ಎಸ್.ಎ ಜೇವಿಯರ್, ಪ್ರಸನ್ನ ಹಾಗು ಮಹಬೂಬ್ ಬಾಷ ಉಪಸ್ಥಿತರಿದ್ದರು.

‎ ಬಿಜೆಪಿಯಿಂದ ಮಂಗೋಟೆ ರುದ್ರೇಶ್ ಸ್ಪರ್ಧಿಸಲು ಅವಕಾಶ ನೀಡಿ : ಬಿಎಸ್ ವೈಗೆ ಮನವಿ

   ಭದ್ರಾವತಿ, ಜ. 21: ನಗರದ ಬಿಜೆಪಿ ಯುವ ಮುಖಂಡ ನ್ಯಾಯವಾದಿ, ಮಂಗೋಟೆ ರುದ್ರೇಶ್ ಈ ಬಾರಿ ವಿಧಾನಸಭಾ ಚುನಾವಣೆಗೆ ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಪಕ್ಷದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಅಭಿಮಾನಿಗಳು  ಹಿತೈಷಿಗಳು ಮನವಿ ಮಾಡಿದ್ದಾರೆ. 
   ವಿವಿಧ ಸಮಾಜಗಳ ಸುಮಾರು ನೂರಕ್ಕೂ ಹೆಚ್ಚು ಅಭಿಮಾನಿಗಳು,  ಹಿತೈಷಿಗಳು ಮನವಿ ಮಾಡಿ,  ಮಂಗೋಟೆ ರುದ್ರೇಶ್  ಈ ಬಾರಿ ಪಕ್ಷದಿಂದ  ಸ್ಪರ್ಧಿಸಿದ್ದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ. ಈಗಾಗಲೇ  ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಒಂದು ಬಾರಿ ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ.
     ಸಚಿವ ಬೈರತಿ ಬಸವರಾಜ್ ಸಂಸದ ಬಿ ವೈ ರಾಘವೇಂದ್ರ ಮುಖಂಡರಾದ ಸಿದ್ದಲಿಂಗಯ್ಯ, ಜ್ಯೋತಿ ಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, January 20, 2023

ಪತಿಯಿಂದ ಪತ್ನಿಮೇಲೆ ಆಸಿಡ್ ದಾಳಿ

ಪತಿಯಿಂದ ಪತ್ನಿಮೇಲೆ ಆಸಿಡ್ ದಾಳಿ

    ಭದ್ರಾವತಿ, ಜ. ೨೦ : ಕುಡಿದು ಬಂದ ಗಂಡನೋರ್ವ ಹೆಂಡತಿ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ತಾಲೂಕಿನ ಭದ್ರಾ ರಿವರ್ ಪ್ರಾಜೆಕ್ಟ್(ಬಿಆರ್‌ಪಿ)ನಲ್ಲಿ ಗುರುವಾರ ನಡೆದಿದೆ.
    ಬಿಆರ್‌ಪಿ ನಿವಾಸಿ ರವಿ ಆಸಿಡ್ ದಾಳಿ ನಡೆಸಿದ್ದು, ಗಾಯಗೊಂಡಿರುವ ಪತ್ನಿಯನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ರವಿ ಇದೆ ಗ್ರಾಮದ ಯುವತಿಯನ್ನು ಸುಮಾರು ೧೨ ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.
    ಸುಮಾರು ೪-೫ ವರ್ಷಗಳಿಂದ ಗಂಡ-ಹೆಂಡತಿ ಇಬ್ಬರು ಜಗಳ ಮಾಡಿಕೊಂಡು ಬೇರೆ ಬೇರೆ ಇದ್ದು, ರವಿ ಬಿಆರ್‌ಪಿ ಬಿಟ್ಟು ತನ್ನ ಮಗನೊಂದಿಗೆ ತುಮಕೂರಿನಲ್ಲಿ ವಾಸಿಸುತ್ತಿದ್ದನು. ಈ ನಡುವೆ ಈತನ ಪತ್ನಿ ಸಹ ತನ್ನ ಇಬ್ಬರು  ಹೆಣ್ಣು ಮಕ್ಕಳನ್ನು ಬಿಆರ್‌ಪಿ ಶಾಂತಿನಗರದಲ್ಲಿರುವ ತನ್ನ ತಾಯಿ ಮನೆಯಲ್ಲಿ ಬಿಟ್ಟು ಜೀವನೋಪಾಯಕ್ಕಾಗಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಸೇರಿಕೊಂಡಿದ್ದು, ಮಕ್ಕಳನ್ನು ನೋಡಿಕೊಂಡು ಹೋಗಲು ಆಗಾಗ ಪತ್ನಿ ತನ್ನ ತಾಯಿ ಮನೆಗೆ ಬಂದು ಹೋಗುತ್ತಿದ್ದಳು.  
    ಕಳೆದ ೨ ದಿನಗಳ ಹಿಂದೆ ತನ್ನ ಮಗನೊಂದಿಗೆ ಬಿಆರ್‌ಪಿಗೆ ಬಂದಿದ್ದ ರವಿ ಪತ್ನಿಯ ತವರು ಮನೆಗೆ ಹೋಗಿದ್ದು, ಈ ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿ ಜಗಳನಡೆಸಿ ಆಸಿಡ್ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಗಾಯಗೊಂಡಿರುವ ಪತ್ನಿಯನ್ನು ತಕ್ಷಣ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗೌರಿ ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರವಿ ಪತ್ತೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.

೨ನೇ ದಿನಕ್ಕೆ ಕಾಲಿಟ್ಟ ಗುತ್ತಿಗೆ ಕಾರ್ಮಿಕರ ಹೋರಾಟ : ಕಾಂಗ್ರೆಸ್ ಸಂಸದರ ಬೆಂಬಲ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ  ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಶುಕ್ರವಾರ ೨ನೇ ದಿನಕ್ಕೆ ಕಾಲಿಟ್ಟಿತು.
    ಭದ್ರಾವತಿ, ಜ. ೨೦ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ  ಗುತ್ತಿಗೆ ಕಾರ್ಮಿಕರ ಸಂಘ ಕಾರ್ಖಾನೆ ಮುಂಭಾಗ ಕೈಗೊಂಡಿರುವ ಅನಿರ್ಧಿಷ್ಟಾವಧಿ ಹೋರಾಟ ಶುಕ್ರವಾರ ೨ನೇ ದಿನಕ್ಕೆ ಕಾಲಿಟ್ಟಿತು.
    ಪ್ರಮುಖರು ಮಾತನಾಡಿ, ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ನಿರಂತರ ಹೋರಾಟ ನಡೆಯಲಿದೆ. ಕಾರ್ಖಾನೆಯನ್ನು ಯಾವುದೇ ಮುಚ್ಚಲು ಬಿಡುವುದಿಲ್ಲ. ನಮ್ಮ ಹೋರಾಟಕ್ಕೆ ಸಂಸದ ಡಿ.ಕೆ ಸುರೇಶ್, ರಾಜ್ಯಸಭಾ ಸದಸ್ಯರಾದ ಸೈಯದ್ ನಾಸಿರ್ ಹುಸೇನ್, ಎಲ್. ಹನುಮಂತಯ್ಯ, ಜಿ.ಸಿ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಬೆಂಬಲ ಸೂಚಿಸಿದ್ದು, ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.


    ಗುತ್ತಿಗೆ ಕಾರ್ಮಿಕ ಹೋರಾಟಕ್ಕೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಸಂಪೂರ್ಣವಾಗಿ ಬೆಂಬಲ ಸೂಚಿಸಿದ್ದು, ಶುಕ್ರವಾರ ಹೋರಾಟ ಸ್ಥಳಕ್ಕೆ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಭೇಟಿ ನೀಡಿ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಮುಚ್ಚುವ ಆದೇಶ ಹಿಂಪಡೆಯುವಂತೆ ಆಗ್ರಹಿಸಿದರು.

ವಿಐಎಸ್‌ಎಲ್ ಮುಚ್ಚದಿರುವಂತೆ ಪ್ರಧಾನ ಮಂತ್ರಿಗಳಿಗೆ ಒಕ್ಕಲಿಗರ ಸಂಘ ಮನವಿ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ತಾಲೂಕು ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿತು.
    ಭದ್ರಾವತಿ, ಜ. ೨೦: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ತಾಲೂಕು ಒಕ್ಕಲಿಗರ ಸಂಘ ತೀವ್ರವಾಗಿ ಖಂಡಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೈಸೂರು ಮಹಾರಾಜರ ಮತ್ತು ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಹೆಸರು ಉಳಿಸಲು ಈ ಕಾರ್ಖಾನೆಯನ್ನು ಮುಚ್ಚದಂತೆ ತಡೆಯಬೇಕೆಂದು ಅಧ್ಯಕ್ಷ ಎ.ಟಿ.ರವಿ ಮನವಿ ಮಾಡಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆಯನ್ನು ಅಭಿವೃದ್ದಿಪಡಿಸಿ ಕಾರ್ಮಿಕರನ್ನು ರಕ್ಷಿಸುವಂತೆ ಕೇಂದ್ರ ಸರ್ಕಾರದ ಉಕ್ಕು ಪ್ರಾಧಿಕಾರದ ಸಹಭಾಗಿತ್ವಕ್ಕೆ ಅಂದಿನ ಪ್ರಧಾನಿ ದಿವಂಗತ ರಾಜೀವ್‌ಗಾಂಧಿರವರಿಗೆ ರಾಜ್ಯ ಸರ್ಕಾರ ಹಸ್ತಾಂತರಿಸಿತ್ತು. ಆದರೆ ಕೇಂದ್ರ ಸರ್ಕಾರ ಬಂಡವಾಳ ತೊಡಗಿಸಿ ಅಭಿವೃದ್ದಿಪಡಿಸದೆ ನಿರ್ಲಕ್ಷ್ಯವಹಿಸಿತ್ತು. ನಂತರ ಕಾರ್ಖಾನೆಗೆ ಕಾಯಕಲ್ಪ ನೀಡಲು ಪ್ರಧಾನಿಯಾಗಿದ್ದ ಎಚ್.ಡಿ ದೇವೇಗೌಡರು ಕಾರ್ಖಾನೆಯನ್ನು ಸಂಪೂರ್ಣವಾಗಿ ಉಕ್ಕು ಪ್ರಾಧಿಕಾರಕ್ಕೆ ಸೇರ್ಪಡೆಗೊಳಿಸಿ ಜೀವ ತುಂಬಿದ್ದರು ಎಂದರು.
    ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಸ್ತಿತ್ವಕ್ಕೆ ಬಂದ ನೀತಿ ಆಯೋಗ ಕೈಗೊಂಡ ತಪ್ಪು ನಿರ್ಧಾರಗಳ ಪರಿಣಾಮ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಮುಂದಾಗಿ ಟೆಂಡರ್ ಪ್ರಕಟಿಸಿದ್ದು, ನಂತರದ ಬೆಳೆವಣಿಗೆಯಲ್ಲಿ ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಬಂಡವಾಳಶಾಹಿಗಳು ಆಸಕ್ತಿ ತೋರಿಸದ ಕಾರಣ ಇದೀಗ ಕಾರ್ಖಾನೆಯನ್ನು ಮುಚ್ಚಲು ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
    ಉಕ್ಕು ಪ್ರಾಧಿಕಾರ ಕಾರ್ಖಾನೆಯನ್ನು ಮುಚ್ಚಲು ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಕಾರ್ಖಾನೆಯನ್ನು ನಂಬಿ ಬದುಕುತ್ತಿರುವ ಕಾರ್ಮಿಕರು, ಅವಲಂಬಿತರು, ಗುತ್ತಿಗೆ ಕಾರ್ಮಿಕರು ಕಂಗಾಲಾಗಿದ್ದಾರೆ. ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟು ಕಾರ್ಮಿಕರು ಬೀದಿಪಾಲಾಗಿದ್ದಾರೆ. ಮನೆಗಳು ಪಾಳುಬಿದ್ದು ಹಾಳಾಗಿ, ಸ್ಮಶಾನ ಮೌನ ಆವರಿಸಿದೆ. ಇದೀಗ ವಿಐಎಸ್‌ಎಲ್ ಮುಚ್ಚಿದರೆ ಇಡೀ ಊರು ಪಾಳುಬಿದ್ದ ಕೊಂಪೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
    ನಗರದ ಅನೇಕ ಮುಖಂಡರು ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಿ ಕಾರ್ಖಾನೆ ಮುಚ್ಚುವುದನ್ನು ತಡೆಯುವಂತೆ ಕೋರಲಾಗಿದೆ. ಇದೆ ರೀತಿ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಮೂಲಕ ಸಹ  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದರು.
    ಗುತ್ತಿಗೆ ಕಾರ್ಮಿಕರ ಧರಣಿಗೆ ಬೆಂಬಲ:
    ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಚ್ಚುವ ವಿಚಾರ ತಿಳಿದು ಆತಂಕಗೊಂಡು ಕಾರ್ಖಾನೆ ಮುಂಭಾಗದಲ್ಲಿ ಧರಣಿ ಕೈಗೊಂಡಿದ್ದಾರೆ. ಅವರ ಹೋರಾಟಕ್ಕೆ ತಾಲೂಕು ಒಕ್ಕಲಿಗರ ಸಂಘ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸುತ್ತದೆ. ಅಗತ್ಯ ಬಿದ್ದರೆ ಭದ್ರಾವತಿ ಬಂದ್ ಸಹ ನಡೆಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಸಂಘದ ಪದಾಧಿಕಾರಿಗಳು, ಮುಖಂಡರು, ಪೋಷಕರಾದ ರಾಜು, ರಾಧಾ, ಉಮೇಶ್, ಕಾರ್ತಿಕ್, ಗೊಂದಿ ಜಯರಾಂ, ಚೆನ್ನಗಪ್ಪ, ಎಪಿಎಂಸಿ ಜಯರಾಂ, ಕುಮಾರ್, ಎಸ್.ರಾಜು, ಶಾಂತರಾಜ್, ಅಣ್ಣೇಗೌಡ, ರಾಮೇಗೌಡ, ಮಂಜುನಾಥ್, ನಾಗರಾಜ್, ಶ್ರೀಧರ್, ಕುಂಬ್ರಿ ಚಂದ್ರಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.