ಶುಕ್ರವಾರ, ಮಾರ್ಚ್ 28, 2025

ಅವ್ಯಸ್ಥೆಯ ಸಂಚಾರ ಸುಗಮಗೊಳಿಸಲು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರೊಂದಿಗೆ ಶುಕ್ರವಾರ ನಗರಸಭೆ ಆಡಳಿತ ಅಧ್ಯಕ್ಷೆ ಕೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿತು. 
    ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟಣೆ ಅಧಿಕವಾಗುತ್ತಿದ್ದು, ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಂಚಾರಿ ಪೊಲೀಸರೊಂದಿಗೆ ಶುಕ್ರವಾರ ನಗರಸಭೆ ಆಡಳಿತ ಅಧ್ಯಕ್ಷೆ ಕೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿತು. 
    ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಮಾತನಾಡಿ, ಈ ಹಿಂದೆ ಪೊಲೀಸ್ ಅಧಿಕಾರಿಗಳು ಪ್ರತಿನಿತ್ಯ ಸಂಜೆ ಬೀದಿಗೆ ಬರುತ್ತಿದ್ದರು. ಸುಗಮ ಸಂಚಾರಕ್ಕೆ ಮಾಧ್ಯಮ ಪ್ರತಿನಿಧಿ, ಮುಖಂಡರು, ಸಾರ್ವಜನಿಕರಿಂದ ಮಾಹಿತಿ ಪಡೆಯುತ್ತಿದ್ದರು. ಸ್ವತಃ ಅಧಿಕಾರಿಗಳೇ ನಗರಸಭೆ, ಮತ್ತಿತರರ ಸಿಬ್ಬಂದಿಗಳೊಂದಿಗೆ ಬಿಡಾಡಿ ದನಗಳನ್ನು  ಹಿಡಿದು ಠಾಣೆಗಳಲ್ಲಿ ಕಟ್ಟಿ ಹಾಕುತ್ತಿದ್ದರು. ಈಗ ಪೊಲೀಸ್ ಅಧಿಕಾರಿಗಳಿಗೆ ಜನ ಸಂಪರ್ಕವೇ ಇಲ್ಲವಾಗಿದೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕಾಲ ಕಳೆದು ಹೋಗುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿ, ಈ ಹಿಂದೆ ನಗರಸಭೆಯಿಂದ ಸಂಚಾರ ನಿಯಂತ್ರಣಕ್ಕಾಗಿ ೫ ಲಕ್ಷ ರೂ ವೆಚ್ಚದಲ್ಲಿ ಟವರ್, ಮೈಕ್, ಸಿಗ್ನಲ್ ಮಾಡಿಸಲಾಗಿತ್ತು. ಅವೆಲ್ಲವೂ ಈಗ ನಾಪತ್ತೆಯಾಗಿದೆ. ಎಲ್ಲಿಗೆ ಹೋಗಿದೆ ಪತ್ತೆ ಹಚ್ಚಿ ಎಂದು ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನಿಸಿದರು.  
    ಸದಸ್ಯ ಚನ್ನಪ್ಪ ಮಾತನಾಡಿ, ತರೀಕೆರೆ ರಸ್ತೆಯ ಗಾಂಧಿ ವೃತ್ತದಲ್ಲಿ ಗ್ಯಾರೇಜ್‌ಗಳ ಮುಂಭಾಗದಲ್ಲಿ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ರಿಪೇರಿ ಮಾಡುತ್ತಾ ಸಂಚಾರಕ್ಕೆ ಅಡ್ಡಿಪಡಿಸುತ್ತಾ ಸಂಚಾರಕ್ಕೆ ತೊಂದರೆಯಾಗಿದೆ. ಭದ್ರಾ ಕಾಲೋನಿ ಸರ್ಕಾರಿ ಶಾಲೆ ಮುಂಭಾಗ ಅಪಘಾತ ವಲಯವಾಗಿದೆ. ಅಲ್ಲಿ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ. ನಗರದೆಲ್ಲೆಡೆ ಸಂಚಾರ ವ್ಯವಸ್ಥೆ ತುಂಬಾ ಹದಗೆಟ್ಟಿದೆ ಸರಿಪಡಿಸಿ, ಟ್ರಾಫಿಕ್ ಸಿಗ್ನಲ್‌ಗೆ ಅಳವಡಿಕೆಗೆ ಅಗತ್ಯವಿರುವ ಅನುದಾನ ಸಂಬಂಧ ಶಾಸಕರ ಬಳಿ ಚರ್ಚಿಸೋಣ, ಮಾರ್ಕೆಟ್ ಬಳಿ ರಂಜಾನ್ ಹಾಗು ಯುಗಾದಿ ಹಬ್ಬಕ್ಕೆ ಸುಗಮ ವಾಹನ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಿ ಎಂದರು.
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್ ಮಾತನಾಡಿ, ಯಾವ ರಸ್ತೆಯಲ್ಲಿ ನೋಡಿದರೂ ಬಾರ್‌ಗಳ ಮುಂದೆ ಮತ್ತು ನಗರಸಭೆ ಕಚೇರಿ ಮುಂದೆ ವಾಹನಗಳ ದಟ್ಟಣೆ ಹೆಚ್ಚಾಗಿದೆ. ರೈಲು ಬರುವಾಗ ಬಿ.ಎಚ್.ರಸ್ತೆ ಲಕ್ಷ್ಮೀ ಸ್ವೀಟ್ ಹೌಸ್, ಸೃಷ್ಟಿ ಸಿಲ್ಕ್ಸ್ ಮುಂಭಾಗ ಆಟೋಗಳ ನಿಲ್ದಾಣವಾಗಿ ಮಾರ್ಪಾಡಾಗುತ್ತಿದ್ದು, ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದರು. 
    ಸದಸ್ಯ ಜಾರ್ಜ್ ಮಾತನಾಡಿ, ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ವಾಹನಗಳು ನಿಲ್ಲಿಸಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದರು, ಸದಸ್ಯ ಮೋಹನ್‌ಕುಮಾರ್ ಮಾತನಾಡಿ, ಬಿ.ಎಚ್ ರಸ್ತೆಯ ಫುಟ್‌ಪಾತ್ ಜನರಿಗೆ ಉಪಯೋಗವಾಗದೆ ವ್ಯಾಪಾರಸ್ಥರು, ಕೋಳಿ ಅಂಗಡಿ ಮುಂತಾದವರಿಂದ ತೊಂದರೆಯಾಗುತ್ತಿದೆ, ಪೊಲೀಸ್ ಅಧಿಕಾರಿಗಳ ಆದೇಶದಂತೆ ಪೊಲೀಸರು ಕೇವಲ ಕೇಸುಗಳನ್ನು ಹಾಕಿಕೊಂಡು ಕಾಲ ಕಳೆಯುತ್ತಿದ್ದಾರೆ. ಸುಗಮ ರಸ್ತೆ ಸಂಚಾರಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಸದಸ್ಯ ಆರ್. ಶ್ರೇಯಸ್(ಚಿಟ್ಟೆ)ಮಾತನಾಡಿ, ಎಲ್ಲಾ ವೃತ್ತಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂದರು. ಸದಸ್ಯ ಹನುಮಂತಪ್ಪ ಅಂಬೇಡ್ಕರ್ ವೃತ್ತದಲ್ಲಿರುವ ಕಟ್ಟೆಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಮಾತನಾಡಿ, ನಗರದೆಲ್ಲೆಡೆ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದ ತೊಂದರೆಯಾಗುತ್ತಿದೆ. ಶಾಲೆಗಳ ಕಾಂಪೌಂಡ್ ಹಾರಿ ಮಧ್ಯ ಸೇವನೆ ಮಾಡುತ್ತಾರೆ. ಮಹಿಳೆಯರು ರಸ್ತೆಗಳಲ್ಲಿ ಓಡಾಡುವುದೇ ತೋದರೆಯಾಗಿದೆ. ಪೊಲೀಸರು ಶಿಸ್ತು ಕ್ರಮ ಜರುಗಿಸಿ ಎಂದರು.  
    ಪೊಲೀಸ್ ನಗರವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ಮಾತನಾಡಿ, ನಗರದಲ್ಲಿ ಟಿ.ಕೆ ರಸ್ತೆ ಮಾದರಿ ರಸ್ತೆ ಡಿವೈಡರ್ ಇದ್ದರೆ ಸಿಗ್ನಲ್ ಲೈಟ್ಸ್ ಅಳವಡಿಸುವ ವ್ಯವಸ್ಥೆ ಮಾಡಬಹುದು. ಇಲ್ಲದಿರುವುದರಿಂದ ಅವಶ್ಯಕತೆಯಿಲ್ಲ. ಇರುವೆಡೆ ಸಿಗ್ನಲ್‌ಲೈಟ್ಸ್ ಅಳವಡಿಕೆಗೆ ಸುಮಾರು ಎರಡೂವರೆ ಲಕ್ಷ ರು. ಬೇಕಾಗುತ್ತದೆ. ನಗರದಲ್ಲಿ ಮದ್ಯಸೇವಿಸಿ ವಾಹನ ಚಲಾಯಿಸುವುದು ಹೆಚ್ಚಾಗಿದೆ. ಕಟ್ಟುನಿಟ್ಟಾಗಿ ಕ್ರಮಕೈಗೊಂಡರೆ ಬಿಡುವಂತೆ ಒತ್ತಡ ಹೆಚ್ಚಾಗುತ್ತದೆ. ಆದರೂ ಸಹ ಕ್ರಮ ಜರುಗಿಸುತ್ತೇವೆ ಎಂದರು. ಪೇಪರ್‌ಟೌನ್ ಠಾಣೆ ಉಪ ನಿರೀಕ್ಷಕಿ ಕವಿತಾ ಮಾತನಾಡಿ, ಮಿಲ್ಟ್ರಿಕ್ಯಾಂಪ್ ಬಳಿ ಪ್ರೊ.ಬಿ. ಕೃಷ್ಣಪ್ಪ ವೃತ್ತದಲ್ಲಿ ಸಂಚಾರ ನಿಯಂತ್ರಣಕ್ಕೆ ಪೊಲೀಸರಿಗೆ ಬಾಕ್ಸ್ ಒಂದನ್ನು ನಿರ್ಮಿಸಿಕೊಡಿ ಎಂದರು.  
 ಪೌರಾಯುಕ್ತ ಪ್ರಕಾಶ್ ಎಂ.ಚೆನ್ನಪ್ಪನವರ್ ಸಭೆಯ ಔಚಿತ್ಯವನ್ನು ಹಾಗೂ ಸಂಚಾರದಲ್ಲಿ ಆಗುತ್ತಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಸಿ.ಸಿ ಕ್ಯಾಮರಾ, ಹೈಲೈಟ್ಸ್ ದೀಪಗಳು, ಸಂಚಾರ ನಿಯಂತ್ರಣಕ್ಕೆ ಬೇಕಾದ ಸೌಲಭ್ಯಗಳು, ಫುಟ್ ಪಾತ್ ಅವ್ಯವಸ್ಥೆ ಮುಂತಾದ ಉಪಯುಕ್ತ ವಿಚಾರಗಳು ಚರ್ಚೆಯಾಗಿರುವುದು ಸಂತಸ ತಂದಿದೆ ಎಂದರು. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಕೆ. ಸುದೀಪ್‌ಕುಮಾರ್, ಕಾಂತರಾಜ್ ಉಪಸ್ಥಿತರಿದ್ದರು.  ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಹಾಗು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

ಗುರುವಾರ, ಮಾರ್ಚ್ 27, 2025

ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಬಳಿ ಸ್ವಚ್ಛತಾ ಕಾರ್ಯ : ತ್ಯಾಜ್ಯ ಎಸೆಯದಂತೆ ಜಾಗೃತಿ

ಭದ್ರಾವತಿ ನಗರಸಭೆ ಪೌರಕಾರ್ಮಿಕರು ಸೂಪರ್‌ವೈಸರ್ ಎನ್. ಗೋವಿಂದ ನೇತೃತ್ವದಲ್ಲಿ ಗುರುವಾರ ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡು ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವ ಜೊತೆಗೆ ಒಂದು ವೇಳೆ ತ್ಯಾಜ್ಯ ಎಸೆಯುವುದು ಮುಂದುವರೆಸಿದ್ದಲ್ಲಿ ೫೦೦ ರು. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ ಫಲಕ ಅಳವಡಿಸಿದರು. 
ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಪ್ರಮಾಣ ಹೆಚ್ಚಳವಾಗುತ್ತಿದ್ದು, ಮನೆ ಮನೆ ಕಸ ಸಂಗ್ರಹಣೆ ನಡುವೆಯೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಕಂಡು ಬರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ನಡುವೆ ನಗರಸಭೆ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. 
ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಬಳಿ ತ್ಯಾಜ್ಯ ಎಸೆಯದಂತೆ ಸ್ಥಳೀಯ ನಿವಾಸಿಗಳಿಗೆ ಹಲವಾರು ಬಾರಿ ತಿಳುವಳಿಕೆ ನೀಡಲಾಗಿದೆ. ಪ್ರತಿದಿನ ನೂರಾರು ಮಂದಿ ರೋಗಿಗಳು  ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಆಸ್ಪತ್ರೆ ಬಳಿ ಜನಸಂದಣಿ ಹೆಚ್ಚಾಗಿದ್ದು, ಇಂತಹ ಸ್ಥಳದಲ್ಲಿ ಪ್ರತಿದಿನ ತ್ಯಾಜ್ಯ ಕಂಡು ಬರುತ್ತಿದೆ. 
ತ್ಯಾಜ್ಯ ಎಸೆಯದಂತೆ ಹಲವಾರು ಬಾರಿ  ಸೂಚನೆ ನೀಡಲಾಗಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ನಗರಸಭೆ ಪೌರಕಾರ್ಮಿಕರು ಸೂಪರ್‌ವೈಸರ್ ಎನ್. ಗೋವಿಂದ ನೇತೃತ್ವದಲ್ಲಿ ಗುರುವಾರ ನಗರ ಆರೋಗ್ಯ ಕೇಂದ್ರದ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡು ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವ ಜೊತೆಗೆ ಒಂದು ವೇಳೆ ತ್ಯಾಜ್ಯ ಎಸೆಯುವುದು ಮುಂದುವರೆಸಿದ್ದಲ್ಲಿ ೫೦೦ ರು. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ ಫಲಕ ಅಳವಡಿಸಿದರು. 
ಪೌರಕಾರ್ಮಿಕರಾದ ನಾಗಣ್ಣ, ಸುಶೀಲಮ್ಮ, ಸುಬ್ರಮಣಿ, ಮೋಹನ್, ಕುಮಾರಿಯಮ್ಮ, ಎಂ. ಮಂಜುನಾಥ್, ವಿಶ್ವನಾಥ್, ಹೇಮಂತ, ಮಂಜಾ, ಶಂಕರ, ಅಯ್ಯಪ್ಪ, ಜಯರಾಜ್ ಮತ್ತು ಕೃಷ್ಣ(ಡ್ರೈವರ್) ಸೇರಿದಂತೆ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 
 

ವಿಐಎಸ್‌ಎಲ್ ನಗರಾಡಳಿತ ಅಧಿಕಾರಿ ಮೋಹನ್‌ರಾಜ್ ಶೆಟ್ಟಿ ವರ್ಗಾವಣೆ

ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಸನ್ಮಾನ 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಗರಾಡಳಿತ ಇಲಾಖೆಯಲ್ಲಿ ನಗರಾಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್‌ರಾಜ್ ಶೆಟ್ಟಿ ಕೇಂದ್ರ ಸರ್ಕಾರದ ಅಸ್ಸಾಂ ಬ್ರಹ್ಮಪುತ್ರ ವಾಲಿ ಫರ್ಟಿಲೈಜರ್ ಕಾರ್ಪೋರೇಷನ್ ಲಿಮಿಟೆಡ್(ಬಿವಿಎಫ್‌ಸಿಎಲ್) ಕಂಪನಿ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಗರಾಡಳಿತ ಇಲಾಖೆಯಲ್ಲಿ ನಗರಾಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್‌ರಾಜ್ ಶೆಟ್ಟಿ ಕೇಂದ್ರ ಸರ್ಕಾರದ ಅಸ್ಸಾಂ ಬ್ರಹ್ಮಪುತ್ರ ವಾಲಿ ಫರ್ಟಿಲೈಜರ್ ಕಾರ್ಪೋರೇಷನ್ ಲಿಮಿಟೆಡ್(ಬಿವಿಎಫ್‌ಸಿಎಲ್) ಕಂಪನಿ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ. 
    ಮೋಹನ್‌ರಾಜ್ ಶೆಟ್ಟಿಯವರು ಮಾ.೩೧ರಂದು ನಗರಾಡಳಿತ ಅಧಿಕಾರಿ ಹುದ್ದೆಯಿಂದ ಬಿಡುಗಡೆಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಗುರುವಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ನೀಡಿದ ನಿವೃತ್ತ ಕಾರ್ಮಿಕರಿಗೆ ಮೋಹನ್‌ರಾಜ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು. 
    ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜೆ ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ನರಸಿಂಹಚಾರ್, ಶಂಕರ್, ಕೆಂಪಯ್ಯ, ಪ್ರಸಾದ್, ಅಡವೀಶಯ್ಯ, ನಾಗರಾಜ್, ಬಸವರಾಜ್, ಜಯರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹನುಮಂತರಾವ್ ಸ್ವಾಗತಿಸಿ, ಕಾರ್ಯದರ್ಶಿ ಮಹೇಶ್ ವಂದಿಸಿದರು. 

ಎಂಪಿಎಂ ನಿವೃತ್ತ ಕಾರ್ಮಿಕ ಎಂ. ಪುಟ್ಟಸ್ವಾಮಿ ನಿಧನ

ಎಂ. ಪುಟ್ಟಸ್ವಾಮಿ 
    ಭದ್ರಾವತಿ: ನಗರದ ಹುಡ್ಕೋ ಕಾಲೋನಿ ಉಂಬ್ಳೆಬೈಲು ರಸ್ತೆ ನಿವಾಸಿ, ಮೈಸೂರು ಕಾಗದ ಕಾರ್ಖಾನೆ ಓಲ್ಡ್ ಸ್ಟಾಕ್ ರೂಮ್ ನಿವೃತ್ತ ಕಾರ್ಮಿಕ ಎಂ. ಪುಟ್ಟಸ್ವಾಮಿ (೭೨) ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ. 
    ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆ ಬೈಪಾಸ್ ರಸ್ತೆ ಸಮೀಪದ ತಿಮ್ಲಾಪುರ ರಸ್ತೆಯ ಶಂಕರಪ್ಪನಕಟ್ಟೆ ಶ್ರೀ ಸತ್ಯಹರಿಶ್ಚಂದ್ರ ಹಿಂದು ರುದ್ರಭೂಮಿಯಲ್ಲಿ ಗುರುವಾರ ಸಂಜೆ ನೆರವೇರಿತು. ಇವರ ನಿಧನಕ್ಕೆ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರು, ಸ್ಥಳೀಯ ಮುಖಂಡರು, ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಮೆಸ್ಕಾಂ ಗ್ರಾಹಕರ ಸಲಾಹ ಸಮಿತಿ ಸಭೆ, ಕಚೇರಿ ಉದ್ಘಾಟನೆ


ಭದ್ರಾವತಿ ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಕಚೇರಿ ಉದ್ಘಾಟಿಸಿದರು.
    ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು.
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಕಚೇರಿ ಉದ್ಘಾಟಿಸಿದರು. ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. 
    ನಗರದ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಬಳ್ಳಾಪುರ ಮಾತನಾಡಿ, ಸಲಹಾ ಸಮಿತಿ ರಚನೆಯಿಂದ ಗ್ರಾಹಕರ ಕುಂದುಕೊರತೆಗಳನ್ನು ತಕ್ಷಣ ಬಗೆಹರಿಸಬಹುದಾಗಿದೆ. ಅಲ್ಲದೆ ಗ್ರಾಹಕರಿಗೆ ಸಮಿತಿ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಮೆಸ್ಕಾಂ ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೊಹಮ್ಮದ್ ಮುನಾಫ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ,  ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಸದಸ್ಯರಾದ ಚನ್ನಪ್ಪ, ಬಿ.ಟಿ ನಾಗರಾಜ್, ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಮುಖಂಡರಾದ ಪ್ರಕಾಶ್‌ರಾವ್, ಸಿ. ಜಯಪ್ಪ, sಸುರೇಶ್ ವರ್ಮಾ, ವಿಜಯಲಕ್ಷ್ಮೀ, ಮಂಜುನಾಥ್ ಸೇರಿದಂತೆ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
    ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಮೆಸ್ಕಾಂ ಗ್ರಾಹಕರ ಸಲಾಹ ಸಮಿತಿಯಲ್ಲಿ ತಲಾ ೧೨ ಸದಸ್ಯರಂತೆ ಒಟ್ಟು ೪೬ ಸದಸ್ಯರಿದ್ದು, ಈ ಪೈಕಿ ೫ ಸದಸ್ಯರು ಮುಖ್ಯ ಸಮಿತಿಯಲ್ಲಿದ್ದಾರೆ. 
 

ಭದ್ರಾವತಿ ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಮೆಸ್ಕಾಂ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 

ಬುಧವಾರ, ಮಾರ್ಚ್ 26, 2025

ಯುಗಾದಿ ಹಬ್ಬದಂದು ರೈಲ್ವೆ ಮೇಲ್ಸೇತುವೆ ಸಾರ್ವಜನಿಕ ಸೇವೆಗೆ ಸಮರ್ಪಣೆ

ಭದ್ರಾವತಿ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ಆನಂದ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ ರಾಘವೇಂದ್ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. 
    ಭದ್ರಾವತಿ : ಕಳೆದ ಸುಮಾರು ೩ ವರ್ಷಗಳಿಂದ ನಿರ್ಮಾಣಗೊಳ್ಳುತ್ತಿರುವ ನಗರದ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಂಡಿದ್ದು, ಯುಗಾದಿ ಹಬ್ಬದಂದು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 
    ಅವರು ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಬಿಜೆಪಿ ಪಕ್ಷದ ಯುವ ಮುಖಂಡರಾದ ಜಿ. ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್‌ರವರು ಆನಂದ ಸಾಮಾಜಿಕ ಸೇವಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. 
ರೈಲ್ವೆ ಮೇಲ್ಸೇತುವೆಯಿಂದ ಸಾಕಷ್ಟು ಪ್ರಯೋಜನವಾಗಲಿದ್ದು, ಬಿ.ಎಚ್ ರಸ್ತೆಯಲ್ಲಿ ಶಿವಮೊಗ್ಗ-ಭದ್ರಾವತಿ ನಡುವೆ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಸಹಕಾರಿಯಾಗಿದೆ ಎಂದರು. 
    ನಗರಸಭೆ ಮಾಜಿ ಸದಸ್ಯ, ಪಕ್ಷದ ಯುವ ಮುಖಂಡ ಜಿ. ಆನಂದಕುಮಾರ್‌ರವರು ಪ್ರತಿ ವರ್ಷದಂತೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನೆನಪಿನಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸುತ್ತಿದ್ದು, ಅಲ್ಲದೆ ಆನಂದ ಸಾಮಾಜಿಕ ಸೇವಾ ಸಂಸ್ಥೆ ಮೂಲಕ ಹಲವಾರು ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ. 
    ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಮಂಡಲ ಅಧ್ಯಕ್ಷ ಜಿ.ಧರ್ಮ ಪ್ರಸಾದ್, ಮುಖಂಡರಾದ ಟಿ.ಎಸ್ ದುಗ್ಗೇಶ್, ಅಣ್ಣಪ್ಪ, ಬಿ.ಜಿ ರಾಮಲಿಂಗಯ್ಯ, ಎಂ. ಮಂಜುನಾಥ್, ಮಧುಕರ್ ಕಾನಿಟ್ಕರ್, ದಿನೇಶ್, ಕೆ.ಎಚ್ ತೀರ್ಥಯ್ಯ, ನಗರಸಭಾ ಸದಸ್ಯೆ ಅನುಪಮ ಚನ್ನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಲಗಿದ್ದ ವ್ಯಕ್ತಿ ಮೇಲೆ ಕುಸಿದುಬಿದ್ದ ಗೋಡೆ : ಅಗ್ನಿಶಾಮಕದಳ ಸಿಬ್ಬಂದಿಯಿಂದ ರಕ್ಷಣೆ

ಭದ್ರಾವತಿ ಕಾಗದನಗರದ ಪಾಳುಬಿದ್ದು ಶಿಥಿಲಗೊಂಡಿದ್ದ, ತುಂಬಾ ಹಳೇಯದಾದ ಮನೆಯೊಂದರಲ್ಲಿ ಮಲಗಿದ್ದ ವ್ಯಕ್ತಿಯೋರ್ವನ ಮೇಲೆ ಗೋಡೆ ಕುಸಿದುಬಿದ್ದಿದ್ದು, ಅಗ್ನಿಶಾಮಕದಳ ಸಿಬ್ಬಂದಿಗಳು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಬುಧವಾರ ನಡೆದಿದೆ. 
    ಭದ್ರಾವತಿ : ಕಾಗದನಗರದ ಪಾಳುಬಿದ್ದು ಶಿಥಿಲಗೊಂಡಿದ್ದ, ತುಂಬಾ ಹಳೇಯದಾದ ಮನೆಯೊಂದರಲ್ಲಿ ಮಲಗಿದ್ದ ವ್ಯಕ್ತಿಯೋರ್ವನ ಮೇಲೆ ಗೋಡೆ ಕುಸಿದುಬಿದ್ದಿದ್ದು, ಅಗ್ನಿಶಾಮಕದಳ ಸಿಬ್ಬಂದಿಗಳು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಬುಧವಾರ ನಡೆದಿದೆ. 
    ಸುಮಾರು ೩೮ ವರ್ಷದ ಆನಂದ ಸ್ವಾಮಿ ಎಂಬುವರು ಕಾಗದನಗರದ ೭ನೇ ವಾರ್ಡ್‌ನ ಪಾಳುಬಿದ್ದಿದ್ದ ಮನೆಯೊಂದರಲ್ಲಿ ಮಲಗಿದ್ದಾಗ ಸಂಜೆ ೫ ಗಂಟೆ ಸಮಯದಲ್ಲಿ ಏಕಾಏಕಿ ಮನೆಯ ಗೋಡೆ ಕುಸಿದು ಬಿದ್ದಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗ್ನಿಶಾಮಕದಳ ಸಿಬ್ಬಂದಿಗಳು ಧಾವಿಸಿ ಸ್ಥಳೀಯರೊಂದಿಗೆ ಜೆಸಿಬಿ ಯಂತ್ರದ ಮೂಲಕ ಗೋಡೆ ಮಣ್ಣು ತೆರವುಗೊಳಿಸಿ ರಕ್ಷಿಸಿದ್ದಾರೆ. 
    ಅಗ್ನಿಶಾಮಕಠಾಣೆ ಸಹಾಯಕ ಠಾಣಾಧಿಕಾರಿ ಸಿ.ಎಚ್ ಹುಲಿಯಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಬು, ಆನಂದ್, ಮಂಜುನಾಥ್, ಸುರೇಶ್, ಶ್ರೀನಿವಾಸ್, ಹರೀಶ್, ಮಹೇಂದ್ರ, ರಾಜಾನಾಯ್ಕ, ವೀರೇಶ್, ಬಾಬಲು ಮಾಣಿಕ ಬಾಯ್ ಮತ್ತು ಸಿದ್ದಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.