Tuesday, October 24, 2023

ಹಿರಿಯ ಪತ್ರಕರ್ತ ನಿಟ್ಟೂರು ಶ್ರೀರಾಮ್ ನಿಧನ

ನಿಟ್ಟೂರು ಶ್ರೀರಾಮ್      
    ಭದ್ರಾವತಿ: ನಗರದ ಲೋಯರ್ ಹುತ್ತಾ ನಿವಾಸಿ, ಹಿರಿಯ ಪತ್ರಕರ್ತ, ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಉದ್ಯೋಗಿ ನಿಟ್ಟೂರು ಶ್ರೀರಾಮ್ (೭೯) ಮಂಗಳವಾರ ಸಂಜೆ ನಿಧನರಾದರು.
  ಪತ್ನಿ ಮನೋನ್ಮಣಿ ಶ್ರೀರಾಮ್, ಇಬ್ಬರು ಸೋದರರು ಇದ್ದಾರೆ. ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ೫ ದಶಕಗಳ ಕಾಲ ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆ ಏಜೆಂಟರಾಗಿ, ಹಲವಾರು ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಬುಧವಾರ ಬೆಳಗ್ಗೆ ಅಪ್ಪರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
    ಸಂತಾಪ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಮಾಜಿ ಅಧ್ಯಕ್ಷ ಎನ್.ಬಾಬು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಬಸವರಾಜ್, ಕೂಡ್ಲಿಗೆರೆ ಮಂಜುನಾಥ್, ಅನಂತಕುಮಾರ್, ಶಿವಶಂಕರ್, ಗಣೇಶ್‌ರಾವ್ ಸಿಂದ್ಯಾ, ಟಿ.ಎಸ್ ಆನಂದ್‌ಕುಮಾರ್, ಸುಭಾಷ್‌ರಾವ್ ಸಿಂದ್ಯಾ, ಸುಧೀಂದ್ರ, ಶಂಕರ್, ಸುದರ್ಶನ್, ಶೈಲೇಶ್ ಕೋಠಿ, ಸಯೀದ್ ಖಾನ್, ಕಿರಣ್, ಮಹಾಲಿಂಗಪ್ಪ ಸೇರಿದಂತೆ ಸಂತಾಪ ಸೂಚಿಸಿದರು.

ಕಾಂಗ್ರೆಸ್ ಕಾರ್ಯಕ್ರಮ ಎಂದರೆ ಕಾರ್ಯಕರ್ತರ ಕಾರ್ಯಕ್ರಮ : ಪಕ್ಷದ ಬಲವರ್ಧನೆಗೆ ಶ್ರಮಿಸಿ

ನೂತನ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಕಾಂಗ್ರೆಸ್ ಕಾರ್ಯಕ್ರಮ ಎಂದರೆ ಕಾರ್ಯಕರ್ತರ ಕಾರ್ಯಕ್ರಮ. ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಪಾಲ್ಗೊಂಡು ಪಕ್ಷದ ಬಲವರ್ಧನೆಗೆ ಶ್ರಮಿಸುವಂತೆ ಶಾಸಕ ಬಿ.ಕೆ.ಸಂಗಮೇಶ್ವರ್ ಕರೆ ನೀಡಿದರು
    ಅವರು ಮಂಗಳವಾರ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಕಾಂಗ್ರೆಸ್ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
    ಪಕ್ಷದ ಕಾರ್ಯಕರ್ತರು ತಮ್ಮ ಮನೆಯ ಕಾರ್ಯಕ್ರಮ ಎಂದು ಭಾವಿಸಿಕೊಳ್ಳಬೇಕು. ಯಾರು ಸಹ ನಮಗೆ ಆಹ್ವಾನ ನೀಡಿಲ್ಲ ಎಂದುಕೊಳ್ಳಬಾರದು. ಭವನ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದರು.
    ಪಕ್ಷದ ಜಿಲ್ಲಾಧ್ಯಕ್ಷ ಸುಂದರೇಶ್ ಮಾತನಾಡಿ, ಬುದ್ಧಿವಂತರ ಜಿಲ್ಲೆಯಾಗಿದ್ದ ಶಿವಮೊಗ್ಗವನ್ನು ಬಿಜೆಪಿ ತನ್ನ ಸ್ವಾರ್ಥ ರಾಜಕೀಯದಿಂದ ಸಂಘರ್ಷಗಳನ್ನು ಸೃಷ್ಟಿಸಿ ಜಿಲ್ಲೆಗೆ ಕಪ್ಪುಚುಕ್ಕೆ ತಂದಿದೆ ಎಂದು ಆರೋಪಿಸಿದರು.
    ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿದೆ. ಕಾಂಗ್ರೆಸ್ ಏಳಿಗೆಗಾಗಿ ದುಡಿದ ಕಾರ್ಯಕರ್ತರು ಸಣ್ಣಪುಟ್ಟ ಕಾರಣಗಳಿಗಾಗಿ ಬೇರೆಕಡೆ ಮುಖಮಾಡಬೇಡಿ. ಕಳೆದ ಬಾರಿ ಪಕ್ಷದ ಕೆಲವು ತಪ್ಪು ನಿರ್ಣಯಗಳ ಕಾರಣದಿಂದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಕೈತಪ್ಪಿತು. ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದರು.
    ಕೆಪಿಸಿಸಿ ಸದಸ್ಯೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಲ್ಕೀಶ್ ಭಾನು ಮಾತನಾಡಿ, ಭದ್ರಾವತಿ ರಾಜಕಾರಣದ ಇತಿಹಾಸವನ್ನು ಗಮನಿಸಿದರೆ ಈ ಕ್ಷೇತ್ರ ಜಾತ್ಯಾತೀತ(ಸೆಕ್ಯೂಲರ್) ಕ್ಷೇತ್ರ ಎಂಬುದು ತಿಳಿಯುತ್ತದೆ. ಬಿಜೆಪಿ ಯಾವ ಕ್ಷೇತ್ರದಲ್ಲಾದರೂ ಅಧಿಕಾರ ಗಳಿಸಬಹುದು; ಆದರೆ ಭದ್ರಾವತಿಯಲ್ಲಿ ಅಧಿಕಾರ ಪಡೆಯುವುದು ಅಸಾಧ್ಯ ಎಂದರು.
    ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಕಾರ್ಯಕರ್ತರು ತಾವು ಕೂಡ ನಾಯಕರು ಎಂದು ಭಾವಿಸಿ ಶ್ರಮಿಸಬೇಕು. ಆದರೆ ಬ್ಯಾನರ್, ಆಹ್ವಾನ ಪತ್ರಿಕೆಯಲ್ಲಿ ಹೆಸರು ಪ್ರಕಟಿಸಲಿಲ್ಲ ಎಂದು ಮುನಿಸಿಕೊಳ್ಳುವುದು ಸಣ್ಣತನ. ಹೆಸರು, ಫೋಟೋಗೆ ಸೀಮಿತವಾಗದೆ ಜವಾಬ್ದಾರಿಯಿಂದ ವರ್ತಿಸಬೇಕು. ಹಣದಂತೆಯೇ ಕಾರ್ಯಕರ್ತರ ಶ್ರಮವೂ ಮುಖ್ಯ ಎಂದರು.
    ನಗರಸಭೆ ಅಧ್ಯಕ್ಷೆ ಶೃತಿವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ, ಬ್ಲಾಕ್ ಕಾಂಗ್ರೆಸ್ ನಗರಾಧ್ಯಕ್ಷ ಎಸ್.ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್. ಷಡಾಕ್ಷರಿ, ಮುಖಂಡರಾದ ರೇಣುಕಮ್ಮ ಸಿ.ಎಂ.ಖಾದರ್ , ಬಾಲಕೃಷ್ಣ, ಮಣಿ, ಕಾಂತರಾಜ್, ಚನ್ನಪ್ಪ, ಬದರಿನಾರಾಯಣ್, ಸುಧಾಮಣಿ, ಟಿಪ್ಪು, ಪ್ರವೀಣ್, ಗೋಪಿ, ಅಫ್ತಾಬ್, ಶೇಕ್ ಮೆಹಬೂಬ್, ಅಂತೋಣಿ ವಿಲ್ಸನ್, ಫ್ರಾನ್ಸಿಸ್, ಶಿವಕುಮಾರ್, ಜೆಬಿಟಿ ಬಾಬು, ಅಮೀರ್ ಜಾನ್ ಆಂಜನೇಯ ಹಾಗು ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

ನಾಡಹಬ್ಬ ದಸರಾ ಉತ್ಸವ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ

ಭದ್ರಾವತಿಯಲ್ಲಿ ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಉತ್ಸವ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
    ಭದ್ರಾವತಿ: ನಾಡಹಬ್ಬ ದಸರಾ ಅಂಗವಾಗಿ ನಗರಸಭೆ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಉತ್ಸವ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
        ನಗರದ ಬಿ.ಎಚ್ ರಸ್ತೆ, ಅಪ್ಪರ್ ಹುತ್ತಾ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಂಜೆ ೫ ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿ ಹಾಗು ನಂದಿ ಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
    ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳು, ವಿವಿಧ ಶಾಲೆಗಳ ಸ್ಥಬ್ದ ಚಿತ್ರಗಳು, ಹಳೇನಗರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ರಾಮೇಶ್ವರ ಸ್ವಾಮಿ, ಶ್ರೀ ಹಳದಮ್ಮ ದೇವಿ, ಶ್ರೀ ಕಾಳಿಕಾಂಬ ದೇವಿ, ಶ್ರೀ ಕೋಟೆ ಬಸವಣ್ಣ ಸ್ವಾಮಿ, ಭೋವಿ ಕಾಲೋನಿ ಶ್ರೀ ಪಿಳ್ಳಗಮ್ಮ ದೇವಿ, ಶ್ರೀ ಸವದತ್ತಿ ಯಲ್ಲಮ್ಮ, ಶ್ರೀ ಶೆಟ್ಟಮ್ಮದೇವಿ, ಶ್ರೀ ಲಕ್ಷ್ಮಮ್ಮ ದೇವಿ, ಶ್ರೀ ಸಿಗಂದೂರು ಚೌಡೇಶ್ವರಿ, ಶ್ರೀ ಕಾಲರಮ್ಮ ದೇವಿ, ಕುಕ್ಕುವಾಡೇಶ್ವರಿ ದೇವಿ, ಶ್ರೀ ಕೋಟೆ ಮಾರಿಯಮ್ಮ ದೇವಿ, ದಾನವಾಡಮ್ಮ, ತಮ್ಮಣ್ಣ ಕಾಲೋನಿ ಶ್ರೀ ಚೌಡೇಶ್ವರಿ ದೇವಿ, ಸಂತೇ ಮೈದಾನದ ಶ್ರೀ ಸುಂಕಲಮ್ಮ ದೇವಿ, ನ್ಯೂಟೌನ್ ಫ್ಲೇಗ್ ಮಾರಿಯಮ್ಮ, ಭೂತನಗುಡಿ ಶ್ರೀ ಶನೇಶ್ವರ ಸ್ವಾಮಿ, ವಿಜಯನಗರ ಶ್ರೀ ಶನಿದೇವರು, ಬಿ.ಎಚ್ ರಸ್ತೆ ಶ್ರೀ ವಿಶ್ವಸ್ವರೂಪಿಣಿ ಮಾರಿಯಮ್ಮ ದೇವಿ, ತಮ್ಮಣ್ಣ ಕಾಲೋನಿ ಮರದಮ್ಮ ದೇವಿ, ಚಾಮೇಗೌಡ ಏರಿಯಾ, ಮೀನುಗಾರರ ಬೀದಿ, ಜನ್ನಾಪುರ ಶ್ರೀ ಮಾರಿಯಮ್ಮ ದೇವಿ, ಚನ್ನಗಿರಿ ರಸ್ತೆ ಶ್ರೀ ಮಾರಿಕಾಂಬ ದೇವಿ, ನ್ಯೂಟೌನ್ ಶ್ರೀ ಮಾತಂಗಮ್ಮ ದೇವಿ, ಹಳೇನಗರ ಉಪ್ಪಾರಕೇರಿ ಶ್ರೀ ಅಂತರಘಟ್ಟಮ್ಮ, ಗೌಳಿಗರ ಬೀದಿ ಶ್ರೀ ರಾಮೇಶ್ವರ ಸ್ವಾಮಿ, ದೊಣಬಘಟ್ಟ ರಸ್ತೆ ಶ್ರೀ ರಂಗನಾಥ ಸ್ವಾಮಿ, ಶಿವರಾಮನಗರ ಶ್ರೀ ಯಲ್ಲಮ್ಮ ದೇವಿ, ಗೌಳಿಗರ ಬೀದಿ ಶ್ರೀ ಕರುಮಾರಿಯಮ್ಮ ದೇವಿ, ಬಸವೇಶ್ವರ ವೃತ್ತದ ಶ್ರೀ ಕುರುಪೇಶ್ವರಿ ದೇವಿ, ಶ್ರೀ ಕುಕ್ಕುವಾಡೇಶ್ವರಿ ದೇವಿ, ಹೊಸಮನೆ ಶ್ರೀ ಕೆರೆಕೋಡಮ್ಮ ದೇವಿ, ರಂಗಪ್ಪ ವೃತ್ತ ಶ್ರೀ ಗುಳ್ಳಮ್ಮ ದೇವಿ, ಅಂಬೇಡ್ಕರ್‌ನಗರ(ಕಂಚಿನ ಬಾಗಿಲು ವೃತ್ತ) ದುರ್ಗಾಂಬ ದೇವಿ, ದುರ್ಗಿ ನಗರದ ಶ್ರೀ ದುರ್ಗಮ್ಮ ದೇವಿ, ಜೈಭೀಮ್ ನಗರದ ಶ್ರೀ ದೊಡ್ಡಮ್ಮ ದೇವಿ, ಕಂಚಿನಬಾಗಿಲು ಮತ್ತು ಬಿ.ಎಚ್ ರಸ್ತೆ ಶ್ರೀ ಚೌಡೇಶ್ವರಿ ದೇವಿ ಹಾಗು ತರೀಕೆರೆ ರಸ್ತೆಯ ಶ್ರೀ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ಸೇರಿದಂತೆ ಸುಮಾರು ೫೦ ದೇವಸ್ಥಾನಗಳ ಅಲಂಕೃತಗೊಂಡ ದೇವಾನುದೇವತೆಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.


    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ ಹಾಗು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರಾದ ಬಸವರಾಜ್, ಜಾರ್ಜ್, ಆರ್. ಮೋಹನ್ ಕುಮಾರ್, ಬಷೀರ್ ಅಹಮದ್, ವಿ. ಕದಿರೇಶ್, ಬಿ.ಟಿ ನಾಗರಾಜ್, ಬಿ.ಕೆ ಮೋಹನ್, ಅನುಸುಧಾ ಮೋಹನ್ ಪಳನಿ, ಲತಾ ಚಂದ್ರಶೇಖರ್, ಪ್ರೇಮ ಬದರಿನಾರಾಯಣ, ಶಶಿಕಲಾ ನಾರಾಯಣಪ್ಪ, ಗೀತಾ ರಾಜ್‌ಕುಮಾರ್, ಅನುಪಮ ಚನ್ನೇಶ್, ಕಾಂತರಾಜ್, ಕೋಟೇಶ್ವರರಾವ್, ಉದಯ್‌ಕುಮಾರ್, ರಿಯಾಜ್ ಅಹಮದ್, ಪಲ್ಲವಿ ದಿಲೀಪ್, ನಾಗರತ್ನ ಅನಿಲ್‌ಕುಮಾರ್, ಜಯಶೀಲ ಸುರೇಶ್, ಸವಿತಾ ಉಮೇಶ್, ರೇಖಾ ಪ್ರಕಾಶ್, ಮಂಜುಳ ಸುಬ್ಬಣ್ಣ, ಅನಿತಾ ಮಲ್ಲೇಶ್, ಆರ್. ಶ್ರೇಯಸ್(ಚಿಟ್ಟೆ), ಬಿ.ಎಂ ರವಿಕುಮಾರ್ ಹಾಗು ಅಧಿಕಾರಿಗಳಾದ ರಾಜ್‌ಕುಮಾರ್, ಪ್ರಭಾಕರ್, ಸುಹಾಸಿನಿ ಮತ್ತು ಪೌರಸೇವಾ ನೌಕರರ ಸೇವಾ ಸಂಘದ ಪದಾಧಿಕಾರಿಗಳು, ದಸರಾ ಉದ್ಘಾಟಕರು, ಸಮಾಜ ಸೇವಕರಾದ ಪಿ. ವೆಂಕಟರಮಣ ಶೇಟ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ನೌಕರರು ಸೇರಿದಂತೆ ಇನ್ನಿತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
    ಮೆರವಣಿಗೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮೂಲಕ ಕನಕಮಂಟಪ ಮೈದಾನ ತಲುಪಿತು. ನಂತರ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿತು. ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ವೆ||ಬ್ರ|| ರಂಗನಾಥಶರ್ಮರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.

Sunday, October 22, 2023

ಅಭಿವೃದ್ಧಿ ಕಾರ್ಯಗಳು ಜನರು ಸದಾ ಕಾಲ ನೆನಪಿಟ್ಟುಕೊಳ್ಳುವಂತಿರಲಿ : ಮನೋಹರ್

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಅಭಿವೃದ್ಧಿ ಕೆಲಸಗಳು ಹೆಚ್ಚು ಕಾಲ ಉಳಿಯುವಂತೆ ಇರಬೇಕು. ಆಗ ಮಾತ್ರ ಅಧಿಕಾರಿಗಳನ್ನು ಜನರು ಸದಾ ಕಾಲ ನೆನಪಿಟ್ಟುಕೊಳ್ಳುತ್ತಾರೆಂದು  ಎಂದು ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ಹೇಳಿದರು.
    ಅವರು ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಸರಾ ಉದ್ಘಾಟಿಸಿ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕೆಲವು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಇನ್ನೂ ಸಾಕಷ್ಟು ಕೆಲಸ ನಡೆಯಬೇಕಾಗಿದೆ. ಅಧಿಕಾರಿಗಳಿಗೆ ಸ್ಥಳೀಯ ಶಾಸಕರು, ನಗರಸಭೆ ಸದಸ್ಯರು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕೆಂದರು.  
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ನಾಡಹಬ್ಬ ದಸರಾ ಈ ಬಾರಿ ಸಹ ವಿಜೃಂಭಣೆಯಿಂದ ನಡೆಯುತ್ತಿದೆ. ಸಾರ್ವಜನಿಕರು ಎಲ್ಲಾ ಕಾರ್ಯಕ್ರಮಗಳಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕೋರಿದರು.
ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ಸಮಾಜದ ಸಕಲ ಕೆಲಸಗಳಲ್ಲಿ ಶ್ರಮವಹಿಸುವ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ಮಹಿಳಾ ದಸರಾ ವೇದಿಕೆಯಾಗಿದೆ ಎಂದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಮಾತನಾಡಿ, ಇಡೀ ಜೀವರಾಶಿಯ ತೂಕ ಹೊತ್ತಿರುವುದು ಭೂತಾಯಿ. ಮಹಿಳೆಯರ ಸಾಮರ್ಥ್ಯಕ್ಕೆ ಭೂತಾಯಿಯೇ ಉದಾಹರಣೆ. ಮಹಿಳೆ ಎಂದರೆ ಶಕ್ತಿ ಎಂದರು.
    ವೇದಿಕೆಯಲ್ಲಿ ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಕ್ರೀಡಾಸಮಿತಿ ಅಧ್ಯಕ್ಷ ಚೆನ್ನಪ್ಪ, ಸದಸ್ಯರಾದ ಬಸವರಾಜ್ ಆನೇಕೊಪ್ಪ, ಅನುಸುಧಾ ಮೋಹನ್ ಪಳನಿ, ಪಲ್ಲವಿ, ನಾಗರತ್ನ, ಪ್ರೇಮ, ನಾಗರತ್ನ, ಲತಾ ಚಂದ್ರಶೇಖರ್, ರೇಖಾ ಪ್ರಕಾಶ್, ಮಂಜುಳ ಸುಬ್ಬಣ್ಣ, ಜಯಶೀಲ, ಮಾಜಿ ಸದಸ್ಯರಾದ ಬದರಿನಾರಾಯಣ, ಲಕ್ಷ್ಮೀದೇವಿ, ಸುಧಾಮಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವೀರಶೈವ ಲಿಂಗಾಯತ ಮಹಿಳಾ ಸಮಾಜದಿಂದ ನೃತ್ಯ ರೂಪಕ, ಹಳೇನಗರದ ಮಹಿಳಾ ಸೇವಾ ಸಮಾಜದಿಂದ ಜನಪದ ಗೀತೆ, ಪೌರಕಾರ್ಮಿಕರಿಂದ ನಾಟಕ, ಜ್ಯೋತಿ ಪ್ರಸಾದ್ ತಂತ್ರಿ ಅವರಿಂದ ನೃತ್ಯ, ಚೌಡೇಶ್ವರಿ ಮಹಿಳಾ ಮಂಡಳಿಯಿಂದ ದೇವಿ ನೃತ್ಯ, ವೀರಶೈವ ಸೇವಾ ಸಮಿತಿ ವತಿಯಿಂದ ಕೋಲಾಟ, ಅಖಿಲ ಭಾರತ ವೀರಶೈವ ಮಹಿಳಾ ವೇದಿಕೆಯಿಂದ ನೀರಿಗೆ ಬಾರೇ ಚನ್ನಿ, ಚುಂಚಾದ್ರಿ ವೇದಿಕೆ ಹಾಗು ಬನಶಂಕರಿ ಗಾಯನ ತಂಡದಿಂದ ನೃತ್ಯ ನಡೆಯಿತು.
    ಭದ್ರಾ ಸುಗಮಸಂಗೀತ ವೇದಿಕೆ ಮಹಿಳೆಯರು ಪ್ರಾರ್ಥಿಸಿದರು. ನಗರಸಭೆ ಅಧಿಕಾರಿ ಸುಹಾಸಿನಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಲೋಕಸಭೆ ಚುನಾವಣೆಯಲ್ಲಿ ಮರುಆಯ್ಕೆಯಾದಲ್ಲಿ ಮೆಟ್ರೋ ವ್ಯವಸ್ಥೆ : ಬಿ.ವೈ ರಾಘವೇಂದ್ರ

ಭದ್ರಾವತಿ ನಗರಸಭೆ ವತಿಯಿಂದ ಶನಿವಾರ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
    ಭದ್ರಾವತಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಮರು ಆಯ್ಕೆಯಾದಲ್ಲಿ ಶಿವಮೊಗ್ಗ- ಭದ್ರಾವತಿ ಅವಳಿ ನಗರಗಳಿಗೆ ಮೆಟ್ರೋ ವ್ಯವಸ್ಥೆ ಒದಗಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.
    ನಗರಸಭೆ ವತಿಯಿಂದ ಶನಿವಾರ ನಾಡಹಬ್ಬ ದಸರಾ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
     ಈ ಹಿಂದಿನ ಎಲ್ಲಾ ಚುನಾವಣೆಗಳಲ್ಲೂ ನನ್ನ ಗೆಲುವಿಗೆ ಭದ್ರಾವತಿ ಕ್ಷೇತ್ರದ ಜನರ ಕೊಡುಗೆ ಸಹ ಇದ್ದು, ತಾಯಿ ಚಾಮುಂಡೇಶ್ವರಿ ಆರ್ಶೀವಾದದಿಂದ ಈ ಬಾರಿಯೂ ಆಯ್ಕೆಯಾಗುವ ವಿಶ್ವಾಸವಿದೆ. ಶಿವಮೊಗ್ಗ-ಭದ್ರಾವತಿ ಅವಳಿ ನಗರಗಳಲ್ಲಿ ಮೈಸೂರು ದಸರಾ ಮಾದರಿಯಲ್ಲಿಯೇ ನಾಡಹಬ್ಬ ದಸರಾ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರವಾಗಿದ್ದು, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗು ಸಿಬ್ಬಂದಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
    ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್, ಪೌರಾಯುಕ್ತ ಎಚ್.ಎಂ ಮನುಕುಮಾರ್, ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಚನ್ನಪ್ಪ ಹಾಗು ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರಾದ ಬಸವರಾಜ್, ಜಾರ್ಜ್, ಆರ್. ಮೋಹನ್ ಕುಮಾರ್, ಬಷೀರ್ ಅಹಮದ್, ಅನುಸುಧಾ ಮೋಹನ್ ಪಳನಿ, ಲತಾ ಚಂದ್ರಶೇಖರ್, ಪ್ರೇಮ ಬದರಿನಾರಾಯಣ, ಶಶಿಕಲಾ ನಾರಾಯಣಪ್ಪ, ಗೀತಾ ರಾಜ್‌ಕುಮಾರ್, ಅನುಪಮ ಚನ್ನೇಶ್, ಕಾಂತರಾಜ್, ಕೋಟೇಶ್ವರರಾವ್, ಉದಯ್‌ಕುಮಾರ್, ಮಾಜಿ ಸದಸ್ಯ ಬದರಿ ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
     ಸಂಸದ ಬಿ.ವೈ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಕಂದಾಯ ಅಧಿಕಾರಿ ಎಂ.ಎಸ್.ರಾಜಕುಮಾರ್ ಸ್ವಾಗತಿಸಿದರು. ಪೌರಾಯುಕ್ತ ಮನುಕುಮಾರ್ ವಂದಿಸಿದರು.

Saturday, October 21, 2023

ಯುವಕನ ಕೊಲೆ : ದೂರು ದಾಖಲು

ಸೈಯದ್ ರಜಿಖ್ 
ಭದ್ರಾವತಿ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಾಲೂಕಿನ ಬಾಬಳ್ಳಿ ಗ್ರಾಮದಲ್ಲಿ ಯುವಕನೋರ್ವ ಕೊಲೆಯಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಸೈಯದ್ ರಜಿಖ್ (೩೦) ಮೃತ ದುರ್ದೈವಿಯಾಗಿದ್ದು, ರಜಿಖ್‌ನನ್ನು ಆತನ ಸಂಬಂಧಿಕರೇ ಕೊಲೆ ಮಾಡಿರುವುದಾಗಿ ಮೃತನ ಕುಟುಂಬ ಆರೋಪಿಸಿದೆ. ಕೊಲೆಗೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ಹೇಮಂತ್ ನಿಧನ

ಹೇಮಂತ್(ಕಟ್ಟಾ)
    ಭದ್ರಾವತಿ, ಅ. ೨೧: ನಗರದ ಬಾಲಭಾರತಿ ನಿವಾಸಿ, ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಹೇಮಂತ್(ಕಟ್ಟಾ)(೩೮) ಶುಕ್ರವಾರ ರಾತ್ರಿ ನಿಧನ ಹೊಂದಿದರು.
    ಹೇಮಂತ್ ತಾಯಿ ಜೊತೆ ವಾಸವಿದ್ದರು. ವಿಐಎಸ್‌ಎಲ್ ಕಾರ್ಖಾನೆಯ ಟ್ರಾಫಿಕ್ ಇಲಾಖೆಯ ಗುತ್ತಿಗೆ ಕಾರ್ಮಿಕರಾಗಿದ್ದು, ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೯ ತಿಂಗಳಿನಿಂದ ನಡೆಸುತ್ತಿರುವ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಗುತ್ತಿಗೆ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ.