Wednesday, December 25, 2024

ಜ.೧ರಂದು ಕೋರೆಗಾಂವ್ ವಿಜಯೋತ್ಸವ ಆಚರಣೆ : ದಲಿತ ಸಂಘಟನೆಗಳ ಸಭೆ

ನೂತನ ವರ್ಷ ಆರಂಭದ ಮೊದಲ ದಿನ ಕೋರೆಗಾಂವ್ ವಿಜಯೋತ್ಸವ ಆಚರಿಸುವ ಸಂಬಂಧ ಭದ್ರಾವತಿ ನಗರದ ವಿವಿಧ ದಲಿತ ಸಂಘಟನೆಗಳು ಸಭೆ ನಡೆಸಿ ಚರ್ಚಿಸಿದವು. 
    ಭದ್ರಾವತಿ: ನೂತನ ವರ್ಷ ಆರಂಭದ ಮೊದಲ ದಿನ ಕೋರೆಗಾಂವ್ ವಿಜಯೋತ್ಸವ ಆಚರಿಸುವ ಸಂಬಂಧ ನಗರದ ವಿವಿಧ ದಲಿತ ಸಂಘಟನೆಗಳು ಸಭೆ ನಡೆಸಿ ಚರ್ಚಿಸಿದವು. 
    ಹೊಲಯ ಮಾದಿಗ ಸಮನ್ವಯ ಸಮಿತಿ ರಚಿಸಿಕೊಂಡು ಜ.೧ರಂದು ವಿಜಯೋತ್ಸವ ನಡೆಸುವ ಮೂಲಕ ಯಶಸ್ವಿಗೊಳಿಸಲು ಹಾಗು ಮುಂದಿನ ದಿನಗಳಲ್ಲಿ ಒಳಮೀಸಲಾತಿಗಾಗಿ ಜಂಟಿ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. 
    ಸಭೆಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರುಗಳಾದ  ಶಿವಬಸಪ್ಪ, ಸತ್ಯ ಭದ್ರಾವತಿ, ಸುರೇಶ್, ಕುಬೇಂದ್ರಪ್ಪ, ಪುಟ್ಟರಾಜ, ಜಯರಾಮ್, ಧರ್ಮರಾಜ್, ಕೃಷ್ಣ, ಮಹೇಶ್, ಜಿಂಕ್‌ಲೈನ್ ಮಣಿ, ಮೂರ್ತಿ, ಸಿ. ಚನ್ನಪ್ಪ, ಜಗದೀಶ್, ಎಸ್. ಉಮಾ, ಗಂಗಾಧರ್, ಕೂಡ್ಲಿಗೆರೆ ರಮೇಶ್, ನಂಜಾಪುರ ರವಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ತಾಲೂಕಿನಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ

ಕ್ರೈಸ್ತ ದೇವಾಲಯಗಳಲ್ಲಿ ಸಿಹಿ ಹಂಚಿ ಪರಸ್ಪರ ಶುಭಾಶಯಗಳು  

ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದಿನ ಬುಧವಾರ ಭದ್ರಾವತಿ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. 
    ಭದ್ರಾವತಿ : ಜಗತ್ತಿಗೆ ತ್ಯಾಗ, ಪ್ರೀತಿಯ ಸಂದೇಶ ಸಾರಿದ ಯೇಸುಕ್ರಿಸ್ತರ ಜನ್ಮದಿನ ಬುಧವಾರ ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. 
    ತಾಲೂಕಿನ ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯ, ನ್ಯೂಟೌನ್ ಅಮಲೋಧ್ಭವಿ ಮಾತೆ ದೇವಾಲಯ, ಕಾರೆಹಳ್ಳಿಯ ಸಂತ ಅಂತೋಣಿಯವರ ದೇವಾಲಯ, ಕಾಗದ ನಗರದ ಸಂತ ಜೋಸೆಫರ ದೇವಾಲಯಗಳು ಸೇರಿದಂತೆ ತಾಲೂಕಿನ ಇನ್ನಿತರ ಕ್ರೈಸ್ತ ದೇವಾಲಯಗಳಲ್ಲಿ ನಿರ್ಮಾಣ ಮಾಡಲಾದ ಕ್ರಿಸ್‌ಮಸ್ ಟ್ರೀ, ವಿವಿಧ ರೀತಿಯ ನಕ್ಷತ್ರಗಳು, ಯೇಸುವಿನ ಜನನ ಸಂದರ್ಭದ ಕ್ಷಣಗಳನ್ನು ನೆನಪಿಸುವ ಗೋದಲಿಗಳು ಗಮನ ಸೆಳೆದವು. ಮಂಗಳವಾರ ಮಧ್ಯರಾತ್ರಿ ಹಾಗೂ ಬುಧವಾರ ಮುಂಜಾನೆ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತ ಧರ್ಮೀಯರು ಪಾಲ್ಗೊಂಡಿದ್ದರು. 
    ಚರ್ಚ್‌ಗಳಲ್ಲಿ ಕೇಕ್, ಚಾಕೋಲೇಟ್, ಸಿಹಿತಿಂಡಿಗಳನ್ನು ಹಂಚಲಾಯಿತು. ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ, ಹಬ್ಬಕ್ಕಾಗಿ ವಿಶೇಷ ಭೋಜನ ವ್ಯವಸ್ಥೆ ಕೈಗೊಂಡಿರುವುದು ಕಂಡು ಬಂದಿತು. ಕ್ರಿಸ್ತನ ಜನನದ ಶುಭ ಗಳಿಗೆಯ ಸ್ಮರಣೆಗೆ ಸಂಕೇತವಾಗಿ ಮೇಣದ ಬತ್ತಿಗಳನ್ನು ಬೆಳಗಿಸಲಾಯಿತು. ಪುಟ್ಟ ಮಕ್ಕಳು ಸಾಂತಾ ಕ್ಲಾಸ್ ವೇಷ ಧರಿಸಿ ಗಮನ ಸೆಳೆದರು. 
    ಶಾಂತಿ, ದೀನತೆಗಾಗಿ ಪ್ರಾರ್ಥನೆ ಸಲ್ಲಿದ ಭಕ್ತರು :  
    ಕ್ರಿಸ್‌ಮಸ್ ಬಾಹ್ಯ ಆಡಂಬರವಾಗಿರದೆ ಪರರ ಕಷ್ಟಕ್ಕೆ ಸಹಾಯ, ಸೇವೆ ಸಲ್ಲಿಸುವ ಹಬ್ಬವಾಗಿದೆ ಎಂದು ಕಾರೇಹಳ್ಳಿ ಸಂತ ಅಂತೋಣಿ ದೇವಾಲಯದ ಧರ್ಮಕೇಂದ್ರದ ಗುರುಗಳಾದ ಫಾದರ್ ಸಂತೋಷ್ ಅಲ್ಮೇಡ ತಿಳಿಸಿದರು. 
    ಪ್ರತಿಯೊಬ್ಬರ ಮನಸ್ಸು, ಹೃದಯದಲ್ಲಿ ಯೇಸು ಜನಿಸಬೇಕು. ಇರುವವರು ಇಲ್ಲದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು. 
    ದೇಶಗಳ ನಡುವೆ ನಡೆಯುತ್ತಿರುವ ಯುದ್ಧಗಳು, ದೇಶದ ಭ್ರಷ್ಟಾಚಾರದ ರಾಜಕಾರಣ ದೂರವಾಗಿ ಎಲ್ಲರ ನಡುವೆ ಐಕ್ಯತೆ, ಸಮಾನತೆ ಮೂಡಲಿ, ವಿಶ್ವದಲ್ಲಿ ಶಾಂತಿ ನೆಲೆಸಲಿ. ಯುವಜನರು ಆಧುನಿಕ ಜೀವನದ ಭರಾಟೆಯಲ್ಲಿ ದಾರಿ ತಪ್ಪದೆ ಉತ್ತಮ ಜೀವನ ನಡೆಸಲು ಬೇಕಾದ ಸ್ಥೈರ್ಯ, ಮನೋಬಲವನ್ನು ದೇವರು ನೀಡಲಿ ಎಂದು ಪ್ರಾರ್ಥಿಸಲಾಯಿತು.

ಡಿ.೨೬ರಂದು ನಗರಸಭೆ ಸಾಮಾನ್ಯ ಸಭೆ



    ಭದ್ರಾವತಿ: ಪ್ರಸಕ್ತ ಸಾಲಿನ ಕೊನೆಯ ನಗರಸಭೆ ಸಾಮಾನ್ಯ ಸಭೆ ಡಿ.೨೬ರ ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಅಧ್ಯಕ್ಷ ಮಣಿ ಎಎನ್‌ಎಸ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. 
    ಸಭೆಯಲ್ಲಿ ಸದಸ್ಯರು ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಕೋರಿದ್ದಾರೆ. 

ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ಆಚರಣೆ

ಭಾರತರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೦ನೇ ವರ್ಷದ ಜನ್ಮಶತಮಾನೋತ್ಸವ, ಸುಶಾಸನ ದಿನ ಪ್ರಯುಕ್ತ ಭದ್ರಾವತಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಬುಧವಾರ ಶತದೀಪೋತ್ಸವ ಆಚರಿಸಲಾಯಿತು. 
    ಭದ್ರಾವತಿ :  ಭಾರತರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೦ನೇ ವರ್ಷದ ಜನ್ಮಶತಮಾನೋತ್ಸವ, ಸುಶಾಸನ ದಿನ ಪ್ರಯುಕ್ತ ತಾಲೂಕು ಬಿಜೆಪಿ ಮಂಡಲ ವತಿಯಿಂದ ಬುಧವಾರ ಶತದೀಪೋತ್ಸವ ಆಚರಿಸಲಾಯಿತು. 
    ನಗರದ ಮಂಡಲದ ಕಾರ್ಯಾಲಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವ ವಹಿಸಿದ್ದರು. ಕಾರ್ಯಾಲಯದ ಆವರಣ  ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ಕಾರ್ಯಕರ್ತರು ಶತ ದೀಪಗಳನ್ನು ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.
    ಪಕ್ಷದ ಮುಖಂಡರಾದ ಕೆ.ಎನ್ ಶ್ರೀಹರ್ಷ ಮಾತನಾಡಿ, ಕವಿ ಹೃದಯದ ಅಟಲ್ ಜೀ ಅವರಿಗೂ ಭದ್ರಾವತಿ ನಗರಕ್ಕೂ ಅವಿನಾಭಾವ ಸಂಬಂಧವಿದೆ. ೧೯೮೪ರ ಲೋಕಸಭಾ ಚುನಾವಣೆಯಲ್ಲಿ ಗ್ವಾಲಿಯರ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಾಜಪೇಯಿ ಸೋಲು ಕಂಡಿದ್ದರು, ಇದರಿಂದ ನೊಂದ ಸಿದ್ದಾಪುರ ಲಕ್ಷ್ಮೀನಾರಾಯಣ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದ ವಾಜಪೇಯಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದಾದ ನಂತರ ಈ ಜಿಲ್ಲೆಗೆ ಬಂದಾಗಲೆಲ್ಲ ಲಕ್ಷ್ಮೀನಾರಾಯಣನನ್ನು ನೆನೆಯುತ್ತಿದ್ದರು. ಅಟಲ್ ಜೀ ಕಡೆಯದಾಗಿ ೧೯೯೩ರಲ್ಲಿ ಕನಕಮಂಟಪಕ್ಕೆ ಬಂದು ಭಾಷಣ ಮಾಡುವ ವೇಳೆ ಮಳೆ ಹೆಚ್ಚಾಗಿದ್ದರಿಂದ ಭಾಷಣ ಮೊಟಕು ಮಾಡಿ ಪುನಃ ಬರುತ್ತೇನೆ ಎಂದು ಹೇಳಿ ಹೋದವರು ಬರಲೇ ಇಲ್ಲ ಎಂದು ಅಟಲ್ ಜೀ ಅವರನ್ನು ನೆನಪು ಮಾಡಿದರು. 
    ರಾಷ್ಟ್ರದ ಅಭಿವೃದ್ಧಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುವ ಮೂಲಕ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಆಡಳಿತದಲ್ಲಿ ದೇಶದ ಪ್ರಗತಿಗೆ ಹೊಸ ದಾರಿ ಕೊಂಡುಕೊಳ್ಳುವ ಜೊತೆಗೆ ವಿದೇಶಾಂಗ ನೀತಿಯಲ್ಲಿ ಹೊಸ ದಿಕ್ಕು ಕಾಣಲಾಯಿತು. ರಾಷ್ಟ್ರದ ಸಮಸ್ಯೆಗಳಿಗೆ ಸೂಕ್ತ ದೂರದೃಷ್ಟಿಯ ನಿವಾರಣೆ ಕಂಡವರು. ಅವರ ದರ್ಶನ ಭಾಗ್ಯ ಪಡೆದ ನಾವೇ ಪುಣ್ಯವಂತರು ಎಂದರು. 
    ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಸುಶಾಸನ ದಿನ ಕಾರ್ಯಕ್ರಮದ ಸಂಚಾಲಕ ಡಿ.ಆರ್ ಸಾಗರ್,  ಸಹ ಸಂಚಾಲಕ ಕಲ್ಲೇಶ್, ಎಂ. ಮಂಜುನಾಥ್, ಪ್ರಮುಖರಾದ ಬಿ.ಜಿ ರಾಮಲಿಂಗಯ್ಯ, ವಿವಿಧ ಮೋರ್ಚಾಗಳ ಅಧ್ಯಕ್ಷರಾದ ರಾಜಶೇಖರ್, ಧನುಷ್ ಬೋಸ್ಲೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸನ್ನ ಕುಮಾರ್ ಬಾರಂದೂರು, ಸಚ್ಚಿದಾನಂದ, ಉಮಾವತಿ, ಲೋಲಾಕ್ಷಿ, ಜಯಲಕ್ಷ್ಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, December 24, 2024

ಇಂದಿರಾ ಕ್ಯಾಂಟೀನ್ ಆಹಾರ ಗುಣಮಟ್ಟ ಪರಿಶೀಲಿಸಿ, ಹೊಸ ಡಿಜಿಟಲ್ ಭಾವಚಿತ್ರ ಅಳವಡಿಸಿ

ಭದ್ರಾವತಿ ನಗರದಲ್ಲಿರುವ ಎರಡು ಇಂದಿರಾ ಕ್ಯಾಂಟೀನ್‌ಗಳ ಆಹಾರ ಗುಣಮಟ್ಟ ಪರಿಶೀಲನೆ ನಡೆಸುವ ಜೊತೆಗೆ ಹೊಸದಾಗಿ ಇಂದಿರಾ ಗಾಂಧಿಯವರ ಡಿಜಿಟಲ್ ಭಾವಚಿತ್ರ ಅಳವಡಿಸುವಂತೆ ಒತ್ತಾಯಿಸಿ ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಮಂಗಳವಾರ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್‌ಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ: ನಗರದಲ್ಲಿರುವ ಎರಡು ಇಂದಿರಾ ಕ್ಯಾಂಟೀನ್‌ಗಳ ಆಹಾರ ಗುಣಮಟ್ಟ ಪರಿಶೀಲನೆ ನಡೆಸುವ ಜೊತೆಗೆ ಹೊಸದಾಗಿ ಇಂದಿರಾ ಗಾಂಧಿಯವರ ಡಿಜಿಟಲ್ ಭಾವಚಿತ್ರ ಅಳವಡಿಸುವಂತೆ ಒತ್ತಾಯಿಸಿ ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದಿಂದ ಮಂಗಳವಾರ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್‌ಗೆ ಮನವಿ ಸಲ್ಲಿಸಲಾಯಿತು. 
    ನಗರದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿರುವ ಹಾಗು ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಳವಡಿಸಲಾಗಿರುವ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಭಾವಚಿತ್ರ ತುಂಬಾ ಹಳೇಯದಾಗಿದ್ದು, ಅಲ್ಲದೆ ಹಾಳಾಗಿದೆ.  ಈ ಹಿನ್ನಲೆಯಲ್ಲಿ ಹೊಸದಾಗಿ ಡಿಜಿಟಲ್ ಭಾವಚಿತ್ರ ಅಳವಡಿಸಬೇಕು. ಕ್ಯಾಂಟೀನ್‌ನಲ್ಲಿ ಆಹಾರ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಲಾಗಿದೆ. 
    ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ. ಗಂಗಾಧರ್, ಜಗದೀಶ್ ಬೋಸ್ಲೆ, ಹರೀಶ್ ಕುಮಾರ್, ಮಹಮದ್ ರಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ವರ್ಣಭೇದ ನೀತಿ ಹುಟ್ಟಿಹಾಕಿ ರಾಜಕೀಯ ಲಾಭ

ಬಿಜೆಪಿ, ಸಂಘ ಪರಿವಾರಗಳ ಏಕೈಕ ಮಾರ್ಗ : ಶಿವಬಸಪ್ಪ ಆರೋಪ 


ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಗೃಹ ಸಚಿವ ಅಮಿತ್ ಶಾರವರು ಅಂಬೇಡ್ಕರ್‌ರವರ ಬಗ್ಗೆ ಹಗುರವಾಗಿ ಮಾತನಾಡಿ ಅಪಮಾನ ಮಾಡಿರುವುದನ್ನು ಖಂಡಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುವ ಮೂಲಕ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.    
    ಭದ್ರಾವತಿ : ಈ ದೇಶದಲ್ಲಿ ಮನಸ್ಮೃತಿಯನ್ನು ಮತ್ತೆ ಜಾರಿ ಮಾಡಿ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ವರ್ಣಭೇದ ನೀತಿಯನ್ನು ಹುಟ್ಟುಹಾಕುವ ಮೂಲಕ ರಾಜಕೀಯ ಲಾಭ ಪಡೆಯುವುದು ಬಿಜೆಪಿ ಮತ್ತು ಸಂಘ ಪರಿವಾರಗಳಿಗೆ ಇರುವ ಏಕೈಕ ಮಾರ್ಗ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಶಿವಬಸಪ್ಪ ಆರೋಪಿಸಿದರು.
    ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಗೃಹ ಸಚಿವ ಅಮಿತ್ ಶಾರವರು ಅಂಬೇಡ್ಕರ್‌ರವರ ಬಗ್ಗೆ ಹಗುರವಾಗಿ  ಮಾತನಾಡಿ ಅಪಮಾನ ಮಾಡಿರುವುದನ್ನು ಖಂಡಿಸಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ವತಿಯಿಂದ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. 
    ದೇವರು, ಧರ್ಮದ ಹೆಸರಿನಲ್ಲಿ ಸಾವಿರಾರು ವರ್ಷಗಳಿಂದ ಶೋಷಣೆ ಮಾಡಿದ ಮನುವಾದಿಗಳಿಗೆ ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ಅಪಮಾನ ಮಾಡುತ್ತಿರುವುದು ಇದೇ ಮೊದಲೆನಲ್ಲ. ಗೃಹ ಸಚಿವ ಅಮಿತ್ ಶಾರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. 
       ಪ್ರತಿಭಟನೆ ನೇತೃತ್ವ ವಹಿಸಿದ್ದ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿ, ಸಂವಿಧಾನಕ್ಕೆ, ಡಾ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ಗೃಹ ಮಂತ್ರಿ ಅಮಿತ್ ಶಾರವರು ತಮ್ಮ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಅಲ್ಲದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂಬೇಡ್ಕರ್‌ರವರ ಬಗ್ಗೆ ಗೌರವ ಹೊಂದಿದ್ದರೆ ತಕ್ಷಣ ಗೃಹ ಮಂತ್ರಿ ಅಮಿತ್ ಶಾರವರ ರಾಜೀನಾಮೆ ಪಡೆಯಬೇಕೆಂದು ಆಗ್ರಹಿಸಿ ಇಲ್ಲವಾದರೆ ಅಮಿತ್ ಶಾ ರವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕುವವರೆಗೂ ನಡೆಯುವ ಹೋರಾಟಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. 
    ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಎಂ. ಏಳು ಕೋಟಿ, ಜಿಲ್ಲಾ ಸಂಘಟನಾ ಸಂಚಾಲಕ ಆರ್. ತಮ್ಮಯ್ಯ, ಗ್ರಾಮಾಂತರ ವಿಭಾಗದ ಜಿಲ್ಲಾ ಸಂಘಟನಾ ಸಂಚಾಲಕ ಬಿ. ಕೃಷ್ಣಪ್ಪ, ತಾಲೂಕು ಸಂಚಾಲಕ ಕಾಚಗೊಂಡನಹಳ್ಳಿ ನಾಗರಾಜ್, ಶಿವಮೊಗ್ಗ ತಾಲೂಕು ಸಂಚಾಲಕ ರಮೇಶ್ ಚಿಕ್ಮರಡಿ, ಶಿವಮೊಗ್ಗ ನಗರ ಸಂಚಾಲಕ ಹರಿಗೆ ರವಿ, ಕಡದಕಟ್ಟೆ ರಾಜಶೇಖರ್,  ಬೊಮ್ಮೇನಹಳ್ಳಿ ಶ್ರೀನಿವಾಸ್, ಮುತ್ತು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ಇದಕ್ಕೂ ಮೊದಲು ರಂಗಪ್ಪ ವೃತ್ತದಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ನಂತರ ತಾಲೂಕು ಕಛೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 

ಸಮಯ ವ್ಯರ್ಥಮಾಡದೆ ದೇಶದ ಬೆಳವಣಿಗೆಗೆ ಪೂರಕವಾದ ಚರ್ಚೆ ನಡೆಸಿ ಗೌರವಯುತವಾಗಿ ನಡೆದುಕೊಳ್ಳಲಿ

ಅಧಿವೇಶನದಲ್ಲಿ ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ಸದಸ್ಯರಿಗೆ ಎಚ್ಚರಿಕೆ ನೀಡಲಿ : ಮನವಿ 

ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ದೇಶದ ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ ಅಧಿವೇಶಗಳ ಸಂದರ್ಭದಲ್ಲಿ ಸಂಸದರು, ಶಾಸಕರು ಗೌರವಯುತವಾಗಿ ನಡೆದುಕೊಳ್ಳುವಂತೆ ಸೂಚಿಸುವಂತೆ ಭದ್ರಾವತಿ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ತಹಸೀಲ್ದಾರ್ ಮೂಲಕ ಮನವಿ ಮಾಡಿದ್ದಾರೆ. 
    ಭದ್ರಾವತಿ: ರಾಷ್ಟ್ರಪತಿಗಳು ಮಧ್ಯ ಪ್ರವೇಶ ಮಾಡಿ ದೇಶದ ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ ಅಧಿವೇಶಗಳ ಸಂದರ್ಭದಲ್ಲಿ ಸಂಸದರು, ಶಾಸಕರು ಗೌರವಯುತವಾಗಿ ನಡೆದುಕೊಳ್ಳುವಂತೆ ಸೂಚಿಸುವಂತೆ ಜನ್ನಾಪುರ ಫಿಲ್ಟರ್‌ಶೆಡ್ ನಿವಾಸಿ, ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಮನವಿ ಮಾಡಿದ್ದಾರೆ. 
    ಈ ಸಂಬಂಧ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಇತ್ತೀಚಿನ ದಿನಮಾನಗಳಲ್ಲಿ ಲೋಕಸಭೆ, ರಾಜ್ಯಸಭೆ ಎಲ್ಲಾ ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ದೇಶದ ರೈತರ, ಎಲ್ಲಾ ವರ್ಗದ ನಾಗರಿಕರ ಹಾಗೂ ಉತ್ತಮ ರೀತಿಯ ಚರ್ಚೆಗಳು ಆಗದೆ ಕೇವಲ ವೈಯಕ್ತಿಕ ಹಿತಾಸಕ್ತಿಗಳಿಂದ ರಾಜಕಾರಣಿಗಳು ಅಧಿವೇಶನ ನಡೆಯುವ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಜಗಳ ಮಾಡಿಕೊಳ್ಳುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹಲ್ಲೆ ಮಾಡುವ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಶಾಸಕರ, ಸಂಸದರ ಇಂತಹ ನಡವಳಿಕೆಯಿಂದ ದೇಶದ ನಾಗರಿಕರು ತಲೆತಗ್ಗಿಸುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಲಾಗಿದೆ. 
    ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತ ದೇಶದಲ್ಲಿ ಸಂವಿಧಾನದ ಉದ್ದೇಶಗಳನ್ನು ಇಂದಿನ ರಾಜಕಾರಣಿಗಳು ಅನುಸರಿಸದೇ ಇರುವುದು ವಿಪರ್ಯಾಸದ ಸಂಗತಿ. ಬುದ್ಧ, ಬಸವ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳು ಜನ್ಮ ಪಡೆದ ದೇಶ ನಮ್ಮ ಭವ್ಯ ಭಾರತ. ಆದರೆ ಇಂದಿನ ರಾಜಕಾರಣಿಗಳಿಂದ ದೇಶ ಮುಂದುವರೆಯುವುದು ಕಷ್ಟ ಸಾಧ್ಯ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಅಧಿವೇಶನಗಳು ಸಾರ್ವಜನಿಕರ, ರೈತರ, ದೀನದಲಿತರ, ಎಲ್ಲ ಧರ್ಮದವರ ಬದುಕಿಗೆ ಪೂರಕವಾಗಿರುವಂತಹ ಚರ್ಚೆ ಆಗಬೇಕೆ ಹೊರತು ಭ್ರಷ್ಟ ರಾಜಕಾರಣಿಗಳ ಕಚ್ಚಾಟದಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿವೇಶನ ನಡೆಯುವ ಸಂದರ್ಭಗಳಲ್ಲಿ ರಾಜಕಾರಣಿಗಳು ಕ್ಷುಲ್ಲಕ ಕಾರಣಕ್ಕೆ ಅಧಿವೇಶನದ ಸಮಯ ವ್ಯರ್ಥ ಮಾಡಿ ಸದನಗಳು ಸರಿಯಾಗಿ ನಡೆಯದಂತೆ ಮಾಡಿದರೆ ಅಂತಹ ರಾಜಕಾರಣಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅಧಿವೇಶನ ನಡೆಯಲು ತಗಲುವ ಖರ್ಚು ವೆಚ್ಚಗಳನ್ನು ಅವರೇ ಭರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. 
    ಅಲ್ಲದೆ ಅಧಿವೇಶನದ ಸಮಯ ವ್ಯರ್ಥವಾಗಲು ಕಾರಣರಾಗುವ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಕಾನೂನು ಜಾರಿತರುವ ಮೂಲಕ ಸಂವಿಧಾನದ ಆಶಯ ಕಾಪಾಡಬೇಕೆಂದು ಆಗ್ರಹಿಸಿ ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.