Thursday, July 13, 2023

ಸಾಲಬಾಧೆಯಿಂದ ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ

ಭದ್ರಾವತಿಯಲ್ಲಿ ಸಾಲಬಾಧೆಯಿಂದ ಮಧು-ಮೋನಿಕಾ ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
    ಭದ್ರಾವತಿ, ಜು. ೧೩ : ಸಾಲಬಾಧೆಯಿಂದ ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
    ಮಧು(೨೭) ಮತ್ತು ಮೋನಿಕಾ(೨೧) ಆತ್ಮಹತ್ಯೆ ಮಾಡಿಕೊಂಡಿದ್ದು, ಇಬ್ಬರು ಗಾರೆ ಕೆಲಸ ಮಾಡಿಕೊಂಡಿಕೊಂಡು ಜೀವನ ನಿರ್ವಹಿಸುತ್ತಿದ್ದರು. ಬೈತುಂಬ ಸಾಲ ಮಾಡಿಕೊಂಡಿದ್ದು, ಸಾಲಬಾಧೆ ಹೆಚ್ಚಾದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
    ಇಬ್ಬರು ಮನೆಯಿಂದ ಹೊರಬಾರದ ಹಿನ್ನಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ಅನುಮಾನ ಬಂದಿದ್ದು, ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.೧೪ರಂದು ಪದಗ್ರಹಣ ಸಮಾರಂಭ

    ಭದ್ರಾವತಿ, ಜು. ೧೩ : ಲಯನ್ಸ್ಅಂತರಾಷ್ಟ್ರೀಯ ಸಂಸ್ಥೆ, ಲಯನ್ಸ್ಕ್ಲಬ್ಸುಗರ್ಟೌನ್ನೂತನ ಪದಾಧಿಕಾರಿಗಳ ಪದಗ್ರಹಣ ಜು.೧೪ರಂದು ಸಂಜೆ ಗಂಟೆಗೆ ನ್ಯೂಟೌನ್ಜೆಟಿಎಸ್ಶಾಲೆ ಸಮೀಪದಲ್ಲಿರುವ ಲಯನ್ಸ್ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ ನಡೆಯಲಿದೆ.

          ಲಯನ್ಸ್ಎಂಜೆಎಫ್ರಾಜೀವ್ಕೋಟ್ಯಾನ್ಪದಗ್ರಹಣ ಬೋಧಿಸಲಿದ್ದು, ಆರ್.‌ ಮದಿಯಲಗನ್ಅಧ್ಯಕ್ಷತೆ ವಹಿಸಲಿದ್ದಾರೆ. ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಟಿ. ಶ್ರೀನಿವಾಸ್, ಕಾರ್ಯದರ್ಶಿಯಾಗಿ ಮಂಜುನಾಥ್ಹಾಗು ಖಜಾಂಚಿಯಾಗಿ ಎಚ್.ಡಿ ಕೃಷ್ಣ ಪದಗ್ರಹಣ ಸ್ವೀಕರಿಸಲಿದ್ದಾರೆ.

Tuesday, July 11, 2023

ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಮಣಿಪುರದಲ್ಲಿ ಆಶಾಂತಿ ನಿಯಂತ್ರಿಸಲಿ

ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿಗಳಿಗೆ ಮನವಿ

ಮಣಿಪುರ ರಾಜ್ಯದಲ್ಲಿ ಉಂಟಾಗಿರುವ ಆಶಾಂತಿ ವಾತಾವರಣ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ಭದ್ರಾವತಿಯಲ್ಲಿ ಅಖಿಲ ಕರ್ನಾಟಕ ಯುನೈಟೆಡ್‌ ಕ್ರಿಶ್ಚಿಯನ್‌ ಫೋರಂ ಫಾರ್‌ ಹ್ಯೂಮನ್‌ ರೈಟ್ಸ್‌ ವತಿಯಿಂದ ತಹಸೀಲ್ದಾರ್‌ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜು. ೧೨: ಮಣಿಪುರ ರಾಜ್ಯದಲ್ಲಿ ಉಂಟಾಗಿರುವ ಆಶಾಂತಿ ವಾತಾವರಣ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿ ಅಖಿಲ ಕರ್ನಾಟಕ ಯುನೈಟೆಡ್‌ ಕ್ರಿಶ್ಚಿಯನ್‌ ಫೋರಂ ಫಾರ್‌ ಹ್ಯೂಮನ್‌ ರೈಟ್ಸ್‌ ವತಿಯಿಂದ ತಹಸೀಲ್ದಾರ್‌ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
    ಮಣಿಪುರ ರಾಜ್ಯದಲ್ಲಿ ಅಮಾಯಕ ಜನರ ಮೇಲೆ ನಿರಂತರ ದಾಳಿ, ದೌರ್ಜನ್ಯ, ಮನೆಗಳಿಗೆ ಬೆಂಕಿ ಹಚ್ಚುವಿಕೆ, ಚರ್ಚ್‌ಗಳ  ನಾಶ ಹಾಗೂ ಸಾವಿರಾರು ಜನರು  ಮನೆ, ಮಠ, ಆಸ್ತಿ ಕಳೆದುಕೊಂಡು ನಿರಾಶ್ರಿತರಾಗಿ ವಲಸೆ ಹೋಗುವಂತಹ ಘಟನೆ  ಸುಮಾರು ಎರಡು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವುದು ದೇಶದಾದ್ಯಂತ ಕಳವಳಕ್ಕೆ  ಕಾರಣವಾಗಿದೆ. ಇಡೀ ಮಣಿಪುರ ರಾಜ್ಯ ಅಶಾಂತಿಯ ಬೀಡಾಗಿದೆ ಎಂದು ಪ್ರತಿಭಟನಾ ನಿರಂತರು ಆತಂಕ ವ್ಯಕ್ತಪಡಿಸಿದರು.
    ಮಾನವ ಹಕ್ಕುಗಳು ನಿರಂತರ ಉಲ್ಲಂಘನೆಯಾಗುತ್ತಿದ್ದು, ಇದನ್ನು ಗಮನಿಸಿ ತಕ್ಷಣ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವುದರ ಮೂಲಕ ನಿಯಂತ್ರಿಸಬೇಕು.   ಮನೆ, ಮಠ, ಆಸ್ತಿ ಕಳೆದುಕೊಂಡು ನಷ್ಟಕ್ಕೆ ಒಳಗಾದ ಅಮಾಯಕರಿಗೆ ಅಗತ್ಯವಾದ ಆರ್ಥಿಕ ಹಾಗೂ ಇತರೆ ಪರಿಹಾರ ನೀಡಿ ಅವರ ಬದುಕನ್ನು ರೂಪಿಸಿಕೊಡಲು ಮುಂದಾಗಬೇಕು.  ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
    ಪ್ರಮುಖರಾದ ಪಾದರ್‌ ಲಾನ್ಸಿ ಡಿಸೋಜ, ಅಂತೋಣಿ ವಿಲ್ಸನ್‌, ಟಿ.ಎಸ್‌ ಪ್ರಭುದಾಸ್‌, ಸ್ಟೀವನ್‌ ಡೇಸಾ, ಡಾ. ದೇವನೇಸನ್‌ ಸ್ಯಾಮ್ಯುಯೆಲ್‌, ಜೋಸ್‌ ಜಾರ್ಜ್‌, ಸೆಲ್ವರಾಜ್‌, ಜಾರ್ಜ್‌, ವೆಸ್ಲಿ ವಿಲ್‌ಹೆಲ್ಮ್‌ ಕರ್ಕಡ, ನಂದಕುಮಾರ್‌, ಎನ್.ಪಿ ಡೇವಿಸ್‌, ಎಂ.ಎಸ್‌ ಸಾಮುವೇಲ್‌ , ಪ್ರಾನ್ಸಿಸ್‌  ಸೇರಿದಂತೆ ಕ್ರೈಸ್ತ ಸಮುದಾಯ ವಿವಿಧ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ಪುನಃ ಕೆರೆ ಒತ್ತುವರಿ ಕಾರ್ಯಾಚರಣೆ

ಭದ್ರಾವತಿಯಲ್ಲಿ ತಾಲೂಕು ಕಛೇರಿ ಹಾಗು ಕಂದಾಯ ಇಲಾಖೆ ಸಹಕಾರದೊಂದಿಗೆ ಪೌರಾಯುಕ್ತ ಮನುಕುಮಾರ್‌ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸುಮಾರು ೮ ಎಕರೆ ೩೨ ಗುಂಟೆ ವಿಸ್ತೀಣವುಳ್ಳ ಸರ್ವೆ ನಂ. ೧೩೩ರ ಕೆರೆ ಸರ್ವೆ ಕಾರ್ಯ ಈ ಹಿಂದೆ ನಡೆದಿದ್ದು, ಸುಮಾರು ೧ ಎಕರೆ ಒತ್ತುವರಿಯಾಗಿರುವ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಇದೀಗ ತೆರವು ಕಾರ್ಯಾಚರಣೆ ನಡೆಸಲಾಯಿತು.
ಭದ್ರಾವತಿ, ಜು. ೧೨ :  ಪುನಃ ಕೆರೆ ಒತ್ತುವರಿ ಕಾರ್ಯಾಚರಣೆ ಆರಂಭಗೊಂಡಿದ್ದು, ಸಿದ್ದಾಪುರ ಕಸಬಾ ಹೋಬಳಿ ಸಂಕ್ಲಿಪುರ ಸರ್ವೆ ನಂ. ೧೩೩ ಕೆರೆ ಒತ್ತುವರಿ ಕಾರ್ಯಾಚರಣೆ ಯಶಸಿಯಾಗಿ ಕೈಗೊಳ್ಳಲಾಯಿತು.
ತಾಲೂಕು ಕಛೇರಿ ಹಾಗು ಕಂದಾಯ ಇಲಾಖೆ ಸಹಕಾರದೊಂದಿಗೆ ಪೌರಾಯುಕ್ತ ಮನುಕುಮಾರ್‌ ನೇತೃತ್ವದಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸುಮಾರು ೮ ಎಕರೆ ೩೨ ಗುಂಟೆ ವಿಸ್ತೀಣವುಳ್ಳ ಸರ್ವೆ ನಂ. ೧೩೩ರ ಕೆರೆ ಸರ್ವೆ ಕಾರ್ಯ ಈ ಹಿಂದೆ ನಡೆದಿದ್ದು, ಸುಮಾರು ೧ ಎಕರೆ ಒತ್ತುವರಿಯಾಗಿರುವ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಇದೀಗ ತೆರವು ಕಾರ್ಯಾಚರಣೆ ನಡೆಸಲಾಯಿತು.


    ಕೆರೆ ಗಡಿ ಗುರುತು ಮಾಡಿರುವ ಸ್ಥಳದಲ್ಲಿ ಜೆಸಿಬಿ ಬಳಸಿ ಟ್ರಂಚ್‌ ಒಡೆಯಲಾಗಿದೆ. ನಗರಸಭೆ ವ್ಯಾಪ್ತಿ ಬಹಳಷ್ಟು ಕೆರೆಗಳು ಒತ್ತುವರಿಯಾಗಿದ್ದು, ಈಗಾಗಲೇ ಗಡಿ ಗುರುತು ಮಾಡಲಾಗಿದೆ. ಒತ್ತುವರಿ ಮಾಡಿರುವವರು ಈಗಾಗಲೇ ತೆರವುಗೊಳಿಸಿದ್ದು, ಕೆಲವು ಕೆರೆಗಳ ಬಳಿ ತೆರವು ಮಾಡಿಲ್ಲ. ಈ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸುವುದು ಅನಿವಾರ್ಯವಾಗಿದೆ.
ಈ ಹಿಂದಿನ ನಗರಸಭೆ ಪೌರಾಯುಕ್ತರಾಗಿದ್ದ ಮನೋಹರ್‌ ಸಹ ಕೆರೆ ತೆರವು ಕಾರ್ಯಾಚರಣೆಯಲ್ಲಿ ಹೆಚ್ಚಿನ ಆಸಕ್ತಿವಹಿಸಿದ್ದರು. ಇದೀಗ ಇಂದಿನ ಪೌರಾಯುಕ್ತ ಮನುಕುಮಾರ್‌ ಸಹ ಕೆರೆ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.  

-------------------------------------------------------------------------------------------
ನಗರಸಭೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಕೆರೆಗಳ ಸರ್ವೆ ಕಾರ್ಯ ನಡೆಸಿ ಗಡಿ ಗುರಿತಿಸಲಾಗಿದೆ. ಇದೀಗ ತಾಲೂಕು ಕಛೇರಿ ಹಾಗು ಕಂದಾಯ ಇಲಾಖೆ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ತೆರವು ಕಾರ್ಯಾಚರಣೆಗೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಹಂತ ಹಂತವಾಗಿ ತೆರವು ಕಾರ್ಯಾಚರಣೆ ನಡೆಯಲಿದೆ.
                                                               - ಮನುಕುಮಾರ್‌, ಪೌರಾಯುಕ್ತ, ನಗರಸಭೆ, ಭದ್ರಾವತಿ.

ಅರವಿಂದ ಪಟೇಲ್‌ ನಿಧನ


ಅರವಿಂದ ಪಟೇಲ್‌ 

    ಭದ್ರಾವತಿ, ಜು. ೧೧ : ನಗರದ ಜನ್ನಾಪುರ ನಿವಾಸಿ ಅರವಿಂದ ಪಟೇಲ್(೪೩) ಮಂಗಳವಾರ ನಿಧನ ಹೊಂದಿದರು.

   ಪತ್ನಿ, ಓರ್ವ ಪುತ್ರ ಇದ್ದರು. ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅರವಿಂದ ಪಟೇಲ್ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ ನಂಜುಂಡಪ್ಪನವರ ಪುತ್ರರಾಗಿದ್ದಾರೆ. ಇವರ ಅಂತ್ಯಕ್ರಿಯೆ ಮಧ್ಯಾಹ್ನ ಅವರ ತೋಟದಲ್ಲಿ ನೆರವೇರಿತು.

     ಇವರ ನಿಧನಕ್ಕೆ ಜೇಡಿಕಟ್ಟೆ ಶ್ರೀ ಮರುಳ ಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ಬಿಜೆಪಿ ಪಕ್ಷದ ಯುವ ಮುಖಂಡ ಮಂಗೋಟೆ ರುದ್ರೇಶ್, ಉದ್ಯಮಿ  ಬಿ. ಕೆ ಜಗನ್ನಾಥ್ ಹಾಗು ನಗರಸಭಾ ಸದಸ್ಯರುಗಳು ಸಂತಾಪ ಸೂಚಿಸಿದ್ದಾರೆ.

ಜು.16ರಂದು ಡಾ. ವಿಷ್ಣುವರ್ಧನ್ ಪ್ರಶಸ್ತಿ ಪ್ರದಾನ, ಸಂಗೀತ ನೃತ್ಯ ಸಂಭ್ರಮ

ಡಾ. ವಿಷ್ಣುವರ್ಧನ್‌ 
ಭದ್ರಾವತಿ, ಜು. 11: ಅಪೇಕ್ಷ ನೃತ್ಯ ಕಲಾವೃಂದದಿಂದ ಜು.16ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದೊಂದಿಗೆ ಡಾ. ವಿಷ್ಣುವರ್ಧನ್ ಸಂಗೀತ ನೃತ್ಯ ಸಂಭ್ರಮ,  ಡಾ. ವಿಷ್ಣುವರ್ಧನ್ ಪ್ರಶಸ್ತಿ ಹಾಗು ಅಪೇಕ್ಷ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
      ಸಿದ್ದಾರೂಢನಗರದ ಬಸವೇಶ್ವರ ಸಭಾಭವನದಲ್ಲಿ ಅಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಮಾರಂಭ ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಲಿದ್ದು, ಅಪೇಕ್ಷ ನೃತ್ಯ ಕಲಾವೃಂದದ ಅಧ್ಯಕ್ಷೆ ಭಾರತಿ ಗೋವಿಂದಸ್ವಾಮಿ ಅಧ್ಯಕ್ಷತೆವಹಿಸಲಿದ್ದಾರೆ. ಶಿವಮೊಗ್ಗ ಕರ್ನಾಟಕ ಸಂಘದ ಅಧ್ಯಕ್ಷ ಸುಂದರ್ ರಾಜ್ ಉಪನ್ಯಾಸ ನೀಡಲಿದ್ದಾರೆ.
    ಅಪೇಕ್ಷ ನೃತ್ಯ ಕಲಾವೃಂದದಿಂದ ಕಾರ್ಯದರ್ಶಿ ಅಪೇಕ್ಷ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಕೋರಲಾಗಿದೆ.

Monday, July 10, 2023

ಮಣಿಪುರ, ಜು. ೧೦ : ಶಾಂತಿ ಮರುಸ್ಥಾಪನೆಗೆ ಪ್ರಧಾನಿ ಮಧ್ಯ ಪ್ರವೇಶಿಸಲು ಒತ್ತಾಯ

ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತೆಲುಗು ಕ್ರಿಶ್ಚಿಯನ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಕೆ. ಭಾಸ್ಕರ್‌ಬಾಬು ಮಾತನಾಡಿದರು.  
    ಭದ್ರಾವತಿ : ಮಣಿಪುರ ರಾಜ್ಯದಲ್ಲಿ ಉಂಟಾಗಿರುವ ಜನಾಂಗೀಯ ಘರ್ಷಣೆಯಿಂದಾಗಿ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ನಾಗರಿಕ ಸಮಾಜ ವಿಶ್ವದ ಎದುರು ತಲೆ ತಗ್ಗಿಸುವಂತೆ ಮಾಡಿದೆ. ಕೇಂದ್ರ ಗೃಹ ಸಚಿವರು ಭೇಟಿ ನೀಡಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೂಡಲೇ ಮಧ್ಯ ಪ್ರವೇಶಿಸಿ ಶಾಂತಿ ಮರುಸ್ಥಾಪನೆಗೆ ಮುಂದಾಗುವಂತೆ ತೆಲುಗು ಕ್ರಿಶ್ಚಿಯನ್ ವೆಲ್‌ಫೇರ್ ಅಸೋಸಿಯೇಷನ್ ಒತ್ತಾಯಿಸಿದೆ.
    ಅಸೋಸಿಯೇಷನ್‌ ಅಧ್ಯಕ್ಷ ಜೆ.ಭಾಸ್ಕರ್‌ಬಾಬು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಮಾನವ ಹಕ್ಕುಗಳ ರಕ್ಷಣೆ ಮಾಡುವುದರೊಂದಿಗೆ ಶಾಂತಿ ನೆಲೆಸಲು ಶೀಘ್ರವಾಗಿ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿ, ರಾಷ್ಟ್ರಪತಿ-ಪ್ರಧಾನಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪಿಸಿ ಒಂದು ನೂರು ಕೋಟಿ ರು. ಅನುದಾನ ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹವಾಗಿದ್ದು, ಅಲ್ಪಸಂಖ್ಯಾತರ ಆಯೋಗ ಹಾಗು ನಿಗಮದ ನಾಮಕರಣ ದಲ್ಲಿ ಕ್ರೈಸ್ತ ಸಮಾಜದವರನ್ನು ಮಾತ್ರ ಪರಿಗಣಿಸುವಂತೆ ಒತ್ತಾಯಿಸಿದರು.
    ಮಣಿಪುರದ ಘಟನೆಗೆ ಸಂಬಂಧಿಸಿದಂತೆ ಜು.11 ರಂದು ಕ್ರೈಸ್ತಸಮಾಜದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜೆ.ಭಾಸ್ಕರ್ ಬಾಬು ಮನವಿ ಮಾಡಿದರು.
    ಪತ್ರಿಕಾಗೋಷ್ಠಿಯಲ್ಲಿ  ಜಾರ್ಜ್, ಆನಂದ್, ಗ್ರಾಬಿಯಲ್, ಪ್ರಕಾಶ್, ರಾಜು, ಮನೋಹರ್, ಆನಂದ್ ಇನ್ನಿತರರು ಉಪಸ್ಥಿತರಿದ್ದರು.