Friday, February 28, 2025

ಲಂಚದ ಹಣ ಸ್ವೀಕರಿಸಿದ ಪ್ರಕರಣ : ಸರ್ಕಾರಿ ಅಧಿಕಾರಿಗೆ ಶಿಕ್ಷೆ

    ಭದ್ರಾವತಿ : ಲಂಚದ ಹಣ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಈ ಹಿಂದೆ ಭೂಮಾಪನ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿ. ಮಲ್ಲಿಕಾರ್ಜುನಯ್ಯನವರಿಗೆ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 
    ತಾಲೂಕಿನ ಮತ್ತಿಘಟ್ಟ ಗ್ರಾಮದ ಎಂ.ಎಚ್ ಬಸವರಾಜಪ್ಪ ಬಿನ್ ಲೇಟ್ ಹನುಮಂತಪ್ಪನವರ ಹೆಸರಿನಲ್ಲಿದ್ದ ಸರ್ವೆ ನಂ. ೫೬/೧೦ರ ೧ ಎಕರೆ ೨೦ ಗುಂಟೆ ಜಮೀನಿನ ಪಕ್ಕ ಪೋಡಿ ದುರಸ್ಥಿ ಮಾಡಿಕೊಡುವ ಬಗ್ಗೆ  ಅಂದು ಎ.ಡಿ.ಎಲ್.ಆರ್ ಕಛೇರಿಯ ಭೂಮಾಪನಾ ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನಯ್ಯ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. 
    ಶಿವಮೊಗ್ಗ ನಗರ ವಿನೋಬನಗರ ಬಡಾವಣೆಯ ಕೆಂಚಪ್ಪ ಲೇಔಟ್ ವಾಸದ ಮನೆಯಲ್ಲಿ ದೂರುದಾರರಿಂದ ಜುಲೈ ೨೩, ೨೦೧೩ ರಂದು ಮಲ್ಲಿಕಾರ್ಜುನಯ್ಯ ೧೫,೦೦೦ ರು. ಲಂಚದ ಹಣ ಕೇಳಿ ಪಡೆದುಕೊಳ್ಳುವಾಗ ದಾಳಿ ನಡೆಸಲಾಗಿತ್ತು. ಲೋಕಾಯುಕ್ತ ಪೊಲೀಸ್ ಠಾಣೆ ಜಿಲ್ಲಾ ನಿರೀಕ್ಷಕ ಕೆ.ಸಿ ಪುರುಷೋತ್ತಮರವರು ಪ್ರಕರಣದ ತನಿಖೆ ಕೈಗೊಂಡು ಮಲ್ಲಿಕಾರ್ಜುನಯ್ಯ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಿದ್ದರು. 
    ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಫೆ.೨೮ರ ಶುಕ್ರವಾರ ಶಿವಮೊಗ್ಗ ೧ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಜೆ ಮರುಳಸಿದ್ದಾರಾದ್ಯ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮಲ್ಲಿಕಾರ್ಜುನಯ್ಯರಿಗೆ ಒಂದು ವರ್ಷ ಆರು ತಿಂಗಳು ಕಾರಾಗೃಹ ಶಿಕ್ಷೆ ಮತ್ತು ೩೦ ಸಾವಿರ ರು. ದಂಡ ವಿಧಿಸಿ ಆದೇಶಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಂ.ಡಿ ಸುಂದರ್ ರಾಜ್‌ರವರು ವಾದ ಮಂಡಿಸಿದರು. 

ಮಜ್ಜಿ ಕಟ್ಟೆ ಕೆರೆಯಲ್ಲಿ `ನಮ್ಮೂರು ನಮ್ಮ ಕೆರೆ' ಯೋಜನೆಗೆ ಚಾಲನೆ

ಭದ್ರಾವತಿ ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್-೧ರ ವತಿಯಿಂದ ಪದ್ಮ ವಿಭೂಷಣ, ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಕ್ಷೇತ್ರದಲ್ಲಿ `ನಮ್ಮೂರು ನಮ್ಮ ಕೆರೆ' ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಯೋಜನೆಗೆ ಚಾಲನೆ ನೀಡಿದರು. 
    ಭದ್ರಾವತಿ: ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್-೧ರ ವತಿಯಿಂದ ಪದ್ಮ ವಿಭೂಷಣ, ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಕ್ಷೇತ್ರದಲ್ಲಿ `ನಮ್ಮೂರು ನಮ್ಮ ಕೆರೆ' ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಯೋಜನೆಗೆ ಚಾಲನೆ ನೀಡಿದರು. 
    ಕೆರೆ ಹೂಳು ತೆಗೆದು ಜನ ಹಾಗು ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವ ಜೊತೆಗೆ ಅಂತರ್ಜಲ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ `ನಮ್ಮೂರು ನಮ್ಮ ಕೆರೆ' ಯೋಜನೆ ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜ್ಜಿಗೇನಹಳ್ಳಿ ಗ್ರಾಮದ ಮಜ್ಜಿ ಕಟ್ಟೆ ಕೆರೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.  
    ಕೆರೆ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ವಸಂತ್. ಅಧ್ಯಕ್ಷ ದೇವರಾಜ್, ಯೋಜನೆ ಜಿಲ್ಲಾ ನಿರ್ದೇಶಕ ಮುರುಳಿಧರ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಪ್ರಕಾಶ್ ನಾಯಕ, ಅಭಿಯಂತರ ಗಣಪತಿ,  ಗ್ರಾಮ ಪಂಚಾಯತಿ ಅಧ್ಯಕ್ಷೆ ನಾಗಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಖರ್ ನಾಯಕ್, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು, ಗ್ರಾಮಸ್ಥರು, ರೈತರು ಉಪಸ್ಥಿತರಿದ್ದರು. 

ದೇವಸ್ಥಾನ ಆಡಳಿತ ಮಂಡಳಿಯಿಂದ ಶಾರದ ಅಪ್ಪಾಜಿಗೆ ಸನ್ಮಾನ

ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಶ್ರೀ ನಂದಿ, ಈಶ್ವರ ಮತ್ತು ಸಂಕಷ್ಟಹರ ಗಣಪತಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಜಾತ್ಯತೀತ ಜನಾತದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ: ಅಪ್ಪರ್‌ಹುತ್ತಾದಲ್ಲಿರುವ ಶ್ರೀ ನಂದಿ, ಈಶ್ವರ ಮತ್ತು ಸಂಕಷ್ಟಹರ ಗಣಪತಿ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಜಾತ್ಯತೀತ ಜನಾತದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಮಹಾಶಿವರಾತ್ರಿ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದ ಶಾರದ ಅಪ್ಪಾಜಿಯವರನ್ನು ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಸ್ಥಳೀಯ ಮುಖಂಡರು, ಶಂಕರ್‌ನಾಗ್ ಆಟೋ ನಿಲ್ದಾಣದ ಅಧ್ಯಕ್ಷರು, ಪದಾಧಿಕಾರಿಗಳು, ಆಟೋ ಚಾಲಕರು, ಉಮಾ ಭಜನಾ ಮಂಡಳಿ ಸದಸ್ಯರು ಸೇರಿದಂತೆ ಇನ್ನಿತರರು ಸನ್ಮಾನಿಸಿ ಗೌರವಿಸಿದರು. 
    ಶಾರದ ಅಪ್ಪಾಜಿ ಮಾತನಾಡಿ, ಮಾಜಿ ಶಾಸಕರಾದ ದಿವಂಗತ ಎಂ.ಜೆ ಅಪ್ಪಾಜಿಯವರು ಕ್ಷೇತ್ರದ ಜನತೆಗೆ ನೀಡಿರುವ ಕೊಡುಗೆ ಅಪಾರವಾಗಿದೆ. ಅವರ ಮೇಲಿನ ಅಭಿಮಾನ ಎಂದು ಮರೆಯಲು ಸಾಧ್ಯವಿಲ್ಲ. ದೇವಸ್ಥಾನ ಸಮಿತಿಗೆ ಹಾಗು ಸ್ಥಳೀಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
    ಪ್ರಮುಖರಾದ ಟಿ. ಚಂದ್ರೇಗೌಡ, ಪ್ರಜಾಪ್ರತಿನಿಧಿ ಸುರೇಶ್, ಮಧುಸೂಧನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಮಹಿಳೆಯರು ಸದಾ ಕಾಲ ಕ್ರಿಯಾಶೀಲರಾಗಿರಿ : ಸಿಸ್ಟರ್ ವಿಲ್ಮಾ ರೆಬೆಲ್ಲೊ

ಭದ್ರಾವತಿ ನಿರ್ಮಲ ಮಹಿಳಾ ಸೇವಾ ಕೇಂದ್ರದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಸ್ಟರ್ ವಿಲ್ಮಾ ರೆಬೆಲ್ಲೊ, ಡಾ. ಇಸಬೆಲ್ಲಾ ಜೇವಿಯರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
    ಭದ್ರಾವತಿ : ಮಹಿಳೆಯರು ಸದಾ ಕಾಲ ಕ್ರಿಯಾಶೀಲರಾಗಿರಬೇಕು. ತಮ್ಮಲ್ಲಿನ ಸ್ವಾಭಾವಿಕ ಶಕ್ತಿ, ನೇತೃತ್ವ ಶಕ್ತಿ ಮತ್ತು ಕ್ರಿಯಾ ಶಕ್ತಿ ಕುರಿತು ತಿಳುವಳಿಕೆ ಹೊಂದಬೇಕೆಂದು ಹಳೇನಗರದ ನಿರ್ಮಲ ಆಸ್ಪತ್ರೆ ವ್ಯವಸ್ಥಾಪಕಿ ಹಾಗು ನಿರ್ಮಲ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ವಿಲ್ಮಾ ರೆಬೆಲ್ಲೊ ಹೇಳಿದರು.
    ಅವರು ನಿರ್ಮಲ ಮಹಿಳಾ ಸೇವಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರಲ್ಲಿ ಅದ್ಭುತ ಶಕ್ತಿಗಳಿದ್ದು, ನಮ್ಮ ಇತಿಹಾಸದಲ್ಲಿನ ಆನೇಕ ವೀರ ಮಹಿಳೆಯರು ಇದಕ್ಕೆ ಉದಾಹರಣೆಯಾಗಿದ್ದಾರೆ. ಇಂತಹ ಮಹಿಳೆಯರ ಆದರ್ಶತನಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು. 
    ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಇಸಬೆಲ್ಲಾ ಜೇವಿಯರ್ ಮಾತನಾಡಿ, ಹೆಣ್ಣು-ಗಂಡು ಎಂಬ ಭೇದಭಾವವಿಲ್ಲ. ಮಹಿಳೆಯರು, ಪುರುಷರು ಎಲ್ಲಾ ಒಂದೇ. ಲಿಂಗ ತಾರತಮ್ಯ ಮಾಡಬಾರದು. ಡಾ. ಬಿ.ಆರ್ ಅಂಬೇಡ್ಕರ್‌ರವರು ಸಂವಿಧಾನ ರಚಿಸದಿದ್ದಲ್ಲಿ ನಾವುಗಳು ಇಷ್ಟೊಂದು ಸ್ವತಂತ್ರವಾಗಿ ಜೀವಿಸಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಜೀವನ ನಾವೇ ರೂಪಿಸಿಕೊಳ್ಳಬೇಕು ಎಂದರು. 
    ಸಿಸ್ಟರ್ ಬರ್ನಾಂಡಿಸ್ ಫೆರ್ನಾಂಡಿಸ್, ಸಿಸ್ಟರ್ ವಿನ್ಸಿ, ಸಿಸ್ಟರ್ ರಜಿನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಸ್ಥೆ ನಿರ್ದೇಶಕಿ ಸಿಸ್ಟರ್ ತೆರೇಸಾ ಮಸಕಾರೇನೆಸ್ ಕ್ರೀಡಾ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಒಕ್ಕೂಟದ ಸದಸ್ಯರಾದ ಜ್ಯೂಲಿಯಟ್ ರೇಷ್ಮಾ ಮತ್ತು ರೋಜ್ ಮೇರಿರವರು ಬಹುಮಾನಗಳನ್ನು ವಿತರಿಸಿದರು.
    ಆರಂಭದಲ್ಲಿ ಅಶ್ವಿನಿ ಮತ್ತು ತಂಡದವರಿಂದ ಪ್ರಾರ್ಥನಾ ನೃತ್ಯ ನಡೆಯಿತು. ಚೈತ್ರ ಸ್ವಾಗತಿಸಿ, ಭಾನುಪ್ರಿಯ ನಿರೂಪಿಸಿದರು. ಕವಿತ ವಾರ್ಷಿಕ ವರದಿ ಮಂಡಿಸಿದರು. ನಾಜಿಯಾ ವಂದಿಸಿದರು.  

ನೋಟಿಸ್‌ಗೆ ಯಾವುದೇ ರೀತಿ ಆತಂಕ ಬೇಡ : ಬಿ.ಕೆ ಸಂಗಮೇಶ್ವರ್

ಬಗರ್ ಹುಕುಂ ರೈತರು, ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಸ್ಪಷ್ಟನೆ 

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ನೀಡಿರುವ ನೋಟಿಸ್‌ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಉಪವಿಭಾಗಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ರೈತರು, ಗ್ರಾಮಸ್ಥರು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದ್ದಾರೆ. 
    ಭದ್ರಾವತಿ:  ಬಗರ್ ಹುಕುಂ ಸಾಗುವಳಿದಾರರಿಗೆ ನೀಡಿರುವ ನೋಟಿಸ್‌ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗು ಉಪವಿಭಾಗಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ರೈತರು, ಗ್ರಾಮಸ್ಥರು ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದ್ದಾರೆ. 
    ಅವರು ಈ ಸಂಬಂಧ ಶುಕ್ರವಾರ ಗೃಹ ಕಛೇರಿಯಲ್ಲಿ ಅರಣ್ಯ ಹಾಗು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಬಗರ್ ಹುಕುಂ ರೈತರ ಸಭೆ ನಡೆಸಿ ಈ ಕುರಿತು ಮಾತನಾಡಿದರು. ಒಂದು ವೇಳೆ ನೋಟಿಸ್ ಸಂಬಂಧ ಮುಂದಿನ ದಿನಗಳಲ್ಲಿ ಯಾವುದೇ ರೀತಿ ಸಮಸ್ಯೆಗಳು ಎದುರಾದಲ್ಲಿ ಹೋರಾಟಕ್ಕೂ ಸಹ ಸಿದ್ದನಾಗಿದ್ದೇನೆ. ಈ ಹಿನ್ನಲೆಯಲ್ಲಿ ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದರು. 
    ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಸ್ ರೆಡ್ಡಿ ಮಾತನಾಡಿ, ಸರ್ವೋಚ್ಛ ನ್ಯಾಯಾಲಯ ಆದೇಶದಂತೆ ಅಗತ್ಯ ದಾಖಲಾತಿಗಳೊಂದಿಗೆ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ನೋಟಿಸ್ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಆತಂಕಕ್ಕೆ ಒಳಗಾಗಬಾರದು. ಬಗರ್ ಹುಕುಂ ರೈತರು, ಗ್ರಾಮಸ್ಥರು ತಮ್ಮ ಬಳಿ ಇರುವ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಗೊಂದಲ ಬಗೆಹರಿಸಿಕೊಳ್ಳಬಹುದು. ಒಂದು ವೇಳೆ ಸರ್ವೋಚ್ಛ ನ್ಯಾಯಾಲಯದ ಮಾರ್ಗಸೂಚಿ ಉಲ್ಲಂಘನೆಗಳು ಕಂಡು ಬಂದಲ್ಲಿ ಮಾತ್ರ ಮುಂದಿನ ಕ್ರಮ ಕೈಗೊಳ್ಳುವ ಕುರಿತು ವರದಿ ನೀಡಲಾಗುವುದು ಎಂದರು. 
    ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್ ಮಾತನಾಡಿ, ರೈತರು ಹಾಗು ಗ್ರಾಮಸ್ಥರಲ್ಲಿ ಉಂಟಾಗಿರುವ ಆತಂಕ ದೂರ ಮಾಡುವ ಉದ್ದೇಶದಿಂದ ಶಾಸಕರು ನೇರವಾಗಿ ಸಭೆಯಲ್ಲಿ ಅಧಿಕಾರಿಗಳಿಂದಲೇ ಮಾಹಿತಿ ಕೊಡಿಸುತ್ತಿದ್ದಾರೆ. ಪಕ್ಷ ಯಾವುದೇ ಇರಲಿ ನಾವು ಎಂದಿಗೂ ರೈತರ ಪರವಾಗಿ ಇರುತ್ತೇವೆ. ಪಕ್ಷಾತೀತವಾಗಿ ಹೋರಾಟ ನಡೆಸುತ್ತೇವೆ. ಎಂದಿಗೂ ಮಾತು ತಪ್ಪುವುದಿಲ್ಲ. ಸರಿಯಾದ ದಾರಿಯಲ್ಲಿ ನಿಮ್ಮನ್ನು ಕೊಂಡೊಯ್ಯುವವರ ಪರವಾಗಿ ನಿಲ್ಲಿ ಎಂದು ಮನವಿ ಮಾಡಿದರು. 
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ತಹಸೀಲ್ದಾರ್ ಪರುಸಪ್ಪ ಕುರುಬರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ವಲಯ ಅರಣ್ಯಾಧಿಕಾರಿ ದುಗ್ಗಪ್ಪ  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Thursday, February 27, 2025

ಸಂವಿಧಾನ ಹಕ್ಕುಗಳ ಮಾನವ ಹಕ್ಕುಗಳ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ



ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಭದ್ರಾವತಿ ನ್ಯೂಟೌನ್ ರೋಟರಿ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಹಕ್ಕುಗಳ ಮಾನವ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಸಿ.ಪಿ.ಐ ರಾಜ್ಯ ಮಂಡಳಿ ಸದಸ್ಯರು, ಹಿರಿಯ ಕಾರ್ಮಿಕ ಮುಖಂಡರಾದ ಡಿ.ಸಿ ಮಾಯಣ್ಣ ಉದ್ಘಾಟಿಸಿದರು. 
    ಭದ್ರಾವತಿ: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನ್ಯೂಟೌನ್ ರೋಟರಿ ಸಮುದಾಯ ಭವನದಲ್ಲಿ ಗುರುವಾರ ಸಂವಿಧಾನ ಹಕ್ಕುಗಳ ಮಾನವ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಸಿ.ಪಿ.ಐ ರಾಜ್ಯ ಮಂಡಳಿ ಸದಸ್ಯರು, ಹಿರಿಯ ಕಾರ್ಮಿಕ ಮುಖಂಡರಾದ ಡಿ.ಸಿ ಮಾಯಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದಕ್ಕೂ ಮೊದಲು ಸಂವಿಧಾನ ಪೀಠಿಕೆ ವಾಚಿಸಲಾಯಿತು. 
    ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ ಉಪನ್ಯಾಸ ನೀಡಲಿದ್ದು, ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ.ನಾ ಶ್ರೀನಿವಾಸ್, ಎಂಪಿಎಂ ನೊಂದ ಕಾರ್ಮಿಕರ ಹೋರಾಟ ಸಮಿತಿ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಮಾನವ ಹಕ್ಕುಗಳ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್ ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಡಿಎಸ್‌ಎಸ್ ರಾಜ್ಯ ಮುಖಂಡರಾದ ಸತ್ಯ ಭದ್ರಾವತಿ ಮತ್ತು ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಗುರುತಿಸಿಕೊಂಡಿರುವ ಕಲಾವಿದ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಪೇಕ್ಷ ಮಂಜುನಾಥ್ ಅವರ ೬೦ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಅಲ್ಲದೆ ನಗರದ ಸುಮಾರು ೩೦ಕ್ಕೂ ಹೆಚ್ಚು ಗಣ್ಯರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. 
ಸಾಹಿತಿ ಅರಳೇಹಳ್ಳಿ ಅಣ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಮಾನವ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಮಹಿಳಾ ಸಂಘಟನೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಯಡಿಯೂರಪ್ಪ ೮೨ನೇ ಜನ್ಮದಿನ : ಹಣ್ಣು, ಬ್ರೆಡ್ ವಿತರಣೆ

ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ೮೨ನೇ ಜನ್ಮದಿನಾಚರಣೆ ಅಂಗವಾಗಿ ಭದ್ರಾವತಿ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು. 
    ಭದ್ರಾವತಿ: ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ೮೨ನೇ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಲಾಯಿತು. 
    ಪ್ರತಿ ವರ್ಷದಂತೆ ಈ ಬಾರಿ ಸಹ ಬಿಜೆಪಿ ತಾಲೂಕು ಮಂಡಲ ವತಿಯಿಂದ ದಣಿವರಿಯದ ಜನ ನಾಯಕ, ರೈತ ಬಂದು ಬಿ.ಎಸ್ ಯಡಿಯೂರಪ್ಪನವರ ಜನ್ಮದಿನಾಚರಣೆ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ಮೂಲಕ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ವಿಶೇಷವಾಗಿ ಆಚರಿಸಲಾಯಿತು. 
    ಈ ಸಂದರ್ಭದಲ್ಲಿ ಪ್ರಮುಖರು ಮಾತನಾಡಿ, ಯಡಿಯೂರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು, ದೀನದಲಿತರು ಹಾಗು ರೈತರಿಗಾಗಿ ಜಾರಿಗೆ ತಂದಿರುವ ಜಾರಿಗೆ ತಂದಿರುವ ಹಲವಾರು ಯೋಜನೆಗಳು ಇಂದಿಗೂ ಮಾದರಿಯಾಗಿವೆ. ಅವರು ನಡೆದು ಬಂದ ದಾರಿ, ಸರ್ವಜನಾಂಗದವರ ಏಳಿಗಾಗಿ ನಡೆಸಿರುವ ಹೋರಾಟಗಳು ಎಲ್ಲರಿಗೂ ಮಾರ್ಗದರ್ಶಕವಾಗಿವೆ ಎಂದು ಬಣ್ಣಿಸಿದರು. 


ಭದ್ರಾವತಿ ಹೊಸಮನೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಬಿಜೆಪಿ ಮಂಡಲ ವತಿಯಿಂದ ಬಿ.ಎಸ್ ಯಡಿಯೂರಪ್ಪನವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. 
    ಇದಕ್ಕೂ ಹೊಸಮನೆ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದಲ್ಲಿ ಬಿ.ಎಸ್ ಯಡಿಯೂರಪ್ಪನವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಗವಂತ ಇನ್ನೂ ಹೆಚ್ಚಿನ ಆಯುರಾರೋಗ್ಯ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು. 
    ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ನೇತೃತ್ವ ವಹಿಸಿದ್ದರು. ಪ್ರಮುಖರಾದ ಕೂಡ್ಲಿಗೆರೆ ಹಾಲೇಶ್, ಬಿ.ಜಿ ರಾಮಲಿಂಗಯ್ಯ, ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ಜಿ. ಆನಂದಕುಮಾರ್, ಎಚ್. ತೀರ್ಥಯ್ಯ, ಜೆ. ಮೂರ್ತಿ, ಕಾ.ರಾ ನಾಗರಾಜ್, ರಾಜಶೇಖರ್ ಉಪ್ಪಾರ, ಸತೀಶ್ ಕುಮಾರ್, ಹನುಮಂತನಾಯ್ಕ, ಅಣ್ಣಪ್ಪ, ಬಿ.ಎಸ್ ಶ್ರೀನಾಥ್, ರಾಜು, ಸುಬ್ರಮಣಿ, ರಘುರಾವ್, ಹರೀಶ್, ನರೇಂದ್ರ, ಧನುಷ್ ಬೋಸ್ಲೆ, ನಂದೀಶ್, ಶರವಣ, ಮಂಜುಳಾ, ಅನುಷಾ, ಶಕುಂತಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.