ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಅಧ್ಯಕ್ಷ ಟಿ.ಜಿ ಬಸವರಾಜಯ್ಯ
ಭದ್ರಾವತಿಯಲ್ಲಿ ಮಂಗಳವಾರ ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ೨೦೦೬ ರಿಂದ ೨೦೧೪ ರ ವರೆಗೆ ನಿವೇಶನಗಳನ್ನು ಸದಸ್ಯರಲ್ಲದವರಿಗೆ ಮಾರಾಟ ಮಾಡುವ ಮೂಲಕ ಅವ್ಯವಹಾರ ನಡೆಸಲಾಗಿದ್ದು, ಈ ಸಂಬಂಧ ವಿಚಾರಣೆ ನಡೆದು ೭೪ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಜ.೧೬ ರಿಂದ ೧೯ರವರೆಗೆ ೪ ದಿನಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ತಿಳಿಸಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೨ ಜೂನ್ ೧೯೮೯ರಲ್ಲಿ ಈ ಸಂಘವು ಸ್ಥಾಪನೆಯಾಗಿದ್ದು, ಪ್ರತಿ ಸದಸ್ಯ ರು. ೧೦೦೦ ಬೆಲೆಯ ಷೇರುಗಳನ್ನು ಖರೀದಿಸಿರುತ್ತಾರೆ. ಸುಮಾರು ೪೦೦ಕ್ಕೂ ಹೆಚ್ಚು ಜನ ಷೇರುಗಳನ್ನು ಪಡೆದಿದ್ದರು. ೩೮೬ ಜನರಿಗೆ ಈ ಹಿಂದೆಯೇ ನಿವೇಶನಗಳನ್ನು ಅಲಾಟ್ ಮಾಡಲಾಗಿದೆ. ಬಹಳಷ್ಟು ಜನರಿಗೆ ನಿವೇಶನಗಳನ್ನು ನೋಂದಣಿ ಮಾಡಿಕೊಡಲಾಗಿತ್ತು. ಮೈಸೂರು ಕಾಗದ ಕಾರ್ಖಾನೆಯವರಿಂದ ಸರ್ವೇ ನಂ. ೧೪ರಲ್ಲಿ ಸುಮಾರು ೧೪೪ ಎಕರೆ ಜಾಗದಲ್ಲಿ ೨೫ ಎಕರೆ ಜಾಗ ೧೩ ಫೆಬ್ರವರಿ ೧೯೯೨ರಲ್ಲಿ ಸಂಘವು ಕ್ರಯಕ್ಕೆ ಪಡೆದುಕೊಂಡಿದೆ. ರೂ. ೩೫,೨೦೧.೪೦ರಂತೆ ಒಟ್ಟು ರೂ. ೮,೮೦,೦೩೫ ಹಣವನ್ನು ಕಂಪನಿಗೆ ಜಮಾ ಮಾಡಲಾಗಿತ್ತು. ನಿವೇಶನ ಅಲಾಟ್ ಆದವರೂ ಸೇರಿದಂತೆ ಕೆಲವು ಸದಸ್ಯರು ಸಂಘದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು ಎಂದರು.
ಎಂಪಿಎಂ ಬಡಾವಣಿಯಲ್ಲಿ ಒಟ್ಟು ೪೧೬ ನಿವೇಶನಗಳನ್ನು ವಿಂಗಡನೆ ಮಾಡಿದ್ದು, ಅದರಲ್ಲಿ ವಿವಿಧ ರೀತಿಯ ಅಳತೆಯ ನಿವೇಶನಗಳನ್ನು ಮಾಡಲಾಗಿದೆ.
೩೦*೫೦ರ ೩೫೮ ಮತ್ತು ೩೦*೪೦ರ ೨೪ ಹಾಗು ಅಸ್ಪಷ್ಠ ಅಳತೆಯ ೩೪ ನಿವೇಶನಗಳು ಒಟ್ಟು ೪೧೬ ನಿವೇಶನಗಳಿವೆ. ಈ ಪೈಕಿ ೩೪೨ ನಿವೇಶನಗಳು ಸದಸ್ಯರಿಗೆ ಹಂಚಿಕೆ ಆಗಿದೆ. ೭೪ ನಿವೇಶನಗಳನ್ನು ಅಂದಿನ ಸಂಘದ ಪದಾಧಿಕಾರಿಗಳು ೨೦೦೬ ರಿಂದ ೨೦೧೪ರ ವರೆಗೆ ಸದಸ್ಯರಲ್ಲದವರಿಗೆ ಮಾರಾಟ ಮಾಡುವ ಮೂಲಕ ಅವ್ಯವಹಾರ ನಡೆಸಿದ್ದಾರೆಂದು ಆರೋಪಿಸಿದರು.
ಮಾರಾಟ ಮಾಡಿದ ಹಣವನ್ನೂ ಕೂಡಾ ಸಂಘಕ್ಕೆ ಜಮಾ ಮಾಡದೆ ಅನ್ಯಾಯ ಮಾಡಿರುವುದು ತಿಳಿದುಬಂದ ಮೇಲೆ ಸಹಾಯಕ ನಿಬಂಧಕರಿಗೆ ೧೨ ಸೆಪ್ಟಂಬರ್ ೨೦೧೮ ರಲ್ಲಿ ದೂರು ನೀಡಲಾಗಿತ್ತು. ಅವರು ೨೭ ನವೆಂಬರ್ ೨೦೧೮ ರಲ್ಲಿ ವಿಚಾರಣಾಧಿಕಾರಿಗಳನ್ನು ನೇಮಿಸಿ ಕಲಂ ೬೪ರ ವಿಚಾರಣೆ ನಡೆಸಿದ್ದು, ಅದರಲ್ಲಿ ಸದಸ್ಯರಲ್ಲದವರಿಗೆ ನಿವೇಶನಗಳನ್ನು ಮಾರಿರುವುದು ಸಾಬೀತಾಗಿರುತ್ತದೆ. ಅಲ್ಲದೆ ಸಂಘದ ಹೆಸರಿನಲ್ಲಿ ಇನ್ನೊಂದು ಬಡಾವಣೆ ಮಾಡುವುದಾಗಿ ಕೆಲವರ ಬಳಿ ಹಣ ಪಡೆದು ಸಂಘದ ಲೆಟರ್ ಹೆಡ್ ಮತ್ತು ರಸೀದಿಗಳನ್ನು ದುರುಪಯೋಗಪಡಿಸಿಕೊಂಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ ಎಂದರು.
ಸಹಾಯಕ ನಿಬಂಧಕರು ಕಲಂ ೬೮ರಂತೆ ೧೦ ಅಕ್ಟೋಬರ್ ೨೦೧೯ ರಲ್ಲಿ ಆದೇಶ ಮಾಡಿ, ಸದಸ್ಯರಲ್ಲದವರಿಗೆ ಮಾರಾಟ ಮಾಡಿದ್ದ ೭೪ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು ನಿಯಮಾನುಸಾರ ಹಂಚಿಕೆ ಮಾಡುವಂತೆ ಹಾಗು ಸಂಘದ ಲೆಟರ್ ಹೆಡ್ ಮತ್ತು ರಸೀದಿಗಳನ್ನು ದುರುಪಯೋಗಪಡಿಸಿಕೊಂಡಿರುವ ಶ್ರೀನಿವಾಸ ಮತ್ತು ಮಂಜುನಾಥ ಹಾಗೂ ಮಾಸಿಲಾಮಣಿ ಇವರುಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಹಾಗು ಸಂಘಕ್ಕೆ ನಷ್ಟವಾದ ಹಣವನ್ನು ವಸೂಲು ಮಾಡುವಂತೆ ತಿಳಿಸಿರುತ್ತಾರೆ. ಇದರಂತೆ ಸಂಘವು ಮುನ್ನಡೆದಿದ್ದು, ಮೊದಲ ಕಲಂ ೨೯ಸಿ ಯಂತೆ ಆಡಳಿತ ಮಂಡಳಿಯಲ್ಲಿದ್ದ ಆರೋಪಿತರನ್ನು ವಿಚಾರಣೆ ನಡೆಸಿ ಅನರ್ಹರ ಆದೇಶದಂತೆ ಅನರ್ಹತೆಯಾಗಿರುತ್ತಾರೆ. ಅನರ್ಹತಗೊಂಡವರಲ್ಲಿ ಒಬ್ಬರು ಮೇಲ್ಮನವಿ ಸಲ್ಲಿಸಿದರೂ ಅಲ್ಲಿಯೂ ಕೂಡಾ ಸಂಘದ ಪರವಾಗಿ ತೀರ್ಪು ಬಂದಿರುತ್ತದೆ ಎಂದರು.
ಕಲಂ ೬೯ ಹಾಗೂ ಕಲಂ ೧೦೩ ರಂತೆ ಆಗಿನ ನಿರ್ದೇಶಕರ ಮೇಲೆ ವಸೂಲಾತಿಗಾಗಿ ದಾವೆ ಹಾಕಿದ್ದು, ಅದು ೨೯ ಜುಲೈ ೨೦೨೨ ರಿಂದ ವಿಚಾರಣೆ ನಡೆಯುತ್ತಿದೆ. ಬಹುಮುಖ್ಯವಾಗಿ ೭೪ ನಿವೇಶನಗಳನ್ನು ಮಾರಾಟ ಮಾಡಿದ ಹಣದಲ್ಲಿ ಶೇ.೯೦ರಷ್ಟು ಹಣ ಅಂದಿನ ಆಡಳಿತ ಮಂಡಳಿಯವರು ಸಂಘಕ್ಕೆ ಜಮಾ ಮಾಡಿಲ್ಲ. ಅದರ ಅಂದಿನ ಮೌಲ್ಯವೇ ಸುಮಾರು ೭೪ ಲಕ್ಷ ರೂ.ಗಳಾಗಿದ್ದು, ಪ್ರಸ್ತುತ ಅದರ ಮೌಲ್ಯ ಸುಮಾರು ರೂ. ೧೫ ಕೋಟಿ ಎಂದು ಅಂದಾಜಿಸಲಾಗಿದೆ ಎಂದರು.
೭೪ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶದವಿದ್ದಾಗ್ಯೂ ಆ ನಿವೇಶನಗಳನ್ನು ಆಡಳಿತ ಮಂಡಳಿ ಮತ್ತು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನದಂತೆ ಕೊಂಡುಕೊಂಡವರನ್ನು ಒಮ್ಮೆ ಕರೆಸಿ ಅವರ ದಾಖಲೆಗಳನ್ನು ಪರಿಶೀಲಿಸಿ ಮತ್ತು ಅವರ ಅಹವಾಲನ್ನು ಕೇಳಬೇಕೆಂದು ಸಂಘದಲ್ಲಿ ಒಂದು ಉಪಸಮಿತಿಯನ್ನು ನೇಮಕ ಮಾಡಿದ್ದು, ಆ ಸಮಿತಿಯವರಾದ ಹಾಲಿ ನಿರ್ದೇಶಕರೂ ಆಗಿರುವ ಎಸ್.ಆರ್ ಸೋಮಶೇಖರ್, ಪರಮಶಿವ, ರಂಗಸ್ವಾಮಿ,
ಎಚ್. ಆನಂದಮೂರ್ತಿ, ಅಭಯ ಕುಮಾರ್ ಖಡ್ಡು ಮತ್ತು ಲೋಕಾನಂದ ರಾವ್ ಇವರುಗಳು ೧೬ ಜನವರಿ ೨೦೨೪ ರಿಂದ ೧೯ರ ವರೆಗೆ ೪ ದಿನಗಳ ಕಾಲ ಬೆಳಗ್ಗೆ ೧೦.೩೦ ರಿಂದ ೧೨.೩೦ರ ವರೆಗೆ ಹಾಜರಿದ್ದು ಬಂದವರ ದಾಖಲೆಗಳನ್ನು ಮತ್ತು ಅಹವಾಲನ್ನು ದಾಖಲಿಸಿಟ್ಟುಕೊಳ್ಳುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿ. ಗೋವಿಂದಪ್ಪ, ಕಾರ್ಯದರ್ಶಿ ಎಚ್. ವೀರಭದ್ರಪ್ಪ, ಎಸ್.ಆರ್ ಸೋಮಶೇಖರ್, ಪರಮಶಿವ, ಎಚ್. ಆನಂದಮೂರ್ತಿ, ಅಭಯ ಕುಮಾರ್, ಸಾರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.